Thursday, June 13, 2013

ಜೀವನ ಮತ್ತು ತೂಕ


ಇತ್ತೀಚೆಗೆ "ಅಪ್ ಇನ್ ದ  ಏರ್'' ಚಿತ್ರ ನೋಡಿದೆ. ಜಾರ್ಜ್ ಕ್ಲೂನಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಬಿಡುಗಡೆಯಾಗಿದ್ದು 2009ರಲ್ಲಿ. ಮನುಷ್ಯ-ಸಂಬಂಧಗಳ ಕುರಿತು ನಮ್ಮೋಳಗೆ ಕಾಡುವ, ಪ್ರಶ್ನೆಗಳನ್ನು ಹುಟ್ಟುಹಾಕುವ ಚೆಂದದ ಚಿತ್ರವಿದು. ಬದುಕು-ಬವಣೆ, ಭಾವನೆ-ಬಾಂಧವ್ಯ, ಹಾಸ್ಯ-ಲಾಸ್ಯ ಎಲ್ಲವೂ ಇದರಲ್ಲಿದೆ. ಅದರಲ್ಲಿ ರ್ಯಾನ್ ಬಿಂಗಂ ಪಾತ್ರದಲ್ಲಿ ಕಾಣಿಸಿಕೊಂಡ ಕ್ಲೂನಿ ಒಂದು ಕಡೆ ಭಾಷಣ ಮಾಡುತ್ತಾನೆ. ಮನಸ್ಸಿಗೆ ಬಹಳ ಹಿಡಿಸಿತು. ಅನುವಾದಿಸಿ ಇಲ್ಲಿಟ್ಟಿದ್ದೀನಿ.
                                                                       
                                 ********
ನಮ್ಮ ಜೀವನ ಎಷ್ಟು ತೂಗುತ್ತೆ ಅಂದುಕೊಂಡಿದ್ದೀರಿ? ಒಂದು ಸಣ್ಣ ಕಲ್ಪನೆ. ನೀವೊಂದು ಬ್ಯಾಕ್ ಪ್ಯಾಕ್ (ಬೆನ್ನಿಗೆ ಹಾಕಿಕೊಳ್ಳುವ ಚೀಲ) ತಗಲುಹಾಕಿಕೊಂಡಿದ್ದೀರಿ ಎಂದಿಟ್ಟುಕೊಳ್ಳೋಣ. ನಾನು ಏನು ಹೇಳೋದಂದ್ರೆ ನಮ್ಮ ಜೀವನದಲ್ಲಿ ಏನೇನು ಇದೆಯೋ ಅದನ್ನೆಲ್ಲಾ ಆ ಬ್ಯಾಕ್ ಪ್ಯಾಕ್ ಗೆ ತುಂಬಬೇಕು.

ಮೊದಲು ಸಣ್ಣ-ಸಣ್ಣ ವಸ್ತುಗಳಿಂದ ಶುರುಮಾಡೋಣ. ಮೊದಲು ಕಪಾಟುಗಳು, ಪೆಟ್ಟಿಗೆಗಳು..ಮುಂತಾದವುಗಳನ್ನು ತುಂಬಿ. ಬಳಿಕ ಬಟ್ಟೆಗಳು, ಲ್ಯಾಪ್ ಟಾಪ್ ಮತ್ತು ಅದಕ್ಕೆ ಸಂಬಂಧಿಸಿದ ಏನೇನು ವಸ್ತುಗಳಿವೆಯೋ ಅವುಗಳು, ನಿಮ್ಮನೆಯಲ್ಲಿರುವ ದೀಪಗಳು, ನಿಮ್ಮ ಟೀವಿಗಳು...ತುಂಬುತ್ತಾ ಹೋಗಿ. ನಿಮ್ಮ ಬ್ಯಾಕ್ ಪ್ಯಾಕ್ ಸ್ವಲ್ಲ ಭಾರವಾದಂಗೆ ಅನಿಸುತ್ತೆ ಅಲ್ವಾ? ಅಲ್ಲಿಗೇ ನಿಲ್ಲಿಸಬೇಡಿ...ಇನ್ನೂ ನಿಮಗೆ ಬಹುಮುಖ್ಯವಾಗಿರುವ ಅದೆಷ್ಟೋ ವಸ್ತುಗಳಿವೆ; ನೀವು ಮಲಗೋ ಮಂಚ, ಓಡಾಡೋ ಕಾರು, ನಿಮ್ಮ ಮನೆ...ಬ್ಯಾಕ್ ಪ್ಯಾಕ್ ಇನ್ನೂ ಭಾರವಾಗುತ್ತೆ. 

ಇನ್ನು ಜನರನ್ನು ತುಂಬಿಸಿಕೊಳ್ಳೋಣ...ಮೊದಲು ನಮ್ಮ ಸ್ನೇಹಿತರ ಸ್ನೇಹಿತರು, ಆಫೀಸ್ ನಲ್ಲಿ ಸಿಗೋ ನಿಮ್ಮ ಕಲೀಗ್ ಗಳು..ಬಳಿಕ ನಿಮ್ಮ ಪ್ರಾಣಸ್ನೇಹಿತರು, ನಿಮ್ಮ ಸಹೋದರ-ಸಹೋದರಿಯರು, ಮಕ್ಕಳು-ಮರಿಗಳು, ಅಪ್ಪ-ಅಮ್ಮ, ನಿಮ್ಮ ಗಂಡ, ನಿಮ್ಮ ಹೆಂಡ್ತಿ, ನಿಮ್ಮ ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ...
ಆ ಬ್ಯಾಕ್ ಪ್ಯಾಕ್ ನೊಳಗೆ ತುಂಬಿಸಿ. ಇವೆಲ್ಲವನ್ನೂ ತುಂಬಿಸಿದ ಬಳಿಕ ನಿಮ್ಮ ಬ್ಯಾಕ್ ಪಾಕ್ ನ ಭಾರವನ್ನು ಫೀಲ್ ಮಾಡಿ. ಎಷ್ಟೊಂದು ಭಾರವಿದೆ ಅನಿಸಲ್ವೇ?
ನಿಮಗನಿಸುತ್ತೆ: ಬ್ಯಾಕ್ ಪ್ಯಾಕ್ ನಲ್ಲಿರುವ ಆ ಸಂಬಂಧಗಳು ಅತ್ಯಂತ ಭಾರವಾದ ವಸ್ತುಗಳೆಂದು!
ಇವನ್ನೆಲ್ಲ ಹೊತ್ತುಕೊಂಡು ನಾವು ನಡಿಲೇಬೇಕು........

ನನ್ನೆದೆಯ ಮರುವಸಂತ


ಮಗ ಹುಟ್ಟಿದಾಗ ನನ್ನಲ್ಲಿ ಅದೆಂಥ ಸಂಭ್ರಮ? ಊರಮಂದಿಗೆಲ್ಲ ಲಡ್ಡು ಹಂಚಿದ್ದೇ ಹಂಚಿದ್ದು. ಮೇಲಿಟ್ಟರೆ ಕಾಗೆ ಹೊತ್ತೊಯ್ಯುತ್ತೆ, ಕೆಳಗಿಟ್ಟರೆ ಇರುವೆ ಕಚ್ಚುತ್ತೆ ಎಂದು ಅವನ ನನ್ನೆದೆಯಿಂದ ಕೆಳಗೆ ಇಳಿಸಿದ್ದೇ ಕಡಿಮೆ. ಕಂಕುಳಲ್ಲೇ ಹಾಲು ಕುಡಿದು ಅಲ್ಲೇ ನಿದ್ದೆಗೆ ಜಾರುತ್ತಿದ್ದ ನನ್ನ ರಾಜಕುಮಾರ.
ಅದೆಂಥ ಕತೆಗಳನ್ನು ಅವನಿಗೆ ಹೇಳಿದ್ದೆ. ಜೀಜಾಬಾಯಿ ಕಥೆ ಹೇಳಿ "ಮಗನೇ ಶಿವಾಜಿ ನೀನಾಗು'' ಎನ್ನುತ್ತಿದ್ದೆ. ರಾಮಾಯಣ, ಮಹಾಭಾರತದಿಂದ ಹಿಡಿದು ಗಾಂಧೀ, ಅಂಬೇಡ್ಕರ್ನಂಥ ಮಹಾನುಭಾವರ ಕತೆಗಳನ್ನು ಹೇಳಿಸಿಕೊಂಡೇ ನಿದ್ದೆ ಮಾಡುತ್ತಿದ್ದ ನನ್ನ ಮಗ. ಕಥೆ ಹೇಳದಿದ್ದರೆ "ಅಮ್ಮ, ನೀನು ಕತೆ ಹೇಳು'' ಎಂದು ನನ್ನ ಸೆರಗ ಹಿಡಿದು ಜಗ್ಗುತ್ತಿದ್ದ. ನನಗೆ ಕಥೆ ಹೇಳೊದ್ರಲ್ಲೇ ಖುಷಿ. ನನ್ನ ಅಪ್ಪ-ಅಮ್ಮ ಹೇಳಿಕೊಟ್ಟಿದ್ದ ಕಥೆಗಳು, ಅಕ್ಕ-ಪಕ್ಕದವರ ಬಳಿ ಕೇಳಿ ತಿಳಿಕೊಂಡ ಕಥೆಗಳು ಎಲ್ಲವೂ ನನ್ನ ಮಗನಿಗೆ. ಕೆಲವೊಮ್ಮೆ ರಾತ್ರಿಯಿಡೀ ಮಲಗದೆ ಕಥೆ ಹೇಳಿಸಿಕೊಂಡಿದ್ದೂ ಉಂಟು. ಅದೆಂಥ ಕಥೆಯ ಹುಚ್ಚು? ಅವಂಗೆ.
ಕಥೆ ಕೇಳುತ್ತಲೇ ಬೆಳೆದ ಮಗನಿಗೆ ಐದು ದಾಟಿತು. ಶಾಲೆಗೆ ಸೇರಿಸಬೇಕು. "ಹೆಂಗಪ್ಪಾ, ಇಡೀ ದಿನ ನನ್ನ ಮುದ್ದು ಮಗನ ಬಿಟ್ಟಿರಲಿ?'' ಎಂದು ಕಣ್ಣುಗಳು ಮಂಜಾಗಿದ್ದವು. ಅವನಿಗೆ ಹೊಸ ಚಡ್ಡಿ, ಶರ್ಟ್,ಬ್ಯಾಗ್, ಶೂ ಹಾಕಿಸಿ ಸ್ಕೂಲ್ ಗೆ ರೆಡಿ ಮಾಡುವಾಗ ಅದೆಂಥ ಖುಷಿಯ ಹೊಳಪು ನನ್ನೊಳಗೆ?
ಈ ಚಡ್ಡಿ ಹಾಕುವ ಮಗ ಯಾವಾಗ ಪ್ಯಾಂಟ್ ಹಾಕೋನು ಆಗ್ತಾನೆ? ಅನ್ನೋ ಕನಸು ಬೇರೆ. ದಿನಾ ಮುಂಜಾವು ಐದು ಗಂಟೆಗೆ ಎದ್ದು ಅವನಿಗೆ ಬಾಕ್ಸ್ ರೆಡಿ ಮಾಡಿ ಸ್ಕೂಲ್ ಗೆ ಕಳುಹಿಸುವಾಗ ಅದೆಂಥ ಸಂಭ್ರಮ? ಈ ದಿನ, ತಿಂಗಳು, ವರ್ಷಗಳೆಲ್ಲಾ ಉರುಳಿ ಒಮ್ಮೆಲೇ ನನ್ನ ಮಗ 'ದೊಡ್ಡವನಾಗಿಬಿಟ್ಟಿದ್ದರೆ' ಎಷ್ಟು ಚೆನ್ನಾಗಿರುತ್ತಿತ್ತು? ಎಂಬ ಹುಚ್ಚುಚ್ಚು ಕನಸು.
ಅವನು ಏನು ಕೇಳಿದ್ರೂ ಕೊಡಿಸೋದ್ರಲ್ಲಿ ನನಗೊಂದು ಹೊಸ ಖುಷಿ. ಪ್ರತಿ ಮಳೆಗಾಲಕ್ಕೂ ಹೊಸ ಕೊಡೆ ಕೇಳುತ್ತಿದ್ದ. ಕೆಲವೊಮ್ಮೆ ಹೆಣ್ಣುಮಕ್ಕಳಂತೆ ನನಗೆ ಬಣ್ಣದ ಕೊಡೆ ಬೇಕೆಂದು ರಚ್ಚೆ ಹಿಡಿಯುತ್ತಿದ್ದಾಗ ನಗು ಬರುತ್ತಿತ್ತು. ಬೇಸಿಗೆ ರಜೆ ಮುಗಿದ ತಕ್ಷಣ ಹೊಸ ಬಟ್ಟೆ, ಬ್ಯಾಗು, ಪುಸ್ತಕಗಳ ಸಂಭ್ರಮ. ಆ ಪುಸ್ತಕಗಳಿಗೆ ಬೈಂಡ್ ಹಾಕೋದು ಅಬ್ಬಬ್ಬಾ...ಅದೆಂಥ ಕೆಲಸ? ಒಂದೇ ವಾರದಲ್ಲಿ ಅವೆಲ್ಲಾ ಹರಿದು ಚಿತ್ರಾನ್ನವಾಗುತ್ತಿದ್ದವು. ಮತ್ತದೇ ಬೈಂಡ್ ಹಾಕುವ ಕೆಲಸ ನನಗೆ. ಪ್ರೈಮರಿ ಹೇಗೋ ಮುಗಿಯಿತು. ನೋಡು ನೋಡುತ್ತಿದ್ದಂತೆ ಹೈಸ್ಕೂಲು ಕೂಡ ಮುಗಿದೇ ಹೋಯ್ತು. ವರ್ಷಗಳೆಲ್ಲಾ ಹಕ್ಕಿ ತರ ರೆಕ್ಕೆಬಡಿದು ಏಕ್ ದಂ ಹಾರಿಬಿಟ್ಟಾವೆ ಎಂದನಿಸಿತು.
ಕಾಲೇಜು ಸೇರಿದ. ಓದಲು, ಬರೆಯಲು ಸಪರೇಟು ರೂಮ್ ಬೇಕು ಅಂದ. ಮೊಬೈಲ್, ಅದು-ಇದು ಏನೇನೋ ಕೇಳಿದ. ಎಲ್ಲನೂ ಕೊಡಿಸಿದ್ದಾಯಿತು. ಎಲ್ಲವೂ ನನ್ನ ಮಗ ರಾಜಕುಮಾರನಿಗಾಗಿ. ದಿನ, ತಿಂಗಳು, ವರ್ಷಗಳೆಲ್ಲಾ ಉರುಳಿ ನನ್ನ ಮಗ 'ದೊಡ್ಡವನಾಗೇಬಿಟ್ಟ'.

******
ಈಗ ಕನ್ನಡಿಯಲ್ಲಿ ಮತ್ತೆ ಮತ್ತೆ ನನ್ನ ನಾ ನೋಡಿಕೊಳ್ಳುತ್ತೇನೆ. ಕಪ್ಪು ಕೂದಲುಗಳ ನಡುವೆ ಅದೆಷ್ಟು ಚೆನ್ನಾಗಿತ್ತು ನನ್ನ ಬೈತಲೆ? ಆದರೆ, ಈಗ ಬಿಳಿ ಕೂದಲುಗಳ ರಾಶಿ. ಎಲ್ಲವೂ ಗೋಜಲು-ಗೋಜಲು. ಕಾಡಿಗೆ ಹಚ್ಚಿ ಹೊಳೆಯುತ್ತಿದ್ದ ಕಣ್ಣುಗಳು ಆಳಕ್ಕೆ ಹೋದಂಗೆ, ಕಣ್ಣ ಸುತ್ತ ನೆರಿಗೆಗಳು, ಕಪ್ಪು ಕಲೆಗಳು ಮೂಡಿದಂಗೆ ಅನಿಸುತ್ತೆ. ಯೌವನದಲ್ಲಿ ನನ್ನವನ ಮಾತು-ಮಾತಿಗೂ ನಾಚಿ ಕೆಂಪಾಗುತ್ತಿದ್ದ ಕೆನ್ನೆಯ ಬದಿಯಲ್ಲಿದ್ದ ಆ ಚೆಂದದ ಗುಳಿಗಳೂ ಮಾಯವಾಗಿವೆ. ಕಾಲೇಜು ಓದುವಾಗ ಹುಡುಗ್ರೆಲ್ಲಾ ಗುಳಿಚೆಲುವೆ ಎಂದು ರೇಗಿಸುತ್ತಿದ್ದರು. ಮುಖಾನ ಅಂದವಾಗಿಸಲು ಅದೇ ಹಳೆಯ ಬ್ರಾಂಡ್ ಪಾಂಡ್ಸ್ ಪೌಡರ್ ಹಚ್ತೀನಿ. ಬೈತಲೆ ಪಕ್ಕ ಕಾಣುವ ಬೆಳ್ಳಿಕೂದಲುಗಳನ್ನು ಮತ್ತೆ ಮತ್ತೆ ಕೀಳಕೆ ಪ್ರಯತ್ನ ಮಾಡ್ತೀನಿ. ಅದು ಬರಲೊಲ್ಲೆ ಎಂದು ರಚ್ಚೆ ಹಿಡಿಯುತ್ತೆ. ಉಸ್ಸಾಪ್ಪಾ...ಎಂಬ ನಿಟ್ಟುಸಿರು...ಎದೆಯೊಳಗಿಂದ ಹಾವು ಬುಸುಗುಟ್ಟಿದಂತೆ!.
ಎದುರಿಗಿದ್ದ ಮಗ ನೋಡಿ ನಕ್ಕು ಹೇಳುತ್ತಾನೆ. "ಅಮ್ಮಾ...ನಿಜವಾಗ್ಲೂ ನಿನ್ನ ಓಟರ್ ಐಡಿಯಲ್ಲಿ ಇರುವ 'ಡೇಟ್ ಆಫ್ ಬರ್ತ್' ಕರೆಕ್ಟಾ?''
ನನಗಿಂತ ಎತ್ತರಕ್ಕೆ ಬೆಳೆದ ಮಗನ ನೋಡಿ ಕತ್ತೆತ್ತಿ ಕಣ್ಣಲ್ಲೇ ಕೇಳುತ್ತೇನೆ; "ಏಕೆ?''
"ಅಮ್ಮಾ...ಗೆಸ್ ಮಾಡು'' ಎನ್ನುತ್ತಾನೆ.

ನನಗೆ ಮತ್ತೆ ಕನ್ನಡಿಯಲ್ಲಿ ನನ್ನ ನಾ ನೋಡಿಕೊಳ್ಳುವ ಖುಷಿ. ನನ್ನೆದೆಯಲ್ಲಿ ಮರುವಸಂತ.

