Thursday, November 18, 2010

ನೀನು ಕವಿ, ನಾನು ಕವಿತೆ!


ಅದು ನನ್ನ ಮನೆ. ಹುಲ್ಲಿನ ಮಾಡಿನಿಂದ ಮಾಡಿದ ಪುಟ್ಟ ಮನೆ. ಮಣ್ಣಿನ ಗೋಡೆಯ ಚೆಂದದ ಮನೆ. ಅಂಗಳದಲ್ಲಿ ಹೂ ಗಿಡಗಳ ಚಿತ್ತಾರವಿರುವ ಚೆಂದದ ಅರಮನೆ. ನಾನಲ್ಲೇ ಕನಸು ಕಂಡಿದ್ದು. ಅದು ನಿನ್ನ ಕನಸು. ಎಲ್ಲೋ ಓದಿದ ಕವನಗಳು, ಎಲ್ಲೋ Uಚಿದ ಬರಹಗಳು...ಎಲ್ಲವೂ ನನ್ನೊಳಗೊಂದು ಹೊಸ ಭಾವಗಳಿಗೆ ಹುಟ್ಟು.

ನಿನ್ನಲ್ಲಿ ಕವನಗಳು ಹುಟ್ಟಬೇಕು, ನೀನು ಕವಿಯಾಗಬೇಕು. ಮುಗಿಲಲ್ಲಿ ನಿತ್ಯ ಕಾಣುವ ಆ ನೀಲಿ ಬಣ್ಣ ನಿನಗೆ ಹೊಸತೆನಿಸಬೇಕು. ನಿತ್ಯದ ಆ ಹಗಲು ನಿನಗೆ ಹೊಸತಾಗಬೇಕು. ಪ್ರತಿದಿನದ ಆ ಮುಂಜಾನೆ ನಿನ್ನಲ್ಲಿ ಹೊಸ ಬೆಡಗನ್ನು ಹುಟ್ಟಿಸಬೇಕು.ಆಕಾಶದಲ್ಲಿ ಮೂಡುವ ಕಾಮನಬಿಲ್ಲು, ಹಕ್ಕಿಗಳ ಕಲರವ, ನದಿನೀರಿನ ಜುಳುಜುಳು ನಾದ, ನಿಶ್ಚಲ ಸರೋವರಗಳು, ಚಲಿಸುವ ಮೋಡಗಳು, ಕಿವಿಗೆ ಇಂಪಾಗುವ ಸಂUತ...ಎಲ್ಲವೂ ನಿನ್ನಲ್ಲಿ ಕವಿತೆಗಳಾಗಬೇಕು.

ನನ್ನೊಳಗಿನಿಂದ ಹುಟ್ಟುವ ಭಾವಗಳು, ಮಾತಿಲ್ಲದ ಮೌನ ನಿನ್ನಲ್ಲಿ ಕವನಗಳಾಗಬೇಕು. ನನ್ನ ಕಿವಿಯಲ್ಲಿ ಮಿನುಗುವ ಮುತ್ತಿನೋಲೆ, ತುಟಿ ಮೇಲೆ ನಗುವ ಆ ಮೂಗುತಿ ಮಿಂಚು, ಕಣ್ಣರೆಪ್ಪೆಯಲ್ಲಿ ಕನವರಿಸುವ ಆ ಕನಸುಗಳು, ಕಾಲಿಗೆ ನೀ ತೊಡಿಸಿದ ಆ ಬೆಳ್ಳಿ ಕಾಲುಂಗುರ, ನಿನ್ನದೆಯನ್ನು ಖುಷಿಗೊಳಿಸುವ ಆ ಕಾಲ್ಗೆಜ್ಜೆ, ಕೈ ಬಳೆ ಸದ್ದು, ನಿನ್ನ ಕನ್ಸ್ ಮಾಡುವ ಮುಂಗುರುಳು, ತುಟಿಯಂಚಿನ ಮಿನುಗು ನಗು...ನಿನ್ನಲ್ಲಿ ಕವನಗಳಾಗಬೇಕು. ಅಷ್ಟೇ ನಾನು ಬಯಸಿದ್ದು. ಅಂದು ಆ ಪುಟ್ಟ ಮನೆಯಲ್ಲಿ ಹುಟ್ಟಿದ ಕನಸು ನಿಜವಾಗಿದೆ. ಅದು ನನ್ನ ಖುಷಿ, ನನ್ನ ಹೆಮ್ಮೆ. ಇಂದು ನಾನು ಕವನ, ನೀನು ಕವಿ, ಇನ್ಯಾರೋ ಕಿವಿ!!

