Saturday, December 25, 2010

ಅರ್ಥವಾಗದವಳು!

ಹೇಳಬೇಕನಿಸಿದರೂ ಹೇಳಲಾಗಲಿಲ್ಲ. ಬದುಕಿನ ಬಂಡಿ ಇಷ್ಟು ದೂರ ತಂದು ನನ್ನ ನಿಲ್ಲಿಸಿದೆ. ಇಳಿಹೊತ್ತು, ಇಳಿವಯಸ್ಸು. ಇಂದು ನೀನು ಏನೇ ಹೇಳಿದರೂ ಅದು ನನಗೆ ಕುತೂಹಲ, ಅಚ್ಚರಿ ಮೂಡಿಸುತ್ತೆ. ಅರ್ಥವಾಗದೆ ಬಿಟ್ಟ ಕಣ್ಣುಗಳಿಂದ ನಿನ್ನ ನೋಡಿ ‘ಏನು ಮಗನೇ?’ ಎಂದು ಕೇಳಿದರೆ, ಅದು ನಿನಗರ್ಥವಾಗಲ್ಲಮ್ಮ ಎನ್ನುತ್ತೀಯಾ. ಅಂದು ನಿನಗೆ ಅರ್ಥ ಮಾಡಿಸಿದ ಅಮ್ಮನಿಗೆ ಇಂದು ಅರ್ಥ ಮಾಡಿಸುವ ಸ್ಥಿತಿಯಲ್ಲಿ ನೀನಿಲ್ಲ . ನಿನ್ನ ಪಾಲಿಗೆ ಒಮ್ಮೊಮ್ಮೆ ಅಮ್ಮ ಅರ್ಥವಾಗದವಳು!

೬೦ ವರ್ಷದ ಹಿಂದೆ ನಿನ್ನ ಸ್ಕೂಲಿಗೆ ಕಳುಹಿಸಿದ್ದೆ. ಸೂರ್ಯ ಮುಳುಗುವ ಹೊತ್ತು ಅದೇ ಕಬ್ಬಿಣದ ಗೇಟಿನಲ್ಲಿ ನಿಂತು ಸ್ಕೂಲಿನಿಂದ ಬರುವ ನಿನಗಾಗಿ ಕಾಯುತ್ತಿದ್ದೆ. ನಿನ್ನ ‘ಅಮ್ಮಾ’ ಕರೆಗಾಗಿ. ಆ ಸಂಜೆ ಹೊತ್ತಿನಲ್ಲಿ ಉಪ್ಪಿಟ್ಟು ಮಾಡಿ ನಿನಗಾಗಿ ಕಾಯುವುದೇ ನನಗೆ ಹೆಮ್ಮೆ. ಇದು ಒಡಲಾಳದ ದನಿ. ಎಲ್ಲವೂ ನನ್ನದೆಯ ನೆನಪು.

ಕಾಲ ನಿಲ್ಲುವುದಿಲ್ಲ. ಬದುಕು ಚಲಿಸುತ್ತದೆ. ಮನುಷ್ಯ ಇದಕ್ಕೆ ಹೊರತಲ್ಲ. ಎಷ್ಟೋ ಬಾರಿ ಇದನ್ನೆಲ್ಲಾ ನಿನ್ನ ಬಳಿ ಕುಳಿತು, ನಿನ್ನ ಕಣ್ಣುಗಳನ್ನು ನೋಡುತ್ತಲೇ ಹೇಳಬೇಕನಿಸುತ್ತೆ. ಆದರೆ, ನಿನ್ನ ದಿನನಿತ್ಯದ ಜಂಜಾಟದ ನಡುವೆ ಅಮ್ಮನ ಮಾತು ಕೇಳಲು ಅದೆಲ್ಲಿ ಸಮಯವಿರುತ್ತೆ? ಎಂದು ಎಲ್ಲವನ್ನೂ ಮೌನದೊಳಗೆ ಹೂತುಬಿಡ್ತೀನಿ.

ನಿಂಗೊತ್ತು ಅಮ್ಮನಿಗೆ ೮೦ ದಾಟಿದೆ. ಕೂದಲು ಬೆಳ್ಳಿಯಾಗಿದೆ. ಹಲ್ಲುಗಳು ಕಾಣಿಸುತ್ತಿಲ್ಲ. ಮುಖದಲ್ಲಿದ್ದ ನಗುನೂ ಮಾಸುತ್ತಿದೆ. ಕಣ್ಣುಗಳು ಗುಳಿಬಿದ್ದಿವೆ. ಬೆನ್ನು ಬಾಗಿದೆ. ಹಗಲಿಡೀ ತೋಟದೊಳಗೆ ಬದುಕು ಕಂಡಿದ್ದ ಅಮ್ಮ ಇಂದು ಊರುಗೋಲು ಹಿಡಿದು ನಡೆಯುತ್ತಿದ್ದಾಳೆ. ನಿನಗೆ ಹಿಡಿ ಅನ್ನ ಉಣಿಸಿದ ಆ ಬೆರಳುಗಳು ಇಂದು ನಡುಗುತ್ತಿವೆ. ನೀನು ನಿತ್ಯ ಮಾಡಿಸುವ ಆ ಜಳಕಕ್ಕೂ ನನ್ನ ಮೈ ಒಗ್ಗುತ್ತಿಲ್ಲ. ಪ್ರೀತಿಯಿಂದ ನೀಡಿದ ಹಿಡಿತುತ್ತು ನನಗೆ ರುಚಿಸುತ್ತಿಲ್ಲ.ಅರ್ಥವಿಲ್ಲದ ಕನಸುಗಳಿಗೂ ಜೀವವಿಲ್ಲ. ಪ್ರೀತಿಯ ಸವಿ ಅನುಭವಿಸುವ ಹೊತ್ತುನೂ ಕಳೆದುಹೋಗಿದೆ. ನಿನಗನಿಸಬಹುದು ಅಮ್ಮ ಅರ್ಥವಾಗದವಳು!, ಆದರೆ ಇದು ಅರ್ಥವಾಗದ ವಯಸ್ಸು. ಕಾಲ ಹಕ್ಕಿಯಂತೆ ಹಾರುತಿದೆ. ಈಗ ನನಗೆ ಕೊನೆಯ ಹೊತ್ತು.
೪೦ ವರ್ಷದ ಹಿಂದೆ ನೋಡಿದ ಕಸ್ತೂರಿ ನಿವಾಸದ ಹಾಡು ನೆನಪಾಗುತ್ತದೆ.

ಮೈಯನ್ನೇ ಹಿಂಡಿ ನೊಂದರೂ
ಕಬ್ಬು ಸಿಹಿಯ ಕೊಡುವುದು

ತೇಯುತಲಿದ್ದರೂ ಗಂಧದ ಪರಿಮಳ
ತುಂಬಿ ಬರುವುದು
ತಾನೇ
ಉರಿದರೂ ದೀಪವು ಮನೆಗೆ
ಬೆಳಕು ತರುವುದು....