ಒಂದು ವಾಕಿಂಗ್ ಮುಂಜಾವು



ದಟ್ಟಮರಗಳ ನಡುವೆ ಅಗಲ ರಸ್ತೆಗಳು, ರಸ್ತೆ ತುಂಬಾ ಗುಲ್ ಮೊಹರ್, ಚಿನ್ನದ ಹೂವು, ಪಿಂಕ್ ಕ್ಯಾಸಿಯಾ ...ಬಣ್ಣ-ಬಣ್ಣದ ಪುಷ್ಪಗಳ ಚಿತ್ತಾರ. ಇನ್ನೂ ಬೀದಿ ದೀಪ ಆರದ ಐದರ ಹೊತ್ತಿನಲ್ಲಿ ಹೂವ ಹಾಸಿನ ರಸ್ತೆ ಮೇಲೆ ನಡೆಯುವುದೇ ಚೆಂದ. ಹೂವುಗಳಿಂದ ಕಂಗೊಳಿಸುವ ಮರಗಳ ನಡುವೆ ಸೂರ್ಯ ಕೆಂಪೇರುವುದು ಕಣ್ಮನಸಿಗೆ ಹಬ್ಬ. ಹಾಳು ಸೆಖೆ...ಆದರೂ, ಪುಷ್ಪ ಚಿತ್ತಾರವನ್ನು ನೋಡಿದರೆ "ಇರಲಿ ಬೇಸಿಗೆ ಕಾಲ'' ಎನ್ನುತ್ತಿತ್ತು ಮನಸ್ಸು.

****************
ರಾಜಕಾರಣಿಯೊಬ್ಬನ ದೊಡ್ಡ ಗೇಣಿನ ಬಂಗಲೆ. ಅದರೆದುರು ಹತ್ತಾರು ಕಾರುಗಳು, ರಾತ್ರಿಯಿಡೀ ನಿದ್ದೆಯಿಲ್ಲದೆ ತೂಕಡಿಸುವ ಸೆಕ್ಯೂರಿಟಿ ಗಾರ್ಡ್ ಗಳು.

****************
ಅದು ದೈವಭಕ್ತ ಹೆಂಗಸರ ವಾಕಿಂಗ್. ಯಾರದೋ ಕಾಂಪೌಂಡ್ ಗೆ ಹತ್ತಿ ಪೂಜೆಗಾಗಿ ಹೂವುಗಳನ್ನು ಕಿತ್ತು ಸೆರಗಿನಲ್ಲಿ ತುಂಬಿಸಿಕೊಳ್ಳುತ್ತಿದ್ದರು. "ನಾಯಿಗಳಿವೆ ಎಚ್ಚರಿಕೆ' ಎಂಬ ಬೋರ್ಡಿಗೂ ಅವರು ಹೆದರಲಿಲ್ಲ!.

****************
ಒಂದು ವರ್ಷದ ಹಿಂದೆ ಆ ಕೌಂಪೌಂಡಿನಲ್ಲಿ ಮೇಣದ ಗಣಪತಿ ಬಂದು ಕುಳಿತಿದ್ದಾನೆ. ವಾಕಿಂಗ್ ಹೋಗುವವರೆಲ್ಲಾ ಆ ಗಣಪತಿಗೆ ಸೆಲ್ಯೂಟ್ ಹೊಡೆದೇ ಮುಂದೆ ಸಾಗುತ್ತಾರೆ. ಅವನೆದುರು ಇರುವ ಡಬ್ಬಕ್ಕೆ ಬೆಳ್ಳಂಬೆಳಗ್ಗೆ ನೋಟು ತುಂಬುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯಾಕೋ ಗಣಪತಿ ದಿನ ಹೋದಂಗೆ ಶ್ರೀಮಂತನಾಗುತ್ತಿದ್ದಾನೆ!
****************

ಎಂಬತ್ತು ದಾಟಿರುವ ತಾತನ ಹಿಂದೆ ಏಳೆಂಟು ಬೀದಿನಾಯಿಗಳು ಸುತ್ತುತ್ತಿದ್ದವು. ನೋಡಿದರೆ, ಅಜ್ಜ ನಾಯಿಗಳಿಗಾಗಿ ತಿಂಡಿ ತಂದಿದ್ದರು. ಪ್ರತಿದಿನ ವಾಕ್ ಹೋಗುವಾಗ ಬೀದಿ ನಾಯಿಗಳ ಕಾಟ ತಡೆಯಲಾರದೆ ಅವರು ಈಗ ನಾಯಿಗಳಿಗೆ ತಿಂಡಿ ತರುವ ಅಭ್ಯಾಸ ಮಾಡಿಕೊಂಡಿದ್ದಾರಂತೆ!.
****************

ಮನೆಯ ಕೆಲಸದಾಕೆ...ಮನೆಮುಂದೆ ಬಿದ್ದಿದ ಕಸದರಾಶಿಗೆ ಬೆಂಕಿ ಹಚ್ಚುತ್ತಿದ್ದಳು. ಅದರಿಂದ ದಟ್ಟಹೊಗೆ, ಕೆಟ್ಟವಾಸನೆ. ಬೆಳಿಗ್ಗೆಯಾದರೂ ಶುದ್ಧ ಗಾಳಿ ಸಿಗಲೆಂದು ಮೂಗು ಬಯಸುತ್ತಿದ್ದರೆ...ಒಮ್ಮೆಲೇ ಕೆಮ್ಮು ಬರತೊಡಗಿತು.
****************

ಬೀದಿ ದೀಪಗಳು ನಿಧಾನಕ್ಕೆ ಆಫ್ ಆಗತೊಡಗಿದವು. ಇನ್ನೇನೋ ಸೂರ್ಯ ಬರುವ ಹೊತ್ತು. ರಸ್ತೆ ಮೇಲಿನ ಹೂವಿನ ಚಿತ್ತಾರ ಮಬ್ಬು ಮುಂಜಾವಿನಲ್ಲಿ ಇನ್ನಷ್ಟು ಮೋಹಕ. ಯೋಚನೆಗಳಿಗೆ ನೂರಾರು ದಾರಿಗಳು. ಮುಂದೆ ಸಾಗಿದರೆ ಬಂಗಲೆಯೊಂದರ ಪಕ್ಕದಲ್ಲಿ ಗೊರಕೆ ಸದ್ದು ಕೇಳುತ್ತಿತ್ತು. ಪಾಪ, ರಾತ್ರಿಯಿಡೀ ಎಚ್ಚರವಿದ್ದ ಸೆಕ್ಯೂರಿಟಿ ಆರು ಗಂಟೆ ಹೊತ್ತಿಗೆ ನಿದ್ದೆಗೆ ಜಾರಿದ್ದ!.
****************

ಯಾರದೋ ಮನೆ, ಮನೆಯೆದುರು ಹೂವು ಕುಂಡಗಳ ಅಲಂಕಾರ, ಇನ್ನ್ಯಾರದೋ ಮನೆಯ ಸೆಕ್ಯೂರಿಟಿ ತನ್ನ ಜೊತೆಗೆ ವಾಕಿಂಗ್ ಬಂದ ನಾಯಿಯನ್ನು ಅಲ್ಲಿ "ನಿತ್ಯಕರ್ಮ'' ಮಾಡಿಸುತ್ತಿದ್ದ!. ಇನ್ನೂ ಮುಂದೆ ಹೋದರೆ ಗಾಡಿ ತೊಳೆಯುವ ಹುಡುಗ "ರಂಗೋಲಿ'' ಮೇಲೆ ನೀರು ಹಾಕಿದನೆಂದು ಮನೆಯೊಡತಿ ಬೈಯುತ್ತಿದ್ದಳು.
****************

" ಥೂ....ಮಗ'' ಕಾಫಿ ಮಾರುವ ಅಜ್ಜಿ ದೊಡ್ಡ ಸ್ವರದಲ್ಲಿ ಬೈಯುತ್ತಿದ್ದಳು. ಆ ಏರಿಯಾದ ಸೆಕ್ಯೂರಿಟಿ ಗಾರ್ಡ್ ಗಳಿಗೆ ಮುಂಜಾವು ಶುರುವಾಗುವುದೇ ಅಜ್ಜಿಯ ಬಿಸಿ-ಬಿಸಿ ಕಾಫಿ ಮೂಲಕ. ಹತ್ತಾರು ಮಂದಿ ಯಾವಾಗಲೂ ಅಜ್ಜಿ ಮುಂದೆ ಕಾಫಿಗಾಗಿ ಕ್ಯೂ ನಿಂತಿರುತ್ತಾರೆ. ಒಂದೊಂದು ದಿನ ಅಜ್ಜಿ ಖುಷಿಯಲ್ಲಿರುತ್ತಾಳೆ, ಕೆಲವೊಮ್ಮೆ ಜಮದಗ್ನಿಯಾಗುತ್ತಾಳೆ. ತಿಂಗಳ ಕೊನೆಯಲ್ಲಿ ಎಲ್ಲರಿಗೂ ಸಾಲದ ಮೇಲೆ ಕಾಫಿಯಂತೆ. ಒಬ್ಬ ಎರಡು ತಿಂಗಳಿಂದ ಬಿಟ್ಟಿ ಕಾಫಿ ಕುಡಿದು ಸಾಲ ತೀರಿಸಿಲ್ಲ ಎಂದು ಅಜ್ಜಿಗೆ ಸಿಟ್ಟು ನೆತ್ತಿಗೇರಿತ್ತು.
*********************

ಗಂಟೆ ಆರೂವರೆ. ಸೂರ್ಯ ನಿಧಾನಕ್ಕೆ ಮೇಲೇರುತ್ತಿದ್ದ. ಬಂದ ದಾರಿಯಲ್ಲೇ ವಾಪಸ್ ಹೊರಟೆ. ಹೂವ ಚಿತ್ತಾರ ಬೀದಿ ಗುಡಿಸುವವಳ ಪೊರಕೆಗೆ ಸಿಕ್ಕು ಕಸದರಾಶಿಯಾಗಿದ್ದವು. ಮನೆ ಗೇಟ್ ತೆರೆದರೆ, ಅಮ್ಮ ಹೊಸಿಲಿಗೆ ರಂಗೋಲಿ ಹಾಕಿ, ಅರಿಶಿಣ-ಕುಂಕುಮ ಹಚ್ಚಿದ್ದಳು. ಪತಿದೇವರಿಗೆ ಮಾತ್ರ ಇನ್ನೂ ಬೆಳಗಾಗಿರಲಿಲ್ಲ!!!

Thursday, April 18, 2013

ನೆನಪಿಗೊಂದು ಡಿಲೀಟ್ ಬಟನ್!


ನೆನಪಿಗೂ ಡಿಲೀಟ್ ಬಟನ್ ಇರುವಂತಿದ್ದರೆ....
ಬೇಡವಾದ, ಇಷ್ಟವಿಲ್ಲದ ನೆನಪುಗಳನ್ನು ಡಿಲೀಟ್ ಬಟನ್ ಒತ್ತಿ ಅಳಿಸಿಬಿಡಬಹುದಿತ್ತು...
ಬೇಕಿದ್ದರೆ ಕಂಟ್ರೋಲ್ ಝಡ್ ಮಾಡಬಹುದಿತ್ತು....
ಎಲ್ಲಿಂದಲೋ ಎರವಲು ಪಡೆಯಬೇಕಿದ್ದರೆ ಕಂಟ್ರೋಲ್ ಕಾಪಿ&ಪೇಸ್ಟ್ ಮಾಡಬಹುದಿತ್ತು...
ಸಾಧ್ಯನಾ? ಮತ್ತೊಂದು ಪ್ರಶ್ನೆ ತಲೆಯೊಳಗೆ.
"ಬೆಳಗ್ಗೆಯಿಂದ ಎಷ್ಟು ಎನ್ ಕ್ವಾರಿ ಅಟೆಂಡ್ ಮಾಡಿದೆ?'' ಬಾಸ್ ಬಂದು ನನ್ನ ಮೇಜು ಮೇಲೆ ಸದ್ದು ಮಾಡಿದ.
"ಸರ್, ಐದು...''
"ಬರೀ ಐದೇ..ಬೆಳಿಗ್ಗೆ 10 ಗಂಟೆಗೆ ಆಫೀಸ್ ಬರ್ತಿಯಾ. ಈಗ ಗಂಟೆ ಐದು. ಇನ್ನು ಒಂದು ಗಂಟೆಯಲ್ಲಿ ಮನೆಗೆ ಹೊರಡುವ ಸಮಯ'' ಬಾಸ್ ಕಣ್ಣು ದೊಡ್ಡದಾಗಿತ್ತು. ಬಾಸ್ ಆತನ ಚೇಂಬರಿಗೆ ತೆರಳಿದ. ಗಾಜಿನ ಪರದೆಯ ಒಳಗಿನಿಂದ ಅವನ ಕಣ್ಣು ನನ್ನ ಮೇಲೆ.

ಮತ್ತೊಂದಷ್ಟು ನೆನಪುಗಳು. ಎದೆಯ ಸೀಳಿ ಹೊರಬಂದವು....
ಅಂದು ನಾನು ಹುಟ್ಟಿದ್ದು, ಚೌತಿ ದಿನ. ಬೆಳಿಗ್ಗೆ 7.20ಕ್ಕೆ.
ಹೆಣ್ಣುಮಗುವೆಂದು ಅಮ್ಮಂಗೆ ಖುಷಿ..
ಅಜ್ಜಿ ಮತ್ತು ಅಪ್ಪ "ಗಂಡು ಮಗು ಬೇಕೆಂದು'' ಗ್ರಾಮದೇವತೆಗೆ ಹರಕೆ ಹೊತ್ತಿದ್ದು ವ್ಯರ್ಥವಾಗಿತ್ತಂತೆ.
ನಾನು ಹುಟ್ಟಿದಾಗ ಅಪ್ಪ ನನ್ನ ನೋಡಲು ಬರಲಿಲ್ಲವಂತೆ..
ಹೆಣ್ಣು ಮಗು...ಮನೆಹಾಳು ಅಂದಿದ್ದನಂತೆ...
ಅಪ್ಪ...!,
ಅವನು ಅಮ್ಮಂಗೆ ಕಷ್ಟ ಕೊಟ್ಟಿದ್ದ. ಮೂಗಿನ ತನಕ ಕುಡಿದು ಮನೆಗೆ ಬಂದು ಅಮ್ಮನ ಹಿಂಸಿಸುತ್ತಿದ್ದ. ಅವನು ನನಗೆ ಬೇಡವಾಗಿತ್ತು...
ಆದರೆ, ಅಮ್ಮ "ಅವನೇ ತಾಳಿ, ಪಾಲಿಗೆ ಬಂದದ್ದು ಪಂಚಾಮೃತ. ಹೊಂದಿಕೊಂಡು ಹೋಗಬೇಕು'' ಎಂಬ ಮಾತಿನಲ್ಲಿ ನಂಬಿಕೆಯಿಟ್ಟಿದ್ದಳು.
ಎಂಥ ಒಳ್ಳೆಯ ಅಮ್ಮ, ಎಷ್ಟು ಕೆಟ್ಟ ಅಪ್ಪ...
ಅವನ ನೆನಪನ್ನು ಡಿಲೀಟ್ ಮಾಡಬೇಕು ಅನಿಸಿತ್ತು..ಬೆರಳು ಡಿಲೀಟ್ ಬಟನ್ ನತ್ತ ಸಾಗಿತ್ತು...
ಥತ್...
ಎನ್ ಕ್ವಾರಿ ಲಿಸ್ಟ್ ಡಿಲೀಟ್ ಆಗೋಯ್ತು...ಎದೆ ಢವಢವ.
"ಓಹ್..ಕಂಟ್ರೋಲ್ ಝಡ್'' ಲಿಸ್ಟು ಮತ್ತೆ ಬಂತು.

ಮತ್ತೆ ಬಿಡದೆ ಕಾಡುವ ನೆನಪುಗಳು....
ಬೆಂಗಳೂರಿಗೆ ಬಂದ ಹೊಸತು. ನಮ್ಮನೆ ಎದುರುಗಡೆ ಮನೆಯಲ್ಲಿ ಯುವತಿ ಇದ್ದಳು. ವಯಸ್ಸು ಮೂವತ್ತೊರಳಗೆ. ಉದ್ದ ಜಡೆಗೆ ಹೂವ ಮುಡಿದರೆ ನೋಡಲು ಇನ್ನೂ ಚೆಂದ. ದಿನಾ ಕಣ್ಣಿಗೆ ಕಾಡಿಗೆ ಹಚ್ಚುತ್ತಾಳೆ, ಕಿವಿಯಲ್ಲಿ ತೂಗಾಡುವ ಓಲೆ, ಮೂಗಿನಲ್ಲಿ ಮಿನುಗುವ ನತ್ತು, ಕೈ ತುಂಬಾ ಬಣ್ಣದ ಬಳೆ. ಮುಂಜಾವು ಸೂರ್ಯ ಅರಳುವ ಹೊತ್ತು ಮನೆಮುಂದೆ ರಂಗೋಲಿ ಇಡುತ್ತಾಳೆ. ನೀಳಜಡೆ ನೆಲದ ಮೇಲೆ ನಲಿದಾಡುತ್ತೆ....
ಅವಳ ಮನೆಯೆದುರು ನಡೆದಾಡಿದರೆ ಅವಳ ಕಾಲಲ್ಲಿದ್ದ ಬೆಳ್ಳಿ ಗೆಜ್ಜೆಯ ಸಪ್ಪಳ ನಮ್ಮನೆ ಅಡುಗೆ ಮನೆಗೂ ಕೇಳಿಸುತ್ತಿತ್ತು. ಮತ್ತೆ ಮತ್ತೆ ಅವಳ ನೋಡುತ್ತಿದ್ದೆ. ಚೆಂದದ ಹುಡುಗಿ ಅವಳು.
ಅವಳು ಕೆಲಸಕ್ಕೆ ಹೋಗುವುದಿಲ್ಲ...ಬೆಳಗ್ಗೆಯಿಂದ ಸಂಜೆ ತನಕ ಮನೆಯೊಳಗೇ ಸಿಂಗಾರವ್ವ. ದಿನಾ ಸಂಜೆ ಒಬ್ಬ ಅರವತ್ತು ದಾಟಿದ ಕಪ್ಪಗಿನ ಗಂಡಸು ಅವಳ ಮನೆಗೆ ಹಾಜರು. ಅವನು ಬರುವ ಹೊತ್ತು ಅವಳು ಕಾಯುವುದು ಶಬರಿ ರಾಮಂಗೆ ಕಾದಿದ್ದನ್ನು ನೆನಪಿಸುತ್ತಿತ್ತು. ಅವನ ಕುತ್ತಿಗೆಯಲ್ಲಿ ಸರಪಳಿಯಂಥ ಚಿನ್ನದ ಸರ, ಕೈಯಲ್ಲಿ ದಪ್ಪ ಬಳೆ.
"ಇವನೇನೋ ರಿಯಲ್ ಎಸ್ಟೇಟ್ ಸರದಾರ. ಅವಳ ಅಪ್ಪನಿರಬೇಕು'' ನನ್ನ ಅನುಮಾನಕ್ಕೆ ಮನಸ್ಸು ಉತ್ತರ ಕೊಟ್ಟಿತ್ತು.
ಪಕ್ಕದ್ಮನೆ ಹೆಂಗಸರು ಮಾತಾಡಿಕೊಳ್ಳುತ್ತಿದ್ದರು, "ಪಾಪ ಆ ಹುಡುಗಿ ಅಮ್ಮಂಗೆ ಎಂಟು ಜನ ಮಕ್ಕಳಂತೆ. ಇವಳು ನಾಲ್ಕನೆಯವಳು. ಅಪ್ಪ ಕಾಯಿಲೆಯಿಂದ ಸತ್ತುಹೋದ. ಹೆಣ್ಣುಮಕ್ಕಳ ಮದುವೆ ಮಾಡಕ್ಕಾಗದ ಅಮ್ಮ ಈ ಮುತ್ತಿನಂಥ ಹುಡುಗಿಗೆ ಎರಡನೇ ಸಂಬಂದ ಕಟ್ಟಿದ್ರಂತೆ. ಆಯಪ್ಪಂಗೆ ಮದುವೆಯಾದರೂ ಮಕ್ಕಳಾಗಿಲ್ಲ ಎಂದು ಇನ್ನೊಂದು ಮದುವೆ ಮಾಡಿಕೊಂಡಂತೆ. ಅದಕ್ಕೆ ದಿನಾ ಮನೆಗೆ ಬಂದು ನೋಡ್ಕೊಂಡು ಹೋಗ್ತಾನೆ...''

