Wednesday, March 31, 2010

ಧರಿತ್ರಿ ಒಂದು ವರ್ಷದ ಮಗು!

ಈ ಮಾರ್ಚಗೆ ಧರಿತ್ರಿಗೆ ಒಂದು ವರುಷ. ಈಗ ನನ್ನ ಧರಿತ್ರಿ ಒಂದು ವರುಷದ ಮಗು. ಒಂದು ವರ್ಷದಲ್ಲಿ 38 ಬರಹಗಳನ್ನು ಕಂಡಿದ್ದಾಳೆ. ತುಂಬಾ ಕಡಿಮೆ ಅನಿಸುತ್ತಿದೆ. ಆದರೂ, ಏನೋ ಒಂಥರಾ ಖುಷಿ. ಅಷ್ಟಾದ್ರೂ ಬರೆದಿದ್ದೇನಲ್ಲಾ ಎಂಬ ಹೆಮ್ಮೆ. ಇನ್ನೂ ಧರಿತ್ರಿ ನಿರಂತರ, ನಿತ್ಯ ನಿರಂತರ.
ನಿಮ್ಮ ಪ್ರೋತ್ಸಾಹ, ಪ್ರೀತಿ ಅತ್ಯಗತ್ಯ. ಇರುತ್ತೆ ಅಲ್ವಾ? ನಂಗೊತ್ತು ಎಂದಿನಂತೆ ಈ ಧರಿತ್ರೀನಾ ಬೆನ್ನುತಟ್ಟುತ್ತಿರೆಂಬ ನಂಬಿಕೆ. ಪ್ರೀತಿಯಿರಲಿ. ಅದೇ ಭಾವಗಳೊಂದಿಗೆ ಮತ್ತೆ ನಿಮ್ಮ ಜೊತೆ ಮಾತಿಗಿಳಿಯುವೆ.
ವಂದನೆಗಳು
&ಚಿತ್ರಾ ಸಂತೋಷ್

Thursday, March 25, 2010

ಅಂತರಾಳ ಅಣಕವಾಟ


ಈ ಭಾವವನ್ನು ಎಲ್ಲೂ ಅಡಗಿಸಲು ಸಾದ್ಯವಿಲ್ಲವೇನೂ .. ನನ್ನ ಖುರ್ತಾ ಜೀಬಿನಲ್ಲಿ, ಜೋಡಿಸಿಟ್ಟ ಪುಸ್ತಕಗಳ ನಡುವೆ, ನನ್ನ ಕೀ ಬೋರ್ಡ್ ನ ಸಂದಿಗಳಲ್ಲಿ, ಅಣ್ಣನ ಸಿಗರೇಟು ಪ್ಯಾಕ್ ನಲ್ಲಿ ಕೊನೆಗೆ ಈ ಅಕ್ಷರಗಳ ಧೀರ್ಘ, ಒತ್ತು, ಸುಳಿಗಳ ನಡುವೆ ... ಛೆ !! ಎಷ್ಟೇ ಅಡಗಿಸಿಟ್ಟರು ಮತ್ತೆಲ್ಲೋ ಎದ್ದು ಬಂದು ತಲೆಗೆ ಮೊಟಕುತ್ತಿರುತ್ತವೆ. ಎಲ್ಲೋ ಓದಿದ ನೆನಪು - ಭಾವ , ಅವರವರ ಭಾವಕ್ಕೆ ಬೇಕಿದ್ದರೆ ಮಾತ್ರ. ಹೌದು ಈ ಭಾವ ನನಗೆ ಬೇಕಾಗಿತ್ತೇನೋ .
ಗಣಿತಕ್ಕೂ-ಕಾವ್ಯಕ್ಕೂ, ನನಗೂ-ನಿನಗೂ ಎಲ್ಲಕ್ಕೂ ಸಾಮ್ಯತೆ ತೋರಿ , ನಾನೇ ಪಯಣ ಬೆಳಸದ ನನ್ನ ದಾರಿಯಲ್ಲಿ ನನಗಿಂತಲೂ ಮುಂದೆ ಹೋಗಿ ನಿಂತ ದಾರಿ ಸೂಚಕ, ಈ ತರಹದ ಅತೀ ಭಾವುಕತೆಯನ್ನು ಯಾವುದೂ ಅಗೊಚಾರಕ್ಕೆ ಹರವಿಸಿದ ಹರ ಹರ ಮಹಾದೇವ. ಆ ನಿನ್ನ ಕಚ್ಚಾತನ, ಹುಳಿ, ಒಗರು, ಸ್ವಲ್ಪೇ ಸ್ವಲ್ಪ ತಿಕ್ಕಲುತನ , ಉಡಾಫೆ , ಹುಂಬತನ, ಎಷ್ಟು ಬಗೆದರು ತೀರದ ಪ್ರೀತಿ, ಪುಸ್ತಕಗಳ ನಡುವೆ ಮುಚ್ಚಿಟ್ಟ ನಿನ್ನ ಭಾವ ಚಿತ್ರಗಳು ಎಲ್ಲವೂ ಯಾವುದೂ ಹಳೆ ಮೌನವನ್ನು ನೆನಪಿಸುವ ಮತ್ತೊಂದು ಮೌನ.


