Wednesday, May 13, 2009

ನೀ ನನ್ ಜೊತೆ ಟೂ ಬಿಡಲ್ಲ ತಾನೇ?!

ಅಮ್ಮಾ...


ನಂಗೊತ್ತು ನೀ ನನ್ ಮೇಲೆ ಮುನಿಸಿಕೊಂಡಿದ್ದಿಯಂತ. ಇನ್ನು ನಾ ಮನೆಗೆ ಬಂದು ನೀ ನನ್ನ ದರುಶನ ಪಡೆಯುವವರೆಗೂ ನಿನ್ನ ಸಿಟ್ಟು ಕಡಿಮೆಯಾಗಲ್ಲ. ನಿತ್ಯ ಫೋನ್ ಮಾಡಿ ಗೊಣಗುತ್ತೀಯಾ. ಪ್ರೀತಿಯಿಂದ ಬೈತೀಯಾ. ಕೊನೆಗೆ ನೀನೆ ಸೋತಾಗ ದಡಕ್ಕಂತ ಫೋನಿಡ್ತೀಯಾ. ಮತ್ತೆ ಸಂಜೆ ಫೋನ್ ಮಾಡಿ ಪುಟ್ಟಿ ಒಂದೇ ಒಂದ್ಸಲ ಮನೆಗೆ ಬಂದು ಹೋಗು ಅಂತ ಗೋಳಿಡ್ತೀಯಾ. ಮಕ್ಕಳು ಅಂದ್ರೆ ಹಿಂಗೆ ಕಣಮ್ಮ..ಅಮ್ಮ ಅಂದ್ರೆ ನಿನ್ ಥರ ಅಲ್ವಾ? ಮೊನ್ನೆ ನೀ ಪೋನ್ ಮಾಡಿ, "ನೀನೆನು ಎಲೆಕ್ಷನ್ಗೆ ನಿಂತಿದ್ದೀಯೇನೆ? ಬ್ಯುಸಿ ಬ್ಯಸಿ ಅಂತ ಹೇಳಕ್ಕೆ?' ಅಂತ ಗೊಣಗಿದಾಗ ನಿಜವಾಗಲೂ ನನಗೆ ಸಿಟ್ಟು ಬಂದಿಲ್ಲಮ್ಮ, ನಗು ಬಂದು ಜೋರಾಗಿ ನಕ್ಕುಬಿಟ್ಟಿದ್ದೆ.


ಹ್ಲಾಂ..ಅಮ್ಮಾ ನೀ ಚೆನ್ನಾಗಿದ್ದಿಯಲ್ಲಾ? ತಮ್ಮ ಹೇಗಿದ್ದಾನೆ? ಜೋಪಾನವಾಗಿರಕೆ ಹೇಳು. ನನ್ ನೆನೆಕೆಗಳನ್ನು ಅವನಿಗೆ ತಿಳಿಸು. ನಿನ್ನ ಆರೋಗ್ಯ ಹೆಂಗಿದೆ? ಕರೆಕ್ಟಾಗಿ ಮದ್ದು ತಕೋತಿಯಲ್ಲಾ? ದಿನಾ ಗ್ಲುಕೋಸ್ ಕುಡೀತಿಯಲ್ಲಾ. ನಾನಿಲ್ಲಿ ಚೆನ್ನಾಗಿದ್ದೀನಮ್ಮಾ..ಮೂರು ಹೊತ್ತು ತಿಂದುಂಡು ಗುಂಡು ಗುಂಡಾಗಿದ್ದೀನಿ. ನಾನೆಷ್ಟು ದಪ್ಪಗಿದ್ರೂ ಸಣ್ಣ ಸಣ್ಣಗಿದ್ದಿ ಅಂತ ಬಾಯಿ ಬಡಬಡ ಮಾಡ್ತಿಯಲ್ಲಾ..ನೋಡು ಸಲ ಕನ್ನಡಕ ತರ್ತೀನಿ.!!


ಅಮ್ಮಾ ಬೆಳ್ಳಂಬೆಳಿಗ್ಗೆ ಆಫೀಸು, ಸೂರ್ಯ ಮುಳುಗಿದ ಮೇಲೆ ಮನೆ ಸೇರುವುದು, ಒಂದಷ್ಟು ಅನ್ನ-ಸಾರು ಮಾಡುವುದು, ಒಂದಷ್ಟು ಹೊತ್ತು ಟಿವಿ ಜೊತೆ ಮಾತನಾಡುವುದು ಅಷ್ಟೇ ಕಣಮ್ಮ. ನಮ್ಮೂರ ಬತ್ತದ ಹೊಳೆ, ಹಸಿರು ತೋಟ, ಸಾಲು-ಸಾಲು ಮರಗಿಡಗಳು, ಹಳ್ಳಿ ಮನೆಗಳು, ಕರುಗಳ ಅಂಬಾ, ಕನಕಾಂಬರ ಬಳ್ಳಿಯ ಸೊಬಗು, ಕುರಿಮಂದೆ, ಕಥೆ ಹೇಳುವ ಅಜ್ಜಿ, ಕಳ್ಳು ತೆಗೆಯುವ ಅಜ್ಜ ಯಾರೂ ಕಾಣೋಕೆ ಸಿಗ್ತಿಲ್ಲಮ್ಮ. ಆದ್ರೂ ಬೆಂಗ್ಳೂರು ತುಂಬಾ ಜನ್ರ ಹಸಿದ ಹೊಟ್ಟೆಗೆ ಅನ್ನ ನೀಡುತ್ತೆ. ಏನೋ ಒಂಥರಾ ಖುಷಿ ಕೊಡುತ್ತೆ. ನನ್ ಪುಟ್ಟ ರೂಮೊಳಗೆ ನಾನೂ ಖುಷಿಪಡ್ತೀನಮ್ಮ.

ಆಮೇಲೆ ನಮ್ಮ ಮನೆ ಓನರ್ರು ಅಕ್ಕ ತುಂಬಾ ಒಳ್ಳೆಯವರಮ್ಮ. ನಂಗೆ ಒಂದು ಒಳ್ಳೆ ಅಕ್ಕ ಸಿಕ್ಕಂಗೆ ಆಗಿದೆ. ಮೊನ್ನೆ ನಂಗೆ ಜ್ವರ ಬಂದಿತ್ತು ಅಂದ್ನಲ್ಲಾ..ನನ್ನ ತುಂಬಾ ಚೆನ್ನಾಗ್ ನೋಡಿಕೊಂಡ್ರಮ್ಮ. ಏನೇನೋ ಕಶಾಯ ಮಾಡಿಕೊಟ್ರು...ಥೇಟ್ ನಿನ್ನ ಥರಾನೇ..ಹೊಟ್ಟೆ ಫುಲ್ ಆದ್ರೂ ಮತ್ತೆ ಮತ್ತೆ ತಿನ್ನು ಅನ್ನುತ್ತಾ ತುರುಕೋದು! ಅಲ್ಲಿ-ಇಲ್ಲಿ ಸುತ್ತಾಡೋಕೆ ಹೋದ್ರೆ, ಶಾಪಿಂಗ್ ಹೋದ್ರೆ ನನ್ನ ಕರ್ಕೊಂಡು ಹೋಗ್ತಾರಮ್ಮಾ. ಪೂಜೆಗೆಂದು ಮನೆಗೆ ತಂದ ಮಲ್ಲಿಗೆಯಲ್ಲಿ ನನಗೂ ಒಂದು ಮೊಳ ಮುಡಿಸಿ ಮಲ್ಲಿಗೆಯಂತೆ ಘಮ್ ಅಂತ ನಗ್ತಾರೆ ಅಮ್ಮಾ.


ಅಮ್ಮಾ..ಹೇಳಿದ್ನಲ್ಲಾ ಮುಂದಿನ ತಿಂಗಳು ಊರಿಗೆ ಬರ್ತೀನಂತ. ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಹಾಕಿದ್ದಿಯಲ್ಲಾ..ಒಂದಷ್ಟು ಅಕ್ಕಿ ರೊಟ್ಟಿ, ಹಲಸಿನ ಹಪ್ಪಳ ರೆಡಿ ಮಾಡಿಡಮ್ಮಾ. ಬೆಂಗ್ಳೂರು ಮಳೆಗೆ ಮೆಲ್ಲೋಕೆ ಭಾಳ ಖುಷಿ ಆಗುತ್ತೆ. ಮತ್ತೆ ನನ್ನ ಇಷ್ಟದ ನೀರು ದೋಸೆ ಮಾಡಕೆ ಬೆಳ್ತಕ್ಕಿ, ಹತ್ತು ಕೆಜಿ ಕುಚಲಕ್ಕಿನೂ ತಂದಿಡಕೆ ತಮ್ಮಂಗೆ ಹೇಳು. ವಾಪಾಸ್ ಬರುವಾಗ ತಕೊಬಂದ್ರೆ ಒಂದು ತಿಂಗಳು ಚಿಂತೆಯಿಲ್ಲ. ನಂಗೊತ್ತು ಇದೆಲ್ಲಾ ರೆಡಿ ಮಾಡಿಯೇ ನಿತ್ಯ ಸುಪ್ರಭಾತ ಹಾಡ್ತೀಯಂತ.

ಅಮ್ಮ ನಮ್ಮನೆ ಪಕ್ಕದ್ಮನೆಗೆ ಹೊಸಬರು ಬಾಡಿಗೆಗೆ ಬಂದಿದ್ದಾರೆ. ಅಲ್ಲೊಂದು ಪುಟ್ಟ ಪಾಪು ಇದೆ. ನೋಡಕ್ಕು ಮುದ್ದು ಮುದ್ದಾಗಿದೆ. ಆದ್ರೆ ರಾತ್ರಿ ಇಡೀ ಅಳೋ ಪಾಪು ನಮ್ಮ ನಿದ್ದೆನೂ ಕೆಡಿಸುತ್ತೆ. ಯವಾಗಲೂ ನೀ ನಂಗೆ ಹೇಳ್ತಿದ್ದಿಯಲ್ಲಾ, ನೀ ಬರೇ ಅಳುಮುಂಚಿ ನಿದ್ದೆ ಮಾಡಕ್ಕೂ ಬಿಡ್ತಿರಲಿಲ್ಲ ಅಂತ. ಮಗು ಅತ್ತು ರಂಪಾಟ ಮಾಡುವಾಗ ನೀ ಹೇಳಿದ ಮಾತು ನೆನಪಾಗಿ ಛೇ! ನಾನೆಷ್ಟು ಅಮ್ಮಂಗೆ ಕಾಟ ಕೊಟ್ಟಿದ್ದೀನಿ ಅನಿಸುತ್ತೆ ..ಹ್ಹಿಹ್ಹಿ!!!