ಬಾ ಗೆಳತಿ..
ಮಳೆ ಹನಿಯಲಿ
ಅಚ್ಚ- ಅಡವಿಯಲಿ
ನನ್ನ ಅಚ್ಚರಸಿ
ನಿನಗೆ ನನ್ನುಸಿರನು
ಬೆಚ್ಚಗೆ ಆಚ್ಛಾದಿಸಿ
ಒಲವ-ದೀಪ ಹಚ್ಚಿಟ್ಟು
ಜಗದ ಎಲ್ಲ
ಸಂಚಿಗೆ ಕಿಚ್ಚಿಟ್ಟು
ನನ್ನೀ ಕಂಗಳು
ಮುಚ್ಚುವ ತನಕ
ಕಣ್ರೆಪ್ಪೆಯಲಿ ಬಚ್ಚಿಟ್ಟು
ಸಾಕುವೆ ..ಬಾ ನನ್ನಚ್ಚರಸಿ...

ವೊದಲ ನೋಟಕ್ಕೆ ನೀನು ಬರೆದ ಕವನ ನಿನ್ನಂತೆ ನನ್ನಲ್ಲಿ ಹಸಿರು. ಇಲ್ಲಿ ನೀನು ಸೋತು ಗೆದ್ದೆ, ನಾನು ಗೆದ್ದು ಸೋತೆ!!
ಪ್ರಕಟ: http://hosadigantha.in/epaper.php?date=11-18-2010&name=11-18-2010-13

Wednesday, November 10, 2010

ಆ ಕೆಟ್ಟ ನೋವು.

ಕಳೆದ ವಾರ ನನ್ನಕ್ಕ ದೊಡ್ಡವಳಾಗಿದ್ದ ಕಥೆ ಹೇಳಿದೆ. ಇಂದು ಅಕ್ಕನೆತ್ತರಕ್ಕೆ ಬೆಳೆದ ನನ್ನ ಕಥೆ ಹೇಳ್ತೀನಿ.
ಅಂದು ನಾನು ಸುಮ್ಮನೆ ನಾಚಿಕೊಂಡ ದಿನ. ಎಲ್ಲರ ನೋಟಗಳು ನನ್ನತ್ತಲೇ ನೋಡುವಾಗ ಅದೇನೋ ಹೊಸ ಅನುಭವ. ಏನೋ ಒಂದು ಹೊಸತನ್ಮು ಪಡೆದುಕೊಂಡ ಹಾಗೇ. ನನ್ನಕ್ಕನಂತೆ ನಾನು ದೊಡ್ಡವಳಾಗಿದ್ದೇನೆಂದು ಅಂದುಕೊಳ್ಳೋದೇ ಅದೇನೋ ಖುಷಿ, ಅವ್ಯಕ್ತವಾದ ಹೆಮ್ಮೆ. ಯಾರಲ್ಲಾದ್ರೂ ಹೇಳಿಕೊಳ್ಳಬೇಕಂದ್ರೂ ಹೇಳಿಕೊಳ್ಳಲಾಗದ ಪುಟ್ಟ ಸಂತೋಷ. ಸ್ಕೂಲಿಗೆ ಚಕ್ಕರ್ ಏಕೆ ಹಾಕಿದ್ದೆಂದರೆ ಸುಮ್ಮನೆ ಜ್ವರವೆಂದು ಪಕ್ಕಾ ಸುಳ್ಳು ಹೇಳಿ ಮೇಷ್ಟ್ರ ಕೈಯಿಂದ ತಪ್ಪಿಸಿಕೊಂಡು ನಕ್ಕುಬಿಟ್ಟಿದ್ದೆ. ನನ್ನಲ್ಲಿ ನನ್ನನ್ನೇ ಕಾಣುವ ಸಂಭ್ರಮ. ಪುಟ್ಟ ಹಕ್ಕಿ ಮರಿಯೊಂದು ರೆಕ್ಕೆ ಬಲಿತು ಗೂಡಿನಿಂದ ಹೊರಬರುವ ಸಂಭ್ರಮದಂತೆ ನನ್ನೊಳಗೊಂದು ಹಬ್ಬದ ವಾತಾವರಣ. ಹೊಸ ಬಟ್ಟೆ, ಹೊಸ ದಿರಿಸು, ಹೊಸ ಗಳಿಗೆ.
ಅಮ್ಮನ ಮುಖದಲ್ಲಿಯೂ ‘ತಾಯ್ತನ’ದ ಮಿರುಗು.

