Wednesday, April 1, 2009

ಸುರೇಶ ಬೆಂಗಳೂರು ಸಿಟಿ ನೋಡಿದ್ದು

ಆತನ ಹೆಸರು ಸುರೇಶ. ಕಾಸರಗೋಡಿನ ಪುಟ್ಟದೊಂದು ಹಳ್ಳಿ ಅವನ ಮನೆ. ಹೊಲ-ಗದ್ದೆ ಕೆಲಸಗಳನ್ನೇ ನೋಡಿಕೊಳ್ಳುತ್ತಿದ್ದ ಈತ ಮುಗ್ಧ ಯುವಕ. ಪೋಲಿ-ಪುಂಡಾಟಿಕೆಯಿಲ್ಲ, ಹುಡುಗ್ರ ಜೊತೆ ಸೇರಿ ಓಡಾಟವಿಲ್ಲ. ಅಮ್ಮನ ಮುದ್ದಿನ ಮಗ. ಅವನಾಯಿತು, ಹೊಲಗದ್ದೆಗಳ ಕೆಲಸ, ತೋಟದ ಕೆಲಸ, ದನಕರುಗಳನ್ನು ನೋಡಿಕೊಳ್ಳೊದು, ಬೆಳಿಗೆದ್ದು ಹಾಲು ಕರೆದು ಡೈರಿಗೆ ಮಾರಿ ಬರುವುದು..ಈಗ ಹಳ್ಳಿಯ ಸುಂದರ ಸೊಬಗಿನಲ್ಲಿ ಬೆಳೆದ ಮುಗ್ಧ, ಪ್ರಾಮಾಣಿಕ ಸುರೇಶನಿಗೆ ನಗರ ಅಂದ್ರೆ ಅದೇನೋ ಕುತೂಹಲವಂತೆ. ಒಂದು ಸಲ ಅವನ ಸಂಬಂಧಿಕ ಹುಡುಗನೊಬ್ಬ ಸುರೇಶನನ್ನು ಬೆಂಗಳೂರಿಗೆ ಕರೆದುಕೊಂಡು ಬಂದ.

ವಿಲ್ಸನ್ ಗಾರ್ಡ್ನ್ನಲ್ಲಿ ಸುರೇಶನ ಸಂಬಂಧಿಕನ ರೂಮ್. ಎಲ್ಲಾ ಬ್ಯಾಚುಲರ್ ಹುಡುಗ್ರು. ಸುರೇಶನೂ ಒಂದು ವಾರ ಬೆಂಗಳೂರು ಸುತ್ತಿ ಹೋಗೋಣ ಅಂತ ಬಂದಿದ್ದ. ರೂಮ್ ಹುಡುಗ್ರು ಎಲ್ಲಾ ನಿತ್ಯ ಕೆಲಸಕ್ಕೆ ಹೋಗೋರು. ರಜೆಯಿಲ್ಲ. ಸುರೇಶನ ಬಳಿ, ಬೆಂಗಳೂರು ರೌಂಡ್ ಹಾಕೊಂಡು ಬಾ ಅಂದ್ರತೆ. ಮೆಜೆಸ್ಟಿಕ್ ಗೆ ಹೋದ್ರೆ ಬೆಂಗಲೂರು ಸುತ್ತಾಕೆ ತುಂಬಾ ಸುಲಭ..ಎಲ್ಲಾ ಕಡೆಗೂ ಹೋಗುವ ಬಸ್ಸುಗಳು ಮೆಜೆಸ್ಟಿಕ್ ನಿಂದಲೇ ಹೊರಡುತ್ತವೆ ಅಂದ್ರಂತೆ. ಸರಿ ಎಂದ ಸುರೇಶ ಬೆಂಗಳೂರು ಸಿಟಿ ಸುತ್ತೋಕೆ ರೆಡಿಯಾದ. ಬೆಳಿಗ್ಗೆ 10ರ ಸುಮಾರಿಗೆ ಮೆಜೆಸ್ಟಿಕ್ ಗೆ ಹೊರಟ. ಮೆಜೆಸ್ಟಿಕ್ ನಿಂದ ನಿಂತು ನೋಡಿದರೆ ಎದುರುಗಡೆ ಬೆಂಗಳೂರು ಸಿಟಿ ನೈರುತ್ಯ ರೈಲ್ವೆ ಕಾಣಿಸುತ್ತೆ. ಸುರೇಶ ಬೆಂಗಳೂರು ಸಿಟಿ ಅಂದ್ರೆ ಇದೇ ಅಂದುಕೊಂಡು ಸೀದಾ ರೈಲ್ವೆ ನಿಲ್ದಾಣ ಸುತ್ತಾಕೆ ಹೊರಟ.

