Thursday, April 18, 2013

ಬಯಕೆಯ ಬಯಲ ಹುಡುಕಾಟ


ಕನಸ ಕಸುವೂ ಬೇಕು....
ಯಶದ ಹಾದಿಯ ಹೆಜ್ಜೆಗೆ 
ಬಯಕೆ ಬಯಲು 
ಎರಡೂ ಬೇಕು 
ಸಾಧನೆಯ ಕಾಲ್ಗೆಜ್ಜೆಗೆ...
ಆಟೋಗ್ರಾಫ್ ನ ಮೊದಲ ಪುಟದಲ್ಲಿದ್ದ ಸಾಲುಗಳನ್ನು ಮತ್ತೆ ಮತ್ತೆ ಓದಿಕೊಂಡೆ. ಪ್ರೀತಿಯ ಟೀಚರ್ ಬರೆದ ಸಾಲುಗಳಿವು. ಬೆಟ್ಟದಷ್ಟು ಕನಸುಗಳು ಎದೆಯೊಳಗೆ ಬೆಚ್ಚಗೆ ಮಲಗಿದ್ದವು. ಬೆಂಗಳೂರಿಗೆ ಹೋದರೆ ಏನಾದರೂ ಕೆಲಸ ಸಿಗುತ್ತೆ ಎಂಬ ಬಲ್ಲವರು ಹೇಳಿದ ಮಾತಿನಲ್ಲಿ ಗಟ್ಟಿ ನಂಬಿಕೆಯಿತ್ತು.

ಎಂಟನೇ ತರಗತಿಯಿಂದ ಗೀಚಿದ ಹಾಳು-ಮೂಳು ಬರಹಗಳು. ಹಳೇ ಡೈರಿಗಳು, ಪೆನ್ನು, ಪುಸ್ತಕ, ಅಮ್ಮ ಕೊಡಿಸಿದ ಭಗವದ್ಗೀತೆ, ಎಸ್ ಎಸ್ ಎಲ್ ಸಿ, ಡಿಗ್ರಿ , ಅಂಕಪಟ್ಟಿ, ಎಲೆಕ್ಷನ್ ಕಾರ್ಡ್, ಶಾಲೆ-ಕಾಲೇಜು ಆಟೋಗ್ರಾಫ್ ... ಎಲ್ಲವನ್ನೂ ಪ್ಯಾಕ್ ಮಾಡಿದ್ದೆ. ಮನಸ್ಸಿಗೆ ಮುಗ್ಧತೆಯ ಸಿಂಗಾರ...ಇದಕ್ಕೇ ಇರಬೇಕು ಹೊರಡುವ ಮುಂಚೆ ಅಮ್ಮ, ನನ್ನ ಪ್ರೀತಿಯ ಮೇಷ್ಟ್ರುಗಳು ಗಂಟೆ-ಗಟ್ಟಲೆ ಕುಳ್ಳಿರಿಸಿ ಕಿವಿಮಾತು ಹೇಳಿದ್ದು,

