Thursday, June 13, 2013

ಜೀವನ ಮತ್ತು ತೂಕ


ಇತ್ತೀಚೆಗೆ "ಅಪ್ ಇನ್ ದ  ಏರ್'' ಚಿತ್ರ ನೋಡಿದೆ. ಜಾರ್ಜ್ ಕ್ಲೂನಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಬಿಡುಗಡೆಯಾಗಿದ್ದು 2009ರಲ್ಲಿ. ಮನುಷ್ಯ-ಸಂಬಂಧಗಳ ಕುರಿತು ನಮ್ಮೋಳಗೆ ಕಾಡುವ, ಪ್ರಶ್ನೆಗಳನ್ನು ಹುಟ್ಟುಹಾಕುವ ಚೆಂದದ ಚಿತ್ರವಿದು. ಬದುಕು-ಬವಣೆ, ಭಾವನೆ-ಬಾಂಧವ್ಯ, ಹಾಸ್ಯ-ಲಾಸ್ಯ ಎಲ್ಲವೂ ಇದರಲ್ಲಿದೆ. ಅದರಲ್ಲಿ ರ್ಯಾನ್ ಬಿಂಗಂ ಪಾತ್ರದಲ್ಲಿ ಕಾಣಿಸಿಕೊಂಡ ಕ್ಲೂನಿ ಒಂದು ಕಡೆ ಭಾಷಣ ಮಾಡುತ್ತಾನೆ. ಮನಸ್ಸಿಗೆ ಬಹಳ ಹಿಡಿಸಿತು. ಅನುವಾದಿಸಿ ಇಲ್ಲಿಟ್ಟಿದ್ದೀನಿ.
                                                                       
                                 ********
ನಮ್ಮ ಜೀವನ ಎಷ್ಟು ತೂಗುತ್ತೆ ಅಂದುಕೊಂಡಿದ್ದೀರಿ? ಒಂದು ಸಣ್ಣ ಕಲ್ಪನೆ. ನೀವೊಂದು ಬ್ಯಾಕ್ ಪ್ಯಾಕ್ (ಬೆನ್ನಿಗೆ ಹಾಕಿಕೊಳ್ಳುವ ಚೀಲ) ತಗಲುಹಾಕಿಕೊಂಡಿದ್ದೀರಿ ಎಂದಿಟ್ಟುಕೊಳ್ಳೋಣ. ನಾನು ಏನು ಹೇಳೋದಂದ್ರೆ ನಮ್ಮ ಜೀವನದಲ್ಲಿ ಏನೇನು ಇದೆಯೋ ಅದನ್ನೆಲ್ಲಾ ಆ ಬ್ಯಾಕ್ ಪ್ಯಾಕ್ ಗೆ ತುಂಬಬೇಕು.

ಮೊದಲು ಸಣ್ಣ-ಸಣ್ಣ ವಸ್ತುಗಳಿಂದ ಶುರುಮಾಡೋಣ. ಮೊದಲು ಕಪಾಟುಗಳು, ಪೆಟ್ಟಿಗೆಗಳು..ಮುಂತಾದವುಗಳನ್ನು ತುಂಬಿ. ಬಳಿಕ ಬಟ್ಟೆಗಳು, ಲ್ಯಾಪ್ ಟಾಪ್ ಮತ್ತು ಅದಕ್ಕೆ ಸಂಬಂಧಿಸಿದ ಏನೇನು ವಸ್ತುಗಳಿವೆಯೋ ಅವುಗಳು, ನಿಮ್ಮನೆಯಲ್ಲಿರುವ ದೀಪಗಳು, ನಿಮ್ಮ ಟೀವಿಗಳು...ತುಂಬುತ್ತಾ ಹೋಗಿ. ನಿಮ್ಮ ಬ್ಯಾಕ್ ಪ್ಯಾಕ್ ಸ್ವಲ್ಲ ಭಾರವಾದಂಗೆ ಅನಿಸುತ್ತೆ ಅಲ್ವಾ? ಅಲ್ಲಿಗೇ ನಿಲ್ಲಿಸಬೇಡಿ...ಇನ್ನೂ ನಿಮಗೆ ಬಹುಮುಖ್ಯವಾಗಿರುವ ಅದೆಷ್ಟೋ ವಸ್ತುಗಳಿವೆ; ನೀವು ಮಲಗೋ ಮಂಚ, ಓಡಾಡೋ ಕಾರು, ನಿಮ್ಮ ಮನೆ...ಬ್ಯಾಕ್ ಪ್ಯಾಕ್ ಇನ್ನೂ ಭಾರವಾಗುತ್ತೆ. 

ಇನ್ನು ಜನರನ್ನು ತುಂಬಿಸಿಕೊಳ್ಳೋಣ...ಮೊದಲು ನಮ್ಮ ಸ್ನೇಹಿತರ ಸ್ನೇಹಿತರು, ಆಫೀಸ್ ನಲ್ಲಿ ಸಿಗೋ ನಿಮ್ಮ ಕಲೀಗ್ ಗಳು..ಬಳಿಕ ನಿಮ್ಮ ಪ್ರಾಣಸ್ನೇಹಿತರು, ನಿಮ್ಮ ಸಹೋದರ-ಸಹೋದರಿಯರು, ಮಕ್ಕಳು-ಮರಿಗಳು, ಅಪ್ಪ-ಅಮ್ಮ, ನಿಮ್ಮ ಗಂಡ, ನಿಮ್ಮ ಹೆಂಡ್ತಿ, ನಿಮ್ಮ ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ...
ಆ ಬ್ಯಾಕ್ ಪ್ಯಾಕ್ ನೊಳಗೆ ತುಂಬಿಸಿ. ಇವೆಲ್ಲವನ್ನೂ ತುಂಬಿಸಿದ ಬಳಿಕ ನಿಮ್ಮ ಬ್ಯಾಕ್ ಪಾಕ್ ನ ಭಾರವನ್ನು ಫೀಲ್ ಮಾಡಿ. ಎಷ್ಟೊಂದು ಭಾರವಿದೆ ಅನಿಸಲ್ವೇ?
ನಿಮಗನಿಸುತ್ತೆ: ಬ್ಯಾಕ್ ಪ್ಯಾಕ್ ನಲ್ಲಿರುವ ಆ ಸಂಬಂಧಗಳು ಅತ್ಯಂತ ಭಾರವಾದ ವಸ್ತುಗಳೆಂದು!
ಇವನ್ನೆಲ್ಲ ಹೊತ್ತುಕೊಂಡು ನಾವು ನಡಿಲೇಬೇಕು........