ಹಾಳು ನೆನಪುಗಳು...ಮತ್ತೆ ಮತ್ತೆ ಕಾಡ್ತವೆ...
ಸುಮ್ಮನೆ ಬಾಸ್ ಕೈಯಿಂದ ಬೈಗುಳ. ಫೈಲ್ ಡಿಲೀಟ್ ಆಗೋದು...ಎಲ್ಲವೂ ನೆನಪುಗಳಿಂದಲೇ...ಅವುಗಳ ಮೇಲೆ ತುಂಬಾ ಸಿಟ್ಟು ಬಂತು....
ಎದುರುಗಡೆ ಇದ್ದ ಗಡಿಯಾರದಲ್ಲಿ ಕಿರಿಯ ಮುಳ್ಳು ಆರು ತೋರಿಸುತ್ತಿತ್ತು.
ಎನ್ ಕ್ವಾರಿ ಲಿಸ್ಟ್ ಬಾಸ್ ಗೆ ಮೇಲ್ ಮಾಡಿದೆ....
ನನ್ನವನ ಕಾಲ್ "ಬಾ ಬೇಗ...ಗೇಟ್ ಬಳಿ ವೈಟ್ ಮಾಡ್ತಾ ಇದ್ದೀನಿ.."
ಮನಸ್ಸಿನಲ್ಲಿ ಮತ್ತದೇ "ನೆನಪುಗಳನ್ನು ಡಿಲೀಟ್ ಬಟನ್ ಒತ್ತಿ ಅಳಿಸಿಬಿಡುವಂತಿದ್ದರೆ...ಎಷ್ಟು ಚೆಂದ? ಬೇಕಾದ್ದು ಇಟ್ಕೊಂಡು ಬೇಡದ್ದು ಡಿಲೀಟ್ ಮಾಡಬಹುದಿತ್ತು''!

ಭಾವಕ್ಕೆ ದಕ್ಕಿದ ಪ್ರಸಂಗಗಳು-3


ಮೊದಲ ಫೈಲ್ ನೇಮ್ "ಲೈಫ್" 
ಮೊದಲು ಡಿಟಿಪಿ ಕಲಿಯಬೇಕು....
"ತಿಂಗಳಿಗೆ ಮೂರು ಸಾವಿರ'' ಎಂದರು ದಪ್ಪ ಕನ್ನಡದ ಹೆಂಗಸು. ಅವರು ಕಂಪ್ಯೂಟರ್ ಟೀಚರ್.
ಪರ್ಸ್ ಮುಟ್ಟಿ ನೋಡಿಕೊಂಡೆ. ಅಮ್ಮ ಕೊಟ್ಟಿದ್ದು ಬರೀ ನಾಲ್ಕು ಸಾವಿರ..
ಬೆಂಗಳೂರು ಬರಡನಿಸಿತು. .."ನದಿಗೆ ಇಳಿದ ಮೇಲೆ ಈಜಿಲೇಬೇಕು. ಸಾಯೋದು ಅನ್ಯಾಯ''.
ಒಪ್ಪಿಕೊಂಡೆ. ಅಲ್ಲಿಯವರೆಗೆ ಮೌಸ್ ಮುಟ್ಟದ ನನ್ನ ಬೆರಳುಗಳು ಅದನ್ನು ಗಟ್ಟಿಯಾಗಿ ಹಿಡಿದುಕೊಂಡವು. ಫೈಲ್ ಗಳನ್ನು ತೆರೆದು ಅಕ್ಷರಗಳನ್ನು ಪೋಣಿಸುತ್ತಾ ಹೋದೆ. ಸೇವ್ ಕ್ಲಿಕ್ ಮಾಡಿದರೆ ಪೋಣಿಸಿದ ಅಕ್ಷರಗಳು ಅಲ್ಲೇ ಉಳಿಯುತ್ತವೆ. ಫೈಲ್ ಗೊಂದು ಹೆಸರುಕೊಡಬೇಕು ಎಂದು ಹೇಳಿಕೊಟ್ಟರು ಕಂಪ್ಯೂಟರ್ ಟೀಚರ್. ಅದಕ್ಕೊಂದು ಹೆಸರು ಕೊಟ್ಟೆ "ಲೈಫ್'' ಎಂದು!
ದಪ್ಪಶಾಯಿಯ ಪೆನ್ನಿನಲ್ಲಿ ಹೇಳಿಕೊಟ್ಟಿದ್ದನ್ನು ಬರೆದುಕೊಂಡೆ. ಕಲಿಕೆಗೊಂದು ನೋಟ್ ಬುಕ್!. ಮರುದಿನ ಕಾಪಿ-ಪೇಸ್ಟ್, ಡಿಲೀಟ್, ಆಲ್ಟ್ ಝಡ್....ಹೀಗೆ ಕೀಬೋರ್ಡ್ ಕಸರತ್ತು ಹೇಳಿಕೊಟ್ಟರು. ಬೆರಳುಗಳು ಜೋರಾಗಿ ಚಲಿಸುತ್ತಿದ್ದವು. ಕೀಬೋರ್ಡ್ ಕಟಕಟ ಶಬ್ಧಮಾಡತೊಡಗಿತು.
ಪೆನ್ನು, ಪೆನ್ಸಿಲ್, ದಿನ ಗೀಚುತ್ತಿದ್ದ ಡೈರಿ...ಎಲ್ಲವೂ ನನ್ನ ಆ ಪೆಟ್ಟಿಗೆಯಲ್ಲಿ ಸುಮ್ಮನೆ ಕುಳಿತಿವೆ. ಪೆನ್ನಿಗೆ ಇಂಕ್ ತುಂಬಿಸಿ ಏಳು ವರ್ಷ ಸರಿದಿದೆ. ಪೆನ್ ಹಿಡಿದರೆ ಯೋಚನೆಗಳು ಗಕ್ಕನೆ ನಿಂತುಬಿಡುತ್ತವೆ. ಮತ್ತೆ ಮೌಸ್ ಹಿಡಿಯುತ್ತೇನೆ.
***********
ಸಕಲ ಕೆಲಸ ವಲ್ಲಭ!
"ಅಮ್ಮ ಒಬ್ಬಳೇ ಮನೆಯಲ್ಲಿ. ಎಲ್ಲಾ ಕೆಲಸ ಮಾಡುವುದು ಕಷ್ಟವಾಗುತ್ತೆ''ಅವನಂದ.
"ಹ್ಲೂಂ..ಹೌದು, ನೀನು ಅಮ್ಮಂಗೆ ಹಲ್ಪ್ ಮಾಡೋಲ್ವಾ?''
"ಮಾಡ್ತೀನಿ...ತರಕಾರಿ ಹಚ್ಚಿಕೊಡ್ತೀನಿ. ನನ್ ಬಟ್ಟೇನಾ ನಾನೇ ಒಗೇತೀನಿ. ವಾರಕ್ಕೆ ಬೇಕಾಗುವಷ್ಟು ಬಟ್ಟೆಗಳನ್ನು ನಾನೇ ಇಸ್ತ್ರೀ ಮಾಡಿಕೊಳ್ತೀನಿ''
ಅವನಂದಾಗ,
"ಗುಡ್ ಪರ್ವಾಗಿಲ್ಲ...ಗಂಡನಾಗುವವನು ಸಕಲ ಕೆಲಸ ವಲ್ಲಭ'' ಎಂದುಕೊಂಡೆ ನಾನು.
***
ಮದುವೆಯ ಮೊದಲ ದಿನ. ಅವನ ಕೋಣೆ ಹೊಸತು. ಮಂಚ ಅಲಂಕಾರಗೊಂಡಿತ್ತು. ಮಲ್ಲಿಗೆಯ ಘಮ.
ಕೋಣೆಯೊಳಗೆ ಏನೇನಿದೆ ಎಂದು ನೋಡುವ ತವಕ ನನ್ನ ಕಣ್ಣುಗಳಿಗೆ.
ಪುಸ್ತಕ, ಪೆನ್ನುಗಳ ರಾಶಿ. ನೋಟ್ ಪುಸ್ತಕಗಳು, ಡೈರಿಗಳು, ಚಿಂದಿ-ಚಿಂದಿಯಾದ ಕಾಗದ ಚೂರುಗಳು...ನೋಡುತ್ತಲೇ ನಿಂತಿದ್ದೆ.
"ಏಕೆ ರೂಮ್ ಹಿಂಗಿಟ್ಟುಕೊಂಡಿದ್ದೀ..ಗಂಡುಮಕ್ಕಳೇ ಹಿಂಗೇ ಅನಿಸುತ್ತೆ'' ನಾನಂದೆ.
"ಮೊದಲ ದಿನ. ಸುತ್ತಮುತ್ತ ನೋಡಬೇಡ. ನನ್ನ ಕಣ್ಣುಗಳನ್ನಷ್ಟೇ ನೋಡು'' ಕೈ ಹಿಡಿದೆಳೆದು. ಸ್ವಿಚ್ ಬೋರ್ಡ್ ಒತ್ತಿದ. ಕೋಣೆ ಕತ್ತಲಾಯಿತು.
"ಪರ್ವಾಗಿಲ್ಲ ನನ್ ಗಂಡ ತುಂಬಾ ಓದ್ತಾನೆ..'' ಖುಷಿಪಟ್ಟೆ ಮನಸ್ಸಿನಲ್ಲಿ.
ಬೆಳಗಾಯಿತು...
ಅವನ ದೊಡ್ಡ ಬೀರು ತೆರೆದೆ.
ಅಬ್ಬಾ...ಬಟ್ಟೆ ರಾಶಿಗಳು...ಪ್ಯಾಂಟ್, ಶರ್ಟ್, ಟೀ-ಶರ್ಟ್, ಬನಿಯನ್, ನಿಕ್ಕರ್...ಎಲ್ಲವೂ ಮುದ್ದೆ ಮುದ್ದೆಯಾಗಿ ತುರುಕಿಸಿಡಲಾಗಿತ್ತು. ಒಂದು ಬಟ್ಟೆ ತೆಗೆದರೆ ಇನ್ನೊಂದು ಬೀಳುತ್ತಿತ್ತು...ಗೆದ್ದಲು ಹಿಡಿಯೋಕೆ ಬಾಕಿ!
"ಏನಿದು...ಬ್ಯಾಚುಲರ್ ಹುಡುಗ್ರು ಹೀಗೆನಾ?'' ಕೇಳಿದೆ.
"ಒಬ್ಬ ವ್ಯಕ್ತಿ ಬಚ್ಚಲಿನಲ್ಲಿ ಬದುಕುವ ಹಕ್ಕಿಯಾಗಬೇಕು! ಇದರಲ್ಲಿ ಕೂತುಕೊಂಡು ಆಕಾಶ ನೋಡಬೇಕು. ಸೂರ್ಯನನ್ನು ನೋಡಬೇಕು. ಸುತ್ತಲಿನ ಜಗತ್ತನ್ನು ನೋಡಬೇಕು. ಅದಕ್ಕೆ ಈ ಕೋಣೆಯಲ್ಲಿ ಸರಿಯಾದ ವಾತಾವರಣವಿದೆ! ನಾನು ಇಲ್ಲಿದ್ದು ಏನಾದರೂ ಬರೆಯಲು ಸಾಧ್ಯ. ಕೈಲಾಸಂ ಹೀಗನ್ನುತ್ತಿದ್ದರಂತೆ. ನಾನು ಕೋಣೆ ಒಂದು ಬಚ್ಚಲು, ನಾನಿಲ್ಲಿ ಹಕ್ಕಿ...'' ಮಾತು ನಿಲ್ಲದೆ ಓಡುತ್ತಿತ್ತು.
"ಅದ್ಸರಿ...ನೀನು ನನ್ನ ನೋಡಲು ಬಂದ ಮೊದಲ ದಿನ ನೀಟಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದೆ. ಯಾರು ಬಟ್ಟೆಗೆ ಇಸ್ತ್ರೀ ಮಾಡಿಕೊಟ್ರು?''
ನಗುತ್ತಾ ಅವನಂದ, "ನಾನು ಹೆಂಗೆ ಬೇಕೋ ಹಾಗೇ ಇದ್ದೋನು. ಆದ್ರೆ ಅವತ್ತು ಹಿಂಗೆ ಇದ್ರೆ ನೀನು ಕೈಕೊಟ್ರೆ ಅನಿಸುತ್ತು. ಅದಕ್ಕೆ ನೀಟಾಗಿ ಬಂದಿದ್ದೆ'' ಎಂದು ತುಂಟ ನಗೆ ನಕ್ಕ''.
***********
ಅಮ್ಮಂಗೂ ಮರೆತ ಕಾಗದ
ಊರಿಗೆ ಹೋದಾಗ ಅಮ್ಮ ಹೇಳುತ್ತಾಳೆ, "ಭಾಳ ಬದಲಾಗಿದ್ದೀ. ಮೊದಲಿನ ಮುಗ್ಧತೆ, ಜನ ನೋಡಿದರೆ ಭಯ ಎಲ್ಲವೂ ಮಾಯ. ಅಂದಹಾಗೆ ಈಗ ಕಾಗದ ಬರೆಯುವುದೇ ಇಲ್ಲ, ಏನ್ ಸೋಮಾರಿತನ ನಿಂಗೆ?''
ಅಮ್ಮನ ಮಾತು ಮುಗಿಯುವ ಮುನ್ನ
"ಫೋನ್ ಇದೆ...ಇನ್ನೇನು ಕಾಗದ ಬರೆಯೋದು? ಕಂಪ್ಯೂಟರ್ ನಿಂಗೆ ಅರ್ಥವಾಗಿಲ್ಲಾಂದ್ರೆ ಪಕ್ಕದ್ಮನೆ ರಮೇಶಂಗೆ ಗೊತ್ತು. ಅವ ನನ್ನನ್ನು ಕಂಪ್ಯೂಟರ್ನಲ್ಲಿ ತೋರಿಸ್ತಾನೆ.'' ನನ್ನ ಮಾತು ಕೇಳಿ ಅಮ್ಮಂಗೆ ಅಚ್ಚರಿ.
ನಾನು ಮತ್ತೆ ಬೆಂಗಳೂರಿಗೆ. ಸ್ಕೈಪ್ ತೆರೆಯುತ್ತೇನೆ. ಕಂಪ್ಯೂಟರ್ ನ ಆ ಪುಟ್ಟ ಕಿಂಡಿಯಲ್ಲಿ ನನ್ ಮಾತು, ಮುಖ ನೋಡಿ ಅಮ್ಮಂಗೆ ಜಗತ್ತು ಗೆದ್ದಂಥ ಖುಷಿ. ಈಗ ಕಾಗದ ಬರೆಯಲು ಹೇಳುವುದು ಅಮ್ಮಂಗೂ ಮರೆತುಹೋದಂತಿದೆ.

ಬಯಕೆಯ ಬಯಲ ಹುಡುಕಾಟ


ಕನಸ ಕಸುವೂ ಬೇಕು....
ಯಶದ ಹಾದಿಯ ಹೆಜ್ಜೆಗೆ 
ಬಯಕೆ ಬಯಲು 
ಎರಡೂ ಬೇಕು 
ಸಾಧನೆಯ ಕಾಲ್ಗೆಜ್ಜೆಗೆ...
ಆಟೋಗ್ರಾಫ್ ನ ಮೊದಲ ಪುಟದಲ್ಲಿದ್ದ ಸಾಲುಗಳನ್ನು ಮತ್ತೆ ಮತ್ತೆ ಓದಿಕೊಂಡೆ. ಪ್ರೀತಿಯ ಟೀಚರ್ ಬರೆದ ಸಾಲುಗಳಿವು. ಬೆಟ್ಟದಷ್ಟು ಕನಸುಗಳು ಎದೆಯೊಳಗೆ ಬೆಚ್ಚಗೆ ಮಲಗಿದ್ದವು. ಬೆಂಗಳೂರಿಗೆ ಹೋದರೆ ಏನಾದರೂ ಕೆಲಸ ಸಿಗುತ್ತೆ ಎಂಬ ಬಲ್ಲವರು ಹೇಳಿದ ಮಾತಿನಲ್ಲಿ ಗಟ್ಟಿ ನಂಬಿಕೆಯಿತ್ತು.