ಆದರೆ, ಅವತ್ತೇನೋ ನನಗೆ ಆ ದಿನ ಹೊಸತಾಗಿತ್ತು. ಆದರೆ, ಅಂದಿನಿಂದ ಇಂದಿನವರೆಗೆ ನನ್ನನ್ನು ಹಿಂಡಿ ಹಿಪ್ಪೆಯಾಗಿಸುವ ಆ ನೋವು ಇದೆಯಲ್ಲಾ,..ಅದನ್ನು ನೆನೆಸಿಕೊಂಡಾಗ ಛೇ! ನಾನು ಹೆಣ್ಣಾಗಿ ಹುಟ್ಟಬಾರದಿತ್ತು ಎಂದನಿಸುತ್ತದೆ. ತಿಂಗಳಲ್ಲಿ ಆ ಒಂದು ದಿನವನ್ನು ನಾನು ತುಂಬಾ ದ್ವೇಷಿಸುತ್ತೇನೆ. ಅಂದು ಅನ್ನ. ನೀರು ಏನೂ ಬೇಡ ಎಂದನಿಸುತ್ತೆ. ಹೆಣ್ಣು ಬದುಕು ನೀಡಿದ ಆ ದೇವರನ್ನು ಅದೆಷ್ಟು ಬಾರಿ ಶಪಿಸಿದ್ದೇನೋ. ದೇವರು ಕಣ್ಣು ಬಿಡಲಿಲ್ಲ. ಪ್ರತಿ ತಿಂಗಳು ಆ ಕೆಟ್ಟ ನೋವು ನನ್ನನ್ನು ಹಿಂಡಿ ಹಿಪ್ಪೆಯಾಗಿಸುತ್ತದೆ. ನನ್ನ ಆ ಸುಂದರ ಕಣ್ಣುಗಳು ರಾತ್ರಿಯಿಡೀ ನಿದ್ದೆಯಿಲ್ಲದೆ ಬಳಲುತ್ತವೆ. ನನ್ನ ಆ ಮುಖ ಯಾವ ಉತ್ಸಾಹವೂ ಇಲ್ಲದೆ ಕಳೆಗುಂದುತ್ತದೆ. ಬೇಡ, ಆ ಅಸಹನೀಯ ನೋವನ್ನು ನನ್ನಿಂದ ಸಹಿಸಲಾಗುವುದಿಲ್ಲ. ಆ ಮೂರು ದಿನಗಳಲ್ಲಿ ಕಂಡಕಂಡವರೊಡನೆ ರೇಗಾಡ್ತೀನಿ. ಸಿಟ್ಟಿನಿಂದ ಮುಖ ಊದಿಸಿಕೊಂಡು ಬಿಡ್ತಿನಿ. ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಅತ್ತೆ-ಮಾವ, ಕೈಹಿಡಿದ ಗಂಡ, ಪ್ರೀತಿಯ ನನ್ನ ಮಕ್ಕಳು...ಯಾರನ್ನು ಕಂಡರೂ ನನಗೆ ಸಿಟ್ಟು, ಅಸಹನೆ. ನನ್ನ ಆಪೀಸ್‌ನ ಆ ಲ್ ಚಯರ್‌ನಲ್ಲಿ ಕುಳಿತು ಅಲ್ಲೇ ಖಿನ್ನಳಾಗ್ತೀನಿ. ನನ್ನ ಪ್ರೀತಿಸುವವರೂ ದ್ವೇಷಿಸುವವರಂತೆ ಕಾಣುತ್ತಾರೆ. ತುಂಬಾ ಸಲ ಅನಿಸಿದೆ; ನಾನು ಹುಡುಗನಾಗುತ್ತಿದ್ದರೆ, ಅದ್ಯಾವ ತೊಂದರೆಗಳೂ ನನಗಿರಲಿಲ್ಲ ಎಂದು!