ನನ್ನೆದೆಯ ಮರುವಸಂತ


ಮಗ ಹುಟ್ಟಿದಾಗ ನನ್ನಲ್ಲಿ ಅದೆಂಥ ಸಂಭ್ರಮ? ಊರಮಂದಿಗೆಲ್ಲ ಲಡ್ಡು ಹಂಚಿದ್ದೇ ಹಂಚಿದ್ದು. ಮೇಲಿಟ್ಟರೆ ಕಾಗೆ ಹೊತ್ತೊಯ್ಯುತ್ತೆ, ಕೆಳಗಿಟ್ಟರೆ ಇರುವೆ ಕಚ್ಚುತ್ತೆ ಎಂದು ಅವನ ನನ್ನೆದೆಯಿಂದ ಕೆಳಗೆ ಇಳಿಸಿದ್ದೇ ಕಡಿಮೆ. ಕಂಕುಳಲ್ಲೇ ಹಾಲು ಕುಡಿದು ಅಲ್ಲೇ ನಿದ್ದೆಗೆ ಜಾರುತ್ತಿದ್ದ ನನ್ನ ರಾಜಕುಮಾರ.
ಅದೆಂಥ ಕತೆಗಳನ್ನು ಅವನಿಗೆ ಹೇಳಿದ್ದೆ. ಜೀಜಾಬಾಯಿ ಕಥೆ ಹೇಳಿ "ಮಗನೇ ಶಿವಾಜಿ ನೀನಾಗು'' ಎನ್ನುತ್ತಿದ್ದೆ. ರಾಮಾಯಣ, ಮಹಾಭಾರತದಿಂದ ಹಿಡಿದು ಗಾಂಧೀ, ಅಂಬೇಡ್ಕರ್ನಂಥ ಮಹಾನುಭಾವರ ಕತೆಗಳನ್ನು ಹೇಳಿಸಿಕೊಂಡೇ ನಿದ್ದೆ ಮಾಡುತ್ತಿದ್ದ ನನ್ನ ಮಗ. ಕಥೆ ಹೇಳದಿದ್ದರೆ "ಅಮ್ಮ, ನೀನು ಕತೆ ಹೇಳು'' ಎಂದು ನನ್ನ ಸೆರಗ ಹಿಡಿದು ಜಗ್ಗುತ್ತಿದ್ದ. ನನಗೆ ಕಥೆ ಹೇಳೊದ್ರಲ್ಲೇ ಖುಷಿ. ನನ್ನ ಅಪ್ಪ-ಅಮ್ಮ ಹೇಳಿಕೊಟ್ಟಿದ್ದ ಕಥೆಗಳು, ಅಕ್ಕ-ಪಕ್ಕದವರ ಬಳಿ ಕೇಳಿ ತಿಳಿಕೊಂಡ ಕಥೆಗಳು ಎಲ್ಲವೂ ನನ್ನ ಮಗನಿಗೆ. ಕೆಲವೊಮ್ಮೆ ರಾತ್ರಿಯಿಡೀ ಮಲಗದೆ ಕಥೆ ಹೇಳಿಸಿಕೊಂಡಿದ್ದೂ ಉಂಟು. ಅದೆಂಥ ಕಥೆಯ ಹುಚ್ಚು? ಅವಂಗೆ.
ಕಥೆ ಕೇಳುತ್ತಲೇ ಬೆಳೆದ ಮಗನಿಗೆ ಐದು ದಾಟಿತು. ಶಾಲೆಗೆ ಸೇರಿಸಬೇಕು. "ಹೆಂಗಪ್ಪಾ, ಇಡೀ ದಿನ ನನ್ನ ಮುದ್ದು ಮಗನ ಬಿಟ್ಟಿರಲಿ?'' ಎಂದು ಕಣ್ಣುಗಳು ಮಂಜಾಗಿದ್ದವು. ಅವನಿಗೆ ಹೊಸ ಚಡ್ಡಿ, ಶರ್ಟ್,ಬ್ಯಾಗ್, ಶೂ ಹಾಕಿಸಿ ಸ್ಕೂಲ್ ಗೆ ರೆಡಿ ಮಾಡುವಾಗ ಅದೆಂಥ ಖುಷಿಯ ಹೊಳಪು ನನ್ನೊಳಗೆ?
ಈ ಚಡ್ಡಿ ಹಾಕುವ ಮಗ ಯಾವಾಗ ಪ್ಯಾಂಟ್ ಹಾಕೋನು ಆಗ್ತಾನೆ? ಅನ್ನೋ ಕನಸು ಬೇರೆ. ದಿನಾ ಮುಂಜಾವು ಐದು ಗಂಟೆಗೆ ಎದ್ದು ಅವನಿಗೆ ಬಾಕ್ಸ್ ರೆಡಿ ಮಾಡಿ ಸ್ಕೂಲ್ ಗೆ ಕಳುಹಿಸುವಾಗ ಅದೆಂಥ ಸಂಭ್ರಮ? ಈ ದಿನ, ತಿಂಗಳು, ವರ್ಷಗಳೆಲ್ಲಾ ಉರುಳಿ ಒಮ್ಮೆಲೇ ನನ್ನ ಮಗ 'ದೊಡ್ಡವನಾಗಿಬಿಟ್ಟಿದ್ದರೆ' ಎಷ್ಟು ಚೆನ್ನಾಗಿರುತ್ತಿತ್ತು? ಎಂಬ ಹುಚ್ಚುಚ್ಚು ಕನಸು.
ಅವನು ಏನು ಕೇಳಿದ್ರೂ ಕೊಡಿಸೋದ್ರಲ್ಲಿ ನನಗೊಂದು ಹೊಸ ಖುಷಿ. ಪ್ರತಿ ಮಳೆಗಾಲಕ್ಕೂ ಹೊಸ ಕೊಡೆ ಕೇಳುತ್ತಿದ್ದ. ಕೆಲವೊಮ್ಮೆ ಹೆಣ್ಣುಮಕ್ಕಳಂತೆ ನನಗೆ ಬಣ್ಣದ ಕೊಡೆ ಬೇಕೆಂದು ರಚ್ಚೆ ಹಿಡಿಯುತ್ತಿದ್ದಾಗ ನಗು ಬರುತ್ತಿತ್ತು. ಬೇಸಿಗೆ ರಜೆ ಮುಗಿದ ತಕ್ಷಣ ಹೊಸ ಬಟ್ಟೆ, ಬ್ಯಾಗು, ಪುಸ್ತಕಗಳ ಸಂಭ್ರಮ. ಆ ಪುಸ್ತಕಗಳಿಗೆ ಬೈಂಡ್ ಹಾಕೋದು ಅಬ್ಬಬ್ಬಾ...ಅದೆಂಥ ಕೆಲಸ? ಒಂದೇ ವಾರದಲ್ಲಿ ಅವೆಲ್ಲಾ ಹರಿದು ಚಿತ್ರಾನ್ನವಾಗುತ್ತಿದ್ದವು. ಮತ್ತದೇ ಬೈಂಡ್ ಹಾಕುವ ಕೆಲಸ ನನಗೆ. ಪ್ರೈಮರಿ ಹೇಗೋ ಮುಗಿಯಿತು. ನೋಡು ನೋಡುತ್ತಿದ್ದಂತೆ ಹೈಸ್ಕೂಲು ಕೂಡ ಮುಗಿದೇ ಹೋಯ್ತು. ವರ್ಷಗಳೆಲ್ಲಾ ಹಕ್ಕಿ ತರ ರೆಕ್ಕೆಬಡಿದು ಏಕ್ ದಂ ಹಾರಿಬಿಟ್ಟಾವೆ ಎಂದನಿಸಿತು.
ಕಾಲೇಜು ಸೇರಿದ. ಓದಲು, ಬರೆಯಲು ಸಪರೇಟು ರೂಮ್ ಬೇಕು ಅಂದ. ಮೊಬೈಲ್, ಅದು-ಇದು ಏನೇನೋ ಕೇಳಿದ. ಎಲ್ಲನೂ ಕೊಡಿಸಿದ್ದಾಯಿತು. ಎಲ್ಲವೂ ನನ್ನ ಮಗ ರಾಜಕುಮಾರನಿಗಾಗಿ. ದಿನ, ತಿಂಗಳು, ವರ್ಷಗಳೆಲ್ಲಾ ಉರುಳಿ ನನ್ನ ಮಗ 'ದೊಡ್ಡವನಾಗೇಬಿಟ್ಟ'.

******
ಈಗ ಕನ್ನಡಿಯಲ್ಲಿ ಮತ್ತೆ ಮತ್ತೆ ನನ್ನ ನಾ ನೋಡಿಕೊಳ್ಳುತ್ತೇನೆ. ಕಪ್ಪು ಕೂದಲುಗಳ ನಡುವೆ ಅದೆಷ್ಟು ಚೆನ್ನಾಗಿತ್ತು ನನ್ನ ಬೈತಲೆ? ಆದರೆ, ಈಗ ಬಿಳಿ ಕೂದಲುಗಳ ರಾಶಿ. ಎಲ್ಲವೂ ಗೋಜಲು-ಗೋಜಲು. ಕಾಡಿಗೆ ಹಚ್ಚಿ ಹೊಳೆಯುತ್ತಿದ್ದ ಕಣ್ಣುಗಳು ಆಳಕ್ಕೆ ಹೋದಂಗೆ, ಕಣ್ಣ ಸುತ್ತ ನೆರಿಗೆಗಳು, ಕಪ್ಪು ಕಲೆಗಳು ಮೂಡಿದಂಗೆ ಅನಿಸುತ್ತೆ. ಯೌವನದಲ್ಲಿ ನನ್ನವನ ಮಾತು-ಮಾತಿಗೂ ನಾಚಿ ಕೆಂಪಾಗುತ್ತಿದ್ದ ಕೆನ್ನೆಯ ಬದಿಯಲ್ಲಿದ್ದ ಆ ಚೆಂದದ ಗುಳಿಗಳೂ ಮಾಯವಾಗಿವೆ. ಕಾಲೇಜು ಓದುವಾಗ ಹುಡುಗ್ರೆಲ್ಲಾ ಗುಳಿಚೆಲುವೆ ಎಂದು ರೇಗಿಸುತ್ತಿದ್ದರು. ಮುಖಾನ ಅಂದವಾಗಿಸಲು ಅದೇ ಹಳೆಯ ಬ್ರಾಂಡ್ ಪಾಂಡ್ಸ್ ಪೌಡರ್ ಹಚ್ತೀನಿ. ಬೈತಲೆ ಪಕ್ಕ ಕಾಣುವ ಬೆಳ್ಳಿಕೂದಲುಗಳನ್ನು ಮತ್ತೆ ಮತ್ತೆ ಕೀಳಕೆ ಪ್ರಯತ್ನ ಮಾಡ್ತೀನಿ. ಅದು ಬರಲೊಲ್ಲೆ ಎಂದು ರಚ್ಚೆ ಹಿಡಿಯುತ್ತೆ. ಉಸ್ಸಾಪ್ಪಾ...ಎಂಬ ನಿಟ್ಟುಸಿರು...ಎದೆಯೊಳಗಿಂದ ಹಾವು ಬುಸುಗುಟ್ಟಿದಂತೆ!.
ಎದುರಿಗಿದ್ದ ಮಗ ನೋಡಿ ನಕ್ಕು ಹೇಳುತ್ತಾನೆ. "ಅಮ್ಮಾ...ನಿಜವಾಗ್ಲೂ ನಿನ್ನ ಓಟರ್ ಐಡಿಯಲ್ಲಿ ಇರುವ 'ಡೇಟ್ ಆಫ್ ಬರ್ತ್' ಕರೆಕ್ಟಾ?''
ನನಗಿಂತ ಎತ್ತರಕ್ಕೆ ಬೆಳೆದ ಮಗನ ನೋಡಿ ಕತ್ತೆತ್ತಿ ಕಣ್ಣಲ್ಲೇ ಕೇಳುತ್ತೇನೆ; "ಏಕೆ?''
"ಅಮ್ಮಾ...ಗೆಸ್ ಮಾಡು'' ಎನ್ನುತ್ತಾನೆ.

ನನಗೆ ಮತ್ತೆ ಕನ್ನಡಿಯಲ್ಲಿ ನನ್ನ ನಾ ನೋಡಿಕೊಳ್ಳುವ ಖುಷಿ. ನನ್ನೆದೆಯಲ್ಲಿ ಮರುವಸಂತ.

ಒಂದು ವಾಕಿಂಗ್ ಮುಂಜಾವು



ದಟ್ಟಮರಗಳ ನಡುವೆ ಅಗಲ ರಸ್ತೆಗಳು, ರಸ್ತೆ ತುಂಬಾ ಗುಲ್ ಮೊಹರ್, ಚಿನ್ನದ ಹೂವು, ಪಿಂಕ್ ಕ್ಯಾಸಿಯಾ ...ಬಣ್ಣ-ಬಣ್ಣದ ಪುಷ್ಪಗಳ ಚಿತ್ತಾರ. ಇನ್ನೂ ಬೀದಿ ದೀಪ ಆರದ ಐದರ ಹೊತ್ತಿನಲ್ಲಿ ಹೂವ ಹಾಸಿನ ರಸ್ತೆ ಮೇಲೆ ನಡೆಯುವುದೇ ಚೆಂದ. ಹೂವುಗಳಿಂದ ಕಂಗೊಳಿಸುವ ಮರಗಳ ನಡುವೆ ಸೂರ್ಯ ಕೆಂಪೇರುವುದು ಕಣ್ಮನಸಿಗೆ ಹಬ್ಬ. ಹಾಳು ಸೆಖೆ...ಆದರೂ, ಪುಷ್ಪ ಚಿತ್ತಾರವನ್ನು ನೋಡಿದರೆ "ಇರಲಿ ಬೇಸಿಗೆ ಕಾಲ'' ಎನ್ನುತ್ತಿತ್ತು ಮನಸ್ಸು.

