Monday, November 16, 2009

ಕವಿತೆ

ನನ್ನೆದೆಯ ಪುಟಗಳಲಿ
ನಿನ್ನದೇ ಕವಿತೆ, ಚಿತ್ರಗಳು
ಕನಸಿನ ಕಂತೆಯೊಡನೆ
ಯಾರೂ ಓದದ ಕತೆಗಳು

ಪ್ರತಿ ಕವಿತೆಗೂ ಕತೆಗೂ
ಒಂದೊಂದು ನಿಲ್ದಾಣ
ಯಾವುದು ನಿಲ್ಲಲಿಲ್ಲ
ನಿನ್ನ ಸೆಳತಕ್ಕೆ ಗೆಳತಿ

ಕವಿತೆ-ಕತೆ ಹುಟ್ಟುವುದು
ಹೇಗೋ ಏನೋ ನಾ ಅರಿಯೆ
ಆದರೆ ಹೋಗದಿರು ಅದರಡಿ
ನಿನ್ನ ಸಹಿ ಹಾಕದೆ.

Sunday, October 11, 2009

ನಮ್ಮೊಂದಿಗೇ ನಾವು ಸಂತೋಷಿಸೋಣ...

ಓಶೋ ಬರೆದ ಪ್ರೇಮ ಧ್ಯಾನದ ಪಥದಲ್ಲಿ ಪುಸ್ತಕ ಓದುತ್ತಿದ್ದೆ. ಯಾಕೋ ನೆನಪಾಯಿತು. ನಾನು ಧರಿತ್ರಿ ಬ್ಲಾಗ್ ಆರಂಭಿಸುವಾಗ ಮೊದಲು ಬರೆದ ಬರಹ ಒಂಟಿತನದ ಬಗ್ಗೆ ಎಂದು.

ಪುಸ್ತಕದಲ್ಲಿ 'ಒಂಟಿತನದಿಂದ ಪ್ರೇಮದೆಡೆಗೆ' ಎಂಬ ವಿಷಯದ ಮೇಲೆ ಬರೆಯುತ್ತಾ ಒಂಟಿತನ ಮತ್ತು ಏಕಾಂತ ಕುರಿತು ಬಹಳ ಚೆನ್ನಾಗಿ ಹೇಳಿದ್ದಾರೆ.

"ಮೊದಲು ಏಕಾಂತರಾಗಿ, ಏಕಾಂಗಿಗಳಾಗಿ. ಮೊದಲು ನಿಮ್ಮೊಂದಿಗೆ ನೀವು ಸಂತೋಷಿಸಲು ಆರಂಭಿಸಿ. ಮೊದಲಿಗೆ ನಿಮ್ಮನ್ನು ನೀವು ಪ್ರೀತಿಸಿ. ಎಷ್ಟರಮಟ್ಟಿಗೆ ಎಂದರೆ ನಿಮ್ಮ ಬಳಿ ಯಾರೂ ಬರದಿದ್ದರೂ ಸರಿಯೇ. ಅತ್ಯಂತ ಪ್ರಾಮಾಣಿಕತೆಯಿಂದ ನಿಮ್ಮಲ್ಲೇ ನೀವು ಆನಂದಿತರಾಗಿ. ನಿಮ್ಮ ಬಾಗಿಲನ್ನು ಯಾರೂ ತಟ್ಟದಿದ್ದರೂ ಪರವಾಗಿಲ್ಲ. ಯಾರಾದರೂ ನಿಮ್ಮ ಬಳಿ ಬರಲಿ ಎಂದು ನೀವು ಕಾಯುತ್ತಿರುವುದಿಲ್ಲ. ನೀವು ನಿಮ್ಮ ಮನೆಯಲ್ಲಿರುವಿರಿ. ಹೌದು, ಯಾರಾದರೂ ಬಂದರು ಒಳ್ಳೆಯದೇ. ಪ್ರೀತಿಕರವೇ ಸುಂದರವೇ. ಯಾರೂ ಬರದಿದ್ದರೂ ಒಳ್ಳೆಯದು, ಪ್ರೀತಿಕರವೇ ಸುಂದರವೇ. ತದನಂತರ ನೀವು ಬೇರೆಯವರೊಂದಿಗೆ ಸಂಬಂಧಿತರಾಗಿ, ನೀವೀಗ ಭಿಕ್ಷುಕರಂತೆ ಇರುದಿಲ್ಲ.ರಾಜನಂತಿರುವಿರಿ"

ಮಾತನ್ನು ಅದೆಷ್ಟು ಬಾರಿ ಓದುತ್ತೇನೋ ನನಗೆ ಗೊತ್ತಿಲ್ಲ. ಅಷ್ಟರಮಟ್ಟಿಗೆ ಮಾತುಗಳು ನನ್ನ ಆಕರ್ಷಿಸಿವೆ. ಒಬ್ಬಳೇ ಇದ್ದಾಗ ಮನಸ್ಸು ಬೇಜಾರಾದರೆ ತಕ್ಷಣ ಸಾಲುಗಳನ್ನು ಓದುತ್ತೇನೆ. ಯಾಕೋ ಮನಸ್ಸಿಗೆ ತುಂಬಾ ಖುಷಿಯಾಗುತ್ತೆ, ಮನಸ್ಸು ನಿರಾಳವಾಗುತ್ತೆ. ಎಲ್ಲಾ ಕಾಡುವ ನೆನಪುಗಳು ಬದಿಗೆ ಸರಿದು ಮನಸ್ಸು ಪರಿಶುದ್ಧತೆಯಿಂದ ಸಂಭ್ರಮಿಸುತ್ತೆ. ಅದಕ್ಕೆ ಹೇಳೋದು ಒಳ್ಳೆಯ ಪುಸ್ತಕಗಳು ಆತ್ಮೀಯ ಸ್ನೇಹಿತರಂತೆ ಅಂತ ಅಲ್ವಾ?

ನಾನು ಒಬ್ಬಳೇ ಇರುವುದನ್ನು ತುಂಬಾ ದ್ವೇಷಿಸುತ್ತೇನೆ. ಏಕೆಂದರೆ ನಾವು ಒಬ್ಬರೇ ಕುಳಿತಾಗ ಕಾಡುವ ನೆನಪುಗಳು, ಅಸಂಬದ್ಧ ಚಿಂತೆಗಳು ನಾವು ಇತರರ ಜೊತೆ ಕೂಡಿ ನಲಿದಾಗ ನಮ್ಮನ್ನು ಕಾಡುವುದಿಲ್ಲ. ಇಲ್ಲದ ಟೆನ್ಯನ್ ಕೊಡೋದಿಲ್ಲ. ನಾವು ಖಿನ್ನರಾಗುವುದಿಲ್ಲ. ಅದಕ್ಕೆ ಒಬ್ಬಳೇ ಇರುವಾಗ ಪುಸ್ತಕ ಓದುವುದು ಮತ್ತು ಹಾಡು ಕೇಳುವುದು ಒಂಥರಾ ನಮ್ಮೊಳಗೆ ಹೊಸ ಚೈತನ್ಯ ಮೂಡಿಸುತ್ತೆ.ಉತ್ಸಾಹ ತುಂಬುತ್ತೆ. ಮನಸ್ಸನ್ನು ಖುಷಿಗೊಳಿಸುತ್ತೆ.

