Wednesday, April 21, 2010

ಭಾವಗೀತ


ಇಂದು ಮಳೆ ಬರುತ್ತಿದೆ. ಈ ಮಳೆನೇ ಹಾಗೇ, ಒಂದೊಂದು ಸಲ ಭಾವಕ್ಕೂ ಭಾಷೆ ಕೊಡೋದು, ಭಾಷೆಗೂ ಮಾತು ಕಲಿಸೋದು. ನೀನಿಲ್ಲದ ಹೊತ್ತಲ್ಲಿ ನಿನಗೆ ಚೆಂದದ ಪತ್ರ ಬರೀಬೇಕು ಅನಿಸಿತ್ತು. ಆದ್ರೂ, ನನ್ನೆಲ್ಲಾ ಭಾವಗಳನ್ನು ಒಟ್ಟಿಗೇ ಹರವಿದ್ರೂ ಯಾಕೋ ಬರೆಯಲಾಗುತ್ತಿಲ್ಲ. ಕಿಟಕಿಯಾಚೆ ನೋಡಿದರೆ ಅಲ್ಲಿ ತುಂತುರು ಹನಿಗಳು ಕಲರವ. ಸಣ್ಣವಳಿರುವಾಗ ಅಮ್ಮನ ಮನೆಯಲ್ಲಿ ಇದೇ ಮೊದಲ ಮಳೆಗೆ ಅಂಗಳಕ್ಕಿಳಿದು ಆಲಿಕಲ್ಲು ಹೆಕ್ಕಿ, ಜಾರಿ ಬಿದ್ದಿದ್ದು ಎಲ್ಲಾ ನೆನೆಪುಗಳು ಧಕ್ಕೆಂದು ಮನದ ಪರದೆಯಲ್ಲಿ ಮೂಡಿಬಿಟ್ಟವು. ಒಂದೆಡೆ ನಿನ್ನ ಆಗಮನದ ನಿರೀಕ್ಷೆ, ಮೊದಲ ಮಳೆಗೆ ಇಳೆ ಪುಳಕಗೊಂಡಂತೆ ನಿನ್ನ ಆಗಮನದ ನಿರೀಕ್ಚೆಯಲ್ಲಿ ಮನ ಸಂಭ್ರಮಿಸುತ್ತಿತ್ತು. ಭಾವಗಳು ಹೀಗೇನಾ? ನೆನಪಿನ ಚಿತ್ರಗಳ ಜೊತೆ-ಜೊತೆಗೆ ಅದೇನೋ ಚಡಪಡಿಕೆ, ಕುತೂಹಲ, ಅವ್ಯಕ್ತವಾದ ಆನಂದ, ಹಂಬಲಗಳ ತಾಕಲಾಟ. ನಿನಗೂ ಹಾಗೇ ಅನಿಸುತ್ತಾ ಹೇಳು?