ಪ್ರಕಟ: http://www.hosadigantha.in/epaper.php?date=12-08-2010&name=12-08-2010-13

Friday, December 3, 2010

ಬೆಳ್ಳಿ ಕಾಲುಂಗುರ


ಸುತ್ತಲೂ ವಾದ್ಯ, ಜಾಗಟೆಗಳ ಸದ್ದು. ನೆರೆದವರ ಮನಸ್ಸು ಸಂಭ್ರಮದ ಕಡಲು. ನಮಗರ್ಥವಾಗದ ಪುರೋಹಿತರ ಸಾಲು ಸಾಲು ಶ್ಲೋಕಗಳು. ಆಗ ತಾನೇ ನೀನು ನನ್ನ ಕೊರಳಿಗೆ 'ತಾಳಿ'ಯಾಗಿದ್ದೆ. ನನ್ನ ಮುಖದಲ್ಲಿ ಮುತ್ತೈದೆಯ ರಂಗು. ನಿನ್ನ ಮುಖದಲ್ಲಿ ಮಲ್ಲಿಗೆ ನಗು, ನಾಳಿನ ‘ರವಸೆಗಳು, ಹಸಿರಸಿರು ಕನಸುಗಳು. ಅಂದು ನೀನು ನನ್ನ ಕಾಲು ಮುಟ್ಟಿದಾಗ ಒಂದು ಕ್ಷಣ ಅಚ್ಚರಿ, ಭಯ, ನಾಚಿಕೆ. ಕೆನ್ನೆಯಲ್ಲಿ ಏಳು ಬಣ್ಣದ ರಂಗೋಲಿ. ನನ್ನ ಪುಟ್ಟ ಬಿಳಿಪಾದ, ಅದರ ತುದಿಯಲ್ಲಿರುವ ಆ ಸಣ್ಣ ಬೆರಳುಗಳು ನಿನ್ನ ಸ್ಪರ್ಶಕ್ಕೆ ಕಂಪಿಸತೊಡಗಿದವು. ಆದರೂ, ನನ್ನ ಮನಸ್ಸಿನಲ್ಲಿ ಖುಷಿಯ ಮೃದಂಗ.
ಬೆಳ್ಳಿ ಕಾಲುಂಗುರ
ಅಮ್ಮ ಹೇಳಿದ್ದ ನೆನಪು: ಗಂಡ ಒಂದೇ ಒಂದು ಸಲ ತನ್ನ ಹೆಂಡತಿಯ ಕಾಲನ್ನು ಮುಟ್ಟುತ್ತಾನಂತೆ, ಅದು ಕಾಲುಂಗುರ ತೊಡಿಸುವಾಗ. ಹೌದು, ನೀನು ಅಂದು ನನ್ನ ಕಾಲು ಮುಟ್ಟಿದ್ದೆ. ಅದೇ ಮೊದಲು. ಅದು ನನ್ನ ಜೀವನದ ಅಮೂಲ್ಯ ಕ್ಷಣವಾಗಿತ್ತು. ಬೆಳ್ಳಿ ಕಾಲುಂಗುರವನ್ನು ನನ್ನ ಆ ಪುಟ್ಟ ಬೆರಳುಗಳಿಗೆ ಹಾಕಿದ್ದೆ. ನನ್ನ ಮನಸ್ಸಲ್ಲಿ ಆ ಕ್ಷಣ ನೀನು ಗೊತ್ತು ಮಾಡಿದ ಪುಟ್ಟ ಬಾಡಿ ಗಾರ್ಡ್ ಅನಿಸಿತ್ತು. ಹೌದು, ನೀನು ಜೊತೆಗಿಲ್ಲದ ಸಮಯದಲ್ಲಿ ಅದು ನನ್ನ ಬಾಡಿ ಗಾರ್ಡ್, ಅದು ನೀನು ನನಗೆ ನೀಡಿದ ಆಣೆಯ ಉಡುಗೊರೆ. ಅದನ್ನು ಕಂಡರೆ ನನಗೆ ಗೌರವ, ನೀನೆಂಬ ಪ್ರೀತಿ. ನೀನು ತೊಡಿಸಿದ್ದೆಂಬ ಅಗಾ‘ ಹೆಮ್ಮೆ. ಆಗಾಗ ಅದನ್ನು ನೋಡಿ ಖುಷಿಪಡುತ್ತೇನೆ. ದಾರಿಗುಂಟ ಸಾಗುವಾಗ ನನ್ನನ್ನೇ ದಿಟ್ಟಿಸಿ ನೋಡುವ ಅದೆಷ್ಟೋ ಕಣ್ಣುಗಳಿಗೆ ನನ್ನ ಕಾಲುಂಗುರವೇ ಉತ್ತರ ಹೇಳುತ್ತದೆ. ಬೆಳ್ಳಿ ಕಾಲುಂಗುರ ಎಂದಾಗ ನೆನಪಾಗುವುದು ಅದೇ ಹಾಡು

ಬಾಳ ಕಡಲಲಿ ಪ್ರೇಮ ನದಿಗಳ ಸಂಧಿ

ಸಮಯದಲಿ ಮಿಂಚುವ ಮಿನುಗುವ ಸಾಕ್ಷಿ ಈ ಕಾಲುಂಗುರ

ನಾದಗಡಲಲಿ ವೇದ ಘೋಷದ ಸಪ್ತಪದಿಗಳಲಿ

ಬದುಕಿನ ಬಂಡಿಗೆ ಸಾರಥಿ ಕಾಲುಂಗುರ

ಶುಕವ ತರುವ ಸತಿ ಸುಖವ ಕೊಡುವ

ಮನ ಮನೆಯ ನೆಲದಲಿ ಗುನುಗುವ ಒಡವೆಯೋ....

Thursday, November 18, 2010

ನೀನು ಕವಿ, ನಾನು ಕವಿತೆ!


ಅದು ನನ್ನ ಮನೆ. ಹುಲ್ಲಿನ ಮಾಡಿನಿಂದ ಮಾಡಿದ ಪುಟ್ಟ ಮನೆ. ಮಣ್ಣಿನ ಗೋಡೆಯ ಚೆಂದದ ಮನೆ. ಅಂಗಳದಲ್ಲಿ ಹೂ ಗಿಡಗಳ ಚಿತ್ತಾರವಿರುವ ಚೆಂದದ ಅರಮನೆ. ನಾನಲ್ಲೇ ಕನಸು ಕಂಡಿದ್ದು. ಅದು ನಿನ್ನ ಕನಸು. ಎಲ್ಲೋ ಓದಿದ ಕವನಗಳು, ಎಲ್ಲೋ Uಚಿದ ಬರಹಗಳು...ಎಲ್ಲವೂ ನನ್ನೊಳಗೊಂದು ಹೊಸ ಭಾವಗಳಿಗೆ ಹುಟ್ಟು.

ನಿನ್ನಲ್ಲಿ ಕವನಗಳು ಹುಟ್ಟಬೇಕು, ನೀನು ಕವಿಯಾಗಬೇಕು. ಮುಗಿಲಲ್ಲಿ ನಿತ್ಯ ಕಾಣುವ ಆ ನೀಲಿ ಬಣ್ಣ ನಿನಗೆ ಹೊಸತೆನಿಸಬೇಕು. ನಿತ್ಯದ ಆ ಹಗಲು ನಿನಗೆ ಹೊಸತಾಗಬೇಕು. ಪ್ರತಿದಿನದ ಆ ಮುಂಜಾನೆ ನಿನ್ನಲ್ಲಿ ಹೊಸ ಬೆಡಗನ್ನು ಹುಟ್ಟಿಸಬೇಕು.ಆಕಾಶದಲ್ಲಿ ಮೂಡುವ ಕಾಮನಬಿಲ್ಲು, ಹಕ್ಕಿಗಳ ಕಲರವ, ನದಿನೀರಿನ ಜುಳುಜುಳು ನಾದ, ನಿಶ್ಚಲ ಸರೋವರಗಳು, ಚಲಿಸುವ ಮೋಡಗಳು, ಕಿವಿಗೆ ಇಂಪಾಗುವ ಸಂUತ...ಎಲ್ಲವೂ ನಿನ್ನಲ್ಲಿ ಕವಿತೆಗಳಾಗಬೇಕು.

ನನ್ನೊಳಗಿನಿಂದ ಹುಟ್ಟುವ ಭಾವಗಳು, ಮಾತಿಲ್ಲದ ಮೌನ ನಿನ್ನಲ್ಲಿ ಕವನಗಳಾಗಬೇಕು. ನನ್ನ ಕಿವಿಯಲ್ಲಿ ಮಿನುಗುವ ಮುತ್ತಿನೋಲೆ, ತುಟಿ ಮೇಲೆ ನಗುವ ಆ ಮೂಗುತಿ ಮಿಂಚು, ಕಣ್ಣರೆಪ್ಪೆಯಲ್ಲಿ ಕನವರಿಸುವ ಆ ಕನಸುಗಳು, ಕಾಲಿಗೆ ನೀ ತೊಡಿಸಿದ ಆ ಬೆಳ್ಳಿ ಕಾಲುಂಗುರ, ನಿನ್ನದೆಯನ್ನು ಖುಷಿಗೊಳಿಸುವ ಆ ಕಾಲ್ಗೆಜ್ಜೆ, ಕೈ ಬಳೆ ಸದ್ದು, ನಿನ್ನ ಕನ್ಸ್ ಮಾಡುವ ಮುಂಗುರುಳು, ತುಟಿಯಂಚಿನ ಮಿನುಗು ನಗು...ನಿನ್ನಲ್ಲಿ ಕವನಗಳಾಗಬೇಕು. ಅಷ್ಟೇ ನಾನು ಬಯಸಿದ್ದು. ಅಂದು ಆ ಪುಟ್ಟ ಮನೆಯಲ್ಲಿ ಹುಟ್ಟಿದ ಕನಸು ನಿಜವಾಗಿದೆ. ಅದು ನನ್ನ ಖುಷಿ, ನನ್ನ ಹೆಮ್ಮೆ. ಇಂದು ನಾನು ಕವನ, ನೀನು ಕವಿ, ಇನ್ಯಾರೋ ಕಿವಿ!!