ಅಮ್ಮಾ.. ಪತ್ರ ನೋಡಿಯಾದರೂ ನೀ ನನ್ನ ಜೊತೆ ಟೂ ಬಿಡಲ್ಲ ಅಂದುಕೋತೀನಿ. ಸಿಟ್ಟು ಕಡಿಮೆಯಾಗಿದೆಯಲ್ಲಾ...! ಹ್ಲಾಂ..ಖುಷಿಯೋ ಖುಷಿ. ಮುಂದಿನ ತಿಂಗಳು ಹುಣ್ಣಿಮೆ ದಿನ ಬಂದು ಬಿಡ್ತೀನಿ. ತಂಪು ಬೆಳದಿಂಗಳಲ್ಲಿ ನಮ್ಮನೆ ಎದುರು ಇರುವ ಕಲ್ಲುಬೆಂಚಿಯ ಮೇಲೆ ಒಂದಷ್ಟು ಹೊತ್ತು ಹರಟೋಣ ..ಸಿಟ್ ಮಾಡಿಕೊಳ್ಳೋಣ..ಜಗಳ ಆಡೋಣ..ನಿನ್ನಿಂದ ಬೈಸಿಕೋತೀನಿ. ಅದಕ್ಕಿಂತ ಹೆಚ್ಚಾಗಿ ನಿನನ್ನ ಮಡಿಲಲ್ಲಿ ಹುದುಗಿ ಮೊಗೆದಷ್ಟು ಬತ್ತದ ಪ್ರೀತಿನ ನನ್ನೊಳಗೆ ತುಂಬುಕೊಳ್ಳೋಕೆ ಬರ್ತಾ ಇದ್ದೀನಮ್ಮಾ. ಸದ್ಯಕ್ಕೆ ವಿರಾಮ..


ಇಂತೀ

ನಿನ್ನ ಪುಟ್ಟಿ

Tuesday, May 5, 2009

ದುಃಖಗಳು ಸಾಯುತ್ತವೆ, ನೆನಪುಗಳು ಸಾಯೊಲ್ಲ..?!

ದುಃಖಗಳು ಸಾಯುತ್ತವೆ, ನೆನಪುಗಳು ಸಾಯೊಲ್ಲ..! ಹೌದು..ನೆನಪುಗಳು ಸಾಯೊಲ್ಲ..ದುಃಖಗಳು ಸಾಯುತ್ತವೆ..ನಿನ್ನೆ ಇದ್ದಕಿದ್ದಂತೆ ಈ ಮಾತು ನನ್ನ ತುಂಬಾ ಕಾಡಿಬಿಡ್ತು.

ನಾನಾಗ ಎರಡನೇ ಕ್ಲಾಸು. ಒಂದು ಸಂಜೆ ಶಾಲೆ ಮುಗಿಸಿ ನಮ್ಮೂರ ಹೊಳೆ ದಾಟಿ ಮನೆ ಸೇರುವಾಗ ಮನೆಯೇ ಸ್ಮಶಾನವಾಗಿತ್ತು. ನನ್ನ ಪ್ರೀತಿಯ ಅಜ್ಜ ನಮ್ಮನ್ನೆಲ್ಲಾ ಬಿಟ್ಟುಹೋಗಿದ್ದರು. ಅಜ್ಜ ಇನ್ನಿಲ್ಲವೆಂದಾಗ ಉಕ್ಕಿ ಬರುವ ದುಃಖವನ್ನು ಸಹಿಸುವುದು ತುಂಬಾ ಕಷ್ಟವಾಗುತ್ತಿತ್ತು. ನನ್ನ ಗುಂಗುರು, ಸಿಕ್ಕು ಹಿಡಿದ ತಲೆಕೂದಲನ್ನು ಎಣ್ಣೆ ಹಾಕಿ ನೀಟಾಗಿ ಬಾಚಿ ಜಡೆಹಾಕುತ್ತಿದ್ದುದು ನನ್ನಜ್ಜ. ಅಜ್ಜ ಎಷ್ಟೇ ಬೈಯಲಿ..ಅಜ್ಜಿಗಿಂತ ಒಂದು ಪಟ್ಟು ಪ್ರೀತಿ ಜಾಸ್ತಿ ನನ್ನಜ್ಜನ ಮೇಲೆ.

ಆ ದಿನ ನನ್ನ ಪ್ರೀತಿಯ ಅಜ್ಜನನ್ನು ಕಳೆದುಕೊಂಡಿದ್ದೆ. ಗಂಡನನ್ನು ಕಳಕೊಂಡ ದುಃಖ ಅಜ್ಜಿಗೆ, ಅಪ್ಪನನ್ನು ಕಳಕೊಂಡ ದುಃಖ ಅಮ್ಮ, ದೊಡ್ಡಮ್ಮ, ಚಿಕ್ಕಮ್ಮನವರಿಗೆ..! ನನ್ನನ್ನು ಸಮಾಧಾನಿಸುವವರು ಯಾರೂ ಇಲ್ಲ..ಆ ಶೋಕಸಾಗರದಲ್ಲಿ ಒಂದಾಗಿ ನಾನೂ ಬಿಕ್ಕಿ ಬಿಕ್ಕಿ ಅತ್ತಿದ್ದೆ. ಅಜ್ಜ ನೀನ್ಯಾಕೆ ನನ್ನ ಬಿಟ್ಟು ಹೋದೆ..ನೀ ಹೋದಲ್ಲಿಗೆ ನನ್ನನ್ನೂ ಕರೆದುಕೊಂಡು ಹೋಗಬಾರದಿತ್ತೆ? ಎಂದು ಗೋಳಾಡುತ್ತಿದ್ದೆ. ಯಾರ ಮಾತುಗಳನ್ನು ಕೇಳದೆ ಅಜ್ಜ ತಣ್ಣಗೆ ಮಲಗಿದ್ದ. ಏನೇನೋ ಶಾಸ್ತ್ರಗಳು..ಜಡಿಮಳೆಯಂತೆ ಕಣ್ಣಿಂದ ಹರಿಯೋ ನೀರನ್ನು ಸರಿಸಿ ಸರಿಸಿ ಅಜ್ಜನ ತಣ್ಣನೆಯ ಮುಖವನ್ನು ನಾ ನೋಡುತ್ತಿದ್ದೆ. ಕೊನೆಗೇ ಬೆಂಕಿಯಲ್ಲಿ ನನ್ನಜ್ಜ ಒಂದಾಗಲೂ ಹೃದಯ ದುಃಖದಿಂದ ಚೀರುತ್ತಿತ್ತು. ನಿಜವಾದ ದುಃಖ ನೋಡಬೇಕಾದ್ರೆ ಸಾವಿನ ಮನೆಗೆ ಹೋಗಬೇಕು..ಎನ್ನೋ ಮಾತು ಮತ್ತೆ ಮತ್ತೆ ನೆನಪಾಗುತ್ತಿತ್ತು.

ಮೊನ್ನೆ ಮನೇಲಿ ಯಾವುದೋ ಒಂದು ಪುಟ್ಟ ವಿಚಾರದ ಕುರಿತು ನಾನೂ-ತಮ್ಮ ಮಾತಿಗಿಳಿಯುತ್ತಿದ್ದಂತೆ ತಮ್ಮ, "ಅಕ್ಕಾ..ನಾವು ಅಜ್ಜ ಸತ್ತಾಗ ಎಷ್ಟು ಅತ್ತಿದ್ದೀವಿ. ಈವಾಗ ಅದು ದುಃಖಂತ ಅನಿಸೋದೇ ಇಲ್ಲ. ಮನುಷ್ಯ ದುಃಖವನ್ನು ಎಷ್ಟು ಬೇಗ ಮರೀತಾನೆ..ಆದರೆ ಅದ್ರ ನೆನಪು ಮಾತ್ರ ಹಾಗೇ ಇರುತ್ತಲ್ಲಾ.." ಅಂದಾಗ ನನ್ನ ಮನಸ್ಸಲ್ಲಿ 'ಹೌದು ದುಃಖಗಳು ಸಾಯುತ್ತವೆ, ನೆನಪುಗಳು ಸಾಯೊಲ್ಲ" ಎನ್ನೋ ಮಾತು ಮತ್ತೆ ಮತ್ತೆ ಗುನುಗುತ್ತಾನೇ ಇತ್ತು.

