Friday, September 11, 2009

ಈಗ ಅವಳು ಅವನಿಗೆ 'ಹಾಸಿಗೆ' ...

ಅವನು ಪತಿ, ಅವಳು ಪತ್ನಿ.

ಅದ್ಧೂರಿಯಾಗಿ ಸಪ್ತಪದಿ ತುಳಿದಿದ್ದಾರೆ...

ಸಾವಿರಾರು ಜನರು ಮದುವೆಯೂಟದಿಂದ ಚಪ್ಪರಿಸಿದ್ದಾರೆ...

ಒಂದಲ್ಲ, ಎರಡಲ್ಲ ಐದು ದಿನ ಮದುವೆ ನಡೆದಿದೆ...

ಒಂದು ವಾರ ಭರ್ಜರಿ ಮಧುಚಂದ್ರನೂ ಮುಗಿಸಿ ಬಂದಿದ್ದಾರೆ...

ಈಗ ಆರತಿಗೊಂದು, ಕೀರುತಿಗೊಂದು ಮಕ್ಕಳ ಕನಸು ಕಾಣುವ ಸಮಯ...



ಅವಳಿಗೆ ಅವನು, ಅವನಿಗೆ ಅವಳು ಕಣ್ಣಲ್ಲೇ ಪರಿಚಯ..

ನೋಡೋ ಕಣ್ಣುಗಳೇ ಸತ್ಯ ಹೇಳಿದ್ದವು...

ಪ್ರಾಮಾಣಿಕತೆಗೆ ಅವಳು ಇನ್ನೊಂದು ಹೆಸರು....

ಬಡತನ..ಪ್ರತಿಯೊಬ್ಬರ ಬದುಕನ್ನೂ ಕಿತ್ತು ತಿನ್ನುತ್ತೆ....ಅವಳನ್ನೂ ಬಿಡಲಿಲ್ಲ..

ಜನ್ಮ ನೀಡಿದ ಅಪ್ಪ-ಅಮ್ಮ ಬಡತನದಲ್ಲೇ ಮಣ್ಣಾಗಿ ಹೋದವರು..ಇವಳನ್ನು ಹಾಗೇ ಬಿಟ್ಟು...!

ಕಣ್ಣ ನೋಟದ ಆಸರೆ, ಪ್ರೀತಿಯ ಹುಡುಕಾಟಕ್ಕೆ ಸಿಕ್ಕಿದ್ದು ಆತ...

ಪ್ರಾಮಾಣಿಕತೆ, ಸತ್ಯದ ಗೆಲುವಿನ ಕುರಿತು ಮಾತನಾಡುತ್ತಿದ್ದವ...

ಅವಳ ಸೌಂದರ್ಯ, ನೇರ ನಡೆ-ನುಡಿಯನ್ನು ಹೊಗಳುತ್ತಿದ್ದವ...

ಅವಳು ಮಾತುಬಿಟ್ಟರೆ ಹಸಿವನ್ನು ಲೆಕ್ಕಿಸದೆ ಅನ್ನ, ನೀರು ಬಿಡುತ್ತಿದ್ದವ...

ಅವಳಿಗಾಗಿ ಹಗಲಿರುಳೂ ಪರಿತಪಿಸುವವ,

ಅವಳನ್ನು ಅಂಗೈಯಲ್ಲಿಟ್ಟುಕೊಂಡು ಸಾಕುತ್ತೇನೆಂದವ...



ಹೌದು..ಅವಳು ನಂಬಿದಳು..

ಹಗಲಿರುಳು ಅವನ ಕನಸಿನಲ್ಲಿ ತೇಲಾಡಿದಳು...

ಆ ದೇವಾಲಯದಲ್ಲಿ ಅವನ ಹೆಸರಿನಲ್ಲಿ ನಿತ್ಯ ಪೂಜೆ ಮಾಡಿಸಿದಳು...

