Wednesday, December 23, 2009

ಇದು ಬದುಕಿನ ವಿರೂಪವೇ?

ಅಂದು ಜಡಿಮಳೆ. ರಸ್ತೆ ಇಕ್ಕೇಲಗಳಲ್ಲಿ ನೀರು ತುಂಬಿ ಹರಿಯುತ್ತಿತ್ತು. ಎಲ್ಲಿ ನೋಡಿದ್ರೂ ಸಾಗರವೇ. ಸಾಗರದ ಮೇಲೆಯೇ ವಾಹನಗಳ ಸವಾರಿ. ನೋಡಿದರೂ ಟ್ರಾಫಿಕ್‌ ಜಾಮ್‌. ಬೆಂಗಳೂರಂದ್ರೆ ಇದೇನಾ? ಎಂದು ಅಚ್ಚರಿಯ ಕಣ್ಣುಗಳಿಂದ ದಿಟ್ಟಿಸುತ್ತಿದ್ದ ದಿನಗಳು. ರಾತ್ರಿ ಒಂಬತ್ತೂವರೆ. ನಾ ಕುಳಿತ ಬಸ್ಸು ಟಾ್ರಫಿಕ್‌ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಬಸ್ಸಲ್ಲಿ ಕುಳಿತೇ ಬೆಂಗಳೂರು ನೋಡುವ ತವಕ. ಮನೆ ಸೇರಲು ತಡವಾಯಿತು ಎನ್ನುವ ಭಯ ಮನದೊಳಗೆ. ಆದರೇನು ಇಷ್ಟು ಮಂದಿ ಬಸ್ಸಿನಲ್ಲಿದ್ದಾರಲ್ಲ ಎಂಬ ಭಂಡ ಧೈರ್ಯ ಬೇರೆ.

ಅದೇ ಪಕ್ಕದ ದಾರಿಯಲ್ಲಿ ಹಿಂಡು ಹಿಂಡು ಹುಡುಗರು. ಆ ಧಾರಾಕಾರ ಮಳೆಯಲ್ಲಿ ಚೆಂದದ ಹುಡುಗಿಯರು ಅಲ್ಲಲ್ಲಿ ನಿಂತಿದ್ದರು. ಬಿರುಸಿನಿಂದ ಸುರಿವ ಮಳೆಯನ್ನೂ ಲೆಕ್ಕಿಸದೆ! ಹಿಂಡು ಹಿಂಡಾಗಿ ಸಾಗುತ್ತಿದ್ದ ಹುಡುಗರು ಅವರ ಬಳಿಯಲ್ಲಿ ಅದೇನೋ ಮಾತನಾಡಿಕೊಳ್ಳುತ್ತಿದ್ದರು. ಪಿಸುಗುಟ್ಟುತ್ತಿದ್ದರು. ಕೆಲವು ಗಂಡಸರು ಬೈಕ್‌, ಕಾರು ನಿಲ್ಲಿಸಿ ಮಾತನಾಡಿಕೊಳ್ಳುತ್ತಿದ್ದರು. ಪಕ್ಕದಲ್ಲೇ ಸಾಗುತ್ತಿದ್ದ ಆಟೋ ಚಾಲಕರು ಅವರನ್ನು ಕಂಡು ಛೇಡಿಸುತ್ತಿದ್ದರು. ಆಗಿದ್ದರೂ ಆ ಹುಡುಗಿಯರ ಕಣ್ಣುಗಳು ಭರವಸೆಯಿಂದ ಸುತ್ತಲೂ ದಿಟ್ಟಿಸುತ್ತಿದ್ದರು. ಬಸ್ಸಿನಲ್ಲಿ ಕುಳಿತವರೆಲ್ಲ ಅವರತ್ತ ಅಸಹ್ಯ ದೃಷ್ಟಿಯಿಂದ ನೋಡಿ, ಅಶ್ಲೀಲ ಭಾಷೆಯಿಂದ ಬೈಯುತ್ತಿದ್ದರು ಆ ಹುಡುಗಿಯರನ್ನು, ಅವರ ಬಳಿ ಚೌಕಾಸಿ ಮಾಡುತ್ತಿದ್ದ ಗಂಡುಜೀವಗಳನ್ನಲ್ಲ!

ಮೊನ್ನೆ ಮೊನ್ನೆ ಯಾವುದೋ ಬರಹ ಓದುತ್ತಿದ್ದೆ. ಕುಸುಮಾ ಶಾನಭಾಗ ಅವರು ಬರೆದ ‘ಕಾಯಕ ಕಾರ್ಪಣ್ಯ’ ಪುಸ್ತಕದ ಕುರಿತು ಅಲ್ಲಿ ಪ್ರಸ್ತಾಪಿಸಲಾಗಿತ್ತು. ಆ ಕ್ಷಣ ಬೆಂಗಳೂರಿಗೆ ಬಂದ ಆರಂಭದಲ್ಲಿ ನಾ ಕಂಡ ಈ ದೃಶ್ಯಗಳು ಕಣ್ಣಮುಂದೆ ಮತ್ತೊಮ್ಮೆತೇಲಿಬಂದವು.
ಅಬ್ಬಾ! ನನ್ನೊಳಗೆ ಹುಟ್ಟಿದ ‘ಬದುಕೆಷ್ಟು ಕ್ರೂರ?’ ಎಂಬ ಮಿಲಿಯನ್‌ ಡಾಲರ್ ಪ್ರಶ್ನೆಗೆ ಎಂ.ಜಿ. ರೋಡ್‌, ಮುಂಬೈನ ಕಾಮಾಟಿಪುರ, ಪುಣೆಯ ಬುಧವಾರ ಪೇಟೆ ಕೂಡ ಉತ್ತರ ನೀಡಲಿಲ್ಲ!! ಆ ಬಗ್ಗೆ ಬಹಳಷ್ಟು ಓದಿದ್ದೆ, ಕೇಳಿದ್ದೆ. ಕೇಳಿದಾಗಲೆಲ್ಲ ಅಚ್ಚರಿಯ ಕಣ್ಣುಗಳಿಂದ ದಿಟ್ಟಿಸುತ್ತಿದ್ದೆ. ಆದರೆ, ಅಂದು ನಾ ಕಂಡ ದೃಶ್ಯವನ್ನು ನೆನೆಸಿಕೊಂಡಾಗ ನಮ್ಮ ಇಡೀ ವ್ಯವಸ್ಥೆಯ ಮೇಲೆಯೇ ಕೆಟ್ಟ ಸಿಟ್ಟು ಬಂದುಬಿಡುತ್ತದೆ.

ಹೌದು, ಮಾತೆಯರ ಕುರಿತಾಗಿ ಗೌರವದ ಮಾತುಗಳನಾಡುತ್ತೇವೆ. ಆದರೆ ಇನ್ನೊಂದೆಡೆ ಅವಳನ್ನು ಕಂಡು ಹೀಯಾಳಿಸುತ್ತೇವೆ. ಅವಳ ಆಂತರ್ಯವನ್ನು, ಅವಳ ಬದುಕನ್ನು ಕಂಡರಿಯಲು ಹೋಗುವುದಿಲ್ಲ. ಅಂದು ಬಸ್ಸಿನಲ್ಲಿ ಕುಳಿತವರೆಲ್ಲ ವ್ಯಂಗ್ಯವಾಗಿ ನಗುತ್ತಿದ್ದರೆ, ಆ ಒಂದು ಹುಡುಗಿಯ ಸುತ್ತ ಕನಿಷ್ಠ ನಾಲ್ಕೈದು ಹುಡುಗರು ಚೌಕಾಸಿ ಮಾಡುತ್ತಿದ್ದರು. ಅವಳೊಬ್ಬಳ ಬದುಕು ನಾಲ್ಕೈದು ಮಂದಿಯನ್ನು ಬಲಿತೆಗೆದುಕೊಳ್ಳುತ್ತಿತ್ತೇನೋ! ಎಂಬ ಭಾವ ಮನದೊಳಗೆ. ಥತ್‌, ಇದು ಬದುಕಿನ ವಿರೂಪವೇ? ಅವಳ ತಪ್ಪೇ? ಅಥವಾ ವ್ಯವಸ್ಥೆಯ ತಪ್ಪೇ? ಉತ್ತರ ಸಿಗಲೇ ಇಲ್ಲ.

Monday, November 16, 2009

ಕವಿತೆ

ನನ್ನೆದೆಯ ಪುಟಗಳಲಿ
ನಿನ್ನದೇ ಕವಿತೆ, ಚಿತ್ರಗಳು
ಕನಸಿನ ಕಂತೆಯೊಡನೆ
ಯಾರೂ ಓದದ ಕತೆಗಳು

ಪ್ರತಿ ಕವಿತೆಗೂ ಕತೆಗೂ
ಒಂದೊಂದು ನಿಲ್ದಾಣ
ಯಾವುದು ನಿಲ್ಲಲಿಲ್ಲ
ನಿನ್ನ ಸೆಳತಕ್ಕೆ ಗೆಳತಿ

ಕವಿತೆ-ಕತೆ ಹುಟ್ಟುವುದು
ಹೇಗೋ ಏನೋ ನಾ ಅರಿಯೆ
ಆದರೆ ಹೋಗದಿರು ಅದರಡಿ
ನಿನ್ನ ಸಹಿ ಹಾಕದೆ.

Sunday, October 11, 2009

ನಮ್ಮೊಂದಿಗೇ ನಾವು ಸಂತೋಷಿಸೋಣ...

ಓಶೋ ಬರೆದ ಪ್ರೇಮ ಧ್ಯಾನದ ಪಥದಲ್ಲಿ ಪುಸ್ತಕ ಓದುತ್ತಿದ್ದೆ. ಯಾಕೋ ನೆನಪಾಯಿತು. ನಾನು ಧರಿತ್ರಿ ಬ್ಲಾಗ್ ಆರಂಭಿಸುವಾಗ ಮೊದಲು ಬರೆದ ಬರಹ ಒಂಟಿತನದ ಬಗ್ಗೆ ಎಂದು.

ಪುಸ್ತಕದಲ್ಲಿ 'ಒಂಟಿತನದಿಂದ ಪ್ರೇಮದೆಡೆಗೆ' ಎಂಬ ವಿಷಯದ ಮೇಲೆ ಬರೆಯುತ್ತಾ ಒಂಟಿತನ ಮತ್ತು ಏಕಾಂತ ಕುರಿತು ಬಹಳ ಚೆನ್ನಾಗಿ ಹೇಳಿದ್ದಾರೆ.

"ಮೊದಲು ಏಕಾಂತರಾಗಿ, ಏಕಾಂಗಿಗಳಾಗಿ. ಮೊದಲು ನಿಮ್ಮೊಂದಿಗೆ ನೀವು ಸಂತೋಷಿಸಲು ಆರಂಭಿಸಿ. ಮೊದಲಿಗೆ ನಿಮ್ಮನ್ನು ನೀವು ಪ್ರೀತಿಸಿ. ಎಷ್ಟರಮಟ್ಟಿಗೆ ಎಂದರೆ ನಿಮ್ಮ ಬಳಿ ಯಾರೂ ಬರದಿದ್ದರೂ ಸರಿಯೇ. ಅತ್ಯಂತ ಪ್ರಾಮಾಣಿಕತೆಯಿಂದ ನಿಮ್ಮಲ್ಲೇ ನೀವು ಆನಂದಿತರಾಗಿ. ನಿಮ್ಮ ಬಾಗಿಲನ್ನು ಯಾರೂ ತಟ್ಟದಿದ್ದರೂ ಪರವಾಗಿಲ್ಲ. ಯಾರಾದರೂ ನಿಮ್ಮ ಬಳಿ ಬರಲಿ ಎಂದು ನೀವು ಕಾಯುತ್ತಿರುವುದಿಲ್ಲ. ನೀವು ನಿಮ್ಮ ಮನೆಯಲ್ಲಿರುವಿರಿ. ಹೌದು, ಯಾರಾದರೂ ಬಂದರು ಒಳ್ಳೆಯದೇ. ಪ್ರೀತಿಕರವೇ ಸುಂದರವೇ. ಯಾರೂ ಬರದಿದ್ದರೂ ಒಳ್ಳೆಯದು, ಪ್ರೀತಿಕರವೇ ಸುಂದರವೇ. ತದನಂತರ ನೀವು ಬೇರೆಯವರೊಂದಿಗೆ ಸಂಬಂಧಿತರಾಗಿ, ನೀವೀಗ ಭಿಕ್ಷುಕರಂತೆ ಇರುದಿಲ್ಲ.ರಾಜನಂತಿರುವಿರಿ"

ಮಾತನ್ನು ಅದೆಷ್ಟು ಬಾರಿ ಓದುತ್ತೇನೋ ನನಗೆ ಗೊತ್ತಿಲ್ಲ. ಅಷ್ಟರಮಟ್ಟಿಗೆ ಮಾತುಗಳು ನನ್ನ ಆಕರ್ಷಿಸಿವೆ. ಒಬ್ಬಳೇ ಇದ್ದಾಗ ಮನಸ್ಸು ಬೇಜಾರಾದರೆ ತಕ್ಷಣ ಸಾಲುಗಳನ್ನು ಓದುತ್ತೇನೆ. ಯಾಕೋ ಮನಸ್ಸಿಗೆ ತುಂಬಾ ಖುಷಿಯಾಗುತ್ತೆ, ಮನಸ್ಸು ನಿರಾಳವಾಗುತ್ತೆ. ಎಲ್ಲಾ ಕಾಡುವ ನೆನಪುಗಳು ಬದಿಗೆ ಸರಿದು ಮನಸ್ಸು ಪರಿಶುದ್ಧತೆಯಿಂದ ಸಂಭ್ರಮಿಸುತ್ತೆ. ಅದಕ್ಕೆ ಹೇಳೋದು ಒಳ್ಳೆಯ ಪುಸ್ತಕಗಳು ಆತ್ಮೀಯ ಸ್ನೇಹಿತರಂತೆ ಅಂತ ಅಲ್ವಾ?

ನಾನು ಒಬ್ಬಳೇ ಇರುವುದನ್ನು ತುಂಬಾ ದ್ವೇಷಿಸುತ್ತೇನೆ. ಏಕೆಂದರೆ ನಾವು ಒಬ್ಬರೇ ಕುಳಿತಾಗ ಕಾಡುವ ನೆನಪುಗಳು, ಅಸಂಬದ್ಧ ಚಿಂತೆಗಳು ನಾವು ಇತರರ ಜೊತೆ ಕೂಡಿ ನಲಿದಾಗ ನಮ್ಮನ್ನು ಕಾಡುವುದಿಲ್ಲ. ಇಲ್ಲದ ಟೆನ್ಯನ್ ಕೊಡೋದಿಲ್ಲ. ನಾವು ಖಿನ್ನರಾಗುವುದಿಲ್ಲ. ಅದಕ್ಕೆ ಒಬ್ಬಳೇ ಇರುವಾಗ ಪುಸ್ತಕ ಓದುವುದು ಮತ್ತು ಹಾಡು ಕೇಳುವುದು ಒಂಥರಾ ನಮ್ಮೊಳಗೆ ಹೊಸ ಚೈತನ್ಯ ಮೂಡಿಸುತ್ತೆ.ಉತ್ಸಾಹ ತುಂಬುತ್ತೆ. ಮನಸ್ಸನ್ನು ಖುಷಿಗೊಳಿಸುತ್ತೆ.

ಬಹುಶಃ ಓಶೋ ಹೇಳಿರುವಂತೆ ನಮ್ಮನ್ನು ನಾವು ಪ್ರೀತಿಸುವ ಕಲೆ ಮಾನವನಿಗೆ ತಿಳಿದುಬಿಟ್ಟರೆ, ಪ್ರಪಂಚದಲ್ಲಿ ಮನುಷ್ಯನಷ್ಟು ನೆಮ್ಮದಿ, ಖುಷಿಯಿಂದ ಇರುವ ಜೀವ ಮತ್ತೊಂದಿರಲಾರದು.

Sunday, September 27, 2009

ಬದುಕನ್ನು ಪ್ರೀತಿಸಿದಷ್ಟೇ ಸ್ವಾಭಿಮಾನವನ್ನೂ ಪ್ರೀತಿಸ್ತೀನಿ...

ಹೌದು, ಯಾಕೋ ಸ್ವಾಭಿಮಾನದ ಬಗ್ಗೆ ಬರೆಯೋಣ ಅನಿಸ್ತಾ ಇದೆ. ಸ್ವಾಭಿಮಾನಕ್ಕೆ ಬಿದ್ದ ಪುಟ್ಟ ಪೆಟ್ಟು ಕೂಡ ಆ ಬಗ್ಗೆ ನಮ್ಮನ್ನು ಮತ್ತೆ ಮತ್ತೆ ಈ ಬಗ್ಗೆ ಯೋಚಿಸುವಂತೆ ಮಾಡುತ್ತೆ, ಕಾಡುತ್ತೆ ಅಲ್ವಾ?

ಸ್ವಾಭಿಮಾನ. ..! ನನಗೂ, ನಿಮಗೂ ಅದು ಇದೆ...ಬದುಕುವ ಪ್ರತಿಯೊಬ್ಬರಿಗೂ ಇದೆ. ಹುಟ್ಟುವಾಗ ಸ್ವಾಭಿಮಾನ ಅಂದರೆ ಏನು ಗೊತ್ತಿರಲಿಲ್ಲ. ಅಮ್ಮ ಆಗಾಗ ಬದುಕಿಗೆ ಬೇಕಾಗುವಷ್ಟು ಹೇಳಿಕೊಡುತ್ತಿದ್ದ ಸ್ವಾಭಿಮಾನದ ಪಾಠ ಪ್ರತಿಹೆಜ್ಜೆಯಲ್ಲೂ ನೆನಪಾಗುತ್ತಿದೆ.'ಮಗು ಸ್ವಾಭಿಮಾನ ಬಿಟ್ಟು ಬದುಕಬೇಡಮ್ಮಾ...'ಅನ್ನುತ್ತಿದ್ದಳು ಪ್ರೀತಿಯ ಅಮ್ಮ. ಬಡತನ ಬೇಗೆಯಲ್ಲಿ ನರಳುತ್ತಿರುವಾಗಲೂ ಪ್ರತಿ ಅಮ್ಮ ಹೇಳಿಕೊಡುವ ಪಾಠ ಅದು ಸ್ವಾಭಿಮಾನದ ಬದುಕು. ನಮ್ಮಮ್ಮ ನಿಮ್ಮಮ್ಮ ಹೇಳಿಕೊಡುವ ಬದುಕಿನ ಮೊದಲ ಪಾಠ ಸ್ವಾಭಿಮಾನದ ಬದುಕು ಅಲ್ವೇ?

ಹೌದು,
ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಅದೆಷ್ಟು ನೋವಾಗುತ್ತೆ ಅಲ್ವಾ? ಅದೇ ಆಫೀಸ್ನಲ್ಲಿ ಬಾಸ್, ಆತ್ಮೀಯ ಗೆಳೆಯ, ಪ್ರೀತಿಯ ಗೆಳತಿ....ಯಾರೇ ಆಗಲೀ ಸ್ವಾಭಿಮಾನಕ್ಕೆ ಪೆಟ್ಟು ಕೊಟ್ಟಾಗ ಮನಸ್ಸೆಷ್ಟು ನೋಯುತ್ತೆ ಅಲ್ವಾ? ಹೌದು, ಹಗಲಿಡೀ ಬೆನ್ನು ಮುರಿದು ಕೆಲಸ ಮಾಡಿದರೂ ಬಾಸ್ ಬೈತಾನೆ..ಥತ್ ನೀನು ಕೆಲಸಕ್ಕೆ ನಾಲಾಯಕ್ಕು ಅಂತಾನೆ. ಯಾರದೋ ಕೋಪವನ್ನು ತಮ್ಮ ಮೇಲೆ ತೀರಿಸಿಕೊಳ್ಳೋ ಬಾಸ್ , ನಮ್ಮ ಹೆಸರಿನ ಮುಂದಿರುವ ಡಿಗ್ರಿಯನ್ನು ಅಣಕಿಸುತ್ತಾನೆ. ಓದಿದ್ದು ವ್ಯರ್ಥ, ಕಲಿತದ್ದು ವ್ಯರ್ಥ, ನಿನ್ನ ಮಿದುಳಿನಲ್ಲಿ ಏನೂ ಇಲ್ಲ..ಅಂತಾ ಬಿಸಿಬಿಸಿಯಾಗಿ ಬೈತಾನೆ. ಹೊಟ್ಟೆಪಾಡು...ಮೈಯೆಲ್ಲಾ ಬೆಂಕಿ ಹರಿದರೂ ಬಾಯಿ ಮೌನವಾಗುತ್ತೆ. ಒಳಗೊಳಗೆ ಮನಸ್ಸು ನೋವು ಪಡುತ್ತೆ ಅಲ್ವಾ?

ನಾನೂ ಅಷ್ಟೇ..ಬದುಕನ್ನು ಪ್ರೀತಿಸಿದಷ್ಟೇ ಸ್ವಾಭಿಮಾನವನ್ನೂ ಪ್ರೀತಿಸ್ತೀನಿ. ಅದೇಕೋ ಗೊತ್ತಿಲ್ಲ..ಯಾರೇ ಆಗಲೀ ಸ್ವಾಭಿಮಾನಕ್ಕೆ ಹರ್ಟ್ ಆಗೋ ಏನು ಹೇಳಿದ್ರೂ ನಂಗೆ ಸಹಿಸಕ್ಕಾಗಲ್ಲ. ಥಟ್ಟನೆ ಎದುರು ಮಾತಾಡ್ತೀನಿ. ಅವರನ್ನು ಅಲ್ಲೇ ನಿರಾಕರಿಸಿ ಬಿಡ್ತೀನಿ. ಮತ್ತೆಂದೂ ಅವರನ್ನು ನನ್ನ ಕಣ್ಣುಗಳು ತಿರುಗಿ ನೋಡಲ್ಲ, ಅವರ ಜೊತೆ ಮಾತಾಡಬೇಕೆಂದು ಮನಸ್ಸಿಗೆ ಹೇಳೊಲ್ಲ, ಅವರ ಕುರಿತು ಕಿಂಚಿತ್ತೂ ಗೌರವ ಮೂಡಲ್ಲ, ಪ್ರೀತಿ ಮೂಡಲ್ಲ, ಕಾಳಜಿ, ಅನುಕಂಪ ಮೂಡಲ್ಲ. ಒಂದು ರೀತಿಯಲ್ಲಿ ಸಮಸ್ತ ಬಾಂಧವ್ಯಗಳು ಅವರಿಂದ ಕಳಚಿಬಿಡುತ್ತೆ. ಇದಕ್ಕೆ ನೀವೂ ಹೊರತಾಗಿಲ್ಲ ಅಂದುಕೊಂಡಿದ್ದೀನಿ.

ಒಂದು ಪುಟ್ಟ ಘಟನೆ. ನಾನು ನಿತ್ಯ ನೋಡೋ ಆಂಟಿ ಒಬ್ರು ಇದ್ದಾರೆ. ಆಂಟಿ ಒಳ್ಳೇ ಮನಸ್ಸಿನವರೇ. ಆದರೆ ಅದೇಕೇ ಗಂಡನಿಗೆ ಹೊಡೀತಾರೆ ಗೊತ್ತಾಗಲ್ಲ. ಪಾಪ, ಗಂಡನಿಗೆ ಹೊಡೆದು ಬಂದು ಅದನ್ನೇ ಅವರಿಗೆ ನಾಲ್ಕು ಕೊಟ್ಟೆ ಅನ್ತಾರೆ. ನಮಗೇ ಅಸಹ್ಯ ಆಗಿಬಿಡುತ್ತೆ. ಪಾಪ ಆ ಗಂಡ ಯಾರ ಮುಖನೂ ನೋಡಲ್ಲ. ನನಗನಿಸೋದು ಆ ಗಂಡನಿಗೆ ಸ್ವಲ್ಪನೂ ಸ್ವಾಭಿಮಾನ ಇಲ್ವಾ? ಅದನ್ನು ಮಾರಿಟ್ಟು ಹೆಂಡತಿ ಜೊತೆ ಬದುಕಬೇಕಾ? ಛೇ! ಅನಿಸುತ್ತೆ. ನೋಡುಗರಿಗೆ ಇದೊಂಥರಾ ತಮಾಷೆ ಅನಿಸಿದ್ರೂನೂ , ಇದರೊಳಗಿನ ಸೂಕ್ಷ್ಮ ತುಂಬಾ ನೋವು ಕೊಡುತ್ತೆ.