ನಾ ಉಪಯೋಗಿಸೂ ಬಾಚಣಿಕೆ, ಪರ್ಸ್ , ಕಪ್ಪು ವಾಚು, ಕುರ್ತಾ ಹೀಗೆ ಇಂತಿಷ್ಟೇ ನನ್ನನ್ನು ಗುರುತಿಸಿಕೊಂಡು ನನ್ನ ಪಾಡಿಗೆ ನಾನಿದ್ದಾಗ, ದಕ್ಕನೆ ನನ್ನ ಎಲ್ಲಾ ಭಾವಗಳಿಗೆ ಪರಿಧಿ ಹಾಕಿದ ದೌಲತ್ತು ನಿನಗೇ ಇರಲಿ. ನನ್ನೆಲ್ಲ ನಗು , ಸಿಟ್ಟು -ಸೆಡವು, ತುಂಟಾಟಿಕೆ ಎಲ್ಲವನ್ನು ಅಕ್ಷರಗಳಲ್ಲಿ ಇಳಿಸುವುದು ಏನೂ ಒಂದು ತರಹ ವಿಚಿತ್ರ ಸಂಕಟ. ಯಾವುದೂ ಒಂದು ಹಳೆಯ ಹತಾಶೆ, ನಿನ್ನ ಕಂಡಾಗ ಯಾವುದೂ ಮಸಲತ್ತು ಮಾಡಿದವರ ಹಾಗೆ ನಗುವಾಗಿ ಗಾಳಿಗೆ ತೂರಿ ಹೋದಂತೆ ಅನುಭವ.


ಮತ್ತೆ ನಿನ್ನೊಂದಿಗೆ ಅದೇ ಹಳೆ ಪ್ರಾಮಾಣಿಕ ಕ್ಷಣಗಳನ್ನು ಮತ್ತೊಮ್ಮೆ ಪುರಸ್ಕರಿಸಿಬಿಡುವಾಸೆ. ಕೊನೆಗೆ ಸಿಕ್ಕಷ್ಟು ಬಾಚಿ-ಬಳಿದು ಮತ್ತಷ್ಟು ಕನಸುಗಳ ಹವಣಿಕೆಯಲ್ಲಿ ಕಾಯುವ ಭಾವ ಸ್ವಲ್ಪ ನಿರಾಳ . ಹವಣಿಸಿದೆಲ್ಲವು ಸಿಕ್ಕೊಡನೆ ಏಕ್ ಧಮ್ ಸೂಪರ್ ಹೈ-ವೇ, ಮತ್ತಷ್ಟು ಉದ್ದದ ಭಾವ. ತಿರುಗಿ ನೋಡಿದಾಗ ಪಯಣ ಇನ್ನು ಶುರುವಾಗಿಲ್ಲವೇನೂ..!! ಯಾವುದೂ ಒಂದು ನಾದಕ್ಕೆ ತಿರುಗಿ ಹೋಗುವ ಹುನ್ನಾರ


Photo: Santhosh Chidambar

Tuesday, March 23, 2010

ಮರಳಿ ಭಾವದೊಡಲಿಗೆ....



ಮದುವೆ ಕರೆಯೋಲೆ ಕೊಟ್ಟಾಯ್ತು. ಮದುವೆನೂ ಆಗೋಯ್ತು. ಕೆಲವರು ಇಲ್ಲೇ ವಿಶ್ ಮಾಡಿದ್ರು. ಕೆಲವರು ಮದುವೆಗೂ ಬಂದರು. ಐತಣಕೂಟಕ್ಕೂ ಬಂದರು. ಅದು ನಮಗೆ ಖುಷಿ. ಎಲ್ಲರಿಗೂ ನಬ್ಬಿಬ್ಬರ ಧನ್ಯವಾದಗಳು. ಹಾಗೇ ಇಟ್ಟಿಗೆ ಸಿಮೆಂಟಿನ ಪ್ರಕಾಶ್ ಹೆಗ್ಡೆ ತಮ್ಮ ಬ್ಲಾಗಿನಲ್ಲಿ "ಬ್ಲಾಗ್ ಲೋಕದ ಪರಿಣಯ' ಎಂದು ಬರೆದಿದ್ದರು. ಥ್ಯಾಂಕ್ಯೂ ಸರ್.