****************
ರಾಜಕಾರಣಿಯೊಬ್ಬನ ದೊಡ್ಡ ಗೇಣಿನ ಬಂಗಲೆ. ಅದರೆದುರು ಹತ್ತಾರು ಕಾರುಗಳು, ರಾತ್ರಿಯಿಡೀ ನಿದ್ದೆಯಿಲ್ಲದೆ ತೂಕಡಿಸುವ ಸೆಕ್ಯೂರಿಟಿ ಗಾರ್ಡ್ ಗಳು.

****************
ಅದು ದೈವಭಕ್ತ ಹೆಂಗಸರ ವಾಕಿಂಗ್. ಯಾರದೋ ಕಾಂಪೌಂಡ್ ಗೆ ಹತ್ತಿ ಪೂಜೆಗಾಗಿ ಹೂವುಗಳನ್ನು ಕಿತ್ತು ಸೆರಗಿನಲ್ಲಿ ತುಂಬಿಸಿಕೊಳ್ಳುತ್ತಿದ್ದರು. "ನಾಯಿಗಳಿವೆ ಎಚ್ಚರಿಕೆ' ಎಂಬ ಬೋರ್ಡಿಗೂ ಅವರು ಹೆದರಲಿಲ್ಲ!.

****************
ಒಂದು ವರ್ಷದ ಹಿಂದೆ ಆ ಕೌಂಪೌಂಡಿನಲ್ಲಿ ಮೇಣದ ಗಣಪತಿ ಬಂದು ಕುಳಿತಿದ್ದಾನೆ. ವಾಕಿಂಗ್ ಹೋಗುವವರೆಲ್ಲಾ ಆ ಗಣಪತಿಗೆ ಸೆಲ್ಯೂಟ್ ಹೊಡೆದೇ ಮುಂದೆ ಸಾಗುತ್ತಾರೆ. ಅವನೆದುರು ಇರುವ ಡಬ್ಬಕ್ಕೆ ಬೆಳ್ಳಂಬೆಳಗ್ಗೆ ನೋಟು ತುಂಬುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯಾಕೋ ಗಣಪತಿ ದಿನ ಹೋದಂಗೆ ಶ್ರೀಮಂತನಾಗುತ್ತಿದ್ದಾನೆ!
****************

ಎಂಬತ್ತು ದಾಟಿರುವ ತಾತನ ಹಿಂದೆ ಏಳೆಂಟು ಬೀದಿನಾಯಿಗಳು ಸುತ್ತುತ್ತಿದ್ದವು. ನೋಡಿದರೆ, ಅಜ್ಜ ನಾಯಿಗಳಿಗಾಗಿ ತಿಂಡಿ ತಂದಿದ್ದರು. ಪ್ರತಿದಿನ ವಾಕ್ ಹೋಗುವಾಗ ಬೀದಿ ನಾಯಿಗಳ ಕಾಟ ತಡೆಯಲಾರದೆ ಅವರು ಈಗ ನಾಯಿಗಳಿಗೆ ತಿಂಡಿ ತರುವ ಅಭ್ಯಾಸ ಮಾಡಿಕೊಂಡಿದ್ದಾರಂತೆ!.
****************

ಮನೆಯ ಕೆಲಸದಾಕೆ...ಮನೆಮುಂದೆ ಬಿದ್ದಿದ ಕಸದರಾಶಿಗೆ ಬೆಂಕಿ ಹಚ್ಚುತ್ತಿದ್ದಳು. ಅದರಿಂದ ದಟ್ಟಹೊಗೆ, ಕೆಟ್ಟವಾಸನೆ. ಬೆಳಿಗ್ಗೆಯಾದರೂ ಶುದ್ಧ ಗಾಳಿ ಸಿಗಲೆಂದು ಮೂಗು ಬಯಸುತ್ತಿದ್ದರೆ...ಒಮ್ಮೆಲೇ ಕೆಮ್ಮು ಬರತೊಡಗಿತು.
****************

ಬೀದಿ ದೀಪಗಳು ನಿಧಾನಕ್ಕೆ ಆಫ್ ಆಗತೊಡಗಿದವು. ಇನ್ನೇನೋ ಸೂರ್ಯ ಬರುವ ಹೊತ್ತು. ರಸ್ತೆ ಮೇಲಿನ ಹೂವಿನ ಚಿತ್ತಾರ ಮಬ್ಬು ಮುಂಜಾವಿನಲ್ಲಿ ಇನ್ನಷ್ಟು ಮೋಹಕ. ಯೋಚನೆಗಳಿಗೆ ನೂರಾರು ದಾರಿಗಳು. ಮುಂದೆ ಸಾಗಿದರೆ ಬಂಗಲೆಯೊಂದರ ಪಕ್ಕದಲ್ಲಿ ಗೊರಕೆ ಸದ್ದು ಕೇಳುತ್ತಿತ್ತು. ಪಾಪ, ರಾತ್ರಿಯಿಡೀ ಎಚ್ಚರವಿದ್ದ ಸೆಕ್ಯೂರಿಟಿ ಆರು ಗಂಟೆ ಹೊತ್ತಿಗೆ ನಿದ್ದೆಗೆ ಜಾರಿದ್ದ!.
****************

ಯಾರದೋ ಮನೆ, ಮನೆಯೆದುರು ಹೂವು ಕುಂಡಗಳ ಅಲಂಕಾರ, ಇನ್ನ್ಯಾರದೋ ಮನೆಯ ಸೆಕ್ಯೂರಿಟಿ ತನ್ನ ಜೊತೆಗೆ ವಾಕಿಂಗ್ ಬಂದ ನಾಯಿಯನ್ನು ಅಲ್ಲಿ "ನಿತ್ಯಕರ್ಮ'' ಮಾಡಿಸುತ್ತಿದ್ದ!. ಇನ್ನೂ ಮುಂದೆ ಹೋದರೆ ಗಾಡಿ ತೊಳೆಯುವ ಹುಡುಗ "ರಂಗೋಲಿ'' ಮೇಲೆ ನೀರು ಹಾಕಿದನೆಂದು ಮನೆಯೊಡತಿ ಬೈಯುತ್ತಿದ್ದಳು.
****************

" ಥೂ....ಮಗ'' ಕಾಫಿ ಮಾರುವ ಅಜ್ಜಿ ದೊಡ್ಡ ಸ್ವರದಲ್ಲಿ ಬೈಯುತ್ತಿದ್ದಳು. ಆ ಏರಿಯಾದ ಸೆಕ್ಯೂರಿಟಿ ಗಾರ್ಡ್ ಗಳಿಗೆ ಮುಂಜಾವು ಶುರುವಾಗುವುದೇ ಅಜ್ಜಿಯ ಬಿಸಿ-ಬಿಸಿ ಕಾಫಿ ಮೂಲಕ. ಹತ್ತಾರು ಮಂದಿ ಯಾವಾಗಲೂ ಅಜ್ಜಿ ಮುಂದೆ ಕಾಫಿಗಾಗಿ ಕ್ಯೂ ನಿಂತಿರುತ್ತಾರೆ. ಒಂದೊಂದು ದಿನ ಅಜ್ಜಿ ಖುಷಿಯಲ್ಲಿರುತ್ತಾಳೆ, ಕೆಲವೊಮ್ಮೆ ಜಮದಗ್ನಿಯಾಗುತ್ತಾಳೆ. ತಿಂಗಳ ಕೊನೆಯಲ್ಲಿ ಎಲ್ಲರಿಗೂ ಸಾಲದ ಮೇಲೆ ಕಾಫಿಯಂತೆ. ಒಬ್ಬ ಎರಡು ತಿಂಗಳಿಂದ ಬಿಟ್ಟಿ ಕಾಫಿ ಕುಡಿದು ಸಾಲ ತೀರಿಸಿಲ್ಲ ಎಂದು ಅಜ್ಜಿಗೆ ಸಿಟ್ಟು ನೆತ್ತಿಗೇರಿತ್ತು.
*********************

ಗಂಟೆ ಆರೂವರೆ. ಸೂರ್ಯ ನಿಧಾನಕ್ಕೆ ಮೇಲೇರುತ್ತಿದ್ದ. ಬಂದ ದಾರಿಯಲ್ಲೇ ವಾಪಸ್ ಹೊರಟೆ. ಹೂವ ಚಿತ್ತಾರ ಬೀದಿ ಗುಡಿಸುವವಳ ಪೊರಕೆಗೆ ಸಿಕ್ಕು ಕಸದರಾಶಿಯಾಗಿದ್ದವು. ಮನೆ ಗೇಟ್ ತೆರೆದರೆ, ಅಮ್ಮ ಹೊಸಿಲಿಗೆ ರಂಗೋಲಿ ಹಾಕಿ, ಅರಿಶಿಣ-ಕುಂಕುಮ ಹಚ್ಚಿದ್ದಳು. ಪತಿದೇವರಿಗೆ ಮಾತ್ರ ಇನ್ನೂ ಬೆಳಗಾಗಿರಲಿಲ್ಲ!!!

Thursday, April 18, 2013

ನೆನಪಿಗೊಂದು ಡಿಲೀಟ್ ಬಟನ್!