ಎಂಟನೇ ತರಗತಿಯಿಂದ ಗೀಚಿದ ಹಾಳು-ಮೂಳು ಬರಹಗಳು. ಹಳೇ ಡೈರಿಗಳು, ಪೆನ್ನು, ಪುಸ್ತಕ, ಅಮ್ಮ ಕೊಡಿಸಿದ ಭಗವದ್ಗೀತೆ, ಎಸ್ ಎಸ್ ಎಲ್ ಸಿ, ಡಿಗ್ರಿ , ಅಂಕಪಟ್ಟಿ, ಎಲೆಕ್ಷನ್ ಕಾರ್ಡ್, ಶಾಲೆ-ಕಾಲೇಜು ಆಟೋಗ್ರಾಫ್ ... ಎಲ್ಲವನ್ನೂ ಪ್ಯಾಕ್ ಮಾಡಿದ್ದೆ. ಮನಸ್ಸಿಗೆ ಮುಗ್ಧತೆಯ ಸಿಂಗಾರ...ಇದಕ್ಕೇ ಇರಬೇಕು ಹೊರಡುವ ಮುಂಚೆ ಅಮ್ಮ, ನನ್ನ ಪ್ರೀತಿಯ ಮೇಷ್ಟ್ರುಗಳು ಗಂಟೆ-ಗಟ್ಟಲೆ ಕುಳ್ಳಿರಿಸಿ ಕಿವಿಮಾತು ಹೇಳಿದ್ದು,

ರಾತ್ರಿ 9, ಬಸ್ ಹೊರಡುವ ಸಮಯ.
ಬಸ್ ಹತ್ತುವ ಮೊದಲು "ಬೆಂಗಳೂರು ಹೇಗಿದೆ ಎಂದು ಕಾಗದ ಹಾಕು. ಅಲ್ಲಿ ಜಾಗ ಹೇಗಿದೆ ಹೇಳು...ಮುಂದಿನ ಸಲ ಹೂಗಿಡ ತಕ್ಕೋಂಡು ಹೋಗಿವಿಯಂತೆ' ಅಮ್ಮ ನುಡಿದಳು.
ಕಲ್ಪನೆಯ ಬೆಂಗಳೂರು ತಲೆಯೊಳಗೆ ಗಿರಕಿ ಹೊಡೆಯತೊಡಗಿತು. "ಬೆಂಗಳೂರಲ್ಲಿ ಎಲ್ಲಾರೂ ಕೆಲಸ ಮಾಡೋರೇ. ಬೆಳಿಗ್ಗೆ ಮನೆಗೆ ಬೀಗ ಜಡಿದು ಹೋದರೆ ಸಂಜೆ ಸೂರ್ಯ ಕಂತುವ ಹೊತ್ತಿಗೆ ಮನೆ ಸೇರುವುದು. ಜನಜಂಗುಲಿ ಹೆಚ್ಚು, ತುಂಬಾ ಜೋಪಾನವಾಗಿರಬೇಕು. ಎಲ್ಲಾರೂ ಒಳ್ಳೆಯವರೆಂದು ನಂಬುವುದು ನಮಗೆ ನಾವೇ ಮೋಸ ಮಾಡಿಕೊಂಡಂತೆ. ಬೆಂಗಳೂರು ರಾತ್ರಿ ನೋಡಕೆ ಚೆಂದ, ಎತ್ತಲೂ ಲೈಟ್. ದೀಪದ ಬೆಳಕಿನಲ್ಲಿ ಓಡುವ ವಾಹನಗಳು, ಶಾಪಿಂಗ್ ಮಾಡುವವರ ಸಂಭ್ರಮ, ಇಲ್ಲಿ ರಾತ್ರಿ-ಹಗಲಿಗೆ ವ್ಯತ್ಯಾಸವೇ ಕಾಣುವುದಿಲ್ಲ' ಬೆಂಗಳೂರನ್ನು ಬಲ್ಲವರ ಮಾತುಗಳು ಮತ್ತೆ ಮತ್ತೆ ನೆನಪಾಗತೊಡಗಿದವು.

ಎಷ್ಟೊಂದು ನೆನಪುಗಳು...
ಯೋಚನೆಗಳ ನೆಗೆತ. ನಿಲ್ಲು ಅಂದರೆ ನಿಲ್ಲುತ್ತಿಲ್ಲ. ನನ್ನ ಹೊತ್ತ ಬಸ್ ಶಿರಾಡಿಘಾಟ್ ಹತ್ತುತ್ತಿತ್ತು. ತಿರುವುಗಳನ್ನು ದಾಟುವಾಗ ಬಸ್ ನ ಓಲಾಟಕ್ಕೆ ಸಕಲೇಶಪುರ ತಲುಪುವಷ್ಟರಲ್ಲಿ ಮೈ-ಕೈ ನೋವು. ಬೆಳಗಿನ ಜಾವ ಬಸ್ ಎಲ್ಲೋ ನಿಂತಿತು. ಬ್ಯಾಗ್ ಬಿಟ್ಟು ಇಳಿಯುವ ದೈರ್ಯ ಇಲ್ಲ, ಅಷ್ಟು ದೂರದ ಪ್ರಯಾಣ ಅದೇ ಮೊದಲು..ಯಾರಾದ್ರೂ ಹೊತ್ತೊಯ್ದರೆ ಎನ್ನುವ ಭಯ. ಸೂರ್ಯ ಕಾಣುವ ತನಕ ನನ್ನ ಕಣ್ಣಿಗೆ ಮಾತ್ರ ನಿದ್ದೆ ಹತ್ತಲಿಲ್ಲ.
ಬೆಂಗಳೂರು ನಗರಕ್ಕೆ ಸ್ವಾಗತ. ದೊಡ್ಡ ಹಸಿರು ಬೋರ್ಡ್ ಕಾಣಿಸಿತು.
ಕಂಡಕ್ಟರ್ ಗೆ ಕೇಳಿದೆ, "ಬೆಂಗಳೂರು ಅಂದ್ರೆ ಇದೇನಾ? ಇಳಿಯುವ ಜಾಗ ಮೆಜೆಸ್ಟಿಕ್ ಇನ್ನೆಷ್ಟು ದೂರವಿದೆ?''.
ನಿದ್ದೆಗಣ್ಣಲ್ಲಿ ಕಂಡಕ್ಟರ್ ಉಸುರಿದ; "ಹೇಳ್ತೀನಮ್ಮಾ....ಕೂತ್ಕೋ. ಸಿಟಿಗೆ ಇನ್ನೂ ದೂರವಿದೆ''
ನನ್ನೊಳಗೆ ಸಣ್ಣ ಗೊಂದಲ.
"ಮೆಜೆಸ್ಟಿಕ್ ಮತ್ತು ಸಿಟಿ ಬೇರೇನಾ?''
"ತಲೆ ತಿನ್ಬೇಡ. ಹೇಳ್ತೀನಿ. ಊರು ಗೊತ್ತಿಲ್ಲದ್ದು ಒಂಟಿ ಬಂದ್ ಬಿಡ್ತವೆ'' ದೊಡ್ಡ ಕಣ್ಣು ಮಾಡಿದ. ನಾನು ಸುಮ್ಮನಾದೆ.
ದೊಡ್ಡ ದೊಡ್ಡ ಗಾಡಿಗಳು., ಕಟ್ಟಡಗಳು, ಜನಜಂಗುಳಿ, ಫ್ಲೈ ಓವರ್ಗಳು, ಇನ್ನೊಂದೆಡೆ ಧೂಳು, ಗೋಡೆಗೆ ಉಚ್ಚೆ ಹೊತ್ಯೋರು, ಬೀದಿ ಬದಿಯಲ್ಲೇ ಮಲಗಿ ಎದ್ದೇಳುತ್ತಿರುವವರು, ಬೀದಿ ಗುಡಿಸುವವರು, ತರಕಾರಿ ಮಾರುವವರು, ಚಿಂದಿ ಆಯುವವರು, ಶಿಸ್ತು-ಅಶಿಸ್ತಿನ ಸಿಪಾಯಿಗಳು...ಎಲ್ಲರೂ ಒಟ್ಟಾಗಿ ನನಗೆ ಸ್ವಾಗತ ಕೋರಿದಂತಾಯಿತು.

ಮೆಜೆಸ್ಟಿಕ್...ಕಂಡಕ್ಟರ್ ಕೂಗು. 
ಎಲ್ಲರೂ ಬ್ಯಾಗ್ ಹೆಗಲಿಗೇರಿಸಿದರು. ನಾನೂ ಕೂಡ.
"ಪ್ಲಾಟ್ ನಂಬರ್ 8, ಬಸ್ ನಂ. 60, ಜಯನಗರ 4ನೇ ಬ್ಲಾಕ್' ಗೆಳತಿ ಕೊಟ್ಟ ವಿಳಾಸ.
ಮತ್ತೊಂದು ಬಸ್ ಹತ್ತಿದೆ. ಗಿಜಿಬಿಜಿ ಜನರು. ಅರ್ಧ ಗಂಟೆ ದಾರಿ. ಇಳಿಯುವ ಜಾಗ ಬಂತು.

                                            *****
ಎದೆಯೊಳಗಿದ್ದ ಬೆಚ್ಚಗಿನ ಕನಸುಗಳಿಗೆ ಹೊರಬರುವ ತವಕ. ನನಗೆ ಕನಸುಗಳನ್ನು ಕಸುವಾಗಿಸುವ ಬಯಕೆ. ಬಯಲು ಹುಡುಕುತ್ತಾ ಮುಂದಡಿ ಇಟ್ಟೆ.

Thursday, April 4, 2013

ಭಾವಕ್ಕೆ ದಕ್ಕಿದ ಪ್ರಸಂಗಗಳು--ಭಾಗ-2


ಅಮ್ಮನ ದೇವರಮೂಲೆ 
ಅಂದು ನಮಗಿಬ್ಬರಿಗೆ ಜೋರು ಜ್ವರ. ಅಮ್ಮ ಇಬ್ಬರನ್ನೂ ನಿಲ್ಲಿಸಿ ದೃಷ್ಟಿ ತೆಗೆದಳು. ದೃಷ್ಟಿ ತೆಗೆದ ಕಡ್ಡಿಗೆ ಬೆಂಕಿ ಹಚ್ಚಿದಾಗ ಪಟಪಟ ಎಂದು ಸದ್ದು ಮಾಡಿತು.
ಅಮ್ಮ ಬಂದು ಹೇಳಿದಳು,"ನೋಡಿ ಇಬ್ರಿಗೂ ದೃಷ್ಟಿ ಬಿದ್ದಿದೆ. ಅದಕ್ಕೆ ನೋಡು ಕಡ್ಡಿ ಪಟಪಟ ಎಂದು ಉರಿಯತೊಡಗಿತು'' ಎಂದು. ಇಬ್ಬರಿಗೂ ತುಟಿಯಂಚಿನಲ್ಲಿ ನಗು. ವೈದ್ಯರಿಗೆ ಕೊಟ್ಟ ದುಡ್ಡು ವೇಸ್ಟ್ ಆಯಿತಲ್ಲಾ...ಅಂಥ ಮನಸ್ಸಲ್ಲಿ.
ಮರುದಿನ ಬೆಳಿಗೆದ್ದು ನೋಡಿದರೆ ಅಡುಗೆ ಮನೇಲಿ ಪಾತ್ರೆ ತೊಳೆಯುವ ಸಿಂಕ್ ನ ಪಕ್ಕ ಹಿತ್ತಾಳೆ ಚೊಂಬಲ್ಲಿ ನೀರು, ನೀರ ಮೇಲೆ ತುಳಸಿ ದಳಗಳು. ನಾವಿಬ್ಬರೂ ಕಾಫಿ ಕುಡಿದು ಲೋಟ ತೊಳೆಯಲು ಹೋದರೆ,
"ಅಲ್ಲಿ ಮುಸುರೆ ಮಾಡಬೇಡಿ. ಅದು ದೇವರ ಮೂಲೆ ಅಂತೆ. ಅಲ್ಲಿ ನೀರಿಟ್ಟರೆ ಆರೋಗ್ಯ ಚೆನ್ನಾಗಿರುತ್ತೆ ಅಂತೆ'' ಅಮ್ಮನ ಆರ್ಡರ್.
"ಯಾರಮ್ಮಾ ಹೇಳಿದ್ದು ನಿಂಗೆ?"
"ನನ್ನ ವಾಕಿಂಗ್ ಫ್ರೆಂಡ್''
"ಅದೇನು ನಿನ್ ಫ್ರೆಂಡ್ ವಾಕಿಂಗ್ ರೂಟ್ ನಿಂದ ಅಡುಗೆಮನೆಗೂ ಬಂದ್ರಾ''
"ಹ್ಲೂಂ..ಅವರಿಗೆ ಜ್ಯೋತಿಷ್ಯ, ವಾಸ್ತು ಎಲ್ಲಾ ಗೊತ್ತಂತೆ. ನಾವು ಓಡಾಡುವ ಬಾಗಿಲು ಬದಲಾಗಬೇಕಂತೆ'
"ಅಮ್ಮಾ...ಅದೇನಿದ್ರೂ ವಾಕಿಂಗ್ ರೂಟ್ ಗೆ ಅಂದುಬಿಡು'' ಎಂದು ನನ್ನವ ಗದರಿದ. ಅಮ್ಮನ ಮುಖ ಸಣ್ಣಗಾಯಿತು.
ಆದರೆ, ಅಡುಗೆಮನೆಯ "ದೇವರ ಮೂಲೆ''ಯಲ್ಲಿ ಇಂದಿಗೂ ಚೊಂಬು ನೀರು ತಪ್ಪಿಲ್ಲ. ಅಲ್ಲಿ ಮುಸುರೆ ಪಾತ್ರೆಗಳನ್ನು ತೊಳೆಯುವಾಗಿಲ್ಲ. ಹಾಗಾಗಿ, ಮನೆಗೆಲಸದವಳಿಗೆ ದಿನಾ ಬೀಳುವ ಪಾತ್ರೆಗಳು ಹೆಚ್ಚಾಗುತ್ತಿವೆ. ಅವಳು "ಪಾತ್ರೆಗಳು ಜಾಸ್ತಿಯಾಗುತ್ತಿವೆ. ಸಂಬಳ ಜಾಸ್ತಿ ಕೊಡಿ'' ಎಂದು ರಚ್ಚೆ ಹಿಡಿದಿದ್ದಾಳೆ.
*********
ಬಣ್ಣದ ನಾಚಿಕೆ

ಅಂದು ನನ್ನೊಳಗೆ ಮೊಗ್ಗು ಮಲ್ಲಿಗೆ ಬಿರಿದ ಖುಷಿ. ಅಲ್ಲಿಯವರೆಗೆ ನಾಚಿಕೆ ಏನೂಂತ ಗೊತ್ತಿರಲಿಲ್ಲ. ಆದರೆ, ಅಂದು ಮಾತ್ರ ಸುಮ್ಮ-ಸುಮ್ಮನೆ ನಾಚಿಕೊಂಡಿದ್ದೆ. ಕಾರಣಗಳನ್ನು ಕೇಳಿದರೆ ಉತ್ತರ "ಗೊತ್ತಿಲ್ಲ''. ಆದರೆ ಮಾತು, ಮಾತಿಗೂ ಕೆನ್ನೆಯಲ್ಲಿ ...ಸೂರ್ಯೋದಯವಾಗುತ್ತಿತ್ತು,
ಮೈಯಲ್ಲಿ ಅದೇನೋ ಪುಳಕ... ಹೆಣ್ತನ ನನ್ನೊಳಗೆ ಹಡೆದಂತೆ. ತಲೆಯೊಳಗೆ ಕದ್ದು ಕೇಳಿದ ಸೀತಕ್ಕನ ಮಗಳು ದೊಡ್ಡವಳಾದ ಕತೆ...
ಎಲ್ಲವೂ ಸೇರಿ ಪಾದವನ್ನೇ ದಿಟ್ಟಿಸುತ್ತಿದ್ದ ಕಣ್ಣುಗಳಲ್ಲಿ ನಾಚಿಕೆ ಬಣ್ಣ ಪಡೆದಿತ್ತು...ಸುಮ್ಮನೆ ನಾಚಿಕೆ...ಕಾರಣಗಳೇ ಇಲ್ಲದ ನಾಚಿಕೆ.
ಅಂದು ಅಮ್ಮ ಉದ್ದ ಜಡೆ ಹಾಕಿ ಮಲ್ಲಿಗೆ, ಕೆಂಗುಲಾಬಿ ಮುಡಿಸಿದ್ದಳು. ಜಡೆ ಕೆನ್ನೆಬದಿಯಿಂದ ಕೆಳಗಿಳಿದಿತ್ತು...ಜಡೆಯ ತುದಿಯಲ್ಲಿ ಆಡುವ ನನ್ನ ಕಿರುಬೆರಳುಗಳಿಗೂ ನಾಚಿಕೆಯ ಹಂಗು. ಥತ್, ಬೆರಳನ್ನೂ ಬಿಡಲಿಲ್ಲ ನಾಚಿಕೆ! ವಾರದ ನಂತರ ಶಾಲೆಗೆ ಹೋಗಿದ್ದೆ. ಅಮ್ಮ ಕರೆದುಕೊಂಡು ಹೋಗಿ ಬಿಟ್ಟುಬಂದಿದ್ದಳು. "ಏಕೆ ರಜೆ'' ಎನ್ನುವುದಕ್ಕೆ ಅಮ್ಮನೇ ಹೆಡ್ ಮಾಸ್ತರ್ ಗೆ ತಿಳಿಸಿದ್ದಳು. ಆದರೆ, ಮುಡಿತುಂಬಾ ಮುಡಿದ ಘಮ್ಮನೆನ್ನುವ ಮಲ್ಲಿಗೆ ನೋಡಿ ಮೇಷ್ಟ್ರು ತರಗತಿಯಲ್ಲಿ ಕಿಸಕ್ಕನೆ ನಕ್ಕಾಗ ನನ್ನ ಕೆನ್ನೆಯಲ್ಲಿ ಹೋಳಿಯ ರಂಗಿನಾಟ!...ಥತ್...ಹಾಳು ನಾಚಿಕೆ...ಇಲ್ಲಿಯವರೆಗೆ ಇಲ್ಲದ್ದು ಈಗ್ಯಾಕೆ ಬಂತು? ಸಣ್ಣದೊಂದು ಹುಸಿಮುನಿಸು ನಾಚಿಕೆ ಮೇಲೆ!
ನಾಚಿಕೆ...ನಾಚಿಕೆ...ನಾಚಿಕೆ..ನನ್ನ ನಾನೇ ಮುಟ್ಟಿ ನೋಡಿಕೊಂಡು ಖುಷಿಪಡವಾಗಲೂ ಸುಮ್ಮ-ಸುಮ್ಮನೆ ನಾಚಿಕೆ."ನೀನು ದೊಡ್ಡವಳಾಗಿದ್ದೀಯಾ'' ಶಾಲೆಗೆ ಹೊರಡುವಾಗ ಅಜ್ಹಿಯ ಹಿತನುಡಿ ಕೇಳಿದಾಗಲೂ ನನ್ನೊಳಗೊಂದು ಕಿರುನಾಚಿಕೆ. ಬೇಡ, ಬೇಡ ಎಂದರೂ ನನ್ನ ಬಳಿ ಸರಿದಿತ್ತು ನಾಚಿಕೆ. ನನ್ನ ಕಣ್ಣಲ್ಲಿ, ಕಣ್ಣುರೆಪ್ಪೆಯಲ್ಲಿ, ನಗೆಮಾತಿನಲ್ಲಿ, ಅಂಗೈ&ಪಾದಗಳ ಬೆರಳ ತುದಿಯಲ್ಲಿ, ಕೆನ್ನೆಯಲ್ಲಿ...ಎಲ್ಲಾ ಕಡೆಯೂ ನಾಚಿಕೆಯ ಚಿತ್ತಾರ.