ಬಾ ಗೆಳತಿ..
ಮಳೆ ಹನಿಯಲಿ
ಅಚ್ಚ- ಅಡವಿಯಲಿ
ನನ್ನ ಅಚ್ಚರಸಿ
ನಿನಗೆ ನನ್ನುಸಿರನು
ಬೆಚ್ಚಗೆ ಆಚ್ಛಾದಿಸಿ
ಒಲವ-ದೀಪ ಹಚ್ಚಿಟ್ಟು
ಜಗದ ಎಲ್ಲ
ಸಂಚಿಗೆ ಕಿಚ್ಚಿಟ್ಟು
ನನ್ನೀ ಕಂಗಳು
ಮುಚ್ಚುವ ತನಕ
ಕಣ್ರೆಪ್ಪೆಯಲಿ ಬಚ್ಚಿಟ್ಟು
ಸಾಕುವೆ ..ಬಾ ನನ್ನಚ್ಚರಸಿ...

ವೊದಲ ನೋಟಕ್ಕೆ ನೀನು ಬರೆದ ಕವನ ನಿನ್ನಂತೆ ನನ್ನಲ್ಲಿ ಹಸಿರು. ಇಲ್ಲಿ ನೀನು ಸೋತು ಗೆದ್ದೆ, ನಾನು ಗೆದ್ದು ಸೋತೆ!!
ಪ್ರಕಟ: http://hosadigantha.in/epaper.php?date=11-18-2010&name=11-18-2010-13

Wednesday, November 10, 2010

ಆ ಕೆಟ್ಟ ನೋವು.

ಕಳೆದ ವಾರ ನನ್ನಕ್ಕ ದೊಡ್ಡವಳಾಗಿದ್ದ ಕಥೆ ಹೇಳಿದೆ. ಇಂದು ಅಕ್ಕನೆತ್ತರಕ್ಕೆ ಬೆಳೆದ ನನ್ನ ಕಥೆ ಹೇಳ್ತೀನಿ.
ಅಂದು ನಾನು ಸುಮ್ಮನೆ ನಾಚಿಕೊಂಡ ದಿನ. ಎಲ್ಲರ ನೋಟಗಳು ನನ್ನತ್ತಲೇ ನೋಡುವಾಗ ಅದೇನೋ ಹೊಸ ಅನುಭವ. ಏನೋ ಒಂದು ಹೊಸತನ್ಮು ಪಡೆದುಕೊಂಡ ಹಾಗೇ. ನನ್ನಕ್ಕನಂತೆ ನಾನು ದೊಡ್ಡವಳಾಗಿದ್ದೇನೆಂದು ಅಂದುಕೊಳ್ಳೋದೇ ಅದೇನೋ ಖುಷಿ, ಅವ್ಯಕ್ತವಾದ ಹೆಮ್ಮೆ. ಯಾರಲ್ಲಾದ್ರೂ ಹೇಳಿಕೊಳ್ಳಬೇಕಂದ್ರೂ ಹೇಳಿಕೊಳ್ಳಲಾಗದ ಪುಟ್ಟ ಸಂತೋಷ. ಸ್ಕೂಲಿಗೆ ಚಕ್ಕರ್ ಏಕೆ ಹಾಕಿದ್ದೆಂದರೆ ಸುಮ್ಮನೆ ಜ್ವರವೆಂದು ಪಕ್ಕಾ ಸುಳ್ಳು ಹೇಳಿ ಮೇಷ್ಟ್ರ ಕೈಯಿಂದ ತಪ್ಪಿಸಿಕೊಂಡು ನಕ್ಕುಬಿಟ್ಟಿದ್ದೆ. ನನ್ನಲ್ಲಿ ನನ್ನನ್ನೇ ಕಾಣುವ ಸಂಭ್ರಮ. ಪುಟ್ಟ ಹಕ್ಕಿ ಮರಿಯೊಂದು ರೆಕ್ಕೆ ಬಲಿತು ಗೂಡಿನಿಂದ ಹೊರಬರುವ ಸಂಭ್ರಮದಂತೆ ನನ್ನೊಳಗೊಂದು ಹಬ್ಬದ ವಾತಾವರಣ. ಹೊಸ ಬಟ್ಟೆ, ಹೊಸ ದಿರಿಸು, ಹೊಸ ಗಳಿಗೆ.
ಅಮ್ಮನ ಮುಖದಲ್ಲಿಯೂ ‘ತಾಯ್ತನ’ದ ಮಿರುಗು.

ಆದರೆ, ಅವತ್ತೇನೋ ನನಗೆ ಆ ದಿನ ಹೊಸತಾಗಿತ್ತು. ಆದರೆ, ಅಂದಿನಿಂದ ಇಂದಿನವರೆಗೆ ನನ್ನನ್ನು ಹಿಂಡಿ ಹಿಪ್ಪೆಯಾಗಿಸುವ ಆ ನೋವು ಇದೆಯಲ್ಲಾ,..ಅದನ್ನು ನೆನೆಸಿಕೊಂಡಾಗ ಛೇ! ನಾನು ಹೆಣ್ಣಾಗಿ ಹುಟ್ಟಬಾರದಿತ್ತು ಎಂದನಿಸುತ್ತದೆ. ತಿಂಗಳಲ್ಲಿ ಆ ಒಂದು ದಿನವನ್ನು ನಾನು ತುಂಬಾ ದ್ವೇಷಿಸುತ್ತೇನೆ. ಅಂದು ಅನ್ನ. ನೀರು ಏನೂ ಬೇಡ ಎಂದನಿಸುತ್ತೆ. ಹೆಣ್ಣು ಬದುಕು ನೀಡಿದ ಆ ದೇವರನ್ನು ಅದೆಷ್ಟು ಬಾರಿ ಶಪಿಸಿದ್ದೇನೋ. ದೇವರು ಕಣ್ಣು ಬಿಡಲಿಲ್ಲ. ಪ್ರತಿ ತಿಂಗಳು ಆ ಕೆಟ್ಟ ನೋವು ನನ್ನನ್ನು ಹಿಂಡಿ ಹಿಪ್ಪೆಯಾಗಿಸುತ್ತದೆ. ನನ್ನ ಆ ಸುಂದರ ಕಣ್ಣುಗಳು ರಾತ್ರಿಯಿಡೀ ನಿದ್ದೆಯಿಲ್ಲದೆ ಬಳಲುತ್ತವೆ. ನನ್ನ ಆ ಮುಖ ಯಾವ ಉತ್ಸಾಹವೂ ಇಲ್ಲದೆ ಕಳೆಗುಂದುತ್ತದೆ. ಬೇಡ, ಆ ಅಸಹನೀಯ ನೋವನ್ನು ನನ್ನಿಂದ ಸಹಿಸಲಾಗುವುದಿಲ್ಲ. ಆ ಮೂರು ದಿನಗಳಲ್ಲಿ ಕಂಡಕಂಡವರೊಡನೆ ರೇಗಾಡ್ತೀನಿ. ಸಿಟ್ಟಿನಿಂದ ಮುಖ ಊದಿಸಿಕೊಂಡು ಬಿಡ್ತಿನಿ. ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಅತ್ತೆ-ಮಾವ, ಕೈಹಿಡಿದ ಗಂಡ, ಪ್ರೀತಿಯ ನನ್ನ ಮಕ್ಕಳು...ಯಾರನ್ನು ಕಂಡರೂ ನನಗೆ ಸಿಟ್ಟು, ಅಸಹನೆ. ನನ್ನ ಆಪೀಸ್‌ನ ಆ ಲ್ ಚಯರ್‌ನಲ್ಲಿ ಕುಳಿತು ಅಲ್ಲೇ ಖಿನ್ನಳಾಗ್ತೀನಿ. ನನ್ನ ಪ್ರೀತಿಸುವವರೂ ದ್ವೇಷಿಸುವವರಂತೆ ಕಾಣುತ್ತಾರೆ. ತುಂಬಾ ಸಲ ಅನಿಸಿದೆ; ನಾನು ಹುಡುಗನಾಗುತ್ತಿದ್ದರೆ, ಅದ್ಯಾವ ತೊಂದರೆಗಳೂ ನನಗಿರಲಿಲ್ಲ ಎಂದು!