ಸಾವಿನ ಮನೆಯ ದುಃಖ ಮಾತ್ರವಲ್ಲ..ಎಷ್ಟೋ ಬಾರಿ ಪುಟ್ಟ ಪುಟ್ಟ ವಿಚಾರಗಳು ನಮಗೆ ತೀರ ನೋವು ಕೊಡುತ್ತವೆ. ನಿತ್ಯ ಅಮ್ಮನ ತೆಕ್ಕೆಯಲ್ಲೇ ನಿದ್ದೆಯ ಮಂಪರಿಗೆ ಜಾರುತ್ತಿದ್ದ ನಾನು ಎಸ್ ಎಸ್ಎಲ್ ಸಿ ಪಾಸಾಗಿ ದೂರದ ಹಾಸ್ಟೇಲಿಗೆ ಬರಬೇಕಾದ್ರೆ ವಾರಗಟ್ಟಲೆ ದಿಂಬು ಒದ್ದೆಯಾಗಿಸಿದ್ದೆ. ಹಾಸ್ಟೇಲಿನಲ್ಲಿ ನಾ ಒಂಟಿ ಒಂಟಿ ಎಂದು ಬಾತ್ ರೂಮಿಗೆ ಹೋಗಿ ಅಳ್ತಾ ಇದ್ದೆ. ಪಿಯುಸಿಯಲ್ಲಿ ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಗೆಳತಿ ದೂರದ ಬೆಂಗಳೂರಿಗೆ ಹಾರಿದಾಗ ತಿಂಗಳುಗಟ್ಟಲೆ ಕಣ್ಣೀರು ಸುರಿಸಿದ್ದೆ. ಪದವಿ ವಿದಾಯ ಸಮಾರಂಭದಲ್ಲಿ ನನ್ನೆಲ್ಲಾ ಕನಸು-ಕಲ್ಪನೆಗಳಿಗೆ ಮೂರ್ತ ರೂಪ ನೀಡಿದ ಗುರುಹಿರಿಯರ ಮುಖ ನೋಡುತ್ತಲೇ ವೇದಿಕೆಯನ್ನು ಕಣ್ಣೀರಾಗಿಸಿದ್ದೆ. ಪದವಿ ಮುಗಿದು ಬೆಂಗಳೂರಿಗೆ ಬಂದಾಗ ಅಯ್ಯೋ ಬೆಂಗಳೂರೇ ಬೇಡ ಮರಳಿ ಊರಿಗೆ ಹೋಗ್ತೀನಿ ಎಂದು ರಚ್ಚೆ ಹಿಡಿದಿದ್ದೆ. ನಮ್ಮನೆಯ ಪ್ರೀತಿಯ ನಾಯಿ 'ಕರಿಯ' ಬಾವಿಗೆ ಬಿದ್ದು ಸತ್ತಾಗ, ನನ್ನ ಮುದ್ದಿನ ಹಸು ಅಕತಿಯನ್ನು ಅಮ್ಮ ಮಾರಿಬಿಟ್ಟಾಗ.....ನಾನೆಷ್ಟು ಅತ್ತಿದ್ದೇ? ...ಇಲ್ಲೆಲ್ಲಾ ಸಹಿಸಲಾಗದ ಅಸಹನೀಯ ದುಃಖದ ಮಡುವಿನಲ್ಲಿ ನಾ ಬಿದ್ದು ಹೊರಳಾಡಿದ್ದೆ..!

ತುಂಬಾ ಪ್ರೀತಿಸಿದ ನಿತ್ಯ ಭರವಸೆಯ ನುಡಿಯಾಗಿದ್ದ ಜೀವದ ಗೆಳೆಯ ಕೈಬಿಟ್ಟಾಗ ನೀನಿಲ್ಲದೆ ನಾ ಹೇಗಿರಲಿ ಎಂದು ನಿತ್ಯ ಮಡಿಲಾಗಿದ್ದ ಗೆಳತಿ ದೂರವಾದಾಗ, ಬದುಕಿನ ಯಾವುದೋ ಘಟ್ಟದಲ್ಲಿ ಅನಿವಾರ್ಯತೆಗೆ ಸಿಲುಕಿ ಸಂಬಂಧಗಳನ್ನೇ ಕಳೆದುಕೊಂಡಾಗ ಮನಸ್ಸು ಎಷ್ಟು ನೋವು ಪಡುತ್ತೆ? ಆದರೆ ಇಲ್ಲೆಲ್ಲಾ..ದಿನಕಳೆದಂತೆ ಈ ದುಃಖಗಳು ಸಾಯುತ್ತವೆ..ಬರೇ ನೆನಪುಗಳನ್ನಷ್ಟೇ ಉಳಿಸಿಬಿಟ್ಟು! ಕಹಿಯಾಗೋ..ಸಿಹಿಯಾಗೋ..ಮತ್ತೆ ಮತ್ತೆ ಕಾಡೋ ನೆನಪುಗಳಷ್ಟೇ ಬದುಕಿನ ಹಾದಿಯ ನಮ್ಮ ಹೆಜ್ಜೆಯಲ್ಲಿ ನೆರಳಂತೆ ಹಿಂಬಾಲಿಸುತ್ತವೆ ಅಲ್ವೇ? ಹೌದು. ಇದೂ ಒಳ್ಲೆಯದೇ..ದುಃಖಗಳು ಸಾಯಬೇಕು, ನೆನಪುಗಳು ಉಳಿಯಬೇಕು, ಖುಷಿಯ ಕ್ಷಣಗಳಷ್ಟೇ ನಿತ್ಯ ನಮ್ಮನ್ನು ಕಾಡುವ, ಖುಷಿಯೊಳಿಸುವ ಹುಣ್ಣಿಮೆಯಂತೆ ಪಸರಿಸಬೇಕು.

ಅದಕ್ಕೇ ತಾನೇ ಹೇಳೋದು 'ಕಾಲವೇ ನೋವಿಗೆ ಮದ್ದು' ಅನ್ನೋದು....ಅಲ್ವಾ?

Saturday, May 2, 2009

ನಮ್ಮೂರ ಜಾತ್ರೇಲಿ..ಮಿರ ಮಿರ ಮಿನುಗಿದ್ದು!!!

'ಅಕ್ಕು ಈ ಸರ್ತಿ ಜಾತ್ರೆಗಾಂಡಲಾ ಬಲಾ, ಏತ್ ವರ್ಷ ಆಂಡ್ ಜಾತ್ರೆಗ್ ಬರಂತೆ..? ಏಪಲಾ ನಿನ್ನ ಕೆಲಸ ಮುಗಿಯರೆ ಇಜ್ಜಿ. ಕೆಲಸ ಏಪಲಾ ಉಪ್ಪಂಡು, ಜಾತ್ರೆ ವರ್ಷಗೊರೆನೆ ಬರ್ಪುನಿ(ಅಕ್ಕು..ಈ ಸಲ ಆದ್ರೂ ಜಾತ್ರೆಗೆ ಬಾ..ಎಷ್ಟು ವರ್ಷ ಆಯಿತು ಜಾತ್ರೆಗೆ ಬರದೆ. ಕೆಲಸ ಯಾವಾಗಲೂ ಇರುತ್ತೆ, ಜಾತ್ರೆ ಬರೋದು ವರ್ಷಕೊಮ್ಮೆ ಮಾತ್ರ) ನಮ್ಮೂರ ಜಾತ್ರೆ ಕುರಿತು ಅಮ್ಮ ಇತ್ತೀಚೆಗೆ ಫೊನ್ ಮಾಡಿದಾಗ, 'ಆಯ್ತಮ್ಮ, ಬರ್ತೀನಿ ಇರು. ಅರ್ಜೆಂಟ್ ಮಾಡಿದ್ರೆ ನಾ ಬರೊಲ್ಲ" ಅಂತ ನನ್ನ ಮಾಮೂಲಿ ಪ್ರೀತಿಯ ಸಿಟ್ಟನ್ನೇ ತೋರಿಸಿದ್ದೆ. ಬೆಂಗಳೂರಿಗೆ ಬರೋಕೆ ಮೊದಲು ಬಿಡಿ ಓದಿನ ನಿಮಿತ್ತ ಮನೆಯಿಂದ ಹೊರ ನಡೆದ ಮೇಲೆ ನನಗೆ ಊರ ಜಾತ್ರೆ ನೋಡೋ ಭಾಗ್ಯ ಕೂಡಿ ಬರಲೇ ಇಲ್ಲ!

ನಮ್ಮೂರಿನ ಜಾತ್ರೆ ಬರೋದು ಫೆಬ್ರವರಿ-ಮಾರ್ಚ ತಿಂಗಳಲ್ಲಿ. ಒಂಬತ್ತು ದಿನಗಳ ಕಾಲ ನಡೆಯುವ ಈ ಜಾತ್ರೆ ಎಂದರೆ ಮನೆ ಮನೆಯಲ್ಲೂ ಜಾತ್ರೆ. ಊರಿನ ಮನೆ ಮನೆಯಲ್ಲಿ ನೆಂಟರ ಸಂಭ್ರಮ. ದೂರದೂರಿನ ಗಂಡನ ಮನೆಯಿಂದ ತವರು ಮನೆಗೆ ಬರೋ ಹೆಣ್ಣುಮಕ್ಕಳ ಮನತುಂಬಾ ಖುಷಿಯ ರಂಗೋಲಿ. ಅದೂ ಹೊಸದಾಗಿ ಮದುವೆಯಾದವರ ಸಂಭ್ರಮ ಕೇಳೋದೇ ಬೇಡ. ಮನೆ ಮನೆಗೆಲ್ಲಾ ಸಗಣಿ ಸಾರಿ, ಒಂಬತ್ತು ದಿನಗಳ ಕಾಲವೂ ಮನೆಯಲ್ಲಿ ನೆಂಟರ, ಮಕ್ಕಳ ಖುಷಿಯ ಸಡಗರ. ಒಂಬತ್ತು ದಿನಗಳ ಕಾಲ ನಿತ್ಯ ಜಾತ್ರೆಗೆ ಹೋಗೋದು. ತಲೆತುಂಬಾ ಮಲ್ಲಿಗೆ ಘಮಘಮ, ಕೈತುಂಬಾ ಬಳೆಗಳ ಸದ್ದು, ಕಾಲಿಗೆ ಗೆಜ್ಜೆ, ಪರ್ಸ್ನಲ್ಲಿ ವರ್ಷದಿಂದ ಜಾತ್ರೆಗೆಂದು ಕೂಡಿಟ್ಟ ಚಿಲ್ಲರೆ ಹಣ, ಹೊಸ ಡ್ರೆಸ್ಸು..!! ಅಬ್ಬಾ..ಜಾತ್ರೆ ನೋಡೋದಕ್ಕಿಂತ ಹೊಸದಾಗಿ ಮಿರುಗೋ ನಮ್ಮನ್ನು ನಾವೇ ನೋಡಿಕೊಳ್ಳುವುದೂ ಒಂದು ಜಾತ್ರೆಯಂತೆ! ಆಮೇಲೆ ಕೆಲವು ಊರ ಹುಡುಗಿಯರನ್ನೆಲ್ಲಾ ವರ ನೋಡೋಕೆ ಬರುತ್ತಿದ್ದೂ ಜಾತ್ರೆಗೆ... ಹುಡುಗಿ ಓಕೆ ಆದ್ರೆ..ಆಮೇಲೆ ಮನೆಗೆ ಬಂದು ನೋಡೋ ಕಾರ್ಯಕ್ರಮ. ಅಷ್ಟೇ ಅಲ್ಲ, ಒಂದಿಷ್ಟು ಊರ ಮಂದಿಯೆಲ್ಲಾ ಜೊತೆಗೆ ಹರಟಲೂ ಆ ಜಾತ್ರೆಯಲ್ಲಿ ಸಾಧ್ಯವಾಗುತ್ತಿತ್ತು.