********
ನಾಲ್ಕನೇ ಪುಟದ ಭವಿಷ್ಯ
ಬೆಳಿಗ್ಗೆದ್ದ ತಕ್ಷಣ ಅಮ್ಮಂಗೆ ಪತ್ರಿಕೆ ಓದೋ ಅಭ್ಯಾಸ. ನನಗಿಂತ ಮೊದಲೇ ಏಳುವ ಅಮ್ಮ ಮೊದಲು ಹೊಸಿಲು ಗುಡಿಸಿ ರಂಗೋಲಿ ಹಾಕಿ ನಮ್ಮನೆಗೆ ಬರುವ ಪತ್ರಿಕೆಯ ನಾಲ್ಕನೇ ಪುಟವನ್ನು ತೆರೆಯುವಳು!. ಅಲ್ಲಿ ನೋಡುವುದು ದಿನಭವಿಷ್ಯ. ನಾವು ಎದ್ದ ತಕ್ಷಣ ಭವಿಷ್ಯವನ್ನು ಜ್ಯೋತಿಷಿಯಂತೆ ಬಡಬಡ ಎಂದು ಹೇಳೋಳು. ಒಂದು ದಿನ ನನ್ನವನ ಭವಿಷ್ಯ ಹೀಗಿತ್ತು.
"ಈ ದಿನವನ್ನು ನೀವು ಸಂತೋಷವಾಗಿ ಕಳೆಯಲಿದ್ದೀರಿ. ಮನೆಯಲ್ಲಿ ಎಲ್ಲರಿಗೂ ಶುಭಸುದ್ದಿ ನೀಡುವಿರಿ. ನಿಮ್ಮ ಬದುಕಿನಲ್ಲಿ ಹೊಸ ವ್ಯಕ್ತಿಯೊಬ್ಬರ ಪ್ರವೇಶವಾಗಲಿದೆ...'' ಸೋಫಾ ಮೇಲೆ ಕುಳಿತ ನನ್ನವನ ಮುಖದಲ್ಲಿ ಕಳ್ಳನಗು. ಯಾಕೋ ಅಮ್ಮ ಓದುವ ಧಾಟಿ ಕೇಳಿ ನನ್ನೆದೆ ಢವಢವ. ಅಮ್ಮನ ಮುಖದಲ್ಲಿ ಸಂತೋಷದ ಹೊಂಬೆಳಕು, ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟು ಖುಷಿ.
ಸ್ವಲ್ಪವೂ ನಗದ ನನ್ನ ನೋಡಿ ಅಮ್ಮನಿಗೆ ಅಚ್ಚರಿ. "ಯಾಕಮ್ಮಾ, ಒಳ್ಳೆಯ ಭವಿಷ್ಯ ಅಲ್ವೇನೇ? ಒಳ್ಳೆ ಬೆಪ್ಪು ತಕ್ಕಡಿ ತರ ನಿಂತಿದ್ದಿ. ಹೊಸ ವ್ಯಕ್ತಿಯ ಪ್ರವೇಶ ಅಂದ್ರೆ ನಮ್ಮನೆಗೆ ಹೊಸ ಕಂದಮ್ಮ ಬರುತ್ತೆ ಅಂತ. ಪೆದ್ದಿ ಕಣೇ ನೀನು'' ಎಂದಳು. ನನ್ನ ಸಂತೈಸುತ್ತಾ ನನ್ನವನಂದ
"ನಿನ್ ಬಿಟ್ಟು ಯಾವ ಹುಡುಗಿನೂ ಕಣ್ಣೆತ್ತಿ ನೋಡದವನು ನಿನ್ ಗಂಡ ಎಂದು ಹೆಮ್ಮೆ ಪಡು''. ಅಮ್ಮನೆಂದಳು "ಈ ವಯಸ್ಸಲ್ಲಿ ನಾನು ಟ್ಯೂಬ್ ಲೈಟ್. ಈ ಹುಡುಗ್ರ ಯೋಚನೆಗಳೇ ಅರ್ಥವಾಗೋಲ್ಲ''.

Friday, March 29, 2013

ಭಾವಕ್ಕೆ ದಕ್ಕಿದ ಪ್ರಸಂಗಗಳು


ಓಲೆ ಪ್ರೀತಿ
ಕೆ.ಆರ್. ಮಾರ್ಕೆಟ್ ನಿಂದ ಬಸ್ ಹತ್ತಿದೆ. ಹುಡುಗಿಯೊಬ್ಬಳು ಪಕ್ಕದಲ್ಲೇ ಬಂದು ಕುಳಿತಳು. ಒಂದೇ ಸಮನೆ ನನ್ನ ಕಿವಿಗಳನ್ನು ನೋಡುತ್ತಾ ಕುಳಿತಿದ್ದಳು.
ಅವಳು ಇಳಿಯುವ ಮೊದಲು "ಮೇಡಂ ನಿಮ್ಮ ಕಿವಿಯೋಲೆ ತುಂಬಾ ಚೆಂದ ಇದೆ'' ಅಂದಳು. "ಥ್ಯಾಂಕ್ಸ್'' ಅಂದೆ.
"ಏನು ಓದುತ್ತಿದ್ದೀಯಾ?'' ಕೇಳಿದೆ.
"ಪ್ರಥಮ ಪಿಯುಸಿ''
"ಯಾವ ಸ್ಕೂಲ್''
"ಇಲ್ಲೆ ಹತ್ತಿರದ ಕಾಲೇಜು''
"ನಿನ್ನ ಹೆಸರು?''
"ಆಯೆಷಾ'' ಎಂದು ನಕ್ಕಳು.
ಮತ್ತೆ ಅವಳಿಂದಲೇ ಪ್ರಶ್ನೆ "ನೀವು ಎಲ್ಲಿ ತಕ್ಕೊಂಡೀರಿ ಓಲೆನಾ?''
''ಮಲ್ಲೇಶ್ವರಂ ಫುಟ್ ಪಾತ್''
"ಎಷ್ಟು ರೂಪಾಯಿ?''
"ನಲವತ್ತು''
""ವಾಹ್, ಕಡಿಮೆ ರೇಟು. ಬಹಳ ಚೆನ್ನಾಗಿದೆ. ತುಂಬಾ ಚೆಂದ ಕಾಣಿಸುತ್ತೆ'' ಎಂದು ನಗುತ್ತಾ ಇಳಿದುಹೋದಳು. ನನಗೂ ಅವಳ ಕಿವಿಯೋಲೆ ಹೇಗಿದೆ ಎನ್ನುವ ತವಕ...ಆದರೆ, ಅದು ಕಾಣಿಸಲೇ ಇಲ್ಲ. ಏಕೆಂದರೆ,ಅವಳು ಬುರ್ಖಾ ಧರಿಸಿದ್ದಳು!.
***************
ಅವನ ಬೈಟು ಕಾಫಿ
ರಾತ್ರಿ ಎಂಟರ ಹೊತ್ತು. ಅಂದು ನಮಗಿಬ್ಬರಿಗೆ ಜಗಳವಾಗಿತ್ತು. ಇಬ್ಬರೂ ಬಿಡಲಿಲ್ಲ. ಮಾತಿಗೆ-ಮಾತು. ಒಂದು ರೀತಿಯಲ್ಲಿ ಕುರುಕ್ಷೇತ್ರ. ಕೆನ್ನೆ ಮೇಲೆ ಬಿತ್ತು ಅವನ ಕೈ. "ನಮ್ಮಮ್ಮನೂ ನಂಗೆ ಹೊಡೆದಿಲ್ಲ. ನೀನ್ಯಾಕೆ ಕೆನ್ನೆಗೆ ಹೊಡೆದೆ?' ಎಂದು ಅಳುತ್ತಾ ಕೇಳಿದೆ, "ಕೆನ್ನೆಗಲ್ಲದೆ ಇನ್ನೆಲ್ಲಿ ಹೊಡೀಬೇಕು?' ಎಂದ ಆತ. ನನ್ನ ಸಿಟ್ಟು ಇನ್ನಷ್ಟು ಹೆಚ್ಚಿತು. "ನೋಡು ನಿಂಗೆ ಡಿವೋರ್ಸ್ ಕೊಟ್ಟುಬಿಡ್ತೀನಿ...ಬೇಡ ನೀನು ನಂಗೆ'' ಎಂದೆ. ಒಂದರ್ಧ ಗಂಟೆಯಲ್ಲಿ ಹತ್ತು-ಹದಿನೈದು ಸಲ ಡಿವೋರ್ಸ್ ರಿಪೀಟ್ ಆಯ್ತು. ಅದಕ್ಕೆ ಆತ ಹೇಳಿದ. "ಅರೆರೆ, ಈಗ ರಾತ್ರಿ. ಲಾಯರ್ ಗಳು ಇರಲ್ಲಮ್ಮ. ನಾಳೆ ಬೆಳಿಗ್ಗೆ ಡಿವೋರ್ಸ್ ಕೊಡುವಿಯಂತೆ. ಈಗ ನಿದ್ದೆ ಮಾಡು'' ಎಂದ. ಅವನ ಮಾತು ಕೇಳಿ ನಗು ಬಂದರೂ ತೋರಿಸಿಕೊಳ್ಳದೆ, ಹೊದಿಕೆ ಹೊದ್ದು ನಿದ್ದೆಗೆ ಜಾರಿದೆ. ಬೆಳಿಗ್ಗೆ ನಾನು ಎದ್ದಾಗ ಆತ ನನ್ನೆದುರು ಕಾಫಿ ಹಿಡಿದು ನಿಂತಿದ್ದ. "ಡಿವೋರ್ಸ್ ಕೊಡ್ತಿಯಲ್ಲ...ಈವರೆಗೆ ನಿಂಗೆ ಕಾಫಿನೂ ಮಾಡಿಕೊಟ್ಟಿಲ್ಲ. ಅದ್ಕೆ ಇವತ್ತು ಕಾಫಿ ಮಾಡಿದ್ದೀನಿ...ಪ್ಲೀಸ್ ಬೈ ಟು ಕಾಫಿ'' ಎಂದಾಗ ನಗುತ್ತಲೇ ಅಡುಗೆಮನೆಗೆ ಓಡಿದೆ!
***************
ಗಾಳಿಮರದ ವಿಳಾಸ ನಾಪತ್ತೆ
ಆ ಗಾಳಿಮರ ನನಗೆ ಭಾಳ ಇಷ್ಟ. ಏಕಾಂತ ಕಲಿಸಿದ್ದು ಅದೇ ಗಾಳಿಮರ, ಬರೆಯಲು ಕಲಿಸಿದ್ದು ಅದೇ ಗಾಳಿಮರ, ಖುಷಿ-ದುಃಖಗಳಿಗೆ ಸಾಥ್ ನೀಡಿದ್ದು ಅದೇ ಗಾಳಿಮರ. ಬರೋಬ್ಬರಿ ಐದು ವರ್ಷಗಳ ಕಾಲ ಗಾಳಿಮರದೊಂದಿಗೆ ನಂಟು. ಮುಂಜಾವಿನ ಹೊತ್ತು ಬೇಗ ಎದ್ದು ಓದಲು ಕುಳಿತುಕೊಳ್ಳುವುದು ಅದೇ ಗಾಳಿಮರದಡಿ, ಸಂಜೆ ಕಾಲೇಜಿನಿಂದ ಬಂದ ತಕ್ಷಣ ಮತ್ತೆ ಪೆನ್ನು, ಪುಸ್ತಕಗಳ ಜೊತೆ ಕೂರುವುದು ಅದೇ ಗಾಳಿಮರದಡಿ. ಅದೆಷ್ಟೋ ಕವನಗಳು, ಕತೆಗಳು, ಪ್ರೇಮಪತ್ರಗಳು ,..ಎಲ್ಲವನ್ನೂ ಗೀಚಿದ್ದು ಅದೇ ಗಾಳಿಮರದಡಿ. ಮನೆಗೆ, ಸ್ನೇಹಿತರಿಗೆ ಎಲ್ಲರಿಗೂ ಪತ್ರ ಬರೆದಿದ್ದು ಅದೇ ಗಾಳಿಮರದಡಿ. ಅದಿರಲಿ, ಐದು ವರ್ಷಗಳ ಕಾಲ ವರ್ಷಕ್ಕೆರಡು ಬಾರಿ ನಡೆದ ಮಹಾ ಪರೀಕ್ಷೆಗಳಿಗೆ ಓದಿ ಓದಿ ಕಲಿತಿದ್ದು ಅದೇ ಗಾಳಿಮರದಡಿಯಲ್ಲಿ. ಮೊದಲ ಬಾರಿ ಆ ಮರದಡಿಯಲ್ಲಿ ಕುಳಿತು ನಿಟ್ಟುಸಿರುಬಿಟ್ಟಾಗ ಅದಿನ್ನೂ ಸಣ್ಣ ಗಿಡವಾಗಿದ್ದು, ಐದು ವರ್ಷಗಳ ಬಳಿಕ ಅದು ಬಲಿತು ಮರವಾಗಿತ್ತು, ವಿಶಾಲವಾಗಿ ಹರಡಿತ್ತು. ನನ್ನೊಬ್ಬಳಿಗೆ ಮಾತ್ರ ಹಲವಾರು ಮಂದಿಗೆ ನೆರಳು ನೀಡುತ್ತಿತ್ತು. ಮೊನ್ನೆ ಮೊನ್ನೆ ಮತ್ತೆ ಗಾಳಿಮರ ನೋಡಲು ಹೋಗಿದ್ದೆ...ಬರೋಬ್ಬರಿ ಏಳು ವರ್ಷಗಳ ಬಳಿಕ. ಆ ನನ್ನ ಪ್ರೀತಿಯ ಗಾಳಿಮರದ ವಿಳಾಸವೇ ಇರಲಿಲ್ಲ. ಅಲ್ಲೊಂದು ಅಂಗಡಿ ಇತ್ತು. ಅಲ್ಲಿ ಬಂದು ಬೀಡಿ-ಸಿಗರೇಟು ಸೇದುವ, ತರಕಾರಿ, ಅಕ್ಕಿ, ಸಾಮಾನು ಕೊಳ್ಳುವ ಮಂದಿ...ಯಾರಿಗೂ ಗೊತ್ತಿಲ್ಲ ಆ ಗಾಳಿಮರದ ವಿಳಾಸ!

Monday, March 25, 2013

ಗೌಡ್ರ ಬೋರ್ ವೆಲ್ ಮತ್ತು ನಮ್ಮನೆ ಬಾವಿ


ಗೌಡ್ರ ಮನೆಗೆ ಬೋರ್ ವೆಲ್ ಬಂತಂತೆ, ಇನ್ನೇನೋ ಬೇಸಿಗೆ ಬಿರುಸಾಗಿದೆ. ನಮ್ಮ ಬಾವೀಲಿ ನೀರು ಬತ್ತುತ್ತಾನೇ ಇರ್ಲಿಲ್ಲ. ಇನ್ನು ಈ ಮಂದಿ ಬೋರ್ ವೆಲ್ ಹಾಕಿಸಿದ್ರೆ ಅದ್ಯಾರ ಮನೆ ಮುಂದೆ ಬಿಂದಿಗೆ ಹಿಡಿಬೇಕೋ...ಅಮ್ಮ ಗೊಣಗುತ್ತಾ ಜಗುಲಿ ಮೇಲೆ ಕುಳಿತಿದ್ದಳು. ನನಗಿನ್ನೂ ಚಿಕ್ಕ ವಯಸ್ಸು. ಬೋರ್ ವೆಲ್ ಬರುವುದಕ್ಕೂ, ನಮ್ಮನೆ ಬಾವಿ ಬತ್ತೋದಕ್ಕೂ ಅದೆಂಥ ಸಂಬಂಧ ಉಂಟು? ಎಂದು ಕೇಳಿದೆ. "ಉಂಟು..ಸಂಬಂಧ... ನೀರು ಸಿಗೋತನಕ ಕೊರೀತಾರೆ..ಅಂತರ್ಜಲ ಬತ್ತಿಹೋಗುತ್ತೆ. ಆಗ ಸುತ್ತಮುತ್ತಲ ಬಾವಿಗಳ ನೀರು ಬತ್ತುತ್ತೆ' ಎಂದು ಆಕ್ರೋಶದಿಂದ ಹೇಳುತ್ತಿದ್ದಳು ಅಮ್ಮ. ಅಮ್ಮ ಹುಟ್ಟಿದಾಗಿನಿಂದ ನಮ್ಮನೆ ಬಾವಿ ಬತ್ತುವುದನ್ನೇ ನೋಡಿರಲಿಲ್ಲವಂತೆ. ಬರೀ ಆರು ಅಡಿಯಲ್ಲಿ ನೀರು. ವರ್ಷದ ಮೂರು ಕಾಲದಲ್ಲಿಯೂ ನೀರಿಗೆ ಬರವಿಲ್ಲ. ಬೇಸಿಗೆಯಲ್ಲಿ ಕೂಡ ಕುಡಿಯಲು, ದನ-ಕರುಗಳಿಗೆ, ತೆಂಗು-ಕಂಗುಗಳಿಗೆ ನೀರಿನ ಕೊರತೆ ಇರಲಿಲ್ಲ.