ಇಷ್ಟೆಲ್ಲಾ ನೋವನ್ನು ಹೊಟ್ಟೆಯೊಳಗೇ ನುಂಗಿಕೊಂಡು ಕಷಾಯ ಮಾಡಿಕೊಂಡು ಕುಡಿಯುವಾಗ ಐದು ವರ್ಷದ ನನ್ನ ಮಗಳು ಬಂದು ಕೇಳುತ್ತಾಳೆ; ಯಾಕಮ್ಮಾ, ಕಷಾಯ ಕುಡಿತೀ ಎಂದು! ಏನನ್ನೂ ಅರಿಯದ ಆ ಮಗಳು ಹೀಗೆ ಕೇಳಿದಾಗ ನನ್ನ ಪಾಡಿಗೆ ನಾನಿರುತ್ತೇನೆ. ಅದ್ಯಾವ ಉತ್ತರಗಳೂ ಸಿಗದೆ ಆ ಪುಟ್ಟ ಮಗು ಬಿಟ್ಟ ಕಣ್ಣುಗಳಿಂದ ಪಿಳಿ ಪಿಳಿ ಎಂದು ನನ್ನ ನೋಡುತ್ತೆ. ಆ ಕ್ಷಣ ನನ್ನಮ್ಮ ನನಗೆ ನೆನಪಾಗುತ್ತಾಳೆ.

ಪ್ರಕಟ: http://hosadigantha.in/epaper.php?date=11-11-2010&name=11-11-2010-13

Wednesday, November 3, 2010

ಅಕ್ಕ ದೊಡ್ಡವಳಾಗಿದ್ದಳು!


ಅಂದು ಅಕ್ಕ ಇದ್ದಕಿದ್ದಂತೆ ಮನೆಯಿಂದ ಮಾಯವಾಗಿದ್ದಳು. ಅಮ್ಮನಿಗೆ ತುಟಿಯಂಚಿನಲ್ಲಿ ನಗು, ಅಜ್ಜಿ ಊರುಗೋಲು ಹಿಡಿದು ಮನೆಯ ಹಿಂಬದಿಯ ಆ ದಟ್ಟ ಕಾಡಿಗೆ ಹೊರಟಿದ್ದಳು. ಅಕ್ಕ ಆ ಮುಳ್ಳಿನ ಪೊದೆಯೊಳಗೆ ನುಗ್ಗಿ ಕುಳಿತು ಸುಮ್ಮನೆ ಒಬ್ಬಳೇ ಅಳುತ್ತಿದ್ದಳು. ‘ಅಕ್ಕಾ, ಏಕೆ ಅಳ್ತಿಯಾ?’ ಎಂದು ಕೇಳಿದಾಗ ಅಮ್ಮ ಸುಮ್ಮನಾಗುವಂತೆ ನನಗೆ ಗದರಿದ್ದರು. ಮುಂದಿನ ಯೋಚನೆಗಳಿಗೆ ಅವಕಾಶಗಳಿರಲಿಲ್ಲ. ಅಕ್ಕನನ್ನು ಕರೆದುಕೊಂಡು ಬಂದು ಅಂಗಳದಲ್ಲೇ ಕೂರಿಸಿ, ಬಟ್ಟೆ ಬದಲಾಯಿಸಿ ಸ್ನಾನ ಮಾಡಲು ಅಜ್ಜಿಯ ಸುಗ್ರಿವಾಜ್ಞೆ ಹೊರಡಿತ್ತು. ಅಮ್ಮ ನಮ್ಮೂರ ಹೊಳೆ ದಾಟಿ ಆಚೆ ಮನೆಯ ಹೆಂಗಳೆಯರನ್ನು ಕರೆದುಕೊಂಡು ಬಂದಳು. ಅವರೆಲ್ಲರ ನೋಟ ಅಕ್ಕನತ್ತ, ಅಕ್ಕನ ಕಣ್ಣುಗಳಲ್ಲಿ ನಾಚಿಕೆಯ ಕಾಮನಬಿಲ್ಲು.

ಅಕ್ಕ ದೊಡ್ಡವಳಾಗಿದ್ದಳು!!
ಅಂದು ಅಮ್ಮನ ತಲೆಯಲ್ಲಿ ಅಕ್ಕನ ಮದುವೆಯ ಚಿಂತೆ. ವೊನ್ನೆ ವೊನ್ನೆ ತನಕ ನನ್ನನ್ನು ಸ್ಕೂಲಿಗೆ ರೆಡಿ ಮಾಡಿ, ಅವಳೂ ಬ್ಯಾಗ್ ಹೆಗಲೇರಿಸಿಕೊಂಡು ನನ್ನ ಜೊತೆ ಹೆಜ್ಜೆ ಹಾಕುತ್ತಿದ್ದ ಅಕ್ಕನನ್ನು ಮರುದಿನ ಅಮ್ಮ ಶಾಲೆಗೆ ಹೋಗಬೇಡ ಎಂದು ಗದರಿ ಅಂಗಳದಲ್ಲಿ ನಿಲ್ಲಿಸಿದಳು. ಅಮ್ಮನೇ ಅಕ್ಕನಿಗೆ ರಜೆ ಘೋಷಿಸಿಬಿಟ್ಟಿದ್ದಳು! ಹಟ್ಟಿಯ ಪಕ್ಕದಲ್ಲಿರುವ ಪುಟ್ಟ ಕೋಣೆಯೇ ಆಕೆಯ ಮನೆಯಾಗಿತ್ತು. ಅಂದಿನವರೆಗೆ ಸಂಭ್ರಮದ ಬುಗ್ಗೆಯಾಗಿದ್ದ ಅಕ್ಕ ಅವಳನ್ನು ‘ಕೂಡಿ’ ಹಾಕಿದ ಕೋಣೆಯಲ್ಲಿ ಆಕೆ ಒಬ್ಬಂಟಿಯಾಗಿದ್ದಳು. ಅಲ್ಲಿಗೇ ಊಟ, ನೀರು, ಬಟ್ಟೆ ...ಎಲ್ಲವೂ ಅಲ್ಲಿಗೇ ಸರಬರಾಜಾಗುತ್ತಿತ್ತು. ಅವಳನ್ನು ಮುಟ್ಟಬಾರದು ಎಂದು ಅಮ್ಮ ಹೇಳಿದಾಗ ನನಗೆ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ಆ ಕೋಣೆಯಲ್ಲಿ ಅಕ್ಕನನ್ನು ‘ಕೂಡಿ’ ಹಾಕಿದಾಗೆ ಭಾಸವಾಗಿತ್ತು. ಅಲ್ಲಿ ಹೋಗಬೇಡ, ಬಾವಿಯಿಂದ ನೀರು ಎತ್ತಬೇಡ, ತೋಟದ ಕಡೆ ಹೋದ್ರೆ ಅಲ್ಲಿ ದೇವರ ಗುಡಿ ಇದೆ, ಮನೆಯ ಜಗುಲಿನೂ ಮುಟ್ಟಬೇಡ, ನೀನು ಊಟ ಮಾಡಿದ ತಟ್ಟೆಯನ್ನು ಬೇರೆನೇ ಇಟ್ಟುಕೋ, ಲಂಗ ಧಾವಣಿ ಬೇಡ, ಸೀರೆ ಉಡಬೇಕು....ಇಂಥ ಉಪದೇಶಗಳಲ್ಲೇ ಅಮ್ಮ ಅಕ್ಕನನ್ನು ‘ಸೀಮಿತ ಪ್ರಜ್ಞೆ’ಗೆ ತಳ್ಳಿಬಿಟ್ಟಿದ್ದಳು.

