Wednesday, April 8, 2009

ಮೀಸೆ ಜಿರಲೆ ಸಮರದಲ್ಲಿ ನಂದೇ ಮೇಲುಗೈ?!

ಏನು ಬರೆಯಬಹುದು? ವಸ್ತುನೇ ಇಲ್ಲವಲ್ಲ...ಎಂಬ ಚಿಂತೆ ಒಂದು ಬದಿಯಿಂದ ನನ್ನ ತಲೆಯನ್ನು ಕೊರೆಯುತ್ತಿದ್ದರೆ ಥಟ್ಟನೆ ನೆನಪಾಗಿದ್ದು ನನ್ನ ಮನೆಯಲ್ಲಿ ನನಗೂ-ಜಿರಲೆಗೂ ನಡೆದ ಭೀಕರ ಸಮರ. ಕಳೆದ ಅಕ್ಟೋಬರ್ 16ರಂದು ಕೋರಮಂಗಲದ ಸುಂದರ ಮನೆಗೆ ಕಾಲಿಟ್ಟಾಗ ಯಾಕೋ ನನಗೆ ಜಿರಲೆಗಳು ತೀರ ಕಾಟ ಕೊಟ್ಟವು. ಹಲ್ಲಿ, ಜಿರಳೆ,ಇರುವೆ ಗಳಿಲ್ಲದ ಮನೆ ಅದು ಮನೆಯೇ ಅಲ್ಲವ೦ತೆ. ಇವೆಲ್ಲ ನಮ್ಮ ಸಮೀಪ ಸ೦ಬ೦ಧಿಗಳೇನೋ ಅನ್ನುವ೦ತೆ ನಮ್ಮೊದಾನೆ ಸ೦ಘ ಜೀವನ ನಡೆಸುತ್ತ, ನಮ್ಮ ಮನೆಯ ಅ೦ದ, ನೈರ್ಮಲ್ಯವನ್ನು ಹಾಳುಗೆಡವುತ್ತ ನಮ್ಮ ವೈರಿಗಳ೦ತೆ ವರ್ತಿಸ್ತಾವೆ. ಅದ್ಕೇ ಇರ್ಬೇಕು ಕೆಲವರು ಒಲ್ಲದ, ಇಷ್ಟವಿಲ್ಲದ ನೆ೦ಟರನ್ನು "ಹಕ್ಲೆಗಳು"(ತುಳು ಭಾಷೆಯಲ್ಲಿ ಜಿರಲೆಗೆ ಹಕ್ಲೆ ಅಂತಾರೆ) ಅ೦ತ ಜಿರಲೆಗೆ ಹೋಲಿಸಿ ಬೈಯ್ಯುವುದು.


ತಿಂಡಿ ಮಾಡಿಟ್ಟರೆ ಅದರ ಮೇಲೆ ಸವಾರಿ ಮಾಡಿ ಅದನ್ನು ಮತ್ತೆ ತಿನ್ನದಂತೆ ಮಾಡೋದು, ತೊಳೆದಿಟ್ಟ ಪಾತ್ರೆ, ಅಕ್ಕಿ, ತಿಂಡಿ-ತಿನಿಸು ಏನೇ ಮುಚ್ಚಿಡದೆ ಇದ್ದರೆ ಅದರ ಮೇಲೆ ಓಡಾಡಿ ಅದನ್ನು ಮೂಸಿ ನಾವು ಮತ್ತೆ ಅತ್ತ ಹೋಗದಷ್ಟು ಕೆಟ್ಟ ವಾಸನೆ ಬರಿಸುತ್ತಿದ್ದವು. ನನಗಂತೂ ದಿನಾ ಜಿರಲೆ ಓಡಿಸೋದು, ಪಾತ್ರೆ ತೊಳೆಯುವುದು, ಅಂತೂ-ಇಂತೂ ಸ್ವಚ್ಛ ಮಾಡೋದ್ರಲ್ಲೇ ಅರ್ಧ ಸಮಯ ವ್ಯರ್ಥ ಆಗುತ್ತಿತ್ತು. ಎಂಥ ಮಾಡೋದು ಮಾರಾಯ್ರೆ? ಎಲ್ಲಿ ನೋಡಿದ್ರೂ ಜಿರಲೆ ಕಾಟ. ರಾತ್ರಿ ಎದ್ದು ದೀಪ ಹಚ್ಚಿದ್ರೆ ಥರ ಥರ ಓಡಿ ಮೂಲೆ ಮೂಲೆ ಸೇರೋ ಜಿರಲೆಗಳನ್ನು ಕಂಡಾಗ ನಂಗೆ ಸಿಟ್ಟು ಬಂದು ನಿದ್ದೆ ಮಾಡದಿದ್ರೂ ಪರವಾಗಿಲ್ಲ ಒಂದೆರಡು ಕೊಂದು ಮಲಗುತ್ತಿದ್ದೆ. ಅದಕ್ಕೆ ನಮ್ಮ ಓನರ್ ಆಂಟಿ ಒಂದು ಉಪಾಯ ಹೇಳಿದ್ರು...ನೀನು ಜಿರಲೆ ಕಡ್ಡಿ ಹತ್ತಿಸಿಬಿಟ್ಟು..ಒಂದು ಇಡೀ ದಿನಾ ಮನೆ ಬಾಗಿಲು ಹಾಕಿ ನೀ ಹೊರಗಡೆ ಹೋಗಿರು...ಮತ್ತೆ ನೀ ವಾಪಾಸು ಬರುವಾಗ ನಿನ್ನ ರೂಮಲ್ಲಿ ರಾಶಿ ರಾಶಿ ಹೆಣಗಳು ಬಿದ್ದಿರುತ್ತವೆ ಅಂತ. ಒಳ್ಳೆ ಉಪಾಯ ಅನಿಸ್ತು..ಮತ್ತೆ ಶವ ಸಂಸ್ಕಾರ ಎಲ್ಲವನ್ನೂ ನಾನೇ ಮಾಡಬೇಕಲ್ಲಾ...ಅದಕ್ಕೆ ಮನೆಯಿಂದ ಹೊರಗೆ ಹೋಗೋದು ಬೇಡ..ನಾ ಮನೆಯಲ್ಲಿದ್ದುಕೊಂಡೇ ಕಡ್ಡಿ ಹಚ್ಚಿಟ್ಟು. ..ಶವ ಬಿದ್ದ ಹಾಗೇ ಪ್ಲಾಸ್ಟಿಕ್ ಕವರ್ ಗೆ ತುಂಬಿಸಿಬಿಡೋದು ಅಂದುಕೊಂಡು ಹಾಗೇ ಮಾಡಿದೆ. ಹುಡುಗೀಯರು ಮೀಸೆ ಇರೋ ಗಂಡಸರಿಗಿಂತಲೂ ಮೀಸೆ ಇರೋ ಜಿರಳೆಗಳಿಗೆ ಅದಕ್ಕೆ ಹೆದರುತ್ತಾರೆ೦ಬ ನ೦ಬಿಕೆ ಇದೆ. ನಂಗಂತೂ ಯಾರ ಮೀಸೆ ಹೆದರಿಕೆನೂ ಇಲ್ಲ ಬಿಡಿ. ಮೊನ್ನೆ ನಮ್ಮ ಸಾಗರದಾಚೆ ಇರೋ ಅಣ್ಣನೊಬ್ಬ ಹೇಳ್ತಾ ಇದ್ದ, ಆ ಜಿರಲೆಗಳ ಮೀಸೆ ಹಿಡಕೊಂಡು ನನ್ ಹೆಂಡತಿಗೆ ಹೆದರಿಸ್ತಾ ಇದ್ದೆ ಅಂತ.