ನನ್ನೆಲ್ಲಾ ಬದುಕಿನ ಭಾವಗಳನ್ನು ಹೆಕ್ಕಿ ನೋಡಿದಾಗಲೂ ಅಷ್ಟೇ, ಅವುಗಳಿಗೆ ನೀನೇ ಜೀವ, ನೀನೇ ಹುರುಪು-ಉತ್ಸಾಹ. ಅಲ್ಲೆಲ್ಲಾ ನೀನೇ ಕಾಣ್ತಿದ್ದೀಯಾ. ಮಾತು-ಮೌನ ಎಲ್ಲವುಗಳಿಗೆ ಭಾಷೆ ಕೊಟ್ಟೋನು ನೀನೇ ಕಣೋ. ಪ್ರೀತಿಯ ನಾವೆಯಲ್ಲಿ ನನ್ನ ಬದುಕಿನ ಅಸ್ತಿತ್ವವನ್ನು ಕಣ್ಣುರೆಪ್ಪೆಯಲ್ಲಿಟ್ಟುಕೊಂಡು ಸಾಕಿದ್ದೀಯಾ. ನಿನ್ನೆಲ್ಲಾ ಸಿಟ್ಟು, ಕೋಪ-ತಾಪಗಳನ್ನು ನನ್ನೆದುರು ಹೊರಹಾಕಿ, ನನ್ನೆದೆಯಲ್ಲಿ ಉಸಿರಾಗಿಬಿಟ್ಟಿದ್ದಿಯಾ. ನನ್ನೆಲ್ಲಾ ದುಗುಡ-ದುಮ್ಮಾನಗಳನ್ನು, ನಗು-ನಲಿವುಗಳನ್ನು ನಿನ್ನೆದುರು ಹರವಿ ಹೆಕ್ಕಿಕೋ ಎಂದಾಗ ಹಾಗೆ ಎಲ್ಲವನ್ನೂ ಹೆಕ್ಕಿಕೊಂಡಿದ್ದೆ ನೋಡು. ಅದೇ ಕಣೋ ಪ್ರೀತಿ. ಬೀಸೋ ಮಳೆ ಗಾಳಿಯನ್ನೂ ಲೆಕ್ಕಿಸದೆ, ವರ್ಷದ ಆಗಮನಕ್ಕೆ ಕಾಯುವ ಬರಡು ರೈತನಂತೆ ನೀನು ನನಗಾಗಿ ಕಾಯುತ್ತಿದ್ದೆ ನೋಡು, ನಾನೆಷ್ಟು ಹೆಮ್ಮೆ ಪಟ್ಟಿದ್ದೆ ಗೊತ್ತಾ?

ನನ್ನಲ್ಲಿ ಮುನಿಸಿಕೊಂಡು ಆ ಪುಟ್ಟ ಕೆರೆಯ ನಿಶ್ಚಲ ನೀರ ಮೇಲೆ ಕಲ್ಲುಗಳನ್ನು ಹೆಕ್ಕಿ ಬಿಸಾಡಿದಾಗಲೂ ಆ ಕಲ್ಲುಗಳು ಉಲಿದಿದ್ದು ನನ್ನ ಹೆಸರನ್ನೇ. ನೋವು-ನಲಿವು, ಸುತ್ತಲಿನ ಸತ್ಯ-ಮಿಥ್ಯ ಎಲ್ಲವನ್ನೂ ಪ್ರೀತಿಸೋಕೆ ಕಲಿಸಿ, ನನ್ನೊಳಗೊಂದು ಸಂಭ್ರಮದ ಬದುಕು ಕಟ್ಟಿ, ಕುಂಚ ಹಿಡಿದು ನಿಂತ ನನ್ನನ್ನು ನಿನ್ನೆದೆಯಲ್ಲಿ ಸ್ವಾತಿ ಮುತ್ತಾಗಿಸಿದವನು ನೀನೇ ಕಣೋ. ನನ್ನ ಮೌನದ ಪ್ರೀತಿ ಭಾಷೆಗೆ ಮಾತಾಗಿ, ಬದುಕು ಭವಿಷ್ಯದ ಚಿತ್ತಾರ ಬರೆದವನೂ ನೀನೇ. ನಿನ್ನ ಹುಸಿಮುನಿಸು, ನೀ ನಿತ್ಯ ಕುಟ್ಟುವ ಕೀ ಬೋರ್ಡಿನ ಸಂದಿನಲ್ಲಿ, ದಿನಕ್ಕೆ ನಾಲ್ಕು ಬಾರಿ ಸೇದುವ ಎರಡು ಸಿಗರೇಟು, ಅದರಿಂದ ಹೊರಬರುವ ದಟ್ಟ ಹೊಗೆ, ನೀನು ಕುಳಿತಿರುವ ಆ ಸುಂದರ ಕೋಣೆಯ ಕಿಟಕಿ ಮೂಲಕ ಹೊರಬರುವ ತಂಗಾಳಿ, ನಿನ್ನ ಎಲ್ಲಾ ಕಡೆಯೂ ನಾನಿದ್ದೀನಿ. ಆದರೆ, ನಿನ್ನ ಆಫೀಸ್ ನಲ್ಲಿ ನಿನ್ನ ಸೀಟಿನ ಪಕ್ಕ ಕುಳಿತಿರುವ ಆ ಕಪ್ಪು ಸುಂದರಿಯ ಎದೆಬಡಿತದಲ್ಲಿ ಮಾತ್ರ ನಾನಿರಲ್ಲ, ನಿನ್ನಾಣೆಗೂ!