ಗಿಜಿಗಿಡುವ ಜನರು, ಲಗೇಜುಗಳು, ಕೂಲಿಗಳು...ಇವನಿಗೆ ನೋಡಿಯೇ ತಲೆ ಗಿರ್ರ ಅನಿಸ್ತಂತೆ. ಒಂದೆಡೆ ಹೊಸ ಜಾಗ, ಅಪರಿಚಿತ ಮುಖ. ಆದರೂ ನೋಡಿಕೊಂಡು ಬಿಡೋಣ ಅಂತ ಪ್ಲಾಟ್ ಫಾರ್ಮ್ ಒಳಗೆ ಹೋಗಿದ್ದಾನೆ. ರೈಲುಗಳನ್ನೆಲ್ಲಾ ನೋಡುತ್ತಿದ್ದಾನೆ. ಕೈಯಲ್ಲಿ ಪ್ಲಾಟ್ ಫಾರ್ಮ ಟಿಕೆಟ್ ಇಲ್ಲ. ಅದು ಮಾಡಿಸಿಕೊಬೇಕು ಅಂತ ಅವನಿಗೆ ಗೊತ್ತೂ ಇಲ್ಲ. ಹಾಗಂತ ಯಾರೂ ಹೇಳೂ ಇಲ್ಲ. ತಪಾಸಣೆಗೆ ಬಂದ ಅಧಿಕಾರಿಗಳು ಬಂಧಿಸಿಬಿಟ್ಟರು. ತಪಾಸಣೆ ಮಾಡಿದ್ರು. ಈತ ಅಳೋದು ಬಿಟ್ರೆ ಬೇರೇನೂ ಮಾಡ್ತಿಲ್ಲ. ಸಂಜೆತನಕ ಅತ್ತು ಅತ್ತು ಹಣ್ಣಾದ ಮೇಲೆ ಇವನ ರೂಮ್ ಮೆಟ್ ಗಳು ಹೋಗಿ ಆಮೇಲೆ ಕರೆದುಕೊಂಡು ಬಂದ್ರು. ಅಂದೇ ನಾ ಊರಿಗೆ ಹೋಗ್ತೀನಿ ಅಂತ ರಚ್ಚೆ ಹಿಡಿದ ಸುರೇಶ ಬಸ್ಸು ಹತ್ತಿ ಹೊರಟೇಬಿಟ್ಟ. ಮತ್ತೆಂದೂ ಬೆಂಗಳೂರಿಗೆ ಮುಖ ಹಾಕಿ ನೋಡೇ ಇಲ್ಲ.
ಇತ್ತೀಚೆಗೆ ನನ್ನ ತಮ್ಮನೊಬ್ಬನನ್ನು ಊರಿಂದ ಇಲ್ಲಿಗೆ ಕರೆಸಿದೆ. ಬಂದಿದ್ದೇ ತಡ ಅಕ್ಕಾ ಊರಿಗೆ ಹೋಗ್ತೀನಿ..ಇಲ್ಲಿ ಬೋರ್ ಆಗುತ್ತೆ ಅಂತ ಜಗಳವಾಡಕೆ ಶುರುಹಚ್ಚಿದ. ಎರಡು ದಿನದಲ್ಲಿ ನಾ ಕಳಿಸಿಕೊಟ್ಟೆ. ಅವನ ಬಸ್ಸು ಹತ್ತಿಸಕೆ ಮೆಜೆಸ್ಟಿಕ್ ತನಕ ನಾನು ನಮ್ಮ ಸಂಬಂಧಿಕರೊಬ್ಬರ ಜೊತೆ ಹೋಗುತ್ತಿದ್ದಂತೆ ಅವರು ನನ್ ತಮ್ಮನಿಗೆ ಸುರೇಶ ಬೆಂಗಳೂರು ಸಿಟಿ ನೋಡಿದ ಕಥೆಯನ್ನು ವಿವರಿಸಿದ್ದರು. ಈವಾಗ ಸುರೇಶ ಮದುವೆಯಾಗಿ ಆರಾಮವಾಗಿ ಊರಲ್ಲಿದ್ದಾನೆ.

ನೋಡ್ರೀ ಈ ಸಲ ಧರಿತ್ರಿ ನಿಮ್ ಕಣ್ಣಲ್ಲಿ ನೀರು ತರಿಸಿಲ್ಲ..ನಗೋ ಥರ ಬರೆಯೋಕೆ ಬರಲ್ಲ..ಆದ್ರೂ ಅತ್ತ ನಗೂನು ಅಲ್ಲ ಇತ್ತ ಅಳೂನು ಅಲ್ಲದ ಘಟನೆಯನ್ನು ಬ್ಲಾಗಿಸಿದ್ದೇನೆ. ಆಗಾಗ ನೆನಪಾಗುವ ಸುರೇಶನ ಅವಸ್ಥೆಗೆ ನಂಗೇ ನಗಬೇಕೋ ಅಳಬೇಕೋ ಗೊತ್ತಾಗ್ತಿಲ್ಲ ಮಾರಾಯ್ರೆ.