ನನಗೆ ನೆನಪಿರೋದು ನಾನು ಆರನೇ ಕ್ಲಾಸಿನಲ್ಲಿರುವಾಗ ನಮ್ಮೂರ ದೇವಸ್ಥಾನಕ್ಕೆ ಬ್ರಹ್ಮಕಲೋಶೋತ್ಸವ ಆಗಿ, ಆ ವರ್ಷವೇ ಜಾತ್ರೆ ಪ್ರಾರಂಭವಾಗಿದ್ದು. ಆವಾಗ ಅಮ್ಮ ನನಗೆ ಹಸಿರು ಚೂಡಿದಾರ ತಂದಿದ್ರು. ಅಲ್ಲಿಯವರೆಗೆ ನಾ ಚೂಡಿ ಹಾಕಿರಲೇ ಇಲ್ಲ! ಅದೇ ಮೊದಲು..ಊರ ಜಾತ್ರೆಯಂದು ಅಮ್ಮ ತಂದ ಕಡು ಹಸಿರು ಚೂಡಿಯನ್ನು ಧರಿಸಿ ಮಿರ ಮಿರ ಮಿನುಗಿದ್ದೆ. ಎರಡು ಜಡೆ ಹಾಕಿ ಅಮ್ಮ ತಲೆ ತುಂಬಾ ಮಂಗಳೂರು ಮಲ್ಲಿಗೆ ಮುಡಿಸಿದ್ರು. ಭಾಳ ಖುಷಿ ನನಗೆ. ಅಜ್ಜಿ ಜೊತೆ ಜಾತ್ರೆಗೆ ಹೋಗಿ, ಜಾತ್ರೆ, ದೇವರು, ಜನರನ್ನು ನೋಡೋದಕ್ಕಿಂತ ನನ್ನ ಹೊಸ ಚೂಡಿದಾರವನ್ನು ಮತ್ತೆ ಮತ್ತೆ ನೋಡಿಕೊಳ್ಳುವುದರಲ್ಲೇ ಮೈಮರೆತಿದ್ದೆ. ಎಲ್ಲಿ ಪಿನ್ ಹಾಕಿದ್ದ ವೇಲ್ ಜಾರುತ್ತೋ, ಪ್ಯಾಂಟ್ ನಲ್ಲಿ ಮಣ್ಣಾಗುತ್ತೋ ಅಂತ ಪ್ಯಾಂಟನ್ನು ಒಂದು ಕಡೆಯಿಂದ ಎತ್ತಿಕೊಂಡು ನಡೆಯುತ್ತಿದ್ದ ನನ್ನ ನೋಡಿ ಮನೆಯಲ್ಲಿ ಎಲ್ರೂ ನಗುತ್ತಿದ್ದರು. ಆ ಚೂಡಿದಾರ ಎಷ್ಟು ಇಷ್ಟವಾಗಿತ್ತು ಅಂದ್ರೆ ಏಳನೇ ಕ್ಲಾಸಿನಲ್ಲಿ ಫೋಟೋ ಸೆಶನ್ ಗೂ ಅದೇ ಚೂಡಿದಾರ ಧರಿಸಿದ ಹುಚ್ಚಿ ನಾನು!

ಮತ್ತೆ ಊರ ಜಾತ್ರೆ ಬಂದಾಗಲೆಲ್ಲಾ ಹೊಸ ಡ್ರೆಸ್ಸು ತೆಗೆದುಕೊಡುತ್ತಿದ್ದರು. ಊರ ಜಾತ್ರೆ ನಮಗೆ ಅಮ್ಮನ ಬಳಿ ಹೊಸ ಡ್ರೆಸ್ಸು ತೆಗೆಸಿಕೊಡು ಎಂದು ರಚ್ಚೆ ಹಿಡಿಯಲು ಒಳ್ಳೆ ಅವಕಾಶ. ಡ್ರೆಸ್ಸು ತೆಗೆಸಿಕೊಡದಿದ್ರೆ ನಾವು ಜಾತ್ರೆಗೇ ಬರಲ್ಲ ಅಂತ ಜಗಳವಾಡೋ ನಮಗೆ ಡ್ರೆಸ್ಸು ತೆಗೆಸಿಕೊಡದೆ ಅನ್ಯ ಮಾರ್ಗಗಳೇ ಇರಲಿಲ್ಲ! ಯಾಕಂದ್ರೆ ಜಾತ್ರೆ ಬಂತೆಂದರೆ ಊರಿನ ಮಕ್ಕಳೆಲ್ಲಾ ಹೊಸ ಡ್ರೆಸ್ಸು ಹಾಕೋರು. ಜಾತ್ರೆಗೆ ಹೋದರೆ ಐಸ್ ಕ್ರೀಂ ತಿನ್ನಲೇಬೇಕು...ಮನೆಯಿಂದ ಹೊರಟಾಗಲೇ ಸಿಕ್ಕವರಲೆಲ್ಲಾ ಐಸ್ ಕ್ರೀಂ ಕೊಡಿಸ್ತೀರಾ ಮಾಮ...ಎನ್ನುತ್ತಾ ಐಸ್ ಕ್ರೀಂ ತೆಗೆದುಕೊಡೋರ ಹಿಂದೆ ಓಡೋ ಚಾಳಿ ನನ್ನದು. ಆಮೇಲೆ ಬಲೂನ್ ನನ್ನ ಫೇವರಿಟ್.

ಇಂದಿಗೆ ಜಾತ್ರೆಗೆ ಹೋಗದೆ ಏಳೆಂಟು ವರ್ಷಗಳಾಗಿದೆ. ಹತ್ತನೇ ಕ್ಲಾಸು ಮುಗಿದ ಮೇಲೆ ಜಾತ್ರೆ ನೋಡೋ, ಜಾತ್ರೆಯಲ್ಲಿ ಹೊಸ ಡ್ರೆಸ್ಸು ಹಾಕಿ ಮಿರುಗೋ ಅವಕಾಶನೇ ಸಿಕ್ಕಿಲ್ಲ. ಆದ್ರೂ ನಮ್ಮೂರ ಜಾತ್ರೆ ನೆನಪಾಗುತ್ತೆ. ಜಾತ್ರೆಗೆ ಬಿಡದೆ ಕರೆದೊಯ್ಯುವ ಅಜ್ಜಿ ನೆನಪಾಗುತ್ತಾಳೆ. ಜಾತ್ರೆಯ ಬಲೂನ್, ಐಸ್ ಕ್ರೀಂ ನೆನಪಾಗುತ್ತೆ. ಒಂದು ಸಲ ನನ್ನ ಚಪ್ಪಲಿ ಯಾರಿಗೋ ಬಲಿಯಾಗಿದ್ದು ನೆನಪಾಗುತ್ತೆ. ತಲೆತುಂಬಾ ಮುಡಿದ ಮಲ್ಲಿಗೆ ಪರಿಮಳ, ಕಾಲ್ಗೆಜ್ಜೆ, ಬಳೆಯ ಕಿಣಿಕಿಣಿ ನಿನಾದ, ಪಂಜಕಜ್ಜಾಯ ತಿನ್ನೋ ಆಸೆಯಿಂದ ಭಟ್ರ ಬಳಿ ಹೋಗಿ ಎರಡೆರಡು ಸಲ ದಕ್ಷಿಣೆ ಹಾಕಿದ್ದು ನೆನಪಾಗುತ್ತೆ. ಏನ ಮಾಡಲೀ..ಬೆಂಗಳೂರಿನ ಬದುಕ ಸುಂದರವಾಗಿ ಕಾಣುತ್ತೆ ಆದ್ರೆ ಮನಸ್ಸು ಮಾತ್ರ ನನ್ನ ಜಾತ್ರೆನ, ನನ್ನ ಹಸಿರ ಹಳ್ಳೀನ ಮಿಸ್ ಮಾಡ್ಕೋತಾ ಇದ್ದೀನಿ ಅನ್ನುತ್ತೆ. ಏನೋ ಬರೆಯಕೆ ವಿಷ್ಯ ಸಿಗ್ಲಿಲ್ಲ..ನಮ್ಮೂರ ಜಾತ್ರೆ ನೆನಪಾತು. ಒಪ್ಕೋತೀರಲ್ಲಾ...?!

Wednesday, April 29, 2009

ನಿನ್ನ ಪ್ರೇಮದ ಪರಿಯ ನಾನರಿಯೆ...

ಒಲವಿನ ಗೆಳತೀ,
"ನಿದ್ದೆ ಬಾರದ ಕಣ್ಣ ಮೇಲೆ ಕೈಯ ಮುಗಿವೆ, ಚುಂಬಿಸು ಒಮ್ಮೆ..." ಎಂಬ ಹಾಡನ್ನು ನಿನ್ನೆ ನೀ ಫೊನಿನಲ್ಲಿ ಉಲಿದಾಗ ಯಾಕೋ ನಾನೊಮ್ಮೆ ಮೌನಿಯಾದೆ. ನನ್ನ ಮೌನದ ಹಿಂದಿರುವ ಅನಂತ ಚುಂಬನವನ್ನು ನೀ ಕಾಣಲೇ ಇಲ್ಲ ಗೆಳತೀ, ಅಣು ಅಣುವಿನಲ್ಲಿ ದೇವರನ್ನ ಕಂಡ ನನಗೆ, ನನ್ನ ಹೃದಯದಲಿ ಮಾತ್ರ ನೀ ಯಾಕೆ ಆವರಿಸಿರುವೆಯೆಂದು ಇನ್ನೂ ತಿಳಿದಿಲ್ಲ. ಧಮನಿಗಳು ನಿನ್ನ ತಪೋವನದ ಸುತ್ತ ಹರಿಯುವ ಜೀವ ನದಿಗಳಂತೆ ಅನಿಸುತ್ತಿವೆ. ನೆನಪಾದಾಗಲೆಲ್ಲಾ ಹುಣ್ಣಿಮೆಯೆಂದೆನುವ ನೀ, ನನ್ನಂತರಂಗದಲಿರುವ ಅಮವಾಸ್ಯೆಯ ಕತ್ತಲೆಯ ಆಳವನ್ನರಿಯದೆಯೆ ಪ್ರೀತಿಸಿರುವೆ. ಚಂದಿರ ಸೂಸುವ ತಂಪನ್ನು ಮಾತ್ರ ಅನುಭವಿಸಿರುವ ನೀನು, ಮಂಜಿನಾವೃತವಾದ ನನ್ನಂತರಂಗದ ಚಳಿಯನ್ನು ಸಹಿಸುವೆಯಾ? ಹೇಳು ಗೆಳತೀ, ನನ್ನ ಮೌನವನ್ನೇ ನಿನ್ನೆದೆಯ ಸ್ವಾತಿ ಮುತ್ತಾಗಿಸಲು ಹೊರಟಿರುವ ನಿನಗೆ, ನನ್ನ ನಿಶೆ ತುಂಬಿದ ಜೀವನದ ಪರಿಚಯವಿದೆಯೇ?