ನೆನಪಿಗೂ ಡಿಲೀಟ್ ಬಟನ್ ಇರುವಂತಿದ್ದರೆ....
ಬೇಡವಾದ, ಇಷ್ಟವಿಲ್ಲದ ನೆನಪುಗಳನ್ನು ಡಿಲೀಟ್ ಬಟನ್ ಒತ್ತಿ ಅಳಿಸಿಬಿಡಬಹುದಿತ್ತು...
ಬೇಕಿದ್ದರೆ ಕಂಟ್ರೋಲ್ ಝಡ್ ಮಾಡಬಹುದಿತ್ತು....
ಎಲ್ಲಿಂದಲೋ ಎರವಲು ಪಡೆಯಬೇಕಿದ್ದರೆ ಕಂಟ್ರೋಲ್ ಕಾಪಿ&ಪೇಸ್ಟ್ ಮಾಡಬಹುದಿತ್ತು...
ಸಾಧ್ಯನಾ? ಮತ್ತೊಂದು ಪ್ರಶ್ನೆ ತಲೆಯೊಳಗೆ.
"ಬೆಳಗ್ಗೆಯಿಂದ ಎಷ್ಟು ಎನ್ ಕ್ವಾರಿ ಅಟೆಂಡ್ ಮಾಡಿದೆ?'' ಬಾಸ್ ಬಂದು ನನ್ನ ಮೇಜು ಮೇಲೆ ಸದ್ದು ಮಾಡಿದ.
"ಸರ್, ಐದು...''
"ಬರೀ ಐದೇ..ಬೆಳಿಗ್ಗೆ 10 ಗಂಟೆಗೆ ಆಫೀಸ್ ಬರ್ತಿಯಾ. ಈಗ ಗಂಟೆ ಐದು. ಇನ್ನು ಒಂದು ಗಂಟೆಯಲ್ಲಿ ಮನೆಗೆ ಹೊರಡುವ ಸಮಯ'' ಬಾಸ್ ಕಣ್ಣು ದೊಡ್ಡದಾಗಿತ್ತು. ಬಾಸ್ ಆತನ ಚೇಂಬರಿಗೆ ತೆರಳಿದ. ಗಾಜಿನ ಪರದೆಯ ಒಳಗಿನಿಂದ ಅವನ ಕಣ್ಣು ನನ್ನ ಮೇಲೆ.

ಮತ್ತೊಂದಷ್ಟು ನೆನಪುಗಳು. ಎದೆಯ ಸೀಳಿ ಹೊರಬಂದವು....
ಅಂದು ನಾನು ಹುಟ್ಟಿದ್ದು, ಚೌತಿ ದಿನ. ಬೆಳಿಗ್ಗೆ 7.20ಕ್ಕೆ.
ಹೆಣ್ಣುಮಗುವೆಂದು ಅಮ್ಮಂಗೆ ಖುಷಿ..
ಅಜ್ಜಿ ಮತ್ತು ಅಪ್ಪ "ಗಂಡು ಮಗು ಬೇಕೆಂದು'' ಗ್ರಾಮದೇವತೆಗೆ ಹರಕೆ ಹೊತ್ತಿದ್ದು ವ್ಯರ್ಥವಾಗಿತ್ತಂತೆ.
ನಾನು ಹುಟ್ಟಿದಾಗ ಅಪ್ಪ ನನ್ನ ನೋಡಲು ಬರಲಿಲ್ಲವಂತೆ..
ಹೆಣ್ಣು ಮಗು...ಮನೆಹಾಳು ಅಂದಿದ್ದನಂತೆ...
ಅಪ್ಪ...!,
ಅವನು ಅಮ್ಮಂಗೆ ಕಷ್ಟ ಕೊಟ್ಟಿದ್ದ. ಮೂಗಿನ ತನಕ ಕುಡಿದು ಮನೆಗೆ ಬಂದು ಅಮ್ಮನ ಹಿಂಸಿಸುತ್ತಿದ್ದ. ಅವನು ನನಗೆ ಬೇಡವಾಗಿತ್ತು...
ಆದರೆ, ಅಮ್ಮ "ಅವನೇ ತಾಳಿ, ಪಾಲಿಗೆ ಬಂದದ್ದು ಪಂಚಾಮೃತ. ಹೊಂದಿಕೊಂಡು ಹೋಗಬೇಕು'' ಎಂಬ ಮಾತಿನಲ್ಲಿ ನಂಬಿಕೆಯಿಟ್ಟಿದ್ದಳು.
ಎಂಥ ಒಳ್ಳೆಯ ಅಮ್ಮ, ಎಷ್ಟು ಕೆಟ್ಟ ಅಪ್ಪ...
ಅವನ ನೆನಪನ್ನು ಡಿಲೀಟ್ ಮಾಡಬೇಕು ಅನಿಸಿತ್ತು..ಬೆರಳು ಡಿಲೀಟ್ ಬಟನ್ ನತ್ತ ಸಾಗಿತ್ತು...
ಥತ್...
ಎನ್ ಕ್ವಾರಿ ಲಿಸ್ಟ್ ಡಿಲೀಟ್ ಆಗೋಯ್ತು...ಎದೆ ಢವಢವ.
"ಓಹ್..ಕಂಟ್ರೋಲ್ ಝಡ್'' ಲಿಸ್ಟು ಮತ್ತೆ ಬಂತು.

ಮತ್ತೆ ಬಿಡದೆ ಕಾಡುವ ನೆನಪುಗಳು....
ಬೆಂಗಳೂರಿಗೆ ಬಂದ ಹೊಸತು. ನಮ್ಮನೆ ಎದುರುಗಡೆ ಮನೆಯಲ್ಲಿ ಯುವತಿ ಇದ್ದಳು. ವಯಸ್ಸು ಮೂವತ್ತೊರಳಗೆ. ಉದ್ದ ಜಡೆಗೆ ಹೂವ ಮುಡಿದರೆ ನೋಡಲು ಇನ್ನೂ ಚೆಂದ. ದಿನಾ ಕಣ್ಣಿಗೆ ಕಾಡಿಗೆ ಹಚ್ಚುತ್ತಾಳೆ, ಕಿವಿಯಲ್ಲಿ ತೂಗಾಡುವ ಓಲೆ, ಮೂಗಿನಲ್ಲಿ ಮಿನುಗುವ ನತ್ತು, ಕೈ ತುಂಬಾ ಬಣ್ಣದ ಬಳೆ. ಮುಂಜಾವು ಸೂರ್ಯ ಅರಳುವ ಹೊತ್ತು ಮನೆಮುಂದೆ ರಂಗೋಲಿ ಇಡುತ್ತಾಳೆ. ನೀಳಜಡೆ ನೆಲದ ಮೇಲೆ ನಲಿದಾಡುತ್ತೆ....
ಅವಳ ಮನೆಯೆದುರು ನಡೆದಾಡಿದರೆ ಅವಳ ಕಾಲಲ್ಲಿದ್ದ ಬೆಳ್ಳಿ ಗೆಜ್ಜೆಯ ಸಪ್ಪಳ ನಮ್ಮನೆ ಅಡುಗೆ ಮನೆಗೂ ಕೇಳಿಸುತ್ತಿತ್ತು. ಮತ್ತೆ ಮತ್ತೆ ಅವಳ ನೋಡುತ್ತಿದ್ದೆ. ಚೆಂದದ ಹುಡುಗಿ ಅವಳು.
ಅವಳು ಕೆಲಸಕ್ಕೆ ಹೋಗುವುದಿಲ್ಲ...ಬೆಳಗ್ಗೆಯಿಂದ ಸಂಜೆ ತನಕ ಮನೆಯೊಳಗೇ ಸಿಂಗಾರವ್ವ. ದಿನಾ ಸಂಜೆ ಒಬ್ಬ ಅರವತ್ತು ದಾಟಿದ ಕಪ್ಪಗಿನ ಗಂಡಸು ಅವಳ ಮನೆಗೆ ಹಾಜರು. ಅವನು ಬರುವ ಹೊತ್ತು ಅವಳು ಕಾಯುವುದು ಶಬರಿ ರಾಮಂಗೆ ಕಾದಿದ್ದನ್ನು ನೆನಪಿಸುತ್ತಿತ್ತು. ಅವನ ಕುತ್ತಿಗೆಯಲ್ಲಿ ಸರಪಳಿಯಂಥ ಚಿನ್ನದ ಸರ, ಕೈಯಲ್ಲಿ ದಪ್ಪ ಬಳೆ.
"ಇವನೇನೋ ರಿಯಲ್ ಎಸ್ಟೇಟ್ ಸರದಾರ. ಅವಳ ಅಪ್ಪನಿರಬೇಕು'' ನನ್ನ ಅನುಮಾನಕ್ಕೆ ಮನಸ್ಸು ಉತ್ತರ ಕೊಟ್ಟಿತ್ತು.
ಪಕ್ಕದ್ಮನೆ ಹೆಂಗಸರು ಮಾತಾಡಿಕೊಳ್ಳುತ್ತಿದ್ದರು, "ಪಾಪ ಆ ಹುಡುಗಿ ಅಮ್ಮಂಗೆ ಎಂಟು ಜನ ಮಕ್ಕಳಂತೆ. ಇವಳು ನಾಲ್ಕನೆಯವಳು. ಅಪ್ಪ ಕಾಯಿಲೆಯಿಂದ ಸತ್ತುಹೋದ. ಹೆಣ್ಣುಮಕ್ಕಳ ಮದುವೆ ಮಾಡಕ್ಕಾಗದ ಅಮ್ಮ ಈ ಮುತ್ತಿನಂಥ ಹುಡುಗಿಗೆ ಎರಡನೇ ಸಂಬಂದ ಕಟ್ಟಿದ್ರಂತೆ. ಆಯಪ್ಪಂಗೆ ಮದುವೆಯಾದರೂ ಮಕ್ಕಳಾಗಿಲ್ಲ ಎಂದು ಇನ್ನೊಂದು ಮದುವೆ ಮಾಡಿಕೊಂಡಂತೆ. ಅದಕ್ಕೆ ದಿನಾ ಮನೆಗೆ ಬಂದು ನೋಡ್ಕೊಂಡು ಹೋಗ್ತಾನೆ...''

