![](http://3.bp.blogspot.com/_Yi5lfZynDXg/TGvaTD5FtPI/AAAAAAAAAGo/Fdsq87z8DHk/s320/1281538_92770872.jpg)
ನಮ್ಮನ್ನು ಹೊತ್ತ ವಾಹನ ಮುಂದೆ ಸಾಗುತ್ತಿದ್ದರೆ, ಹಿಂದಿನಿಂದ ವೇಗವಾಗಿ
ಬರುವ ವಾಹನಗಳಿಗೆ ನಮ್ಮನ್ನು ಹಿಂದಿಕ್ಕಿ ಹೋಗುವ ತವಕ. ಪ್ರತಿಯೊಬ್ಬರಿಗೂ ತಮ್ಮ ಗುರಿಯನ್ನು ಮುಟ್ಟುವ ಹಂಬಲ. ಅದಕ್ಕಾಗೇ ಪೈಪೋಟಿ. ಮನಸ್ಸು ಹಿಂದಕ್ಕೆ ಹೊರಳಿತ್ತು.
ಅಂದು ಆ ಜೀವ ತನ್ನ ಪಾಡಿಗೆ ತಾನು ಮಲಗಿತ್ತು, ನಿಶ್ಯಬ್ದವಾಗಿ! ಈ ಲೋಕದ ಪರಿವೇ ಅದಕ್ಕಿಲ್ಲ. ಅದರೆದುರು ನಿಂತು ಅಳುವವರ ಪರಿಚಯ ಅದಕ್ಕಿಲ್ಲ. ಗೋಳಾಡುವವರು ಅವರ ಪಾಡಿಗೆ ಗೋಳಾಡುತ್ತಿದ್ದರು. ಆ ಇಳಿವಯಸ್ಸಿನಲ್ಲಿ ಲೋಕದ ಪರಿವೆಗೆ ‘ಶವ’ವಾಗಿದ್ದ ಆಕೆ,
ಬದುಕಿನ ‘ಪ್ರತಿಬಿಂಬ’ದಂತೆ ಕಾಣುತ್ತಿದ್ದಳು. ಒಂದು ಕಾಲದಲ್ಲಿ ಚಿಗರೆಯಂತೆ ಓಡಾಡಿದ್ದ ಆ ಜೀವ, ಅಂದು ಕೃಶವಾಗಿತ್ತು. ವಯಸ್ಸು ಸೌಂದರ್ಯವನ್ನು ಉಳಿಸಿಕೊಳ್ಳಲಿಲ್ಲ. ಕಣ್ಣುಗಳೂ ಮಸುಕಾಗಿದ್ದವು.
ಸಾವಿನಂಚಿನಲ್ಲಿರುವ ಆ ಮುಖಗಳೂ ಅವಳೆದುರು ನಿಂತು ಅತ್ತವು. ಅವರ ಕಂಗಳಲ್ಲೂ ನಾಳಿನ
ಬದುಕಿನ ಭಯವಿತ್ತು! ಇನ್ನೊಬ್ಬರ ‘ಸಾವ’ನ್ನು ನೋಡುತ್ತಲೇ ನಾಳೆ ಎದುರಾಗುವ ನಮ್ಮ ‘ಸಾವಿನ’ ಕುರಿತು ಚಿಂತಿಸುವುದು ಅದೆಷ್ಟು ಕ್ರೂರ? ಇಷ್ಟೆಲ್ಲಾ ಆದರೂ ದೂರದಲ್ಲಿ ನಿಂತು ನಗುತ್ತಿದ್ದ ಮಗುವಿಗೆ ಅದಾವುದರ ಪರಿವೇ ಇರಲಿಲ್ಲ.
ಆ ಮಗು ಮನೆಯೆದುರು ತೂಗು ಹಾಕಿದ್ದ ತೂಗುದೀಪ ಬೇಕೆಂದು ಹಠ ಹಿಡಿಯುತ್ತಿತ್ತು. ತಣ್ಣನೆ ಮಲಗಿದ್ದ ‘ಅನಾಥ ಜೀವ’ವನ್ನು ನೋಡಿ ನಗುತ್ತಿತ್ತು. ಅಮ್ಮನೊಂದಿಗೆ ಹಾಲು ಕುಡಿಬೇಕೆಂದು ರಚ್ಚೆ ಹಿಡಿಯುತ್ತಿತ್ತು. ತನ್ನ ಲೋಕದಲ್ಲೇ ಹಲವು ವಿಸ್ಮಯಗಳಿಗೆ ಮುನ್ನುಡಿಯಾಗುತ್ತಿತ್ತು.
ಬದುಕಿನ ದಾರಿಯಲ್ಲಿ ನಾಳೆ
ಬರುವ ‘ಸಾವಿನ’ ಸುಳಿವು ಅದಕ್ಕಿರಲಿಲ್ಲ. ಆ ಮುಗ್ಧ ನಗೆಗೆ ಸಾವಿನ ಮನೆಯಲ್ಲೂ ಪುಟ್ಟದೊಂದು ಭರವಸೆ ಮೂಡಿಸುವ ಪ್ರಯತ್ನ.
ಬದುಕು ಅಂದ್ರೆ ಇದೇನಾ?...ಮನವೆಂಬ ಶರಧಿಯಲ್ಲಿ ನೂರಾರು ಪ್ರಶ್ನೆಗಳ ಅಲೆ ಅಲೆಗಳು!
(ಪ್ರಕಟ: http://hosadigantha.in/epaper.php?date=08-12-2010&name=08-12-2010-15