***ಚಿತ್ರಾ ಸಂತೋಷ್
(ಹೊಸದಿಗಂತ ಪತ್ರಿಕೆಯ ನನ್ನ ವಾರದ ಕಾಲಂ 'ಭಾವಬಿಂದು'ನಲ್ಲಿ ಪ್ರಕಟ
http://hosadigantha.in/epaper.php?date=04-22-2010&name=04-22-2010-13

Friday, April 2, 2010

ಭಾವವೇ ನನ್ನದೆಯ ಕದ ಬಡಿಯದಿರು

ತುಂಬಾ ಸಲ ಹಾಗನಿಸಿದೆ, ಥತ್! ಈ ಭಾವಗಳನ್ನು ಹೆಕ್ಕಿ ಬಿಸಾಡಿಬಿಡಬೇಕೆಂದು. ಇದೇನು ಹುಚ್ಚು ಹುಡುಗಿ, ಭಾವಗಳನ್ನು ಹೊರತುಪಡಿಸಿದ ಬದುಕಿದೆಯೇ? ಎಂದು ನೀನು ಕೇಳಬಹುದು. ಹೌದು, ಭಾವಗಳನ್ನು ತುಂಬಾ ಪ್ರೀತಿಸಿದ್ದೆ, ಅವುಗಳನ್ನು ಹಾಗೇ ಬಾಚಿ ತಬ್ಬಿಕೊಂಡು ಮುದ್ದಾಡಿದ್ದೆ. ಒಂದೊಂದು ಸಲ ಪುಟ್ಟ ಮಗು ಥರ ಕಣ್ತುಂಬ ತುಂಬಿಕೊಂಡು ನನ್ನೆಲ್ಲಾ ವಿಷಾದಗಳಿಗೆ ವಿದಾಯ ಹೇಳಿದ್ದೆ. ನನ್ನದೆಯ ಬಡಿತದಲ್ಲೂ ಈ ಭಾವಗಳಿಗೆ ದನಿಯಾಗಿದ್ದೆ. ಇದು ಸುಳ್ಳಲ್ಲ, ನಿನ್ನಾಣೆಗೂ ನಿಜ.

ಆದರೆ, ಯಾಕೋ ಇಂದು ಈ ಭಾವಗಳೇ ಬೇಡ, ಎಲ್ಲೋ ದೂರಕ್ಕೆ ಬಿಸಾಕಿಬಿಡೋಣ ಅನಿಸ್ತಾ ಇದೆ. ನನ್ನೆದೆಯಲ್ಲಿ ನೋವಿನ ಎಳೆಗಳನ್ನು ಬಿಚ್ಚೋ ಬದಲು, ಹಾಗೇ ನನ್ನನ್ನು ಒಂಟಿಯಾಗಿ ಬಿಟ್ಟುಬಿಡು, ನನ್ನ ಪಾಡಿಗೆ ನಾನು ಇದ್ದುಬಿಡ್ತೀನಿ, ನಾನು ಯಾರಿಗೂ ಡಿಸ್ಟರ್ಬ್ ಕೊಡೊಲ್ಲ, ನನ್ನ ಮಾತಿಗೂ ಭಾಷೆಯಿಲ್ಲ, ಮೌನಕ್ಕೆ ಶರಣಾಗಿದ್ದೀನಿ. ನನ್ನದೆಯ ಕದ ಬಡಿಯದಿರು, ಅಲ್ಲಿ ನಾನು ಪ್ರೀತಿಸಿದ ಭಾವಗಳಿಗೆ ಜಾಗ ಕೊಡೊಲ್ಲ ಅಂತ ಸಿಟ್ಟಿನಿಂದ ಹೇಳುತ್ತಿದ್ದೇನೆ.