ಹಾಳು ನೆನಪುಗಳು...ಮತ್ತೆ ಮತ್ತೆ ಕಾಡ್ತವೆ...
ಸುಮ್ಮನೆ ಬಾಸ್ ಕೈಯಿಂದ ಬೈಗುಳ. ಫೈಲ್ ಡಿಲೀಟ್ ಆಗೋದು...ಎಲ್ಲವೂ ನೆನಪುಗಳಿಂದಲೇ...ಅವುಗಳ ಮೇಲೆ ತುಂಬಾ ಸಿಟ್ಟು ಬಂತು....
ಎದುರುಗಡೆ ಇದ್ದ ಗಡಿಯಾರದಲ್ಲಿ ಕಿರಿಯ ಮುಳ್ಳು ಆರು ತೋರಿಸುತ್ತಿತ್ತು.
ಎನ್ ಕ್ವಾರಿ ಲಿಸ್ಟ್ ಬಾಸ್ ಗೆ ಮೇಲ್ ಮಾಡಿದೆ....
ನನ್ನವನ ಕಾಲ್ "ಬಾ ಬೇಗ...ಗೇಟ್ ಬಳಿ ವೈಟ್ ಮಾಡ್ತಾ ಇದ್ದೀನಿ.."
ಮನಸ್ಸಿನಲ್ಲಿ ಮತ್ತದೇ "ನೆನಪುಗಳನ್ನು ಡಿಲೀಟ್ ಬಟನ್ ಒತ್ತಿ ಅಳಿಸಿಬಿಡುವಂತಿದ್ದರೆ...ಎಷ್ಟು ಚೆಂದ? ಬೇಕಾದ್ದು ಇಟ್ಕೊಂಡು ಬೇಡದ್ದು ಡಿಲೀಟ್ ಮಾಡಬಹುದಿತ್ತು''!

ಭಾವಕ್ಕೆ ದಕ್ಕಿದ ಪ್ರಸಂಗಗಳು-3


ಮೊದಲ ಫೈಲ್ ನೇಮ್ "ಲೈಫ್" 
ಮೊದಲು ಡಿಟಿಪಿ ಕಲಿಯಬೇಕು....
"ತಿಂಗಳಿಗೆ ಮೂರು ಸಾವಿರ'' ಎಂದರು ದಪ್ಪ ಕನ್ನಡದ ಹೆಂಗಸು. ಅವರು ಕಂಪ್ಯೂಟರ್ ಟೀಚರ್.
ಪರ್ಸ್ ಮುಟ್ಟಿ ನೋಡಿಕೊಂಡೆ. ಅಮ್ಮ ಕೊಟ್ಟಿದ್ದು ಬರೀ ನಾಲ್ಕು ಸಾವಿರ..
ಬೆಂಗಳೂರು ಬರಡನಿಸಿತು. .."ನದಿಗೆ ಇಳಿದ ಮೇಲೆ ಈಜಿಲೇಬೇಕು. ಸಾಯೋದು ಅನ್ಯಾಯ''.
ಒಪ್ಪಿಕೊಂಡೆ. ಅಲ್ಲಿಯವರೆಗೆ ಮೌಸ್ ಮುಟ್ಟದ ನನ್ನ ಬೆರಳುಗಳು ಅದನ್ನು ಗಟ್ಟಿಯಾಗಿ ಹಿಡಿದುಕೊಂಡವು. ಫೈಲ್ ಗಳನ್ನು ತೆರೆದು ಅಕ್ಷರಗಳನ್ನು ಪೋಣಿಸುತ್ತಾ ಹೋದೆ. ಸೇವ್ ಕ್ಲಿಕ್ ಮಾಡಿದರೆ ಪೋಣಿಸಿದ ಅಕ್ಷರಗಳು ಅಲ್ಲೇ ಉಳಿಯುತ್ತವೆ. ಫೈಲ್ ಗೊಂದು ಹೆಸರುಕೊಡಬೇಕು ಎಂದು ಹೇಳಿಕೊಟ್ಟರು ಕಂಪ್ಯೂಟರ್ ಟೀಚರ್. ಅದಕ್ಕೊಂದು ಹೆಸರು ಕೊಟ್ಟೆ "ಲೈಫ್'' ಎಂದು!
ದಪ್ಪಶಾಯಿಯ ಪೆನ್ನಿನಲ್ಲಿ ಹೇಳಿಕೊಟ್ಟಿದ್ದನ್ನು ಬರೆದುಕೊಂಡೆ. ಕಲಿಕೆಗೊಂದು ನೋಟ್ ಬುಕ್!. ಮರುದಿನ ಕಾಪಿ-ಪೇಸ್ಟ್, ಡಿಲೀಟ್, ಆಲ್ಟ್ ಝಡ್....ಹೀಗೆ ಕೀಬೋರ್ಡ್ ಕಸರತ್ತು ಹೇಳಿಕೊಟ್ಟರು. ಬೆರಳುಗಳು ಜೋರಾಗಿ ಚಲಿಸುತ್ತಿದ್ದವು. ಕೀಬೋರ್ಡ್ ಕಟಕಟ ಶಬ್ಧಮಾಡತೊಡಗಿತು.
ಪೆನ್ನು, ಪೆನ್ಸಿಲ್, ದಿನ ಗೀಚುತ್ತಿದ್ದ ಡೈರಿ...ಎಲ್ಲವೂ ನನ್ನ ಆ ಪೆಟ್ಟಿಗೆಯಲ್ಲಿ ಸುಮ್ಮನೆ ಕುಳಿತಿವೆ. ಪೆನ್ನಿಗೆ ಇಂಕ್ ತುಂಬಿಸಿ ಏಳು ವರ್ಷ ಸರಿದಿದೆ. ಪೆನ್ ಹಿಡಿದರೆ ಯೋಚನೆಗಳು ಗಕ್ಕನೆ ನಿಂತುಬಿಡುತ್ತವೆ. ಮತ್ತೆ ಮೌಸ್ ಹಿಡಿಯುತ್ತೇನೆ.
***********
ಸಕಲ ಕೆಲಸ ವಲ್ಲಭ!
"ಅಮ್ಮ ಒಬ್ಬಳೇ ಮನೆಯಲ್ಲಿ. ಎಲ್ಲಾ ಕೆಲಸ ಮಾಡುವುದು ಕಷ್ಟವಾಗುತ್ತೆ''ಅವನಂದ.
"ಹ್ಲೂಂ..ಹೌದು, ನೀನು ಅಮ್ಮಂಗೆ ಹಲ್ಪ್ ಮಾಡೋಲ್ವಾ?''
"ಮಾಡ್ತೀನಿ...ತರಕಾರಿ ಹಚ್ಚಿಕೊಡ್ತೀನಿ. ನನ್ ಬಟ್ಟೇನಾ ನಾನೇ ಒಗೇತೀನಿ. ವಾರಕ್ಕೆ ಬೇಕಾಗುವಷ್ಟು ಬಟ್ಟೆಗಳನ್ನು ನಾನೇ ಇಸ್ತ್ರೀ ಮಾಡಿಕೊಳ್ತೀನಿ''
ಅವನಂದಾಗ,
"ಗುಡ್ ಪರ್ವಾಗಿಲ್ಲ...ಗಂಡನಾಗುವವನು ಸಕಲ ಕೆಲಸ ವಲ್ಲಭ'' ಎಂದುಕೊಂಡೆ ನಾನು.
***
ಮದುವೆಯ ಮೊದಲ ದಿನ. ಅವನ ಕೋಣೆ ಹೊಸತು. ಮಂಚ ಅಲಂಕಾರಗೊಂಡಿತ್ತು. ಮಲ್ಲಿಗೆಯ ಘಮ.
ಕೋಣೆಯೊಳಗೆ ಏನೇನಿದೆ ಎಂದು ನೋಡುವ ತವಕ ನನ್ನ ಕಣ್ಣುಗಳಿಗೆ.
ಪುಸ್ತಕ, ಪೆನ್ನುಗಳ ರಾಶಿ. ನೋಟ್ ಪುಸ್ತಕಗಳು, ಡೈರಿಗಳು, ಚಿಂದಿ-ಚಿಂದಿಯಾದ ಕಾಗದ ಚೂರುಗಳು...ನೋಡುತ್ತಲೇ ನಿಂತಿದ್ದೆ.
"ಏಕೆ ರೂಮ್ ಹಿಂಗಿಟ್ಟುಕೊಂಡಿದ್ದೀ..ಗಂಡುಮಕ್ಕಳೇ ಹಿಂಗೇ ಅನಿಸುತ್ತೆ'' ನಾನಂದೆ.
"ಮೊದಲ ದಿನ. ಸುತ್ತಮುತ್ತ ನೋಡಬೇಡ. ನನ್ನ ಕಣ್ಣುಗಳನ್ನಷ್ಟೇ ನೋಡು'' ಕೈ ಹಿಡಿದೆಳೆದು. ಸ್ವಿಚ್ ಬೋರ್ಡ್ ಒತ್ತಿದ. ಕೋಣೆ ಕತ್ತಲಾಯಿತು.
"ಪರ್ವಾಗಿಲ್ಲ ನನ್ ಗಂಡ ತುಂಬಾ ಓದ್ತಾನೆ..'' ಖುಷಿಪಟ್ಟೆ ಮನಸ್ಸಿನಲ್ಲಿ.
ಬೆಳಗಾಯಿತು...
ಅವನ ದೊಡ್ಡ ಬೀರು ತೆರೆದೆ.
ಅಬ್ಬಾ...ಬಟ್ಟೆ ರಾಶಿಗಳು...ಪ್ಯಾಂಟ್, ಶರ್ಟ್, ಟೀ-ಶರ್ಟ್, ಬನಿಯನ್, ನಿಕ್ಕರ್...ಎಲ್ಲವೂ ಮುದ್ದೆ ಮುದ್ದೆಯಾಗಿ ತುರುಕಿಸಿಡಲಾಗಿತ್ತು. ಒಂದು ಬಟ್ಟೆ ತೆಗೆದರೆ ಇನ್ನೊಂದು ಬೀಳುತ್ತಿತ್ತು...ಗೆದ್ದಲು ಹಿಡಿಯೋಕೆ ಬಾಕಿ!
"ಏನಿದು...ಬ್ಯಾಚುಲರ್ ಹುಡುಗ್ರು ಹೀಗೆನಾ?'' ಕೇಳಿದೆ.
"ಒಬ್ಬ ವ್ಯಕ್ತಿ ಬಚ್ಚಲಿನಲ್ಲಿ ಬದುಕುವ ಹಕ್ಕಿಯಾಗಬೇಕು! ಇದರಲ್ಲಿ ಕೂತುಕೊಂಡು ಆಕಾಶ ನೋಡಬೇಕು. ಸೂರ್ಯನನ್ನು ನೋಡಬೇಕು. ಸುತ್ತಲಿನ ಜಗತ್ತನ್ನು ನೋಡಬೇಕು. ಅದಕ್ಕೆ ಈ ಕೋಣೆಯಲ್ಲಿ ಸರಿಯಾದ ವಾತಾವರಣವಿದೆ! ನಾನು ಇಲ್ಲಿದ್ದು ಏನಾದರೂ ಬರೆಯಲು ಸಾಧ್ಯ. ಕೈಲಾಸಂ ಹೀಗನ್ನುತ್ತಿದ್ದರಂತೆ. ನಾನು ಕೋಣೆ ಒಂದು ಬಚ್ಚಲು, ನಾನಿಲ್ಲಿ ಹಕ್ಕಿ...'' ಮಾತು ನಿಲ್ಲದೆ ಓಡುತ್ತಿತ್ತು.
"ಅದ್ಸರಿ...ನೀನು ನನ್ನ ನೋಡಲು ಬಂದ ಮೊದಲ ದಿನ ನೀಟಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದೆ. ಯಾರು ಬಟ್ಟೆಗೆ ಇಸ್ತ್ರೀ ಮಾಡಿಕೊಟ್ರು?''
ನಗುತ್ತಾ ಅವನಂದ, "ನಾನು ಹೆಂಗೆ ಬೇಕೋ ಹಾಗೇ ಇದ್ದೋನು. ಆದ್ರೆ ಅವತ್ತು ಹಿಂಗೆ ಇದ್ರೆ ನೀನು ಕೈಕೊಟ್ರೆ ಅನಿಸುತ್ತು. ಅದಕ್ಕೆ ನೀಟಾಗಿ ಬಂದಿದ್ದೆ'' ಎಂದು ತುಂಟ ನಗೆ ನಕ್ಕ''.
***********
ಅಮ್ಮಂಗೂ ಮರೆತ ಕಾಗದ
ಊರಿಗೆ ಹೋದಾಗ ಅಮ್ಮ ಹೇಳುತ್ತಾಳೆ, "ಭಾಳ ಬದಲಾಗಿದ್ದೀ. ಮೊದಲಿನ ಮುಗ್ಧತೆ, ಜನ ನೋಡಿದರೆ ಭಯ ಎಲ್ಲವೂ ಮಾಯ. ಅಂದಹಾಗೆ ಈಗ ಕಾಗದ ಬರೆಯುವುದೇ ಇಲ್ಲ, ಏನ್ ಸೋಮಾರಿತನ ನಿಂಗೆ?''
ಅಮ್ಮನ ಮಾತು ಮುಗಿಯುವ ಮುನ್ನ
"ಫೋನ್ ಇದೆ...ಇನ್ನೇನು ಕಾಗದ ಬರೆಯೋದು? ಕಂಪ್ಯೂಟರ್ ನಿಂಗೆ ಅರ್ಥವಾಗಿಲ್ಲಾಂದ್ರೆ ಪಕ್ಕದ್ಮನೆ ರಮೇಶಂಗೆ ಗೊತ್ತು. ಅವ ನನ್ನನ್ನು ಕಂಪ್ಯೂಟರ್ನಲ್ಲಿ ತೋರಿಸ್ತಾನೆ.'' ನನ್ನ ಮಾತು ಕೇಳಿ ಅಮ್ಮಂಗೆ ಅಚ್ಚರಿ.
ನಾನು ಮತ್ತೆ ಬೆಂಗಳೂರಿಗೆ. ಸ್ಕೈಪ್ ತೆರೆಯುತ್ತೇನೆ. ಕಂಪ್ಯೂಟರ್ ನ ಆ ಪುಟ್ಟ ಕಿಂಡಿಯಲ್ಲಿ ನನ್ ಮಾತು, ಮುಖ ನೋಡಿ ಅಮ್ಮಂಗೆ ಜಗತ್ತು ಗೆದ್ದಂಥ ಖುಷಿ. ಈಗ ಕಾಗದ ಬರೆಯಲು ಹೇಳುವುದು ಅಮ್ಮಂಗೂ ಮರೆತುಹೋದಂತಿದೆ.