ನಿನ್ನ ಹೃದಯದ ಏಳಗಲದಲ್ಲಿ ತಲೆಯಿಟ್ಟು ಮಲಗುವ ಅದೃಷ್ಟವಿಲ್ಲದವನು ನಾನು ಗೆಳತೀ. ದಾರಿಯಲಿ ಬಿದ್ದಾಗ ಎದ್ದು ನಿಲಿಸುವ ನಿನ್ನ ಪ್ರೀತಿಯ ಮುಂದೆ ನಾ ಕೈಕಟ್ಟಿ ನಿಂತಿರುವೆ, ನನಗೆ ಮಾತುಗಳಿಲ್ಲ, ಮೌನವಷ್ಟೇ ಗೊತ್ತು. ನೀ ಕೊಟ್ಟ ಅಮ್ಮನ ವಾತ್ಸಲ್ಯ, ಅಕ್ಕನ ಮಮತೆ, ಒಲವಿನ ಗೆಳತಿಯಾಗಿ ಅಕ್ಕರೆಯ ಜೀವನ ಪ್ರೀತಿಗೆ ನಾ ಋಣಿ ಎಂದಷ್ಟೇ ಹೇಳಬಲ್ಲೆ. ನನಗೆ ತಿರುಗಿ ಕೊಡಲು ನನ್ನ ಕೈಯಲ್ಲಿ ಬಂಗಾರದ ಮೂಗುತಿ ಇಲ್ಲ, ಮಲ್ಲಿಗೆಯ ಹಾಸಿಗೆಯಿಲ್ಲ, ಮೊಸರನ್ನದ ಕನಸೂ ಇಲ್ಲ. ನಿನ್ನ ಕನಸ ನನಸಾಗಿಸುವ ಕಸುಬೂ ಇಲ್ಲ. ಸಾಧ್ಯವಿಲ್ಲದ ಕನಸುಗಳ ಕಟ್ಟಿ ಒಂಟಿಯಾಗುವ ನಿನ್ನ, ಹತ್ತಿರದಿಂದ ಸಂತೈಸುವ ಅವಕಾಶವಿದ್ದರೂ, ಮತ್ತೆಲ್ಲಿ ನನ್ನ ಎದೆಗೊರಗಿ ಮತ್ತೊಂದು ಕನಸ ಕಾಣುವೆಯಾ ಎಂಬ ಭಯ ನನ್ನೊಳಗೆ ಆವರಿಸಿಬಿಟ್ಟಿದೆ. ನಿನ್ನ ಬಿಟ್ಟು ಬೇರೆ ಯಾರೇ ನನಗೆ ಬದುಕಿನಾಸರೆ ಆದರೂ ಒಂಟಿಯೆಂದು ನಾನರಿವೆ. ಒಂಟಿ ಜೀವನ ನನ್ನ ವಿಧಿ ಬರಹ ಅಂದುಕೊಳ್ಳುವೆ ಗೆಳತೀ. ಹೃದಯ ತುಂಬಾ ಆವರಿಸಿರುವ ನಿನ್ನ ಬಿಟ್ಟು ಒಂಟಿತನವನ್ನೂ ಪ್ರೀತಿಸಲು ನಾನೊಲ್ಲೆ ಗೆಳತೀ. 'ನನ್ನ ದುಃಖಕ್ಕೆ ಹೆಗಲಾಗೆಂದು' ನಾ ಹೇಳಲಿಲ್ಲ ನಿಜ. ಆದರೆ, ನಿನ್ನ ನೋಡಿದ ಮೇಲೆ, ನಿನ್ನ ಜೀವನ ಪ್ರೀತಿಯ ಕಂಡ ಮೇಲೆ ನಾ ಕಣ್ಣೀರಾಗಲಿಲ್ಲ. ಕತ್ತಲನ್ನು ಮೆಟ್ಟಿ ನಿಂತು ಬೆಳಕನ್ನು ಕಾಣುವ ಪಾಠ ಹೇಳಿದವಳು ನೀನು. ನೀನೂ ನನ್ನ ಪಾಲಿಗೊಂದು ಬೆಳಕಿನ ಗುರು ಅಲ್ವಾ?

ನನ್ನ ಸುತ್ತಮುತ್ತಲಿನ ಜನ ದೇಶ ಭಾಷೆ ಕಲಿಯುವುದು ಭರವಸೆಯ ಹೊಂಗಿರಣವಲ್ಲ, ಹೌದು ಗೆಳತೀ, ನನ್ನ ನಗುವಿಗೆ, ಪ್ರೀತಿಗೆ ಸಂಸ್ಕೃತಿಯ ಕಟ್ಟಲೆಗಳಿರಲಿಲ್ಲ, ಹೌದು. ನಗರ ಚೆನ್ನಾಗಿದೆಯೆಂದು, ಹಳ್ಳಿಯ ಜನರೆಲ್ಲ ನಗರದಲ್ಲಿ ನೆಲೆಸಲಾಗುತ್ತದೆಯಾ? ಹಳ್ಳಿಯಲೇ ಅಲ್ಲವಾ ನೀವು ತಿನ್ನುವ ಭತ್ತ ಗೋಧಿ ಬೆಳೆಸುವುದು? ಅವರೆಲ್ಲಾ ಅಲ್ಲಿದ್ದರೇ ಚಂದವಲ್ಲವಾ? ಅಮ್ಮ, ಸಮಾಜ ಕಲಿಸಿದ 'ಸಂಸ್ಕೃತಿ'ಯನ್ನು ಹ್ಯಾಗೆ ಮೀರಲಿ ಹೇಳು? ಇಲ್ಲೇ ಹುಟ್ಟಿ, ಇಲ್ಲೇ ಬೆಳೆದ ನನಗೆ ಮಬ್ಬು ಬದುಕು ಚಂದವೇ ಗೆಳತಿ. ಇಲ್ಲೂ ಜೀವನ ಪ್ರೀತಿ ಇದೆ ಗೆಳತೀ. ಹುಣ್ಣಿಮೆಯ ಬೆಳದಿಂಗಳು, ಚಂದಿರನ ತಂಪನ್ನು ಅನುಭವಿಸಿರುವ ನಿನ್ನಲ್ಲಿ ಇದೊಂದು ಸತ್ಯವನ್ನು ಬಿಚ್ಚಿಟ್ಟಿರುವೆ.
ನಾ "ತೆರೆದಿದೆ ಮನೆ ಓ ಬಾ ಗೆಳತಿ..." ಎಂದು ಕರೆದೆಯೆನ್ನುವುದು ಸರಿ. ಕತ್ತಲನ್ನೇ ಹೊದ್ದು ಮಲಗಿರುವ ನನ್ನಲ್ಲಿ ನಿನಗೆ ಅದೇನು ಆಕರ್ಷಣೆ? ದೂರದಲ್ಲಿರುವ ಬೆಟ್ಟ ಸುಂದರವೆನ್ನುವ ನಾಣ್ಣುಡಿಯನ್ನು ಮರೆತು ನಿನ್ನ ನೋಡಿ ಮುಗುಳ್ನಕ್ಕೆ, ನಿನ್ನ ಜೀವನಪ್ರೀತಿಯನ್ನು ನೋಡಿ ಮೈಮರೆತೆ. ನೀನು ನಗುವ ಪರಿಯನ್ನು ಕಂಡು ಕನಸ ಕಂಡೆ, ಎಚ್ಚ್ರವಾದಾಗ ನೀ ತುಂಬ ಹತ್ತಿರವಿದ್ದರೂ ನನ್ನೊಳಗಿನ ಕತ್ತಲಿನ ಅರಿವಾಗಿ ಧಡ್! ಅಂತ ಕದ ಮುಚ್ಚಿದೆ. ಕಾಲ ಕಲಿಸುವ ಬದುಕಿಗೆ ನಾ ಯಾಕೆ ಬಂದಿಯಾಗುವೆನು ಎಂದು ಹೇಗೆ ತಿಳಿಯಪಡಿಸಲಿ ನಿನಗೆ? ನೀ ಮದುವೆಯಾಗಿ ಎರಡು ಮಕ್ಕಳ ಹೆತ್ತ ಮೇಲೆ ನೀ ಇದನ್ನೇ ನಿನ್ನ ಇನಿಯನ ಕೇಳು ಗೆಳತೀ.
ಜೋಗ್ ಜಲಪಾತವೇ ನಾಚುವಂತೆ ನಿನ್ನ ಚುಂಬಿಸುವ ನನ್ನ ಕನಸನ್ನು ಹೇಳಿದರೆ, ನೀ ಎಲ್ಲಿ ಹುಸಿಮುನಿಸು ತೋರಿಸುವೆಯೆಂದು ಹೇಳಿಲ್ಲ ನಿನಗೆ. ನಿನ್ನ ಹುಸಿಮುನಿಸೂ ನನ್ನ ಮನಸನ್ನು ಅಲ್ಲೋಲಕಲ್ಲೋಲ ಮಾಡುವಾಗ, ನನ್ನ ದು:ಖವನ್ನು ಹೇಳಿ, ಎಲ್ಲಿ ನಾ ನಿನ್ನ ಮನಸನ್ನು ಬೇಸರಿಸುವಂತೆ ಮಾಡುವೆನೋ ಎನ್ನುವ ದುಗುಡ ನನ್ನದು. ನನ್ನ ದು:ಖಗಳ ಬದುಕನ್ನು ನೀ ಅಪ್ಪಿಕ್ಕೋಳ್ಳುವೆಯೆಂದು ಹೇಳಿದಾಗ, ನನಗೆ ಇಷ್ಟೊಂದು ಪ್ರೀತಿಯ ಧಾರೆಯನ್ನೀಯುವಾಗ, ನಿನ್ನ ಕಾಲುಗಳ ಮುಟ್ಟಿ ನಮಸ್ಕರಿಸಿ ಧನ್ಯನಾಗುವ ಹಂಬಲವಾಗುತ್ತಿದೆ...ಏನೆನ್ನಲೀ ಗೆಳತೀ,
ಮೊಂಬತ್ತಿಯಲ್ಲೇ ಜೀವನ ಪ್ರೀತಿ ಪಡೆಯುವ ನಿನ್ನ ಮಲ್ಲಿಗೆ ಮನಸ್ಸಿನ ಸಣ್ಣ ಬಜೆಟ್ ಕನಸುಗಳಿಗೆ ನಾ ಅನಂತ ಋಣಿ.
ಬೇಸರಿಸದಿರು ಗೆಳತೀ...ನಿನ್ನ ಗುಲಾಬಿ ಹೃದಯದ ಕದ ತೆರೆದು ಒಮ್ಮೆ ಇಣುಕಿ ನೋಡು. ನಾ ನಲ್ಲೇ ನೆಲೆಸಿರುವೆ.
ಮತ್ತದೇ ಹಾಡಿನ ಗುನುಗು,
ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸ್ಸು
ಹುಣ್ಣಿಮೆಯ ರಾತ್ರಿಯಲಿ
ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
ನಿನ್ನೋಳಿದೆ ನನ್ನ ಮನಸ್ಸು
ಇತಿ,
ನಿನ್ನವನು