ಸ್ವಾಭಿಮಾನ ನಮ್ಮ ಸ್ವತ್ತು, ನಮ್ಮ ಬದುಕು, ಬಿಟ್ಟುಕೊಡಬೇಡಿ, ಹೊಟ್ಟೆಗೆ ತುತ್ತಿಲ್ಲಾಂದ್ರೂ,....ಏನಂತೀರಿ?

Friday, September 11, 2009

ಈಗ ಅವಳು ಅವನಿಗೆ 'ಹಾಸಿಗೆ' ...

ಅವನು ಪತಿ, ಅವಳು ಪತ್ನಿ.

ಅದ್ಧೂರಿಯಾಗಿ ಸಪ್ತಪದಿ ತುಳಿದಿದ್ದಾರೆ...

ಸಾವಿರಾರು ಜನರು ಮದುವೆಯೂಟದಿಂದ ಚಪ್ಪರಿಸಿದ್ದಾರೆ...

ಒಂದಲ್ಲ, ಎರಡಲ್ಲ ಐದು ದಿನ ಮದುವೆ ನಡೆದಿದೆ...

ಒಂದು ವಾರ ಭರ್ಜರಿ ಮಧುಚಂದ್ರನೂ ಮುಗಿಸಿ ಬಂದಿದ್ದಾರೆ...

ಈಗ ಆರತಿಗೊಂದು, ಕೀರುತಿಗೊಂದು ಮಕ್ಕಳ ಕನಸು ಕಾಣುವ ಸಮಯ...



ಅವಳಿಗೆ ಅವನು, ಅವನಿಗೆ ಅವಳು ಕಣ್ಣಲ್ಲೇ ಪರಿಚಯ..

ನೋಡೋ ಕಣ್ಣುಗಳೇ ಸತ್ಯ ಹೇಳಿದ್ದವು...

ಪ್ರಾಮಾಣಿಕತೆಗೆ ಅವಳು ಇನ್ನೊಂದು ಹೆಸರು....

ಬಡತನ..ಪ್ರತಿಯೊಬ್ಬರ ಬದುಕನ್ನೂ ಕಿತ್ತು ತಿನ್ನುತ್ತೆ....ಅವಳನ್ನೂ ಬಿಡಲಿಲ್ಲ..

ಜನ್ಮ ನೀಡಿದ ಅಪ್ಪ-ಅಮ್ಮ ಬಡತನದಲ್ಲೇ ಮಣ್ಣಾಗಿ ಹೋದವರು..ಇವಳನ್ನು ಹಾಗೇ ಬಿಟ್ಟು...!

ಕಣ್ಣ ನೋಟದ ಆಸರೆ, ಪ್ರೀತಿಯ ಹುಡುಕಾಟಕ್ಕೆ ಸಿಕ್ಕಿದ್ದು ಆತ...

ಪ್ರಾಮಾಣಿಕತೆ, ಸತ್ಯದ ಗೆಲುವಿನ ಕುರಿತು ಮಾತನಾಡುತ್ತಿದ್ದವ...

ಅವಳ ಸೌಂದರ್ಯ, ನೇರ ನಡೆ-ನುಡಿಯನ್ನು ಹೊಗಳುತ್ತಿದ್ದವ...

ಅವಳು ಮಾತುಬಿಟ್ಟರೆ ಹಸಿವನ್ನು ಲೆಕ್ಕಿಸದೆ ಅನ್ನ, ನೀರು ಬಿಡುತ್ತಿದ್ದವ...

ಅವಳಿಗಾಗಿ ಹಗಲಿರುಳೂ ಪರಿತಪಿಸುವವ,

ಅವಳನ್ನು ಅಂಗೈಯಲ್ಲಿಟ್ಟುಕೊಂಡು ಸಾಕುತ್ತೇನೆಂದವ...



ಹೌದು..ಅವಳು ನಂಬಿದಳು..

ಹಗಲಿರುಳು ಅವನ ಕನಸಿನಲ್ಲಿ ತೇಲಾಡಿದಳು...

ಆ ದೇವಾಲಯದಲ್ಲಿ ಅವನ ಹೆಸರಿನಲ್ಲಿ ನಿತ್ಯ ಪೂಜೆ ಮಾಡಿಸಿದಳು...

ಜೊತೆ-ಜೊತೆಗೆ ಹೆಜ್ಜೆಯಿಟ್ಟು ಆ ದೇವಾಲಯಯದಲ್ಲಿ ಅವನ ಹಣೆಗೆ ಕುಂಕುಮವಿಟ್ಟಳು...

ಅವನ ಕೈಯಿಂದಲೇ ತಲೆಗೆ ಹೂವ ಮುಡಿಸಿಕೊಂಡಳು....

ನಂಬಿದಳು...ಅವಳಿಗಿಂತಲೂ ಹೆಚ್ಚಾಗಿ ಅವನನ್ನೇ ನಂಬಿದಳು....

ಪ್ರೀತಿಯ ಹಾರಕ್ಕೆ ಕೊರಳೊಡ್ಡಿದಳು...

ಮನೆ-ಮನ ಎಲ್ಲೆಲ್ಲೂ ಪ್ರೀತಿಯ ಕನಸು ಕಾಣತೊಡಗಿದಳು...


ಅದೇನಾಯಿತೋ...

ಆತ ಪ್ರೀತಿಯ ಆಸರೆಯಾಗಲಿಲ್ಲ...ಕನಸುಗಳಿಗೆ ಕಣ್ಣುಗಳಾಗಲಿಲ್ಲ...

ರಾತ್ರಿಯ ಸುಖಕ್ಕೆ ಅವನಿಗೆ ಅವಳು 'ಹಾಸಿಗೆ'ಯಾದಳು

ಈಗ ಅವಳು ಅವನಿಗೆ 'ಹಾಸಿಗೆ' ...

ಹಣದ ಅರಮನೆಯಲ್ಲಿ ಅವಳು ಅಂಗಾತ ಬಿದ್ದ ಹೆಣ...



ಇನ್ನೊಂದೆಡೆ...

ಬೇಂದ್ರೆ ಅಜ್ಜನ...

ನಾನು ಬಡವಿ, ಆತ ಬಡವ, ಒಲವೇ ನಮ್ಮ ಬದುಕು,
ಬಳಸಿಕೊಂಡವದನೇ ಅದಕು, ಇದಕು, ಎದಕೂ…

ನೆನಪಾಗುತ್ತಲೇ ಬದುಕನ್ನೇ ಅಣಕಿಸಿದಂತೆ ಭಾಸವಾಗುತ್ತಿತ್ತು ಅವಳಿಗೆ.

Monday, September 7, 2009

ಆ ದೇವಾಲಯದಲ್ಲಿ ನಿನ್ನ ಕೈಯಾರೆ ಕುಂಕುಮ ಇರಿಸಿಕೊಳ್ಳಬಹುದಿತ್ತು...

ಮುನ್ನಾ...
'ಚಳಿಗೆ ಶ್ವೆಟರ್ ಹಿಡಿದುಕೋ. ಕಿಟಕಿ ಸಂದಿಯಲ್ಲಿ ಮುಖ ಹಾಕಿ ಕೂರಬೇಡ. ಚಳಿಗೆ ಜ್ವರ, ನೆಗಡಿ ಜಾಸ್ತಿ ಆದೀತು. ಕಿಟಕಿ ಬಾಗಿಲು ಮುಚ್ಚಿಕೋ, ಕಿವಿ, ಮುಖವನ್ನೆಲ್ಲಾ ಮುಚ್ಚಿಕೋ. ಬ್ಯಾಗಲ್ಲಿ ಬಿಸಿನೀರು ಹಾಕೋ ಮುನ್ನಿ..' ಎಂದು ಪ್ರೀತಿಯಿಂದ ನೀ ಕಳಿಸಿದ ಮೆಸೇಜ್ ಅನ್ನು ಎಷ್ಟು ಬಾರಿ ಓದಿದ್ದೇನೋ ನನಗೇ ಗೊತ್ತಿಲ್ಲ. ಅದೇ ಗುಂಗಿನಲ್ಲಿ ಇದೀಗ ಪತ್ರ ಬರೀತಾ ಇದ್ದೀನಿ ನೋಡು. ಸೂರ್ಯ ಮೂಡುವ ಆ ಮುಂಜಾವು ಬೆಂಗಳೂರಿನಿಂದ ಅಮ್ಮನೂರಿನ ಬಸ್ಸು ಹಿಡಿದಾಗ ನಾನಿರುವ ಪುಟ್ಟ ಮನೆ, ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದ ನನ್ನ ಪ್ರೀತಿಯ ಪುಸ್ತಕಗಳು, ನಿತ್ಯ ನನ್ನ ಕಣ್ಣುಗಳಿಗೆ ಖುಷಿ ನೀಡುತ್ತಿದ್ದ ಎದುರುಮನೆಯ ಪುಟ್ಟ ಮಗುವಿನ ನಗು ನನ್ನ ಕಾಡಲಿಲ್ಲ. ಕಾಡಿದ್ದು ನಿನ್ನ ನೆನಪು, ನಿನ್ನ ನಗು, ನಿನ್ನ ಖುಷಿ, ಕಾಳಜಿ, ಪ್ರೀತಿ ತುಂಬಿದ ನಿನ್ನ ಮಾತುಗಳು, ನನ್ನ ಬದುಕಿನ ಹೆಜ್ಜೆಗಳನ್ನು ತಿದ್ದಿ ತೀಡಿದ ನಿನ್ನ ವಿಶಾಲ ಹೃದಯ, ಭಾವನೆಗಳ ಜೋಕಾಲಿಯಲ್ಲಿ ನನ್ನ ತೂಗಿದ ಆ ನಿನ್ನ ನಿಷ್ಕಲ್ಮಶ ಪ್ರೀತಿ, ಅತ್ತಾಗ ಸಂತೈಸಿದ ನಿನ್ನ ಮಡಿಲು, ಪ್ರತಿ ಕ್ಷಣ ಕ್ಷಣವೂ ನನ್ನ ಆರೋಗ್ಯ, ನನ್ನ ಇರುವು, ನನ್ನ ಬದುಕು, ಇಡೀ 'ನನ್ನನ್ನೇ' ಕಣ್ಣುರೆಪ್ಪೆಯಲ್ಲಿಟ್ಟುಕೊಂಡು ಕಾಪಾಡಿದ ನಿನ್ನ ಅದಮ್ಯ ಅಕ್ಕರೆ.....!! ಹೌದು...ಮುನ್ನಾ..ಇದೇ ಕಾಡಿದ್ದು...ಬೇರೇನಲ್ಲ.

ಅಮ್ಮನೂರಿಗೆ ಸಾಗುವ ಆ ಬೃಹತ್ ಬೆಟ್ಟ ದಾಟಿ ಸಾಗುವಾಗ ನೀನಿದ್ದರೆ ನಿನ್ನ ಮಡಿಲಲ್ಲೇ ಆರಾಮವಾಗಿ ನಿದ್ದೆಹೋಗಬಹುದಿತ್ತು ಅನಿಸಿತ್ತು. ಅಮ್ಮನಿಗೆ ನಿನ್ನ ಪರಿಚಯಿಸಬಹುದಿತ್ತು, ನಮ್ಮೂರ ಸುಂದರ ತೋಟದಲ್ಲಿ ನಿನ್ನ ಸುತ್ತಾಡಿಸಬಹುದಿತ್ತು. ನಮ್ಮ ಪುಟ್ಟ ಹೆಂಚಿನ ಮನೆಯಲ್ಲಿ ಕುಳಿತು ನನ್ನ ಜೊತೆ ಅಮ್ಮ ಮಾಡಿಟ್ಟ ಹಪ್ಪಳ ಸಂಡಿಗೆ ಮೆಲ್ಲಬಹುದಿತ್ತು. ಜಡಿಮಳೆಗೆ ಜುಳು ಜುಳು ಎನ್ನುತ್ತಾ ಹರಿಯೋ ನಮ್ಮೂರ ನೇತ್ರಾವತಿಯನ್ನು ನಿನಗೂ ತೋರಿಸಬಹುದಿತ್ತು ಅನಿಸಿತ್ತು. ಹಸಿರ ವನಸಿರಿಯಲ್ಲಿ ನಿನ್ನ ಜೊತೆ ನಾನೂ ದಾರಿಯುದ್ದಕ್ಕೂ ಸಾಗಬಹುದಿತ್ತು. ನಮ್ಮೂರ ದೇವಾಯಲಕ್ಕೆ ನಿನ್ನ ಕರೆದುಕೊಂಡು ಹೋಗಿ ನಿನ್ನ ಕೈಯಾರೆ ಕುಂಕುಮ ಇರಿಸಿಕೊಳ್ಳಬಹುದಿತ್ತು ಅನಿಸಿತ್ತು..ಹೌದು..ಮುನ್ನಾ..ನೆನಪಾಗಿದ್ದು ನೀನು ಮಾತ್ರ....ನನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸೋ ನೀನು ಮಾತ್ರ.

ಥತ್! ನಾ ದೂರದಲ್ಲಿದ್ರೆ ನೀ ಮುನಿಸಿಕೊಳ್ತೀಯಾ. ರಂಪ ಮಾಡ್ತೀಯಾ. ಬೇಗ ಬಾ ಎಂದು ರಚ್ಚೆ ಹಿಡೀತೀಯಾ. ಪುಟ್ಟ ಮಕ್ಕಳಂತೆ ಹಠಮಾಡ್ತೀಯಾ. ಅದಕ್ಕೆಲ್ಲಾ ನಾ ಮೌನವಾಗಿದ್ದಾಗ ನಿಂಗೆ ಪ್ರೀತೀನೇ ಇಲ್ಲ ಅಂತೀಯಾ. ದಿನ, ವಾರ, ತಿಂಗಳುಗಟ್ಟಲೆ ಮಾತು ಬಿಡ್ತೀಯಾ. ಆದರೆ ನಾನಂತೀನಿ 'ಅದೇ ಕಣೋ ಪ್ರೀತಿ' ಅಂತ. ನೀ ಕೋಪದಲ್ಲಿದ್ದಾಗ ನಾನು ಕತ್ತಲನ್ನೂ ಪ್ರೀತಿಸೋಕೆ ಹೊರಡ್ತೀನಿ..ಕತ್ತಲೇ ಹಿತ ಅಂತೀನೀ. ಇರುಳನ್ನೂ ಬೆಳಕಿನಂತೆ ಪ್ರೀತಿಸುವ, ಅಮಾವಾಸ್ಯೆಯ ಕರಾಳ ರಾತ್ರಿಯನ್ನೂ ಪ್ರೀತಿಸುವ ಆ ಶಕ್ತಿ ನೀಡಿರೋದು ನಿನ್ನ ಪ್ರೀತಿ ಗೊತ್ತಾ?

ನಿನ್ನ ಪ್ರೀತಿಸ್ತೀನಿ...ನಿನ್ನನ್ನು, ನಿನ್ನ ಬದುಕನ್ನು, ನಿನ್ನ ಭಾವನೆಗಳನ್ನು, ನಿನ್ನ ಸಾಧನೆಯನ್ನು, ನಿನ್ನ ಕನಸುಗಳನ್ನು, ನಿನ್ನ ಸುತ್ತಲಿನ ನೋವು-ನಲಿವುಗಳನ್ನೂ ನಾ ಪ್ರೀತಿಸ್ತೀನಿ ಅನ್ನೋದನ್ನು ನಾ ಹ್ಯಾಗೆ ಪ್ರೂವ್ ಮಾಡಲಿ ಹೇಳು? ನೀ ದುಃಖದಲ್ಲಿದ್ದಾಗ ನನ್ನ ಕೊರಗು ಅದು ಕಲ್ಪನೆಗೂ ನಿಲುಕದು ಕಣೋ
ಮುನ್ನಾ..ನೀ ಖುಷಿಯಿರಬೇಕು. ನಿನ್ನ ಖುಷೀ, ಸಂಭ್ರಮನಾ ನಾ ನೋಡಬೇಕು. ನಿನ್ನ ನಾ ಪ್ರೀತಿಸ್ತೀನಿ, ನೀ ನನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸ್ತೀಯಾ..ನಿನಗೆ ಅತ್ಯಂತ ಖುಷಿ ತರುವ, ನಿನಗೆ ಅತ್ಯಂತ ಪವಿತ್ರ ಎನಿಸುವ ಸಂಗತಿಗಳನ್ನು ಮೀರಿದ ಯಾವ ವಿಚಾರಗಳೂ ನನಗೆ ಖುಷಿ ತರೊಲ್ಲ. ನಿನ್ನ ನೆಮ್ಮದಿನೇ ನನ್ನ ನೆಮ್ಮದಿ ನೋಡು. ನೀ ಪಡುವ ಸಂತೋಷ ನೆಮ್ಮದಿಯ ಸಂಭ್ರಮದ ಗಳಿಗೆಗಿಂತ ಈ ಜಗತ್ತಿನಲ್ಲಿರುವ ಇನ್ಯಾವುದೇ ವಸ್ತುಗಳು ನನಗೆ ಖುಷಿ ನೀಡಲಾರವು.

ಹ್ಲೂಂ..ಮಧ್ಯರಾತ್ರಿ 1 ಗಂಟೆ. ಇನ್ನು ಮಲಗಬೇಕು ಕಣೋ. ಉಳಿದಿದ್ದನ್ನು ಇನ್ನೊಂದು ಪತ್ರದಲ್ಲಿ ಬರೇತೀನಿ. ಅಲ್ಲಿತನಕ ಈ ಪತ್ರ ಓದುತ್ತಾ ಇರು..ಸರೀನಾ.

ನಿನ್ನ ಪ್ರೀತಿಯ
ಮುನ್ನಿ
.

Sunday, August 23, 2009

ಅಕ್ಕನಿಗೆ ಪ್ರೀತಿಯ ನೆನಪುಗಳು...

ಅಕ್ಕಾ..ನಿನ್ನೆ ಗೌರಿ-ಗಣೇಶ ಹಬ್ಬ. ನಿನ್ನ ತುಂಬಾ ನೆನಪಾಯ್ತು. ಸೂರ್ಯ ಮೂಡೋ ಹೊತ್ತಿಗೆ ಎದ್ದು ಸ್ನಾನ ಮಾಡಿ ದೇವರೆದುರು ದೀಪ ಹಚ್ಚಿ ಆರತಿ ಎತ್ತುವಾಗ ನಿನ್ನ ನೆನಪಾಯ್ತು. ಪಾಯಸ ಮಾಡಿ ಮಾವ, ಅಣ್ಣ, ತಮ್ಮ, ಪಕ್ಕದ್ಮನೆಯ ಪುಟ್ಟ ಮಕ್ಕಳಿಗೆ ಬಡಿಸುವಾಗ ನಿನ್ನ ನೆನಪು ತೀರಾ ಕಾಡಿತ್ತು. ಅಕ್ಕಾ... ಹಬ್ಬ ಬಂದರೆ ಮನೆಮುಂದೆ ಚೆಂದದ ರಂಗೋಲಿ ಇಡೋಕೆ ನೀನಿಲ್ಲ ಅಂದಿತ್ತು ಮನ.

ಅಕ್ಕಾ..ನಿನ್ನೆ ನಾ ಸೀರೆ ಉಟ್ಟಿದ್ದೆ ಗೊತ್ತಾ? ನನ್ನ ಇಷ್ಟದ ಬಣ್ಣ ಮೆರೂನ್ ಕಲರ್ ಸೀರೆ ಉಟ್ಟು, ಕೈ ತುಂಬಾ ಬಳೆ, ತಲೆ ತುಂಬಾ ಮಲ್ಲಿಗೆ ಮುಡಿದಿದ್ದೆ. ಆದರೆ, ನಂಗೆ ನೋಡು ಸೀರೆ ಉಡೋಕೆ ಬರಲ್ಲ..ಅದಕ್ಕೆ ಪಕ್ಕದ್ಮನೆಯ ಆಂಟಿ ಚೆನ್ನಾಗಿ ಸೀರೆ ಉಡಿಸಿದ್ರು ಅಕ್ಕಾ. ನೀನಿರುತ್ತಿದ್ದರೆ ನೋಡು ನೀನೇ ಉಡಿಸುತ್ತಿದ್ದೆಯಲ್ಲಾ? ತಲೆತುಂಬಾ ಹೂವು ಉಟ್ಟು, ಹಣೆಗೊಂದು ಬಿಂದಿಗೆ ಉಟ್ಟು ನೀನೂ ನನ್ನ ಜೊತೆ ಖುಷಿಪಡುತ್ತಿದ್ದೆ ಅಲ್ವಾ? ನನ್ನ ತಂಗಿ ಚೆನ್ನಾಗ್ ಕಾಣ್ತಾಳೆ ಅಂತ ಹೆಮ್ಮೆ ಪಡುತ್ತಿದ್ದೆಯಲ್ಲಾ.

ಅಕ್ಕಾ ನಿನ್ನೆ ದೇವಸ್ಥಾನಕ್ಕೆ ಹೋಗಿದ್ದೆ. ಹಣ್ಣುಕಾಯಿ ಮಾಡಿಸಿ ದೇವರ ಬಳಿಯೂ ನೀನು ಬೇಕೆಂದು ಬೇಡಿಕೊಂಡೆ. ನೀನು ಜೊತೆಗಿರುತ್ತಿದ್ದರೆ ನೀನೂ ನನ್ನ ಜೊತೆ ಬರ್ತಾ ಇದ್ದೆ. ನಿನ್ನ ಪುಟ್ಟ ಮಕ್ಕಳು ನನ್ನ ಮಡಿಲಲ್ಲಿ ಪ್ರೀತಿಯಾಟ ಆಡುತ್ತಿದ್ದವಲ್ಲಾ. ಏನು ಮಾಡೋದು ಹೇಳು...ದೇವರು ನಂಗೆ ನಿನ್ನ ಕೊಡಲೇ ಇಲ್ಲ ನೋಡು. ದೇವರ ಮೇಲೂ ಕೆಟ್ಟ ಸಿಟ್ಟು ಬರುತ್ತೆ...ಎಲ್ಲಾ ಕೊಟ್ಟು ಅಕ್ಕನನ್ನು ನಂಗೆ ಕೊಟ್ಟಿಲ್ಲ ಅನ್ನೋ ಕೊರಗು ನಂದು.

ಅಕ್ಕಾ..ಈ ಬಾರಿ ನಾನು ಹಬ್ಬಕ್ಕೆ ಅಮ್ಮನೂರಿಗೆ ಹೋಗಿಲ್ಲ. ಕೃಷ್ಣಾಷ್ಟಮಿಯ ದಿನವೇ ಹೋಗಿಬಂದೆ. ಅಮ್ಮಾ ಇಂದು ಬೆಳಿಗ್ಗೆ ಫೋನು ಮಾಡಿದ್ರು. ಯಾಕೆ ಗೊತ್ತಾ? ನಾನೂನು ಹುಟ್ಟಿದ್ದು ಗಣೇಶ ಹಬ್ಬದ ದಿನ. ಇವತ್ತು ಅಮ್ಮನೂ ಗಣಪತಿ ದೇವಸ್ತಾನಕ್ಕೆ ಹಣ್ಣುಕಾಯಿ ಹೂವು, ಬೆಲ್ಲ ತಕೊಂಡು ಹೋಗಿ ನನ್ನ ಲೆಕ್ಕದಲ್ಲಿ ಪೂಜೆ ಮಾಡಿಸಿದೆ ಅಂದ್ರು. ಅಮ್ಮಂಗೆ ನನ್ನ ಹುಟ್ಟಿದ ದಿನ ಅಂದ್ರೆ ಅದು ಚೌತಿ ದಿನವೇ ಹೊರತು ಆಗಸ್ಟ್ 2 ಅಂದ್ರೆ ಅವರು ನಂಬೊಲ್ಲ. ಅಮ್ಮ ಓದಿಲ್ಲ ಅಕ್ಕಾ..ಅದಕ್ಕೆ ನೋಡು ಅವರು ಪ್ರತಿ ವರ್ಷ ಚೌತಿಯನ್ನೇ ನೆನಪಿಟ್ಟುಕೊಳ್ಳುತ್ತಾರೆ. ಅಮ್ಮನ ಮುಗ್ಧತೆಗೆ ಮನಸಾರೆ ವಂದಿಸಿದೆ.
ಅಕ್ಕಾ..ಯಾಕೋ ನಿತ್ಯ ಅಂದುಕೊಳ್ಳುತ್ತಿದ್ದೆ ಮನ..

ನನಗೂ, ನನ್ನ ಬದುಕಿನಲ್ಲಿ ಸುಗ್ಗಿಯ ಸಂಭ್ರಮದಿಂದ ಮೆರೆಯೋಕೆ ನೀನಿರಬೇಕಿತ್ತು...
ನನ್ನ ನೀನು, ನಿನ್ನ ನಾನು ತುಂಬಾ ಪ್ರೀತಿಸುವವರಾಗಿರಬೇಕಿತ್ತು...
ಮನದ ಕದ ತೆರೆದು...ಪ್ರೀತಿಯ ಮಳೆಯಲ್ಲಿ ತೋಯಿಸಲು ನೀನಿರಬೇಕಿತ್ತು...
ನನ್ನ ಮೌನ-ಮಾತು, ಹುಸಿಮುನಿಸು, ಮುಂಗೋಪದ ಜೊತೆ ಸಾಥ್ ನೀಡಲು ನೀನಿರಬೇಕಿತ್ತು...
ಅಕ್ಕಾ..ನೀನು ಯಾವಾಗ ಬರ್ತೀಯಾ....ಹೇಳು ಬೇಗ...
ಇಂತೀ ನಿನ್ನ
ತಂಗಿ

Wednesday, August 19, 2009

ಆ ಪ್ರಶ್ನೆ ನನ್ನ ಆತ್ಮವನ್ನು ಚುಚ್ಚಿಬಿಟ್ಟಿತ್ತು...

ಮೊನ್ನೆ ಮೊನ್ನೆ ಸ್ವಾತಂತ್ರ್ಯ ದಿನ ಆಚರಿಸಿದ್ದೂ ಆಯಿತು..ಅದೂ ಪೊಲೀಸರ ಬಿಗಿಬಂದೋಬಸ್ತ್ ನಲ್ಲಿ! ಇದು ನಮ್ಮ ಹಣೆಬರಹ ಬಿಡಿ. ಪ್ರತಿಯೊಂದು ಕಾರ್ಯಕ್ರಮಕ್ಕೂ ಪೊಲೀಸರ ಸರ್ಪಗಾವಲು. ಕೃಷ್ಣದೇವರಾಯ ಕಾಲದಲ್ಲಿ ಚಿನ್ನವನ್ನು ರಸ್ತೆಯಲ್ಲಿಟ್ಟು ಮಾರಾಟ ಮಾಡುತ್ತಿದ್ದುದು ಇಲ್ಲೇನಾ ಎಂಬ ಶಂಕೆ ಮೂಡುತ್ತಿದೆ. ಅದಿರಲಿ, ಮೊನ್ನೆ ಸ್ವಾತಂತ್ರ್ಯ ದಿನದಂದು ಗೆಳತಿಯ ಮನೆಯಲ್ಲಿ ಸುಮ್ನನೆ ಕುಳಿತು ಟಿವಿ ನೋಡುತ್ತಿದೆ. ಗತಕಾಲದ ಇತಿಹಾಸವನ್ನು ಮತ್ತೆ ಮೆಲುಕು ಹಾಕುವ ಚಿತ್ರಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು..ಹೀಗೇ ಬೇರೆ ಬೇರೆ ಚಾನೆಲ್ ಗಳಲ್ಲಿ ಸ್ವಾತಂತ್ರ್ಯ ಆಚರಣೆ ಭರ್ಜರಿಯಾಗೇ ನಡೆಯುತ್ತಿತ್ತು. ಯಾವುದೋ ಒಂದು ಚಾನೆಲ್ ನೋಡಿದಾಗ 'ನಮ್ಮ ದೇಶದ ಹೀರೋ'ಗಳೆಂಬ ಕಾರ್ಯಕ್ರಮ ನಡೆಯುತ್ತಿತ್ತು. ಥಟ್ಟನೆ ಕಣ್ಣುಹಾಯಿಸಿದೆ, ಕ್ರಿಕೆಟ್ ತಾರೆಗಳಿಬ್ಬರನ್ನು 'ಹೀರೋಸ್ ಆಫ್ ಇಂಡಿಯಾ' ಸ್ತಾನದಲ್ಲಿ ಕುಳಿತುಕೊಳ್ಳಿಸಿ ಸಂವಾದಕ್ಕೆ ಅವಕಾಶ ನೀಡಲಾಗಿತ್ತು. ಕಿಕ್ಕಿರಿದ ಜನರು. 'ನೀವು ಯಾರನ್ನು ಯಾವಾಗ ಮದುವೆ ಆಗ್ತೀರಾ?', 'ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಇಷ್ಟನಾ?' 'ನಿಮಗೆ ಯಾವ ಹುಡುಗಿಯಾದ್ರೂ ಪಪೋಸ್ ಮಾಡಿದ್ಳಾ?' ಇಂಥ ಪ್ರಶ್ನೆಗಳ ಸುರಿಮಳೆ ವೀಕ್ಷಕರ ಕಡೆಯಿಂದ ಬರುತ್ತಿತ್ತು.

ಚಾನೆಲ್ ಆಫ್ ಮಾಡಿ ಕುಳಿತವಳಿಗೆ ಶಾಲಾ ದಿನಗಳಲ್ಲಿ ಟೀಚರ್ ಹೇಳಿಕೊಟ್ಟ ನಮ್ಮ 'ಹೀರೋ'ಗಳ ಬಗ್ಗೆ ಯೋಚನೆ ಮೂಡತೊಡಗಿತ್ತು.

ಹೌದು, ಶಾಲಾದಿನಗಳಲ್ಲಿ ನನ್ನ ಬೆಂಚಿನ ಪಕ್ಕದ ಗೋಡೆಗೆ ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್, ಮಹಾತ್ನಾಗಾಂಧೀಜಿ ಯ ದೊಡ್ಡ ಫೋಟೋಗಳನ್ನು ಅಂಟಿಸಿದ್ದರು. ನಿತ್ಯ ನಮ್ಮ ಟೀಚರ್ ಕ್ಲಾಸಿಗೆ ಬಂದವರೇ ದೇಶದ ಮಹಾನ್ ನಾಯಕರ ಕುರಿತು ಹೇಳೋರು. ಅವರ ಸಾಹಸಗಾಧೆಗಳನ್ನು ಪರಿಚಯಿಸೋರು. ಅವರ ಜೀವನ ಮೌಲ್ಯವನ್ನು ನಮಗೂ ಅರಿವಾಗಿಸೋರು. ಅವರು ನಮ್ಮ 'ನಾಯಕ'ರು ಅನ್ನೋರು. ಕೈಗೆ 'ರಾಷ್ಟ್ರಪಿತರು' ಎಂಬ ಪುಸ್ತಕ ನೀಡಿ ಒಬ್ಬೊಬ್ಬರಾಗಿ ಓದೋಕೆ ಹೇಳೋರು. ನಾವೆಲ್ಲ ಏರಿದ ಧ್ವನಿಯಲ್ಲಿ ಓದಿದ್ದೇವೆ. ಇವರೇ ನಮ್ಮ ನಾಯಕರೆಂದು ಒಪ್ಪಿಕೊಂಡಿದ್ದೇವೆ. ಭಲೇ ಮಗು...ಅಂತ ಟೀಚರ್ ಬಾಯಿಂದ ಹೊಗಳಿಸಿಕೊಂಡಿದ್ದೇವೆ. ಸ್ವಾತಂತ್ರ್ಯ ಬಂದಾಗ ಹೊಸ ಯುನಿಫಾರ್ಮ್ ಹಾಕಿ ನಮ್ಮೂರ ಶಾಲೆಯಿಂದ ನಾಲ್ಕೈದು ಕಿಮೀ ದೂರ ಮೆರವಣಿಗೆಯಲ್ಲಿ ಸಾಗಿದ್ದೇವೆ. ಗಾಂಧೀ ಕೀ ಜೈ, ಭೋಸ್ ಕೀ ಜೈ, ಭಗತ್ ಕೀ ಜೈ, ಶಾಸ್ತ್ರೀಜಿ ಕೀ ಜೈ ಅಂತ ಕೂಗುತ್ತಾ ಸಾಗಿದ್ದೇವೆ. ಕೂಗುತ್ತಲೇ ತ್ರಿವರ್ಣ ಧ್ವಜ ಹಾರಿಸಿದ್ದೇವೆ. ದೇಶಭಕ್ತಿ ಗೀತೆ ಹಾಡಿದ್ದೇವೆ. ಸ್ವಾತಂತ್ರ್ಯವೆಂದು ಬೀಗಿದ್ದೇವೆ. ನಮಗೆ ಪೊಲೀಸರ ಸರ್ಪಗಾವಲು ಬೇಕಿರಲಿಲ್ಲ. ಜೊತೆಗೆ ಟೀಚರ್ ಗಳು ಇದ್ದರು. ನಾಯಕರ ಹೆಸರುಗಳನ್ನು ಕೂಗಿ ಸಾಗುವಾಗ ಮೈಯೆಲ್ಲಾ ರೋಮಾಂಚನ. ಆ ನಮ್ಮ ಪುಟ್ಟ ಮನಸ್ಸಿನಲ್ಲಿ ನಿಜವಾದ ದೇಶನಾಯಕರು ನೆಲೆಹೂರಿದ್ದರು. ನಾವು ಹಾಗೇ ಆಗಬೇಕು ಅಂತ ಕನಸು ಕಂಡಿದ್ದೇವೆ. ಹೌದು, ನಾನೂ ಹೊರತಾಗಿರಲಿಲ್ಲ. ಭಗತ್ ಸಿಂಗ್ ಬದುಕಿನಕಥೆಯನ್ನು ಮತ್ತೆ ಮತ್ತೆ ಓದುತ್ತಿದೆ. ಗಾಂಧೀಜಿಯ ಸತ್ಯಾನ್ವಷಣೆಯನ್ನು ಓದಿ ನಾನೂ ಚಕಿತಳಾಗಿದ್ದೆ. ಆಗ ಸ್ವಾತಂತ್ರ್ಯ ಆಚರಿಸುವುದೂ ನಮಗೂ ಹಬ್ಬ. ಖುಷಿಯ ಹಬ್ಬ, ಸಂಭ್ರಮ ಸಡಗರದ ಹಬ್ಬ. ಏನೋ ಉತ್ಸಾಹ.

ಕುಳಿತಲ್ಲಿಯೇ ಯೋಚಿಸುತ್ತಿದ್ದೆ...ಆದರೆ ಈಗ? ಎಂಬ ಪ್ರಶ್ನೆ ನನ್ನ ಆತ್ಮಕ್ಕೆ ಚುಚ್ಚಿಬಿಟ್ಟಿತ್ತು!!

ನಮ್ಮ ಹೀರೋಗಳು ಯಾರು? ಬಹುತೇಕರ ಹೀರೋಗಳು ಕ್ರಿಕೆಟ್ ತಾರೆಗಳು, ಸಿನಿಮಾ ತಾರೆಗಳ ಮಟ್ಟಿಗಷ್ಟೇ ಸೀಮಿತವಾಗಿದೆ. ನಮ್ಮಮ್ಮ-ನಮ್ಮಪ್ಪನೇ ನಮಗೆ ಹೀರೋಗಳು ಅನ್ನೋರು ಈಗ ಕಡಿಮೆಯೇ. ಕ್ರಿಕೆಟ್ ತಾರೆಗಳು ಅಥವಾ ಸಿನಿಮಾ ನಟ-ನಟಿಯರನ್ನು ಹೀರೋಗಳೆಂದು ಪರಿಗಣಿಸಬೇಡಿ ಅನ್ನೋ ದನ್ನು ಹೇಳುತ್ತಿಲ್ಲ,. ಅದು ನನ್ನ ಉದ್ದೇಶವೂ ಅಲ್ಲ. ಆದರೆ. ನಮ್ಮ ನಿಜವಾದ ಹೀರೋಗಳನ್ನು ಕಂಡುಕೊಳ್ಳುವಲ್ಲಿ ನಾವು ತುಕ್ಕು ಹಿಡಿದಿದ್ದೇವೆ ಅನ್ನೋದಷ್ಟೇ ನನ್ನ ಮನದ ನೋವು. ಒಬ್ಬ ಚೆಂದದ ನಟ ಅಥವಾ ನಟಿ ಪರದೆ ಮೇಲೆ ಚೆನ್ನಾಗಿ ಅಭಿನಯಿಸಿದರೆ ಅವರೇ ನಮ್ಮ ಹೀರೋಗಳಾಗುತ್ತಾರೆ. ಓರ್ವ ಬ್ಯಾಟ್ಸ್ ಮನ್ ನಾಲ್ಕೈದು ಸಿಕ್ಸ್ ಬಾರಿಸಿದ್ರೆ ಬಾಲ್ ಹೋಗುವ ರಭಸ ನೋಡಿಯೇ ನಾವು ಅವನನ್ನು ಹೀರೋ ಅಂಥ ಅಪ್ಪಿಕೊಳ್ಳುತ್ತೇವೆ...ಇರಲಿ. ಅಪ್ಪಿಕೊಳ್ಳಿ ಬೇಡ ಅನ್ನಲ್ಲ. ಆದರೆ, ಹೀರೋ ಅನ್ನುವ ಪದವೇ ಅರ್ಥ ಕಳೆದುಕೊಂಡಿದೆ ಅಲ್ವಾ? ಅಂತೀನಿ ಅಷ್ಟೇ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರು, ದೇಶವನ್ನು ಹಗಲಿರುಳೂ ಕಾಯುವ ಯೋಧರು, ನಮ್ಮ ಬದುಕು ನೀಡಿದ ಪ್ರೀತಿಯ ಅಪ್ಪ-ಅಮ್ಮ, ಬದುಕಿಗೆ ದಾರಿ ತೋರಿದ ಗುರುಗಳು, ದಿನವಿಡೀ ಬೆವರು ಸುರಿಸಿದ ಅನ್ನದಾತನಂದ ಸಹನಾಮಯಿಗಳು ನಮಗೆ ಯಾವಾಗ 'ಹೀರೋ'ಗಳಾಗುವುದು? ಟೀಚರ್ ಹೇಳಿದ ಹೀರೋಗಳು, ಸ್ವಾತಂತ್ರ್ಯ ಬರೇ ಶಾಲಾ ದಿನಗಳಿಗಷ್ಟೇ ಸೀಮಿತವಾಯಿತಲ್ಲಾ ಅನ್ನೋ ನೋವು ನನ್ನ ತುಂಬಾ ಕಾಡಿತ್ತು. ಬದಲಾವಣೆಯೇ ಜಗದ ನಿಯಮ..ಆದರೆ....!
ಬೇಡ ಹೆಚ್ಚು ಬರೆಯಲ್ಲ..

Monday, July 27, 2009

...ಕಣವಿಯವರ ಒಂದಿಷ್ಟು ಸಾಲುಗಳು...

ಎಲ್ಲೋ ಓದಿದ ಚೆನ್ನವೀರ ಕಣವಿ ಅವರ ಕವನದ ಸಾಲುಗಳು ನನಗೆ ಇಷ್ಟವಾಗಿ ನನ್ನ ಪುಟ್ಟ ಡೈರಿಯಲ್ಲಿ ಬರೆದಿಟ್ಟಿದ್ದೆ. ನೀವೂ ಓದಿಕೊಳ್ಳಿ.

"ಬರೆದ ಕವಿತೆಯ ಭಾರ ಬರೆಯದ ಕವಿತೆಗಳಿಗಿಂತ ಹೆಚ್ಚಲ್ಲ"

"ಪ್ರಕೃತಿ ತನ್ನೆದೆಯ ಮಧುವಾಟಿಕೆಯ ತೆರೆದಿರಲು
ಅದನು ಹೀರದೆಯೆ ಸಾಗಬಹುದೇ?
ಯಾರಿಗೀ ಸುಂದರತೆ ಯಾರಿಗೀ ಪರವಶತೆ?
ಯಾರ ಸುಖಕೀ ಸೃಷ್ಟಿ ನಿನಗಲ್ಲದೇ?"


"ಮಾಯೆಯಿಕ್ಕುವ ಕರದ ತಾಲಲಯಕ್ಕೆ
ದೇಶಕಾಲಗಳು ನರ್ತಿಸುತ ಸಾಗಿವೆ"

"ಬಾಲ್ಯದಿಂದಲೂ ಮುಗಿಲ ಕಂಡು
ಮೈಮರೆತ ದಿನಗಳೆನಿತು!
ಅವುಗಳಾಟದಲ್ಲಿ ಮೈಯಮಾಟದಲ್ಲಿ
ಜೀವ ತುಂಬಿಬಂತು"


"ಮುಗಿಲ ಬೆಳಕಿನ ಬೀಜ ಮರವಾಗಿ ನೆಲವ ತಬ್ಬಿತ್ತು"

"ಏನಾದರೂ ಆಗಲಿ, ಹಾಡು ನಿಲ್ಲಿಸಬೇಡ
ದೀಪ ಪಟ್ಟನೆ ಆರಿ ಹೋಗಬಹುದು
ನನ್ನೆದೆಯ ಕತ್ತಲೆಯ ಕಣ್ಣುಕಪ್ಪಡಿ ಮತ್ತೆ
ಮೂಲೆ-ಮೂಲೆಗೆ ಹೋಗಿ ಹಾಯಬಹುದು"


"ಬಾಳಪುಟದಲ್ಲಿ ಬಾಲ್ಯವೆಂಬುವುದೊಂದು
ಅಳಿಸಲಾರದ ಮಧುರ ಭಾವಗೀತ"

"ಬದುಕು ಸೋಲಾದರೂ ಕಾಡು ಪಾಲದರೂ
ಹಾಡು ಬಿಟ್ಟುಳಿದವನ ಪಾಡು ಬೇಡ
ನೀನೆನ್ನ ದೈವತವು ಹಾಡೆನ್ನ ಜೀವಿತವು
ಮತ್ತೆ ಮತ್ತುಳಿದವರ ಮಾತು ಬೇಡ"


"ಮೆಲ್ಲದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ
ಹೆಣ್ಣ ಕಣ್ಣಂಚಿನಲ್ಲಿ ತುಳುಕುವಂತೆ"

"ಹೊಗೆ ನಟ್ಟು ಹೋಗಿರುವ ಮನದ ಮನೆಗೋಡೆಗಳು
ಸುಣ್ಣ-ಬಣ್ಣವನೆಂದು ಕಾಣಬಹುದು?
ಇಲ್ಲಣವು ಜೋತಿರುವ ಜೇಡಬಲೆ ನೇತಿರುವ
ಬೆಳಕಿಂಡಿಯಲ್ಲಿ ಬೆಳಕದೆಂತುಬಹುದು?"


"ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ"

ಜೀವನಪ್ರೀತಿಗೆ ಪರಿಧಿಯ ಹಂಗೇಕೆ?

ಜೀವನ ಪ್ರೀತಿಯ ಅನುಭೂತಿ ...!

ಯಾಕೋ ಇದ್ದಕಿದ್ದಂತೆ ಮತ್ತೆ ಮತ್ತೆ ಕಾಡೋ ನನ್ನೋಳಗಿನ ಇಬ್ಬನಿ ಹನಿಯಿದು. ತುಂಬಾ ಸಲ ಜೀವನ ಪ್ರೀತಿಯ ಅನುಭೂತಿಯೇ? ಅನ್ನೋ ಅನುಮಾನದ ಪ್ರಶ್ನೆ ನನ್ನೊಳಗೆ ಕಾಡಿದ್ದರೂ, ಹೌದು, ಈ ಬದುಕು ಪ್ರೀತಿಯ ಅನುಭೂತಿ ಅನ್ನುತ್ತಿದ್ದೆ ನನ್ನ ಆತ್ಮಸಾಕ್ಷಿ. ಒಂದು ಕ್ಷಣ ಕಣ್ಣಂಚು ಒದ್ದೆಯಾದರೂ, ನೋವು-ನಲಿವಿನ ಗೆರೆಗಳು ಕಣ್ಣಂಚಿನಲ್ಲಿ ಸರಿದು ಹೋದರೂ 'ಜೀವನವೇ ಪ್ರೀತಿಯ ಅನುಭೂತಿ' ಎಂದನಿಸುತ್ತೆ. ಹೌದು, ಈ ಜಗತ್ತು, ಈ ಜನ್ರು, ಈ ಪ್ರಕೃತಿ, ಈ ಪ್ರಾಣಿ ಪ್ರಪಂಚ, ಈ ಸರ್ವ ಜೀವಸಂಕುಲವನ್ನು ಕಲಿಯೋಕೆ, ತಿಳಿಯೋಕೆ ಅದೆಷ್ಟೋ ವರುಷಗಳು ಸರಿದಿವೆ. ಅಮ್ಮನ ಎದೆಹಾಲಿನ ಹಠ ಬಿಟ್ಟು ಅದೆಷ್ಟು ವರುಷ ಸರಿದಿದೆ ಅಲ್ವಾ?

ಅಲ್ಲಿಂದ ಇಲ್ಲಿತನಕ ಜೀವನವನ್ನು ಪ್ರೀತಿಸುತ್ತಾ, ನನ್ನಂತೆ ಇತರರು ಅನ್ನುತ್ತಾ, ಆತ್ಮಸಾಕ್ಷಿಯ ಮಾತಿಗೆ ತಲೆದೂಗುತ್ತಾ ಬಂದಿರೋವರಿಗೆ ಜೀವನದಲ್ಲಿ ಪ್ರೀತಿಯ ಅನುಭೂತಿ ಪಡೆಯೋದೇ ಒಂದು ಅದೃಷ್ಟ ಅನ್ನಬೇಕು. ಮೊನ್ನೆ ಮೊನ್ನೆ ನನ್ನ ಪ್ರೀತಿಯ ಗೆಳೆಯ ಚೆಂದದ ಸಾಲೊಂದು ಬರೆದುಕೊಡು ಎಂದಾಗ ನಂಗೆ ಥಟ್ಟನೆ ಹೊಳೆದ ವಾಕ್ಯ: ಜೀವನ ಪ್ರೀತಿಯ ಅನುಭೂತಿ!

ನಿಮಗೂ ಹಾಗೇ ಅನಿಸಲ್ವಾ ಹೇಳಿ? ಮನುಷ್ಯನಿಗೆ ಏಳೇಳು ಜನ್ಮವಿರುತ್ತೆ ಅಂಥ ನಮ್ಮಜ್ಜಿ ಹೇಳಿದ ನೆನಪು. ಹೌದು, ಅದಕ್ಕೆ ಮಾನವ ಜನ್ಮ ದೊಡ್ಡದು, ಅದನ್ನು ಹಾಳು ಮಾಡಿ ಕೊಳ್ಲದಿರಿ ಹುಚ್ಚಪ್ಪಗಳಿರಾ! ಎಂದು ಹಾಡಿದ್ದಿರಬೇಕು ದಾಸರು. ಹುಲ್ಲು, ಪೊದೆ, ಪ್ರಾಣಿಗಳಾಗಿ ಹುಟ್ಟುವ ಬದಲು ಮನುಷ್ಯನಾಗಿ ಹುಟ್ಟೋದೇ ಲೇಸು ಅಂತಾರೆ ಹಿರಿಯರು.

ಹುಟ್ಟಿದ ಮೇಲೆ, ಹುಟ್ಟಿ ಬೆಳೆದ ಮೇಲೆ ಇದೆಲ್ಲಾ ನೆನೆಪಾಗುತ್ತೆ ಕಣ್ರೀ. ಹೌದು, ನಾನೂ ಹುಟ್ಟಿದ್ದೇನೆ..ಮನುಷ್ಯಳಾಗಿ! ಒಂದಿಷ್ಟು ಭಾವನೆಗಳು, ಒಂದಿಷ್ಟು ಪ್ರಿತಿ, ಒಳ್ಳೆಯದೆನಿಸುವ ಜೀವನ, ಹೃದಯದಲ್ಲಿ ಒಂದಿಷ್ಟು ಕನಸು, ಅಮ್ಮನ ಮಮತೆ, ವಾತ್ಸಲ್ಯ, ಎಲ್ಲನೂ ದೇವ್ರು ಕೊಟ್ಟಿದ್ದಾನೆ. ಹಸಿವ ಹೊಟ್ಟೆಗೆ, ಉಡೋ ಬಟ್ಟೆಗೆ, ಬಸ್ಸಿಗೆ ಓಡಾಡೋಕೆ, ಅಮ್ಮನ ಕನಸಿಗೆ ಜೀವ ತುಂಬೋಕೆ: ಕೈಗೊಂದು ಪುಟ್ಟ ಕೆಲಸ! ಆಸರೆಗೆ ಪುಟ್ಟದೊಂದು 'ಮನೆ', ಅದೇ ನನ್ನ ಪಾಲಿನ 'ಅರಮನೆ'. ಅಕ್ಷರಗಳಿಗೆ ಜೀವ ತುಂಬೋಕೆ ಒಂದಿಷ್ಟು ಸುಂದರ ಭಾವನೆಗಳು, ನನ್ನಂತೆ ಪರರೂ ಎನ್ನೋ ಪುಟ್ಟದಾದ ಮನಸ್ಸು, ಇತತರ ನೋವು-ನಲಿವಿಗೆ ಸ್ಪಂದಿಸುವ ಹೃದಯ..ಸಾಕಲ್ವೇ? ಬದುಕನ್ನು ಪ್ರೀತಿಸೋಕೆ!