ಅಕ್ಕನ ಬಿಟ್ಟು ಶಾಲೆಗೆ ಹೋದಾಗ ಮೇಷ್ಟ್ರು, ‘ನಿನ್ನಕ್ಕ ಎಲ್ಲಿ?’ ಎಂದು ಕೇಳಿದಾಗ ಎಲ್ಲರೆದುರು ಜೋರಾಗಿ ಅಕ್ಕ ದೊಡ್ಡವಳಾಗಿದ್ದಾಳೆಂದು ಹೇಳಿಬಿಟ್ಟಿದ್ದೆ. ಮೇಷ್ಟ್ರು ಉದ್ದದ ಕೋಲು ಹಿಡಿದು ಸುಮ್ನಿರೋ ಎಂದು ಗದರಿದ್ದು ಇನ್ನೂ ನೆನಪು. ಸುತ್ತಮುತ್ತಲಿನವರು ಮಗಳು ದೊಡ್ಡವಳಾದಳು, ಇನ್ನು ಮದುವೆಯ ಚಿಂತೆ ಎಂದಾಗ ಅಕ್ಕ ಪ್ರಶ್ನಾರ್ಥವಾಗಿ ನೋಡುತ್ತಿದ್ದಳು. ಅವಳಿಗಿನ್ನೂ ೧೪ ದಾಟಿರಲಿಲ್ಲ. ಇನ್ನೂ ಏಳನೇ ಕ್ಲಾಸು. . ಮಲ್ಲಿಗೆಯ ವೊಗ್ಗಿನಂತೆ ಆಗಷ್ಟೇ ಬಿರಿದ ಅವಳದು ಮದುವೆ-ಬದುಕು-ಬಂಧನ ಇದ್ಯಾವುದನ್ನೂ ಚಿಂತಿಸದ ವಯಸ್ಸು.

ಅಂದು ಅಕ್ಕನನ್ನು ನನ್ನಿಂದ ದೂರ ಇಟ್ಟಿದ್ದು ಅಮ್ಮನ ಮೇಲೆ ಕೆಟ್ಟ ಸಿಟ್ಟು ತರಿಸಿತ್ತು. ಅಮ್ಮ, ಅಜ್ಜಿ ಅದ್ಹೇಕೆ ಹೀಗೆ ಮಾಡಿದ್ರು? ಯಾವುದೂ ಅರ್ಥವಾಗಿರಲಿಲ್ಲ. ಆದರೆ, ಅಕ್ಕನೆತ್ತರಕ್ಕೆ ನಾನೂ ಬೆಳೆದಾಗ ಇದೆಲ್ಲವೂ ನನಗೂ ಅರ್ಥವಾಯಿತು. ಆದರೆ, ಅಕ್ಕನನ್ನು ಕೂಡಿ ಹಾಕಿದ ಕೋಣೆಯಲ್ಲಿ ನನ್ನನ್ನು ಕೂಡಿ ಹಾಕಲಿಲ್ಲ, ಅಕ್ಕನಂತೆ ನನ್ನನ್ನು ಅಮ್ಮನೇನೂ ಗದರಲಿಲ್ಲ. ಅಲ್ಲಿ ಹೋಗಬೇಡ, ಇಲ್ಲಿ ಹೋಗಬೇಡ...ಎಂಬ ಯಾವ ಚೌಕಟ್ಟುಗಳನ್ನು ಅಮ್ಮ ಹಾಕಿರಲಿಲ್ಲ. ಅಮ್ಮನ ತುಟಿಯಂಚಿನಲ್ಲಿ ನಗುವಷ್ಟೇ ಮೂಡಿತ್ತು. ಸಂಪ್ರದಾಯಗಳ ಚೌಕಟ್ಟುಗಳು ಅಂದು ಅರ್ಥ ಕಳೆದುಕೊಂಡಿದ್ದವು! ಇದೆಲ್ಲಾ Uಚುತ್ತಿರುವಾಗ ಪಿ.ಲಂಕೇಶ್ ಅವರ ನೀಲು ಕವಿತೆಯೊಂದು ನೆನಪಾಯಿತು.
ನನಗೆ ಅತ್ಯಂತ
ಸಂಕೋಚದ
ನೆನಪು
ಯಾವುದೆಂದರೆ

ನನ್ನ ಪ್ರೀತಿಯ ತಂದೆಗೆ
‘ಇನ್ನು ನನಗೆ ಸ್ನಾನ ಮಾಡಿಸಬೇಡ’
ಎಂದು ಲಂಗದಿಂದ ಸೀರೆಗೆ ಜಾರಿದ್ದು!!

ಬಹುಶಃ ಈ ಕವನದಲ್ಲಿ ಹೇಳಿದಂತೆ ಹೆಣ್ಣುಮಗಳೊಬ್ಬಳು ‘ಹರೆಯ’ಕ್ಕೆ ಬರುವುದು ಅವಳಿಗೆ ಅತ್ಯಂತ ನಾಚಿಕೆಯ ನೆನಪಾಗಿರಬೇಕು.

Wednesday, October 27, 2010

‘ಹಸಿರು’ ಕನಸುಗಳು

ಅಂದು ಶ್ರಾವಣ ಮಾಸದ ವೊದಲ ಮಂಗಳವಾರ.
ನನ್ನ ಪುಟ್ಟ ಜಡೆಯಲ್ಲಿ ಮಲ್ಲಿಗೆ ಮಾತಿಗಿಳಿದಿತ್ತು. ಕಿವಿಯಲ್ಲಿ ಕೆಂಪು ಹರಳಿನ ಓಲೆ ತೂಗುಯ್ಯಾಲೆಯಾಡುತ್ತಿತ್ತು. ಕೈಯಲ್ಲಿ ಬಣ್ಣದ ಹೊಸಬಳೆಗಳು ಮಿರಮಿರನೆ ಮಿನುಗುತ್ತಿದ್ದವು. ಕೈಯಲ್ಲಿ ಮದರಂಗಿಯ ಚಿತ್ತಾರ. ನಿತ್ಯ ಹಣೆಯಲ್ಲಿರುತ್ತಿದ್ದ ಸಣ್ಣ ಬಿಂದಿಯನ್ನು ತೆಗೆದು ಅತ್ತೆ ದೊಡ್ಡ ಬಿಂದಿಯನ್ನಿಟ್ಟಿದ್ದರು. ಆ ಬಿಂದಿ ಕೆಳಗಡೆ ಕುಂಕುಮ ನಳನಳಿಸುತ್ತಿತ್ತು. ಕೆನ್ನೆ ಅರಿಶಿನವಾಗಿತ್ತು. ಕೈ ಬೆರಳುಗಳಲ್ಲಿ ಪುಟ್ಟದಾದ ಚಿನ್ನದುಂಗುರ. ಆ ನರುಗೆಂಪು ರೇಷ್ಮೆ ಸೀರೆಯ ಜರಿಯಂಚು ಎದೆಮೇಲೆ ಹೊಳೆಯುತ್ತಿತ್ತು. ಕತ್ತಿನಲ್ಲಿ ‘ಮುತ್ಯೆದೆ’ಯ ರಂಗು...

