Sunday, December 18, 2011

ಹೆಣ್ಣು- ರಾಜಿ

ಅದು ಅಪ್ಪ ಹೋದ ಮರುದಿನ. ಅಪ್ಪ ನಮ್ಮನ್ನೆಲ್ಲಾ ಬಿಟ್ಟು ದೂರ ಹೋಗಿದ್ದ. ಅಮ್ಮ ಒಬ್ಬಳಾಗಿದ್ದಳು. ಕಣ್ಣೀರನ್ನೆಲ್ಲಾ ನುಂಗಿ ಕಲ್ಲಾಗಿದ್ದಳು. ರಾತ್ರಿ ಇಡೀ ನಿದ್ದೆ ಮಾಡದ ಅಮ್ಮ ಸೂರ್ಯ ಬರುವ ಮೊದಲೇ ಬಾಗಿಲು ತೆರೆದಿದ್ದಳು.
ಎದುರುಮನೆಯ ಅಮ್ಮನ ವಯಸ್ಸಿನ ಹೆಂಗಸು ನಿತ್ಯ ಸಂಜೆ ಜಗಲಿಕಟ್ಟೆಯಲ್ಲಿ ಹಾಜರಾಗುವಳು. ಸುಖ-ದುಃಖವೆಂದು ಮಾತಿಗಿಳಿಯುವಳು. ಅಪ್ಪ ಹೋದ ದಿನ ಅಮ್ಮನಿಗೆ ಸಮಾಧಾನದ ಮಾತುಗಳ ಹೇಳಿದವಳು.
ಆದರೆ, ಅಪ್ಪ ಹೋದ ಮರುದಿನ ಬಾಡಿಹೋದ ಮುಖದೊಂದಿಗೆ ಅಮ್ಮ ಬಾಗಿಲು ತೆರೆದಾಗ ಎದುರುಮನೆಯ ಬಾಗಿಲು ದಡಕ್ಕಂತ ಮುಚ್ಚಿತು. ದರಿದ್ರ, ಗಂಡ ಕಳಕೊಂಡವಳು! ಎಂದು ಆಕೆ ಉಸುರಿದ್ದು ಅಮ್ಮನ ಕಿವಿಗೆ ಬೀಳದಿರಲಿಲ್ಲ, ಅಮ್ಮನ ಕಣ್ಭಲ್ಲಿ ಕಣ್ಣೀರು ಬತ್ತಿಹೋಗಿತ್ತು. ಮುಚ್ಚಿದ ಮನೆಬಾಗಿಲು ಕಂಡು ನಿಟ್ಟುಸಿರು ಬಿಟ್ಟು ಅಮ್ಮ ಮೌನವಾದಳು.
***********
ಅಂದು ಅಪ್ಪನ ವೈಕುಂಠ ಸಮಾರಾಧನೆ ದಿನ. ಮುತ್ಯೈದೆಯರಿಂದ ಅರಿಶಿನ ಕುಂಕುಮ ಕೊಡಲು ಆದೇಶಿಸಿದರು. ಬೆಳ್ಲಿ ತಟ್ಟೆ ಎತ್ತಿಕೊಂಡು ನಾನು ಸರತಿ ಸಾಲಿನಲ್ಲಿ ಕುಳಿತು ಅರಿಶಿನ, ಕುಂಕುಮ ಹಂಚಿದೆ. ಮುತ್ಯೈದೆಯರ ಸರತಿ ಸಾಲಿನಲ್ಲಿ ಕುಳಿತ ಅಮ್ಮ ಸುಮ್ಮನಾದಳು. ಅಪ್ಪನಿರುವಾಗ ಅರಿಶಿನ ಕುಂಕುಮ ಎಂದರೆ ಮುಂದೆ ಬಂದು ಮುತ್ಯೈದೆ ಭಾಗ್ಯ ನೀಡು ದೇವಾ ಎಂದು ತಾಳಿಗೆ ಅರಿಶಿನ ಹಚ್ಚುತ್ತಿದ್ದ ಅಮ್ಮನಿಗೆ ಅರಿಶಿನ ಪಡೆಯುವ ಕನಿಷ್ಠ ಭಾಗ್ಯ ಇಲ್ಲದ ಈ "ಕಟ್ಟುಪಾಡು'ಗಳ ಬಗ್ಗೆ ಉತ್ತರವಿಲ್ಲದೆ ನಾನೂ ರಾಜಿಯಾಗಿದ್ದೆ!