ಜೊತೆ-ಜೊತೆಗೆ ಹೆಜ್ಜೆಯಿಟ್ಟು ಆ ದೇವಾಲಯಯದಲ್ಲಿ ಅವನ ಹಣೆಗೆ ಕುಂಕುಮವಿಟ್ಟಳು...

ಅವನ ಕೈಯಿಂದಲೇ ತಲೆಗೆ ಹೂವ ಮುಡಿಸಿಕೊಂಡಳು....

ನಂಬಿದಳು...ಅವಳಿಗಿಂತಲೂ ಹೆಚ್ಚಾಗಿ ಅವನನ್ನೇ ನಂಬಿದಳು....

ಪ್ರೀತಿಯ ಹಾರಕ್ಕೆ ಕೊರಳೊಡ್ಡಿದಳು...

ಮನೆ-ಮನ ಎಲ್ಲೆಲ್ಲೂ ಪ್ರೀತಿಯ ಕನಸು ಕಾಣತೊಡಗಿದಳು...


ಅದೇನಾಯಿತೋ...

ಆತ ಪ್ರೀತಿಯ ಆಸರೆಯಾಗಲಿಲ್ಲ...ಕನಸುಗಳಿಗೆ ಕಣ್ಣುಗಳಾಗಲಿಲ್ಲ...

ರಾತ್ರಿಯ ಸುಖಕ್ಕೆ ಅವನಿಗೆ ಅವಳು 'ಹಾಸಿಗೆ'ಯಾದಳು

ಈಗ ಅವಳು ಅವನಿಗೆ 'ಹಾಸಿಗೆ' ...

ಹಣದ ಅರಮನೆಯಲ್ಲಿ ಅವಳು ಅಂಗಾತ ಬಿದ್ದ ಹೆಣ...



ಇನ್ನೊಂದೆಡೆ...

ಬೇಂದ್ರೆ ಅಜ್ಜನ...

ನಾನು ಬಡವಿ, ಆತ ಬಡವ, ಒಲವೇ ನಮ್ಮ ಬದುಕು,
ಬಳಸಿಕೊಂಡವದನೇ ಅದಕು, ಇದಕು, ಎದಕೂ…

ನೆನಪಾಗುತ್ತಲೇ ಬದುಕನ್ನೇ ಅಣಕಿಸಿದಂತೆ ಭಾಸವಾಗುತ್ತಿತ್ತು ಅವಳಿಗೆ.

16 comments:

sunaath said...

ಧರಿತ್ರಿ,
ಇದು ಬದುಕಿನ ವಾಸ್ತವ!

ಜಲನಯನ said...

ಹಣವೇ ನಿನ್ನಯ ಗುಣವೇ..??!!
ಏನು ಹೇಳುವುದು ಇಂತಹವರಿರುವುದರಿಂದ ಕೆಲವೊಮ್ಮೆ ನಂಬಿಕೆ ಎನ್ನುವುದೇ ಇಲ್ಲವೇನೋ ಎನಿಸುವುದು..
ಇದು ಕ್ಷಣಿಕ ...ಮತ್ತೆ ನಾವು ಬದುಕು-ಮುಖಿಯಾಗುತ್ತೇವೆ...ಇದಕೂ ನಮಗೆ ಹೀಗಾಗದು ಎನ್ನುವ ನಂಬಿಕೆಯಿಂದ...
ಧರಿತ್ರಿ....ಚನ್ನಾಗಿದೆ...ಕವಿತೆ....ಕಥೆಗೂ ಪ್ರಯತ್ನ ಸಫಲತೆ ಕೈಗೂಡಲಿ ಎಂದು ಆಶೀರ್ವಾದ...

ಸವಿಗನಸು said...

ವಾಸ್ತವಕ್ಕೆ ಹತ್ತಿರ...
ಚೆಂದದ ಬರಹ...

umesh desai said...