ನಿನ್ನೆ ಸುನಂದಾ ಬೆಳಗಾಂವಕರ ಅವರ, 'ಕೊಡುವುದೇನು, ಕೊಂಬುದೇನು?' ಪುಸ್ತಕ ಓದುತ್ತಿದ್ದೆ. ಅವರೊಂದು ಕಡೆ ಹೇಳುತ್ತಾರೆ, "'ದೇವರು ಈ ಜೀವನವನ್ನು ಪ್ರೀತಿಸುವುದಕ್ಕೆಂದೇ ಕೊಟ್ಟಿದ್ದಾನೆ, ದ್ವೇಷಿಸುವುದಕ್ಕಲ್ಲ. ಪ್ರೀತಿ, ದ್ವೇಷ ಬೆಳಕು ನೆಳಲಿನ ಆಟ. ದ್ವೇಷಿಸುತ್ತಾ ಬದುಕುವುದು ಒಂದು ಶಾಪ. ಪ್ರೀತಿಸುತ್ತಾ ಬದುಕುವುದು ಒಂದು ವರ"!

ಬಹುಶಃ ಈ ಪುಟ್ಟ ಲೇಖನಕ್ಕೆ ಸ್ಫೂರ್ತಿ ಕೂಡ ಇದೇ ಸತ್ವಯುತವಾದ ಶಬ್ಧಗಳಿರಬಹುದು. ಜೀವನಪ್ರೀತಿಗೆ ಪರಿಧಿ ಬೇಡ, ಅದು ಶರಧಿಯಂತೆ ಪ್ರವಹಿಸಲಿ. ಪ್ರೀತಿಗೆ ಹಂಗು ಬೇಡ..ನಮ್ಮ ಬದುಕನ್ನೇ ಪ್ರೀತಿಸಿ ಬಿಡೋಣ. ಅಲ್ಲಿ ಅನನ್ಯತೆಯಿದೆ, ಪ್ರಾಮಾಣಿಕತೆ ಇದೆ, ನಿಷ್ಕಲ್ಲಶ ಭಾವನೆಯಿದೆ. ಮತ್ತೇನು ಬೇಕು? ಒಂಬತ್ತು ತಿಂಗಳು ಹೊತ್ತು, ಹೆತ್ತು, ಸಲಹಿ, 'ನಾವೀಗ ದೊಡ್ಡವರಾಗಿದ್ದೇವೆ' ಅನ್ನೋದನ್ನು ಹೇಳಿಕೊಳ್ಳುವಂತೆ ಮಾಡಿರುವ 'ಅಮ್ಮನೆಂಬ ದೇವರು' ನೀಡಿದ ಈ ಅಮೂಲ್ಯ ಬದುಕಿಗೆ?

Wednesday, July 15, 2009

ನನ್ನೊಳಗಿನ ಇಬ್ಬನಿ ಹನಿಗಳು...

ಜೀವನ ಪ್ರೀತಿಯ ಅನುಭೂತಿ!

ಒಂದೇ ಒಂದು ಕ್ಷಣಕ್ಕೆ ನೀನು ಕವಿತೆಯಾಗು, ಮಳೆ ಬರ್ತಾ ಇದೆ!

ಬದುಕಿನಲ್ಲಿ ಇಟ್ಟಿದ್ದು ಎರಡನೇ ಹೆಜ್ಜೆ, ಅದರಲ್ಲಿ ಒಂದು ನೀನು!

ಮನಸ್ಸು ಒಣಗಿತ್ತು, ಥಟ್ಟನೆ ನೆನಪುಗಳು ಮುತ್ತಿದವು!

ನಗುಮಳೆಯಲ್ಲಿ ತೊಯ್ದುಬಿಡ್ತೀನಿ, ಕವನ ಬರೇತೀಯಾ ಹೇಳು!

ಒಡೆಯದಿರು ಕನ್ನಡೀನಾ..ಮತ್ತೆ ಒಂದಾಗಿಸೋಕೆ ಆಗೋಲ್ಲ.

ನಾನ್ಯಾಕೆ ನಗಬೇಕು..ನಿನ್ನ ನಗುವೇ ನನ್ನೊಳಗಿರುವಾಗ!

ಅಂದು ತುಂಬಾ ಅತ್ತಿದ್ದೆ. ನೀನು ಅಮ್ಮನಾಗಬೇಕಂದಿತ್ತು ಮನಸ್ಸು!

ನಿನ್ನ ನಗು ಮತ್ತು ಕಣ್ಣುಗಳನ್ನು ಪ್ರೀತಿಸ್ತೀನಿ. ಖುಷಿಯಲ್ಲಿದ್ದಾಗ ಬೆಳಕು ಕೊಡು.

ಯಾಕೋ ಕಾಡುತ್ತಿವೆ ಬಚ್ಚಿಟ್ಟುಕೊಂಡ ನೆನಪುಗಳು, ಆದರೆ ಅವುಗಳಿಗೆ ಜೀವವಿರಲಿಲ್ಲ!

ಕನಸು ಕಲ್ಲಾಗುವ ಮೊದಲು, ಹುಣ್ಣಿಮೆ ಬೆಳದಿಂಗಳು ಸೂಸಿಬಿಡು, ನಾನೂ ನಗುತ್ತೇನೆ..ನಿನ್ನಂತೆ!

ಬೆಳದಿಂಗಳಲ್ಲಿ ಕಲ್ಲು ಬೆಂಚಿನ ಮೇಲೆ ಕುಳಿತ ಎನಗೆ ಅಮ್ಮ ನೀಡಿದ ತುತ್ತು ನೆನಪಾಯಿತು, ಅಲ್ಲಿ ನಗುತ್ತಿದ್ದೆ!

Thursday, July 9, 2009

ನಾವ್ಯಾಕೆ 'ಮಗು'ವಿನ 'ನಗು'ವಾಗೊಲ್ಲ...?

ಹೌದು, ಆ ಮಗು ನನ್ನ ನೋಡಿ ಮುಗುಳುನಗು ಸೂಸಿಬಿಡ್ತು. ಏನೋ ಯೋಚನೆಯಲ್ಲಿ ಮುಳುಗಿದ್ದ ನಾನೂ ನಕ್ಕುಬಿಟ್ಟೆ...ನನಗರಿವಿಲ್ಲದೆಯೇ! ನಿಮಗೂ ಹಾಗೇ ಆಗಬಹುದು. ಹೌದು..ಅದಕ್ಕೆ ಕಾರಣ ಆ ಪುಟ್ಟ ಮಗುವಿನ ನಗು! ಹೌದು..ಮಕ್ಕಳು ನಕ್ಕರೆ ಹಾಗೇ ಸಕ್ಕರೆಯಂತೆ!. ನಾವು ನಮ್ಮನ್ನೇ ಮರೆತುಬಿಡುವಷ್ಟು ಚೆನ್ನಾಗಿ ನಗುತ್ತವೆ. ಎಷ್ಟೋ ಬಾರಿ ನನ್ನ ಮನಸ್ಸು ಆ ಮಗುವಿನಂತೆ ನಾನೂ ನಗಲು ಸಾಧ್ಯವಾಗುತ್ತಿದ್ದರೆ ಎಂದನಿಸುತ್ತೆ. ನಮ್ಮನೆ ಪಕ್ಕದ ಮಗು ಯಾಮಿನಿ ನಿತ್ಯ ಬಂದು ನಾನು ಸಿಟ್ಟಲ್ಲಿ ಗೊಣಗುಟ್ಟುತ್ತಿದ್ದರೂ ಆಂಟಿ ಆಫಿಸ್ ನಿಂದ ಯಾವಾಗ ಬಂದ್ರೀ? ಅಂತ ಕೇಳಿದಾಗ ಸಿಟ್ಟೆಲ್ಲ ಜರ್ರನೆ ಇಳಿದುಹೋಗುತ್ತೆ. ಮೊದಲ ಮಹಡಿಯಲ್ಲಿರುವ ಶ್ರೇಯಸ್ಸು ನನ್ನ ಚಪ್ಪಲ ಸದ್ದಿಗೆ ಬಾಗಿಲ ಬಳಿ ಬಂದು ಸಂದಿಯಲ್ಲಿ ನಿಂತು ಮುಗ್ಧವಾಗಿ ನಕ್ಕಾಗ ಮನತುಂಬಿ ಬಿಡುತ್ತೆ. ಬೆಳಿಗ್ಗೆಯಿಂದ ಸಂಜೆ ತನಕ ಆಫೀಸ್ ನಲ್ಲಿ ದುಡಿದು ದಣಿದರೂ ಆ ದಣಿವನ್ನೆಲ್ಲಾ ಆ ನಗು ನುಂಗಿಬಿಡುತ್ತೆ. ನಾನು ಈ ಹಿಂದೆ 'ನಾನೂ ಮಗುವಾಗಿರಬೇಕಿತ್ತು' ಎಂಬ ಬರಹ ಬರೆದಾಗ 'ಮಕ್ಕಳ ಜೊತೆ ನೀನು ಮಗುವಾಗಿಬಿಡು' ಅಂತ ಸಲಹೆ ನೀಡಿದವರು ಅದೆಷ್ಟೋ ಮಂದಿ. ಹೌದು, ನಂಗೂ ಹಾಗೇ ಅನಿಸುತ್ತೆ..ಪುಟ್ಟ ಮಕ್ಕಳ ಜೊತೆ ನಾವೂ ಮಕ್ಕಳಾಗಿಬಿಡೋದು ಎಷ್ಟು ಖುಷಿ ಕೊಡುತ್ತೆ ಅಂತ.

ಓನರ್ ಆಂಟಿಯ ಮಗು ಮನೀಷ್ ಬಂದು ತೊಡೆ ಮೇಲೆ ಕುಳಿತು ಬ್ಯಾಗೆಲ್ಲಾ ಡೈರಿ ಮಿಲ್ಕ್ ಕೊಡು ಎಂದು ಪೀಡಿಸಿದಾಗ ಅದೇ ಒಂಥರಾ ಖುಷಿ. ಬ್ಯಾಟ್ ಹಿಡಿಯಲು ಬಾರದ ಮಕ್ಕಳ ಜೊತೆ ನಾವೂ ಬ್ಯಾಟ್ ಹಿಡಿದು ಆಡೋದು ಅದೂ ಒಂಥರಾ ಖುಷಿ. ಕಾಲು ಜಾರಿ ದೊಪ್ಪನೆ ನೆಲದ ಮೇಲೆ ಬಿದ್ದ ಮಗುವನ್ನು ಸಂತೈಸಿದಾಗ ಆ ಮಗು ನೋವನ್ನೆಲ್ಲಾ ಮರೆತು ನಗುತ್ತೆ ಅಲ್ವಾ? ಅದೂ ಒಂದು ನೆಮ್ಮದಿಯ ಖುಷಿ. ಮಕ್ಕಳು ನಕ್ರೆ ಖುಷಿ, ಅತ್ರೂನೂ ಖುಷಿ, ಹೇಗಿದ್ರುನೂ ಮಕ್ಕಳು ಚೆಂದವೇ, ಅದಕ್ಕೆ ಮಕ್ಕಳನ್ನು ದೇವರಿಗೆ ಹೋಲಿಸುತ್ತಾರೆ. ಇನ್ನು ಕೆಲ ಮಕ್ಕಳು ತೊಟ್ಟಿಲಲ್ಲಿ ಮಲಗಿ ನಿದ್ದೆ ಮಾಡುತ್ತಿರುವಾಗಲೇ ನಗುತ್ತವೆ..ನನ್ನ ತಮ್ಮ ಹಾಗೇ ನಗುವಾಗ ಅಮ್ಮ ಹೇಳುತ್ತಿದ್ದ ನೆನಪು: ಮಗು ಅಂದ್ರೆ ದೇವರು ಪುಟ್ಟಾ, ಅದಕ್ಕೆ ನೋಡು ಇವ ನಗುತ್ತಾನೆ ಅಂತ!

ಹೌದು, ನಾವೂ ಮಕ್ಕಳಾಗಿರುವಾಗ ಹೀಗೆ ತೊಟ್ಟಿಲಲ್ಲಿ ನಕ್ಕಿರಬಹುದು, ಅತ್ತಿರಬಹುದು, ಅಲ್ಲೇ ಉಚ್ಚೆ ಹೊಯ್ದಿರಬಹುದು. ಆವಾಗ ಎಷ್ಟು ಮಂದಿ ನಮ್ಮ ಮುದ್ದಿಸುತ್ತಿದ್ದರು, ಆಟವಾಡಿಸುತ್ತಿದ್ದರು. ನಮ್ಮ ಜೊತೆ ಎಷ್ಟೋ ಮಂದಿ ಮಕ್ಕಳಾಗುತ್ತಿದ್ದರು ಎಂದನಿಸುತ್ತೆ. ಆದರೆ ಯಾಕೋ ಒಂದು ಪುಟ್ಟ ನೋವು ನಿತ್ಯ ನನ್ನೆದೆ ಕಾಡುತ್ತೆ, ಪೀಡಿಸುತ್ತೆ, ನೋಯಿಸುತ್ತೆ.
ಅದೇ ಪುಟ್ಟ ಮಗುವಾಗಿದ್ದಾಗ ಜಗತ್ತಿಗೇ 'ನಗು'ವಾಗಿದ್ದ ಈ ಮನುಷ್ಯ ಅದೇಕೆ ಕಳ್ಳನಾಗುತ್ತಾನೆ, ದರೋಡೆ ಮಾಡುವವನಾಗುತ್ತಾನೆ, ಸಮಾಜಕ್ಕೆ ಕಳಂಕವಾಗುತ್ತಾನೆ, ತಾಯಿ ಸಮಾನಳಾದ ಹೆಣ್ಣನ್ನು ಅತ್ಯಾಚಾರ ಮಾಡಿ ಬೀದಿಗೆಸೆಯುತ್ತಾನೆ, ಮೋಸ, ವಂಚನೆಯ ಕೂಪಕ್ಕೆ ತನ್ನ ಒಡ್ಡಿಕೊಳ್ಳುತ್ತಾನೆ? ಪುಟ್ ಪಾತ್ ನಲ್ಲಿ ನಡೆಯೋ ಬಡಬಗ್ಗರ ಮೇಲೆ ತನ್ನ ವಾಹನ ಸವಾರಿ ಮಾಡಿ 'ಕೊಲೆಗಾರ' ನಾಗುತ್ತಾನೆ? ಏಕೆ ಕನಸುಗಳನ್ನು ಕೊಂದು ಕೊಚ್ಚಿಹಾಕುತ್ತಾನೆ? ತನ್ನ ಗೋರಿಯನ್ನು ತಾನೇ ಯಾಕೆ ಕಟ್ಟಿಕೊಳ್ಳುತ್ತಾನೆ? ಬದುಕಿನ ಇತಿಹಾಸದಲ್ಲಿ 'ನಾಯಕ' ನಾಗುವಅದೇಕೆ 'ಖಳನಾಯಕ' ನಾಗುತ್ತಾನೆ? ಅಯ್ಯೋ ಆ ಪುಟ್ಟ ಮಗು ಅದೇಕೋ ಭಯೋತ್ಪಾದಕನಾದ? ಇಂಥ ಮಿಲಿಯನ್ ಡಾಲರ್ ಪ್ರಶ್ನೆಗಳು ನನ್ನ ನಿತ್ಯ ಕಾಡುತ್ತವೆ.

ಹೌದು, ಪ್ರತಿ ಮಾನವನೂ ಹುಟ್ಟುವಾಗ ಒಳ್ಳೆಯವನಾಗಿರುತ್ತಾನೆ, ಸುತ್ತಲ ಸಮಾಜ ಅವನನ್ನು ಕೆಟ್ಟವನಾಗಿಸುತ್ತದೆ ಯಾರೋ ತಿಳಿದವರು ಹೇಳಿದ ಮಾತು ನೆನಪಾಗುತ್ತಿದೆ. ಪುಟ್ಟ ಮಗುವಾಗಿದ್ದಾಗ ಸಮಸ್ತವನ್ನೂ , ಸಮಸ್ತರನ್ನೂ ಪ್ರೀತಿಸುವ ನಮ್ಮ ಮನಸ್ಸು ದೊಡ್ಡವರಾದಂತೆ ಪ್ರೀತಿಗೊಂದು ಪರಿಧಿ, ಸ್ನೇಹಕ್ಕೊಂದು ಪರಿಧಿ, ಬದುಕಿನ ಹೆಜ್ಜೆ-ಹೆಜ್ಜೆಯ ಬಾಂಧವ್ಯಗಳನ್ನೂ 'ಪರಿಧಿ'ಯೊಳಗೆ ಹಾಕಿಬಿಡುತ್ತವೆ. ಮಗುವಿನಂತೆ ಪ್ರೀತಿಸುವ, ಮಗುವಿನಂತೆ ನಕ್ಕು ಖುಷಿಕೊಡುವ ಆ ಮುಗ್ಧ, ಪ್ರಾಮಾಣಿಕ ಮನಸ್ಸು ಯವುದೋ 'ಪರಿಧಿ' ಯೊಳಗೆ ಸುತ್ತುತ್ತಿರುತ್ತೆ ಎಂದನಿಸುತ್ತೆ. ಜೀವನದಲ್ಲಿ ಪ್ರೀತಿ, ಸ್ನೇಹ-ಬಾಂಧವ್ಯಗಳ ಅನನ್ಯ ಅನುಭೂತಿಯಿಂದ 'ಬದುಕುವವರು' ವಂಚಿತರಾಗೋದು ಹೀಗೇ ಅಲ್ಲವೇ?

ಹೌದು, ಈ ದೇಶ ಮಗುವಿನ ನಗು ಸೂಸೋದು ಯಾವಾಗ? ಮತ್ತೆ ಮತ್ತೆ ಕೇಳುತ್ತಿದ್ದೆ ನನ್ನ ಅಂತರಾತ್ಮ ಕಂಗಳಲ್ಲಿ ಭರವಸೆಯ ಹುಣ್ಣಿಮೆ ಬೆಳಕು ಸೂಸುತ್ತಾ?!





Monday, June 29, 2009

ಅದ್ಯಾಕೋ ಅಕ್ಷರಗಳು ಖಾಲಿ ಪುಟದಲಿ ಮೂಡಲಿಲ್ಲ..!

ನಾನ್ಯಾಕೆ ಬರೆಯುತ್ತೇನೆ? ಅದೇ ನನ್ನ ಖುಷಿಗೆ, ನನ್ನ ಬರಹದ ತುಡಿತವನ್ನು ಇಲ್ಲಿ ಹಂಚಿಕೊಳ್ಳೋದಕ್ಕೆ. ನನ್ನೊಳಗಿನ ಪುಟ್ಟ ಪುಟ್ಟ ಖುಷಿಯ ಕ್ಷಣಗಳನ್ನು ನಿಮ್ಮ ಜೊತೆ ಹಂಚಿಕೊಳ್ಳೋದಕ್ಕೆ. ಮನದ ಮೂಲೆಯಲ್ಲಿದ್ದ ದುಗುಡ-ದುಮ್ಮಾನಗಳನ್ನು ನಿಮ್ಮ ಜೊತೆ ಹಂಚಿಕೊಂಡು ಮನಸ್ಸು ತಿಳಿಯಾಗಿಸೋದಕ್ಕೆ. ನನ್ನೊಳಗಿನ ಕನಸುಗಳನ್ನು ನಿಮ್ಮ ಜೊತೆ ಹಂಚಿ, ವಿಶ್ ಪಡೆಯೋದಕ್ಕೆ. ಹೌದು. ಹೇಳಲಾಗದ ಮಾತು, ಬಚ್ಚಿಡಲಾಗದ ಭಾವನೆಗಳನ್ನು ಇಲ್ಲಿ ಬಿಚ್ಚಿಡೋದಕ್ಕೆ. ಜಗತ್ತಿನ ಸತ್ಯ-ಮಿಥ್ಯಗಳನ್ನು ಕಂಡು ಕಂಗಳು ನೀರಾದಾಗ ಮನಸ್ಸು ಶುಭ್ರಗೊಳಿಸೋದಕ್ಕೆ ನಾ ಬರೆಯುತ್ತೇನೆ. ಜೀವನ ಪ್ರೀತಿಯಲ್ಲಿ ಮಿಂದು ಮನಸ್ಸು ಖುಷಿಗೊಂಡಾಗ 'ಬದುಕೆಷ್ಟು ಸುಂದರ' ಅಂತ ಖುಷಿಯಿಂದ ಬರೆದುಬಿಡ್ತೀನಿ. ಅದೇ ಇರೋ ಜೀವನದಲ್ಲಿ ಪುಟ್ಟ ಕಷ್ಟಗಳನ್ನೇ ಸಹಿಸಿಕೊಳ್ಳಲಾಗದೆ ಹೃದಯ ಭಾರವಾದಾಗ ಮತ್ತದೇ ಬೇಸರ..ಅದೇ ಹಾಡು..ಅನ್ನೋಕೂ ಈ ಅಕ್ಷರಲೋಕವೇ ಸಾಥ್ ನೀಡೋದು.

ತುಂಬಾ ದಿನಗಳಾಯ್ತು...ಏನೂ ಬರೆಯಕ್ಕಾಗ್ತಿಲ್ಲ. ..ಬರೆಯಲಿಲ್ಲ. ಒಂದಷ್ಟು ಕೆಲಸ ಹೆಗಲ ಮೇಲೆ ಬಿದ್ದಾಗ, ಒಂದಷ್ಟು ಹೊತ್ತು ವ್ಯರ್ಥ ಮಾತುಗಳಲ್ಲಿ ಕಳೆದುಹೋದಾಗ, ಮನೆಯ ಚಿಂತೆ ಕಾಡತೊಡಗಿದಾಗ..ಏನೋ ಒಂಥರಾ ಮನಸ್ಸು ಗೊಂದಲಗಳಲ್ಲಿ ಸಿಕ್ಕಾಗ ಬರೆಯಲು ಕುಳೀತರೂ ಬರೆಯಲಕ್ಕಾಗುತ್ತಿಲ್ಲ. ನನ್ನೊಳಗಿನ ಮಾತುಗಳಿಗೆ ಈ ಬ್ಲಾಗ್ ವೇದಿಕೆ ಅಂದ್ರೂ ಆಗ್ತಿಲ್ಲ. ತುಂಬಾ ನನ್ನನ್ನು ನಾನೇ ಬೈದುಕೊಂಡಿದ್ದೆ. ಹೀಯಾಳಿಸಿಕೊಂಡಿದ್ದೆ. ಖಾಲಿ ಪುಟಗಳನ್ನು ರಾಶಿ ಹಾಕೊಂಡು ಏಕಾಂಗಿಯಾಗಿ ಪೆನ್ನು ಹಿಡಿದು ಕುಳಿತರೂ ಕೈಗಳಲ್ಲಿ ಅಕ್ಷರಗಳು ಮೂಡುತ್ತಿಲ್ಲ, ಭಾವನೆಗಳು ಮಾತಾಡುತ್ತವೆ. ಕಣ್ಣುಗಳು ಮಾತಾಡುತ್ತವೆ, ಮೌನಗಳೂ ಮಾತಾಡುತ್ತವೆ. ಕಿವಿ ಇಂಪಾದ ಹಾಡುಗಳತ್ತ ತುಡಿಯುತ್ತದೆ. ಹೃದಯ ಜೀವನಪ್ರೀತಿಯ ಹುಡುಕಾಟದಲ್ಲಿ ಕಳೆಯುತ್ತೆ. ಮನಸ್ಸು ಮಣ್ಣುಗೂಡಿದ ಪ್ರೀತಿಯನ್ನು ನೆನೆಯುತ್ತೆ. ಆದರೆ ಅಕ್ಷರಗಳು ಖಾಲಿ ಪುಟದ ಮೇಲೆ ಬೀಳುತ್ತಿಲ್ಲ. ಕೈಯಲ್ಲಿರುವ ಪೆನ್ನು ಖಾಲಿ ಪುಟದ ಮೇಲೆ ಬಿಂದುವನ್ನಷ್ಟೇ ಇಟ್ಟು ಸುಮ್ಮನಿದ್ದೆ.