ನನ್ನನ್ನು ನಾನೇ ನೋಡಿಕೊಳ್ಳುವ ತವಕ. ಕನ್ನಡಿ ಎದುರು ನಿಂತು ನಿಮಿಷಗಟ್ಟಲೆ ಕಳೆದಿದ್ದೆ, ನನ್ನೊಳಗೇ ಸಂಭ್ರಮಿಸಿದ್ದೆ. ತುಟಿಯಂಚಿನಲ್ಲಿ ಖುಷಿಯ ಮುಗುಳುನಗೆ. ‘ಇನ್ನೇನೂ ಕೆಲ ನಿಮಿಷ, ಪುರೋಹಿತರು ಬರುತ್ತಾರೆ. ಬಾಮ್ಮಾ...ಗೌರಿಯನ್ನು ಸಿಂಗರಿಸು’ ಅತ್ತೆಯಮ್ಮನ ಕರೆ ಕೇಳಿದಾಗ, ಜಿಂಕೆಯಂತೆ ಓಡಿ ದೇವರಮನೆಯಲ್ಲಿದ್ದೆ. ಆಗಿನ್ನೂ ಮುಂಜಾವಿನ ಐದೂವರೆ ಗಂಟೆ. ಸೂರ್ಯ ನಿಧಾನವಾಗಿ ಎದ್ದೇಳುತ್ತಿದ್ದ. ‘ಪತಿ ದೇವರು’ ಇನ್ನೂ ಹಾಸಿಗೆ ಬಿಟ್ಟಿರಲಿಲ್ಲ.

ಆ ಪುಟ್ಟ ಜಾಗದಲ್ಲಿ ಚೆಂದದ ರಂಗೋಲಿ ಹಾಕಿದ್ದೆ. ಅದರ ಮೇಲೆ ಮಣೆಯನ್ನಿಟ್ಟು ಗೌರಿ, ಗಣೇಶ ಮತ್ತು ಕಲಶವನ್ನಿಟ್ಟೆ. ಮಲ್ಲಿಗೆ, ಸೇವಂತಿಗೆ ಮತ್ತು ಬಿಡಿಹೂವುಗಳಿಂದ ಗೌರಿ ಸಿಂಗಾರಗೊಂಡಳು.
‘ನೀನೇ ಗೌರಿಯಂತೆ ಕಾಣ್ತಿಯಮ್ಮಾ’ ಮಾವನ ಉವಾಚಕ್ಕೆ ಕೆನ್ನೆಯಲ್ಲಿ ಕಾಮನಬಿಲ್ಲು ಮೂಡಿತ್ತು. ಮನದಲ್ಲಿ ಸಣ್ಣನೆಯ ಭಯ. ‘ಪುರೋಹಿತರು ಹೇಳಿದಂತೆ ಮಾಡು. ವೊದಲ ವರ್ಷ. ಭಕ್ತಿಯಿಟ್ಟು ಪೂಜೆ ಮಾಡು’ ಎಂದಾಗ ಎದೆಯೊಳಗೆ ಢವಢವ. ಪುರೋಹಿತರು ಬಂದೇ ಬಿಟ್ಟರು. ಒಂದೂವರೆ ಗಂಟೆಗಳ ಕಾಲ ಮಂಗಳಗೌರಿ ಪೂಜೆ ಮಾಡಿದ್ದಾಯಿತು. ತಂಬಿಟ್ಟು ದೀಪಗಳನ್ನು ಹಚ್ಚಿಕೊಂಡು ‘ಮಂಗಳ ಗೌರಿ’ ಕಥೆ ಕೇಳಿದ್ದಾಯಿತು.

ಅದು ಮದುವೆಯಾದ ವೊದಲ ವರ್ಷ. ಮಂಗಳಗೌರಿ ವ್ರತ ಮಾಡಿದರೆ ಗಂಡನಿಗೆ ಶ್ರೇಯಸ್ಸು, ಹಿರಿಯರು ಹಾಕಿಕೊಟ್ಟ ಭದ್ರ ಹೆಜ್ಜೆ. ಒಂದಾನೊಂದು ಕಾಲದಲ್ಲಿ ಜಯಪಾಲ ಅನ್ನೋ ರಾಜನಿಗೆ ಭವಾನಿ ದೇವಿಯ ಅನುಗ್ರಹದಿಂದ ‘ಸುಶೀಲೆ’ ಎನ್ನುವ ಮಗಳು ಜನಿಸುತ್ತಾಳಂತೆ. ಅವಳಿಗೂ ಮದುವೆಯಾಗುತ್ತದೆ, ಆದರೆ ಗಂಡ ಅಲ್ಪಾಯುಷಿ. ಸುಶೀಲೆಯು ಗಂಡನ ದೀರ್ಘಾಯುಷ್ಯಕ್ಕಾಗಿ ಮಂಗಳಗೌರಿ ವ್ರತ ಮಾಡಿದ್ದಳಂತೆ...ಅದೂ ಐದು ವರ್ಷಗಳ ಪ್ರತಿ ಶ್ರಾವಣಮಾಸದ, ಪ್ರತಿ ಮಂಗಳವಾರ! ಅವಳದು ಸುಖಸಂಸಾರವಾಯಿತಂತೆ...

ಹೀಗೆಂದು ಪುರೋಹಿತರು ಹೇಳಿಕೊಟ್ಟ ದೀರ್ಘಕಥೆಯನ್ನು ಗಿಳಿಯಂತೆ ಹೇಳಿದಾಗ ಮನಸ್ಸಿನಲ್ಲಿ ಅದೇನೋ ಅವ್ಯಕ್ತವಾದ ಖುಷಿ, ಸಂತೃಪ್ತಿಯ ಬೆಳಕು. ಹೆಣ್ಣಾಗಿದ್ದಕ್ಕೆ ಹೆಮ್ಮೆ. ಪೂಜೆ ಮುಗಿಯಿತು. ಶ್ರಾವಣ ಮಾಸದ ಆ ವೊದಲ ಮಂಗಳವಾರ ಹೊಸ ಬದುಕಿಗೊಂದು ಮುನ್ನುಡಿಯಾದಂತೆ ಭಾಸವಾಯಿತು. ‘ಪತಿ ದೇವರಿಗೆ’ ಪ್ರೀತಿಯಿಂದ ನಮಸ್ಕರಿಸಿದಾಗ ಆತನ ಕಣ್ಣುಗಳಲ್ಲಿ ‘ಹಸಿರು ಕನಸು’ಗಳು ಕಂಗೊಳಿಸುತ್ತಿದ್ದವು!.


Published: http://hosadigantha.in/epaper.php?date=10-28-2010&name=10-28-2010-13

Sunday, October 3, 2010

ನಿನ್ನ ಅಪ್ಪಾ ಅನ್ತೀನಿ...


ಅಂದಿನವರೆಗೆ ಅಪ್ಪಾ ಎಂಬ ಎರಡಕ್ಷರವನ್ನೇ ದ್ವೇಷಿಸುತ್ತಿದ್ದೆ. ಅಪ್ಪನ ಕುರಿತು ಬರೆಯಬೇಕಾದಾಗ, ಅಪ್ಪನ ಕುರಿತು ಹೇಳಬೇಕಾದಾಗ ಅಲ್ಲಿ ಭಾವಗಳಿಗೆ ಜೀವವೇ ಇರಲಿಲ್ಲ. ಏಕೆಂದರೆ ಅಪ್ಪನಾಗಬೇಕಾದವನು ಅಪ್ಪನ ಜವಾಬ್ದಾರಿ ನಿಭಾಯಿಸಲೇ ಇಲ್ಲ. ಮಗಳ ಕನಸುಗಳಿಗೆ, ಅವಳ ಸುಂದರ ಭಾವಗಳಿಗೆ ಜೀವ ನೀಡಲೇ ಇಲ್ಲ. ಅಂದು ಅಮ್ಮನ ಮಡಿಲಿಗೆ ಬಿದ್ದಾಗ ಆತ ಇನ್ಯಾರೋ ಕುತ್ತಿಗೆಗೆ ಮತ್ತೆ "ತಾಳಿ'ಯಾಗಿದ್ದ!