ಬಹುಶಃ ಓಶೋ ಹೇಳಿರುವಂತೆ ನಮ್ಮನ್ನು ನಾವು ಪ್ರೀತಿಸುವ ಕಲೆ ಮಾನವನಿಗೆ ತಿಳಿದುಬಿಟ್ಟರೆ, ಪ್ರಪಂಚದಲ್ಲಿ ಮನುಷ್ಯನಷ್ಟು ನೆಮ್ಮದಿ, ಖುಷಿಯಿಂದ ಇರುವ ಜೀವ ಮತ್ತೊಂದಿರಲಾರದು.

Sunday, September 27, 2009

ಬದುಕನ್ನು ಪ್ರೀತಿಸಿದಷ್ಟೇ ಸ್ವಾಭಿಮಾನವನ್ನೂ ಪ್ರೀತಿಸ್ತೀನಿ...

ಹೌದು, ಯಾಕೋ ಸ್ವಾಭಿಮಾನದ ಬಗ್ಗೆ ಬರೆಯೋಣ ಅನಿಸ್ತಾ ಇದೆ. ಸ್ವಾಭಿಮಾನಕ್ಕೆ ಬಿದ್ದ ಪುಟ್ಟ ಪೆಟ್ಟು ಕೂಡ ಆ ಬಗ್ಗೆ ನಮ್ಮನ್ನು ಮತ್ತೆ ಮತ್ತೆ ಈ ಬಗ್ಗೆ ಯೋಚಿಸುವಂತೆ ಮಾಡುತ್ತೆ, ಕಾಡುತ್ತೆ ಅಲ್ವಾ?

ಸ್ವಾಭಿಮಾನ. ..! ನನಗೂ, ನಿಮಗೂ ಅದು ಇದೆ...ಬದುಕುವ ಪ್ರತಿಯೊಬ್ಬರಿಗೂ ಇದೆ. ಹುಟ್ಟುವಾಗ ಸ್ವಾಭಿಮಾನ ಅಂದರೆ ಏನು ಗೊತ್ತಿರಲಿಲ್ಲ. ಅಮ್ಮ ಆಗಾಗ ಬದುಕಿಗೆ ಬೇಕಾಗುವಷ್ಟು ಹೇಳಿಕೊಡುತ್ತಿದ್ದ ಸ್ವಾಭಿಮಾನದ ಪಾಠ ಪ್ರತಿಹೆಜ್ಜೆಯಲ್ಲೂ ನೆನಪಾಗುತ್ತಿದೆ.'ಮಗು ಸ್ವಾಭಿಮಾನ ಬಿಟ್ಟು ಬದುಕಬೇಡಮ್ಮಾ...'ಅನ್ನುತ್ತಿದ್ದಳು ಪ್ರೀತಿಯ ಅಮ್ಮ. ಬಡತನ ಬೇಗೆಯಲ್ಲಿ ನರಳುತ್ತಿರುವಾಗಲೂ ಪ್ರತಿ ಅಮ್ಮ ಹೇಳಿಕೊಡುವ ಪಾಠ ಅದು ಸ್ವಾಭಿಮಾನದ ಬದುಕು. ನಮ್ಮಮ್ಮ ನಿಮ್ಮಮ್ಮ ಹೇಳಿಕೊಡುವ ಬದುಕಿನ ಮೊದಲ ಪಾಠ ಸ್ವಾಭಿಮಾನದ ಬದುಕು ಅಲ್ವೇ?

ಹೌದು,
ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಅದೆಷ್ಟು ನೋವಾಗುತ್ತೆ ಅಲ್ವಾ? ಅದೇ ಆಫೀಸ್ನಲ್ಲಿ ಬಾಸ್, ಆತ್ಮೀಯ ಗೆಳೆಯ, ಪ್ರೀತಿಯ ಗೆಳತಿ....ಯಾರೇ ಆಗಲೀ ಸ್ವಾಭಿಮಾನಕ್ಕೆ ಪೆಟ್ಟು ಕೊಟ್ಟಾಗ ಮನಸ್ಸೆಷ್ಟು ನೋಯುತ್ತೆ ಅಲ್ವಾ? ಹೌದು, ಹಗಲಿಡೀ ಬೆನ್ನು ಮುರಿದು ಕೆಲಸ ಮಾಡಿದರೂ ಬಾಸ್ ಬೈತಾನೆ..ಥತ್ ನೀನು ಕೆಲಸಕ್ಕೆ ನಾಲಾಯಕ್ಕು ಅಂತಾನೆ. ಯಾರದೋ ಕೋಪವನ್ನು ತಮ್ಮ ಮೇಲೆ ತೀರಿಸಿಕೊಳ್ಳೋ ಬಾಸ್ , ನಮ್ಮ ಹೆಸರಿನ ಮುಂದಿರುವ ಡಿಗ್ರಿಯನ್ನು ಅಣಕಿಸುತ್ತಾನೆ. ಓದಿದ್ದು ವ್ಯರ್ಥ, ಕಲಿತದ್ದು ವ್ಯರ್ಥ, ನಿನ್ನ ಮಿದುಳಿನಲ್ಲಿ ಏನೂ ಇಲ್ಲ..ಅಂತಾ ಬಿಸಿಬಿಸಿಯಾಗಿ ಬೈತಾನೆ. ಹೊಟ್ಟೆಪಾಡು...ಮೈಯೆಲ್ಲಾ ಬೆಂಕಿ ಹರಿದರೂ ಬಾಯಿ ಮೌನವಾಗುತ್ತೆ. ಒಳಗೊಳಗೆ ಮನಸ್ಸು ನೋವು ಪಡುತ್ತೆ ಅಲ್ವಾ?

ನಾನೂ ಅಷ್ಟೇ..ಬದುಕನ್ನು ಪ್ರೀತಿಸಿದಷ್ಟೇ ಸ್ವಾಭಿಮಾನವನ್ನೂ ಪ್ರೀತಿಸ್ತೀನಿ. ಅದೇಕೋ ಗೊತ್ತಿಲ್ಲ..ಯಾರೇ ಆಗಲೀ ಸ್ವಾಭಿಮಾನಕ್ಕೆ ಹರ್ಟ್ ಆಗೋ ಏನು ಹೇಳಿದ್ರೂ ನಂಗೆ ಸಹಿಸಕ್ಕಾಗಲ್ಲ. ಥಟ್ಟನೆ ಎದುರು ಮಾತಾಡ್ತೀನಿ. ಅವರನ್ನು ಅಲ್ಲೇ ನಿರಾಕರಿಸಿ ಬಿಡ್ತೀನಿ. ಮತ್ತೆಂದೂ ಅವರನ್ನು ನನ್ನ ಕಣ್ಣುಗಳು ತಿರುಗಿ ನೋಡಲ್ಲ, ಅವರ ಜೊತೆ ಮಾತಾಡಬೇಕೆಂದು ಮನಸ್ಸಿಗೆ ಹೇಳೊಲ್ಲ, ಅವರ ಕುರಿತು ಕಿಂಚಿತ್ತೂ ಗೌರವ ಮೂಡಲ್ಲ, ಪ್ರೀತಿ ಮೂಡಲ್ಲ, ಕಾಳಜಿ, ಅನುಕಂಪ ಮೂಡಲ್ಲ. ಒಂದು ರೀತಿಯಲ್ಲಿ ಸಮಸ್ತ ಬಾಂಧವ್ಯಗಳು ಅವರಿಂದ ಕಳಚಿಬಿಡುತ್ತೆ. ಇದಕ್ಕೆ ನೀವೂ ಹೊರತಾಗಿಲ್ಲ ಅಂದುಕೊಂಡಿದ್ದೀನಿ.