Wednesday, December 7, 2011

ಅಗಲಿದ ಅಪ್ಪನೆಂಬ ಅಕ್ಕರೆಗೆ...


ನೀನು ಸುಮ್ಮನೆ ಮಲಗಿದ್ದೆ, ಮೌನವಾಗಿ. ಆ ಗಾಜಿನ ಪೆಟ್ಟಿಗೆಯೊಳಗೆ ಮಲಗಿದ್ದ ನಿನ್ನ ನೋಡುವಾಗ ನಿನ್ನ ಬಿಳಿಮೀಸೆಯಡಿಗಿನ ಮುಗ್ಧ ನಗು ನೆನಪಾಗುತ್ತಿತ್ತು. ಮತ್ತೆ ಮಾತಿಗೆ ತುಟಿಬಿಚ್ಚುವಂತೆ ಭಾಸವಾಗುತ್ತಿತ್ತು. ಪುಟ್ಟಾ ಎಂದು ಕೂಗುತ್ತಿಯೇನೋ, ಕಣ್ಣುಗಳಲ್ಲೇ ನಗುತ್ತಿಯೇನೋ ಅಂದುಕೊಂಡೆ.
ಆದರೆ ನೀ ನಗಲಿಲ್ಲ, ನಾನು ಅತ್ತೆ, ಗೋಳಾಡಿದೆ. ಮನಸ್ಸು, ಹೃದಯ ಕಣ್ಣೀರಾದರೂ ನೀನು ಬರಲೇ ಇಲ್ಲ. ನಿನ್ನ ಅಪ್ಪಾ ಎಂದು ಕೂಗುವ ಹಕ್ಕನ್ನೂ ನಾ ಕಳೆದುಕೊಂಡೆ. ಅಪ್ಪನಿಲ್ಲದ ಜಾಗದಲ್ಲಿ ನೀನು ಅಪ್ಪನಾಗಿ ಬಂದಾಗ ನಾನು ಮಾಮ ಎಂದು ಮಮಕಾರ ತೋರಲಿಲ್ಲ, ಅಪ್ಪಾ ಎಂದೆ. ನೀನು ಸೊಸೆ ಎನ್ನಲಿಲ್ಲ, ಮಗಳೇ ಎಂದು ಎದೆಗಪ್ಪಿಕೊಂಡೆ.
ಆ ಸಂಜೆ ಹೊತ್ತು ನೀನು ಇದ್ದಕಿದ್ದಂತೆ ಉಸಿರಾಡುವುದನ್ನು, ಮಾತನಾಡುವುದನ್ನು, ನಗುವುದನ್ನು, ನಿನ್ನ ಪಾಡಿಗೆ ಗೊಣಗುವುದನ್ನು, ಅಮ್ಮನ ಜೊತೆ ಸುಖಾಸುಮ್ಮನೆ ಜಗಳವಾಡುವುದನ್ನು ನಿಲ್ಲಿಸಿದಾಗ ದೇವರ ಮೇಲೆ ಕೆಟ್ಟ ಸಿಟ್ಟು ಬಂತು! ನಿನ್ನ ಮರಳಿ ಕೊಡು ಎಂದು ಕಣ್ಣೀರಿಟ್ಟರೂ ದೇವರು ಕಿಂಚಿತ್ತೂ ದಯೆ ತೋರಲೇ ಇಲ್ಲ.

ರಾತ್ರಿಯಿಡೀ ಮನೆಯೆದುರು ಬೆಂಕಿ ಹಾಕಿ ಕುಳಿತೆ. ಮನೆಯೊಳಗೆ ಗಾಜಿನ ಪೆಟ್ಟಿಗೆಯಲ್ಲಿ ಮಂಜುಗಡೆಯ ತಂಪಿಗೆ ನೀನೂ ಮಂಜಾಗುತ್ತಿದ್ದೆ. ಕಿಸಾಗೋತಮಿ ಕಥೆ ನೆನಪಾಯಿತು. ಸಾವಿಲ್ಲದ ಮನೆಯ ಸಾಸಿವೆ ಗೌತಮಿಗೆ ಕೊನೆಗೂ ಸಿಗಲೇ ಇಲ್ಲ.
ಆದರೂ ಇಷ್ಟು ಬೇಗ ನನ್ನ, ನಿನ್ನ ಅಗಲುವಿಕೆ ನ್ಯಾಯವಲ್ಲ ಎನ್ನೋದು ನನ್ನ ತಕರಾರು. 25 ವಸಂತಗಳನ್ನು ದಾಟಿದ ನಂತರ ನೀನು ಸಿಕ್ಕಿದೆ, ಬಾಯಿ ತುಂಬಾ ಅಪ್ಪಾ ಎಂದು ನಿನ್ನ ಕರೆದೆ. ನಿನ್ನ ಹೆಗಲ ಮೇಲೆ ಕೈಯಿಟ್ಟಾಗ ಸಲಿಗೆ ಎಂದು ಬೈಯಲಿಲ್ಲ. ಎಪ್ಪತ್ತೈದು ದಾಟಿದ ನೀನು ಪದೇ ಪದೇ ನನ್ನ ಕೂಗಿದಾಗ ನಾನು ರೇಗಾಡಿದರೂ ಮಗಳೆಂದು ಸಹಿಸಿಕೊಂಡೆ.
ನೀನು ಕಣ್ಣಲ್ಲಿ ಕಣ್ಣಿಟ್ಟು ಸಾಕಿದೆ, ಕಿವಿಗೆ ಓಲೆ, ಜುಮುಕಿ ತಂದೆ, ಕೈಗಳಿಗೆ ಮಿನುಗು ಬಳೆಗಳನ್ನು ತಂದೆ, ಮುಡಿಗೆ ಮಲ್ಲಿಗೆ ಮೊಳ ತಂದೆ, ಕಣ್ಣಿಗೆ ಕಾಡಿಗೆ ತಂದೆ, ಕಾಲಿಗೆ ಸದ್ದುಗೈಯುವ ಗೆಜ್ಜೆ ತಂದೆ, ಮನೆ ತುಂಬಾ ಗೆಜ್ಜೆಯ ಸಪ್ಪಳ ಮಾಡಿದೆ. ಆದರೆ, ಒಂದೇ ಒಂದು ನಿನ್ನಾಸೆ ಈಡೇರಲಿಲ್ಲ, ನನಗೆ ಮೊಗ್ಗಿನ ಜಡೆ ಇಳಿಸಿ ನೋಡಬೇಕೆಂಬ ನಿನ್ನಾಸೆ ಈಡೇರಲೇ ಇಲ್ಲ. ದೇವರ ಅನ್ಯಾಯವಿದು!

Friday, July 15, 2011

ಅಮ್ಮ ತಂದ ಲಾಟರಿ

ಆಗ ಶಾಲೆಗೆ ದೊಡ್ಡ ರಜೆ. ಬೇಸಿಗೆ ರಜೆ ಅಂದ್ರೆ ಅದು ನಮ್ಮ ಪಾಲಿಗೆ ದೊಡ್ಡ ರಜೆ. ಅಕ್ಟೋಬರ್ ರಜೆ ಸಣ್ಣ ರಜೆ. ದೊಡ್ಡ ರಜೆ ಬಂದರೆ ಅಮ್ಮನಿಗೆ ಚಿಂತೆ. ಮುಂದಿನ ತರಗತಿಗೆ ಭಡ್ತಿ ಪಡೆಯೋ ಮಕ್ಕಳಿಗೆ ಹೊಸ ಯೂನಿಫಾರ್ಮ್, ಹೊಸ ಶೂ, ಹೊಸ ಬ್ಯಾಗ್, ಹೊಸ ನೋಟ್ ಬುಕ್, ಹೊಸ ಪೆನ್...ಹೀಗೆ ಮಕ್ಕಳನ್ನು ಹೊಸತರಲ್ಲಿ ಕಾಣುವ ಅಮ್ಮನ ಅತೀವ ಆಸೆ. ಅದಕ್ಕೆ ಅಮ್ಮ ಕಂಡುಕೊಳ್ಳುತ್ತಿದ್ದ ದಾರಿ ಲಾಟರಿ! ಅದು ಅವಳಿಗೆ ಬದುಕಿನ ಭರವಸೆ.


ಅಂದು ಅಮ್ಮ ಲಾಟರಿ ತಂದಿದ್ದಳು. ಊರಿನ ಬಂಟನೊಬ್ಬ ಲಾಟರಿಗೇ ಫೇಮಸ್ಸು. ಅವನಿಂದ ಲಾಟರಿ ಖರೀದಿಸಿದರೆ ಅದೃಷ್ಟ ಖಂಡಿತ ಅನ್ನೋದು ಅಮ್ಮನ ಗಟ್ಟಿ ನಂಬಿಕೆ. ವಿಶ್ವಾಸವಿದ್ದ ವ್ಯಕ್ತಿಯೊಬ್ಬ ಹೇಳಿದ ಮಾತ್ರಕ್ಕೆ, ಅಥವಾ ಅವನಿಂದ ಲಾಟರಿ ಪಡೆದರೆ ಬಹುಮಾನ ಗ್ಯಾರಂಟಿ ಅನ್ನೋ ಅಮ್ಮನ ಮುಗ್ಧತೆಯ ಮೂಢ ನಂಬಿಕೆ. ಲಾಟರಿ ತಂದ ತಕ್ಷಣ ಅದನ್ನು ದೇವರ ಫೋಟೋ ಮುಂದಿಟ್ಟು ನಮ್ಮೆಸರು ಹೇಳಿ ಕೈ ಮುಗಿದು ದೇವರೊಂದಿಗೆ ಮೌನವಾಗಿ ಮಾತನಾಡುತ್ತಿದ್ದ ಅಮ್ಮನ ದೇವಭಾಷೆ ನಮಗಂತೂ ಅರ್ಥವಾಗುತ್ತಲೇ ಇರಲಿಲ್ಲ!

ನಾನಿನ್ನೂ ಪ್ರೈಮರಿ. ಹತ್ತು ದಾಟದ ವಯಸ್ಸು. ಶಾಲೆಗೆ ರಜೆ. ದಿನಾ ಅಮ್ಮ ಸುರುಟಿದ ಬೀಡಿಗಳನ್ನು ಕೊಡಲು ಪೇಟೆಗೆ ಹೋಗುವಳು. ಅವಳ ಜೊತೆ ಪೇಟೆಗೆ ಹೋಗುವುದಂದರೆ ಬೆಂಗಳೂರಿನಲ್ಲಿ ರಜಾ ದಿನಗಳಲ್ಲಿ ಶಾಪಿಂಗ್ ಹೊರಟಹಾಗೆ! ಅಮ್ಮ ತೆಗೆದುಕೊಡುವ ನಾಲ್ಕಣೆಯ ಉರಿಗಡಲೆ ಕೂಡ ನಮಗೆ ಐಸ್ಕ್ರೀಂ, ಫ್ರುಟ್ ಸಲಾಡ್ ಸವಿದಂಥ ಖುಷಿ ನೀಡುತ್ತಿತ್ತು. ಅಮ್ಮನ ಜೊತೆಗೆ ಹೋದಾಗಲೆಲ್ಲಾ ಅಮ್ಮನ ಬಾಯಲ್ಲಿ ಲಾಟರಿ ಮಾಮನ ಕಥೆ. ಅದು ಅವಳ ಕನಸುಗಳ ದೊಡ್ಡ ಮೂಟೆಯಾಗಿರುತ್ತಿತ್ತು!