Sunday, April 26, 2009

ಕನಸು ಕಲ್ಲಾಗುವ ಮೊದಲು...!!

ಗೆಳೆಯಾ,
ನಿನ್ನ ನೆನಪಾದಾಗ ಅಮಾವಾಸ್ಯೆಯೂ ಹುಣ್ಣಿಮೆಯಂತೆ. ನೀ ನನ್ನೊಳಗೆ ಮಾತಿಗಿಳಿದಾಗ ಸುಡುವ ನೇಸರನೂ ತಂಪು ಸೂಸುವ ಚಂದಿರನಂತೆ. ನಿನ್ನ ಮೌನದ ದನಿ ಎದೆ ತಟ್ಟಿದಾಗ ಭಾವಗಳೂ ಜೀವ ಪಡೆಯುತ್ತವೆ. ಯಾಕೋ ನೀನಿಟ್ಟ ಪ್ರೀತಿಯ ಕಚಗುಳಿ ಮತ್ತೆ ಮತ್ತೆ ಹೃದಯದಲ್ಲಿ ಮಾರ್ದನಿಸುತ್ತದೆ ಗೆಳೆಯಾ. ಅನನ್ಯವಾದ ಬದುಕನ್ನು, ಅಮ್ಮನೆಂಬ ಶ್ರೇಷ್ಠ ಸತ್ಯವನ್ನು ಪ್ರೀತಿತಿಸಲು ಮಾತ್ರ ಅರಿತಿದ್ದ ನಾನು ನಿನ್ನನ್ನೂ ಪ್ರೀತಿಸಲು ಕಲಿತೆ. ನಿನ್ನಲ್ಲೂ ಜೀವನಪ್ರೀತೀನ ಕಂಡೆ. ನಿನ್ನಲ್ಲೂ ಬದುಕಿನ ಪ್ರತಿಬಿಂಬ ಕಂಡೆ. ನಾನಂದುಕೊಂಡಿರಲಿಲ್ಲ ಗೆಳಯಾ...ನೀ ಮೌನದಲ್ಲೇ ಪ್ರೀತಿಯಾಗಿ ನನ್ನೆದೆಯಲ್ಲಿ ಸ್ವಾತಿ ಮುತ್ತಾಗುವೆಂದು!

ಕಳೆದ ಬದುಕಿನ ಹಾದಿಯಲ್ಲಿ ನಂಬಿಕೆಯ ಪುಷ್ಪ ಹರಿಸಿ ನನ್ನೊಡನೆ ಹೆಜ್ಜೆಯಾಗಿದ್ದವನು ನೀನು. ಮನದೊಳಗೆ ಅವಿತಿದ್ದ ಶೋಕವನ್ನೇ ಶ್ಲೋಕವನ್ನಾಗಿಸಿ, ಅಳಲಿನ ಅಲೆಗಳನ್ನೇ ಸವಿಹಾಡಾಗಿಸಿದ ಗೆಳೆಯನೇ, ನಿನ್ನ ಖುಷಿಗೆ ನಾ ಬೆಳಕಾಗಬೇಕಾದರೆ ನಿನ್ನ ದುಃಖದ ಕತ್ತಲಲ್ಲೂ ನಾ ಕರಗಿ ಕಣ್ಣೀರಾಗಬೇಕು. 'ನಿನಗೆ ಬೆಳಕಷ್ಟೇ ನೀಡುತ್ತೇನೆ ಗೆಳತೀ..' ಎನ್ನುತ್ತಾ ದುಃಖವನ್ನೇಲ್ಲಾ ಬದುಕ ಮೇಲೆ ಹೊದ್ದು ಮಲಗುತ್ತೇನೆ ಎನ್ನುವ ಘನ ವ್ಯಕ್ತಿತ್ವ ನಿನ್ನದಾದರೂ ನಿನ್ನ ತುಂಬಾ ಪ್ರೀತಿಸುವ ಗೆಳತಿಯಾಗಿ, ಅಕ್ಕರೆಯ ಸಹೋದರಿಯಾಗಿ, ನೋವು-ನಲಿವಿಗೆ ಅಮ್ಮನಾಗಿ ಮಮತೆಯ ಮಡಿಲಾಗುವ ಅವಕಾಶ ಕೊಡ್ತೀಯಾ ಹೇಳು..?! ಬೆಳದಿಂಗಳ ಮಳೆಗೆ ಮಾತ್ರವಲ್ಲ ಬೆಂಕಿಮಳೆಯ ಕಾಳರಾತ್ರಿಯಲ್ಲೂ ನಿನ್ನ ಜೊತೆ ನಾ ಹೆಜ್ಜೆಯಾಗಬೇಕು. ಕಂಗಳಿಂದ ಜಾರೋ ಹನಿಬಿಂದು ಪಾದತಳಕ್ಕೆ ಬಿದ್ದು ಮಣ್ಣಾಗುವ ಮೊದಲು ಒಂದೇ ಒಂದು ಸಲ ಹೇಳಿಬಿಡು ಗೆಳಯಾ, "ಗೆಳತೀ ನನ್ನ ದುಃಖಕ್ಕೂ ಹೆಗಲಾಗಲೆಂದು..!"

ಹೃದಯ ತುಂಬಾ ದುಗುಡ-ಕಾರ್ಮೋಡವನ್ನು ಹೊತ್ತು 'ಮರೆತುಬಿಡು' ಎನ್ನುವಷ್ಟು ಸುಲಭವಲ್ಲ ಪ್ರೀತಿ-ಭಾವದ ಬಂಧನ. ನಿನ್ನ ಹುಣ್ಣಿಮೆ ನಗುವಿಗೆ, ಪ್ರೀತಿಯ ಕಚಗುಳಿಗೆ ಸಂಸ್ಕೃತಿ-ಕಟ್ಟಳೆಗಳ ಹಂಗಿರಲಿಲ್ಲ. ಸುತ್ತಮುತ್ತಲ ಜನ ದೇಶ ಭಾಷೆ ಕಲಿಯಬಹುದು..ಎನ್ನುವುದು ಭರವಸೆಯ ಹೊಂಗಿರಣವಲ್ಲ ಗೆಳೆಯಾ. 'ತೆರೆದಿದೆ ಮನೆ ಓ ಬಾ ಗೆಳತೀ..' ಎಂದು ಕೈಬೀಸಿ ಕರೆದು ಧಡ್ ! ಎಂದು ಮನದ ಕದ ಮುಚ್ಚದಿರು. ಅಂತರಂಗದ ಬಾಗಿಲು ತೆರೆದುಬಿಡು...ಪ್ರೀತಿಯ ಗಾಳಿ ಒಳಕ್ಕೆ ಹರಿದುಬಿಡಲಿ. ಬಣ್ಣ ತುಂಬಿಬಿಡು..ನೆನಪುಗಳಿಗೆ, ಪ್ರತಿ ರಾತ್ರಿಯ ಕನಸುಗಳಿಗೆ..ಜೀವನ ರಂಗೋಲಿಗೆ! ತಡವೇಕೆ..ಕಾಲ ಕಲಿಸುವ ಬದುಕಿಗೆ ನೀನ್ಯಾಕೆ ಬಂಧಿಯಾಗುತ್ತೀಯಾ ಹೇಳು? ಮನತುಂಬಿ ನಕ್ಕು ಬಿಡು..ಚಂದಿರನೂ ನಸು ನಾಚುವಂತೆ, ಅರಳುವ ಜಾಜಿಯೂ ಹುಸಿಮುನಿಸು ತೋರುವಂತೆ! ಅನನ್ಯ ಬದುಕಿನಲ್ಲಿ ಸ್ವಚ್ಚಂದ ಹಕ್ಕಿಯಾಗಿ ಆಕಾಶಕ್ಕೆ ಹಾರೋ ಆಡಂಬರತೆ ಬೇಡ..ನಮ್ಮದೇ ಬಿದಿರ ಹುಲ್ಲಿನ ಗುಡಿಸಲಿನಲ್ಲಿ ಪ್ರೀತಿಯ ಗೂಡು ಕಟ್ಟಿ ಕಲರವಗುಟ್ಟೋಣ. ಮೊಂಬತ್ತಿಯಡಿಯಲ್ಲೇ ಜೀವನಪ್ರೀತಿಯ ಅನುಭೂತಿ ಪಡೆಯೋಣ. ನಿನ್ನ ಬದುಕಿನಾಗಸದಲ್ಲಿ ಪುಟ್ಟ ನಕ್ಷತ್ರವಾಗೋ ಅವಕಾಶ ಕೊಡ್ತೀಯಾ ಹೇಳು ಗೆಳೆಯಾ....ಕನಸು ಕಲ್ಲಾಗುವ ಮೊದಲು..!!ಇಂತೀ,
ನಿನ್ನವಳೇ

Saturday, April 25, 2009

ಕೆಂಡಸಂಪಿಗೆಗೆ ಪ್ರೀತಿಯ ಥ್ಯಾಂಕ್ಸ್ಉಉಉ...