ಒಂದು ಪುಟ್ಟ ಘಟನೆ. ನಾನು ನಿತ್ಯ ನೋಡೋ ಆಂಟಿ ಒಬ್ರು ಇದ್ದಾರೆ. ಆಂಟಿ ಒಳ್ಳೇ ಮನಸ್ಸಿನವರೇ. ಆದರೆ ಅದೇಕೇ ಗಂಡನಿಗೆ ಹೊಡೀತಾರೆ ಗೊತ್ತಾಗಲ್ಲ. ಪಾಪ, ಗಂಡನಿಗೆ ಹೊಡೆದು ಬಂದು ಅದನ್ನೇ ಅವರಿಗೆ ನಾಲ್ಕು ಕೊಟ್ಟೆ ಅನ್ತಾರೆ. ನಮಗೇ ಅಸಹ್ಯ ಆಗಿಬಿಡುತ್ತೆ. ಪಾಪ ಆ ಗಂಡ ಯಾರ ಮುಖನೂ ನೋಡಲ್ಲ. ನನಗನಿಸೋದು ಆ ಗಂಡನಿಗೆ ಸ್ವಲ್ಪನೂ ಸ್ವಾಭಿಮಾನ ಇಲ್ವಾ? ಅದನ್ನು ಮಾರಿಟ್ಟು ಹೆಂಡತಿ ಜೊತೆ ಬದುಕಬೇಕಾ? ಛೇ! ಅನಿಸುತ್ತೆ. ನೋಡುಗರಿಗೆ ಇದೊಂಥರಾ ತಮಾಷೆ ಅನಿಸಿದ್ರೂನೂ , ಇದರೊಳಗಿನ ಸೂಕ್ಷ್ಮ ತುಂಬಾ ನೋವು ಕೊಡುತ್ತೆ.

ಸ್ವಾಭಿಮಾನ ನಮ್ಮ ಸ್ವತ್ತು, ನಮ್ಮ ಬದುಕು, ಬಿಟ್ಟುಕೊಡಬೇಡಿ, ಹೊಟ್ಟೆಗೆ ತುತ್ತಿಲ್ಲಾಂದ್ರೂ,....ಏನಂತೀರಿ?

Friday, September 11, 2009

ಈಗ ಅವಳು ಅವನಿಗೆ 'ಹಾಸಿಗೆ' ...

ಅವನು ಪತಿ, ಅವಳು ಪತ್ನಿ.

ಅದ್ಧೂರಿಯಾಗಿ ಸಪ್ತಪದಿ ತುಳಿದಿದ್ದಾರೆ...

ಸಾವಿರಾರು ಜನರು ಮದುವೆಯೂಟದಿಂದ ಚಪ್ಪರಿಸಿದ್ದಾರೆ...

ಒಂದಲ್ಲ, ಎರಡಲ್ಲ ಐದು ದಿನ ಮದುವೆ ನಡೆದಿದೆ...

ಒಂದು ವಾರ ಭರ್ಜರಿ ಮಧುಚಂದ್ರನೂ ಮುಗಿಸಿ ಬಂದಿದ್ದಾರೆ...

ಈಗ ಆರತಿಗೊಂದು, ಕೀರುತಿಗೊಂದು ಮಕ್ಕಳ ಕನಸು ಕಾಣುವ ಸಮಯ...



ಅವಳಿಗೆ ಅವನು, ಅವನಿಗೆ ಅವಳು ಕಣ್ಣಲ್ಲೇ ಪರಿಚಯ..

ನೋಡೋ ಕಣ್ಣುಗಳೇ ಸತ್ಯ ಹೇಳಿದ್ದವು...

ಪ್ರಾಮಾಣಿಕತೆಗೆ ಅವಳು ಇನ್ನೊಂದು ಹೆಸರು....

ಬಡತನ..ಪ್ರತಿಯೊಬ್ಬರ ಬದುಕನ್ನೂ ಕಿತ್ತು ತಿನ್ನುತ್ತೆ....ಅವಳನ್ನೂ ಬಿಡಲಿಲ್ಲ..

ಜನ್ಮ ನೀಡಿದ ಅಪ್ಪ-ಅಮ್ಮ ಬಡತನದಲ್ಲೇ ಮಣ್ಣಾಗಿ ಹೋದವರು..ಇವಳನ್ನು ಹಾಗೇ ಬಿಟ್ಟು...!

ಕಣ್ಣ ನೋಟದ ಆಸರೆ, ಪ್ರೀತಿಯ ಹುಡುಕಾಟಕ್ಕೆ ಸಿಕ್ಕಿದ್ದು ಆತ...

ಪ್ರಾಮಾಣಿಕತೆ, ಸತ್ಯದ ಗೆಲುವಿನ ಕುರಿತು ಮಾತನಾಡುತ್ತಿದ್ದವ...

ಅವಳ ಸೌಂದರ್ಯ, ನೇರ ನಡೆ-ನುಡಿಯನ್ನು ಹೊಗಳುತ್ತಿದ್ದವ...

ಅವಳು ಮಾತುಬಿಟ್ಟರೆ ಹಸಿವನ್ನು ಲೆಕ್ಕಿಸದೆ ಅನ್ನ, ನೀರು ಬಿಡುತ್ತಿದ್ದವ...

ಅವಳಿಗಾಗಿ ಹಗಲಿರುಳೂ ಪರಿತಪಿಸುವವ,

ಅವಳನ್ನು ಅಂಗೈಯಲ್ಲಿಟ್ಟುಕೊಂಡು ಸಾಕುತ್ತೇನೆಂದವ...



ಹೌದು..ಅವಳು ನಂಬಿದಳು..

ಹಗಲಿರುಳು ಅವನ ಕನಸಿನಲ್ಲಿ ತೇಲಾಡಿದಳು...

ಆ ದೇವಾಲಯದಲ್ಲಿ ಅವನ ಹೆಸರಿನಲ್ಲಿ ನಿತ್ಯ ಪೂಜೆ ಮಾಡಿಸಿದಳು...

ಜೊತೆ-ಜೊತೆಗೆ ಹೆಜ್ಜೆಯಿಟ್ಟು ಆ ದೇವಾಲಯಯದಲ್ಲಿ ಅವನ ಹಣೆಗೆ ಕುಂಕುಮವಿಟ್ಟಳು...

ಅವನ ಕೈಯಿಂದಲೇ ತಲೆಗೆ ಹೂವ ಮುಡಿಸಿಕೊಂಡಳು....

ನಂಬಿದಳು...ಅವಳಿಗಿಂತಲೂ ಹೆಚ್ಚಾಗಿ ಅವನನ್ನೇ ನಂಬಿದಳು....

ಪ್ರೀತಿಯ ಹಾರಕ್ಕೆ ಕೊರಳೊಡ್ಡಿದಳು...

ಮನೆ-ಮನ ಎಲ್ಲೆಲ್ಲೂ ಪ್ರೀತಿಯ ಕನಸು ಕಾಣತೊಡಗಿದಳು...


ಅದೇನಾಯಿತೋ...

ಆತ ಪ್ರೀತಿಯ ಆಸರೆಯಾಗಲಿಲ್ಲ...ಕನಸುಗಳಿಗೆ ಕಣ್ಣುಗಳಾಗಲಿಲ್ಲ...

ರಾತ್ರಿಯ ಸುಖಕ್ಕೆ ಅವನಿಗೆ ಅವಳು 'ಹಾಸಿಗೆ'ಯಾದಳು

ಈಗ ಅವಳು ಅವನಿಗೆ 'ಹಾಸಿಗೆ' ...

ಹಣದ ಅರಮನೆಯಲ್ಲಿ ಅವಳು ಅಂಗಾತ ಬಿದ್ದ ಹೆಣ...



ಇನ್ನೊಂದೆಡೆ...

ಬೇಂದ್ರೆ ಅಜ್ಜನ...

ನಾನು ಬಡವಿ, ಆತ ಬಡವ, ಒಲವೇ ನಮ್ಮ ಬದುಕು,
ಬಳಸಿಕೊಂಡವದನೇ ಅದಕು, ಇದಕು, ಎದಕೂ…

ನೆನಪಾಗುತ್ತಲೇ ಬದುಕನ್ನೇ ಅಣಕಿಸಿದಂತೆ ಭಾಸವಾಗುತ್ತಿತ್ತು ಅವಳಿಗೆ.

Monday, September 7, 2009

ಆ ದೇವಾಲಯದಲ್ಲಿ ನಿನ್ನ ಕೈಯಾರೆ ಕುಂಕುಮ ಇರಿಸಿಕೊಳ್ಳಬಹುದಿತ್ತು...

ಮುನ್ನಾ...
'ಚಳಿಗೆ ಶ್ವೆಟರ್ ಹಿಡಿದುಕೋ. ಕಿಟಕಿ ಸಂದಿಯಲ್ಲಿ ಮುಖ ಹಾಕಿ ಕೂರಬೇಡ. ಚಳಿಗೆ ಜ್ವರ, ನೆಗಡಿ ಜಾಸ್ತಿ ಆದೀತು. ಕಿಟಕಿ ಬಾಗಿಲು ಮುಚ್ಚಿಕೋ, ಕಿವಿ, ಮುಖವನ್ನೆಲ್ಲಾ ಮುಚ್ಚಿಕೋ. ಬ್ಯಾಗಲ್ಲಿ ಬಿಸಿನೀರು ಹಾಕೋ ಮುನ್ನಿ..' ಎಂದು ಪ್ರೀತಿಯಿಂದ ನೀ ಕಳಿಸಿದ ಮೆಸೇಜ್ ಅನ್ನು ಎಷ್ಟು ಬಾರಿ ಓದಿದ್ದೇನೋ ನನಗೇ ಗೊತ್ತಿಲ್ಲ. ಅದೇ ಗುಂಗಿನಲ್ಲಿ ಇದೀಗ ಪತ್ರ ಬರೀತಾ ಇದ್ದೀನಿ ನೋಡು. ಸೂರ್ಯ ಮೂಡುವ ಆ ಮುಂಜಾವು ಬೆಂಗಳೂರಿನಿಂದ ಅಮ್ಮನೂರಿನ ಬಸ್ಸು ಹಿಡಿದಾಗ ನಾನಿರುವ ಪುಟ್ಟ ಮನೆ, ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದ ನನ್ನ ಪ್ರೀತಿಯ ಪುಸ್ತಕಗಳು, ನಿತ್ಯ ನನ್ನ ಕಣ್ಣುಗಳಿಗೆ ಖುಷಿ ನೀಡುತ್ತಿದ್ದ ಎದುರುಮನೆಯ ಪುಟ್ಟ ಮಗುವಿನ ನಗು ನನ್ನ ಕಾಡಲಿಲ್ಲ. ಕಾಡಿದ್ದು ನಿನ್ನ ನೆನಪು, ನಿನ್ನ ನಗು, ನಿನ್ನ ಖುಷಿ, ಕಾಳಜಿ, ಪ್ರೀತಿ ತುಂಬಿದ ನಿನ್ನ ಮಾತುಗಳು, ನನ್ನ ಬದುಕಿನ ಹೆಜ್ಜೆಗಳನ್ನು ತಿದ್ದಿ ತೀಡಿದ ನಿನ್ನ ವಿಶಾಲ ಹೃದಯ, ಭಾವನೆಗಳ ಜೋಕಾಲಿಯಲ್ಲಿ ನನ್ನ ತೂಗಿದ ಆ ನಿನ್ನ ನಿಷ್ಕಲ್ಮಶ ಪ್ರೀತಿ, ಅತ್ತಾಗ ಸಂತೈಸಿದ ನಿನ್ನ ಮಡಿಲು, ಪ್ರತಿ ಕ್ಷಣ ಕ್ಷಣವೂ ನನ್ನ ಆರೋಗ್ಯ, ನನ್ನ ಇರುವು, ನನ್ನ ಬದುಕು, ಇಡೀ 'ನನ್ನನ್ನೇ' ಕಣ್ಣುರೆಪ್ಪೆಯಲ್ಲಿಟ್ಟುಕೊಂಡು ಕಾಪಾಡಿದ ನಿನ್ನ ಅದಮ್ಯ ಅಕ್ಕರೆ.....!! ಹೌದು...ಮುನ್ನಾ..ಇದೇ ಕಾಡಿದ್ದು...ಬೇರೇನಲ್ಲ.

ಅಮ್ಮನೂರಿಗೆ ಸಾಗುವ ಆ ಬೃಹತ್ ಬೆಟ್ಟ ದಾಟಿ ಸಾಗುವಾಗ ನೀನಿದ್ದರೆ ನಿನ್ನ ಮಡಿಲಲ್ಲೇ ಆರಾಮವಾಗಿ ನಿದ್ದೆಹೋಗಬಹುದಿತ್ತು ಅನಿಸಿತ್ತು. ಅಮ್ಮನಿಗೆ ನಿನ್ನ ಪರಿಚಯಿಸಬಹುದಿತ್ತು, ನಮ್ಮೂರ ಸುಂದರ ತೋಟದಲ್ಲಿ ನಿನ್ನ ಸುತ್ತಾಡಿಸಬಹುದಿತ್ತು. ನಮ್ಮ ಪುಟ್ಟ ಹೆಂಚಿನ ಮನೆಯಲ್ಲಿ ಕುಳಿತು ನನ್ನ ಜೊತೆ ಅಮ್ಮ ಮಾಡಿಟ್ಟ ಹಪ್ಪಳ ಸಂಡಿಗೆ ಮೆಲ್ಲಬಹುದಿತ್ತು. ಜಡಿಮಳೆಗೆ ಜುಳು ಜುಳು ಎನ್ನುತ್ತಾ ಹರಿಯೋ ನಮ್ಮೂರ ನೇತ್ರಾವತಿಯನ್ನು ನಿನಗೂ ತೋರಿಸಬಹುದಿತ್ತು ಅನಿಸಿತ್ತು. ಹಸಿರ ವನಸಿರಿಯಲ್ಲಿ ನಿನ್ನ ಜೊತೆ ನಾನೂ ದಾರಿಯುದ್ದಕ್ಕೂ ಸಾಗಬಹುದಿತ್ತು. ನಮ್ಮೂರ ದೇವಾಯಲಕ್ಕೆ ನಿನ್ನ ಕರೆದುಕೊಂಡು ಹೋಗಿ ನಿನ್ನ ಕೈಯಾರೆ ಕುಂಕುಮ ಇರಿಸಿಕೊಳ್ಳಬಹುದಿತ್ತು ಅನಿಸಿತ್ತು..ಹೌದು..ಮುನ್ನಾ..ನೆನಪಾಗಿದ್ದು ನೀನು ಮಾತ್ರ....ನನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸೋ ನೀನು ಮಾತ್ರ.

ಥತ್! ನಾ ದೂರದಲ್ಲಿದ್ರೆ ನೀ ಮುನಿಸಿಕೊಳ್ತೀಯಾ. ರಂಪ ಮಾಡ್ತೀಯಾ. ಬೇಗ ಬಾ ಎಂದು ರಚ್ಚೆ ಹಿಡೀತೀಯಾ. ಪುಟ್ಟ ಮಕ್ಕಳಂತೆ ಹಠಮಾಡ್ತೀಯಾ. ಅದಕ್ಕೆಲ್ಲಾ ನಾ ಮೌನವಾಗಿದ್ದಾಗ ನಿಂಗೆ ಪ್ರೀತೀನೇ ಇಲ್ಲ ಅಂತೀಯಾ. ದಿನ, ವಾರ, ತಿಂಗಳುಗಟ್ಟಲೆ ಮಾತು ಬಿಡ್ತೀಯಾ. ಆದರೆ ನಾನಂತೀನಿ 'ಅದೇ ಕಣೋ ಪ್ರೀತಿ' ಅಂತ. ನೀ ಕೋಪದಲ್ಲಿದ್ದಾಗ ನಾನು ಕತ್ತಲನ್ನೂ ಪ್ರೀತಿಸೋಕೆ ಹೊರಡ್ತೀನಿ..ಕತ್ತಲೇ ಹಿತ ಅಂತೀನೀ. ಇರುಳನ್ನೂ ಬೆಳಕಿನಂತೆ ಪ್ರೀತಿಸುವ, ಅಮಾವಾಸ್ಯೆಯ ಕರಾಳ ರಾತ್ರಿಯನ್ನೂ ಪ್ರೀತಿಸುವ ಆ ಶಕ್ತಿ ನೀಡಿರೋದು ನಿನ್ನ ಪ್ರೀತಿ ಗೊತ್ತಾ?

ನಿನ್ನ ಪ್ರೀತಿಸ್ತೀನಿ...ನಿನ್ನನ್ನು, ನಿನ್ನ ಬದುಕನ್ನು, ನಿನ್ನ ಭಾವನೆಗಳನ್ನು, ನಿನ್ನ ಸಾಧನೆಯನ್ನು, ನಿನ್ನ ಕನಸುಗಳನ್ನು, ನಿನ್ನ ಸುತ್ತಲಿನ ನೋವು-ನಲಿವುಗಳನ್ನೂ ನಾ ಪ್ರೀತಿಸ್ತೀನಿ ಅನ್ನೋದನ್ನು ನಾ ಹ್ಯಾಗೆ ಪ್ರೂವ್ ಮಾಡಲಿ ಹೇಳು? ನೀ ದುಃಖದಲ್ಲಿದ್ದಾಗ ನನ್ನ ಕೊರಗು ಅದು ಕಲ್ಪನೆಗೂ ನಿಲುಕದು ಕಣೋ
ಮುನ್ನಾ..ನೀ ಖುಷಿಯಿರಬೇಕು. ನಿನ್ನ ಖುಷೀ, ಸಂಭ್ರಮನಾ ನಾ ನೋಡಬೇಕು. ನಿನ್ನ ನಾ ಪ್ರೀತಿಸ್ತೀನಿ, ನೀ ನನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸ್ತೀಯಾ..ನಿನಗೆ ಅತ್ಯಂತ ಖುಷಿ ತರುವ, ನಿನಗೆ ಅತ್ಯಂತ ಪವಿತ್ರ ಎನಿಸುವ ಸಂಗತಿಗಳನ್ನು ಮೀರಿದ ಯಾವ ವಿಚಾರಗಳೂ ನನಗೆ ಖುಷಿ ತರೊಲ್ಲ. ನಿನ್ನ ನೆಮ್ಮದಿನೇ ನನ್ನ ನೆಮ್ಮದಿ ನೋಡು. ನೀ ಪಡುವ ಸಂತೋಷ ನೆಮ್ಮದಿಯ ಸಂಭ್ರಮದ ಗಳಿಗೆಗಿಂತ ಈ ಜಗತ್ತಿನಲ್ಲಿರುವ ಇನ್ಯಾವುದೇ ವಸ್ತುಗಳು ನನಗೆ ಖುಷಿ ನೀಡಲಾರವು.

ಹ್ಲೂಂ..ಮಧ್ಯರಾತ್ರಿ 1 ಗಂಟೆ. ಇನ್ನು ಮಲಗಬೇಕು ಕಣೋ. ಉಳಿದಿದ್ದನ್ನು ಇನ್ನೊಂದು ಪತ್ರದಲ್ಲಿ ಬರೇತೀನಿ. ಅಲ್ಲಿತನಕ ಈ ಪತ್ರ ಓದುತ್ತಾ ಇರು..ಸರೀನಾ.

ನಿನ್ನ ಪ್ರೀತಿಯ
ಮುನ್ನಿ
.

Sunday, August 23, 2009

ಅಕ್ಕನಿಗೆ ಪ್ರೀತಿಯ ನೆನಪುಗಳು...

ಅಕ್ಕಾ..ನಿನ್ನೆ ಗೌರಿ-ಗಣೇಶ ಹಬ್ಬ. ನಿನ್ನ ತುಂಬಾ ನೆನಪಾಯ್ತು. ಸೂರ್ಯ ಮೂಡೋ ಹೊತ್ತಿಗೆ ಎದ್ದು ಸ್ನಾನ ಮಾಡಿ ದೇವರೆದುರು ದೀಪ ಹಚ್ಚಿ ಆರತಿ ಎತ್ತುವಾಗ ನಿನ್ನ ನೆನಪಾಯ್ತು. ಪಾಯಸ ಮಾಡಿ ಮಾವ, ಅಣ್ಣ, ತಮ್ಮ, ಪಕ್ಕದ್ಮನೆಯ ಪುಟ್ಟ ಮಕ್ಕಳಿಗೆ ಬಡಿಸುವಾಗ ನಿನ್ನ ನೆನಪು ತೀರಾ ಕಾಡಿತ್ತು. ಅಕ್ಕಾ... ಹಬ್ಬ ಬಂದರೆ ಮನೆಮುಂದೆ ಚೆಂದದ ರಂಗೋಲಿ ಇಡೋಕೆ ನೀನಿಲ್ಲ ಅಂದಿತ್ತು ಮನ.

ಅಕ್ಕಾ..ನಿನ್ನೆ ನಾ ಸೀರೆ ಉಟ್ಟಿದ್ದೆ ಗೊತ್ತಾ? ನನ್ನ ಇಷ್ಟದ ಬಣ್ಣ ಮೆರೂನ್ ಕಲರ್ ಸೀರೆ ಉಟ್ಟು, ಕೈ ತುಂಬಾ ಬಳೆ, ತಲೆ ತುಂಬಾ ಮಲ್ಲಿಗೆ ಮುಡಿದಿದ್ದೆ. ಆದರೆ, ನಂಗೆ ನೋಡು ಸೀರೆ ಉಡೋಕೆ ಬರಲ್ಲ..ಅದಕ್ಕೆ ಪಕ್ಕದ್ಮನೆಯ ಆಂಟಿ ಚೆನ್ನಾಗಿ ಸೀರೆ ಉಡಿಸಿದ್ರು ಅಕ್ಕಾ. ನೀನಿರುತ್ತಿದ್ದರೆ ನೋಡು ನೀನೇ ಉಡಿಸುತ್ತಿದ್ದೆಯಲ್ಲಾ? ತಲೆತುಂಬಾ ಹೂವು ಉಟ್ಟು, ಹಣೆಗೊಂದು ಬಿಂದಿಗೆ ಉಟ್ಟು ನೀನೂ ನನ್ನ ಜೊತೆ ಖುಷಿಪಡುತ್ತಿದ್ದೆ ಅಲ್ವಾ? ನನ್ನ ತಂಗಿ ಚೆನ್ನಾಗ್ ಕಾಣ್ತಾಳೆ ಅಂತ ಹೆಮ್ಮೆ ಪಡುತ್ತಿದ್ದೆಯಲ್ಲಾ.

ಅಕ್ಕಾ ನಿನ್ನೆ ದೇವಸ್ಥಾನಕ್ಕೆ ಹೋಗಿದ್ದೆ. ಹಣ್ಣುಕಾಯಿ ಮಾಡಿಸಿ ದೇವರ ಬಳಿಯೂ ನೀನು ಬೇಕೆಂದು ಬೇಡಿಕೊಂಡೆ. ನೀನು ಜೊತೆಗಿರುತ್ತಿದ್ದರೆ ನೀನೂ ನನ್ನ ಜೊತೆ ಬರ್ತಾ ಇದ್ದೆ. ನಿನ್ನ ಪುಟ್ಟ ಮಕ್ಕಳು ನನ್ನ ಮಡಿಲಲ್ಲಿ ಪ್ರೀತಿಯಾಟ ಆಡುತ್ತಿದ್ದವಲ್ಲಾ. ಏನು ಮಾಡೋದು ಹೇಳು...ದೇವರು ನಂಗೆ ನಿನ್ನ ಕೊಡಲೇ ಇಲ್ಲ ನೋಡು. ದೇವರ ಮೇಲೂ ಕೆಟ್ಟ ಸಿಟ್ಟು ಬರುತ್ತೆ...ಎಲ್ಲಾ ಕೊಟ್ಟು ಅಕ್ಕನನ್ನು ನಂಗೆ ಕೊಟ್ಟಿಲ್ಲ ಅನ್ನೋ ಕೊರಗು ನಂದು.

ಅಕ್ಕಾ..ಈ ಬಾರಿ ನಾನು ಹಬ್ಬಕ್ಕೆ ಅಮ್ಮನೂರಿಗೆ ಹೋಗಿಲ್ಲ. ಕೃಷ್ಣಾಷ್ಟಮಿಯ ದಿನವೇ ಹೋಗಿಬಂದೆ. ಅಮ್ಮಾ ಇಂದು ಬೆಳಿಗ್ಗೆ ಫೋನು ಮಾಡಿದ್ರು. ಯಾಕೆ ಗೊತ್ತಾ? ನಾನೂನು ಹುಟ್ಟಿದ್ದು ಗಣೇಶ ಹಬ್ಬದ ದಿನ. ಇವತ್ತು ಅಮ್ಮನೂ ಗಣಪತಿ ದೇವಸ್ತಾನಕ್ಕೆ ಹಣ್ಣುಕಾಯಿ ಹೂವು, ಬೆಲ್ಲ ತಕೊಂಡು ಹೋಗಿ ನನ್ನ ಲೆಕ್ಕದಲ್ಲಿ ಪೂಜೆ ಮಾಡಿಸಿದೆ ಅಂದ್ರು. ಅಮ್ಮಂಗೆ ನನ್ನ ಹುಟ್ಟಿದ ದಿನ ಅಂದ್ರೆ ಅದು ಚೌತಿ ದಿನವೇ ಹೊರತು ಆಗಸ್ಟ್ 2 ಅಂದ್ರೆ ಅವರು ನಂಬೊಲ್ಲ. ಅಮ್ಮ ಓದಿಲ್ಲ ಅಕ್ಕಾ..ಅದಕ್ಕೆ ನೋಡು ಅವರು ಪ್ರತಿ ವರ್ಷ ಚೌತಿಯನ್ನೇ ನೆನಪಿಟ್ಟುಕೊಳ್ಳುತ್ತಾರೆ. ಅಮ್ಮನ ಮುಗ್ಧತೆಗೆ ಮನಸಾರೆ ವಂದಿಸಿದೆ.
ಅಕ್ಕಾ..ಯಾಕೋ ನಿತ್ಯ ಅಂದುಕೊಳ್ಳುತ್ತಿದ್ದೆ ಮನ..

ನನಗೂ, ನನ್ನ ಬದುಕಿನಲ್ಲಿ ಸುಗ್ಗಿಯ ಸಂಭ್ರಮದಿಂದ ಮೆರೆಯೋಕೆ ನೀನಿರಬೇಕಿತ್ತು...
ನನ್ನ ನೀನು, ನಿನ್ನ ನಾನು ತುಂಬಾ ಪ್ರೀತಿಸುವವರಾಗಿರಬೇಕಿತ್ತು...
ಮನದ ಕದ ತೆರೆದು...ಪ್ರೀತಿಯ ಮಳೆಯಲ್ಲಿ ತೋಯಿಸಲು ನೀನಿರಬೇಕಿತ್ತು...
ನನ್ನ ಮೌನ-ಮಾತು, ಹುಸಿಮುನಿಸು, ಮುಂಗೋಪದ ಜೊತೆ ಸಾಥ್ ನೀಡಲು ನೀನಿರಬೇಕಿತ್ತು...
ಅಕ್ಕಾ..ನೀನು ಯಾವಾಗ ಬರ್ತೀಯಾ....ಹೇಳು ಬೇಗ...
ಇಂತೀ ನಿನ್ನ
ತಂಗಿ

Wednesday, August 19, 2009

ಆ ಪ್ರಶ್ನೆ ನನ್ನ ಆತ್ಮವನ್ನು ಚುಚ್ಚಿಬಿಟ್ಟಿತ್ತು...

ಮೊನ್ನೆ ಮೊನ್ನೆ ಸ್ವಾತಂತ್ರ್ಯ ದಿನ ಆಚರಿಸಿದ್ದೂ ಆಯಿತು..ಅದೂ ಪೊಲೀಸರ ಬಿಗಿಬಂದೋಬಸ್ತ್ ನಲ್ಲಿ! ಇದು ನಮ್ಮ ಹಣೆಬರಹ ಬಿಡಿ. ಪ್ರತಿಯೊಂದು ಕಾರ್ಯಕ್ರಮಕ್ಕೂ ಪೊಲೀಸರ ಸರ್ಪಗಾವಲು. ಕೃಷ್ಣದೇವರಾಯ ಕಾಲದಲ್ಲಿ ಚಿನ್ನವನ್ನು ರಸ್ತೆಯಲ್ಲಿಟ್ಟು ಮಾರಾಟ ಮಾಡುತ್ತಿದ್ದುದು ಇಲ್ಲೇನಾ ಎಂಬ ಶಂಕೆ ಮೂಡುತ್ತಿದೆ. ಅದಿರಲಿ, ಮೊನ್ನೆ ಸ್ವಾತಂತ್ರ್ಯ ದಿನದಂದು ಗೆಳತಿಯ ಮನೆಯಲ್ಲಿ ಸುಮ್ನನೆ ಕುಳಿತು ಟಿವಿ ನೋಡುತ್ತಿದೆ. ಗತಕಾಲದ ಇತಿಹಾಸವನ್ನು ಮತ್ತೆ ಮೆಲುಕು ಹಾಕುವ ಚಿತ್ರಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು..ಹೀಗೇ ಬೇರೆ ಬೇರೆ ಚಾನೆಲ್ ಗಳಲ್ಲಿ ಸ್ವಾತಂತ್ರ್ಯ ಆಚರಣೆ ಭರ್ಜರಿಯಾಗೇ ನಡೆಯುತ್ತಿತ್ತು. ಯಾವುದೋ ಒಂದು ಚಾನೆಲ್ ನೋಡಿದಾಗ 'ನಮ್ಮ ದೇಶದ ಹೀರೋ'ಗಳೆಂಬ ಕಾರ್ಯಕ್ರಮ ನಡೆಯುತ್ತಿತ್ತು. ಥಟ್ಟನೆ ಕಣ್ಣುಹಾಯಿಸಿದೆ, ಕ್ರಿಕೆಟ್ ತಾರೆಗಳಿಬ್ಬರನ್ನು 'ಹೀರೋಸ್ ಆಫ್ ಇಂಡಿಯಾ' ಸ್ತಾನದಲ್ಲಿ ಕುಳಿತುಕೊಳ್ಳಿಸಿ ಸಂವಾದಕ್ಕೆ ಅವಕಾಶ ನೀಡಲಾಗಿತ್ತು. ಕಿಕ್ಕಿರಿದ ಜನರು. 'ನೀವು ಯಾರನ್ನು ಯಾವಾಗ ಮದುವೆ ಆಗ್ತೀರಾ?', 'ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಇಷ್ಟನಾ?' 'ನಿಮಗೆ ಯಾವ ಹುಡುಗಿಯಾದ್ರೂ ಪಪೋಸ್ ಮಾಡಿದ್ಳಾ?' ಇಂಥ ಪ್ರಶ್ನೆಗಳ ಸುರಿಮಳೆ ವೀಕ್ಷಕರ ಕಡೆಯಿಂದ ಬರುತ್ತಿತ್ತು.

ಚಾನೆಲ್ ಆಫ್ ಮಾಡಿ ಕುಳಿತವಳಿಗೆ ಶಾಲಾ ದಿನಗಳಲ್ಲಿ ಟೀಚರ್ ಹೇಳಿಕೊಟ್ಟ ನಮ್ಮ 'ಹೀರೋ'ಗಳ ಬಗ್ಗೆ ಯೋಚನೆ ಮೂಡತೊಡಗಿತ್ತು.