ಏನೇನೋ ಯೋಚನೆಗಳು..ಅಮೂರ್ತ ಕಲ್ಪನೆಗಳು. ಸತ್ಯ, ಪ್ರಾಮಾಣಿಕತೆ, ನಿಷ್ಕಲ್ಮಶ ಪ್ರೀತಿ ಯಾಕೋ ಢಾಳಾಗಿ ಕಾಣುತ್ತವೆ. ಪ್ರಾಮಾಣಿಕವಾಗಿ ಕೆಲ್ಸ ಮಾಡಿದ್ರೂ ಬಾಸ್ ಕೈಯಲ್ಲಿ ಬೈಸಿಕೊಳ್ತೀವಿ. ಬದುಕಿನಲ್ಲಿ ಮಾನವೀಯ ಬಾಂಧವ್ಯ, ಜೀವನಪ್ರೀತಿಯ ಕುರಿತು ಮಾತನಾಡೋರು ವೇದಿಕೆ ಮೇಲೆಯಷ್ಟೇ ಗೊಣಗುತ್ತಾರೆ. ಜೀವನ ಅಂದ್ರೆ ನಮ್ಮೂರ ಆಟದ ಮೈದಾನ ಅನ್ನೋರು ಕೆಲವರು, ಇನ್ನು ಕೆಲವರು ಜೀವನನಾ ಸೀರಿಯಸ್ ಆಗಿ ತಕೋಪಾ ಅಂತ ಬೋಧನೆ ಮಾಡ್ತಾರೆ. ಆದರೆ ಬೋಧನೆ ಮಾಡಿದವರಾರು ನಿಜವಾದ ಜೀವನಾನ ಕಂಡೋರಿಲ್ಲ, ಜೀವನದಲ್ಲಿ ಉದ್ದಾರವೂ ಆಗಿಲ್ಲ! ಇರಲಿ ಏನೇನೋ ಯೋಚನೆಗಳು..

ನೆನಪಾದುವು ಜಿ.ಎಸ್.ಎಸ್. ಅವರ ಕವನದ ಸಾಲುಗಳು.......
ನಾನು ಬರೆಯುತ್ತೇನೆ...
ನನ್ನ ಸಂವೇದನೆಗಳನ್ನು,
ಕ್ರಿಯೆ-ಪ್ರತಿಕ್ರಿಯೆಗಳನ್ನು,
ದಾಖಲು ಮಾಡುವುದಕ್ಕೆ..!
ನಿಂತ ನೀರಾಗದೆ ಮುಂದಕ್ಕೆ
ಹರಿಯುವುದಕ್ಕೆ...
ನನ್ನನ್ನು ನಾನು ಕಂಡುಕೊಳ್ಳುವುದಕ್ಕೆ...
ನಾನು ಬರೆಯುತ್ತೇನೆ
ಋಷಿಯ ನೋವಿಗೆ...
ರೊಚ್ಚಿಗೆ ಮತ್ತು ಹುಚ್ಚಿಗೆ..
ಅಥವಾ ನಂದಿಸಲಾರದ ಕಿಚ್ಚಿಗೆ...!


ಹೌದು..ಮತ್ತೆ ನಾನು ಬರೆಯುತ್ತೇನೆ..ನನ್ನೊಳಗನ್ನು ತೆರೆದಿಡುತ್ತೇನೆ..ಮುಂದಿನ ಬರಹ ಸದ್ಯದಲ್ಲಿಯೇ ನಿಮ್ಮೆದುರು ಕಾಣಲಿದೆ. ಬರ್ತಾ ಇರಿ..ಬೆನ್ನುತಟ್ಟುತ್ತಿರಿ..

Saturday, June 13, 2009

ಆಕೆಯೂ ನಗುತ್ತಾಳೆ..ದುಃಖಗಳನ್ನು ಎದೆಯೊಳಗಿಟ್ಟು!

ಅವಳು ನೆನಪಾಗುತ್ತಾಳೆ...!

ತುಂಬಾ ಸುಂದರ ಹುಡುಗಿ..ಥೇಟ್ ಕನಸುಳ್ಳ ಹುಡುಗಿ..ಭರವಸೆಯ ಹುಡುಗಿ. ಕತ್ತಿನಲ್ಲೊಂದು ತಾಳಿ..ಬದುಕಿಗೆ ಬೇಲಿ. ಅವಳ ನಗುವಿನಲ್ಲಿ ಕಾಣೋದು ಬರೀ ಬೆಳಕು..ನೋವಿನ ಕಣ್ಣೀರಿಲ್ಲ. ನಿತ್ಯ ನಗುತ್ತಾ ಬಾಳೋಳು..ಹುಣ್ಣಿಮೆಯ ತಂಪು ಬೆಳದಿಂಗಳಂತೆ! ಹೌದು..ಆಕೆಗೆ ನನಗಿಂತ ಮೂರು-ನಾಲ್ಕು ವರ್ಷ ಹೆಚ್ಚಾಗಿರಬಹುದು. ನಿತ್ಯ ಅವಳನ್ನು ನೋಡ್ತೀನಿ..ನಗುತ್ತಾಳೆ..ಪ್ರೀತಿಯ ಮಾತಾಡುತ್ತಾಳೆ. ಹೌದು, ಒಂದು ಖುಷಿಯ ಮಾತು ಸಾವಿರಾರು ದುಃಖಗಳಿಗೆ ಪರಿಹಾರ ನೀಡುತ್ತೆ..ಹಸಿದ ಹೊಟ್ಟೆಗೆ ಅನ್ನ ನೀಡುತ್ತೆ, ಬಾಯಾರಿದವನಿಗೆ ಒಂದು ಲೋಟ ನೀರು ನೀಡಿದಂತೆ ..ಅನ್ನೋದ್ರಲ್ಲಿ ನಂಬಿಕೆಯಿಟ್ಟ ನನ್ನಂಥವರಿಗೆ ಪ್ರೀತಿಯಿಂದ ಮಾತನಾಡಿಸುವವರನ್ನು ಕಂಡರೆ ಅಕ್ಕರೆ. ಆಕೆಯಲ್ಲೂ ನನಗೆ ಅಕ್ಕರೆ..ಪ್ರೀತಿ! ಎದುರುಗಡೆ ಸಿಕ್ಕಾಗ ಪುಟ್ಟದೊಂದು ನಗು..ಖುಷಿಯ ಹಿತ-ಮಿತ ಮಾತು. ಕುತ್ತಿಗೆಯಲ್ಲಿ ಜೋತುಬಿದ್ದಿದ್ದ ತಾಳಿ ಮಾತ್ರ ನನ್ನೊಳಗೆ ನೂರಾರು ಪ್ರಶ್ನೆಗಳಿಗೆ ಉತ್ತರ ಹೇಳದೆ ಮೌನವಾಗಿತ್ತು. ಹೌದು, ಹೆಣ್ಣಿನ ಬದುಕಿನಲ್ಲಿ ಸಪ್ತಪದಿ..ಅದಕ್ಕಿರುವಷ್ಟು ಮಹತ್ವ ಬಹುಶಃ ಬೇರೇನಕ್ಕೂ ಇರಲಿಕ್ಕಿಲ್ಲ ಅನಿಸುತ್ತೆ..'ತಾಳಿ' ಹೆಣ್ಣಿನ ಬದುಕೂ ಹೌದು!

ಅವಳು...ನನ್ನೊಳಗಿನ ಪ್ರಶ್ನೆಗೆ ಆಕೆ ಉತ್ತರ ಹೇಳಲಿಲ್ಲ..ನಾನು ಕೇಳಲಿಲ್ಲ...ಕೇಳೋದೂ ಸರಿ ಅನಿಸಲಿಲ್ಲ! ಅವಳು ಆ ಪುಟ್ಟ ಮನೆಯಲ್ಲಿ ಒಬ್ಬಳೇ..ಎಲ್ಲಾ ರಾತ್ರಿಗಳೂ ಅವಳಿಗೆ ಕನವರಿಕೆ ಮಾತ್ರ. ಬರೇ ಕನಸುಗಳು ಮಾತ್ರ. ಅಲ್ಲೇ ಇರುವ ಆಂಟಿ ಒಬ್ಬರು ಮೊನ್ನೆ ನಮ್ಮನೆಗೆ ಬಂದಾಗ ಅವಳ ಕಥೆಯನ್ನೇ ಬಿಚ್ಚಿಟ್ಟರು. ನನಗರಿವಿಲ್ಲದೆ ನಾನು ಕಣ್ಣೀರಾಗಿದ್ದೆ. ಇಂದಿಗೂ ನಗುವಿನ ಹಿಂದಿನ ಕಥೆಯನ್ನು ನೆನೆಸಿಕೊಳ್ಳುತ್ತಾ ನನ್ನ ಹೆಣ್ಣು ಹೃದಯನೂ ರೋಧಿಸುತ್ತೆ,. ಬದುಕು ಎಷ್ಟು ಕ್ರೂರ ಅನಿಸಿಬಿಡುತ್ತೆ.

ಹೌದು! ಅವಳಿಗೆ ಮದುವೆಯಾಗಿದೆ..ಒಂದು ವರುಷದ ಹಿಂದೆ! ಅದಕ್ಕೆ ಕುತ್ತಿಗೆಯಲ್ಲಿ ತಾಳಿ ಇದೆ.! ತುಂಬಾ ಬಡಕುಟುಂಬದ ಹೆಣ್ಣುಮಗಳು. ಒಪ್ಪೊತ್ತಿನ ಅನ್ನಕ್ಕೂ ಅವಳ ಮನೆಯಲ್ಲಿ ಕಷ್ಟ. ಅದಕ್ಕೆ ಆಕೆಯನ್ನು ಅರುವತ್ತು ವರುಷ ದಾಟಿದ ಒಬ್ಬನಿಗೆ ಮದುವೆ ಮಾಡಿ ಕೊಟ್ಟಿದ್ದಾರೆ. ಅವನಿಗೆ ಈಗಾಗಲೇ ಮದುವೆಯಾಗಿ. ಮೂರು ಹೆಣ್ಣುಮಕ್ಕಳಿದ್ದಾರೆ. ಅವರಿಗೆ ಮದುವೆಯಾಗಿ..ಅವನಿಗೆ ಮೊಮ್ಮಕ್ಕಳೂ ಇದ್ದಾರೆ! ಅವನಿಗೆ ಗಂಡು ಮಕ್ಕಳಿಲ್ಲ..ಕೈತುಂಬಾ ಹಣವಿದೆ. ಗಂಡು ಮಕ್ಕಳಿಲ್ಲ ಅನ್ನೋ ಕಾರಣಕ್ಕೆ ಇವಳನ್ನು ಮದುವೆಯಾಗಿದ್ದಾನೆ...ಅದೂ ಮೊದಲನೆಯ ಹೆಂಡತಿ, ಮಕ್ಕಳಿಗೆ ಗೊತ್ತಿಲ್ಲದಂತೆ! ಬೇರೆ ಮನೆ ಮಾಡಿ ಕೊಟ್ಟಿದ್ದಾನೆ..ವಾರದಲ್ಲಿ ಒಂದೆರಡು ಸಲ ಬೈಕ್ ಓಡಿಸಿಕೊಂಡು ಬರುತ್ತಾನೆ..ಅವನ ಬೈಕಿನ ಸದ್ದಿಗೆ ಆಕೆ ಖುಷಿಯಿಂದ ಓಡಿ ಬಂದು ಬಾಗಿಲು ತೆಗೆಯುತ್ತಾಳೆ. ಸಂಜೆ ವಾಪಾಸ್ ಅವನ ಮನೆಗೆ ಹೋಗುತ್ತಾನೆ..ಅವನ ಗಾಡಿ ಹೋಗುವಾಗ ಮತ್ತೆ ಹಿಂದಿನಿಂದ ಗೇಟ್ ಬಳಿ ಬಂದು ನೋಡುತ್ತಾಳೇ ಆ ಹೆಣ್ಣಮಗಳು..ಆತ ಬಂದಾಗ ಕಂಡ ಖುಷಿ, ಆತ ಮರಳಿದಾಗ ಅವಳ ಮುಖದ ಮೇಲೆ ಇರಲ್ಲ!

ಆ ಪುಟ್ಟ ಮನೆಯೊಳಗೇ ತನ್ನೆಲ್ಲಾ ಕನಸು ಕಟ್ಟೋಳು ಆಕೆ. ಹಗಲು-ರಾತ್ರಿಗಳು ಅವಳಿಗೆ ಅದೇ ಮನೆಯೊಳಗೆ. ಭರವಸೆಯ ನಾಳೆಗೂ ಅಲ್ಲೇ ಪುಟ್ಟ ಮನೆಯೊಳಗೆ...ಅದೇ ಆಕೆಯ ಬದುಕು! ನೋಡೋ ಕಣ್ಣುಗಳೆದುರು ನಗುತ್ತಾಳೆ..ದುಃಖವನ್ನೇ ಎದೆಯೊಳಗೆ ಮಡುಗಿಟ್ಟು! ಹೌದು..ಆಕೆಯ ಆತ್ಮವಿಶ್ವಾಸ ಮೆಚ್ಚಬೇಕು..ಹೆಣ್ಣಿಗೆ ತಾಳಿ..ಎಷ್ಟು ಮುಖ್ಯ ಅನಿಸಿಬಿಡುತ್ತೆ ಅವಳನ್ನು ಕಂಡಾಗ. ಆ 'ತಾಳಿ'ಗಾಗಿ ಆಕೆಯದು ಈ 'ಬದುಕು'! ಆದರೆ ಸುತ್ತಲ ಜನ ..ನನಗೆ ಕಥೆ ಹೇಳಿರುವ ಆ ಆಂಟಿಯ ಕಣ್ಣಲ್ಲಿ ಆಕೆಯ ಮೇಲೆ 'ಅನುಮಾನದ ಹುತ್ತ'! .ಆದರೆ 'ಗಂಡ' ಮಾತ್ರ ಸಾಕ್ಷಾತ್ ಶ್ರೀರಾಮ..! ಥೂ! ಅನಿಸಿತ್ತು.

ಯಾಕೋ ಮೊನ್ನೆಯಿಂದ ಆ ನಗುವಿನ ಹಿಂದಿನ ಕತೆ..ಮನಸ್ಸನ್ನು ತೀರಾ ರೋಧಿಸುವಂತೆ ಮಾಡಿಬಿಡ್ತು. ಹೀಗಾಗಬಾರದಿತ್ತು..ಆದರೆ ಆಕೆಗೂ ಅನಿವಾರ್ಯು..ನಗಬೇಕು..ಬಾಳಬೇಕು!

Thursday, June 4, 2009

ಈ ಪ್ರೀತಿ ಬದುಕಿನ ಶ್ರೇಷ್ಠ ಘಟ್ಟದಲ್ಲಿ ನಿಂತು ಗೌರವಿಸುತ್ತೆ..

ಗೆಳತಿ ಶ್ರೀ ಮೊನ್ನೆ "ನಮ್ಮ ಪೀಲು ಹೋಯ್ತು... ನಮ್ಮನ್ನೆಲ್ಲ ಬಿಟ್ಟು" ಕಂಗಳು ಒದ್ದೆಯಾಗಿಸಿ, ನನ್ನ ಮನಸ್ಸನ್ನೂ ಒದ್ದೆಯಾಗಿಸಿದ್ದಳು. ಹೌದು, ಅವಳ ಪ್ರೀತಿಯ ನಾಯಿ ಪೀಲು ಧಾರವಾಡದ ಅವಳ ಮನೆಯಲ್ಲಿ ಎಲ್ಲರನ್ನು ಬಿಟ್ಟುಹೋಗಿತ್ತಂತೆ. 'ಪೀಲುಗೆ ಇಂಜೆಕ್ಞನ್ ಕೊಟ್ಟಾಗ ಅಪ್ಪಾಜಿಗೆ ಕಣ್ಣಲ್ಲಿ ನೀರು ಬಂತಂತೆ,,ಅದಕ್ಕೆ ಡಾಕ್ಟರ್ ಅವರನ್ನು ಹೊರಗಡೆ ಕಳಿಸಿದ್ರಂತೆ. ಆಮೇಲೆ ವಾಚ್ ಮನ್ ಪೀಲುನ ಮಣ್ಣು ಮಾಡಿದ್ರಂತೆ. ಅದಕ್ಕೆ ಹೊಟ್ಟೆಯಲ್ಲಿ ಟ್ಯೂಮರ್ ಆಗಿತ್ತು ಕಣೇ. ಅಪ್ಪಾಜಿ ಪೀಲುನ ಮಗುವಿನಂತೆ ನೋಡಿಕೊಂಡಿದ್ರು' ಅಂತ ಹೇಳುತ್ತಿದ್ದಳು ಶ್ರೀ.

ಬಹುಶಃ ಮನುಷ್ಯ-ಮನುಷ್ಯ ಸಂಬಂಧಗಳಿಗಿಂತಲೂ ಕೆಲವೊಮ್ಮೆ ಪ್ರಾಣಿ-ಮನುಷ್ಯರ ಸಂಬಂಧ ಗಾಢವಾಗಿರುತ್ತೆ, ನಿಷ್ಕಲ್ಮಶ, ಪ್ರಾಮಾಣಿಕವಾಗಿರುತ್ತೆ. ನಮ್ಮನೆಯ ಕರು, ನಮ್ಮನೆಯ ಪ್ರೀತಿಯ ಬೆಕ್ಕು, ನಾಯಿಮರೀನ ನಾವು ನಮ್ಮನೆ ಮಕ್ಕಳ ಥರ ನೋಡಿಕೊಳ್ಳ್ತೀವಿ. ಅವುಗಳೂ ಅಷ್ಟೇ..ನಮ್ಮ ಮೇಲೆ ಅವು ತೋರಿಸುವ ನಿಷ್ಕಲ್ಮಶ ಪ್ರೀತಿನ ಕಂಡಾಗ ನಮ್ಮ ಮನೆ-ಮನಸ್ಸು ತುಂಬಿಬಿಡುತ್ತೆ. ಒಂದು ಕ್ಷಣ ಅವುಗಳು ನಮ್ಮೆದುರು ಇಲ್ಲಾದಾಗ ಅವುಗಳಿಗಾಗಿ ನಮ್ಮ ಕಣ್ಣುಗಳು ಹುಡುಕಾಡುತ್ತವೆ. ಅದರಲ್ಲೂ ನಾಯಿಯನ್ನು ಅತ್ಯಂತ ಕೃತಜ್ಞ ಪ್ರಾಣಿ ಅಂತಾರೆ. ಎಷ್ಟೋ ವರುಷಗಳ ಹಿಂದೆ ನಾವು ಒಂದು ನಾಯಿಗೆ ರೊಟ್ಟಿ ತುಂಡನ್ನು ಹಾಕಿದ್ರೆ ಅದು ಜೀವನವೀಡೀ ನಮ್ಮ ನೋಡಿದಾಗ ಬಾಲ ಅಲ್ಲಾಡಿಸಿ, ಕಿವಿ ನಿಮಿರಿಸಿ ಪ್ರೀತಿ ವ್ಯಕ್ತಪಡಿಸುತ್ತೆ.

ನಾನು ಶಾಲೆಗೆ ಹೋಗೋ ಸಮಯದಲ್ಲಿ ನಮ್ಮನೆಯಲ್ಲಿ ಒಂದು ನಾಯಿ ಇತ್ತು. ಸಕತ್ತ್ ಡುಮ್ಮ ನಾಯಿ...ಗುಂಡು-ಗುಂಡಾಗಿ ನೋಡಕ್ಕೂ ತುಂಬಾ ಸುಂದರವಾಗಿತ್ತು. ಅದಕ್ಕೆ ನನ್ನ ತಮ್ಮ 'ದೊಲ್ಲ' ಅಂತ ಹೆಸರಿಟ್ಟಿದ್ದ. ಅದಕ್ಕೂ ಮಲಗೋಕೆ ಚೆಂದದ ದಿಂಬು ಎಲ್ಲಾ ರೆಡಿಮಾಡಿದ್ದ ನನ್ನ ತಮ್ಮ. ರಾತ್ರಿ ತಮ್ಮನಿಗೆ ನಿದ್ದೆ ಬರೋ ತನಕ ಅದು ನಮ್ಮ ಜೊತೆನೇ ನಿದ್ದೆ ಮಾಡುತ್ತಿತ್ತು. ಆಮೇಲೆ ಎದ್ದು ಹೋಗಿ ಜಗಲಿಯಲ್ಲಿ ಮನೆ ಕಾಯುತ್ತಿತ್ತು. ನಾವು ಶಾಲೆಗೆ ಹೋಗುವಾಗ ಅರ್ಧದಾರಿ ತನಕ ನಮ್ಮ ಜೊತೆಗೆ ಬರೋ ದೊಲ್ಲ, ಆಮೇಲೆ ಸಂಜೆಯೂ ನಾವು ಶಾಲೆ ಬಿಡುವ ಹೊತ್ತಿಗೆ ಮನೆ ಗೇಟ್ ಎದುರು ಕುಳಿತು ಕಾಯುತ್ತಿತ್ತು. ನಾವು ಬರೊದೇ ತಡ..ನಮ್ಮ ಜೊತೆ ಅದಕ್ಕೂ ಏನಾದ್ರೂ ತಿನ್ನಬೇಕು..ಇಲ್ಲಾಂದ್ರೆ ನಮ್ಮ ಮೈಮೇಲ್ಲ ಹಾರಿ ಕಚ್ಚೋ ಕೆಲಸ ಮಾಡುತ್ತಿತ್ತು. ನನ್ನ ತಮ್ಮನಿಗಂತೂ ದೊಲ್ಲ ಅಂದ್ರೆ ನಮಗೆಲ್ಲರಿಗಿಂತಲೂ ಹೆಚ್ಚು ಪ್ರೀತಿ.

ಆದರೆ ಆ ದೊಲ್ಲ ಬದುಕಿದ್ದು ಎರಡನೇ ವರುಷ. ನಮ್ಮನೆಯ ಪಕ್ಕದ್ಮನೆಯ ನಾಯಿ ಅದಕ್ಕೆ ಕಚ್ಚಿ ಹೊಟ್ಟೆಗೆ ಗಾಯವಾಗಿತ್ತು. ಹಾಗಾಗಿ ತುಂಬಾ ದಿನ ಅದು ಮಲಗಿದ್ದಲ್ಲೇ ಇತ್ತು..ತಮ್ಮ ಆರೈಕೆ ಮಾಡ್ತಾ ಇದ್ದ. ಮತ್ತೆ ಎದ್ದು ನಡೆಯಲಾರಂಭಿಸಿದರೂ ತೀರ ಓಡಾಟ ಕಷ್ಟವಾಗುತ್ತಿತ್ತು. ಕೊನೆಗೊಂದು ದಿನ ನಾವು ಶಾಲೆಯಿಂದ ಬರುವಾಗ ದೊಲ್ಲ ಇರಲಿಲ್ಲ..ಎಲ್ಲಿ ಹುಡುಕಿದ್ರೂ ಸಿಕ್ಕಿರಲಿಲ್ಲ. ಒಂದು ದಿನ ಕಳೆದ ಮೇಲೆ ನಮ್ಮ ತೋಟದ ಬದಿಯಲ್ಲಿ ನಮ್ಮ ದೊಲ್ಲ ಚಿಕ್ಕ ಪೊದೆಗೆ ಸಿಕ್ಕಹಾಕೊಂಡು ಹೆಣವಾಗಿದ್ದ. ನನ್ನ ತಮ್ಮ 'ಅಮ್ಮ ನೀನೇ ಕೊಂದಿದ್ದು ನನ್ನ ದೊಲ್ಲನ..ನನ್ನನ್ನೂ ಕೊಂದುಬಿಡು' ಅಂತ ಅಳುತ್ತನೇ ಇದ್ದ. ಎರಡು ದಿವಸ ಊಟ ಮಾಡದೆ ಕುಳಿತಿದ್ದ. ಆದ್ರೂ ಅದನ್ನು ಹೂತ ಜಾಗದಲ್ಲಿ ಮತ್ತೆ ಮತ್ತೆ ಹೋಗಿ ಅಳುತ್ತಿದ್ದ. ವರುಷ ಅದೆಷ್ಟು ಸರಿದರೂ ದೊಲ್ಲನ ನೆನಪು ಬದುಕಾಗೇ ಇದೆ.