ದಿಢೀರನೆ ಗೌಡ್ರ ಮನೆಗೆ ಬೋರ್ ವೆಲ್ ಬಂದಿದ್ದು ಅಮ್ಮನ ತಲೆ ಚಿಟ್ಟು ಹಿಡಿಸಿತು. "ಹಾಳಾದವು...ಯಾರ ಹೊಟ್ಟೆಗೋ ಕನ್ನ ಹಾಕ್ತಾರೆ'' ಅಂತ ಬೈತಾನೆ ಇದ್ಳು. ಬೋರ್ ವೆಲ್ ಬಂದ ದಿನ ಅಮ್ಮ ನಿದ್ದೆ ಮಾಡಿರಲಿಲ್ಲ. ಗೌಡ್ರ ಬಳಿ ಹೋಗಿ "ನೀವು ಬೋರ್ ವೆಲ್ ಹಾಕಿದ್ರೆ ನಮ್ಮ ಬಾವಿ ಬತ್ತುತ್ತೆ'' ಎಂದು ಹೇಳಕ್ಕಾಗುತ್ತೆ? ಅದೂ ಇಲ್ಲ. ಅಮ್ಮಂಗೆ ಹೇಳಿದೆ "ನಾವು ಇನ್ನೊಂದು ಬಾವಿ ತೋಡೋಣ. ಆಗ ಎರಡು ಬಾವಿಗಳಲ್ಲಿ ನೀರಿರುತ್ತೆ ಅಲ್ವಾ?'' . ಅಮ್ಮಂಗೆ ಸಿಟ್ಟು ಬಂದು "ಸುಮ್ನಿರು..ಮಧ್ಯೆ ಬಾಯಿ ಹಾಕ್ಬೇಡ. ಎಲ್ಲಿ ತೋಡಿದ್ರೂ ಒಂದೇ...ಆದ್ರೆ ರಾಮಣ್ಣ ಜೋಯಿಸರು ಈಗಿರುವ ಬಾವಿ ನೀರನ್ನೇ ಕುಡಿಬೇಕು...'' ಎಂದು ಅದು-ಇದು, ದಿಕ್ಕು-ದಿಸೆ ಅಂತ ಮಾತಾಡತೊಡಗಿದಳು. ಅಮ್ಮನ ಸಾತ್ವಿಕ ಸಿಟ್ಟು ನನಗಾಗ ಅರ್ಥವಾಗಲಿಲ್ಲ.


ಮರುದಿನ ಬೋರ್ ವೆಲ್ ತೋಡುವ ಯಂತ್ರಗಳು ಗೌಡ್ರ ತೋಟಕ್ಕೆ ಬಂದವು. ನಮ್ಮೂರಿಗೆ ಅದೇ ಮೊದಲ ಬೋರ್ ವೆಲ್. ಹಾಗಾಗಿ, ಸುತ್ತಮುತ್ತಲಿನ ಎಲ್ಲರೂ ಬೋರ್ ವೆಲ್ ನೋಡಲು ಬಂದರು. ಮಕ್ಕಳಂತೂ ರಚ್ಚೆ ಹಿಡಿದು ಶಾಲೆಗೆ ಚಕ್ಕರ್ ಹಾಕಿ ಬೋರ್ ವೆಲ್ ತೋಡುವುದನ್ನು ನೋಡಲು ಬಂದಿದ್ದರು. ನಾನೂ ಅಮ್ಮನ ಸಿಟ್ಟನ್ನೂ ಕೇರ್ ಮಾಡದೆ ಗೌಡ್ರ ಮನೆಯತ್ತ ಓಡಿದೆ. ಏನು ಸೌಂಡ್...ಗುರ್...ಬುರ್...ಬೆಳಿಗ್ಗೆಯಿಂದ ಸಂಜೆ ತನಕ ಕೊರೆತಿದ್ದೇ ಕೊರೆದಿದ್ದು...ಒಂದೇ ಸಮನೆ ಅದೆಷ್ಟೋ ಎತ್ತರಕ್ಕೆ ನೀರಿನ ಬುಗ್ಗೆಗಳು ಚಿಮ್ಮತೊಡಗಿದವು. ಗೌಡ್ರ ಮುಖ ಖುಷಿಯಿಂದ ತಾವರೆಯಂತೆ ಅರಳುತ್ತಿತ್ತು.


ನೀರಿನ ಚಿಮ್ಮುವಿನಾಟ ನೋಡಿ ಜಿಂಕೆಯಂತೆ ನೆಗೆಯುತ್ತಾ ಮನೆಗೆ ಬಂದೆ. ಅಮ್ಮನ ಕಣ್ಣುಗಳು ಕೆಂಪಾಗಿ, ಮುಖ ಬಾಡಿಹೋಗಿತ್ತು. ರಾತ್ರಿ ಅನ್ನಕ್ಕೆ ಅಕ್ಕಿ ಬೀಸುತ್ತಾ ಕುಳಿತಿದ್ದಳು. "ಅಮ್ಮಾ ಮಾತಾಡು..'' ಎಂದೆ. "ಬೇಸಿಗೆ, ನಮ್ಮನೆ ಬಾವಿ ಬತ್ತಿದ್ರೆ ಯಾರ ಮನೆಗೆ ಹೋಗಿ ನೀರಿಗಾಗಿ ಬೇಡಲಿ'' ಎನ್ನುತ್ತಾ ದೇವರ ಮನೆಗೆ ಹೋಗಿ ಒಂದು ರೂಪಾಯಿ ನಾಣ್ಯವನ್ನು ಮನೆದೇವರು ಕಲ್ಲುರ್ಟಿಗೆ ಹರಕೆ ಇಟ್ಟು "ಬತ್ತದಿರಲಿ ಬಾವಿ'' ಎಂದಳು.
ಅಮ್ಮ ನಿತ್ಯ ದೀಪ ಹಚ್ಚುವಾಗ ನೀರಿಗಾಗಿ ಬೇಡೋದನ್ನು ಮರೆಯುತ್ತಿರಲಿಲ್ಲ. ಊರ ಸುತ್ತಮುತ್ತ ಇನ್ನೂ ಒಂದೆರಡು ಬೋರ್ ವೆಲ್ ಗಳು ಬಂದವು. ನಮ್ಮನೆ ಬಾವಿ ಬತ್ತತೊಡಗಿತು. ಬೇಸಿಗೆ ಬಂದ ತಕ್ಷಣ ಅಮ್ಮ "ಯಾರ ಮುಂದೆಯೂ ಬಿಂದಿಗೆ ಹಿಡಿದು ಬೇಡಲಾರೆ'' ಎಂದು "ಬಾವಿನ ಇನ್ನಷ್ಟು ಅಗೆಯುವ' ಕೆಲಸ ಮಾಡುತ್ತಾಳೆ...ಈಗಲೂ ಮಾಡುತ್ತಳೇ ಇದ್ದಾಳೆ...ಬರೀ "ಕುಡಿಯುವ ನೀರಿಗಾಗಿ''.


ಬೆಂಗಳೂರಿಂದ ಫೋನಾಯಿಸಿ ಕೇಳಿದ್ರೆ ಹೇಳುತ್ತಾಳೆ "ನಿಮ್ಮೂರಲ್ಲಿ ನೀರು ಉಂಟಾ? ನೋಡು ಮೊನ್ನೆ ಮೊನ್ನೆ ಬಾವಿ ಹೂಳೆತ್ತುವ ಕೆಲಸ ಮಾಡಿಸಿದೆ. ಅರ್ಧ ಅಡಿ ಹೆಚ್ಚು ಗುಂಡಿ ಮಾಡಲಾಗಿದೆ. ಪರ್ವಾಗಿಲ್ಲ ಕುಡಿಯಲು ನೀರು ಸಿಗುತ್ತದೆ. ಆದರೆ, ದನಕರುಗಳಿಗೆ ನೀರು ಸಿಗಲ್ಲ ಎಂದು ಸಾಕುವುದನ್ನೇ ಬಿಟ್ಟಿದ್ದೇನೆ. ತೆಂಗು, ಬಾಳೆ, ಅಡಿಕೆ ಗಿಡಗಳು ಮಾತ್ರ ಬೇಸಿಗೆಯಲ್ಲಿ ಬಾಡಿಹೋಗುತ್ತಿರುವುದನ್ನು ನೋಡಿ ಹೊಟ್ಟೆ ಉರಿಯುತ್ತಿದೆ. ಮನೆದೇವ್ರ ಕೃಪೆ..ಕುಡಿಯೋಕ್ಕಾದ್ರೂ ನೀರು ಸಿಗುತ್ತೆ'' ಎನ್ನುತ್ತಾಳೆ.

Thursday, March 21, 2013

ಅಮೆರಿಕನ್ ಒಬ್ಬನ ಕನಸಿನ ಕಥೆ

ಬೆಳಿಗ್ಗೆ ಹನ್ನೊಂದರ ಸಮಯ. ಪ್ರತಿನಿತ್ಯ ಬರುವ ಬಸ್ ಅಂದು ನಾನು ಬರುವ ಹೊತ್ತಿಗೆ ಹೋಗಿಬಿಟ್ಟಿತು. ಬಸ್ ನಿಲ್ದಾಣದಲ್ಲಿ ಕಾಯುತ್ತಾ ಕುಳಿತಿದ್ದೆ. ಐವತ್ತು ದಾಟಿದ ಮನುಷ್ಯ ಪಕ್ಕದಲ್ಲೇ ಬಂದು ಕುಳಿತ. ತಲೆಕೂದಲು ಬೆಳ್ಳಿಯಂತೆ ಫಳಫಳ ಎಂದು ಹೊಳೆಯುತ್ತಿತ್ತು. ನೋಡಿದ ತಕ್ಷಣ  ಈ ಅಸಾಮಿ ನಮ್ಮ ದೇಶದನಲ್ಲ ಎಂದು ಗೊತ್ತಾಗುತ್ತಿತ್ತು.

ನಾನು ಸುಮ್ಮನಿದ್ದರೂ ಆತನೇ ಮಾತಿಗೆಳೆದ. "ನಾನು ಶಿವಾಜಿನಗರಕ್ಕೆ ಹೋಗಬೇಕು. ಯಾವ ಬಸ್‌ನಲ್ಲಿ ಹೋಗಬಹುದು?'' ಎಂದು ಇಂಗ್ಲಿಷ್‌ನಲ್ಲಿ ಕೇಳಿದ. "ನೀವು ಎರಡು ಬಸ್ ಬದಲಾಯಿಸಬೇಕು. ಇಲ್ಲಿಂದ ನೇರವಾಗಿ ಅಲ್ಲಿಗೆ ಬಸ್ ಇಲ್ಲ'' ಎಂದು
ಅವನಿಗೆ ಬಸ್‌ಗಳ ನಂಬರ್ ಕೂಡ ಕೊಟ್ಟೆ. ಏಳೆಂಟು ಬಸ್ ಗಳ ನಂಬರನ್ನು ಪುಟ್ಟ ಡೈರಿಯಲ್ಲಿ ನೀಟಾಗಿ ಬರೆದಿಟ್ಟುಕೊಂಡ. ಡೈರಿಯನ್ನು ಜೇಬಿಗಿಳಿಸಿಕೊಂಡು "ಥ್ಯಾಂಕ್ಸ್'' ಅಂದು "ಭಾರತೀಯರು ಎಲ್ಲೇ ಹೋದರೂ ಸುಳ್ಳು ಹೇಳಲ್ಲ, ಹೆಮ್ಮೆಯಾಗುತ್ತದೆ'' ಎಂದು ಖುಷಿಯಿಂದ ಹೇಳಿದ.  ಜೊತೆಗೆ ಒಂದು ದಿನ ಮುಂಚೆ ಆತ ದೇವನಹಳ್ಳಿ ವಿಮಾನ ನಿಲ್ದಾಣದಿಂದ ಬರುವಾಗ ದಾರಿ ಗೊತ್ತಾಗದೆ ಪರದಾಡಿದ್ದು, ಆಟೋದವನು ಮಾಡಿದ ಸಹಾಯವನ್ನೂ ನೆನಪಿಸಿಕೊಂಡ.

‘ನೀನು ಭಾರತಕ್ಕೆ ಏಕೆ ಭೇಟಿ ಮಾಡಿರುವೆ?' ಎಂದು ಕೇಳಿದೆ. ನನ್ನ ಪ್ರಶ್ನೆ ಕೊನೆಯಾಗುವ ಮೊದಲೇ ಆತ ಉತ್ತರ ಹೇಳಲು ಶುರುಮಾಡಿದ್ದ. "ನನ್ನ ಹೆಸರು ಸ್ಯಾಮ್.  ಯುಎಸ್‌ಎನಿಂದ ಬಂದಿದ್ದೇನೆ. ಭಾರತಕ್ಕೆ ಇದೇ ಮೊದಲು ಬಂದಿರುವೆ. ಭಾರತ ಸಾಂಸ್ಕೃತಿಕವಾಗಿ ಬಹಳಷ್ಟು ವೈವಿಧ್ಯ ಇರುವ ದೇಶ ಎಂದು ಕೇಳಿದ್ದೆ. ಇತ್ತೀಚೆಗೆ ಒಂದು ಬಾರಿ ಭಾರತದ ಕನಸು ಬಿತ್ತು. ಅದರಲ್ಲೂ ಬೆಂಗಳೂರು ನಗರಕ್ಕೆ ನಾನು ಬಂದಿಳಿದ ಹಾಗೆ ಕನಸು ಬಿತ್ತು. ಹಾಗಾಗಿ, ನನಗೆ ಇಲ್ಲಿಗೆ ಬಂದು ನೋಡಲೇಬೇಕು ಎಂದು ಡಿಸೈಡ್ ಮಾಡಿದೆ'' ಎಂದು ಬಹಳ ಖುಷಿಯಿಂದ ನಗುನಗುತ್ತಲೇ ಹೇಳಿಕೊಂಡ. ನನಗೆ ಅಚ್ಚರಿಯಾಯಿತು. ಕೇವಲ ''ಒಂದು ಕನಸಿನಿಂದಾಗಿ'' ಆತ ಅದೆಷ್ಟೋ ಡಾಲರ್ ಖರ್ಚು ಮಾಡಿ ಭಾರತವನ್ನು ನೋಡಲು ಬಂದ!.  ನಾಳಿನ ಬಗ್ಗೆ ಯೋಚನೆ ಮಾಡದೆ ಈ ಕ್ಷಣದ ಜೀವನವನ್ನು ಖುಷಿಯಿಂದ ಕಳೆಯುವುದೆಂದರೆ ಇದೇನಾ ಅನಿಸಿತ್ತು. ಸಣ್ಣದೊಂದು ನಗುವಿನೊಂದಿಗೆ ಆತನಿಗೆ ಮನಸ್ಸಿನಲ್ಲೇ ಸಲಾಂ ಎಂದೆ

ಕದ್ದು ಕೇಳಿದ ದೆವ್ವದ ಕತೆಗಳು


ನಾನು ಮಗುವಾಗಿದ್ದಾಗ ನಮ್ಮದು ಅವಿಭಕ್ತ ಕುಟುಂಬ. ಒಂದೇ ಮನೆಯಲ್ಲಿ ಹತ್ತು-ಹದಿನೈದು ಮಂದಿ. ರಾತ್ರಿ ಹೊತ್ತು ದೊಡ್ಡೋರೆಲ್ಲ ಜೊತೆಗೆ ಕುಳಿತು ಊಟ ಮಾಡೋರು. ಮಕ್ಕಳಿಗೆಲ್ಲಾ ಬೇಗ ಊಟ ಹಾಕಿ ಮಲಗಿಸಿಬಿಡೋರು. ಊಟಕ್ಕೆ ಕುಳಿತಾಗ ಮತ್ತು ಊಟದ ಬಳಿಕ ಒಂದಷ್ಟು ಹೊತ್ತು "ಮಕ್ಕಳಿಗೆ ತಿಳಿಯಬಾರದ ವಿಷಯಗಳನ್ನು'' ದೊಡ್ಡೋರೆಲ್ಲ ಮಾತಾಡೋರು. ಆ ಲಿಸ್ಟ್ ನಲ್ಲಿ ದೆವ್ವದ ಕತೆಯೂ ಇತ್ತು. ಮಕ್ಕಳೆಲ್ಲಾ ಮಲಗಿದ ಮೇಲೆ ಅಜ್ಜಿ ಎಲ್ಲರಿಗೂ ಬಡಿಸಿ ದೆವ್ವದ ಕತೆ ಶುರುಮಾಡೋಳು. ನಾವೆಲ್ಲ ಮುಸುಕು ಹೊದ್ದು ಮಲಗುತ್ತಿದ್ದೇವು. ಆದರೆ, ನನಗೆ ನಿದ್ದೆಯೇ ಬರುತ್ತಿರಲಿಲ್ಲ. ಹೊದಿಕೆಯೊಳಗೆ ಕಣ್ಣುಬಿಟ್ಟುಕೊಂಡು ಹಾಗೇ ದೆವ್ವದ ಕತೆಗಳನ್ನು ಕೇಳುತ್ತಿದ್ದೆ. ಆದರೆ, ಹೆಚ್ಚಿನ ಸಮಯದಲ್ಲಿ ಈ ದೆವ್ವದ ಕತೆಗಳು ನನ್ನ ನಿದ್ದೆಯನ್ನು ಕಸಿದುಕೊಂಡಿದ್ದಂತೂ ನಿಜ. ಇದರಲ್ಲಿ ಆಯ್ದ ಮೂರು ಕತೆಗಳು ಇಲ್ಲಿವೆ.

********
ನಮ್ಮಜ್ಜ ತಾಳೆಮರದಿಂದ ಶೇಂದಿ ತೆಗೆಯುತ್ತಿದ್ದ. ಮುಂಜಾನೆಯಿಂದ ಸಂಜೆ ಐದರ ತನಕ ಅಜ್ಜನಿಗೆ ಈ ಕೆಲ್ಸ. ಪ್ರತಿದಿನ ರಜೆ ಹಾಕದೆ ನಿಯತ್ತಾಗಿ ದುಡಿಯೋನು. ಸಂಜೆ ಹೊತ್ತು. ಐದು ಗಂಟೆಗೆ ಸೊಂಟಕ್ಕೆ ಕತ್ತಿ ಕಟ್ಟಿಕೊಂಡು ಅಜ್ಜ ಹೊರಟಿದ್ದ. ಅಜ್ಜಿನೂ ಜೊತೆಗೆ ಹೊರಟಿದ್ಳಂತೆ. ಇನ್ನೇನೋ ಸೂರ್ಯ ಮುಳುಗುವ ಸಮಯ. ಕತ್ತಲಾಗುತ್ತಿತ್ತು...ಅಜ್ಜಿಯನ್ನ ತಾಳೆಮರದ ಕೆಳಗೆ ನಿಲ್ಸಿ ಅಜ್ಜ ಶೇಂದಿ ತೆಗೆಯೋಕೆ ಹತ್ತಿದ್ದ. ಅಜ್ಜಿ ಅಲ್ಲೇ ಪಕ್ಕದಲ್ಲಿದ್ದ ಗೇರು ಮರದ ಕೆಳಗಡೆ ಕುಳಿತಿದ್ದಳಂತೆ. ಎದುರುಗಡೆ ಅಸ್ಪಷ್ಟ ಆಕೃತಿ ಬಂದು ಮಾತಾಡಿಸಿದಂತೆ ಕೇಳಿಸಿತಂತೆ. ಜೊತೆಗೆ, ಜೋರಾಗಿ ಚಪ್ಪಾಳೆ ತಟ್ಟಿತ್ತಿತ್ತು. ಅಜ್ಜಿಗೆ ಗಾಬರಿಯಾಗಿ ಅಜ್ಜನ ಜೋರಾಗಿ ಕೂಗಿದ್ಳಂತೆ. ಅಜ್ಜ ಮರದ ತುದಿಯಿಂದಲೇ ಹೇಳಿದ್ರಂತೆ, " ನಿನಗೆ ಶೇಂದಿ ಕೊಡ್ತೀನಿ. ಸುಮ್ಮನಿದ್ದುಬಿಡು'' ಎಂದು. ಚಪ್ಪಾಳೆ ಸದ್ದು ನಿಂತಿತು. ಅಜ್ಜ ಕೆಳಗಿಳಿದು ಒಂದು ತೆಂಗಿನ ಚಿಪ್ಪಿನಲ್ಲಿ ಶೇಂದಿ ಇಟ್ಟುಬಿಟ್ಟು ಅಜ್ಜಿನ ಕರೆದುಕೊಂಡು ವಾಪಾಸ್ ಆದ್ತಂತೆ.