ಧರಿತ್ರಿ ಪ್ರೀತಿ ಇದು ಬತ್ತದ ಒರತೆ ಇದು ಸುಳ್ಳು..ಯಾಕಂದ್ರ ಕಾಲದ ಹೊಡೆತ ಹಂಗ ಇರ್ತದ. ದಾಸರಿನಾರಾಯಣ್ ರಾವ್
ಇದ ಥೀಮ್ ಮೇಲೆ ಒಂದು ಚಿತ್ರ ಮಾಡಿದ್ರು "ಪ್ಯಾಸಾ ಸಾವನ್" ಅಂತ. ಏನು ಮಾಡೋದು ಮನುಷ್ಯ ಒಂದು ಬೆನ್ನು ಹತ್ತಿದಾ ಅಂದ್ರ ಇನ್ನೊಂದು ಮರೀತಾನ....!
ಯಾಕೋ ನೀವು ನನ್ನ ಬ್ಲಾಗ್ ಗೆ ಬಂದೇ ಇಲ್ಲ....!

ಬಿಸಿಲ ಹನಿ said...

ದಿನ ಕಳೆದಂತೆ ಎಷ್ಟೋ ದಾಂಪತ್ಯಗಳು ಹೀಗೆ ಆಗುವದು.

Unknown said...

ಜೀವನದ ಹಾದಿಯಲ್ಲಿ ಬರುವ ನೂರೆ೦ಟು ಆಕರ್ಷಣೆ-ವಿಕರ್ಷಣೆಗಳ ನಡುವಿನ ತಾಕಲಾಟ ವಾಸ್ತವತೆಯ ನೆಲೆಗಟ್ಟಿನಲ್ಲಿ, ನಿನ್ನ ಲೇಖನದ೦ತಹ/ಕವನದ೦ತಹ ಬರಹದಲ್ಲಿ ದಟ್ಟವಾಗಿ ವ್ಯಕ್ತವಾಗಿದೆ. ಚೆನ್ನಾಗಿದೆ.

ಸುಧೇಶ್ ಶೆಟ್ಟಿ said...

hmmm!!!

Damodar said...

ಬದುಕಿನ ದಾರಿಯಲ್ಲಿ ತಿರುವುಗಳು ಇದ್ದೇ ಇರುತ್ತವೆ. ಸರಿಯಾದ ತಿರುವು ಯಾವುದು ಎನ್ನುವಸ್ಟರಲ್ಲಿ ಸ್ವಲ್ಪ ಲೇಟ್ ಆದರೆ ಕಷ್ಟ ನಮಗೆ..

ಸಾಗರದಾಚೆಯ ಇಂಚರ said...

ಧರಿತ್ರಿ,
ಮಾರ್ವಲ್ಲಸ್ , ತುಂಬಾ ತುಂಬಾ ಚಂದದ ಬದುಕಿನ ವಾಸ್ತವತೆ ಬಿಂಬಿಸುವ ಕವಿತೆ,
ಜಗತ್ತು ಇಂದು ಇಂಥವರಿಂದಲೇ ತುಂಬಿದೆ, ನನಗನ್ನಿಸುತ್ತೆ, ಹೆಚ್ಚು ಬಯಸಿದಂತೆ ಕಡಿಮೆಯೇ ಸಿಗುತ್ತದೆ ಎಂದು.
ಮನುಷ್ಯ ಬುದ್ದಿವಂತನಾದಂತೆ, ಮ್ರಗವಾಗುತ್ತಿದ್ದಾನೆ

ತೇಜಸ್ವಿನಿ ಹೆಗಡೆ said...

ಕ್ರೂರ ಮನುಷ್ಯ, ಮನುಷ್ಯನಿಗೆ ಹಾಗೂ ಮಾನವೀಯತೆಗೆ ಮಾರಕ!!!

shivu.k said...