ನಿನ್ನೆ ಶ್ರೀ ಪೀಲು ಬಗ್ಗೆ ಹೇಳಿದಾಗ..ದೊಲ್ಲನೂ ನೆನಪಾದ..ಕಣ್ತುಂಬಿ ಬಂತು. ಕೆಲವೊಮ್ಮೆ ಮನುಷ್ಯ-ಮನುಷ್ಯ ನಡುವಿನ ಬಾಂಧವ್ಯ, ಪ್ರೀತಿನ ಕಂಡಾಗ ಮೂಕ ಪ್ರಾಣಿಯ ಪ್ರೀತಿಯೇ ಶ್ರೇಷ್ಠ ಅನಿಸುತ್ತೆ. ಈ ಪ್ರೀತಿ ಕನ್ನಡಿಯಂತೆ ಒಡೆಯಲ್ಲ, ನೋವು ಕೊಡಲ್ಲ, ಮನಸ್ಸು ಚುಚ್ಚೊಲ್ಲ, ಒಮ್ಮೊಮ್ಮೆ ಹೃದಯ ಭಾರವಾಗಿಸಲ್ಲ..ಪರಿಪರಿಯಾಗಿ ನಮ್ಮ ಕಾಡುತ್ತೆ, ಸಿಹಿನೆನಪಾಗುತ್ತೆ, ಬದುಕಿನ ಶ್ರೇಷ್ಠ ಘಟ್ಟದಲ್ಲಿ ನಿಂತು ನಮ್ಮನ್ನು ಗೌರವಿಸುತ್ತೆ ...ಏನಂತೀರಿ?

Sunday, May 31, 2009

ನಿಮ್ಮ ಭವಿಷ್ಯ ಹೇಳತೇನ್ರೀ!

ನಿನ್ನೆಯ ಕನ್ನಡಪ್ರಭ ಸಾಪ್ತಾಹಿಕ ಓದುತ್ತಿದ್ದಂತೆ ಸುರೇಶ್ ವೆಂ. ಕುಲಕರ್ಣಿ ಎಂಬುವವರು ಬರೆದ ಬೇಂದ್ರೆ ಬದುಕಿನ ಪುಟ್ಟ ಘಟನೆಯೊಂದು ಕಣ್ಣಿಗೆ ಬಿತ್ತು. ಬೇಂದ್ರೆ ಅಜ್ಜ ಅಂದ್ರೆ ನಂಗೆ ತುಂಬಾ ಇಷ್ಟ. ಬದುಕಿನ ಜೊತೆ ನೇರ ಮಾತಿಗಿಳಿಯುವ ಅವರ ಕವನಗಳು ನಂಗಿಷ್ಟ. ಬೇಂದ್ರೆ ಕುರಿತಾಗಿ ಬರೆಯುವ ಸುನಾಥ್ ಅಂಕಲ್ ಬ್ಲಾಗ್ ಸಲ್ಲಾಪ, ಗೋದಾವರಿ ಮೇಡಂ ಎಲ್ಲಾರ ಬರಹಗಳನ್ನು ಓದುತ್ತಿರುವೆ. ಇದೀಗ ಕನ್ನಡಪ್ರಭದಲ್ಲಿ ಬಂದಿರುವ ಸುರೇಶ್ ವೆಂ. ಕುಲಕರ್ಣಿ ಅವರ ಬರಹಗಳನ್ನು ತೆಗೆದು ಯಥಾವತ್ತಾಗಿ ಹಾಕೊಂಡಿರುವೆ..ಇದು ಕೃತಿಚೌರ್ಯ ಅಲ್ಲ, ಬೇಂದ್ರೆ ಕುರಿತಾದ ಇಂಥ ಘಟನೆಗಳನ್ನು ಸಂಗ್ರಹಿಸುವತ್ತ ನನ್ನ ಪುಟ್ಟ ಹೆಜ್ಜೆಯಷ್ಟೇ.

"ಬೆಳಗಿನ ಏಳು ಗಂಟೆಯಾಗಿತ್ತು. ಬೇಂದ್ರೆಯವರು ಮನೆಮುಂದಿನ ಗೇಟಿನ ಹತ್ತಿರ ಬಿಳಿಧೋತರ, ಕರೇಕೋಟು ಮ್ಯಾಲೆ ಕುಲಾಯಿಟೋಪಿ ಹಾಕಿಕೊಂಡು, ಕೋಟಿನ ಕಿಸೆಯಲ್ಲಿ ಕೈ ಇಟಕೊಂಡು, ಆ ಕಡೆ-ಈ ಕಡೆ ಶತಪಥ ಹಾಕುತ್ತಾ ಇದ್ದರು. ಅವರನ್ನು ನೋಡಿ, ಒಬ್ಬ ವ್ಯಕ್ತಿ 'ಅಜ್ಜಾರ ಒಳಗೆ ಬರಬಹುದಾ?' ಅಂತ ಕೇಳಿದ.
ಬೇಂದ್ರೆ: ಯಾಕ, ನಿನ್ನ ಹೆಸರೇನು? ಯಾವೂರು?
ಭವಿಷ್ಯಗಾರ: ನಾನು ಊರೂರು ತಿರತೇನ್ರೀ. ನಿಮ್ಮ ಭವಿಷ್ಯ ಹೇಳತೇನ್ರಿ?
ಬೇಂದ್ರೆ: ಭವಿಷ್ಯವನ್ನು ಯಾವ ಆಧಾರದ ಮೇಲೆ ಹೇಳತೀ?
ಭವಿಷ್ಯಗಾರ: ನಿಮ್ಮ ಮುಖಾ ನೋಡಿ, ಕೈನೋಡಿ, ಹಸ್ತಾಕ್ಷರ ನೋಡಿ ಭವಿಷ್ಯವನ್ನು ಹೇಳತೇನ್ರಿ. ನಿಮ್ಮ ನಕ್ಷತ್ರ ಹೇಳಿದರ ಅದರ ಮ್ಯಾಲಿಂದನೂ ನಿಮ್ಮ ಭವಿಷ್ಯವನ್ನ ಹೇಳತೇನ್ರೀ.
ಬೇಂದ್ರೆ: ನಕ್ಷತ್ರದ ಬಗ್ಗೆ ನಿನಗೆ ಛಲೋ ತಿಳೀತದೇನು?
ಭವಿಷ್ಯಗಾರ: ತಿಳಿತದ್ರೀ

ಬೇಂದ್ರೆ: ಈಗ 'ವೇಗಾ' ಅಂದರ 'ಅಭಿಜಿತ್ ನಕ್ಷತ್ರ' ಎಲ್ಲೆ ಬರತದ?

ಭವಿಷ್ಯಗಾರ: (ವಿಚಾರಿಸಿ) ಗೊತ್ತಿಲ್ಲರಿ..
ಬೇಂದ್ರೆ: ಇರಲಿ, ಈಗ ನನಗೆ ಭವಿಷ್ಯ ಕೇಳೋದೇನಿಲ್ಲ. ನಿನ್ನ ವೇಳ್ಯಾ ತೊಗೊಂಡದ್ದಕ್ಕ 'ಫೀ' ಏನು?
ಭವಿಷ್ಯಗಾರ: ನಾನು ಭವಿಷ್ಯವನ್ನು ಹೇಳದs 'ಫೀ' ತೊಗೋಳ್ಳೋದಿಲ್ಲ. ಭವಿಷ್ಯವನ್ನು ಕೇಳಿರಿ ತೊಗೋತೀನಿ.
ಬೇಂದ್ರೆ: ನನ್ನ ಭವಿಷ್ಯವನ್ನು ಕೇಳೋದಿಲ್ಲ, ನಡೀಯಿನ್ನ.
ಭವಿಷ್ಯಗಾರ: ಊರಲ್ಲಿ ಹೋಗಲಿಕ್ಕೆ ಸಿಟಿಬಸ್ಸು ಎಲ್ಲಿ ನಿಲ್ಲತಾವು?
ಬೇಂದ್ರೆಯವರು ತಮ್ಮ ಮನೆಯ ಗೇಟಿನವರೆಗೆ ಹೋಗಿ, ಬಸ್ಸು ಎಲ್ಲಿ ನಿಲ್ಲತಾವು
ಅನ್ನೋದನ್ನು ಸ್ವತಃ ತಾವೇ ಹೋಗಿ ತೋರಿಸಿದರು. ಭವಿಷ್ಯವನ್ನು ಹೇಳುವವನು ನಾಲ್ಕು ಹೆಜ್ಜೆ ಮುಂದ ಹೋಗಿದ್ದ, ಅಷ್ಟರಾಗ ಬೇಂದ್ರೆಯವರು ಅವನನ್ನು ಕರೆದು, 'ನೀ ಖರೇನ ಭವಿಷ್ಯ ಹೇಳತೀ?
ಭವಿಷ್ಯಗಾರ: ಯಾಕ್ರೀ? ಕೇಳ್ಯಾರ ನೋಡ್ರೀ, ಹಿಂದಿನದು, ಮುಂದಾಗೋದು ಎಲ್ಲಾನೂ ಹೇಳತೀನಿ.
ಬೇಂದ್ರೆ: ಇಲ್ಲಾ, ಬೆಳಿಗ್ಗೆ ಎದ್ದ ಕೂಡಲೇ, ಯಾರ ಮನಿಗೆ ಹೋದ್ರ, ಭವಿಷ್ಯ ಕೇಳತಾರ? ಯಾರು ಕೇಳೊದಿಲ್ಲ? ಅನ್ನೋದು ನಿನಗs ತಿಳೀದs ನೀನು ಬೇರೆಯವರಿಗೆ ಹ್ಯಾಂಗ ಭವಿಷ್ಯವನ್ನು ಹೇಳತೀ?
ಭವಿಷ್ಯಗಾರ ಮರುಮಾತನಾಡದೆ ಬಸ್ ಸ್ಟಾಫಿಗೆ ಬಂದ.
ಚಿತ್ರಕೃಪೆ: ಅಂತರ್ಜಾಲ

Friday, May 22, 2009

ಥತ್!! ..ಈ ಜಡಿಮಳೆ ನನ್ನ ಕನಸುಗಳಿಗೆ ಸಾಥ್ ನೀಡಲಿಲ್ಲ..

ಮಳೆಯೇ ಶಿವರಾಯ ಓ ತಂದೆ
ಯಾವ ದೇವರಿಲ್ಲ ನಿನ ಮುಂದೆ..
ಯಾವತ್ತೋ ಕೇಳಿದ ಜನಪದ ಹಾಡಿನ ಸಾಲುಗಳು ಮತ್ತೆ ಮತ್ತೆ ನನ್ನೊಳಗೆ ಗುನುಗಿದವು. ಇತ್ತೀಚೆಗೆ ಬೆಂದ ಕಾಳೂರಿನ ಇಳೆಯಂಗಳಕ್ಕೆ ತುಂತುರು ಮಳೆ ಹನಿ ಸ್ಪರ್ಶಿಸಿದಾಗ ನೆನಪುಗಳ ಮೆರವಣಿಗೆಯಲ್ಲಿ ನನ್ನದೂ ಪುಟ್ಟ ಪಯಣವಾಗಿಸಿದ್ದೆ. ಬಾಲ್ಯದ ಭಾವಗೀತೆಗಳನ್ನು ತುಂತುರು ಮಳೆಹನಿಯ ಝೇಂಕಾರದೊಂದಿಗೆ ಮೆಲುಕುಹಾಕಿದ್ದೆ. ತಣ್ಣನೆಯ ಗಾಳಿ, ಮುತ್ತಿನ ನೀರ ಹನಿಗೆ ಸಂಭ್ರಮಗೊಂಡ ಪುಟ್ಟ ಮಕ್ಕಳು, ಮೊದಲ ಮಳೆ ಹನಿಯ ಸ್ಪರ್ಶದಿಂದ ಪುಳಕಿತಗೊಂಡ ಇಳೆ, ಗೂಡು ಸೇರುವ ತವಕದ ಹಕ್ಕಿಗಳ ಕಲರವ ಧರಿತ್ರಿಯಲ್ಲೂ ಒಂದು ಬಗೆಯ ಸಂಭ್ರಮದ ಹಬ್ಬವಾಗಿಸಿತ್ತು. ಹ್ಲಾಂ..ನೀವೇ ಓದಿದ್ರಲ್ಲಾ..ತುಂತುರು ಮಳೆಯಲ್ಲಿ ನೆನಪುಗಳ ಮೆರವಣಿಗೆ!!

ಆದರೆ, ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಸುರಿವ ಜಡಿಮಳೆ ಅದೇಕೋ ನನ್ನೊಳಗಿನ ಬೆಚ್ಚಗಿನ ಭಾವಕ್ಕೆ ಸಾಥ್ ನೀಡುತ್ತಿಲ್ಲ. ರಪರಪನೆ ಸುರಿವ ಮಳೆಹನಿಗಳಿಗೆ
ಕನಸುಗಳು ಗೂಡು ಕಟ್ಟೊಲ್ಲ. ಮುತ್ತಿನ ಹನಿಗಳ ಜೊತೆ ಆಡಿಬಿಡೋಣ ಎಂದೂ ಅನಿಸಲ್ಲ. ಮನೆಯೊಳಗೆ ಕುಳಿತು ಹಪ್ಪಳ ಸಂಡಿಗೆ ಮೆಲ್ಲುತ್ತಾ ವರುಣನ ಭೂ ಚುಂಬನ ನೋಡಿ ಖುಷಿಪಡೋಣ ಅಂದ್ರೂ ಈ ಬೆಂಗ್ಳೂರು ಮಳೆ ಮನೆ ಸೇರಕ್ಕೆ ಮೊದಲೇ ಗುಡುಗು-ಸಿಡಿಲ ಆರ್ಭಟ ಹೊತ್ತು ತಂದು ಮನಸ್ಸನ್ನೇ ಮುದುಡಿಸಿ ಬಿಡುತ್ತೆ. ಹೌದು, ಆ ಸಂಜೆಗೂ-ಬೆಂಗಳೂರಿನಲ್ಲಿ ಸುರಿಯೋ ಮಳೆಗೂ ಅದೇನೋ ಬಂಧ ..ಸಂಜೆಯಾಗುವಾಗಲೇ ಧೋ ಎಂದು ಮಳೆ ಸರಿಬೇಕಾ!
ಥತ್! ಕೆಟ್ಟ ಸಿಟ್ಟು ಬಂದು ಬಿಡುತ್ತೆ. ಈ ಮಳೆಯನ್ನು ಅನುಭವಿಸೋಕೆ ಆಗೊಲ್ಲ ಅಂತ ಅಲ್ವಾ? ಅಂತ ನಿರಾಶೆಯ ಕರಿಮೋಡ ನನ್ನನ್ನೇ ಆವರಿಸಿಬಿಡುತ್ತೆ.

ಮೊನ್ನೆ ಸುರಿದ ಜಡಿಮಳೆಗೆ ಬೆಂಗಳೂರಿನ ಡಾಂಬರ್ ರಸ್ತೆಗಳೆಲ್ಲ ಹಳ್ಳ-ಹೊಳೆ, ಮಹಾನದಿಗಳಾಗಿದ್ದವು. ಬಿರುಸಿನಿಂದ ಬೀಸಿದ ಗಾಳಿಯ ಅಟ್ಟಹಾಸಕ್ಕೆ ನನ್ನ ಪ್ರೀತಿಯ ಛತ್ರಿಯ ಬೆನ್ನೆಲುಬುಗಳೆಲ್ಲಾ ಮುರಿದು ನುಜ್ಜು-ಗುಜ್ಜಾಗಿ, ಆ ಮುದ್ದಿನ ಛತ್ರಿ ನನ್ನೆದೆ ಅಪ್ಪಿಕೊಂಡು ಮಲಗಿಬಿಟ್ಟಿತ್ತು. ಕಾಲಲ್ಲಿದ್ದ ಕಪ್ಪಗಿನ ಶೂ ಮಣ್ಣು ಮೆತ್ತಿಕೊಂಡು ನನ್ನನ್ನೂ ಹೊರಲಾಗದೆ ಬಸವಳಿದಿತ್ತು. ಮಳೆ ಬಿದ್ದ ರಭಸಕ್ಕೆ ನನ್ನ ದೇಹ ಸೋತು ಸುಣ್ಣವಾಗಿತ್ತು. ಅಟೋ ಎಂದು ಕೈಹಿಡಿದರೆ 2-3 ಕಿಮೀಗೂ 100 ಮೇಲೆ ಕೇಳಿದ್ರೆ ನಾ ಹ್ಯಾಂಗ ಕೊಡಲಿ? ಎಂದು ಮುನಿಸಿಕೊಂಡಿದ್ದೆ ..ಅಟೋ ಮಂದಿ ಜೊತೆ! ಬಸ್ಸು ಹುಡುಕಾಡಿದರೆ ನೀರ ಮೇಲೆ ನಿಂತ ಬಸ್ಸುಗಳು ಕದಲದೆ, ಅಲ್ಲೇ ಜಾಮ್ ಆಗಿಬಿಟ್ಟಿದ್ದವು. .! ಈ ಬೆಂಗಳೂರು ಮಳೆ ಅಂದ್ರೆ ಹಂಗೇ..ಅಯ್ಯೋ ಕರ್ಮಕಾಂಡ ಬೇಡವೇ ಬೇಡ..ಅಂದ ಶಾಪ ಹಾಕುತ್ತಾ ರಪರಪನೆ ಕೆನ್ನೆ ಮೇಲೆ ಬಡಿದ ಮಳೆಹನಿಯನ್ನು ಒರೆಸಿಕೊಳ್ಳುತ್ತಾ ಮಳೆರಾಯನ ಜೊತೆ ಕೋಪಿಸಿಕೊಂಡೆ..ಬಾ ಮಳೆಯೇ..ಎಂದು ಮನಸ್ಸು ಹಾಡಲೇ ಇಲ್ಲ!

ಹೌದು, ಈ ಬೆಂಗಳೂರಲ್ಲಿ ಮಳೆ ಬಂದ್ರೆ..ಹಂಗೆ ರಸ್ತೆಗಳೆಲ್ಲಾ ನದಿಗಳಾಗಿಬಿಡೋದು. ಕೇಬಲ್, ಟೆಲಿಫೋನ್ ನವರು ಅಗೆದ ಗುಂಡಿಗಳು, ಬಿಬಿಎಂಪಿ ಅವರ ಕರ್ಮಕಾಂಡ ಕೆಲಕೆಲಸಗಳಿಗೆ ರಸ್ತೆಯನ್ನೆಲ್ಲಾ ಅಗೆದು ಎತ್ತರ-ತಗ್ಗು ಮಾಡಿ, ಈ ಜಡಿಮಳೆಗೆ ನಡೆದು ಹೋಗೋರು ಆ ಗುಂಡಿಯಲ್ಲಿ ಬಿದ್ರೂ ಕೇಳೋರು ಯಾರಿಲ್ಲ. ಬೇಸಿಗೆ, ಮಳೆ, ಚಳಿಗಾಲ...ಹೀಗೆ ಎಲ್ಲಾ ಕಾಲದಲ್ಲೂ ಈ ರಸ್ತೆಗಳ ಬದಿ ಗುಂಡಿಗಳನ್ನು ತೋಡುತ್ತಾನೆ ಇರೋರು ಬಿಬಿಎಂಪಿಯವ್ರು! ಮೊನ್ನೆ ಮೊನ್ನೆ ನಾನೂ ನಿಂತ ನೀರ ಮೇಲೆ ನಡೆದು ಪಾದಗಳು ಧೊಪ್ಪನೆ ಗುಂಡಿಯೊಳಗೆ ಬಿದ್ದಾಗ ನನ್ನ ಎತ್ತಿದ್ದು ನನ್ನ ಕಲೀಗ್.

ಮೊನ್ನೆ ಮಳೆಗಾಲ ಆರಂಭವಾದಾಗ ಬಿಬಿಎಂಪಿ ಆಯುಕ್ತರು, ನಾವು ಮಳೆ ಎದುರಿಸೋಕೆ ರೆಡಿ ಎಂದು ತೊಡೆ ತಟ್ಟಿ ಹೇಳಿದ್ದಾರೆ! ಆದರೆ ಕಳೆದ ಸಲನೂ ಅವರು ಹಾಗೇನೇ ಹೇಳಿ..ಕೊನೆಗೆ ಜೋರು ಮಳೆಗೆ ಮನೆ-ಮನೆಗೆಲ್ಲಾ ನೀರು ನುಗ್ಗಿದಾಗ ಪ್ರತಿಷ್ಠಿತ ಬಡಾವಣೆಗಳಿಗೆ ಮಾತ್ರ ಹೋಗಿ ವಾಪಾಸಾಗಿ ಕೊನೆಗೆ ಮಾಧ್ಯಮದಲ್ಲೆಲ್ಲಾ ಬಿಸಿಬಿಸಿ ಸುದ್ದಿಯಾದಾಗ ಒಂದೆರಡು ಕೊಳಗೇರಿಗಳಿಗೆ ಹೋಗಿ ಕೈತೊಳೆದುಕೊಂಡ್ರು.

ಇರಲಿ ಬಿಡಿ..ಈ ಬೆಂಗಳೂರಿನಲ್ಲಿ ಭೋರ್ಗರೆವ ಮಳೆ ಅದೇಕೋ ನಂಗೆ ಹಳ್ಳಿಯ ಮುಗ್ಧತೆ, ಖುಷಿಯ ಕಚಗುಳಿ ತರುತ್ತಿಲ್ಲ. ಜಡಿಮಳೆಗೆ ನಮ್ಮೂರ ತೋಟದಲ್ಲಿ ಹಸಿರೆಳೆಗಳನ್ನು ನೋಡುತ್ತಾ ನೆನೆದ ಸಂಭ್ರಮ ತರುತ್ತಿಲ್ಲ! ಥತ್..ಇರಲಿಬಿಡಿ...!!

Tuesday, May 19, 2009

ನಾನೂ ಆಡುತ್ತಾ ನಲಿವಾಗೋ ಮಗುವಾಗಿರಬೇಕಿತ್ತು...!!!

ಹೌದು! ನಾನೂ ಮಗುವಾಗಿರಬೇಕಿತ್ತು..ಆಟಿಕೆ, ಗೊಂಬೆಗಳ ಜೊತೆ ಆಡೋ, ಮುಗ್ಧತೆ, ಪ್ರಾಮಾಣಿಕತೆಯ ಪ್ರತೀಕ ಪುಟ್ಟ ಮಗುವಾಗಬೇಕಿತ್ತು!!
ಹೌದು..ನಿನ್ನೆ ಬೆಂಗಳೂರಿನಲ್ಲಿ ಸುರಿದ ಮಳೆಯ ಭೋರ್ಗರೆತವನ್ನು ಕಿಟಕಿ ಸಂದಿಯಲ್ಲಿ ಇಣುಕಿ ನೋಡುತ್ತಲೇ ಯಾಕೋ ಮತ್ತೆ ಮತ್ತೆ ಹೀಗೇ ಅಂದುಕೊಳ್ಳುತ್ತಿದ್ದೆ..ನಾನೂ ಮಗುವಾಗಿರುತ್ತಿದ್ದರೆ..?!

ಬೆನ್ನು ತುಂಬಾ ಭಾರದ ಬ್ಯಾಗ್ ಎತ್ತಿಕೊಂಡು, ಕೈಯಲ್ಲಿ ಟಿಫನ್ ಬಾಕ್ಸ್ ಹಿಡಿದುಕೊಂಡು ದಾರಿಯುದ್ದಕ್ಕೂ ನಲಿದಾಡುತ್ತಾ ಖುಷಿ ಖುಷಿಯಿಂದ ಶಾಲೆಗೋಗುವ ಪುಟ್ಟ ಮಕ್ಕಳನ್ನು ಕಂಡಾಗ ನಾನೂ ಮಗುವಾಗಿರಬೇಕಿತ್ತು ಅನಿಸುತ್ತೆ. ಬೆಳಿಗ್ಗೆ ಆಫೀಸಿಗೆ ಹೊರಟು ಬಸ್ ಸ್ಟಾಂಡಿನಲ್ಲಿ ನಿಂತಾಗ ಅಮ್ಮ-ಅಪ್ಪ ಜೊತೆಗೆ ಬಂದು ಶಾಲೆ ಬಳಿ ಇಳಿಯುವ , ಸಂಜೆಯಾಗುತ್ತಿದ್ದಂತೆ ಹಕ್ಕಿಗಳಂತೆ ಕಲರವಗುಟ್ಟುವ ಮುದ್ದು ಕಂದಮ್ಮಗಳನ್ನು ಕಂಡಾಗ ನಾನೂ ನಲಿವ ಮಗುವಾಗಬೇಕಿತ್ತು ಅನಿಸಿಬಿಡುತ್ತೆ.