ನನ್ನ ಪ್ರೀತಿಯ ಬ್ಲಾಗ್ ಧರಿತ್ರಿ ಹುಟ್ಟಿದ್ದು ಕಳೆದ ಮಾರ್ಚ್ ನಲ್ಲಿ. ಕೆಂಡಸಂಪಿಗೆಯ ದಿನದ ಬ್ಲಾಗ್ ನಲ್ಲಿ ಧರಿತ್ರಿ ಇಂದು ಹೂನಗೆ ಚೆಲ್ಲುಬಿಟ್ಟಿದ್ದಾಳೆ. ಪ್ರೀತಿಯಿಂದ ಬೆನ್ನುತಟ್ಟಿದ್ದಕ್ಕೆ ಕೆಂಡಸಂಪಿಗೆಗೆ ಕೃತಜ್ಷತೆಗಳು.
ಧರಿತ್ರಿಯ ಹುಟ್ಟುಹಬ್ಬದ ಸಂಭ್ರಮ
ಪ್ರೀತಿಯ ತಮ್ಮನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ಧರಿತ್ರಿ. ಒಡಹುಟ್ಟಿದ ತಮ್ಮನಲ್ಲದಿದ್ದರೂ, ಒಡನಾಡಿ ಒಡಹುಟ್ಟಿದವನಾದ, ತಮ್ಮೂರು ಉಜಿರೆಯ ಕಾರಿಡಾರ್ ನಿಂದ ಈಗಿರುವ ಬೆಂಗಳೂರಿನ ಮನೆಯಲ್ಲೂ ತಮ್ಮೊಟ್ಟಿಗೆ ಕಲರವಗುಟ್ಟುವ ತಮ್ಮನ ಒಡನಾಟವನ್ನ ಧರಿತ್ರಿ ನೆನೆಯುತ್ತಿದ್ದಾರೆ. ಹೀಗಿರುವ ಪ್ರೀತಿಯ ತಮ್ಮನ ಹುಟ್ಟುಹಬ್ಬಕ್ಕೊಂದು ಕವಿತೆ ಇಟ್ಟು ಶುಭ ಕೋರುತ್ತಿದ್ದಾರೆ.

"ಧರಿತ್ರಿ ನನ್ನ ಅದಮ್ಯ ಕನಸು. ಸದಾ ಏನಾದ್ರೂ ಬರೀಬೇಕು ಅನ್ನೋದು ನನ್ ಮನಸ್ಸಿನ ತುಡಿತ. ಬರವಣಿಗೆ ಅನ್ನೋದು ನಿಂತ ನೀರಾಗಬಾರದು..ಅದಕ್ಕೆ ಈ ಧರಿತ್ರಿ ಆಸರೆಯಾಗುತ್ತಾಳೆ ಅನ್ನೋ ನಂಬಿಕೆ." ಅನ್ನೋದು ಅವರ ಆಶಯ.

ಭಾವದಲೆಗಳ ಮೇಲೇರಿ ಸವಾರಿ ಮಾಡುತ್ತಿರುವಂತೆ ಬರೆವ ಧರಿತ್ರಿ ಬರಹಗಳು ಓದಲು ಬೆಚ್ಚನೆಯ ಅನುಭವ ಕೊಡುತ್ತವೆ. ಹುಟ್ಟಿದೂರು ಬಿಟ್ಟುಬಂದ ತಳಮಳ, ಒಂಟಿತನದ ಸಂಕಟ, ಈ ನಡುವೆ ತುಂತುರು ಮಳೆಯಲ್ಲಿ ನೆನಪುಗಳ ಮೆರವಣಿಗೆ....ಎಲ್ಲವೂ ಓದಲು ಖುಷಿ ಕೊಡುತ್ತವೆ.
(http://www.kendasampige.com/article.php?id=1774)

Tuesday, April 21, 2009

ನೋವು-ನಲಿವುಗಳ ಜೊತೆ ನಲಿದಾಡಿಬಿಡು ನನ್ನ ಪುಟ್ಟ ತಮ್ಮಾ...

ನನ್ನನ್ನು ತುಂಬಾ ಪ್ರೀತಿಸುವ ಮುದ್ದಿನ ತಮ್ಮ ಸಂದೇಶನ ಹುಟ್ಟುಹಬ್ಬ ನಾಳೆ. ಅವನಿಗಿನ್ನು 23 ವರುಷ. ಹಾಗಾಗಿ ಭಾಳ ಖುಷಿ. ಉಜಿರೆಯ ಕಾರಿಡಾರ್ ನಿಂದ ಹಿಡಿದು ಬೆಂಗಲೂರಿನ ಪುಟ್ಟ ಮನೆಯೊಳಗೂ ನನ್ನ ಮಡಿಲಲ್ಲಿ ಕಲರವಗುಟ್ಟುವವ ನನ್ನ ತಮ್ಮ. ಅವನು ಒಡಹುಟ್ಟಿದ ತಮ್ಮನಲ್ಲ, ಆದರೆ ಒಡನಾಡಿ ಒಡಹುಟ್ಟಿದವನಾದ. ನಾನು ದ್ವಿತೀಯ ಬಿಎ ಇರುವಾಗ ಅವನು ಮೊದಲ ಬಿಎ. ದೂರದ ಚಿಕ್ಕಮಗಳೂರ ಕಾಫಿ ತೋಟದಿಂದ ಉಜಿರೆಗೆ ಕಲಿಯಲು ಬಂದ ನನ್ನ ಚಿಕ್ಕಮ್ಮನ ಮಗ. ಕ್ಲಾಸಿಲ್ಲದ ಫ್ರೀ ಫಿರೇಡಿನಲ್ಲಿ ನಿತ್ಯ ನನ್ನ ಕ್ಲಾಸಿನಲ್ಲಿ ಕುಳಿತು ನನ್ನ ಜೊತೆ ಹರಟುತ್ತಾ, ದಿನಚರಿಗಳನ್ನು ಒಪ್ಪಿಸುತ್ತಾ, ತಮಾಷೆ ಮಾಡುತ್ತಾ, ಜಡೆ ಎಳೆಯುತ್ತಾ, ಕಿವಿ ಹಿಂಡುತ್ತಾ ಕೊನೆಗೆ ನನ್ನಿಂದ ಬೈಸಿಕೊಂಡು ಹಾಸ್ಟೇಲ್ ಮೂಲೆಯಲ್ಲಿ ಕುಳಿತು ಒಬ್ಬಂಟಿಯಾಗಿ ಬಿಕ್ಕಿ ಬಿಕ್ಕಿ ಅತ್ತವ ನನ್ನ ಪ್ರೀತಿಯ ತಮ್ಮ, ಕಾಲೇಜಿನಲ್ಲಿ ಗಮಕ ತರಗತಿಗೆ ಹೋಗುವಾಗ ಮೇಷ್ಟ್ರು ಹೇಳಿದ್ದು ಅರ್ಥವಾಗದಿದ್ದಾಗ ನನ್ನ ದನಿಗೆ ಸಾಥ್ ನೀಡಿದ್ದು ನನ್ನ ತಮ್ಮ. ಪ್ರತಿ ಹಬ್ಬ ಬಂದಾಗಲೂ ನನಗೆ ಹೋಳಿಗೆ, ಮನೆಯಲ್ಲಿ ಮಾಡಿದ್ದ ತಿಂಡಿಗಳನ್ನು ನಮ್ಮ ಹಾಸ್ಟೇಲಿಗೆ ತಂದುಕೊಡುತ್ತಿದ್ದ. ಕಾಲೇಜು ಬಿಟ್ಟ ತಕ್ಷಣ ನನ್ನ ಹಾಸ್ಟೇಲ್ ತನಕ ಬಿಟ್ಟು ಆಮೇಲೆ ಅವನ ಹಾಸ್ಟೇಲಿಗೆ ಹೋಗುತ್ತಿದ್ದ. ರಜಾ ದಿನದಲ್ಲಿ ಹೊರನಾಡು, ಕಲಶ, ಶೃಂಗೇರಿ, ಚಿಕ್ಕಮಗಳೂರು ಸುತ್ತಿಸಿ, ಅಕ್ಕನಿಗೆ ಚಿಕ್ಕಮಗಳೂರಿನ ಕಾಫಿ ತೋಟಗಳನ್ನು ನೋಡಿ ಖುಷಿಪಡಿಸಿದ್ದ.