ಬಯಕೆಯ ಬಯಲ ಹುಡುಕಾಟ


ಕನಸ ಕಸುವೂ ಬೇಕು....
ಯಶದ ಹಾದಿಯ ಹೆಜ್ಜೆಗೆ 
ಬಯಕೆ ಬಯಲು 
ಎರಡೂ ಬೇಕು 
ಸಾಧನೆಯ ಕಾಲ್ಗೆಜ್ಜೆಗೆ...
ಆಟೋಗ್ರಾಫ್ ನ ಮೊದಲ ಪುಟದಲ್ಲಿದ್ದ ಸಾಲುಗಳನ್ನು ಮತ್ತೆ ಮತ್ತೆ ಓದಿಕೊಂಡೆ. ಪ್ರೀತಿಯ ಟೀಚರ್ ಬರೆದ ಸಾಲುಗಳಿವು. ಬೆಟ್ಟದಷ್ಟು ಕನಸುಗಳು ಎದೆಯೊಳಗೆ ಬೆಚ್ಚಗೆ ಮಲಗಿದ್ದವು. ಬೆಂಗಳೂರಿಗೆ ಹೋದರೆ ಏನಾದರೂ ಕೆಲಸ ಸಿಗುತ್ತೆ ಎಂಬ ಬಲ್ಲವರು ಹೇಳಿದ ಮಾತಿನಲ್ಲಿ ಗಟ್ಟಿ ನಂಬಿಕೆಯಿತ್ತು.

ಎಂಟನೇ ತರಗತಿಯಿಂದ ಗೀಚಿದ ಹಾಳು-ಮೂಳು ಬರಹಗಳು. ಹಳೇ ಡೈರಿಗಳು, ಪೆನ್ನು, ಪುಸ್ತಕ, ಅಮ್ಮ ಕೊಡಿಸಿದ ಭಗವದ್ಗೀತೆ, ಎಸ್ ಎಸ್ ಎಲ್ ಸಿ, ಡಿಗ್ರಿ , ಅಂಕಪಟ್ಟಿ, ಎಲೆಕ್ಷನ್ ಕಾರ್ಡ್, ಶಾಲೆ-ಕಾಲೇಜು ಆಟೋಗ್ರಾಫ್ ... ಎಲ್ಲವನ್ನೂ ಪ್ಯಾಕ್ ಮಾಡಿದ್ದೆ. ಮನಸ್ಸಿಗೆ ಮುಗ್ಧತೆಯ ಸಿಂಗಾರ...ಇದಕ್ಕೇ ಇರಬೇಕು ಹೊರಡುವ ಮುಂಚೆ ಅಮ್ಮ, ನನ್ನ ಪ್ರೀತಿಯ ಮೇಷ್ಟ್ರುಗಳು ಗಂಟೆ-ಗಟ್ಟಲೆ ಕುಳ್ಳಿರಿಸಿ ಕಿವಿಮಾತು ಹೇಳಿದ್ದು,

ರಾತ್ರಿ 9, ಬಸ್ ಹೊರಡುವ ಸಮಯ.
ಬಸ್ ಹತ್ತುವ ಮೊದಲು "ಬೆಂಗಳೂರು ಹೇಗಿದೆ ಎಂದು ಕಾಗದ ಹಾಕು. ಅಲ್ಲಿ ಜಾಗ ಹೇಗಿದೆ ಹೇಳು...ಮುಂದಿನ ಸಲ ಹೂಗಿಡ ತಕ್ಕೋಂಡು ಹೋಗಿವಿಯಂತೆ' ಅಮ್ಮ ನುಡಿದಳು.
ಕಲ್ಪನೆಯ ಬೆಂಗಳೂರು ತಲೆಯೊಳಗೆ ಗಿರಕಿ ಹೊಡೆಯತೊಡಗಿತು. "ಬೆಂಗಳೂರಲ್ಲಿ ಎಲ್ಲಾರೂ ಕೆಲಸ ಮಾಡೋರೇ. ಬೆಳಿಗ್ಗೆ ಮನೆಗೆ ಬೀಗ ಜಡಿದು ಹೋದರೆ ಸಂಜೆ ಸೂರ್ಯ ಕಂತುವ ಹೊತ್ತಿಗೆ ಮನೆ ಸೇರುವುದು. ಜನಜಂಗುಲಿ ಹೆಚ್ಚು, ತುಂಬಾ ಜೋಪಾನವಾಗಿರಬೇಕು. ಎಲ್ಲಾರೂ ಒಳ್ಳೆಯವರೆಂದು ನಂಬುವುದು ನಮಗೆ ನಾವೇ ಮೋಸ ಮಾಡಿಕೊಂಡಂತೆ. ಬೆಂಗಳೂರು ರಾತ್ರಿ ನೋಡಕೆ ಚೆಂದ, ಎತ್ತಲೂ ಲೈಟ್. ದೀಪದ ಬೆಳಕಿನಲ್ಲಿ ಓಡುವ ವಾಹನಗಳು, ಶಾಪಿಂಗ್ ಮಾಡುವವರ ಸಂಭ್ರಮ, ಇಲ್ಲಿ ರಾತ್ರಿ-ಹಗಲಿಗೆ ವ್ಯತ್ಯಾಸವೇ ಕಾಣುವುದಿಲ್ಲ' ಬೆಂಗಳೂರನ್ನು ಬಲ್ಲವರ ಮಾತುಗಳು ಮತ್ತೆ ಮತ್ತೆ ನೆನಪಾಗತೊಡಗಿದವು.