ಎದುರುಮನೆಯ ಅಜ್ಜಿಯ ಮೊಮ್ಮಗಳು ನಾಲ್ಕು ವರ್ಷದ ಅಶ್ವಿನಿ ರಾತ್ರಿ ಹತ್ತು ಗಂಟೆಗೆ ಆಂಟಿ ಊಟ ಆಯಿತಾ? ಎಂದು ಮಾತಿಗಿಳಿಯುವಾಗ ಸುತ್ತಲಿನ ಮನೆಯವರೆಲ್ಲವರೂ ಅವಳ ಮುದ್ದು ಮುಖ ಕಂಡು ಪುಳಕಿತಗೊಂಡಾಗ ನಂಗೂ ಅನಿಸುತ್ತೆ: ನಾನೂ ಅಶ್ವಿನಿ ಥರದ ಮುದ್ದಾದ ಪುಟಾಣಿಯಾಗಿರುತ್ತಿದ್ದರೆ ಅಂತ! ಆಫೀಸ್ ನಿಂದ ಹೊರಡುವಾಗ ದಾರಿ ಮಧ್ಯೆ ಸಿಗೋ ಜಾರು ಬಂಡಿಯಲ್ಲಿ ಮಕ್ಕಳು ಆಡೋದನ್ನು ಕಂಡಾಗ, ಶಿವಾಜಿನಗರದ ಕಮರ್ಶಿಯಲ್ ರಸ್ತೆಯಲ್ಲಿ ನಡೆದಾಗ ಸಿಗುವ ಮಕ್ಕಳ ಬಣ್ಣ-ಬಣ್ಣದ ಡ್ರೆಸ್ ಗಳನ್ನು ಕಂಡಾಗ..ಛೇ! ನಾನೂ ಮಗುವಾಗಿರುತ್ತಿದ್ದರೆ ಇಷ್ಟು ಸುಂದರವಾದ ಬಟ್ಟೆ ಹಾಕಿ ನಾನೂ ಮೆರೆಯುತ್ತಿದ್ದೆ ಎಂದನಿಸುತ್ತೆ. ಬೊಕ್ಕುಬಾಯಿ ಅಗಲಿಸಿ ಕಥೆ ಹೇಳುವ ಎಂಬತ್ತರ ಮುತ್ತಜ್ಜಿ ಎದುರು ಕುಳಿತು ಕಣ್ಣು-ಕಿವಿ ಅರಳಿಸಿ ಕಥೆ ಕೇಳುವ ನಮ್ಮೂರ ಸೀತಕ್ಕನ ಅವಳಿ ಮಕ್ಕಳನ್ನು ಕಂಡಾಗ, ನಾನೂ ಅಮ್ಮನ ಮಡಿಲಲ್ಲಿ ಕುಳಿತು ಕಿಟ್ಟು-ಕಿಟ್ಟಿ ಕಥೆ ಕೇಳುತ್ತಲೇ ನಿದ್ದೆಯ ಮಂಪರಿಗೆ ಜಾರೋ ಕಂದಮ್ಮನಾಗಿರಬೇಕಿತ್ತು ಅನಿಸುತ್ತೆ. ಅಪ್ಪ-ಅಮ್ಮ ಜಗಳವಾಡುತ್ತಿದ್ರೂ ಅದಾವುದನ್ನೂ ಕಿವಿಗೆ ಹಾಕಿಕೊಳ್ಳದೆ ತನ್ನ ಪಾಡಿಗೆ ತಾನು ಖುಷಿಯಾಗುವ ಮುಗ್ಧ ಮಗುವನ್ನು ಕಂಡಾಗ ಛೇ! ನಾನೂ ಮಗುವಾಗಿರುತ್ತಿದ್ರೆ ಜಗತ್ತು ಕತ್ತಲಾದ್ರೂ ನಾ ಬೆಳಕಾಗುತ್ತಿದ್ದೆ ಎಂದನಿಸುತ್ತೆ.


ಹ್ಲಾಂ..! ಒಂದನೇ ಕ್ಲಾಸಿನಲ್ಲಿ ಎರಡನೆ ಬೆಂಚಿನಲ್ಲಿ ಕುಳಿತಿದ್ದ ಪ್ರತಿಭಾ ನನ್ನ ಕಡ್ಡಿ ಕದ್ದಾಗ ದಿನವಿಡೀ ಅತ್ತು ಕಣ್ಣು ಕೆಂಪಗಾಗಿಸಿದ ನಾನು ಮರುದಿನ ಬಂದು ಪ್ರೀತಿಯಿಂದ ಮಾತಿಗಿಳಿದಿದ್ದೆ. ನಾಲ್ಕನೇ ಕ್ಲಾಸಿನಲ್ಲಿರುವಾಗ ನನ್ನ ಜಡೆ ಹಿಡಿದೆಳೆದು ಶಿವರಾಮ ಮೇಷ್ಟ್ರ ಬಳಿ ಬೆತ್ತದ ರುಚಿ ಕಂಡ ತೀರ್ಥರಾಮನ ಬಳಿ ನಮ್ಮೂರ ಜಾತ್ರೇಲಿ ಐಸ್ ಕ್ಯಾಂಡಿ ಗಿಟ್ಟಿಸಿಕೊಳ್ಳೋದು ಮಾತ್ರ ನಾನು ಮರೀಲೇ ಇಲ್ಲ!

ಮೊನ್ನೆ ಮೊನ್ನೆ ಸಿಕ್ಕ ಗೆಳೆಯನ ಜೊತೆ ದಿನವಿಡೀ ಜಗಳವಾಡೀ ಸಿಟ್ಟಿನಿಂದ ಗುರ್ ಎನ್ನುತ್ತಾ ಸಿಡಿಲಂತೆ ಆರ್ಭಟಿಸುತ್ತಾ ಕೊನೆಗೆ ಅದು ತಣ್ಣಗಾಗೋದು ಆತ ರಾತ್ರಿ ಮಲಗೋಕೆ ಮುಂಚೆ ಫೋನ್ ಮಾಡಿ, Just Kidding Da..ಎಂದಾಗಲೇ. ಆವರೆಗೆ ಇಡೀ ದಿನವನ್ನು ಜಗಳದಲ್ಲೇ ಕಳೆದು ನೆಮ್ಮದಿಯೆಲ್ಲಾ ಮಣ್ಣುಪಾಲಾಗಿರುತ್ತೆ. ಇತ್ತೀಚೆಗೆ ಸುಂದರ ಗೆಳತಿಯೊಬ್ಬಳು ಪರಿಚಯವಾದಗ, ಆಕೆಯನ್ನು ಪಡೆದಿದ್ದೇ ಧನ್ಯೆ ಎನ್ನುವ ಶ್ರೇಷ್ಠತೆಯ ಭಾವ ನನ್ನನ್ನು ಆವರಿಸಿಕೊಳ್ಳುವಾಗಲೇ ಆಕೆ ನನ್ನ ಬಿಟ್ಟು ದೂರ ಹೋಗಿದ್ದು ಮನಸ್ಸಿಗೆ ತೀರ ನೋವಾಗಿತ್ತು. ಸಂಸಾರ, ಬದುಕು, ಜಂಜಾಟ ಎಂದು ಪರದಾಡುವ ಅದೆಷ್ಟೋ ಮಂದಿಯನ್ನು ಕಂಡಾಗ ನಾನೂ ಮಗುವಾಗಿರುತ್ತಿದ್ರೆ ಛೇ! ಈ ತಲೆಬಿಸಿನೇ ಇರ್ತಾ ಇರಲಿಲ್ಲ ಎಂದನಿಸುತ್ತೆ.

ಬೆಳ್ಳಂಬೆಳಿಗ್ಗೆ ಬಾಸ್ ಜೊತೆ ಕಿರಿಕಿರಿ ಮಾಡೋದು, ಮನೆಯಲ್ಲಿ ತಿಂಗಳ ಕೊನೆಯಲ್ಲಿ ಕಾಡೋ ವಿಪರೀತ ಚಿಂತೆಗಳು, ಭವಿಷ್ಯದ ಕುರಿತಾಗಿ ತಲೆತಿನ್ನೋ ಅರೆಬರೆ ಯೋಚನೆಗಳು, ಪದೇ ಪದೇ ಮನೆಯಲ್ಲಿ ನನ್ನ ಮದುವೆ ಬಗ್ಗೆ ತಲೆ ಕೊರೆಯುವ ಅಮ್ಮನನ್ನು ಕಂಡಾಗ ನಾನೂ ಮಗುವಾಗಿರುತ್ತಿದ್ರೆ ಈ ತಾಪತ್ರಯಗಳೆಲ್ಲಾ ಇರುತ್ತಿರಲಿಲ್ಲ ಎಂದನಿಸುತ್ತೆ. ಕಳೆದುಕೊಂಡ ಗೆಳೆಯ/ ಗೆಳತಿ, ಕಡಿದುಹೋದ ಸಂಬಂಧಗಳು, ಬೆಸದ ಭಾವಬಂಧ, ಆಸೆ-ಹಂಬಲಗಳ ಗೋಜು, ನಿರಾಶೆಯ ಕರಿಮೋಡ...ಬಹುಶಃ ಮಗುವಾಗಿರುತ್ತಿದ್ರೆ ಇದಾವುದೂ ನನ್ನ ಬಾಧಿಸುತ್ತಿರಲಿಲ್ಲ ಎಂದನಿಸುತ್ತೆ. ಬಾಲ್ಯದಲ್ಲಿ ಗೊಂಬೆಗಳ ಜೊತೆ ಆಟ ಆಡುವಾಗ ಅದೆಷ್ಟೋ ಗೊಂಬೆಗಳನ್ನು ನನ್ನ ಕೈಯಾರೆ ಹಾಳುಮಾಡಿದ್ದೆ..ತುಂಡು ತುಂಡು ಮಾಡಿ ಮನೆಯದುರು ಹರಿಯೋ ಹೊಳೆಗೆ ಬಿಸಾಕಿದ್ದೆ. ಅದಾವುದೂ ನನಗೆ ದುಃಖವಾಗಿ ಕಾಡಲಿಲ್ಲ..ಆದರೆ ಈ ಗೆಳೆತನ, ಬದುಕಿನ ಸಂಬಂಧಗಳು ನಮ್ಮಿಂದ ದೂರವಾದ್ರೆ ಅದೆಷ್ಟು ಮನಸ್ಸನ್ನು ಕಾಡುತ್ತೆ ಅಲ್ವಾ?

ಏನೋಪ್ಪಾ..ಯಾರಾದ್ರೂ ಇಂಥ ತಲೆಹರಟೆ ಯೋಚನೆ ಮಾಡ್ತಾರಾ? ಅಂತ ನನ್ನ ಬೈಕೋಬೇಡಿ. ಇಷ್ಟಕ್ಕೂ ಈ ಬರಹ ಬರೆಯೋಕೆ ಕಾರಣವಾಗಿದ್ದು ಮಡಿಕೇರಿಯಿಂದ ಗೆಳೆತಿಯೊಬ್ಬಳು ನಿನ್ನೆ ರಾತ್ರಿ ಕಳಿಸಿದ ಪುಟ್ಟ ಸಂದೇಶ: "Broken Toys and Lost pencils" Better than "Broken Hearts and Lost Friends"!!!

ಚಿತ್ರ ಕೃಪೆ : www.flickr.com

Wednesday, May 13, 2009

ನೀ ನನ್ ಜೊತೆ ಟೂ ಬಿಡಲ್ಲ ತಾನೇ?!

ಅಮ್ಮಾ...


ನಂಗೊತ್ತು ನೀ ನನ್ ಮೇಲೆ ಮುನಿಸಿಕೊಂಡಿದ್ದಿಯಂತ. ಇನ್ನು ನಾ ಮನೆಗೆ ಬಂದು ನೀ ನನ್ನ ದರುಶನ ಪಡೆಯುವವರೆಗೂ ನಿನ್ನ ಸಿಟ್ಟು ಕಡಿಮೆಯಾಗಲ್ಲ. ನಿತ್ಯ ಫೋನ್ ಮಾಡಿ ಗೊಣಗುತ್ತೀಯಾ. ಪ್ರೀತಿಯಿಂದ ಬೈತೀಯಾ. ಕೊನೆಗೆ ನೀನೆ ಸೋತಾಗ ದಡಕ್ಕಂತ ಫೋನಿಡ್ತೀಯಾ. ಮತ್ತೆ ಸಂಜೆ ಫೋನ್ ಮಾಡಿ ಪುಟ್ಟಿ ಒಂದೇ ಒಂದ್ಸಲ ಮನೆಗೆ ಬಂದು ಹೋಗು ಅಂತ ಗೋಳಿಡ್ತೀಯಾ. ಮಕ್ಕಳು ಅಂದ್ರೆ ಹಿಂಗೆ ಕಣಮ್ಮ..ಅಮ್ಮ ಅಂದ್ರೆ ನಿನ್ ಥರ ಅಲ್ವಾ? ಮೊನ್ನೆ ನೀ ಪೋನ್ ಮಾಡಿ, "ನೀನೆನು ಎಲೆಕ್ಷನ್ಗೆ ನಿಂತಿದ್ದೀಯೇನೆ? ಬ್ಯುಸಿ ಬ್ಯಸಿ ಅಂತ ಹೇಳಕ್ಕೆ?' ಅಂತ ಗೊಣಗಿದಾಗ ನಿಜವಾಗಲೂ ನನಗೆ ಸಿಟ್ಟು ಬಂದಿಲ್ಲಮ್ಮ, ನಗು ಬಂದು ಜೋರಾಗಿ ನಕ್ಕುಬಿಟ್ಟಿದ್ದೆ.


ಹ್ಲಾಂ..ಅಮ್ಮಾ ನೀ ಚೆನ್ನಾಗಿದ್ದಿಯಲ್ಲಾ? ತಮ್ಮ ಹೇಗಿದ್ದಾನೆ? ಜೋಪಾನವಾಗಿರಕೆ ಹೇಳು. ನನ್ ನೆನೆಕೆಗಳನ್ನು ಅವನಿಗೆ ತಿಳಿಸು. ನಿನ್ನ ಆರೋಗ್ಯ ಹೆಂಗಿದೆ? ಕರೆಕ್ಟಾಗಿ ಮದ್ದು ತಕೋತಿಯಲ್ಲಾ? ದಿನಾ ಗ್ಲುಕೋಸ್ ಕುಡೀತಿಯಲ್ಲಾ. ನಾನಿಲ್ಲಿ ಚೆನ್ನಾಗಿದ್ದೀನಮ್ಮಾ..ಮೂರು ಹೊತ್ತು ತಿಂದುಂಡು ಗುಂಡು ಗುಂಡಾಗಿದ್ದೀನಿ. ನಾನೆಷ್ಟು ದಪ್ಪಗಿದ್ರೂ ಸಣ್ಣ ಸಣ್ಣಗಿದ್ದಿ ಅಂತ ಬಾಯಿ ಬಡಬಡ ಮಾಡ್ತಿಯಲ್ಲಾ..ನೋಡು ಸಲ ಕನ್ನಡಕ ತರ್ತೀನಿ.!!


ಅಮ್ಮಾ ಬೆಳ್ಳಂಬೆಳಿಗ್ಗೆ ಆಫೀಸು, ಸೂರ್ಯ ಮುಳುಗಿದ ಮೇಲೆ ಮನೆ ಸೇರುವುದು, ಒಂದಷ್ಟು ಅನ್ನ-ಸಾರು ಮಾಡುವುದು, ಒಂದಷ್ಟು ಹೊತ್ತು ಟಿವಿ ಜೊತೆ ಮಾತನಾಡುವುದು ಅಷ್ಟೇ ಕಣಮ್ಮ. ನಮ್ಮೂರ ಬತ್ತದ ಹೊಳೆ, ಹಸಿರು ತೋಟ, ಸಾಲು-ಸಾಲು ಮರಗಿಡಗಳು, ಹಳ್ಳಿ ಮನೆಗಳು, ಕರುಗಳ ಅಂಬಾ, ಕನಕಾಂಬರ ಬಳ್ಳಿಯ ಸೊಬಗು, ಕುರಿಮಂದೆ, ಕಥೆ ಹೇಳುವ ಅಜ್ಜಿ, ಕಳ್ಳು ತೆಗೆಯುವ ಅಜ್ಜ ಯಾರೂ ಕಾಣೋಕೆ ಸಿಗ್ತಿಲ್ಲಮ್ಮ. ಆದ್ರೂ ಬೆಂಗ್ಳೂರು ತುಂಬಾ ಜನ್ರ ಹಸಿದ ಹೊಟ್ಟೆಗೆ ಅನ್ನ ನೀಡುತ್ತೆ. ಏನೋ ಒಂಥರಾ ಖುಷಿ ಕೊಡುತ್ತೆ. ನನ್ ಪುಟ್ಟ ರೂಮೊಳಗೆ ನಾನೂ ಖುಷಿಪಡ್ತೀನಮ್ಮ.

ಆಮೇಲೆ ನಮ್ಮ ಮನೆ ಓನರ್ರು ಅಕ್ಕ ತುಂಬಾ ಒಳ್ಳೆಯವರಮ್ಮ. ನಂಗೆ ಒಂದು ಒಳ್ಳೆ ಅಕ್ಕ ಸಿಕ್ಕಂಗೆ ಆಗಿದೆ. ಮೊನ್ನೆ ನಂಗೆ ಜ್ವರ ಬಂದಿತ್ತು ಅಂದ್ನಲ್ಲಾ..ನನ್ನ ತುಂಬಾ ಚೆನ್ನಾಗ್ ನೋಡಿಕೊಂಡ್ರಮ್ಮ. ಏನೇನೋ ಕಶಾಯ ಮಾಡಿಕೊಟ್ರು...ಥೇಟ್ ನಿನ್ನ ಥರಾನೇ..ಹೊಟ್ಟೆ ಫುಲ್ ಆದ್ರೂ ಮತ್ತೆ ಮತ್ತೆ ತಿನ್ನು ಅನ್ನುತ್ತಾ ತುರುಕೋದು! ಅಲ್ಲಿ-ಇಲ್ಲಿ ಸುತ್ತಾಡೋಕೆ ಹೋದ್ರೆ, ಶಾಪಿಂಗ್ ಹೋದ್ರೆ ನನ್ನ ಕರ್ಕೊಂಡು ಹೋಗ್ತಾರಮ್ಮಾ. ಪೂಜೆಗೆಂದು ಮನೆಗೆ ತಂದ ಮಲ್ಲಿಗೆಯಲ್ಲಿ ನನಗೂ ಒಂದು ಮೊಳ ಮುಡಿಸಿ ಮಲ್ಲಿಗೆಯಂತೆ ಘಮ್ ಅಂತ ನಗ್ತಾರೆ ಅಮ್ಮಾ.


ಅಮ್ಮಾ..ಹೇಳಿದ್ನಲ್ಲಾ ಮುಂದಿನ ತಿಂಗಳು ಊರಿಗೆ ಬರ್ತೀನಂತ. ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಹಾಕಿದ್ದಿಯಲ್ಲಾ..ಒಂದಷ್ಟು ಅಕ್ಕಿ ರೊಟ್ಟಿ, ಹಲಸಿನ ಹಪ್ಪಳ ರೆಡಿ ಮಾಡಿಡಮ್ಮಾ. ಬೆಂಗ್ಳೂರು ಮಳೆಗೆ ಮೆಲ್ಲೋಕೆ ಭಾಳ ಖುಷಿ ಆಗುತ್ತೆ. ಮತ್ತೆ ನನ್ನ ಇಷ್ಟದ ನೀರು ದೋಸೆ ಮಾಡಕೆ ಬೆಳ್ತಕ್ಕಿ, ಹತ್ತು ಕೆಜಿ ಕುಚಲಕ್ಕಿನೂ ತಂದಿಡಕೆ ತಮ್ಮಂಗೆ ಹೇಳು. ವಾಪಾಸ್ ಬರುವಾಗ ತಕೊಬಂದ್ರೆ ಒಂದು ತಿಂಗಳು ಚಿಂತೆಯಿಲ್ಲ. ನಂಗೊತ್ತು ಇದೆಲ್ಲಾ ರೆಡಿ ಮಾಡಿಯೇ ನಿತ್ಯ ಸುಪ್ರಭಾತ ಹಾಡ್ತೀಯಂತ.

ಅಮ್ಮ ನಮ್ಮನೆ ಪಕ್ಕದ್ಮನೆಗೆ ಹೊಸಬರು ಬಾಡಿಗೆಗೆ ಬಂದಿದ್ದಾರೆ. ಅಲ್ಲೊಂದು ಪುಟ್ಟ ಪಾಪು ಇದೆ. ನೋಡಕ್ಕು ಮುದ್ದು ಮುದ್ದಾಗಿದೆ. ಆದ್ರೆ ರಾತ್ರಿ ಇಡೀ ಅಳೋ ಪಾಪು ನಮ್ಮ ನಿದ್ದೆನೂ ಕೆಡಿಸುತ್ತೆ. ಯವಾಗಲೂ ನೀ ನಂಗೆ ಹೇಳ್ತಿದ್ದಿಯಲ್ಲಾ, ನೀ ಬರೇ ಅಳುಮುಂಚಿ ನಿದ್ದೆ ಮಾಡಕ್ಕೂ ಬಿಡ್ತಿರಲಿಲ್ಲ ಅಂತ. ಮಗು ಅತ್ತು ರಂಪಾಟ ಮಾಡುವಾಗ ನೀ ಹೇಳಿದ ಮಾತು ನೆನಪಾಗಿ ಛೇ! ನಾನೆಷ್ಟು ಅಮ್ಮಂಗೆ ಕಾಟ ಕೊಟ್ಟಿದ್ದೀನಿ ಅನಿಸುತ್ತೆ ..ಹ್ಹಿಹ್ಹಿ!!!


ಅಮ್ಮಾ.. ಪತ್ರ ನೋಡಿಯಾದರೂ ನೀ ನನ್ನ ಜೊತೆ ಟೂ ಬಿಡಲ್ಲ ಅಂದುಕೋತೀನಿ. ಸಿಟ್ಟು ಕಡಿಮೆಯಾಗಿದೆಯಲ್ಲಾ...! ಹ್ಲಾಂ..ಖುಷಿಯೋ ಖುಷಿ. ಮುಂದಿನ ತಿಂಗಳು ಹುಣ್ಣಿಮೆ ದಿನ ಬಂದು ಬಿಡ್ತೀನಿ. ತಂಪು ಬೆಳದಿಂಗಳಲ್ಲಿ ನಮ್ಮನೆ ಎದುರು ಇರುವ ಕಲ್ಲುಬೆಂಚಿಯ ಮೇಲೆ ಒಂದಷ್ಟು ಹೊತ್ತು ಹರಟೋಣ ..ಸಿಟ್ ಮಾಡಿಕೊಳ್ಳೋಣ..ಜಗಳ ಆಡೋಣ..ನಿನ್ನಿಂದ ಬೈಸಿಕೋತೀನಿ. ಅದಕ್ಕಿಂತ ಹೆಚ್ಚಾಗಿ ನಿನನ್ನ ಮಡಿಲಲ್ಲಿ ಹುದುಗಿ ಮೊಗೆದಷ್ಟು ಬತ್ತದ ಪ್ರೀತಿನ ನನ್ನೊಳಗೆ ತುಂಬುಕೊಳ್ಳೋಕೆ ಬರ್ತಾ ಇದ್ದೀನಮ್ಮಾ. ಸದ್ಯಕ್ಕೆ ವಿರಾಮ..


ಇಂತೀ

ನಿನ್ನ ಪುಟ್ಟಿ

Tuesday, May 5, 2009

ದುಃಖಗಳು ಸಾಯುತ್ತವೆ, ನೆನಪುಗಳು ಸಾಯೊಲ್ಲ..?!

ದುಃಖಗಳು ಸಾಯುತ್ತವೆ, ನೆನಪುಗಳು ಸಾಯೊಲ್ಲ..! ಹೌದು..ನೆನಪುಗಳು ಸಾಯೊಲ್ಲ..ದುಃಖಗಳು ಸಾಯುತ್ತವೆ..ನಿನ್ನೆ ಇದ್ದಕಿದ್ದಂತೆ ಈ ಮಾತು ನನ್ನ ತುಂಬಾ ಕಾಡಿಬಿಡ್ತು.