********
ಅಜ್ಜ ಒಂದು ದಿನ ನಮ್ಮನೆಗೆ ಬರುತ್ತಿದ್ದ. ಅಜ್ಜನಿಗೆ ಹಗಲು ಹೊತ್ತು ಶೇಂದಿ ತೆಗೆಯೋ ಕೆಲ್ಸ. ರಾತ್ರಿ ಹೊತ್ತು ನಮ್ಮನೆಯ ದನ-ಆಡುಗಳನ್ನು ನೋಡಿಕೊಳ್ಳಲು ನಮ್ಮನೆಗೆ ಬರೋನು. ನಮ್ಮಮ್ಮ 11 ಆಡುಗಳು ಮತ್ತು 3 ದನಗಳನ್ನು ಸಾಕಿದ್ದಳು. ಬೆಳಿಗೆದ್ದು ಅವುಗಳ ಕೆಲ್ಸ ಜಾಸ್ತಿ ಇರೋದ್ರಿಂದ ಅಜ್ಜ ರಾತ್ರಿ ನಮ್ಮನೆಗೆ ಬಂದುಬಿಡೋನು. ಒಂದು ದಿನ ಅಜ್ಜ ಬರುವಾಗ ತುಂಬಾ ರಾತ್ರಿಯಾಗಿತ್ತು.  ಸಂಜೆ ಹೊತ್ತಿನ ಹುಳಿ ಶೇಂದೀನ ಹೊಟ್ಟೆಗೇರಿಸಿಕೊಂಡು ಸ್ವಲ್ಪ ಟೈಟಾಗೇ ಅಜ್ಜ ರಾತ್ರಿ ಹೊತ್ತು ನಮ್ಮನೆಗೆ ಹೊರಟಿದ್ದ. ದಟ್ಟಕಾಡಿನ ನಡುವೆ ಕಾಲುದಾರಿ. ಬರೀ ಪಾದಗಳನ್ನು ಊರಲಷ್ಟೇ ಜಾಗ. ಸುತ್ತಮುತ್ತ ದೊಡ್ಡ ದೊಡ್ಡ ಮರಗಳು, ಎತ್ತರಕ್ಕೆ ಬೆಳೆದ ಹುಲ್ಲು-ಪೊದೆಗಳು. ಅಜ್ಜ ಬರುತ್ತಿದ್ಧಂತೆ ನಡುದಾರಿಯಲ್ಲಿ ಬೆಳ್ಳಿ ಕೂದಲ, ಬಿಳಿದಾದ ಗಡ್ಡವುಳ್ಳ, ಉದ್ದದ ಮನುಷ್ಯ ಒಬ್ರು ಸಿಕ್ಕಿದ್ರಂತೆ. ಬಿಳಿ ಅಂಗಿಯನ್ನು ಧರಿಸಿದ ಆತ ಅಜ್ಜನ ಜೊತೆ ಎಲ್ಲಿಗೆ ಹೋಗುತ್ತಿದ್ದೀರಿ ಎಂದೆಲ್ಲಾ ವಿಚಾರಿಸಿದಾಗ ಅಜ್ಜ ಕಾಡೊಳಗಿನ ದಾರಿಯಲ್ಲಿ ಒಬ್ಬನೇ ಹೋಗುತ್ತಿದ್ದೇನೆ...ಜೊತೆ ಸಿಕ್ಕಂತಾಯಿತು ಎಂದುಕೊಂಡರಂತೆ. ಅರ್ಧದಾರಿ ತನಕ ಬಂದ ಬಿಳಿ ಅಂಗಿಯ ಮನುಷ್ಯ ಹಿಂದೆ ತಿರುಗಿ ನೋಡಿದರೆ ಇರಲಿಲ್ಲವಂತೆ!.

********
ನಮ್ಮನೆ ಊರುವುದು ಪುತ್ತೂರಿನ ಪುಟ್ಟ ಹಳ್ಳಿ. ರಸ್ತೆ ಇಲ್ಲದೆ ದಟ್ಟ ಕಾಡುಗಳ ನಡುವೆ ನಿಂತ ಆ ಹಳ್ಳಿಗೆ ಕರೆಂಟು ಬಂದಿದ್ದು ಏಳೆಂಟು ತಿಂಗಳ ಹಿಂದೆ. ರಾತ್ರಿ ಹೊತ್ತು ಹೊರಗಡೆ ಬರಲೂ ಭಯ. ಅಂಥಾದ್ರಲ್ಲಿ ದಿನಾ ಏಳು ಗಂಟೆಯ ಹೊತ್ತಿಗೆ ಒಂದು ಹಕ್ಕಿ ಕೂಗಲು ಶುರುಮಾಡುತ್ತೆ. 9.30 ತನಕ ಅದು ಕೂಗುತ್ತಲೇ ಇರುತ್ತೆ. ನಮ್ಮಜ್ಜಿ ಮತ್ತು ಅಜ್ಜನ ಲೆಕ್ಕದಲ್ಲಿ ಅದು ಯಾರದೋ ಪ್ರೇತ.  ನಾನಾಗ ಇನ್ನೂ ಸ್ಕೂಲ್ ಹತ್ತದ ಮಗು. ನಮ್ಮಜ್ಜನ ಬಳಿ ಗನ್ ಇತ್ತು. ಸಮಯ ಸಿಕ್ಕಾಗೆಲ್ಲಾ ಅಜ್ಜ ಗನ್ ಬೆನ್ನಿಗೇರಿಸಿಕೊಂಡು ಹೋಗುತ್ತಿದ್ದ. ಈ ಹಕ್ಕಿ ಕೂಗಾಟಕ್ಕೆ ಅಜ್ಜಿ ದಿನಾ ರಗಳೆ ತೆಗೆಯೋಳು. ಒಂದು ದಿನ ಅಜ್ಜ ಗನ್ ಬೆನ್ನಿಗೇರಿಸಿಕೊಂಡು ಹಕ್ಕಿನ ಶಿಕಾರಿ ಮಾಡಲು ಹೊರಟೇ ಬಿಟ್ಟ. ಅಜ್ಜ ಐದಾರು ಸಲ ಹೊಡೆದರೂ ಹಕ್ಕಿ ಸಿಗಲೇ ಇಲ್ಲ. ಅದು ಕೂಗ್ತಾನೆ ಇತ್ತು. "ಕೈಗೆ ಸಿಗದ ದೆವ್ವ'' ಎಂದುಕೊಂಡು ನಮ್ಮಜ್ಜ ಸುಮ್ಮನಾಗಿದ್ದ.

Sunday, March 3, 2013

ನೀಳಜಡೆಗೆ ಎರಡುಮೊಳ ಮಲ್ಲಿಗೆ


ಸಾಕು ಕಣೇ...ದೃಷ್ಟಿ ತಾಗುತ್ತೆ. ನಾಳೆ ಮುಡ್ಕೊಂಡು ಹೋಗುವಿಯಂತೆ ಅಮ್ಮ ಹೇಳಿದಾಗ ನನ್ನ ಗುಂಡು ಗುಂಡು ದಪ್ಪಾಗಿದ್ದ ಮುಖ ಇನ್ನಷ್ಟು ದಪ್ಪಗಾಗಿ ಟೊಮೆಟೋ ಬಣ್ಣಕ್ಕೆ ತಿರುಗುತ್ತಿತ್ತು. ಹೂವ ಅಂದ್ರೆ ಪ್ರಾಣ, ಹೂವ ಅಂದ್ರೆ ಖುಷಿ, ಹೂವ ಅಂದ್ರೆ ಚೆಂದ. ಹೂವ ಅಂದ್ರೆ ಸುವಾಸನೆ. ಹೂವ ಅಂದ್ರೆ ಪ್ರೀತಿ, ಹೂವ ಅಂದ್ರೆ ಹುಡುಗಿ, ಹೂವ ಅಂದ್ರೆ ಹಬ್ಬ....ಹೀಗೆ ಹೂವ ಅಂದ್ರೆ ನನ್ನ ದೃಷ್ಟೀಲಿ ಎಲ್ಲವೂ. ಸೊಂಟದಿಂದ ಕೆಳಗೆ ಬರೋ ಜಡೆಗೆ ಮುಡಿದರೆ ಅವತ್ತು ಮನಸ್ಸಿನೊಳಗೆ ಒಂದು ರೀತಿಯ ಖುಷಿ. ಅಮ್ಮ ಮೊಳಮಲ್ಲಿಗೆ ಸಾಕು ಕಣೇ...ಜಾಸ್ತಿ ಇಟ್ರೆ ಬೇರೆ ಹುಡುಗೀರಿಗೆ ಆಸೆಯಾಗಲ್ವೇನೋ? ಏನಾದ್ರೂ ಫಂಕ್ಷನ್ ಇದ್ರೆ ಮುಡ್ಕೊಂಡು ಹೋಗು ಅಂದ್ರೆ ಹುಸಿಮುನಿಸಿನಿಂದ ಕಣ್ಣು ಕೆಂಪಾಗುತ್ತಿತ್ತು. ಅದಕ್ಕೆ ಅಮ್ಮ ಅಷ್ಟೂದ್ದ ನೀಳ ಜಡೆಗೆ ಮಲ್ಲಿಗೆ ಮುಡಿಸಿ, ಮುಡಿಯ ಬುಡದಲ್ಲಿ ಕೆಂಪು ಗುಲಾಬಿ ಸಿಕ್ಕಿಸುವಳು. ನಮ್ಮೂರ ಮಂಗಳೂರ ಮಲ್ಲಿಗೆ ಸ್ವಲ್ಪ ಮುಡಿದರೆ ಸಾಕು ಮೈಲುಗಟ್ಟಲೆ ದೂರದವರೆಗೆ ಘಮ ಎನ್ನುತ್ತಿತ್ತು.

ಸೋಮವಾರ ಪುತ್ತೂರ ಸಂತೆ. ಪ್ರತಿ ಸಂತೆಗೆ ಅಮ್ಮ ಹಾಜರು. ವಾರದ ತರಕಾರಿ ಸಾಮಾನುಗಳೆಲ್ಲಾ ಒಮ್ಮೆಲೇ ತರೋಳು. ಜೊತೆಗೆ ಮಲ್ಲಿಗೆ.ಮಂಗಳವಾರ ಮಲ್ಲಿಗೆ ಮುಡಿಯೋ ಖುಷಿ. ಕ್ಲಾಸಿನಲ್ಲಿ ಅದೆಷ್ಟೋ ಹುಡುಗೀರು ನನ್ನ ಜಡೆ, ಮಲ್ಲಿಗೆ ನೋಡಿ ಆಸೆಪಡೋರೇ ಏನೋ. ನನ್ನೊಳಗೆ ಮಲ್ಲಿಗೆ ಮುಡಿದ ಖುಷಿ. ಕ್ಲಾಸಿನಲ್ಲಿ ಬೆಂಚಿಯಲ್ಲಿ ಕುಳಿತರೆ ಒಂದೆ ಒರಗುತ್ತಿರಲಿಲ್ಲ. ಎಲ್ಲಾದ್ರೂ ಮಲ್ಲಿಗೆ ಹಾಳಾದ್ರೆ!!. ಇಡೀ ದಿನ ಬೆನ್ನು ನೆಟ್ಟಗಾಗಿಸಿಕೊಂಡು ಕುಳಿತು ಸಂಜೆ ಹೊತ್ತಿಗೆ ನೋವು.

ಆಗ ಏಳನೇ ತರಗತಿಯಲ್ಲಿದ್ದೆ. ಶೇಷಪ್ಪ ಮೇಷ್ಟ್ರು ನಮಗೆ ಹೆಡ್ ಮೇಷ್ಟ್ರು. ಜಡೆಗಿಂತ ಉದ್ದ ಮಲ್ಲಿಗೆ ಮುಡಿದ ನನಗೆ ಕೇಳಿದ್ದರು."ಮಲ್ಲಿಗೆ ಅಂದ್ರೆ ಇಷ್ಟನಾ? ನಿಂಗೆ ಮಲ್ಲಿಗೆ ಅಂಥ ಹೆಸರಿಡೋಣ' ಅಂತ. ಕೆನ್ನೆ ಕೆಂಪಗಾಗಿಸಿಕೊಂಡು ಬಗ್ಗಿ ಕುಳಿತಿದ್ದೆ. ಹುಡುಗರೆಲ್ಲಾ "ಮಲ್ಲಿಗೆ..'' ಎಂದಿದ್ದು ಕೇಳಿಸಿತ್ತು.

ಏಳನೇ ತರಗತಿಯ ವಿದಾಯಕೂಟ. ಎಲ್ಲರಿಗೂ ಫೋಟೋ ತೆಗೆಸುವ ಖುಷಿ. ಅಂದು ಅಮ್ಮ ನನಗೆ ಎರಡು ಜಡೆ ಹಾಕಿದ್ದಳು. ಹಸಿರು ಚೂಡಿದಾರ. ಎರಡು ಜಡೆ, ಅದು ಎದೆಯಿಂದ ಕೆಳ ಬರುತ್ತಿತ್ತು. ಆ ಎರಡೂ ಜಡೆಗೆ ಎರಡೆರಡು ಮೊಳಮಲ್ಲಿಗೆ. ಮಲ್ಲಿಗೆ ಮೊಳ ಜಾರದಂತೆ ಐದಾರು ಕ್ಲಿಪ್ಗಗಳನ್ನು ಹಾಕಿದ್ದಳು. ಸಂಜೆ ಹೊತ್ತಿನಲ್ಲಿ ನಡೆದ ಫೋಟೋ ತೆಗೆಯುವ ಕಾರ್ಯಕ್ರಮದಲ್ಲಿ ನನ್ನೆರಡು ಜಡೆಗಳಿಗೇ ಕ್ಯಾಮರಾ ಕಣ್ಣು!. ಎರಡು ಜಡೆಗಳನ್ನು ಎದುರುಗಡೆ ಹಾಕಿಕೊಂಡು ಅದೆಷ್ಟು ಸಲ ಕ್ಲಿಕ್ ಕ್ಲಿಕ್. ಹೈಸ್ಕೂಲ್ ಮುಗಿಯುವ ಹೊತ್ತಿಗೆ ಪುತ್ತೂರು ಮಲ್ಲಿಗೆ ಮಾರುಕಟ್ಟೆಗೆ ಅಮ್ಮ ಚಿರಪರಿಚಿತಳಾಗಿದ್ದಳು. ಪ್ರತಿ ಸೋಮವಾರ ಅಮ್ಮ ಅಲ್ಲಿ ಹೋದ ತಕ್ಷಣ 'ಮಗಳಿಗೆ ಮಲ್ಲಿಗೆ ಬೇಕೇ?' ಎಂದು ಕೇಳಿ ಹಸಿಬಾಳೆಯಲ್ಲಿ ಮಲ್ಲಿಗೆ ಸುತ್ತಿ ಕೊಡೋರು.

ಡಿಗ್ರಿ ಮುಗ್ಸಿ ಬೆಂಗಳೂರಿಗೆ ಬಂದಾಯಿತು. ಇಲ್ಲಿ ಮಂಗಳೂರು ಮಲ್ಲಿಗೆಯ ಘಮ ಇಲ್ಲ. ನನ್ನ ಜಡೆಯೂ ಕಿರಿದಾಗಿದೆ. ಮೋಟುದ್ದ ಜಡೆಗೆ ಶುಕ್ರವಾರದಂದು ಅತ್ತೆಮ್ಮ ಪೂಜೆ ಮಾಡಿ ಪ್ರಸಾದವೆಂದು ಬೆರಳಷ್ಟು ಉದ್ದದ ಮಲ್ಲಿಗೆ ಮಾಲೆ ಕೊಡುತ್ತಾಳೆ. ಪುಟ್ಟ ಪುಟ್ಟ ಕೂದಲುಗಳನ್ನು ಬಿಗಿಹಿಡಿದು ಕ್ಲಿಪ್ ಹಾಕಿ, ಅರ್ಧ ಗಂಟೆ ತಲೆಯಲ್ಲಿ ಮಲ್ಲಿಗೆಯ ಘಮ. ಆಫೀಸ್ ಗೆ ಹೊರಟಾಗ ಅದನ್ನು ಕಿತ್ತು ಹಾಸಿಗೆ ಮೇಲೆ ಹಾಕಿಬಿಟ್ಟು ಹೊರಡ್ತೀನಿ. ಸಂಜೆ ಮನೆ ಸೇರುವ ಹೊತ್ತಿಗೆ ಅದು ಬಾಡಿಹೋಗಿ ನರಳುತ್ತಿರುತ್ತೆ.

ಮಲ್ಲಿಗೆಯ ಮೇಲೆ ಇನ್ನೂ ಪ್ರೀತಿ ಇದೆ. ಮನೆಮುಂದೆ ಮಲ್ಲಿಗೆ ಗಿಡ ಹಸುರಾಗಿದೆ. ಬೆಳಗೆದ್ದು ನೀರುಣಿಸ್ತೀನಿ. ಆಗಾಗ ಹಸಿರೆಲೆಗಳ ನಡುವೆ ಮೊಸರು ಚೆಲ್ಲಿದಂತೆ ಗುಂಡುಮಲ್ಲಿಗೆ ಅರಳುತ್ತೆ. ಮನಸಿನಲ್ಲಿ ಸಣ್ಣದೊಂದು ಖುಷಿ, ಜಡೆಯಿಲ್ಲದಿದ್ದರೂ, ಮನೆಯಂಗಳದಲ್ಲಿ ಮಲ್ಲಿಗೆಯ ಘಮ ಅರಳಿದೆಯೆಂದು.

