Friday, September 11, 2009

ಈಗ ಅವಳು ಅವನಿಗೆ 'ಹಾಸಿಗೆ' ...

ಅವನು ಪತಿ, ಅವಳು ಪತ್ನಿ.

ಅದ್ಧೂರಿಯಾಗಿ ಸಪ್ತಪದಿ ತುಳಿದಿದ್ದಾರೆ...

ಸಾವಿರಾರು ಜನರು ಮದುವೆಯೂಟದಿಂದ ಚಪ್ಪರಿಸಿದ್ದಾರೆ...

ಒಂದಲ್ಲ, ಎರಡಲ್ಲ ಐದು ದಿನ ಮದುವೆ ನಡೆದಿದೆ...

ಒಂದು ವಾರ ಭರ್ಜರಿ ಮಧುಚಂದ್ರನೂ ಮುಗಿಸಿ ಬಂದಿದ್ದಾರೆ...

ಈಗ ಆರತಿಗೊಂದು, ಕೀರುತಿಗೊಂದು ಮಕ್ಕಳ ಕನಸು ಕಾಣುವ ಸಮಯ...



ಅವಳಿಗೆ ಅವನು, ಅವನಿಗೆ ಅವಳು ಕಣ್ಣಲ್ಲೇ ಪರಿಚಯ..

ನೋಡೋ ಕಣ್ಣುಗಳೇ ಸತ್ಯ ಹೇಳಿದ್ದವು...

ಪ್ರಾಮಾಣಿಕತೆಗೆ ಅವಳು ಇನ್ನೊಂದು ಹೆಸರು....

ಬಡತನ..ಪ್ರತಿಯೊಬ್ಬರ ಬದುಕನ್ನೂ ಕಿತ್ತು ತಿನ್ನುತ್ತೆ....ಅವಳನ್ನೂ ಬಿಡಲಿಲ್ಲ..

ಜನ್ಮ ನೀಡಿದ ಅಪ್ಪ-ಅಮ್ಮ ಬಡತನದಲ್ಲೇ ಮಣ್ಣಾಗಿ ಹೋದವರು..ಇವಳನ್ನು ಹಾಗೇ ಬಿಟ್ಟು...!

ಕಣ್ಣ ನೋಟದ ಆಸರೆ, ಪ್ರೀತಿಯ ಹುಡುಕಾಟಕ್ಕೆ ಸಿಕ್ಕಿದ್ದು ಆತ...

ಪ್ರಾಮಾಣಿಕತೆ, ಸತ್ಯದ ಗೆಲುವಿನ ಕುರಿತು ಮಾತನಾಡುತ್ತಿದ್ದವ...

ಅವಳ ಸೌಂದರ್ಯ, ನೇರ ನಡೆ-ನುಡಿಯನ್ನು ಹೊಗಳುತ್ತಿದ್ದವ...

ಅವಳು ಮಾತುಬಿಟ್ಟರೆ ಹಸಿವನ್ನು ಲೆಕ್ಕಿಸದೆ ಅನ್ನ, ನೀರು ಬಿಡುತ್ತಿದ್ದವ...

ಅವಳಿಗಾಗಿ ಹಗಲಿರುಳೂ ಪರಿತಪಿಸುವವ,

ಅವಳನ್ನು ಅಂಗೈಯಲ್ಲಿಟ್ಟುಕೊಂಡು ಸಾಕುತ್ತೇನೆಂದವ...



ಹೌದು..ಅವಳು ನಂಬಿದಳು..

ಹಗಲಿರುಳು ಅವನ ಕನಸಿನಲ್ಲಿ ತೇಲಾಡಿದಳು...

ಆ ದೇವಾಲಯದಲ್ಲಿ ಅವನ ಹೆಸರಿನಲ್ಲಿ ನಿತ್ಯ ಪೂಜೆ ಮಾಡಿಸಿದಳು...

ಜೊತೆ-ಜೊತೆಗೆ ಹೆಜ್ಜೆಯಿಟ್ಟು ಆ ದೇವಾಲಯಯದಲ್ಲಿ ಅವನ ಹಣೆಗೆ ಕುಂಕುಮವಿಟ್ಟಳು...

ಅವನ ಕೈಯಿಂದಲೇ ತಲೆಗೆ ಹೂವ ಮುಡಿಸಿಕೊಂಡಳು....

ನಂಬಿದಳು...ಅವಳಿಗಿಂತಲೂ ಹೆಚ್ಚಾಗಿ ಅವನನ್ನೇ ನಂಬಿದಳು....

ಪ್ರೀತಿಯ ಹಾರಕ್ಕೆ ಕೊರಳೊಡ್ಡಿದಳು...

ಮನೆ-ಮನ ಎಲ್ಲೆಲ್ಲೂ ಪ್ರೀತಿಯ ಕನಸು ಕಾಣತೊಡಗಿದಳು...


ಅದೇನಾಯಿತೋ...

ಆತ ಪ್ರೀತಿಯ ಆಸರೆಯಾಗಲಿಲ್ಲ...ಕನಸುಗಳಿಗೆ ಕಣ್ಣುಗಳಾಗಲಿಲ್ಲ...

ರಾತ್ರಿಯ ಸುಖಕ್ಕೆ ಅವನಿಗೆ ಅವಳು 'ಹಾಸಿಗೆ'ಯಾದಳು

ಈಗ ಅವಳು ಅವನಿಗೆ 'ಹಾಸಿಗೆ' ...

ಹಣದ ಅರಮನೆಯಲ್ಲಿ ಅವಳು ಅಂಗಾತ ಬಿದ್ದ ಹೆಣ...



ಇನ್ನೊಂದೆಡೆ...

ಬೇಂದ್ರೆ ಅಜ್ಜನ...

ನಾನು ಬಡವಿ, ಆತ ಬಡವ, ಒಲವೇ ನಮ್ಮ ಬದುಕು,
ಬಳಸಿಕೊಂಡವದನೇ ಅದಕು, ಇದಕು, ಎದಕೂ…

ನೆನಪಾಗುತ್ತಲೇ ಬದುಕನ್ನೇ ಅಣಕಿಸಿದಂತೆ ಭಾಸವಾಗುತ್ತಿತ್ತು ಅವಳಿಗೆ.