ನಾನಾಗ ಎರಡನೇ ಕ್ಲಾಸು. ಒಂದು ಸಂಜೆ ಶಾಲೆ ಮುಗಿಸಿ ನಮ್ಮೂರ ಹೊಳೆ ದಾಟಿ ಮನೆ ಸೇರುವಾಗ ಮನೆಯೇ ಸ್ಮಶಾನವಾಗಿತ್ತು. ನನ್ನ ಪ್ರೀತಿಯ ಅಜ್ಜ ನಮ್ಮನ್ನೆಲ್ಲಾ ಬಿಟ್ಟುಹೋಗಿದ್ದರು. ಅಜ್ಜ ಇನ್ನಿಲ್ಲವೆಂದಾಗ ಉಕ್ಕಿ ಬರುವ ದುಃಖವನ್ನು ಸಹಿಸುವುದು ತುಂಬಾ ಕಷ್ಟವಾಗುತ್ತಿತ್ತು. ನನ್ನ ಗುಂಗುರು, ಸಿಕ್ಕು ಹಿಡಿದ ತಲೆಕೂದಲನ್ನು ಎಣ್ಣೆ ಹಾಕಿ ನೀಟಾಗಿ ಬಾಚಿ ಜಡೆಹಾಕುತ್ತಿದ್ದುದು ನನ್ನಜ್ಜ. ಅಜ್ಜ ಎಷ್ಟೇ ಬೈಯಲಿ..ಅಜ್ಜಿಗಿಂತ ಒಂದು ಪಟ್ಟು ಪ್ರೀತಿ ಜಾಸ್ತಿ ನನ್ನಜ್ಜನ ಮೇಲೆ.

ಆ ದಿನ ನನ್ನ ಪ್ರೀತಿಯ ಅಜ್ಜನನ್ನು ಕಳೆದುಕೊಂಡಿದ್ದೆ. ಗಂಡನನ್ನು ಕಳಕೊಂಡ ದುಃಖ ಅಜ್ಜಿಗೆ, ಅಪ್ಪನನ್ನು ಕಳಕೊಂಡ ದುಃಖ ಅಮ್ಮ, ದೊಡ್ಡಮ್ಮ, ಚಿಕ್ಕಮ್ಮನವರಿಗೆ..! ನನ್ನನ್ನು ಸಮಾಧಾನಿಸುವವರು ಯಾರೂ ಇಲ್ಲ..ಆ ಶೋಕಸಾಗರದಲ್ಲಿ ಒಂದಾಗಿ ನಾನೂ ಬಿಕ್ಕಿ ಬಿಕ್ಕಿ ಅತ್ತಿದ್ದೆ. ಅಜ್ಜ ನೀನ್ಯಾಕೆ ನನ್ನ ಬಿಟ್ಟು ಹೋದೆ..ನೀ ಹೋದಲ್ಲಿಗೆ ನನ್ನನ್ನೂ ಕರೆದುಕೊಂಡು ಹೋಗಬಾರದಿತ್ತೆ? ಎಂದು ಗೋಳಾಡುತ್ತಿದ್ದೆ. ಯಾರ ಮಾತುಗಳನ್ನು ಕೇಳದೆ ಅಜ್ಜ ತಣ್ಣಗೆ ಮಲಗಿದ್ದ. ಏನೇನೋ ಶಾಸ್ತ್ರಗಳು..ಜಡಿಮಳೆಯಂತೆ ಕಣ್ಣಿಂದ ಹರಿಯೋ ನೀರನ್ನು ಸರಿಸಿ ಸರಿಸಿ ಅಜ್ಜನ ತಣ್ಣನೆಯ ಮುಖವನ್ನು ನಾ ನೋಡುತ್ತಿದ್ದೆ. ಕೊನೆಗೇ ಬೆಂಕಿಯಲ್ಲಿ ನನ್ನಜ್ಜ ಒಂದಾಗಲೂ ಹೃದಯ ದುಃಖದಿಂದ ಚೀರುತ್ತಿತ್ತು. ನಿಜವಾದ ದುಃಖ ನೋಡಬೇಕಾದ್ರೆ ಸಾವಿನ ಮನೆಗೆ ಹೋಗಬೇಕು..ಎನ್ನೋ ಮಾತು ಮತ್ತೆ ಮತ್ತೆ ನೆನಪಾಗುತ್ತಿತ್ತು.

ಮೊನ್ನೆ ಮನೇಲಿ ಯಾವುದೋ ಒಂದು ಪುಟ್ಟ ವಿಚಾರದ ಕುರಿತು ನಾನೂ-ತಮ್ಮ ಮಾತಿಗಿಳಿಯುತ್ತಿದ್ದಂತೆ ತಮ್ಮ, "ಅಕ್ಕಾ..ನಾವು ಅಜ್ಜ ಸತ್ತಾಗ ಎಷ್ಟು ಅತ್ತಿದ್ದೀವಿ. ಈವಾಗ ಅದು ದುಃಖಂತ ಅನಿಸೋದೇ ಇಲ್ಲ. ಮನುಷ್ಯ ದುಃಖವನ್ನು ಎಷ್ಟು ಬೇಗ ಮರೀತಾನೆ..ಆದರೆ ಅದ್ರ ನೆನಪು ಮಾತ್ರ ಹಾಗೇ ಇರುತ್ತಲ್ಲಾ.." ಅಂದಾಗ ನನ್ನ ಮನಸ್ಸಲ್ಲಿ 'ಹೌದು ದುಃಖಗಳು ಸಾಯುತ್ತವೆ, ನೆನಪುಗಳು ಸಾಯೊಲ್ಲ" ಎನ್ನೋ ಮಾತು ಮತ್ತೆ ಮತ್ತೆ ಗುನುಗುತ್ತಾನೇ ಇತ್ತು.

ಸಾವಿನ ಮನೆಯ ದುಃಖ ಮಾತ್ರವಲ್ಲ..ಎಷ್ಟೋ ಬಾರಿ ಪುಟ್ಟ ಪುಟ್ಟ ವಿಚಾರಗಳು ನಮಗೆ ತೀರ ನೋವು ಕೊಡುತ್ತವೆ. ನಿತ್ಯ ಅಮ್ಮನ ತೆಕ್ಕೆಯಲ್ಲೇ ನಿದ್ದೆಯ ಮಂಪರಿಗೆ ಜಾರುತ್ತಿದ್ದ ನಾನು ಎಸ್ ಎಸ್ಎಲ್ ಸಿ ಪಾಸಾಗಿ ದೂರದ ಹಾಸ್ಟೇಲಿಗೆ ಬರಬೇಕಾದ್ರೆ ವಾರಗಟ್ಟಲೆ ದಿಂಬು ಒದ್ದೆಯಾಗಿಸಿದ್ದೆ. ಹಾಸ್ಟೇಲಿನಲ್ಲಿ ನಾ ಒಂಟಿ ಒಂಟಿ ಎಂದು ಬಾತ್ ರೂಮಿಗೆ ಹೋಗಿ ಅಳ್ತಾ ಇದ್ದೆ. ಪಿಯುಸಿಯಲ್ಲಿ ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಗೆಳತಿ ದೂರದ ಬೆಂಗಳೂರಿಗೆ ಹಾರಿದಾಗ ತಿಂಗಳುಗಟ್ಟಲೆ ಕಣ್ಣೀರು ಸುರಿಸಿದ್ದೆ. ಪದವಿ ವಿದಾಯ ಸಮಾರಂಭದಲ್ಲಿ ನನ್ನೆಲ್ಲಾ ಕನಸು-ಕಲ್ಪನೆಗಳಿಗೆ ಮೂರ್ತ ರೂಪ ನೀಡಿದ ಗುರುಹಿರಿಯರ ಮುಖ ನೋಡುತ್ತಲೇ ವೇದಿಕೆಯನ್ನು ಕಣ್ಣೀರಾಗಿಸಿದ್ದೆ. ಪದವಿ ಮುಗಿದು ಬೆಂಗಳೂರಿಗೆ ಬಂದಾಗ ಅಯ್ಯೋ ಬೆಂಗಳೂರೇ ಬೇಡ ಮರಳಿ ಊರಿಗೆ ಹೋಗ್ತೀನಿ ಎಂದು ರಚ್ಚೆ ಹಿಡಿದಿದ್ದೆ. ನಮ್ಮನೆಯ ಪ್ರೀತಿಯ ನಾಯಿ 'ಕರಿಯ' ಬಾವಿಗೆ ಬಿದ್ದು ಸತ್ತಾಗ, ನನ್ನ ಮುದ್ದಿನ ಹಸು ಅಕತಿಯನ್ನು ಅಮ್ಮ ಮಾರಿಬಿಟ್ಟಾಗ.....ನಾನೆಷ್ಟು ಅತ್ತಿದ್ದೇ? ...ಇಲ್ಲೆಲ್ಲಾ ಸಹಿಸಲಾಗದ ಅಸಹನೀಯ ದುಃಖದ ಮಡುವಿನಲ್ಲಿ ನಾ ಬಿದ್ದು ಹೊರಳಾಡಿದ್ದೆ..!

ತುಂಬಾ ಪ್ರೀತಿಸಿದ ನಿತ್ಯ ಭರವಸೆಯ ನುಡಿಯಾಗಿದ್ದ ಜೀವದ ಗೆಳೆಯ ಕೈಬಿಟ್ಟಾಗ ನೀನಿಲ್ಲದೆ ನಾ ಹೇಗಿರಲಿ ಎಂದು ನಿತ್ಯ ಮಡಿಲಾಗಿದ್ದ ಗೆಳತಿ ದೂರವಾದಾಗ, ಬದುಕಿನ ಯಾವುದೋ ಘಟ್ಟದಲ್ಲಿ ಅನಿವಾರ್ಯತೆಗೆ ಸಿಲುಕಿ ಸಂಬಂಧಗಳನ್ನೇ ಕಳೆದುಕೊಂಡಾಗ ಮನಸ್ಸು ಎಷ್ಟು ನೋವು ಪಡುತ್ತೆ? ಆದರೆ ಇಲ್ಲೆಲ್ಲಾ..ದಿನಕಳೆದಂತೆ ಈ ದುಃಖಗಳು ಸಾಯುತ್ತವೆ..ಬರೇ ನೆನಪುಗಳನ್ನಷ್ಟೇ ಉಳಿಸಿಬಿಟ್ಟು! ಕಹಿಯಾಗೋ..ಸಿಹಿಯಾಗೋ..ಮತ್ತೆ ಮತ್ತೆ ಕಾಡೋ ನೆನಪುಗಳಷ್ಟೇ ಬದುಕಿನ ಹಾದಿಯ ನಮ್ಮ ಹೆಜ್ಜೆಯಲ್ಲಿ ನೆರಳಂತೆ ಹಿಂಬಾಲಿಸುತ್ತವೆ ಅಲ್ವೇ? ಹೌದು. ಇದೂ ಒಳ್ಲೆಯದೇ..ದುಃಖಗಳು ಸಾಯಬೇಕು, ನೆನಪುಗಳು ಉಳಿಯಬೇಕು, ಖುಷಿಯ ಕ್ಷಣಗಳಷ್ಟೇ ನಿತ್ಯ ನಮ್ಮನ್ನು ಕಾಡುವ, ಖುಷಿಯೊಳಿಸುವ ಹುಣ್ಣಿಮೆಯಂತೆ ಪಸರಿಸಬೇಕು.

ಅದಕ್ಕೇ ತಾನೇ ಹೇಳೋದು 'ಕಾಲವೇ ನೋವಿಗೆ ಮದ್ದು' ಅನ್ನೋದು....ಅಲ್ವಾ?

Saturday, May 2, 2009

ನಮ್ಮೂರ ಜಾತ್ರೇಲಿ..ಮಿರ ಮಿರ ಮಿನುಗಿದ್ದು!!!

'ಅಕ್ಕು ಈ ಸರ್ತಿ ಜಾತ್ರೆಗಾಂಡಲಾ ಬಲಾ, ಏತ್ ವರ್ಷ ಆಂಡ್ ಜಾತ್ರೆಗ್ ಬರಂತೆ..? ಏಪಲಾ ನಿನ್ನ ಕೆಲಸ ಮುಗಿಯರೆ ಇಜ್ಜಿ. ಕೆಲಸ ಏಪಲಾ ಉಪ್ಪಂಡು, ಜಾತ್ರೆ ವರ್ಷಗೊರೆನೆ ಬರ್ಪುನಿ(ಅಕ್ಕು..ಈ ಸಲ ಆದ್ರೂ ಜಾತ್ರೆಗೆ ಬಾ..ಎಷ್ಟು ವರ್ಷ ಆಯಿತು ಜಾತ್ರೆಗೆ ಬರದೆ. ಕೆಲಸ ಯಾವಾಗಲೂ ಇರುತ್ತೆ, ಜಾತ್ರೆ ಬರೋದು ವರ್ಷಕೊಮ್ಮೆ ಮಾತ್ರ) ನಮ್ಮೂರ ಜಾತ್ರೆ ಕುರಿತು ಅಮ್ಮ ಇತ್ತೀಚೆಗೆ ಫೊನ್ ಮಾಡಿದಾಗ, 'ಆಯ್ತಮ್ಮ, ಬರ್ತೀನಿ ಇರು. ಅರ್ಜೆಂಟ್ ಮಾಡಿದ್ರೆ ನಾ ಬರೊಲ್ಲ" ಅಂತ ನನ್ನ ಮಾಮೂಲಿ ಪ್ರೀತಿಯ ಸಿಟ್ಟನ್ನೇ ತೋರಿಸಿದ್ದೆ. ಬೆಂಗಳೂರಿಗೆ ಬರೋಕೆ ಮೊದಲು ಬಿಡಿ ಓದಿನ ನಿಮಿತ್ತ ಮನೆಯಿಂದ ಹೊರ ನಡೆದ ಮೇಲೆ ನನಗೆ ಊರ ಜಾತ್ರೆ ನೋಡೋ ಭಾಗ್ಯ ಕೂಡಿ ಬರಲೇ ಇಲ್ಲ!

ನಮ್ಮೂರಿನ ಜಾತ್ರೆ ಬರೋದು ಫೆಬ್ರವರಿ-ಮಾರ್ಚ ತಿಂಗಳಲ್ಲಿ. ಒಂಬತ್ತು ದಿನಗಳ ಕಾಲ ನಡೆಯುವ ಈ ಜಾತ್ರೆ ಎಂದರೆ ಮನೆ ಮನೆಯಲ್ಲೂ ಜಾತ್ರೆ. ಊರಿನ ಮನೆ ಮನೆಯಲ್ಲಿ ನೆಂಟರ ಸಂಭ್ರಮ. ದೂರದೂರಿನ ಗಂಡನ ಮನೆಯಿಂದ ತವರು ಮನೆಗೆ ಬರೋ ಹೆಣ್ಣುಮಕ್ಕಳ ಮನತುಂಬಾ ಖುಷಿಯ ರಂಗೋಲಿ. ಅದೂ ಹೊಸದಾಗಿ ಮದುವೆಯಾದವರ ಸಂಭ್ರಮ ಕೇಳೋದೇ ಬೇಡ. ಮನೆ ಮನೆಗೆಲ್ಲಾ ಸಗಣಿ ಸಾರಿ, ಒಂಬತ್ತು ದಿನಗಳ ಕಾಲವೂ ಮನೆಯಲ್ಲಿ ನೆಂಟರ, ಮಕ್ಕಳ ಖುಷಿಯ ಸಡಗರ. ಒಂಬತ್ತು ದಿನಗಳ ಕಾಲ ನಿತ್ಯ ಜಾತ್ರೆಗೆ ಹೋಗೋದು. ತಲೆತುಂಬಾ ಮಲ್ಲಿಗೆ ಘಮಘಮ, ಕೈತುಂಬಾ ಬಳೆಗಳ ಸದ್ದು, ಕಾಲಿಗೆ ಗೆಜ್ಜೆ, ಪರ್ಸ್ನಲ್ಲಿ ವರ್ಷದಿಂದ ಜಾತ್ರೆಗೆಂದು ಕೂಡಿಟ್ಟ ಚಿಲ್ಲರೆ ಹಣ, ಹೊಸ ಡ್ರೆಸ್ಸು..!! ಅಬ್ಬಾ..ಜಾತ್ರೆ ನೋಡೋದಕ್ಕಿಂತ ಹೊಸದಾಗಿ ಮಿರುಗೋ ನಮ್ಮನ್ನು ನಾವೇ ನೋಡಿಕೊಳ್ಳುವುದೂ ಒಂದು ಜಾತ್ರೆಯಂತೆ! ಆಮೇಲೆ ಕೆಲವು ಊರ ಹುಡುಗಿಯರನ್ನೆಲ್ಲಾ ವರ ನೋಡೋಕೆ ಬರುತ್ತಿದ್ದೂ ಜಾತ್ರೆಗೆ... ಹುಡುಗಿ ಓಕೆ ಆದ್ರೆ..ಆಮೇಲೆ ಮನೆಗೆ ಬಂದು ನೋಡೋ ಕಾರ್ಯಕ್ರಮ. ಅಷ್ಟೇ ಅಲ್ಲ, ಒಂದಿಷ್ಟು ಊರ ಮಂದಿಯೆಲ್ಲಾ ಜೊತೆಗೆ ಹರಟಲೂ ಆ ಜಾತ್ರೆಯಲ್ಲಿ ಸಾಧ್ಯವಾಗುತ್ತಿತ್ತು.

ನನಗೆ ನೆನಪಿರೋದು ನಾನು ಆರನೇ ಕ್ಲಾಸಿನಲ್ಲಿರುವಾಗ ನಮ್ಮೂರ ದೇವಸ್ಥಾನಕ್ಕೆ ಬ್ರಹ್ಮಕಲೋಶೋತ್ಸವ ಆಗಿ, ಆ ವರ್ಷವೇ ಜಾತ್ರೆ ಪ್ರಾರಂಭವಾಗಿದ್ದು. ಆವಾಗ ಅಮ್ಮ ನನಗೆ ಹಸಿರು ಚೂಡಿದಾರ ತಂದಿದ್ರು. ಅಲ್ಲಿಯವರೆಗೆ ನಾ ಚೂಡಿ ಹಾಕಿರಲೇ ಇಲ್ಲ! ಅದೇ ಮೊದಲು..ಊರ ಜಾತ್ರೆಯಂದು ಅಮ್ಮ ತಂದ ಕಡು ಹಸಿರು ಚೂಡಿಯನ್ನು ಧರಿಸಿ ಮಿರ ಮಿರ ಮಿನುಗಿದ್ದೆ. ಎರಡು ಜಡೆ ಹಾಕಿ ಅಮ್ಮ ತಲೆ ತುಂಬಾ ಮಂಗಳೂರು ಮಲ್ಲಿಗೆ ಮುಡಿಸಿದ್ರು. ಭಾಳ ಖುಷಿ ನನಗೆ. ಅಜ್ಜಿ ಜೊತೆ ಜಾತ್ರೆಗೆ ಹೋಗಿ, ಜಾತ್ರೆ, ದೇವರು, ಜನರನ್ನು ನೋಡೋದಕ್ಕಿಂತ ನನ್ನ ಹೊಸ ಚೂಡಿದಾರವನ್ನು ಮತ್ತೆ ಮತ್ತೆ ನೋಡಿಕೊಳ್ಳುವುದರಲ್ಲೇ ಮೈಮರೆತಿದ್ದೆ. ಎಲ್ಲಿ ಪಿನ್ ಹಾಕಿದ್ದ ವೇಲ್ ಜಾರುತ್ತೋ, ಪ್ಯಾಂಟ್ ನಲ್ಲಿ ಮಣ್ಣಾಗುತ್ತೋ ಅಂತ ಪ್ಯಾಂಟನ್ನು ಒಂದು ಕಡೆಯಿಂದ ಎತ್ತಿಕೊಂಡು ನಡೆಯುತ್ತಿದ್ದ ನನ್ನ ನೋಡಿ ಮನೆಯಲ್ಲಿ ಎಲ್ರೂ ನಗುತ್ತಿದ್ದರು. ಆ ಚೂಡಿದಾರ ಎಷ್ಟು ಇಷ್ಟವಾಗಿತ್ತು ಅಂದ್ರೆ ಏಳನೇ ಕ್ಲಾಸಿನಲ್ಲಿ ಫೋಟೋ ಸೆಶನ್ ಗೂ ಅದೇ ಚೂಡಿದಾರ ಧರಿಸಿದ ಹುಚ್ಚಿ ನಾನು!

ಮತ್ತೆ ಊರ ಜಾತ್ರೆ ಬಂದಾಗಲೆಲ್ಲಾ ಹೊಸ ಡ್ರೆಸ್ಸು ತೆಗೆದುಕೊಡುತ್ತಿದ್ದರು. ಊರ ಜಾತ್ರೆ ನಮಗೆ ಅಮ್ಮನ ಬಳಿ ಹೊಸ ಡ್ರೆಸ್ಸು ತೆಗೆಸಿಕೊಡು ಎಂದು ರಚ್ಚೆ ಹಿಡಿಯಲು ಒಳ್ಳೆ ಅವಕಾಶ. ಡ್ರೆಸ್ಸು ತೆಗೆಸಿಕೊಡದಿದ್ರೆ ನಾವು ಜಾತ್ರೆಗೇ ಬರಲ್ಲ ಅಂತ ಜಗಳವಾಡೋ ನಮಗೆ ಡ್ರೆಸ್ಸು ತೆಗೆಸಿಕೊಡದೆ ಅನ್ಯ ಮಾರ್ಗಗಳೇ ಇರಲಿಲ್ಲ! ಯಾಕಂದ್ರೆ ಜಾತ್ರೆ ಬಂತೆಂದರೆ ಊರಿನ ಮಕ್ಕಳೆಲ್ಲಾ ಹೊಸ ಡ್ರೆಸ್ಸು ಹಾಕೋರು. ಜಾತ್ರೆಗೆ ಹೋದರೆ ಐಸ್ ಕ್ರೀಂ ತಿನ್ನಲೇಬೇಕು...ಮನೆಯಿಂದ ಹೊರಟಾಗಲೇ ಸಿಕ್ಕವರಲೆಲ್ಲಾ ಐಸ್ ಕ್ರೀಂ ಕೊಡಿಸ್ತೀರಾ ಮಾಮ...ಎನ್ನುತ್ತಾ ಐಸ್ ಕ್ರೀಂ ತೆಗೆದುಕೊಡೋರ ಹಿಂದೆ ಓಡೋ ಚಾಳಿ ನನ್ನದು. ಆಮೇಲೆ ಬಲೂನ್ ನನ್ನ ಫೇವರಿಟ್.

ಇಂದಿಗೆ ಜಾತ್ರೆಗೆ ಹೋಗದೆ ಏಳೆಂಟು ವರ್ಷಗಳಾಗಿದೆ. ಹತ್ತನೇ ಕ್ಲಾಸು ಮುಗಿದ ಮೇಲೆ ಜಾತ್ರೆ ನೋಡೋ, ಜಾತ್ರೆಯಲ್ಲಿ ಹೊಸ ಡ್ರೆಸ್ಸು ಹಾಕಿ ಮಿರುಗೋ ಅವಕಾಶನೇ ಸಿಕ್ಕಿಲ್ಲ. ಆದ್ರೂ ನಮ್ಮೂರ ಜಾತ್ರೆ ನೆನಪಾಗುತ್ತೆ. ಜಾತ್ರೆಗೆ ಬಿಡದೆ ಕರೆದೊಯ್ಯುವ ಅಜ್ಜಿ ನೆನಪಾಗುತ್ತಾಳೆ. ಜಾತ್ರೆಯ ಬಲೂನ್, ಐಸ್ ಕ್ರೀಂ ನೆನಪಾಗುತ್ತೆ. ಒಂದು ಸಲ ನನ್ನ ಚಪ್ಪಲಿ ಯಾರಿಗೋ ಬಲಿಯಾಗಿದ್ದು ನೆನಪಾಗುತ್ತೆ. ತಲೆತುಂಬಾ ಮುಡಿದ ಮಲ್ಲಿಗೆ ಪರಿಮಳ, ಕಾಲ್ಗೆಜ್ಜೆ, ಬಳೆಯ ಕಿಣಿಕಿಣಿ ನಿನಾದ, ಪಂಜಕಜ್ಜಾಯ ತಿನ್ನೋ ಆಸೆಯಿಂದ ಭಟ್ರ ಬಳಿ ಹೋಗಿ ಎರಡೆರಡು ಸಲ ದಕ್ಷಿಣೆ ಹಾಕಿದ್ದು ನೆನಪಾಗುತ್ತೆ. ಏನ ಮಾಡಲೀ..ಬೆಂಗಳೂರಿನ ಬದುಕ ಸುಂದರವಾಗಿ ಕಾಣುತ್ತೆ ಆದ್ರೆ ಮನಸ್ಸು ಮಾತ್ರ ನನ್ನ ಜಾತ್ರೆನ, ನನ್ನ ಹಸಿರ ಹಳ್ಳೀನ ಮಿಸ್ ಮಾಡ್ಕೋತಾ ಇದ್ದೀನಿ ಅನ್ನುತ್ತೆ. ಏನೋ ಬರೆಯಕೆ ವಿಷ್ಯ ಸಿಗ್ಲಿಲ್ಲ..ನಮ್ಮೂರ ಜಾತ್ರೆ ನೆನಪಾತು. ಒಪ್ಕೋತೀರಲ್ಲಾ...?!