ಧರಿತ್ರಿ,

ಒಂದೊಂದೆ ಸಾಲಿನಲ್ಲಿ ಬರೆದ ಬರಹಗಳು ಅದೆಷ್ಟೊ ತೂಕವುಳ್ಳದ್ದಾಗಿರುತ್ತವೆ....ಇಲ್ಲೂ ಅದೇ ಆಗಿದೆ...ಸತ್ಯಕ್ಕೆ ಹತ್ತಿರವಾದ ವಿಚಾರ ವಿಭಿನ್ನ ಶೈಲಿ ಚೆನ್ನಾಗಿದೆ..

ಶಿವಪ್ರಕಾಶ್ said...

It happens ri..

Umesh Balikai said...

ಕ್ಷಮಿಸಿ ಧರಿತ್ರಿ,

ನನಗೆ ಇದು ಯಾಕೋ ತುಂಬಾ ಹಳೆಯ ಕಾಲದ ಕಥೆಯಂತೆ ಭಾಸವಾಯ್ತು. ಎಲ್ಲೋ ಕೆಲವು ಹಳ್ಳಿಗಳಲ್ಲಿ ಇನ್ನೂ ಈ ತರ ಇರಬಹುದೇನೋ. ಆದರೆ ಪಟ್ಟಣಗಳಲ್ಲಿರುವ ಅದರಲ್ಲೂ ಅಲ್ಪ, ಸ್ವಲ್ಪ ಕಲಿತಿರುವ ಹುಡುಗಿಯರಾರೂ ಆ ತರ 'ಹಾಸಿಗೆ'ಗಳಾಗಿ ಇರುವುದಿಲ್ಲ. ಇಂದಿನ ಮಹಿಳೆಯೂ ಸಾಕಷ್ಟು ಬುದ್ಧಿವಂತೆ. ಅಷ್ಟು ಸುಲಭವಾಗಿ ಗಂಡಸಿನ ದೌರ್ಜನ್ಯಕ್ಕೆ ತುತ್ತಾಗಲ್ಲ. ವಿದ್ಯಾವಂತ ಗಂಡಸರು ಯಾರೂ ಹೆಂಡತಿ ಬರೀ ಹಾಸಿಗೆಯಾಗಿರಲಿ ಎಂದು ಆಶಿಸೋಲ್ಲ. ತೀರಾ ಅಂತಸ್ತಿನ ಅಂತರ ಇದ್ದಾಗ ಕೆಲವು ಕಡೆ ಆರ್ಥಿಕ ದುರ್ಬಲ ಹೆಣ್ಣು ಆ ತರ ಇರಬೇಕಾಗಬಹುದೇನೋ. ಅದುತಾನೇ ಇಷ್ಟಪಟ್ಟು ಆಯ್ದುಕೊಂಡದ್ದು. ಅದಕ್ಕೆ ಗಂಡಸನ್ನು ದೂಷಿಸಿ ಪ್ರಯೋಜನವಿಲ್ಲ.

ಇವೆಲ್ಲಕ್ಕಿಂತ ಹೊರತಾಗಿ, ಎಂದಿನಂತೆ ನಿಮ್ಮ ಬರಹದ ಹರಿವು ಇಷ್ಟವಾಯಿತು.

- ಉಮೇಶ್

ವಿ.ರಾ.ಹೆ. said...

hmmmm...

ಗೌತಮ್ ಹೆಗಡೆ said...

:(

ದಿನಕರ ಮೊಗೇರ said...

ಕವನ ತುಂಬಾ ಚೆನ್ನಾಗಿದೆ..... ಇದು 'ನೀನು ಕೊಟ್ಟರೆ, ನಾನು ಕೊಡುತ್ತೇನೆ' ಎನ್ನುವ ಕಾಲ..... ಹಾಗಾಗಿ ಯಾರಿಗೆ ಯಾರೂ 'ಹಾಸಿಗೆ' ಆಗಲ್ಲ ಅಂತ ನನ್ನ ಅಭಿಪ್ರಾಯ.....