Tuesday, April 24, 2012

ಭೂತಾಯಿಗೆ ಕಾಗೆ ಮುಟ್ಟುವುದು!

ಇವತ್ತು ಭೂತಾಯಿಗೆ ಕಾಗೆ ಮುಟ್ಟಿದೆ. ನೀವು ಜಾಸ್ತಿ ಜಗ್ಳ ಆಡಬಾರದು. ಜಗ್ಳ ಆಡಿದ್ರೆ ಭೂಮಿತಾಯಿ ಬೇಜಾರುಪಡ್ಕೊಳ್ತಾಳೆ...ಅಮ್ಮ ಬೆಳ್ಳಂಬೆಳಿಗ್ಗೆ ರೊಟ್ಟಿ ತಟ್ಟುತ್ತಾ ಹೇಳುತ್ತಿದ್ದಳು. ಒಲೆ ಮೇಲೆ ಕಲ್ಲಿನ ಕಾವಲಿಯಲ್ಲಿ ರೊಟ್ಟಿ ಬೇಯಿತ್ತಿತ್ತು. ಮೊದಲ ರೊಟ್ಟಿ ನನಗೇ ಸಲ್ಲಬೇಕೆನ್ನುವುದು ತಮ್ಮನ ವಾದ. ಇದೇ ಸಿಟ್ಟಲ್ಲಿ ಒಲೆಯೊಳಗಿದ್ದ ಕಟ್ಟಿಗೆಯನ್ನು ಹಿಂದೆ-ಮುಂದೆ ಜಾರಿಸುತ್ತಿದ್ದ. ನನಗೆ ಕೊಡೆಂದು ಅಮ್ಮನ ಸೆರಗು ನಾನು ಹಿಡಿದುಕೊಂಡಿದ್ದೆ.

ಅಮ್ಮನ ಮಾತು ಒಗಟು. ಅರೆ! ಕಾಗೆ ಮುಟ್ಟುವುದಕ್ಕೂ, ನಾವು ಜಗ್ಳ ಆಡೋದಕ್ಕೂ ಏನು ಸಂಬಂಧ? ಅಮ್ಮನ ಕೇಳಿಯೇ ಬಿಟ್ಬಿ.

ನೋಡು ಪಕ್ಕದ್ಮನೆ ಲಲಿತಕ್ಕ ಕಾಗೆ ಮುಟ್ಟಿದೆ ಅಂತ ತಿಂಗ್ಳಲ್ಲಿ ಮೂರು ದಿನ ಹೊರಗಡೆ ಕೂರ‍್ತಾಳೆ. ಆಗ ಅವಳಿಗೆ ಅವ್ಳ ಅಮ್ಮ ಏನೂ ಕೆಲ್ಸ ಕೊಡಲ್ಲ. ಮನೆ ಹಿಂದಿನ ಕೋಣೆಯಲ್ಲಿ ಲಲಿತಕ್ಕ ಸುಮ್ಮನೆ ಮಲಗಿರ‍್ತಾಳೆ. ಹಂಗೆ, ಭೂಮಿತಾಯಿಗೂ ಕಾಗೆ ಮುಟ್ಟಿದೆ. ಅವಳಿಗೆ ನೋವು ಕೊಡಬಾರದು, ಸಿಟ್ಟು ಮಾಡಿ ಜಗಳ ಮಾಡಿಕೊಂಡ್ರೆ ಅವಳಿಗೆ ಬೇಜಾರಾಗುತ್ತೆ. ನೀವು ಸುಮ್ಮನಿರಬೇಕು ಎಂದು ಹೇಳುತ್ತಿದ್ದಳು.