ಇಷ್ಟೆಲ್ಲಾ ನೋವನ್ನು ಹೊಟ್ಟೆಯೊಳಗೇ ನುಂಗಿಕೊಂಡು ಕಷಾಯ ಮಾಡಿಕೊಂಡು ಕುಡಿಯುವಾಗ ಐದು ವರ್ಷದ ನನ್ನ ಮಗಳು ಬಂದು ಕೇಳುತ್ತಾಳೆ; ಯಾಕಮ್ಮಾ, ಕಷಾಯ ಕುಡಿತೀ ಎಂದು! ಏನನ್ನೂ ಅರಿಯದ ಆ ಮಗಳು ಹೀಗೆ ಕೇಳಿದಾಗ ನನ್ನ ಪಾಡಿಗೆ ನಾನಿರುತ್ತೇನೆ. ಅದ್ಯಾವ ಉತ್ತರಗಳೂ ಸಿಗದೆ ಆ ಪುಟ್ಟ ಮಗು ಬಿಟ್ಟ ಕಣ್ಣುಗಳಿಂದ ಪಿಳಿ ಪಿಳಿ ಎಂದು ನನ್ನ ನೋಡುತ್ತೆ. ಆ ಕ್ಷಣ ನನ್ನಮ್ಮ ನನಗೆ ನೆನಪಾಗುತ್ತಾಳೆ.

ಪ್ರಕಟ: http://hosadigantha.in/epaper.php?date=11-11-2010&name=11-11-2010-13

Wednesday, November 3, 2010

ಅಕ್ಕ ದೊಡ್ಡವಳಾಗಿದ್ದಳು!


ಅಂದು ಅಕ್ಕ ಇದ್ದಕಿದ್ದಂತೆ ಮನೆಯಿಂದ ಮಾಯವಾಗಿದ್ದಳು. ಅಮ್ಮನಿಗೆ ತುಟಿಯಂಚಿನಲ್ಲಿ ನಗು, ಅಜ್ಜಿ ಊರುಗೋಲು ಹಿಡಿದು ಮನೆಯ ಹಿಂಬದಿಯ ಆ ದಟ್ಟ ಕಾಡಿಗೆ ಹೊರಟಿದ್ದಳು. ಅಕ್ಕ ಆ ಮುಳ್ಳಿನ ಪೊದೆಯೊಳಗೆ ನುಗ್ಗಿ ಕುಳಿತು ಸುಮ್ಮನೆ ಒಬ್ಬಳೇ ಅಳುತ್ತಿದ್ದಳು. ‘ಅಕ್ಕಾ, ಏಕೆ ಅಳ್ತಿಯಾ?’ ಎಂದು ಕೇಳಿದಾಗ ಅಮ್ಮ ಸುಮ್ಮನಾಗುವಂತೆ ನನಗೆ ಗದರಿದ್ದರು. ಮುಂದಿನ ಯೋಚನೆಗಳಿಗೆ ಅವಕಾಶಗಳಿರಲಿಲ್ಲ. ಅಕ್ಕನನ್ನು ಕರೆದುಕೊಂಡು ಬಂದು ಅಂಗಳದಲ್ಲೇ ಕೂರಿಸಿ, ಬಟ್ಟೆ ಬದಲಾಯಿಸಿ ಸ್ನಾನ ಮಾಡಲು ಅಜ್ಜಿಯ ಸುಗ್ರಿವಾಜ್ಞೆ ಹೊರಡಿತ್ತು. ಅಮ್ಮ ನಮ್ಮೂರ ಹೊಳೆ ದಾಟಿ ಆಚೆ ಮನೆಯ ಹೆಂಗಳೆಯರನ್ನು ಕರೆದುಕೊಂಡು ಬಂದಳು. ಅವರೆಲ್ಲರ ನೋಟ ಅಕ್ಕನತ್ತ, ಅಕ್ಕನ ಕಣ್ಣುಗಳಲ್ಲಿ ನಾಚಿಕೆಯ ಕಾಮನಬಿಲ್ಲು.