ನಾನು ಡಿಗ್ರಿ ಮುಗಿಸಿ ಕಾಲೇಜಿಂದ ಹೊರನಡೆದಾಗ ಅಕ್ಕಾ ನಾ ನಿನ್ ಜೊತೆಗೇ ಬರ್ತೀನಿ ಎಂದು ಅಮ್ಮನೆದುರು ಮಗು ಗೋಗರದಂತೆ ಬಿಕ್ಕಿ ಬಿಕ್ಕಿ ಅತ್ತಿದ್ದ. "ನನಗಿಂತ ಹೆಚ್ಚಾಗಿ ನಿನ್ನ ಪ್ರೀತಿಸೋರು ಸಿಕ್ಕಾಗಲೂ ನನ್ನ ಮರೆಯಲ್ಲ ತಾನೇ?" ಎಂದು ಆಟೋಗ್ರಾಫ್ ತುಂಬಾ ಗೀಚಿಟ್ಟು ನನ್ನ ಕಣ್ಣುಗಳೂ ಒದ್ದೆಯಾಗುವಂತೆ ಮಾಡಿದ್ದ. ಕಾರಿಂಜ ದೇವಸ್ಥಾನ ಬೆಟ್ಟದ ತುತ್ತತುದಿಗೆ ಹೋಗಿ ನನ್ನ ಜೊತೆ ಫೋಟೋ ತೆಗೆಸಿಕೊಂಡು ನಿಂಗೆ ಬಾವ ಹುಡುಕುತ್ತೀನಿ ಅಂತ ತಮಾಷೆ ಮಾಡುತ್ತಿದ್ದ. ಸಿಕ್ಕವರಿಗೆಲ್ಲಾ ಫೋಟೋ ತೋರಿಸಿ ಇದು ನನ್ನಕ್ಕ ಅಂತ ಹೆಮ್ಮೆಪಡುತ್ತಿದ್ದ. ಅಂತೂ ನಾನು ಬೆಂಗಳೂರಿಗೆ ಬಂದಾಗಲೂ ನಿತ್ಯ ಮೊಬೈಲ್, ಮೆಸೇಜ್ ಗಳೊಂದಿಗೆ ನನ್ನೊಂದಿಗೆ ಕಲರವಗುಟ್ಟುತ್ತಿದ್ದ. ಡಿಗ್ರಿ ಮುದಿದ್ದೇ ತಡ..ಮನೆಯಲ್ಲಿ ಯಾರೂ ಹೇಳಿದ್ರೂ ಅಕ್ಕನ ಜೊತೆಗೇ ಇರ್ತೀನಿ ಅಂತ ಹಠ ಹಿಡಿದು ಬೆಂಗಳೂರಿಗೆ ಬಂದುಬಿಟ್ಟ. ನನ್ನ ಪುಟ್ಟ ಮನೆಯಲ್ಲಿ ನನ್ನ ಮಡಿಲೇ ಸೇರಿಬಿಟ್ಟ.

ನನ್ನ ಕೆಟ್ಟ ಕೋಪ, ಅಸಹನೆ, ಸಿಡುಕು ಎಲ್ಲಾವನ್ನೂ ಸಹಿಸಿಕೊಂಡು ನನ್ನ ಜೊತೆ ಹೆಜ್ಜೆಹಾಕೋನು ನನ್ನ ತಮ್ಮ. ರಾತ್ರಿ 10 ಗಂಟೆಗೆ ಮನೆ ಸೇರಿದರೂ. "ಮೇಡಮ್ಮೋರೇ ಎದ್ದೇಳ್ತೀರಾ. ಮಿ. ಸಂದೇಶ್ ಬಂದಿದ್ದಾರೆ" ಅಂತೇಳಿ ನನ್ನ ಕೋಣೆಯ ಕಿಟಕಿ ಬಡಿದು ಎಬ್ಬಿಸಿ, ಸ್ವಲ್ಪ ಊಟ ಮಾಡಕ್ಕ..ಅನ್ನುತ್ತಾ ಮತ್ತೊಮ್ಮೆ ಊಟ ಮಾಡಿಸೋನು ನನ್ನ ಮುದ್ದು ತಮ್ಮ. ಬೆಳಿಗ್ಗೆ ಆರು ಗಂಟೆಗೆ ಎದ್ದು ನಾನು ಪಾತ್ರೆಗಳ ಜೊತೆ ಸದ್ದು ಮಾಡುವಾಗ, ದಡಕ್ಕನೆ ಎದ್ದು ನನ್ನ ಜೊತೆ ತರಕಾರಿ ಹಚ್ಚೋಕೆ ಸಾಥ್ ನೀಡೋನು, ನಾನು ಟೀ ಕುಡಿದು ಸ್ಬಾನಕ್ಕೆ ಹೋದಾಗ ಮನೆ ಗುಡಿಸಿ-ಒರೆಸಿ, ಪೂಜೆಗೆ ರೆಡಿ ಮಾಡೋನು ನನ್ನ ತಮ್ಮ. ನಾನು ಬೇಜಾರದಲ್ಲಿದ್ದಾಗ ಕೆದಕಿ ಕೆದಕಿ ಕೇಳಿ ತಲೆಯೆಲ್ಲಾ ತಿಂದು ಸ್ವಲ್ಪ ಬೈಸಿಕೊಂಡು ಆಮೇಲೆ ನನ್ನ ಮನಸ್ಸನ್ನು ತಣ್ಣಗಾಗಿಸೋನು ನನ್ನ ತಮ್ಮ. ನಾ ಬೈದ್ರೆ ಸುಮ್ಮನಾಗಿ, ನನ್ನ ಸಿಟ್ಟೆಲ್ಲಾ ಕರಗಿದ ಮೇಲೆ ನೀನು ಹಾಗೆಲ್ಲಾ ಹೇಳಬಾರದಿತ್ತು ಎಂದು ನನ್ನ ತಪ್ಪನ್ನು ನನಗೇ ಮನದಟ್ಟು ಮಾಡೋನು. ತಿಂಗಳ ಕೊನೆಯಲ್ಲಿ ಬೇಗನೇ ಸಂಬಳ ಕೈಗೆ ಸಿಗದಾಗ...ನನ್ನ ತಲೆಬಿಸಿ ನೋಡಿ..ಅಕ್ಕಾ ಸ್ವಲ್ಪ ದಿನಸಿ ತಕೋಳೋಣ..ಸಂಬಳ ಆದ ಮೇಲೆ ಎಲ್ಲಾ ತಕೋಳೋಣಂತೆ ಎಂದೇಳಿ ತಲೆಬಿಸಿ ಕಡಿಮೆಯಾಗಿಸೋನು ನನ್ನ ತಮ್ಮ. ನಾನು ಹೊಸ ಡ್ರೆಸ್ಸು ತಕೋಳುವಾಗ ಕಲರ್ ಸೆಲೆಕ್ಟ್ ಮಾಡಿ, ಅದನ್ನು ಹಿಂಗೇ ಹೊಲಿಸು, ಅದಕ್ಕೆ ಇಂಥ ಕಿವಿಯೋಲೆ, ಬಳೆ ಹಾಕೆಂದು ದುಂಬಾಲು ಬೀಳೋನು, ಅವನಿಗೆ ವಾರದ ರಜಾದಿನದಂದು ಬೇಗನೆ ಅಡುಗೆ ಎಲ್ಲಾ ರೆಡಿಮಾಡಿ, ನಾನು ಸಂಜೆ ಆಫೀಸ್ ನಿಂದ ಹೊರಟಾಗ ವಾಕಿಂಗ್ ಗೆ ರೆಡಿಯಾಗೋನು, ಮಲ್ಲಿಗೆ ಮತ್ತು ಗುಲಾಬಿ ಹೂವು ತಂದು ನನ್ನ ತಲೆಗೆ ಮುಡಿಸಿ ನನ್ನ ನೋಡಿ ಖುಷಿಪಡೋನು, ನೀನು ಮದುವೆಯಾಗುವ ತನಕ ನಿನ್ನ ಜೊತೆ ಇದ್ದುಬಿಡ್ತೀನಿ...ಆಮೇಲೆ ನಿಮ್ಮನೆ ಪಕ್ಕನೇ ನಂಗೊಂದು ರೂಮ್ ಮಾಡಿ ಕೊಡಕ್ಕಾ ಎಂದು ನಿತ್ಯ ತಮಾಷೆ ಮಾಡೋ ನನ್ನ ಪುಟ್ಟ ತಮ್ಮನನ್ನು ಕಂಡಾಗ ನನ್ನೆಲ್ಲಾ ನೋವುಗಳು ಕರಗಿ, ಮನಸ್ಸು ಖುಷಿಯ ಕಡಲಲ್ಲಿ ತೇಲಿಬಿಡುತ್ತೆ. ನನ್ ಪುಟ್ಟ ಮನೆಯಲ್ಲಿ ಖುಷಿಯ ಸಾಗರವನ್ನೇ ತಂದಿಡುವ ನನ್ನ ತಮ್ಮನ ಸಹನೆ ಕಂಡಾಗ, ಛೇ! ಆ ತಾಳ್ಮೆಯನ್ನು ದೇವರು ನನಗೇಕೆ ಕೊಟ್ಟಿಲ್ಲ ಅನಿಸುತ್ತೆ. ನೋವು-ನಲಿವಿಗೆ ಪ್ರೀತಿಯ ಅಮ್ಮನಾಗಿ, ತಿದ್ದಿ-ತೀಡುವ ಅಕ್ಕರೆಯ ಗೆಳೆಯನಾಗಿ, ಬುದ್ಧಿ ಹೇಳುವ ಅಕ್ಕ-ಅಣ್ಣನಾಗಿರುವ ನನ್ನ ತಮ್ಮನಂದ್ರೆ ಅಮ್ಮನಷ್ಟೇ ನಂಗೆ ಪ್ರೀತಿ.
ಪುಟ್ಟಾ....
ನಿನ್ನೊಳಗೆ ತೂರಿಬರುವ
ಬೆಳಕಿನ ಕಿರಣಗಳನ್ನು ಹಿಡಿದಿಡು....
ಬದುಕಿನ ಎದೆಯಿಂದ ಎದೆಗೆ
ಪ್ರೀತಿಯ ಗಾಳಿ ಸೋಕಿಬಿಡು..
ಎಲ್ಲರ ನೋವು-ನಲಿವುಗಳ ಜೊತೆಯಾಗಿ ನಲಿದುಬಿಡು..ನನ್ನ ತಮ್ಮನಾಗಿ!
ಸವಿಮನದ ಹೊಲದಲ್ಲಿ
ಪ್ರೀತಿ ಪ್ರೇಮ ಸ್ನೇಹಗಳು
ಬೆಳೆದು ನಿಲ್ಲಲಿ, ಸುಗ್ಗಿ ಅರಳಲಿ
ನಿನ್ನ ಬಾಳು ಸದಾ ಹಸಿರಾಗಿರಲಿ..

ಪುಟ್ಟಾ...ನಿನಗಿದೋ ಹುಟ್ಟುಹಬ್ಬದ ಶುಭಾಶಯಗಳು.