ರಾತ್ರಿ 9, ಬಸ್ ಹೊರಡುವ ಸಮಯ.
ಬಸ್ ಹತ್ತುವ ಮೊದಲು "ಬೆಂಗಳೂರು ಹೇಗಿದೆ ಎಂದು ಕಾಗದ ಹಾಕು. ಅಲ್ಲಿ ಜಾಗ ಹೇಗಿದೆ ಹೇಳು...ಮುಂದಿನ ಸಲ ಹೂಗಿಡ ತಕ್ಕೋಂಡು ಹೋಗಿವಿಯಂತೆ' ಅಮ್ಮ ನುಡಿದಳು.
ಕಲ್ಪನೆಯ ಬೆಂಗಳೂರು ತಲೆಯೊಳಗೆ ಗಿರಕಿ ಹೊಡೆಯತೊಡಗಿತು. "ಬೆಂಗಳೂರಲ್ಲಿ ಎಲ್ಲಾರೂ ಕೆಲಸ ಮಾಡೋರೇ. ಬೆಳಿಗ್ಗೆ ಮನೆಗೆ ಬೀಗ ಜಡಿದು ಹೋದರೆ ಸಂಜೆ ಸೂರ್ಯ ಕಂತುವ ಹೊತ್ತಿಗೆ ಮನೆ ಸೇರುವುದು. ಜನಜಂಗುಲಿ ಹೆಚ್ಚು, ತುಂಬಾ ಜೋಪಾನವಾಗಿರಬೇಕು. ಎಲ್ಲಾರೂ ಒಳ್ಳೆಯವರೆಂದು ನಂಬುವುದು ನಮಗೆ ನಾವೇ ಮೋಸ ಮಾಡಿಕೊಂಡಂತೆ. ಬೆಂಗಳೂರು ರಾತ್ರಿ ನೋಡಕೆ ಚೆಂದ, ಎತ್ತಲೂ ಲೈಟ್. ದೀಪದ ಬೆಳಕಿನಲ್ಲಿ ಓಡುವ ವಾಹನಗಳು, ಶಾಪಿಂಗ್ ಮಾಡುವವರ ಸಂಭ್ರಮ, ಇಲ್ಲಿ ರಾತ್ರಿ-ಹಗಲಿಗೆ ವ್ಯತ್ಯಾಸವೇ ಕಾಣುವುದಿಲ್ಲ' ಬೆಂಗಳೂರನ್ನು ಬಲ್ಲವರ ಮಾತುಗಳು ಮತ್ತೆ ಮತ್ತೆ ನೆನಪಾಗತೊಡಗಿದವು.

ಎಷ್ಟೊಂದು ನೆನಪುಗಳು...
ಯೋಚನೆಗಳ ನೆಗೆತ. ನಿಲ್ಲು ಅಂದರೆ ನಿಲ್ಲುತ್ತಿಲ್ಲ. ನನ್ನ ಹೊತ್ತ ಬಸ್ ಶಿರಾಡಿಘಾಟ್ ಹತ್ತುತ್ತಿತ್ತು. ತಿರುವುಗಳನ್ನು ದಾಟುವಾಗ ಬಸ್ ನ ಓಲಾಟಕ್ಕೆ ಸಕಲೇಶಪುರ ತಲುಪುವಷ್ಟರಲ್ಲಿ ಮೈ-ಕೈ ನೋವು. ಬೆಳಗಿನ ಜಾವ ಬಸ್ ಎಲ್ಲೋ ನಿಂತಿತು. ಬ್ಯಾಗ್ ಬಿಟ್ಟು ಇಳಿಯುವ ದೈರ್ಯ ಇಲ್ಲ, ಅಷ್ಟು ದೂರದ ಪ್ರಯಾಣ ಅದೇ ಮೊದಲು..ಯಾರಾದ್ರೂ ಹೊತ್ತೊಯ್ದರೆ ಎನ್ನುವ ಭಯ. ಸೂರ್ಯ ಕಾಣುವ ತನಕ ನನ್ನ ಕಣ್ಣಿಗೆ ಮಾತ್ರ ನಿದ್ದೆ ಹತ್ತಲಿಲ್ಲ.
ಬೆಂಗಳೂರು ನಗರಕ್ಕೆ ಸ್ವಾಗತ. ದೊಡ್ಡ ಹಸಿರು ಬೋರ್ಡ್ ಕಾಣಿಸಿತು.
ಕಂಡಕ್ಟರ್ ಗೆ ಕೇಳಿದೆ, "ಬೆಂಗಳೂರು ಅಂದ್ರೆ ಇದೇನಾ? ಇಳಿಯುವ ಜಾಗ ಮೆಜೆಸ್ಟಿಕ್ ಇನ್ನೆಷ್ಟು ದೂರವಿದೆ?''.
ನಿದ್ದೆಗಣ್ಣಲ್ಲಿ ಕಂಡಕ್ಟರ್ ಉಸುರಿದ; "ಹೇಳ್ತೀನಮ್ಮಾ....ಕೂತ್ಕೋ. ಸಿಟಿಗೆ ಇನ್ನೂ ದೂರವಿದೆ''
ನನ್ನೊಳಗೆ ಸಣ್ಣ ಗೊಂದಲ.
"ಮೆಜೆಸ್ಟಿಕ್ ಮತ್ತು ಸಿಟಿ ಬೇರೇನಾ?''
"ತಲೆ ತಿನ್ಬೇಡ. ಹೇಳ್ತೀನಿ. ಊರು ಗೊತ್ತಿಲ್ಲದ್ದು ಒಂಟಿ ಬಂದ್ ಬಿಡ್ತವೆ'' ದೊಡ್ಡ ಕಣ್ಣು ಮಾಡಿದ. ನಾನು ಸುಮ್ಮನಾದೆ.
ದೊಡ್ಡ ದೊಡ್ಡ ಗಾಡಿಗಳು., ಕಟ್ಟಡಗಳು, ಜನಜಂಗುಳಿ, ಫ್ಲೈ ಓವರ್ಗಳು, ಇನ್ನೊಂದೆಡೆ ಧೂಳು, ಗೋಡೆಗೆ ಉಚ್ಚೆ ಹೊತ್ಯೋರು, ಬೀದಿ ಬದಿಯಲ್ಲೇ ಮಲಗಿ ಎದ್ದೇಳುತ್ತಿರುವವರು, ಬೀದಿ ಗುಡಿಸುವವರು, ತರಕಾರಿ ಮಾರುವವರು, ಚಿಂದಿ ಆಯುವವರು, ಶಿಸ್ತು-ಅಶಿಸ್ತಿನ ಸಿಪಾಯಿಗಳು...ಎಲ್ಲರೂ ಒಟ್ಟಾಗಿ ನನಗೆ ಸ್ವಾಗತ ಕೋರಿದಂತಾಯಿತು.