ಅಕ್ಕ ದೊಡ್ಡವಳಾಗಿದ್ದಳು!!
ಅಂದು ಅಮ್ಮನ ತಲೆಯಲ್ಲಿ ಅಕ್ಕನ ಮದುವೆಯ ಚಿಂತೆ. ವೊನ್ನೆ ವೊನ್ನೆ ತನಕ ನನ್ನನ್ನು ಸ್ಕೂಲಿಗೆ ರೆಡಿ ಮಾಡಿ, ಅವಳೂ ಬ್ಯಾಗ್ ಹೆಗಲೇರಿಸಿಕೊಂಡು ನನ್ನ ಜೊತೆ ಹೆಜ್ಜೆ ಹಾಕುತ್ತಿದ್ದ ಅಕ್ಕನನ್ನು ಮರುದಿನ ಅಮ್ಮ ಶಾಲೆಗೆ ಹೋಗಬೇಡ ಎಂದು ಗದರಿ ಅಂಗಳದಲ್ಲಿ ನಿಲ್ಲಿಸಿದಳು. ಅಮ್ಮನೇ ಅಕ್ಕನಿಗೆ ರಜೆ ಘೋಷಿಸಿಬಿಟ್ಟಿದ್ದಳು! ಹಟ್ಟಿಯ ಪಕ್ಕದಲ್ಲಿರುವ ಪುಟ್ಟ ಕೋಣೆಯೇ ಆಕೆಯ ಮನೆಯಾಗಿತ್ತು. ಅಂದಿನವರೆಗೆ ಸಂಭ್ರಮದ ಬುಗ್ಗೆಯಾಗಿದ್ದ ಅಕ್ಕ ಅವಳನ್ನು ‘ಕೂಡಿ’ ಹಾಕಿದ ಕೋಣೆಯಲ್ಲಿ ಆಕೆ ಒಬ್ಬಂಟಿಯಾಗಿದ್ದಳು. ಅಲ್ಲಿಗೇ ಊಟ, ನೀರು, ಬಟ್ಟೆ ...ಎಲ್ಲವೂ ಅಲ್ಲಿಗೇ ಸರಬರಾಜಾಗುತ್ತಿತ್ತು. ಅವಳನ್ನು ಮುಟ್ಟಬಾರದು ಎಂದು ಅಮ್ಮ ಹೇಳಿದಾಗ ನನಗೆ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ಆ ಕೋಣೆಯಲ್ಲಿ ಅಕ್ಕನನ್ನು ‘ಕೂಡಿ’ ಹಾಕಿದಾಗೆ ಭಾಸವಾಗಿತ್ತು. ಅಲ್ಲಿ ಹೋಗಬೇಡ, ಬಾವಿಯಿಂದ ನೀರು ಎತ್ತಬೇಡ, ತೋಟದ ಕಡೆ ಹೋದ್ರೆ ಅಲ್ಲಿ ದೇವರ ಗುಡಿ ಇದೆ, ಮನೆಯ ಜಗುಲಿನೂ ಮುಟ್ಟಬೇಡ, ನೀನು ಊಟ ಮಾಡಿದ ತಟ್ಟೆಯನ್ನು ಬೇರೆನೇ ಇಟ್ಟುಕೋ, ಲಂಗ ಧಾವಣಿ ಬೇಡ, ಸೀರೆ ಉಡಬೇಕು....ಇಂಥ ಉಪದೇಶಗಳಲ್ಲೇ ಅಮ್ಮ ಅಕ್ಕನನ್ನು ‘ಸೀಮಿತ ಪ್ರಜ್ಞೆ’ಗೆ ತಳ್ಳಿಬಿಟ್ಟಿದ್ದಳು.