Thursday, February 21, 2013

ಮಂಗಳವಾರ ಮುಟ್ಟಾದವಳು

ಸಂಜೆ ಐದರ ಹೊತ್ತು. ತೋಟದಲ್ಲಿದ್ದ ಕರುವನ್ನು ಓಡಿಸಿಕೊಂಡು ಹಟ್ಟಿಯತ್ತ ಸಾಗಿದ್ದೆ. ಹಿಂದಿನಿಂದ ಬಂದು ನನ್ನ ನೋಡಿದ ಅಮ್ಮಾ "ಅಂಗಳದಲ್ಲೇ ನಿಂತುಕೋ ಮಗಳೇ...'' ಎಂದಾಗ ನನಗೆ ಅಚ್ಚರಿ. ನನ್ನ ನೋಟದಲ್ಲಿ ಪ್ರಶ್ನೆಯಿತ್ತು. ಅಮ್ಮ ನನ್ನ ಕಣ್ಣುಗಳ ಪ್ರಶ್ನೆಗೆ ಉತ್ತರಿಸಲಿಲ್ಲ. ಅಮ್ಮನ ಬಟ್ಟಲು ಕಣ್ಣುಗಳಲ್ಲಿ ಅದೇನೋ ಹೊಸ ಖುಷಿ, ಹೊಸ ಭಾವಗಳ ಪುಳಕ. ಸೀತಮ್ಮ, ಸರೋಜಿನಿ, ಕಮಲ, ಕೆಂಚಮ್ಮ...ಎಲ್ಲರೂ ಬಂದರು. ಎದುರುಮನೆಯಲ್ಲಿದ್ದ ಅಜ್ಜಿ, "ಏನ್ ಮರೀ ದೊಡ್ಡವಳಾಗಿದ್ದೀಯಾ?' ಎನ್ನುತ್ತಾ ಬಾಯೊಳಗಿದ್ದ ವೀಳ್ಯದೆಲೆಯನ್ನು ಅಂಗಳದ ಮೂಲೆಯಲ್ಲಿದ್ದ ಅಡಿಕೆ ಮರದ ಗಿಡದಡಿ ಉಗುಳಿದಳು. ಎಲ್ಲೋ ಆಟವಾಡುತ್ತಿದ್ದ ತಮ್ಮ ತಕ್ಷಣ ಬಂದು "ಅಕ್ಕಾ ಬಾ ಒಳಗಡೆ, ಏಕೆ ನಿಂತಿದ್ದೀಯಾ?' ಎಂದು ನನ್ನ ಕೈ ಹಿಡಿದು ಎಳೆಯತೊಡಗಿದ. ಅವನನ್ನು ಎತ್ತಿಕೊಂಡು ಹೋದ ಅಜ್ಜಿ ಸ್ನಾನ ಮಾಡಿಸಿಕೊಂಡು ಬಂದರು. ಹಸೆ ಮಧ್ಯದಲ್ಲಿ ನನ್ನ ಕುಳ್ಳಿರಿಸಿ, ನಾಲ್ಕು ಕಡೆಯಿಂದ ನಾಲ್ಕು ಮಂದಿ ಹೆಂಗಸರು ತಲೆಗೆ ನೀರೆರೆದರು.


ಅಕ್ಕಂಗೂ ಹೀಗೆ ಮಾಡಿದ್ದನ್ನು ನಾನು ನೋಡಿದ್ದೆ. ತೋಟದ ಮನೆಯಲ್ಲಿ ಅಡಗಿ ಕುಳಿತಿದ್ದ ಅಕ್ಕನ ಕರೆದುಕೊಂಡು ಬಂದ ಅಮ್ಮ ಅವಳನ್ನೂ ಹೀಗೆ ಅಂಗಳದಲ್ಲಿ ನಿಲ್ಲಿಸಿದ್ದಳು. ಊರ ಹೆಂಗಸರೆಲ್ಲಾ ಬಂದು ನೀರೆರೆದಿದ್ದರು. ಏಳು ದಿನ ಅಕ್ಕ ಒಬ್ಬಲೇ ಹೊರಗಿನ ಮನೆಯಲ್ಲಿ ಮಲಗುತ್ತಿದ್ದಳು. ಅಕ್ಕನ ಏಕೆ ಮನೆಯ ಹೊರಗಡೆ ಬರಲು ಬಿಡುವುದಿಲ್ಲ ಎಂದಾಗ ಅಮ್ಮ ಹೇಳಿದ್ದಳು, "ಅಕ್ಕನಿಗೆ ಕಾಗೆ ಮುಟ್ಟಿದೆ'''. ಊರೆಲ್ಲಾ ಕರೆದು ಅಮ್ಮ ಸಿಹಿಯೂಟ ಹಾಕಿಸಿದ್ದಳು. ನಾನು ದೊಡ್ಡವಳಾಗುವ ಹೊತ್ತಿಗೆ ಅಕ್ಕ ಮದುವೆಯಾಗಿ ಮಕ್ಕಳೂ ಇದ್ದವು.


ನನ್ನ ಸ್ನಾನ ಮಾಡಿಸಿ ಅಮ್ಮ ಮನೆಯ ಪಕ್ಕದಲ್ಲಿರುವ ಹೊರಗಿನ ಮನೆಗೆ ಕರೆದುಕೊಂಡು ಹೋದಳು. ಚಾಪೆಯೊಂದನ್ನು ಹಾಸಿ ಕುಳಿತುಕೋ ಎಂದಾಗ ಎದೆ ಢವಢವ ಎನ್ನುತ್ತಿತ್ತು. ಏಳು ದಿನಗಳ ಕಾಲ ಇಲ್ಲಿ ಹೇಗೆ ಮಲಗಲಿ ಎನ್ನುವ ಚಿಂತೆ ನನ್ನದು. ಎಲ್ಲಾ ಹೆಣ್ಣು ಮಕ್ಕಳಿಗೆ ಆಗುವ ರೀತಿಯಲ್ಲೇ ನಿನಗೂ ಆಗಿದೆ ಅಮ್ಮ ಎಂದಾಗ ಒಳಾರ್ಥಗಳು ತಿಳಿದವು.

"ಇವತ್ತು ಮಂಗಳವಾರ, ಅಮಾವಾಸ್ಯೆ'' ಅಜ್ಜಿ ಬಂದು ಹೇಳಿದಾಗ ಅಮ್ಮನ ಮುಖದಲ್ಲಿ ಭಯ, ಆತಂಕ. ಖುಷಿಯಲ್ಲಿ ಪುಳಕಗೊಂಡಿದ್ದ ಅಮ್ಮನ ಕಣ್ಣುಗಳು ದೊಡ್ಡದಾದುವು. ಹನಿನೀರು ಅಲ್ಲಿ ಜಿನುಗಿತು. ಸೆರಗಿನಿಂದ ಕಣ್ಣೊರೆಸಿಕೊಂಡಳು. ಅಜ್ಜಿ ಅಮ್ಮನ ನನ್ನ ಹತ್ತಿರದಿಂದ ದೂರ ಕರೆದುಕೊಂಡು ಹೋಗಿ ಕಿವಿಯಲ್ಲಿ ಪಿಸುಗುಟ್ಟಿದಳು. "ಇಂದು ಮಂಗಳವಾರ, ಅಮಾವಾಸ್ಯೆ. ಅಮಾವಾಸ್ಯೆ ದಿನ ಮುಟ್ಟಾದವರಿಗೆ ಮಕ್ಕಳಾಗುವುದಿಲ್ಲವಂತೆ. ನಮ್ಮಕುಟುಂಬದಲ್ಲಿ ಯಾರೂ ಮಂಗಳವಾರ ಮುಟ್ಟಾಗಿಲ್ಲ ನೋಡು. ಈ ಹೆಣ್ಣುಮಗುವಿಗೆ ಅದೇನು ಬಂತೋ. ಊರೆಲ್ಲಾ ಕರೆದು ಸಿಹಿಯೂಟ ಹಾಕೋದು ಬೇಡ. ಎಲ್ರಿಗೂ ಇವಳು ಮಂಗಳವಾರ ಮುಟ್ಟಾಗಿದ್ದಾಳೆ ಅಂತ ಗೊತ್ತಾಗುತ್ತೆ' ಅಂದಾಗ ಅಮ್ಮ ಜೋರಾಗಿ ಬಿಕ್ಕಿದಳು. ಅಜ್ಜಿಯ ಮೌಢ್ಯಕ್ಕೆ ಎದುರಾಡುವ ಧೈರ್ಯ ನನಗಿನ್ನೂ ಇರಲಿಲ್ಲ.

ಎರಡನೆಯ ದಿನ. ಹಿತ್ತಾಳೆಯ ತಟ್ಟೆಯಲ್ಲಿ ಮೆಂತ್ಯದನ್ನ ಮಾಡಿಕೊಂಡು ಬಂದ ಅಮ್ಮನ ಮುಖದಲ್ಲಿ ಖುಷಿ ಇರಲಿಲ್ಲ. ಬಾಚಿ ಅಪ್ಪಿಕೊಂಡು ಮುತ್ತುಕೊಟ್ಟು ಹೋದಳು. ಎದುರುಮನೆ ಶಾಂತಲಮ್ಮ ವಟವಟ ಅನ್ನುತ್ತಲೇ ಮನೆಯೊಳಗೆ ಕಾಲಿಟ್ಟಳು. "ಹೋಗಿ ಹೋಗಿ ನಿನ್ನ ಮಗಳು ಅಮಾವಾಸ್ಯೆ ದಿನ ಮುಟ್ಟಾಗಿದ್ದಲ್ಲಲ್ಲಾ? ಛೇ.ಛೇ. ಹೀಗಾಗಬಾರದಿತ್ತು. ನಿಂಗೆ ಮಕ್ಕಳನ್ನು ನೋಡುವ ಭಾಗ್ಯವೇ ಇಲ್ಲವೇನೋ'' ಅಂದುಬಿಡಬೇಕೇ?. "ದೇವರಿಟ್ಟಂಗೆ ಶಾಂತಲಾ'' ಎಂದು ಅಮ್ಮ ಸುಮ್ಮನಾಗಿದ್ದಳು. ಏಳು ದಿನಗಳು ಕಳೆದವು. ಅಮ್ಮ ಹೊಸ ಬಟ್ಟೆ ತಂದು ' ಮಗೂ, ಯಾವತ್ತಾದ್ರೂ ಸ್ಕೂಲ್ ಗೆ ಹೋಗುವಾಗ ಹಾಕ್ಕೊಂಡು ಹೋಗು' ಎಂದಿದ್ದಳು.

                                           *****
ಐದು ವರ್ಷಗಳ ಹಿಂದೆ ಮದುವೆಯಾಯಿತು. ಊರಿಗೆ ಹೋದಾಗಲೆಲ್ಲಾ ಅಮ್ಮ ಕೇಳುತ್ತಿದ್ದಳು "ಮುಟ್ಟು ಇನ್ನೂ ನಿಂತಿಲ್ವೇ?". ಎರಡು ವರ್ಷದ ಹಿಂದೆ ಅಮ್ಮನಿಗೆ ಹೇಳಿದ್ದೆ; "ಮುಟ್ಟು ನಿಂತಿದೆ'' ಎಂದು. ಈಗ ಮೊಮ್ಮಗಳ ಆರೈಕೆಯಲ್ಲಿ ಅರವತ್ತೈದರ ಅಮ್ಮನಿಗೆ ಇಪ್ಪತ್ತರ ಹುಮ್ಮಸ್ಸು. ಸಿಕ್ಕ ಸಿಕ್ಕವರಲ್ಲಿ ಬಟ್ಟಲು ಕಣ್ಣುಗಳ ತುಂಬಾ ನಗುತ್ತಾ ಅಮ್ಮ ಹೇಳುತ್ತಿದ್ದಾಳೆ: ಮಂಗಳವಾರ ಮುಟ್ಟಾದ ನನ್ನ ಮಗಳ ಮಡಿಲಿಗೆ ಲಕ್ಷ್ಮಿ ಬಂದಿದ್ದಾಳೆಂದು.!

Wednesday, January 9, 2013

ಅಪ್ಪ ಹೋಗಿ ವರುಷ




ಬೆಳ್ಳಂಬೆಳಿಗ್ಗೆ ಐದೂವರೆ. ಅಮ್ಮ ಎಬ್ಬಿಸಿದ್ದಳು. ಇವತ್ತು ನಮಗೆ ಹಬ್ಬ ಕಣಮ್ಮ ಸಿಹಿ ಮಾಡಬೇಕು. ಮನೆ ಮುಂದೆ ತೊಳೆದು ರಂಗೋಲಿ ಹಾಕಬೇಕು. ಅಮ್ಮನ ಮಾತುಗಳು ಕಿವಿಗೆ ಬೀಳುತ್ತಿದ್ದಳು. ಚಳಿಯಲ್ಲಿ ಬೆಚ್ಚಗೆ ಮುದುಡಿ ಮಲಗಿದ್ದ ನನಗೆ ಏಳಲೂ ಮನಸ್ಸಾಗುತ್ತಿರಲಿಲ್ಲ. ಆದರೆ, ಏಳಲೇಬೇಕಿತ್ತು!. ಅಮ್ಮ ಬೆಳಕು ಮೂಡುವ ಮೊದಲೇ ನಾಲ್ಕಕ್ಕೆ ಅಲಾರಂ ಇಟ್ಟು ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಉಟ್ಟು ದೇವರ ಕೋಣೆಯಲ್ಲಿ ಸದ್ದು ಮಾಡುತ್ತಿದ್ದಳು. ಮೊಬೈಲ್‌ನಲ್ಲಿ ವಿಷ್ಣು ಸಹಸ್ರನಾಮ ಬರುತ್ತಿತ್ತು. ಅಮ್ಮನ ದೇವರ ಭಕ್ತಿಗೆ ನನ್ನೆಜಮಾನ್ರು ಎದ್ದು ವಟವಟ ಅಂದು ಕಣ್ಣು ದೊಡ್ಡದು ಮಾಡಿದ್ರು!

ಎದ್ದುಬಿಟ್ಟು ಮನೆಯ ಎದುರು ಒಂಚೂರು ಜಾಗಕ್ಕೆ ತೊಳೆದು ಸೆಗಣಿ ಸಾರಿದೆ. ಹುಟ್ಟಿನಿಂದ ಮದುವೆ ಆಗೋ ತನಕ ಸಗಣಿ ಸಾರೋ ಕೆಲಸ ಮಾಡದ ನಾನು, ಒಂಚೂರು ಜಾಗಕ್ಕೆ ಅಂದು ಸಗಣಿ ಸಾರಿದೆ. ಹಳ್ಳಿಯಲ್ಲಿರುವಾಗ ಹಟ್ಟಿಯಿಂದ ತಂದ ಸಗಣಿ ಘಮ ಎನ್ನುತ್ತಿತ್ತು. ಬೆಂಗಳೂರಿನಲ್ಲಿ ಅದೆಲ್ಲಿಂದಲೋ ತಂದಿಟ್ಟ ಸಗಣಿಯ ವಾಸನೆಯೇ ಮೂಗಿಗೆ ಗೊತ್ತಾಗಲಿಲ್ಲ!. ಸೆಗಣಿ ಸಾರಿ, ಮನೆಮುಂದೆ ರಂಗೋಲಿ ಹಾಕಿದೆ. ಚೆಂದಕ್ಕೆ ಚುಕ್ಕೆ ಇಟ್ಟು ರಂಗೋಲಿ ಹಾಕಲು ಬಾರದಿದ್ದರೂ ತಾವರೆ, ಗುಲಾಬಿ...ಹೀಗೆ ಬಗೆಬಗೆಯ ಹೂವುಗಳು, ಎಲೆಗಳನ್ನು ಬಿಡಿಸಿ ಬಣ್ಣಗಳನ್ನು ತುಂಬಿದೆ. ತುಳಸಿ ಗಿಡದ ಸುತ್ತಲೂ ರಂಗೋಲಿ ಹಾಕಿದೆ. ಜೊತೆಗೆ, ಮಾವಿನ ಎಲೆಗಳನ್ನು ತಂದು ಬಾಗಿಲಿಗೆ ತೋರಣ ಕಟ್ಟಿದೆ. ಅಷ್ಟೊತ್ತಿಗಾಗಲೇ ಅಮ್ಮ ದೇವರ ಮೂರ್ತಿಗಳನ್ನೆಲ್ಲ ತೊಳೆದು, ಪೂಜೆ ಶುರುಮಾಡಿದ್ದಳು. ಅಡುಗೆ ಮನೆಯಲ್ಲಿ ಅಗರಬತ್ತಿ, ಗಂಧ ಘಮಘಮ ಎನ್ನುತ್ತಿತ್ತು. ಅಮ್ಮನಿಗೆ ಹೊಟ್ಟೆ ಚುರುಗುಟ್ಟುತ್ತಿದ್ದರೂ ದೇವರ ಭಕ್ತಿಯಲ್ಲಿ ಹಸಿವೇ ಮರೆತುಹೋಗಿತ್ತು. ಎಲ್ಲಾ ಮುಗಿದು ಹೊಟ್ಟೆಗೆ ತಿಂಡಿ ಹೋಗುವಷ್ಟರಲ್ಲಿ ಗಂಟೆ ಹತ್ತು ದಾಟಿತ್ತು.

ಅಪ್ಪ ಹೋಗಿ ವರ್ಷದ ನಂತರ ಮತ್ತೆ ನಮ್ಮನೆಯಲ್ಲಿ ಸಿಹಿಯಡುಗೆ ಆರಂಭವಾಗಿತ್ತು. ಮನೆಮುಂದೆ ರಂಗೋಲಿ ಮೂಡಿತ್ತು. ಅರಶಿನ-ಕುಂಕುಮ-ಹೂವುಗಳ ಚಿತ್ತಾರವಿತ್ತು. ಮುತ್ತೈದೆಯರಿಗೆ ಬಾಗಿನ ಅಮ್ಮನೇ ರೆಡಿಮಾಡಿದ್ದಳು. ಸಿಹಿ ಎಂದು ಕೇಸರಿಬಾತ್, ಪಾಯಸ ಮಾಡಿ ನನಗೂ-ನಮ್ಮಜೆಮಾನ್ರಿಗೆ ಬಡಿಸುವಾಗ ಅಮ್ಮನ ಕಣ್ಣುಗಳು ತುಂಬಿಕೊಂಡಿದ್ದವು. ಸಾವರಿಸಿಕೊಂಡು ಹೇಳಿದಳು; ಅಪ್ಪನಿಗೆ ಕೇಸರಿಬಾತ್ ಭಾಳ ಇಷ್ಟ.