ಮೊನ್ನೆ ಭಾನುವಾರ. ಬೆಳಿಗ್ಗೆ ಆರು ಗಂಟೆಗೆ ಎದ್ದು ಕಡ್ಡಿ ಹಚ್ಚಿಡುವ ಕೆಲಸ ಮಾಡಿದೆ. ಹಾಸಿಗೆಯಲ್ಲಿದ್ದ ನನ್ನ ತಮ್ಮ ಜಿರಲೆ ಕಡ್ಡಿಯ ಕೆಟ್ಟ ವಾಸನೆಗೆ ಜಿರಲೆ ಥರನೇ ವಿಲವಿಲ ಒದ್ದಾಡತೊಡಗಿದ್ದ. ಒಂದೆಡೆ ಬೈಗುಳಗಳ ಸುರಿಮಳೆ. ನಾನು ಕೈ , ಮೂಗು-ಬಾಯಿಗೆ ಗ್ಲೌಸ್ ಹಾಕೊಂಡು ಕೈಗೆ ಇನ್ನೊಂದು ಪ್ಲಾಸ್ಟಿಕ್ ಕಟ್ಟಿಕೊಂಡು..ಜಿರಲೆ ಕಡ್ಡಿ ವಾಸನೆ ಸಹಿಸಲಾಗದೆ ತಲೆ ತಿರುಗಿ ಜಿರಲೆಗಳು ಪಟಪಟನೆ ನೆಲದ ಮೇಲೆ ಬೀಳುತ್ತಿದ್ದವು. ಮತ್ತೊಂದೆಡೆ ಕೆಟ್ಟ ವಾಸನೆಗೆ ಮೂಲೆಯಿಂದ ಮೂಲೆಗೆ ಓಡಾಡುವ ಜಿರಲೆಗಳು, ಇನ್ನೊಂದೆಡೆ ಸಿಕ್ಕೆಲೆಲ್ಲಾ ತಲೆ ಮೇಲೆ , ಬೆನ್ನ ಮೇಲೆ ಬೀಳೋ ಜಿರಲೆಗಳು, ಜಿರಲೆ ಮರಿಗಳು..ಮನೆಯೆಲ್ಲಾ ಕೆಟ್ಟ ವಾಸನೆ. ಕೆಲವು ಸಾಯುತ್ತಿದ್ದರೆ, ಇನ್ನು ಕೆಲವು ಓಡುವಾಗ ನಾನು ಕೈಯಿಂದ ಹಿಡಿದು ಅದರ ತಲೆಯನ್ನೆಲ್ಲಾ ಜಜ್ಜಿ ಕೊಂದು ಬಿಡುತ್ತಿದ್ದೆ. ಕೊಂದು ಕೊಂದು, ಜಿರಲೆ ಹಿಂದೆ ಓಡಾಡಿ ನನ್ನ ಕೈ- ಕಾಲುಗಳೂ ಸುಸ್ತು ಹೊಡೆದಿದ್ದವು. ಆಶ್ಚರ್ಯವೆಂದರೆ ಅಂದು ಆರು ಗಂಟೆಗೆ ಎದ್ದರೂ ನಾನು ಹಲ್ಲಜ್ಜಿರಲಿಲ್ಲ., ಮುಖ ತೊಳೆದಿರಲಿಲ್ಲ...ತಮ್ಮ ಬೈದುಕೊಳ್ಳುತ್ತಲೇ ಇದ್ದ..ನೀನು ಊರಲ್ಲಿ ಹೊಲದಲ್ಲಿ ಕೆಲಸ ಮಾಡಕೆ ಲಾಯಕ್ಕು ಅನ್ತಾ ಇದ್ದ. ಯಾರು ಏನಂದ್ರೂ ನಂಗಂತೂ ಜಿರಲೆ ಕೊಲ್ಲಲೇ ಬೇಕಿತ್ತು..ಆ ಸಮರದಲ್ಲಿ ನಂಗೆ ಜಯ ಸಿಗಲೇಬೇಕಿತ್ತು.

ಗಂಟೆ ಹನ್ನೊಂದು...ಹೊಟ್ಟೆ ಚುರುಗುಟ್ಟುತ್ತಿತ್ತು. ನನ್ನ ಪ್ರೀತಿಯ ಅಣ್ಣ ನಿರಂಜನಣ್ಣನ ಫೋನ್..