ಇಂದು ನಿನ್ನನ್ನೇ ಅಪ್ಪ ಎಂದು ಕರೆಯುತ್ತಿದ್ದೇನೆ. ಈವರೆಗೆ ನನ್ನ ಬಾಯಿಂದ ಹೊರಬೀಳದ ಅಪ್ಪಾ ಎಂಬ ಎರಡಕ್ಷರದ ಸುಂದರ ಸಂಬಂಧಕ್ಕೆ ಜೀವ-ಭಾವ ಕೊಟ್ಟಿದ್ದು ನೀನೇ. ನೀನು ಪುಟ್ಟೀ ಅಂತ ಕರೆದಾಗಲೆಲ್ಲಾ ಆ ನಿನ್ನ ಸುಂದರ ಕರೆಗೆ ಕರಗಿ ಖುಷಿಯಿಂದ ಕಂಗಳು ಒದ್ದೆಯಾಗುತ್ತಿದೆ, ದೇವ್ರ ಮೇಲೆ ಸಿಟ್ಟುಗೊಳ್ಳುತ್ತಿದ್ದೆ. ನಿನ್ನಂಥ ಒಳ್ಳೆ ಅಪ್ಪನ ಏಕೆ ಇಷ್ಟು ತಡವಾಗಿ ಕೊಟ್ಟೆ ಅಂತ!
ಹೆಣ್ಣೊಬ್ಬಳಿಗೆ ಅಮ್ಮನ ಆಸರೆ ಹೇಗೋ ಹಾಗೆಯೇ ಅಪ್ಪನಾಸರೆಯೂ ಬೇಕಲ್ವಾ? ನನ್ನ ಕ್ಲಾಸಿನ ಹುಡುಗಿಯರೆಲ್ಲ ಅಪ್ಪಾ..ಅಪ್ಪಾ..ಅಂಥ ಕರೆಯುವಾಗ, ತಮ್ಮ ಅಪ್ಪನ ಕುರಿತು ಹಿಗ್ಗಿನಿಂದ ಹೇಳುತ್ತಿರುವಾಗಲೆಲ್ಲಾ ನನ್ನಪ್ಪನಿಗೆ ಹಿಡಿಶಾಪ ಹಾಕುತ್ತಿದ್ದೆ. ನನಗೂ ಅಪ್ಪಾ ಬೇಕಿತ್ತು, ನನ್ನನ್ನು ಹೆಗಲ ಮೇಲೆ ಹೊತ್ತು ಪೇಟೆ ಸುತ್ತಿಸುವ ಅಪ್ಪಾ ಬೇಕಿತ್ತು ಎಂದನಿಸುತ್ತಿತ್ತು, ಏನು ಮಾಡುವುದು ಹೇಳು...ನನ್ನಪ್ಪ ಆವಾಗಲೇ ನನ್ನೆದುರಿನಿಂದ ಮರೆಯಾಗಿದ್ದ. ಅಪ್ಪನೆನಿಸಿಕೊಳ್ಳುವ ಕನಿಷ್ಠ ಅರ್ಹತೆಯನ್ನೂ ಕಳೆದುಕೊಂಡಿದ್ದ.

ಅದಕ್ಕೇ ನೋಡು ಅಪ್ಪಾ...ಈವಾಗ ನಾನು ನಿನ್ನ ಅಪ್ಪಾ ಅನ್ತೀನಿ. ಪುಟ್ಟ ಮಗು ಕೋಪಿಸಿಕೊಂಡಂತೆ ನಿನ್ನ ಜೊತೆ ಕೋಪಿಸಿಕೊಳ್ತೀನಿ. ಅದು ಕೊಡಿಸು, ಇದು ಕೊಡಿಸು ಅಂಥ ಹಠ ಹಿಡಿತೀನಿ. ನೋಡಿದವರಿಗೆ ನೀನು ನನ್ನ ಅಪ್ಪನೋ ಅಥವಾ ಮಾವನೋ ಅನ್ನೋ ಕನ್‌ಫ್ಯೂಸ್ ಹುಟ್ಟುಹಾಕ್ತೀನಿ. ನಿನ್ನ ನೋಡಿದ್ರೆ ಮಾವ ಅನ್ನೋ ಭಯ ಮೂಡಲ್ಲಪ್ಪ, ಅಪ್ಪ ಅನ್ನೋ ಪ್ರೀತಿ ಹುಟ್ಟುತ್ತೆ, ಮಮತೆ ಉಕ್ಕುತ್ತೆ, ಅಪ್ಪಾ ಸಿಕ್ಕಿದ್ದಾನೆ ಅನ್ನೋ ಗೌರವ, ಹೆಮ್ಮೆ ಮೂಡುತ್ತೆ. ಅದಕ್ಕೆ ನೋಡು ವೊನ್ನೆ ನಮ್ಮ ಡ್ರೈವರ್ ಮಾಮ, ನಾನು ನಿನ್ ಮಗಳೋ ಅಥವಾ ಸೊಸೆನೋ ಅಂಥ ಪ್ರಶ್ನೆ ಮಾಡಿದ್ರು. ನೀನು ತಂದುಕೊಡುವ ಚಾಕಲೇಟು, ಸೀರೆಗಳು, ಚೂಡಿದಾರ್ ಬಟ್ಟೆಗಳು, ಪ್ರತಿ ಶುಕ್ರವಾರ ತಂದುಕೊಡುವ ಎರಡು ವೊಳ ಮಲ್ಲಿಗೆ, ನನಗೆ ಸಣ್ಣ-ಪುಟ್ಟ ಜ್ವರ
ಬಂದ್ರೂ ನೀನು ಮಾಡಿಕೊಡುವ ಬಿಸಿ ಬಿಸಿ ಕಾಫಿ, ಆ ಹಳ್ಳಿ ಮದ್ದು ಯಾವ ಮಾವ ಮಾಡಿಕೊಡುತ್ತಾನೆ ಹೇಳು? ಅದಕ್ಕೆ ಮಾವನಂದ್ರೆ ನನಗೆ ಅಪ್ಪ.

ಜೀವನ ಅಂದ್ರೆ ಹೀಗೇ ಅಪ್ಪಾ...ಎಲ್ಲೋ ಮಿಸ್ ಆಗಿದ್ದು ಮತ್ತೆಲ್ಲೋ ಸಿಗುತ್ತೆ. ಸಣ್ಣವಳಿರುವಾಗ ನನ್ನಪ್ಪನ ಮಿಸ್ ಮಾಡ್ಕೊಂಡೆ. ಆವಾಗ ಅತ್ತು ಕರೆದರೂ ಆ ದೇವ್ರು ಅಪ್ಪನ ಕೊಡಲೇ ಇಲ್ಲ. ಈಗ ನೀನು ಸಿಕ್ಕಿದ್ದಿ, ಸಾಕು...ಎನಗೆ. ಇನ್ನೇನು ಬೇಕು ನೆಮ್ಮದಿಯ ಸಂಸಾರಕ್ಕೆ, ಭರವಸೆಯ ನಾಳೆಗಳಿಗೆ?

ಪ್ರಕಟ: http://hosadigantha.in/epaper.php?date=08-26-2010&name=08-26-2010-15

Monday, August 23, 2010

ಅಮ್ಮನಾದ ಅಣ್ಣನಿಗೆ...

ಅಂದು ನೀನು ಅತ್ತಿದ್ದೆ, ನನ್ನ ದೊಡ್ಡ ಬ್ಯಾಗನ್ನು ಎತ್ತಿ ಆ ಕೆಂಪು ಬಣ್ಣದ ಕಾರಿಗೆ ಹಾಕುವಾಗ ನೀನು ಮುಸಿ ಮುಸಿ ಅಳುತ್ತಿದ್ದುದನ್ನು ಕಂಡು ಒಂದು ಕ್ಷಣ ಅಚ್ಚರಿ. ಪ್ರತಿದಿನ ನೀನು ಅಳುಮುಂಜಿ ಎಂದು ರೇಗಿಸುತ್ತಾ, ನಿನ್ನಿಂದ ಬೈಗುಳ ತಿನ್ನುತ್ತಾ ಇದ್ದವಳಿಗೆ ಅಂದು ನೀನು ಅಳೋದು ನಿಜಕ್ಕೂ ವಿಸ್ಮಯ ಅನಿಸಿಬಿಡ್ತು. ಪ್ರೀತಿ ಅಂದ್ರೆ ಅದೇ ತಾನೇ? ನಿನ್ನ ಬಗ್ಗೆ ಯೋಚಿಸಿದಾಗಲೆಲ್ಲಾ ನನಗನಿಸುವುದು ಬಹುಶಃ ನನ್ನ ನೀನು ಪ್ರೀತಿ ಮಾಡಿದಷ್ಟೂ ಬೇರ್‍ಯಾವ ಅಣ್ಣಂದಿರೂ ಪ್ರೀತಿ ಮಾಡೊಲ್ಲ ಅಂತ! ಇದು ನನ್ನ ಹೆಮ್ಮೆ. ನಿನ್ನ ಮೇಲಿನ ಅತೀವ ಪ್ರೀತಿ, ವಿಶ್ವಾಸ.