ಎಷ್ಟೊಂದು ನೆನಪುಗಳು...
ಯೋಚನೆಗಳ ನೆಗೆತ. ನಿಲ್ಲು ಅಂದರೆ ನಿಲ್ಲುತ್ತಿಲ್ಲ. ನನ್ನ ಹೊತ್ತ ಬಸ್ ಶಿರಾಡಿಘಾಟ್ ಹತ್ತುತ್ತಿತ್ತು. ತಿರುವುಗಳನ್ನು ದಾಟುವಾಗ ಬಸ್ ನ ಓಲಾಟಕ್ಕೆ ಸಕಲೇಶಪುರ ತಲುಪುವಷ್ಟರಲ್ಲಿ ಮೈ-ಕೈ ನೋವು. ಬೆಳಗಿನ ಜಾವ ಬಸ್ ಎಲ್ಲೋ ನಿಂತಿತು. ಬ್ಯಾಗ್ ಬಿಟ್ಟು ಇಳಿಯುವ ದೈರ್ಯ ಇಲ್ಲ, ಅಷ್ಟು ದೂರದ ಪ್ರಯಾಣ ಅದೇ ಮೊದಲು..ಯಾರಾದ್ರೂ ಹೊತ್ತೊಯ್ದರೆ ಎನ್ನುವ ಭಯ. ಸೂರ್ಯ ಕಾಣುವ ತನಕ ನನ್ನ ಕಣ್ಣಿಗೆ ಮಾತ್ರ ನಿದ್ದೆ ಹತ್ತಲಿಲ್ಲ.
ಬೆಂಗಳೂರು ನಗರಕ್ಕೆ ಸ್ವಾಗತ. ದೊಡ್ಡ ಹಸಿರು ಬೋರ್ಡ್ ಕಾಣಿಸಿತು.
ಕಂಡಕ್ಟರ್ ಗೆ ಕೇಳಿದೆ, "ಬೆಂಗಳೂರು ಅಂದ್ರೆ ಇದೇನಾ? ಇಳಿಯುವ ಜಾಗ ಮೆಜೆಸ್ಟಿಕ್ ಇನ್ನೆಷ್ಟು ದೂರವಿದೆ?''.
ನಿದ್ದೆಗಣ್ಣಲ್ಲಿ ಕಂಡಕ್ಟರ್ ಉಸುರಿದ; "ಹೇಳ್ತೀನಮ್ಮಾ....ಕೂತ್ಕೋ. ಸಿಟಿಗೆ ಇನ್ನೂ ದೂರವಿದೆ''
ನನ್ನೊಳಗೆ ಸಣ್ಣ ಗೊಂದಲ.
"ಮೆಜೆಸ್ಟಿಕ್ ಮತ್ತು ಸಿಟಿ ಬೇರೇನಾ?''
"ತಲೆ ತಿನ್ಬೇಡ. ಹೇಳ್ತೀನಿ. ಊರು ಗೊತ್ತಿಲ್ಲದ್ದು ಒಂಟಿ ಬಂದ್ ಬಿಡ್ತವೆ'' ದೊಡ್ಡ ಕಣ್ಣು ಮಾಡಿದ. ನಾನು ಸುಮ್ಮನಾದೆ.
ದೊಡ್ಡ ದೊಡ್ಡ ಗಾಡಿಗಳು., ಕಟ್ಟಡಗಳು, ಜನಜಂಗುಳಿ, ಫ್ಲೈ ಓವರ್ಗಳು, ಇನ್ನೊಂದೆಡೆ ಧೂಳು, ಗೋಡೆಗೆ ಉಚ್ಚೆ ಹೊತ್ಯೋರು, ಬೀದಿ ಬದಿಯಲ್ಲೇ ಮಲಗಿ ಎದ್ದೇಳುತ್ತಿರುವವರು, ಬೀದಿ ಗುಡಿಸುವವರು, ತರಕಾರಿ ಮಾರುವವರು, ಚಿಂದಿ ಆಯುವವರು, ಶಿಸ್ತು-ಅಶಿಸ್ತಿನ ಸಿಪಾಯಿಗಳು...ಎಲ್ಲರೂ ಒಟ್ಟಾಗಿ ನನಗೆ ಸ್ವಾಗತ ಕೋರಿದಂತಾಯಿತು.

ಮೆಜೆಸ್ಟಿಕ್...ಕಂಡಕ್ಟರ್ ಕೂಗು. 
ಎಲ್ಲರೂ ಬ್ಯಾಗ್ ಹೆಗಲಿಗೇರಿಸಿದರು. ನಾನೂ ಕೂಡ.
"ಪ್ಲಾಟ್ ನಂಬರ್ 8, ಬಸ್ ನಂ. 60, ಜಯನಗರ 4ನೇ ಬ್ಲಾಕ್' ಗೆಳತಿ ಕೊಟ್ಟ ವಿಳಾಸ.
ಮತ್ತೊಂದು ಬಸ್ ಹತ್ತಿದೆ. ಗಿಜಿಬಿಜಿ ಜನರು. ಅರ್ಧ ಗಂಟೆ ದಾರಿ. ಇಳಿಯುವ ಜಾಗ ಬಂತು.

                                            *****
ಎದೆಯೊಳಗಿದ್ದ ಬೆಚ್ಚಗಿನ ಕನಸುಗಳಿಗೆ ಹೊರಬರುವ ತವಕ. ನನಗೆ ಕನಸುಗಳನ್ನು ಕಸುವಾಗಿಸುವ ಬಯಕೆ. ಬಯಲು ಹುಡುಕುತ್ತಾ ಮುಂದಡಿ ಇಟ್ಟೆ.

Thursday, April 4, 2013

ಭಾವಕ್ಕೆ ದಕ್ಕಿದ ಪ್ರಸಂಗಗಳು--ಭಾಗ-2


ಅಮ್ಮನ ದೇವರಮೂಲೆ 
ಅಂದು ನಮಗಿಬ್ಬರಿಗೆ ಜೋರು ಜ್ವರ. ಅಮ್ಮ ಇಬ್ಬರನ್ನೂ ನಿಲ್ಲಿಸಿ ದೃಷ್ಟಿ ತೆಗೆದಳು. ದೃಷ್ಟಿ ತೆಗೆದ ಕಡ್ಡಿಗೆ ಬೆಂಕಿ ಹಚ್ಚಿದಾಗ ಪಟಪಟ ಎಂದು ಸದ್ದು ಮಾಡಿತು.
ಅಮ್ಮ ಬಂದು ಹೇಳಿದಳು,"ನೋಡಿ ಇಬ್ರಿಗೂ ದೃಷ್ಟಿ ಬಿದ್ದಿದೆ. ಅದಕ್ಕೆ ನೋಡು ಕಡ್ಡಿ ಪಟಪಟ ಎಂದು ಉರಿಯತೊಡಗಿತು'' ಎಂದು. ಇಬ್ಬರಿಗೂ ತುಟಿಯಂಚಿನಲ್ಲಿ ನಗು. ವೈದ್ಯರಿಗೆ ಕೊಟ್ಟ ದುಡ್ಡು ವೇಸ್ಟ್ ಆಯಿತಲ್ಲಾ...ಅಂಥ ಮನಸ್ಸಲ್ಲಿ.
ಮರುದಿನ ಬೆಳಿಗೆದ್ದು ನೋಡಿದರೆ ಅಡುಗೆ ಮನೇಲಿ ಪಾತ್ರೆ ತೊಳೆಯುವ ಸಿಂಕ್ ನ ಪಕ್ಕ ಹಿತ್ತಾಳೆ ಚೊಂಬಲ್ಲಿ ನೀರು, ನೀರ ಮೇಲೆ ತುಳಸಿ ದಳಗಳು. ನಾವಿಬ್ಬರೂ ಕಾಫಿ ಕುಡಿದು ಲೋಟ ತೊಳೆಯಲು ಹೋದರೆ,
"ಅಲ್ಲಿ ಮುಸುರೆ ಮಾಡಬೇಡಿ. ಅದು ದೇವರ ಮೂಲೆ ಅಂತೆ. ಅಲ್ಲಿ ನೀರಿಟ್ಟರೆ ಆರೋಗ್ಯ ಚೆನ್ನಾಗಿರುತ್ತೆ ಅಂತೆ'' ಅಮ್ಮನ ಆರ್ಡರ್.
"ಯಾರಮ್ಮಾ ಹೇಳಿದ್ದು ನಿಂಗೆ?"
"ನನ್ನ ವಾಕಿಂಗ್ ಫ್ರೆಂಡ್''
"ಅದೇನು ನಿನ್ ಫ್ರೆಂಡ್ ವಾಕಿಂಗ್ ರೂಟ್ ನಿಂದ ಅಡುಗೆಮನೆಗೂ ಬಂದ್ರಾ''
"ಹ್ಲೂಂ..ಅವರಿಗೆ ಜ್ಯೋತಿಷ್ಯ, ವಾಸ್ತು ಎಲ್ಲಾ ಗೊತ್ತಂತೆ. ನಾವು ಓಡಾಡುವ ಬಾಗಿಲು ಬದಲಾಗಬೇಕಂತೆ'
"ಅಮ್ಮಾ...ಅದೇನಿದ್ರೂ ವಾಕಿಂಗ್ ರೂಟ್ ಗೆ ಅಂದುಬಿಡು'' ಎಂದು ನನ್ನವ ಗದರಿದ. ಅಮ್ಮನ ಮುಖ ಸಣ್ಣಗಾಯಿತು.
ಆದರೆ, ಅಡುಗೆಮನೆಯ "ದೇವರ ಮೂಲೆ''ಯಲ್ಲಿ ಇಂದಿಗೂ ಚೊಂಬು ನೀರು ತಪ್ಪಿಲ್ಲ. ಅಲ್ಲಿ ಮುಸುರೆ ಪಾತ್ರೆಗಳನ್ನು ತೊಳೆಯುವಾಗಿಲ್ಲ. ಹಾಗಾಗಿ, ಮನೆಗೆಲಸದವಳಿಗೆ ದಿನಾ ಬೀಳುವ ಪಾತ್ರೆಗಳು ಹೆಚ್ಚಾಗುತ್ತಿವೆ. ಅವಳು "ಪಾತ್ರೆಗಳು ಜಾಸ್ತಿಯಾಗುತ್ತಿವೆ. ಸಂಬಳ ಜಾಸ್ತಿ ಕೊಡಿ'' ಎಂದು ರಚ್ಚೆ ಹಿಡಿದಿದ್ದಾಳೆ.
*********
ಬಣ್ಣದ ನಾಚಿಕೆ