ತುಂಬಾ ಸಲ ಮನುಷ್ಯ ಹಾಗೆನೇ ಅಲ್ವಾ? ಒಂಟಿಯಾಗಿ ಇದ್ದುಬಿಡೋಣ ಅನಿಸುತ್ತೆ. ಭಾವಗಳ ಜೊತೆ-ಜೊತೆಗೇ ಜೀವಿಸೋ ಮನುಷ್ಯ ದಡಕ್ಕಂತ ಅಲೆಗಳಂತೆ ಬರುವ, ತಾನೇ ಎತ್ತಿ ಮುದ್ದಾಡಿದ ಆ ಭಾವಗಳಿಂದ ದೂರ ಇದ್ದುಬಿಡ್ತಾನೆ ಅಲ್ವಾ? ಆ ಕ್ಷಣ ಭಾವಗಳೆಂದರೆ ಸತ್ತು ಮಣ್ಣಾಗಿ ಹೋದ ತರಗಲೆಗಳಂತೆ! ಥತ್! ಹೀಗೆ ಆಗಬಾರದು,ಆದರೂ ಏಕಾಂಗಿಯಾಗಿರಬೇಕೆಂಬ ಹಂಬಲ. ಸುತ್ತಲ ಜಗತ್ತನ್ನು ಮರೆತು ತಾನೇ ಮೌನದ ಕನಸು ಕಾಣಬೇಕು, ಬದುಕಿನ ತರಂಗಗಳನ್ನು ಮೀರಿ ತಾನೊಬ್ಬನೇ ಸಂಭ್ರಮಿಸಬೇಕು, ನನ್ನೊಳಗಿನ ಕತ್ತಲು-ಬೆಳಕಿಗೆ ತಾನೊಬ್ಬನೇ ಬೆಳದಿಂಗಳಾಗಬೇಕು, ತನ್ನೆದುರು ಕಾಣುವ ಹಸುರು ಹಾಸಿನ ಮೇಲೆ ಏಕಾಂಗಿಯಾಗಿ ಕವಿತೆಯಾಗಬೇಕು, ಎಲ್ಲೋ ದೂರದ ನೀಲಿ ಸಮುದ್ರ ದಂಡೆಯಲ್ಲಿ ಒಂಟಿಯಾಗಿ ಮರಳಾಟ ಆಡಬೇಕು, ಅಲ್ಲಿ ಆಡೋ ಪುಟ್ಟ ಮಕ್ಕಳ ಜೊತೆ ನಾನೂ ಪುಟ್ಟ ಮಗುವಾಗಿಬಿಡಬೇಕು. ಈ ಭಾವಗಳ ಗೋಜೇ ಬೇಡಪ್ಪಾ ಅನಿಸಿಬಿಡುತ್ತೆ.

ಈ ಎಲ್ಲಾ ಭಾವ ತುಮುಲಗಳನ್ನು ಸ್ವಲ್ಪ ದಿನದ ಮಟ್ಟಿಗಾದರೂ ಗಂಟು ಕಟ್ಟಿ ಅಟ್ಟದ ಮೇಲೆ ಹಾಕುವುದು ಸ್ವಲ್ಪ ಜಾಣತನ ಇರಬಹುದೇನೂ ! "ಇಷ್ಟೊಂದು complex ಆಗ್ ಬೇಡ" ಅನ್ನೋ ನಿನ್ನ ಕಾಳಜಿ ಕೆಲವೊಂದು ಸಲ ಸರಿ ಅನ್ನಿಸಿದ್ರೂ , ಯಾವುದೂ ಒಂದು ಅಜ್ಞಾತಕ್ಕೆ ಹೋಗುವ ಆಸೆ. ನನ್ನ ಎಲ್ಲಾ ಮನದ ವಿಮರ್ಶೆ ಅಂತಿಮವಾಗಿ ನನ್ನ ಭಾವಕ್ಕೆ ಬಿಟ್ಟಿದ್ದು, ಪಕ್ಕಾ monopoly.