ಮದುವೆ ಗಡಿಬಿಡಿ ಎಲ್ಲಾ ಮುಗಿದುಹೋಯ್ತು. ಎಲ್ಲವೂ ಚೆನ್ನಾಗೇ ನಡೆಯಿತು. ಹಳೆಯ ಬದುಕು ಏನೋ ಹೊಸ ರೂಪ ಪಡೆದಂತೆ. ಮನೆಯವರ ಜವಾಬ್ದಾರಿನೂ ಮುಗಿದುಹೋಯ್ತು. ಈಗ ಮಾಮೂಲಿ ಆಫೀಸ್. ಮತ್ತೆ ಕೆಲಸ, ಅದೇ ಪತ್ರಿಕೆ, ಅದೇ ಆಫೀಸು, ಅದೇ ಜನರು, ಅದೇ ಓಡಾಟ, ಮನಸ್ಸು ಎಲ್ಲದಕ್ಕೂ ಮತ್ತೆ ಹೊಂದಿಕೊಳ್ಳಬೇಕನಿಸುತ್ತೆ. ಆದರೂ ಏನೋ ಖುಷಿಯ ಗುಂಗು. ಮದುವೆಗೆ ಮೊದಲು ದೇವರನ್ನು ನೀನೆಕೆ ಕಲ್ಲಾಗಿಬಿಟ್ಟೆ ಅಂತ ಬೈದಿದ್ದೆ. ತವರು ಬಿಡಬೇಕೆ? ಎಂದು ನೂರಾರು ಪ್ರಶ್ನೆಗಳ ಮಳೆ ಸುರಿದಿದ್ದೆ. ಆದರೆ, ದೇವರೇ ನಿನಗೆ ಬೈದುಬಿಟ್ಟೆ ಅಲ್ವ? ಅಂತ ಸಾರಿ ಅಂತ ಕೇಳ್ತಾ ಇದ್ದೀನಿ.


ಮದುವೆ ಗುಂಗಿನಿಂದ ಆಫೀಸು ಕೆಲಸಗಳನ್ನಷ್ಟೇ ಮಾಡುತ್ತಿದ್ದೆ. ಬ್ಲಾಗ್ ಬರಹಗಳತ್ತ ತಿರುಗಿ ನೋಡಲು ಸಮಯವಿರಲಿಲ್ಲ. ಇನ್ನು ಮತ್ತೆ ಬ್ಲಾಗ್ ಮುಂದುವರಿಸಬೇಕು. ನಾವಿಬ್ಬರೂ ಬ್ಲಾಗ್ ಬರಿಯಬೇಕು. ಇನ್ನು ಚೆನ್ನಾಗಿ ಬರೀಬೇಕು ಅಂತ ನಮ್ಮಾಸೆ. ನನ್ನ ಧರಿತ್ರಿ ಮತ್ತು ಶರಧಿ ಎರಡೂ ಬ್ಲಾಗ್ ಗಳು ನನ್ನ ಆತ್ಮೀಯು ಗೆಳತಿಯರು. ಇನ್ನು ಇವೆರಡನ್ನು ಚೆನ್ನಾಗಿ ಮುಂದುವರಿಸಬೇಕು. ಮತ್ತೆ ನಿಮ್ಮೆದುರಿಗೆ ಅದೇ ಪುಟ್ಟ ಪುಟ್ಟ ಬರಹಗಳೊಂದಿಗೆ ಕಾಣಿಸಿಕೊಳ್ಳುತ್ತೇವೆ. ಭಾವಗಳಿಗೆ ಬರವಿಲ್ಲ, ಅವುಗಳಿಗೇ ಅಕ್ಷರ ರೂಪ ತುಂಬುವಾಸೆ. ಎಲ್ಲೋ ಕಂಡ ಹಕ್ಕಿ, ಮುಗಿಲಲ್ಲಿ ತೇಲಾಡುವ ಮೋಡ, ನೆನಪಾಗುವ ಹುಟ್ಟೂರು, ಪ್ರೀತಿ ನೀಡಿದ ಒಡನಾಡಿಗಳು, ಗಂಡನ ಜೊತೆಗಿನ ಪುಟ್ಟ ಹುಸಿಮುನಿಸು, ಆಫೀಸ್ ನಲ್ಲಿನ ಕಿರಿಕಿರಿ, ಜಗತ್ತಿನಾಚೆಗಿನ ಭಾಷೆಯಿಲ್ಲದ ಭಾವಗಳು...ಎಲ್ಲವೂ ಅಕ್ಷರ ರೂಪ ಪಡೆಯಲಿವೆ. ಓದುತ್ತೀರಲ್ಲಾ...



ಪ್ರೀತಿಯಿಂದ
ಚಿತ್ರಾ ಸಂತೋಷ್