ಅಂದು ನನ್ನೊಳಗೆ ಮೊಗ್ಗು ಮಲ್ಲಿಗೆ ಬಿರಿದ ಖುಷಿ. ಅಲ್ಲಿಯವರೆಗೆ ನಾಚಿಕೆ ಏನೂಂತ ಗೊತ್ತಿರಲಿಲ್ಲ. ಆದರೆ, ಅಂದು ಮಾತ್ರ ಸುಮ್ಮ-ಸುಮ್ಮನೆ ನಾಚಿಕೊಂಡಿದ್ದೆ. ಕಾರಣಗಳನ್ನು ಕೇಳಿದರೆ ಉತ್ತರ "ಗೊತ್ತಿಲ್ಲ''. ಆದರೆ ಮಾತು, ಮಾತಿಗೂ ಕೆನ್ನೆಯಲ್ಲಿ ...ಸೂರ್ಯೋದಯವಾಗುತ್ತಿತ್ತು,
ಮೈಯಲ್ಲಿ ಅದೇನೋ ಪುಳಕ... ಹೆಣ್ತನ ನನ್ನೊಳಗೆ ಹಡೆದಂತೆ. ತಲೆಯೊಳಗೆ ಕದ್ದು ಕೇಳಿದ ಸೀತಕ್ಕನ ಮಗಳು ದೊಡ್ಡವಳಾದ ಕತೆ...
ಎಲ್ಲವೂ ಸೇರಿ ಪಾದವನ್ನೇ ದಿಟ್ಟಿಸುತ್ತಿದ್ದ ಕಣ್ಣುಗಳಲ್ಲಿ ನಾಚಿಕೆ ಬಣ್ಣ ಪಡೆದಿತ್ತು...ಸುಮ್ಮನೆ ನಾಚಿಕೆ...ಕಾರಣಗಳೇ ಇಲ್ಲದ ನಾಚಿಕೆ.
ಅಂದು ಅಮ್ಮ ಉದ್ದ ಜಡೆ ಹಾಕಿ ಮಲ್ಲಿಗೆ, ಕೆಂಗುಲಾಬಿ ಮುಡಿಸಿದ್ದಳು. ಜಡೆ ಕೆನ್ನೆಬದಿಯಿಂದ ಕೆಳಗಿಳಿದಿತ್ತು...ಜಡೆಯ ತುದಿಯಲ್ಲಿ ಆಡುವ ನನ್ನ ಕಿರುಬೆರಳುಗಳಿಗೂ ನಾಚಿಕೆಯ ಹಂಗು. ಥತ್, ಬೆರಳನ್ನೂ ಬಿಡಲಿಲ್ಲ ನಾಚಿಕೆ! ವಾರದ ನಂತರ ಶಾಲೆಗೆ ಹೋಗಿದ್ದೆ. ಅಮ್ಮ ಕರೆದುಕೊಂಡು ಹೋಗಿ ಬಿಟ್ಟುಬಂದಿದ್ದಳು. "ಏಕೆ ರಜೆ'' ಎನ್ನುವುದಕ್ಕೆ ಅಮ್ಮನೇ ಹೆಡ್ ಮಾಸ್ತರ್ ಗೆ ತಿಳಿಸಿದ್ದಳು. ಆದರೆ, ಮುಡಿತುಂಬಾ ಮುಡಿದ ಘಮ್ಮನೆನ್ನುವ ಮಲ್ಲಿಗೆ ನೋಡಿ ಮೇಷ್ಟ್ರು ತರಗತಿಯಲ್ಲಿ ಕಿಸಕ್ಕನೆ ನಕ್ಕಾಗ ನನ್ನ ಕೆನ್ನೆಯಲ್ಲಿ ಹೋಳಿಯ ರಂಗಿನಾಟ!...ಥತ್...ಹಾಳು ನಾಚಿಕೆ...ಇಲ್ಲಿಯವರೆಗೆ ಇಲ್ಲದ್ದು ಈಗ್ಯಾಕೆ ಬಂತು? ಸಣ್ಣದೊಂದು ಹುಸಿಮುನಿಸು ನಾಚಿಕೆ ಮೇಲೆ!
ನಾಚಿಕೆ...ನಾಚಿಕೆ...ನಾಚಿಕೆ..ನನ್ನ ನಾನೇ ಮುಟ್ಟಿ ನೋಡಿಕೊಂಡು ಖುಷಿಪಡವಾಗಲೂ ಸುಮ್ಮ-ಸುಮ್ಮನೆ ನಾಚಿಕೆ."ನೀನು ದೊಡ್ಡವಳಾಗಿದ್ದೀಯಾ'' ಶಾಲೆಗೆ ಹೊರಡುವಾಗ ಅಜ್ಹಿಯ ಹಿತನುಡಿ ಕೇಳಿದಾಗಲೂ ನನ್ನೊಳಗೊಂದು ಕಿರುನಾಚಿಕೆ. ಬೇಡ, ಬೇಡ ಎಂದರೂ ನನ್ನ ಬಳಿ ಸರಿದಿತ್ತು ನಾಚಿಕೆ. ನನ್ನ ಕಣ್ಣಲ್ಲಿ, ಕಣ್ಣುರೆಪ್ಪೆಯಲ್ಲಿ, ನಗೆಮಾತಿನಲ್ಲಿ, ಅಂಗೈ&ಪಾದಗಳ ಬೆರಳ ತುದಿಯಲ್ಲಿ, ಕೆನ್ನೆಯಲ್ಲಿ...ಎಲ್ಲಾ ಕಡೆಯೂ ನಾಚಿಕೆಯ ಚಿತ್ತಾರ.

********
ನಾಲ್ಕನೇ ಪುಟದ ಭವಿಷ್ಯ
ಬೆಳಿಗ್ಗೆದ್ದ ತಕ್ಷಣ ಅಮ್ಮಂಗೆ ಪತ್ರಿಕೆ ಓದೋ ಅಭ್ಯಾಸ. ನನಗಿಂತ ಮೊದಲೇ ಏಳುವ ಅಮ್ಮ ಮೊದಲು ಹೊಸಿಲು ಗುಡಿಸಿ ರಂಗೋಲಿ ಹಾಕಿ ನಮ್ಮನೆಗೆ ಬರುವ ಪತ್ರಿಕೆಯ ನಾಲ್ಕನೇ ಪುಟವನ್ನು ತೆರೆಯುವಳು!. ಅಲ್ಲಿ ನೋಡುವುದು ದಿನಭವಿಷ್ಯ. ನಾವು ಎದ್ದ ತಕ್ಷಣ ಭವಿಷ್ಯವನ್ನು ಜ್ಯೋತಿಷಿಯಂತೆ ಬಡಬಡ ಎಂದು ಹೇಳೋಳು. ಒಂದು ದಿನ ನನ್ನವನ ಭವಿಷ್ಯ ಹೀಗಿತ್ತು.
"ಈ ದಿನವನ್ನು ನೀವು ಸಂತೋಷವಾಗಿ ಕಳೆಯಲಿದ್ದೀರಿ. ಮನೆಯಲ್ಲಿ ಎಲ್ಲರಿಗೂ ಶುಭಸುದ್ದಿ ನೀಡುವಿರಿ. ನಿಮ್ಮ ಬದುಕಿನಲ್ಲಿ ಹೊಸ ವ್ಯಕ್ತಿಯೊಬ್ಬರ ಪ್ರವೇಶವಾಗಲಿದೆ...'' ಸೋಫಾ ಮೇಲೆ ಕುಳಿತ ನನ್ನವನ ಮುಖದಲ್ಲಿ ಕಳ್ಳನಗು. ಯಾಕೋ ಅಮ್ಮ ಓದುವ ಧಾಟಿ ಕೇಳಿ ನನ್ನೆದೆ ಢವಢವ. ಅಮ್ಮನ ಮುಖದಲ್ಲಿ ಸಂತೋಷದ ಹೊಂಬೆಳಕು, ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟು ಖುಷಿ.
ಸ್ವಲ್ಪವೂ ನಗದ ನನ್ನ ನೋಡಿ ಅಮ್ಮನಿಗೆ ಅಚ್ಚರಿ. "ಯಾಕಮ್ಮಾ, ಒಳ್ಳೆಯ ಭವಿಷ್ಯ ಅಲ್ವೇನೇ? ಒಳ್ಳೆ ಬೆಪ್ಪು ತಕ್ಕಡಿ ತರ ನಿಂತಿದ್ದಿ. ಹೊಸ ವ್ಯಕ್ತಿಯ ಪ್ರವೇಶ ಅಂದ್ರೆ ನಮ್ಮನೆಗೆ ಹೊಸ ಕಂದಮ್ಮ ಬರುತ್ತೆ ಅಂತ. ಪೆದ್ದಿ ಕಣೇ ನೀನು'' ಎಂದಳು. ನನ್ನ ಸಂತೈಸುತ್ತಾ ನನ್ನವನಂದ
"ನಿನ್ ಬಿಟ್ಟು ಯಾವ ಹುಡುಗಿನೂ ಕಣ್ಣೆತ್ತಿ ನೋಡದವನು ನಿನ್ ಗಂಡ ಎಂದು ಹೆಮ್ಮೆ ಪಡು''. ಅಮ್ಮನೆಂದಳು "ಈ ವಯಸ್ಸಲ್ಲಿ ನಾನು ಟ್ಯೂಬ್ ಲೈಟ್. ಈ ಹುಡುಗ್ರ ಯೋಚನೆಗಳೇ ಅರ್ಥವಾಗೋಲ್ಲ''.