ಲಾಟರಿ ಮಾಮನ ಜೊತೆ ಲಾಟರಿ ತೆಗೆದುಕೊಂಡ್ರೆ ಶಾಲೆಗೆ ಹೋಗುವ ಹೊತ್ತಿಗೆ ಬಹುಮಾನ ಬರುತ್ತೆ. ಅರ್ಥಾತ್ ಕೈತುಂಬಾ ದುಡ್ಡು ಬರುತ್ತೆ. ಆಗ ಶಾಲೆ ಆರಂಭವಾಗುವಾಗ ಸಾಲ ಮಾಡೋ ಅಗತ್ಯವಿಲ್ಲ ಅನ್ನೋದು ಅಮ್ಮನ ಲೆಕ್ಕಾಚಾರ. ನನ್ನ, ತಮ್ಮನ ಹೆಸರಿನಲ್ಲಿ ಅಮ್ಮ ಲಾಟರಿ ತೆಗೆದುಕೊಳ್ಳುತ್ತಿದ್ದಳು. ಲಾಟರಿ ತೆಗೆದುಕೊಂಡಾಗಲೇ ತಮ್ಮ ತನಗೆ ಬೇಕಾದ ವಸ್ತುಗಳ ಉದ್ದದ ಪಟ್ಟಿ ಮುಂದಿಡುತ್ತಿದ್ದ. ಅದರಲ್ಲಿ ನಮ್ಮಿಬ್ಬರ ಪಾಲು ಆದ ಮೇಲೆ ಅಮ್ನಿಗೇನು ಅನ್ನೋ ಪ್ರಶ್ನೆ ಎದುರಾಗುತ್ತಿತ್ತು. ಅಮ್ಮನಿಗೆ ಸೀರೆ, ಚೈನು, ಬಳೆ...ಹೀಗೆ ಕೆಲವೊಂದು ವಸ್ತುಗಳ ಪಟ್ಟಿ ನಾವೇ ರೆಡಿ ಮಾಡುತ್ತಿದ್ದೇವು.


ಆಯಿತು ರಜಾ ಮುಗಿದೇ ಹೋಗುತ್ತಿತ್ತು. ಲಾಟರಿ ಮಾಮ ಸುಮ್ಮನಾಗುತ್ತಿದ್ದ. ಕೊಂಡ ಲಾಟರಿ ಸುದ್ದಿಯಾಗದೇ ಡ್ರಾ ಆಗುತ್ತಿತ್ತು. ಸಾಲ ಮಾಡಿ ಶಾಲೆಗೆ ಕಳುಹಿಸುವಾಗ ಅಮ್ಮನ ಮುಖದಲ್ಲಿ ಪುಟ್ಟ ನೋವು, ಲಾಟರಿ ಮಾಮನ ಮೇಲೆ ಸಾತ್ವಿಕ ಸಿಟ್ಟು. ಹೋಗಲಿ ಬಿಡಿ...ಇನ್ನೊಂದು ಲಾಟರಿಯಲ್ಲಿ ಬಹುಮಾನ ಬಂದೇ ಬಿಡುತ್ತೆ ಅನ್ನೋ ಮತ್ತದೇ ಹಳೆ ಮುಗ್ಧ ನಂಬಿಕೆ!