ಮೆಜೆಸ್ಟಿಕ್...ಕಂಡಕ್ಟರ್ ಕೂಗು. 
ಎಲ್ಲರೂ ಬ್ಯಾಗ್ ಹೆಗಲಿಗೇರಿಸಿದರು. ನಾನೂ ಕೂಡ.
"ಪ್ಲಾಟ್ ನಂಬರ್ 8, ಬಸ್ ನಂ. 60, ಜಯನಗರ 4ನೇ ಬ್ಲಾಕ್' ಗೆಳತಿ ಕೊಟ್ಟ ವಿಳಾಸ.
ಮತ್ತೊಂದು ಬಸ್ ಹತ್ತಿದೆ. ಗಿಜಿಬಿಜಿ ಜನರು. ಅರ್ಧ ಗಂಟೆ ದಾರಿ. ಇಳಿಯುವ ಜಾಗ ಬಂತು.

                                            *****
ಎದೆಯೊಳಗಿದ್ದ ಬೆಚ್ಚಗಿನ ಕನಸುಗಳಿಗೆ ಹೊರಬರುವ ತವಕ. ನನಗೆ ಕನಸುಗಳನ್ನು ಕಸುವಾಗಿಸುವ ಬಯಕೆ. ಬಯಲು ಹುಡುಕುತ್ತಾ ಮುಂದಡಿ ಇಟ್ಟೆ.

1 comment:

sunaath said...

ಕನಸುಗಳನ್ನು ಹೊತ್ತು ಬೆಂಗಳೂರಿಗೆ ಬಂದು ಇಳಿದಿರಲ್ಲ! ಕನಸೆಲ್ಲ ನೆನಸಾಗಿರುವುದನ್ನು ನಾವು ಪ್ರತ್ಯಕ್ಷ ಕಾಣುತ್ತಲಿದ್ದೇವೆ. ಆದರೆ ಯಶಸ್ಸನ್ನು ತಲುಪುವ ಈ ಪಯಣದ ಹಾದಿಯಲ್ಲಿಯ ಸುಖ-ದುಃಖಗಳೇನು? ನಿಮ್ಮ ಅನುಭವಗಳನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ.