Sunday, May 31, 2009

ನಿಮ್ಮ ಭವಿಷ್ಯ ಹೇಳತೇನ್ರೀ!

ನಿನ್ನೆಯ ಕನ್ನಡಪ್ರಭ ಸಾಪ್ತಾಹಿಕ ಓದುತ್ತಿದ್ದಂತೆ ಸುರೇಶ್ ವೆಂ. ಕುಲಕರ್ಣಿ ಎಂಬುವವರು ಬರೆದ ಬೇಂದ್ರೆ ಬದುಕಿನ ಪುಟ್ಟ ಘಟನೆಯೊಂದು ಕಣ್ಣಿಗೆ ಬಿತ್ತು. ಬೇಂದ್ರೆ ಅಜ್ಜ ಅಂದ್ರೆ ನಂಗೆ ತುಂಬಾ ಇಷ್ಟ. ಬದುಕಿನ ಜೊತೆ ನೇರ ಮಾತಿಗಿಳಿಯುವ ಅವರ ಕವನಗಳು ನಂಗಿಷ್ಟ. ಬೇಂದ್ರೆ ಕುರಿತಾಗಿ ಬರೆಯುವ ಸುನಾಥ್ ಅಂಕಲ್ ಬ್ಲಾಗ್ ಸಲ್ಲಾಪ, ಗೋದಾವರಿ ಮೇಡಂ ಎಲ್ಲಾರ ಬರಹಗಳನ್ನು ಓದುತ್ತಿರುವೆ. ಇದೀಗ ಕನ್ನಡಪ್ರಭದಲ್ಲಿ ಬಂದಿರುವ ಸುರೇಶ್ ವೆಂ. ಕುಲಕರ್ಣಿ ಅವರ ಬರಹಗಳನ್ನು ತೆಗೆದು ಯಥಾವತ್ತಾಗಿ ಹಾಕೊಂಡಿರುವೆ..ಇದು ಕೃತಿಚೌರ್ಯ ಅಲ್ಲ, ಬೇಂದ್ರೆ ಕುರಿತಾದ ಇಂಥ ಘಟನೆಗಳನ್ನು ಸಂಗ್ರಹಿಸುವತ್ತ ನನ್ನ ಪುಟ್ಟ ಹೆಜ್ಜೆಯಷ್ಟೇ.

"ಬೆಳಗಿನ ಏಳು ಗಂಟೆಯಾಗಿತ್ತು. ಬೇಂದ್ರೆಯವರು ಮನೆಮುಂದಿನ ಗೇಟಿನ ಹತ್ತಿರ ಬಿಳಿಧೋತರ, ಕರೇಕೋಟು ಮ್ಯಾಲೆ ಕುಲಾಯಿಟೋಪಿ ಹಾಕಿಕೊಂಡು, ಕೋಟಿನ ಕಿಸೆಯಲ್ಲಿ ಕೈ ಇಟಕೊಂಡು, ಆ ಕಡೆ-ಈ ಕಡೆ ಶತಪಥ ಹಾಕುತ್ತಾ ಇದ್ದರು. ಅವರನ್ನು ನೋಡಿ, ಒಬ್ಬ ವ್ಯಕ್ತಿ 'ಅಜ್ಜಾರ ಒಳಗೆ ಬರಬಹುದಾ?' ಅಂತ ಕೇಳಿದ.
ಬೇಂದ್ರೆ: ಯಾಕ, ನಿನ್ನ ಹೆಸರೇನು? ಯಾವೂರು?
ಭವಿಷ್ಯಗಾರ: ನಾನು ಊರೂರು ತಿರತೇನ್ರೀ. ನಿಮ್ಮ ಭವಿಷ್ಯ ಹೇಳತೇನ್ರಿ?
ಬೇಂದ್ರೆ: ಭವಿಷ್ಯವನ್ನು ಯಾವ ಆಧಾರದ ಮೇಲೆ ಹೇಳತೀ?
ಭವಿಷ್ಯಗಾರ: ನಿಮ್ಮ ಮುಖಾ ನೋಡಿ, ಕೈನೋಡಿ, ಹಸ್ತಾಕ್ಷರ ನೋಡಿ ಭವಿಷ್ಯವನ್ನು ಹೇಳತೇನ್ರಿ. ನಿಮ್ಮ ನಕ್ಷತ್ರ ಹೇಳಿದರ ಅದರ ಮ್ಯಾಲಿಂದನೂ ನಿಮ್ಮ ಭವಿಷ್ಯವನ್ನ ಹೇಳತೇನ್ರೀ.
ಬೇಂದ್ರೆ: ನಕ್ಷತ್ರದ ಬಗ್ಗೆ ನಿನಗೆ ಛಲೋ ತಿಳೀತದೇನು?
ಭವಿಷ್ಯಗಾರ: ತಿಳಿತದ್ರೀ

ಬೇಂದ್ರೆ: ಈಗ 'ವೇಗಾ' ಅಂದರ 'ಅಭಿಜಿತ್ ನಕ್ಷತ್ರ' ಎಲ್ಲೆ ಬರತದ?

ಭವಿಷ್ಯಗಾರ: (ವಿಚಾರಿಸಿ) ಗೊತ್ತಿಲ್ಲರಿ..
ಬೇಂದ್ರೆ: ಇರಲಿ, ಈಗ ನನಗೆ ಭವಿಷ್ಯ ಕೇಳೋದೇನಿಲ್ಲ. ನಿನ್ನ ವೇಳ್ಯಾ ತೊಗೊಂಡದ್ದಕ್ಕ 'ಫೀ' ಏನು?
ಭವಿಷ್ಯಗಾರ: ನಾನು ಭವಿಷ್ಯವನ್ನು ಹೇಳದs 'ಫೀ' ತೊಗೋಳ್ಳೋದಿಲ್ಲ. ಭವಿಷ್ಯವನ್ನು ಕೇಳಿರಿ ತೊಗೋತೀನಿ.
ಬೇಂದ್ರೆ: ನನ್ನ ಭವಿಷ್ಯವನ್ನು ಕೇಳೋದಿಲ್ಲ, ನಡೀಯಿನ್ನ.
ಭವಿಷ್ಯಗಾರ: ಊರಲ್ಲಿ ಹೋಗಲಿಕ್ಕೆ ಸಿಟಿಬಸ್ಸು ಎಲ್ಲಿ ನಿಲ್ಲತಾವು?
ಬೇಂದ್ರೆಯವರು ತಮ್ಮ ಮನೆಯ ಗೇಟಿನವರೆಗೆ ಹೋಗಿ, ಬಸ್ಸು ಎಲ್ಲಿ ನಿಲ್ಲತಾವು
ಅನ್ನೋದನ್ನು ಸ್ವತಃ ತಾವೇ ಹೋಗಿ ತೋರಿಸಿದರು. ಭವಿಷ್ಯವನ್ನು ಹೇಳುವವನು ನಾಲ್ಕು ಹೆಜ್ಜೆ ಮುಂದ ಹೋಗಿದ್ದ, ಅಷ್ಟರಾಗ ಬೇಂದ್ರೆಯವರು ಅವನನ್ನು ಕರೆದು, 'ನೀ ಖರೇನ ಭವಿಷ್ಯ ಹೇಳತೀ?
ಭವಿಷ್ಯಗಾರ: ಯಾಕ್ರೀ? ಕೇಳ್ಯಾರ ನೋಡ್ರೀ, ಹಿಂದಿನದು, ಮುಂದಾಗೋದು ಎಲ್ಲಾನೂ ಹೇಳತೀನಿ.
ಬೇಂದ್ರೆ: ಇಲ್ಲಾ, ಬೆಳಿಗ್ಗೆ ಎದ್ದ ಕೂಡಲೇ, ಯಾರ ಮನಿಗೆ ಹೋದ್ರ, ಭವಿಷ್ಯ ಕೇಳತಾರ? ಯಾರು ಕೇಳೊದಿಲ್ಲ? ಅನ್ನೋದು ನಿನಗs ತಿಳೀದs ನೀನು ಬೇರೆಯವರಿಗೆ ಹ್ಯಾಂಗ ಭವಿಷ್ಯವನ್ನು ಹೇಳತೀ?
ಭವಿಷ್ಯಗಾರ ಮರುಮಾತನಾಡದೆ ಬಸ್ ಸ್ಟಾಫಿಗೆ ಬಂದ.
ಚಿತ್ರಕೃಪೆ: ಅಂತರ್ಜಾಲ