"ನಾ ನಿನ್ನ ಮನೆ ಬಳಿ ಇದ್ದೀನಿ....ಮನೆಯಲ್ಲೇ ಇದ್ದೀಯಾ? ...." ಎಂಥ ಕಿರಿಕಿರಿಯಪ್ಪಾ ಅಂದುಕೊಂಡೆ ಮನಸ್ಸಲ್ಲಿ. ಎಂಥ ಮಾಡೋದು? ನೀವು ಮನೆಗೆ ಬರಬೇಡ ಅನ್ನಕ್ಕೆ ಸರಿಯಾಗಲ್ಲ....ಅದೂ ಮೊದಲ ಬಾರಿಗೆ ಮನೆ ಬಳಿ ಬಂದು ತಂಗಿ ಜೊತೆ ಮಾತನಾಡಬೇಕು ಎಂದು ಖುಷಿಯಿಂದ ಬಂದಿದ್ದಾರೆ. ಯಾರ ಮನಸ್ಸಾದ್ರೂ ಬರೋದು ಬೇಡ ಅನ್ನೋದೇ? ಆಯ್ತು...ಬಾ ಅಣ್ಣ ಅಂದು...ಅಲ್ಲೇ ಪಕ್ಕದಲ್ಲಿನ ಹೊಟೇಲಿನಿಂದ ತಿಂಡಿ ತಂದೆ. ಅಣ್ಣನನ್ನು ಮನೆಯೊಳಗೆ ಕರೆದುಕೊಂಡು ಬರುತ್ತಿದ್ದರೆ...ಕೆ.ಆರ್. ಮಾರ್ಕೆಟ್ ಥರ ಗಜಿಬಿಜಿ ಅನ್ನೋ ಮನೆ ನೋಡಿ ಅಣ್ಣ ಏನಂತಾರೋ ಅನ್ನೋ ಪುಟ್ಟ ಭಯ ಮನಸ್ಸಿನಲ್ಲಿ. ಇರಲಿ ಬಿಡಿ..ಅಣ್ಣ ಏನಾದ್ರೂ ಹೇಳಿದ್ರೆ...ಅವರಿಗೆ ಮಂಗಳಾರತಿ ಮಾಡಿಬಿಡೋದು ಅಂದುಕೊಂಡು ಕರೆದುಕೊಂಡು ಬಂದೆ...,ಜಿರಲೆ ವಾಸನೆ,, ಜಿರಲೆ ಕಡ್ಡಿ ವಾನೆ, ಇನ್ನೊಂದು ಮತ್ತೂ ಪ್ರಾಣ ಭಯದಿಂದ ಓಡಾಡುತ್ತಿದ್ದ ಜಿರಲೆಗಳು! ಬದುಕಿನ ಉಳಿವಿಗಾಗಿ ಹಪಿಹಪಿಸುತ್ತಿದ್ದ ಜಿರಲೆಗಳ ಮಧ್ಯೆ...ನನ್ನಣ್ಣನಿಗೆ ಸೆಟ್ ದೋಸೆ, ಟೀ ನೀಡಿ ಖುಷಿಪಟ್ಟಿದ್ದೆ. ಜೊತೆಗೆ ಅಣ್ಣನಿಂದ ನಾ ಮಾಡಿದ ಟೀಗೂ ಶಹಭಾಷ್ ಗಿರಿ ಸಿಕ್ತು. ಅದು ಮತ್ತೊಂದು ಖುಷಿ. ಯಾವಾಗಲೂ ನಂಗೆ ಅಣ್ಣದಿರಿಂದ ಶಹಭಾಷ್ ಗಿರಿ ಗಿಟ್ಟಿಸಿಕೊಳ್ಳೋದಂದ್ರೆ ಭಾರೀ ಇಷ್ಟ. ಒಂದು ಗಂಟೆ ನನ್ನ ಜೊತೆ ಖುಷಿ ಖುಷಿಯಾಗಿ ಕಳೆದ ಅಣ್ಣ ಮತ್ತೆ ನನ್ನ ಬಿಟ್ಟು ಅವರ ದಾರಿ ಹಿಡಿದರು. ಜಿರಳೆ ಕೊಲ್ಲುವ ಉದ್ದೇಶದಿ೦ದ ಟಿ.