ಹೌದು, ಶಾಲಾದಿನಗಳಲ್ಲಿ ನನ್ನ ಬೆಂಚಿನ ಪಕ್ಕದ ಗೋಡೆಗೆ ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್, ಮಹಾತ್ನಾಗಾಂಧೀಜಿ ಯ ದೊಡ್ಡ ಫೋಟೋಗಳನ್ನು ಅಂಟಿಸಿದ್ದರು. ನಿತ್ಯ ನಮ್ಮ ಟೀಚರ್ ಕ್ಲಾಸಿಗೆ ಬಂದವರೇ ದೇಶದ ಮಹಾನ್ ನಾಯಕರ ಕುರಿತು ಹೇಳೋರು. ಅವರ ಸಾಹಸಗಾಧೆಗಳನ್ನು ಪರಿಚಯಿಸೋರು. ಅವರ ಜೀವನ ಮೌಲ್ಯವನ್ನು ನಮಗೂ ಅರಿವಾಗಿಸೋರು. ಅವರು ನಮ್ಮ 'ನಾಯಕ'ರು ಅನ್ನೋರು. ಕೈಗೆ 'ರಾಷ್ಟ್ರಪಿತರು' ಎಂಬ ಪುಸ್ತಕ ನೀಡಿ ಒಬ್ಬೊಬ್ಬರಾಗಿ ಓದೋಕೆ ಹೇಳೋರು. ನಾವೆಲ್ಲ ಏರಿದ ಧ್ವನಿಯಲ್ಲಿ ಓದಿದ್ದೇವೆ. ಇವರೇ ನಮ್ಮ ನಾಯಕರೆಂದು ಒಪ್ಪಿಕೊಂಡಿದ್ದೇವೆ. ಭಲೇ ಮಗು...ಅಂತ ಟೀಚರ್ ಬಾಯಿಂದ ಹೊಗಳಿಸಿಕೊಂಡಿದ್ದೇವೆ. ಸ್ವಾತಂತ್ರ್ಯ ಬಂದಾಗ ಹೊಸ ಯುನಿಫಾರ್ಮ್ ಹಾಕಿ ನಮ್ಮೂರ ಶಾಲೆಯಿಂದ ನಾಲ್ಕೈದು ಕಿಮೀ ದೂರ ಮೆರವಣಿಗೆಯಲ್ಲಿ ಸಾಗಿದ್ದೇವೆ. ಗಾಂಧೀ ಕೀ ಜೈ, ಭೋಸ್ ಕೀ ಜೈ, ಭಗತ್ ಕೀ ಜೈ, ಶಾಸ್ತ್ರೀಜಿ ಕೀ ಜೈ ಅಂತ ಕೂಗುತ್ತಾ ಸಾಗಿದ್ದೇವೆ. ಕೂಗುತ್ತಲೇ ತ್ರಿವರ್ಣ ಧ್ವಜ ಹಾರಿಸಿದ್ದೇವೆ. ದೇಶಭಕ್ತಿ ಗೀತೆ ಹಾಡಿದ್ದೇವೆ. ಸ್ವಾತಂತ್ರ್ಯವೆಂದು ಬೀಗಿದ್ದೇವೆ. ನಮಗೆ ಪೊಲೀಸರ ಸರ್ಪಗಾವಲು ಬೇಕಿರಲಿಲ್ಲ. ಜೊತೆಗೆ ಟೀಚರ್ ಗಳು ಇದ್ದರು. ನಾಯಕರ ಹೆಸರುಗಳನ್ನು ಕೂಗಿ ಸಾಗುವಾಗ ಮೈಯೆಲ್ಲಾ ರೋಮಾಂಚನ. ಆ ನಮ್ಮ ಪುಟ್ಟ ಮನಸ್ಸಿನಲ್ಲಿ ನಿಜವಾದ ದೇಶನಾಯಕರು ನೆಲೆಹೂರಿದ್ದರು. ನಾವು ಹಾಗೇ ಆಗಬೇಕು ಅಂತ ಕನಸು ಕಂಡಿದ್ದೇವೆ. ಹೌದು, ನಾನೂ ಹೊರತಾಗಿರಲಿಲ್ಲ. ಭಗತ್ ಸಿಂಗ್ ಬದುಕಿನಕಥೆಯನ್ನು ಮತ್ತೆ ಮತ್ತೆ ಓದುತ್ತಿದೆ. ಗಾಂಧೀಜಿಯ ಸತ್ಯಾನ್ವಷಣೆಯನ್ನು ಓದಿ ನಾನೂ ಚಕಿತಳಾಗಿದ್ದೆ. ಆಗ ಸ್ವಾತಂತ್ರ್ಯ ಆಚರಿಸುವುದೂ ನಮಗೂ ಹಬ್ಬ. ಖುಷಿಯ ಹಬ್ಬ, ಸಂಭ್ರಮ ಸಡಗರದ ಹಬ್ಬ. ಏನೋ ಉತ್ಸಾಹ.

ಕುಳಿತಲ್ಲಿಯೇ ಯೋಚಿಸುತ್ತಿದ್ದೆ...ಆದರೆ ಈಗ? ಎಂಬ ಪ್ರಶ್ನೆ ನನ್ನ ಆತ್ಮಕ್ಕೆ ಚುಚ್ಚಿಬಿಟ್ಟಿತ್ತು!!

ನಮ್ಮ ಹೀರೋಗಳು ಯಾರು? ಬಹುತೇಕರ ಹೀರೋಗಳು ಕ್ರಿಕೆಟ್ ತಾರೆಗಳು, ಸಿನಿಮಾ ತಾರೆಗಳ ಮಟ್ಟಿಗಷ್ಟೇ ಸೀಮಿತವಾಗಿದೆ. ನಮ್ಮಮ್ಮ-ನಮ್ಮಪ್ಪನೇ ನಮಗೆ ಹೀರೋಗಳು ಅನ್ನೋರು ಈಗ ಕಡಿಮೆಯೇ. ಕ್ರಿಕೆಟ್ ತಾರೆಗಳು ಅಥವಾ ಸಿನಿಮಾ ನಟ-ನಟಿಯರನ್ನು ಹೀರೋಗಳೆಂದು ಪರಿಗಣಿಸಬೇಡಿ ಅನ್ನೋ ದನ್ನು ಹೇಳುತ್ತಿಲ್ಲ,. ಅದು ನನ್ನ ಉದ್ದೇಶವೂ ಅಲ್ಲ. ಆದರೆ. ನಮ್ಮ ನಿಜವಾದ ಹೀರೋಗಳನ್ನು ಕಂಡುಕೊಳ್ಳುವಲ್ಲಿ ನಾವು ತುಕ್ಕು ಹಿಡಿದಿದ್ದೇವೆ ಅನ್ನೋದಷ್ಟೇ ನನ್ನ ಮನದ ನೋವು. ಒಬ್ಬ ಚೆಂದದ ನಟ ಅಥವಾ ನಟಿ ಪರದೆ ಮೇಲೆ ಚೆನ್ನಾಗಿ ಅಭಿನಯಿಸಿದರೆ ಅವರೇ ನಮ್ಮ ಹೀರೋಗಳಾಗುತ್ತಾರೆ. ಓರ್ವ ಬ್ಯಾಟ್ಸ್ ಮನ್ ನಾಲ್ಕೈದು ಸಿಕ್ಸ್ ಬಾರಿಸಿದ್ರೆ ಬಾಲ್ ಹೋಗುವ ರಭಸ ನೋಡಿಯೇ ನಾವು ಅವನನ್ನು ಹೀರೋ ಅಂಥ ಅಪ್ಪಿಕೊಳ್ಳುತ್ತೇವೆ...ಇರಲಿ. ಅಪ್ಪಿಕೊಳ್ಳಿ ಬೇಡ ಅನ್ನಲ್ಲ. ಆದರೆ, ಹೀರೋ ಅನ್ನುವ ಪದವೇ ಅರ್ಥ ಕಳೆದುಕೊಂಡಿದೆ ಅಲ್ವಾ? ಅಂತೀನಿ ಅಷ್ಟೇ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರು, ದೇಶವನ್ನು ಹಗಲಿರುಳೂ ಕಾಯುವ ಯೋಧರು, ನಮ್ಮ ಬದುಕು ನೀಡಿದ ಪ್ರೀತಿಯ ಅಪ್ಪ-ಅಮ್ಮ, ಬದುಕಿಗೆ ದಾರಿ ತೋರಿದ ಗುರುಗಳು, ದಿನವಿಡೀ ಬೆವರು ಸುರಿಸಿದ ಅನ್ನದಾತನಂದ ಸಹನಾಮಯಿಗಳು ನಮಗೆ ಯಾವಾಗ 'ಹೀರೋ'ಗಳಾಗುವುದು? ಟೀಚರ್ ಹೇಳಿದ ಹೀರೋಗಳು, ಸ್ವಾತಂತ್ರ್ಯ ಬರೇ ಶಾಲಾ ದಿನಗಳಿಗಷ್ಟೇ ಸೀಮಿತವಾಯಿತಲ್ಲಾ ಅನ್ನೋ ನೋವು ನನ್ನ ತುಂಬಾ ಕಾಡಿತ್ತು. ಬದಲಾವಣೆಯೇ ಜಗದ ನಿಯಮ..ಆದರೆ....!
ಬೇಡ ಹೆಚ್ಚು ಬರೆಯಲ್ಲ..