‘ಹಾಗಾದ್ರೆ ಲಲಿತಕ್ಕನ ತರ ಭೂತಾಯಿಗೂ ತಿಂಗಳಿಗೊಮ್ಮೆ ಕಾಗೆ ಮುಟ್ಟುತ್ತಾ?’ ತಮ್ಮನ ಮಾತು ಅಮ್ಮನನ್ನು ಪೇಚಿಗೆ ಸಿಲುಕಿಸಿತ್ತು. ‘ಮನುಷ್ಯರು ತಿಂಗಳಿಗೊಮ್ಮೆ, ಭೂತಾಯಿ ವರ್ಷಕ್ಕೊಮ್ಮೆ’ ಎಂದು ಅಷ್ಟೇ ಹೇಳಿ, ನಮ್ಮಿಬ್ಬರಿಗೆ ಬೈದು ಸುಮ್ಮನಾಗಿಸುತ್ತಿದ್ದಳು. ಅಮ್ಮನ ಮಾತು ನಂಬಿದ ನಾವಿಬ್ಬರೂ ಜಗಳವಾಡದೆ ಸುಮ್ಮನಿರುತ್ತಿದ್ದೇವು.


ವರ್ಷದಲ್ಲಿ ಒಂದು ಸಲ ಭೂತಾಯಿಗೆ ಕಾಗೆ ಮುಟ್ಟುತ್ತಿತ್ತು. ಅಮ್ಮ ತುಳಸಿ ಗಿಡದ ಪಕ್ಕದಲ್ಲಿ ಮಸಿಯಿಂದ ಚೌಕ ತರ ಮಾಡಿ, ಅಲ್ಲಿ ಸೀಗೆಕಾಯಿ, ಮಸಿ ತುಂಡು ಇಡುತ್ತಿದ್ದಳು. ನಾಲ್ಕನೇ ದಿನಕ್ಕೆ ಅದೇ ಜಾಗದಲ್ಲಿ ಸೆಗಣಿ ಸಾರಿ, ಬಾಳೆಲೆ ಹಾಕುತ್ತಿದ್ದಳು. ಬಳಿಕ ಅದರ ಮೇಲೆ ಎಣ್ಣೆ, ಅರಿಶಿನ, ಕುಂಕುಮ, ಬಳೆ, ಹೂವುಗಳನ್ನು ಇಟ್ಟು ಭೂಮಿಗೆ ಎಣ್ಣೆ ಬಿಡುತ್ತಿದ್ದಳು. ‘ಭೂಮಿತಾಯಿಯನ್ನು ಸ್ನಾನ ಮಾಡಿಕೊಂಡು ಬಂದಿರ‍್ತಾಳೆ’ ಎನ್ನುವ ಅಮ್ಮ, ಒಂದು ಎಲೆಯಲ್ಲಿ ರೊಟ್ಟಿ, ಸಾರು ಹಾಕಿಡುತ್ತಿದ್ದಳು. ಭೂತಾಯಿ ತಿಂದ ಮೇಲೆ ನಾವು ಅಂಗಳದಲ್ಲೇ ಕುಳಿತು ತಿನ್ನುತ್ತಿದ್ದೆವು.

ತುಳುವಿನಲ್ಲಿ ಪುಯಿಂತೆಲ್(ಮಕರ ಮಾಸ) ತಿಂಗಳಿನ ಕೊನೆಯ ಅಂದ್ರೆ ೨೭, ೨೮, ೨೯ನೇ ದಿನ ಕೆಡ್ಡಸ ಎಂದು ಆಚರಿಸುತ್ತಾರೆ. ಭೂಮಿ ಹೊರಗಾಗಿದ್ದಾಳೆ ಎಂದು ಹೇಳುತ್ತಿದ್ದರು. ಆ ಮೂರು ದಿನವೂ ಭೂಮಿತಾಯಿಗೆ ನೋವಾಗುವ ಯಾವುದೇ ಕೆಲಸಗಳನ್ನು ಅಮ್ಮ ಮಾಡುತ್ತಿರಲಿಲ್ಲ, ತೋಟದ ಕೆಲಸಗಳಿಗೆ ರಜೆ, ಹೊಲ ಗದ್ದೆಗಳಲ್ಲೂ ಹಾರೆ-ಗುದ್ದಲಿಗಳ ಸದ್ದಿಲ್ಲ. ಸಾಮಾನ್ಯವಾಗಿ ಜನವರಿ-ಫೆಬ್ರುವರಿ ತಿಂಗಳಲ್ಲಿ ಈ ಹಬ್ಬ ಬರುತ್ತದೆ. ಇಂದು ಅಮ್ಮನೂ ಕೆಡ್ಡಸ ಮರೆತುಬಿಡ್ತಾರೆ!