ವಿ.ಜಾಹೀರಾತಿನಲ್ಲಿ ತೋರಿಸುವ೦ತೆ ನಾನು ಕೈಗೆ ಗ್ಲೌಸ್ ಹಾಕಂಡು ಸಮರ ಸಿ೦ಹಿಣಿಯ೦ತೆ ಗರ್ಜಿಸುತ್ತ, ಜೀವ ಉಳಿಸಲು ತತ್ತರಿಸುತ್ತಿದ್ದ ಜಿರಲೆಗಳ ಬೆನ್ನಟ್ಟಿ ಹೊಡೆಯುತ್ತಿದ್ದ ದೃಶ್ಯವನ್ನು ಕ೦ಡು ಮೊದಲ ಬಾರಿ ಮನೆಗೆ ಬ೦ದಿದ್ದ ಅಣ್ಣ ಯಾಕೋ ಹೆಚ್ಚು ಮಾತನಾಡಲೇ ಇಲ್ಲ. ನಾನು ಮತ್ತೆ ನನ್ನ ಸಮರ ಮುಂದುವರೆಸಿದ್ದೆ..ಸಮರ ಕಾರ್ಯಾಚರಣೆ ಮುಗಿಸಿ,ಕದನವಿರಾಮ ಘೋಷಿಸಿ, ಮನೆ ಶುಚಿಗೊಳಿಸಿ, ಸ್ನಾನ ಮಾಡಿ ಹೊರಬ೦ದು ಇನ್ನೇನು ಜಿರಳೆ ಗಳ ಸಮಸ್ಯೆ ಬಗೆಹರಿಯಿತು ಎ೦ಬ ಖುಷಿಯಲ್ಲಿ, ಜೊತೆಗೆ ಅಣ್ಣನ ಜೊತೆ ತಿಂಡಿ ತಿಂದ ಖುಷಿಯಲ್ಲಿ ಮನಸ್ಸು ತೂಗು ಉಯ್ಯಾಲೆಯಲ್ಲಿ ನಲಿದಾಡುತ್ತಿದ್ದಾಗ ಸೂರ್ಯ ನೆತ್ತಿಯಿಂದ ಕೆಳಗಿಳಿಯುತ್ತಿದ್ದ. ಒ೦ದು ಪುಸ್ತಕವನ್ನು ಓದಿಗೆ೦ದು ಅಲಮಾರದಿ೦ದ ತೆಗೆಯಹೊರಟಿದ್ದೆ. ಪ್ರತ್ಯಕ್ಷ ವಾಯಿತಲ್ಲ ಇನ್ನೊ೦ದು,ಮತ್ತೊ೦ದು ಜಿರಳೆ. ಇದೊ೦ದು ಮುಗಿಯದ ಸಮಸ್ಯೆ... ನಮ್ಮ ದೇಶವನ್ನು ಕಾಡುತ್ತಿರುವ ಭಯೋತ್ಪಾದಕರಂತೆ, ಸರ್ಕಾರಿ ಕಚೇರಿ, ವಿಧಾನಸೌಧ-ಶಾಸಕರ ಭವನದಲ್ಲಿರುವ 'ಭ್ರಷ್ಟಾಸೂರ'ರಂತೆ!

ಈಗ ಮತ್ತೊಂದು ಸಮರಕ್ಕೆ ಸಿದ್ಧವಾಗುತ್ತಿದ್ದೇನೆ....ಮುಂದಿನ ಸಮರದಲ್ಲಿ ಗ್ಯಾರಂಟಿ ಪೂರ್ತಿ ಗೆಲುವು ನಂದೇ ಎನ್ನೋ ವಿಶ್ವಾಸ ನನ್ನದು.