ಅಕ್ಕನ ಬಿಟ್ಟು ಶಾಲೆಗೆ ಹೋದಾಗ ಮೇಷ್ಟ್ರು, ‘ನಿನ್ನಕ್ಕ ಎಲ್ಲಿ?’ ಎಂದು ಕೇಳಿದಾಗ ಎಲ್ಲರೆದುರು ಜೋರಾಗಿ ಅಕ್ಕ ದೊಡ್ಡವಳಾಗಿದ್ದಾಳೆಂದು ಹೇಳಿಬಿಟ್ಟಿದ್ದೆ. ಮೇಷ್ಟ್ರು ಉದ್ದದ ಕೋಲು ಹಿಡಿದು ಸುಮ್ನಿರೋ ಎಂದು ಗದರಿದ್ದು ಇನ್ನೂ ನೆನಪು. ಸುತ್ತಮುತ್ತಲಿನವರು ಮಗಳು ದೊಡ್ಡವಳಾದಳು, ಇನ್ನು ಮದುವೆಯ ಚಿಂತೆ ಎಂದಾಗ ಅಕ್ಕ ಪ್ರಶ್ನಾರ್ಥವಾಗಿ ನೋಡುತ್ತಿದ್ದಳು. ಅವಳಿಗಿನ್ನೂ ೧೪ ದಾಟಿರಲಿಲ್ಲ. ಇನ್ನೂ ಏಳನೇ ಕ್ಲಾಸು. . ಮಲ್ಲಿಗೆಯ ವೊಗ್ಗಿನಂತೆ ಆಗಷ್ಟೇ ಬಿರಿದ ಅವಳದು ಮದುವೆ-ಬದುಕು-ಬಂಧನ ಇದ್ಯಾವುದನ್ನೂ ಚಿಂತಿಸದ ವಯಸ್ಸು.

ಅಂದು ಅಕ್ಕನನ್ನು ನನ್ನಿಂದ ದೂರ ಇಟ್ಟಿದ್ದು ಅಮ್ಮನ ಮೇಲೆ ಕೆಟ್ಟ ಸಿಟ್ಟು ತರಿಸಿತ್ತು. ಅಮ್ಮ, ಅಜ್ಜಿ ಅದ್ಹೇಕೆ ಹೀಗೆ ಮಾಡಿದ್ರು? ಯಾವುದೂ ಅರ್ಥವಾಗಿರಲಿಲ್ಲ. ಆದರೆ, ಅಕ್ಕನೆತ್ತರಕ್ಕೆ ನಾನೂ ಬೆಳೆದಾಗ ಇದೆಲ್ಲವೂ ನನಗೂ ಅರ್ಥವಾಯಿತು. ಆದರೆ, ಅಕ್ಕನನ್ನು ಕೂಡಿ ಹಾಕಿದ ಕೋಣೆಯಲ್ಲಿ ನನ್ನನ್ನು ಕೂಡಿ ಹಾಕಲಿಲ್ಲ, ಅಕ್ಕನಂತೆ ನನ್ನನ್ನು ಅಮ್ಮನೇನೂ ಗದರಲಿಲ್ಲ. ಅಲ್ಲಿ ಹೋಗಬೇಡ, ಇಲ್ಲಿ ಹೋಗಬೇಡ...ಎಂಬ ಯಾವ ಚೌಕಟ್ಟುಗಳನ್ನು ಅಮ್ಮ ಹಾಕಿರಲಿಲ್ಲ. ಅಮ್ಮನ ತುಟಿಯಂಚಿನಲ್ಲಿ ನಗುವಷ್ಟೇ ಮೂಡಿತ್ತು. ಸಂಪ್ರದಾಯಗಳ ಚೌಕಟ್ಟುಗಳು ಅಂದು ಅರ್ಥ ಕಳೆದುಕೊಂಡಿದ್ದವು! ಇದೆಲ್ಲಾ Uಚುತ್ತಿರುವಾಗ ಪಿ.ಲಂಕೇಶ್ ಅವರ ನೀಲು ಕವಿತೆಯೊಂದು ನೆನಪಾಯಿತು.
ನನಗೆ ಅತ್ಯಂತ
ಸಂಕೋಚದ
ನೆನಪು
ಯಾವುದೆಂದರೆ

ನನ್ನ ಪ್ರೀತಿಯ ತಂದೆಗೆ
‘ಇನ್ನು ನನಗೆ ಸ್ನಾನ ಮಾಡಿಸಬೇಡ’
ಎಂದು ಲಂಗದಿಂದ ಸೀರೆಗೆ ಜಾರಿದ್ದು!!

ಬಹುಶಃ ಈ ಕವನದಲ್ಲಿ ಹೇಳಿದಂತೆ ಹೆಣ್ಣುಮಗಳೊಬ್ಬಳು ‘ಹರೆಯ’ಕ್ಕೆ ಬರುವುದು ಅವಳಿಗೆ ಅತ್ಯಂತ ನಾಚಿಕೆಯ ನೆನಪಾಗಿರಬೇಕು.