ನಿನ್ನನ್ನು ಅಣ್ಣಾ ಅಂತ ಕೂಗೋದೇ ಒಂದು ಸಂಭ್ರಮ ಕಣೋ. ಅಂದು ನಾನು ಮದುವೆಯಾಗುತ್ತಿದ್ದೇನೆ ಅಂದಾಗ ಎಲ್ಲರಿಗಿಂತ ಖುಷಿ ಪಟ್ಟವನು ನೀನೇ ಅನಿಸುತ್ತೆ. ಹೋದಲೆಲ್ಲಾ ಸಿಕ್ಕ ಸಿಕ್ಕ ‘ಕಲ್ಲುದೇವರು’ಗಳ ಎದುರು ಮೂಕವಾಗಿ ನಿಂತು ನನ್ನ ತಂಗಿಗೆ ಮದುವೆಯಾಗಲಿ ಎಂದು ಬೇಡಿಕೊಳ್ಳುತ್ತಿದೆಯಲ್ಲಾ ಬಹುಶಃ ಅದರ ಫಲವೇ ಇರಬೇಕು ಅಂದುಕೊಂಡು ಮತ್ತೆ ಅದೇ ದೇಗುಲಗಳ ಮುಂದೆ ನಿಂತು ಹಣ್ಣು ಕಾಯಿ ಮಾಡಿಸಿದವನು ನೀನೇ! ನನ್ನಣ್ಣ ಎಂದು ನಿನ್ನ ನೂರು ಬಾರಿ ಕೂಗಿದರೂ ಯಾವತ್ತೂ ನೀನು ನನ್ನ ಎತ್ತಿ ಆಡಿಸಲಿಲ್ಲ, ಮುದ್ದು ಮಾಡಲಿಲ್ಲ, ಹೆಗಲ ಮೇಲೆ ಕುಳ್ಳಿರಿಸಿ ಪೇಟೆ ಸುತ್ತಾಡಿಸಿಲ್ಲ. ಆದರೂ ನಿನ್ನೊಳಗೇ ನನಗಾಗಿ ಕಾದಿಟ್ಟಿರುವ ಆ ಅನನ್ಯ ಪ್ರೀತೀನಾ ಕ್ಷಣ ಕ್ಷಣವೂ ಧಾರೆ ಎರೆಯುತ್ತಾ ಬಂದೆ.

ಅಂದು ನನ್ನ ನೀನು ಅತ್ತೆ ಮನೆಗೆ ಕಳುಹಿಸಿಕೊಡುವಾಗ ನನ್ನ ತಬ್ಬಿಕೊಂಡು ಅದೆಷ್ಟು ಅತ್ತುಬಿಟ್ಟಿಯಲ್ಲಾ. ಅಲ್ಲಿಯವರೆಗೆ ನಿನ್ನ ಕಣ್ಣಿಂದ ಒಂದು ಹನಿ ಬಿಂದು ಜಾರಿದ್ದನ್ನೂ ನಾ ನೋಡಿರಲಿಲ್ಲ. ಇಂದಿಗೂ ಆ ಮುಖ ಕಣ್ಣೆದುರು ತೇಲಿಬಂದರೆ ನಾನೂ ಕಣ್ಣೀರಾಗುತ್ತೇನೆ. ಸಮಾಜ, ಬದುಕಿನ ಪ್ರಶ್ನೆ ಬಂದಾಗ ಅಲ್ಲೆಲ್ಲಾ ನಿನ್ನ ಕಾಳಜಿಯ ಚೌಕಟ್ಟು ಹಾಕಿದ್ದೆ. ನನ್ನೊಳಗಿರುವ ಪ್ರತಿಭೆಗಳನ್ನು ಹೆಕ್ಕಿ ತೆಗೆದು ನನ್ನೆದುರಿಟ್ಟೆ. ಒಡಹುಟ್ಟಿಲ್ಲಾಂದ್ರೂ ಒಡನಾಡಿಯಾಗಿದ್ದೆ. ಬಹುಶಃ ನನ್ನ ಬಾಯಿಂದ ಅಣ್ಣಾ...ಎಂಬ ಶಬ್ಧ ಬಂದರೆ ಅದು ನಿನ್ನ ಕಿವಿಗೇ ಬೀಳುತ್ತೆ, ಏಕೆಂದರೆ ನೀನೋರ್ವನೇ ಆ ಅಣ್ಣ! ಅಮ್ಮನ ನೆನಪಾದಗೆಲ್ಲಾ ನೀನೇ ಅಮ್ಮ ಅಂದಿದ್ದೀನಿ, ಮೌನವಾಗಿ ನಿನ್ನೆದುರು ಮೂಕಳಂತೆ ಅತ್ತಿದ್ದೀನಿ. ಎಲ್ಲವನ್ನೂ ನಿನ್ನೆದುರು ಹರವಿ ಮನಸ್ಸು ಹಗುರವಾಗಿಸಿಕೊಂಡಿದ್ದೀನಿ. ಎಲ್ಲೋ ಕಳೆದುಹೋದ ಕನಸು, ಪ್ರೀತಿ, ದೂರದಲ್ಲೆಲ್ಲೋ ಬಿಟ್ಟು ಬಂದ ಅಮ್ಮ, ಆ ನನ್ನ ಪುಟ್ಟ ಮನೆ...ಹೀಗೆ ಎಲ್ಲಾ ಕಡೆ ‘ಮಿಸ್’ ಆದದ್ದನ್ನೆಲ್ಲಾ ಒಮ್ಮೆಲೇ ನನ್ನೆದುರು ತಂದಿಟ್ಟವನು ನೀನೇ.
೨೪ ರಕ್ಷಾ ಬಂಧನ. ಅದಕ್ಕೆ ನಿನಗೆ ಶುಭಾಶಯ ಹೇಳೋಣ ಅಂಥ ಪತ್ರ ಬರೆದಿದ್ದೀನಿ. ಬೊಗಸೆ ತುಂಬಾ ಪ್ರೀತೀನ ನಿನಗಾಗಿ ಇಟ್ಟಿದ್ದೀನಿ. ಪತ್ರನ ಜೋಪಾನವಾಗಿ ನಿನ್ನ ಬೀರುವಿನಲ್ಲಿ ಭದ್ರವಾಗಿಟ್ಟುಕೋ. ಶುಭಾಶಯಗಳು...
ಮತ್ತದೇ ನಿನ್ನ ಮಡಿಲಾಸೆ...
ಇಂತೀ
ನಿನ್ನ ತಂಗಿ

(ಪ್ರಕಟ: http://hosadigantha.in/epaper.php?date=08-19-2010&name=08-19-2010-15)

Wednesday, August 18, 2010

ಸಾವಿನ ಮನೆಯ ‘ನಗು’


ನಮ್ಮನ್ನು ಹೊತ್ತ ವಾಹನ ಮುಂದೆ ಸಾಗುತ್ತಿದ್ದರೆ, ಹಿಂದಿನಿಂದ ವೇಗವಾಗಿ
ಬರುವ ವಾಹನಗಳಿಗೆ ನಮ್ಮನ್ನು ಹಿಂದಿಕ್ಕಿ ಹೋಗುವ ತವಕ. ಪ್ರತಿಯೊಬ್ಬರಿಗೂ ತಮ್ಮ ಗುರಿಯನ್ನು ಮುಟ್ಟುವ ಹಂಬಲ. ಅದಕ್ಕಾಗೇ ಪೈಪೋಟಿ. ಮನಸ್ಸು ಹಿಂದಕ್ಕೆ ಹೊರಳಿತ್ತು.

ಅಂದು ಆ ಜೀವ ತನ್ನ ಪಾಡಿಗೆ ತಾನು ಮಲಗಿತ್ತು, ನಿಶ್ಯಬ್ದವಾಗಿ! ಈ ಲೋಕದ ಪರಿವೇ ಅದಕ್ಕಿಲ್ಲ. ಅದರೆದುರು ನಿಂತು ಅಳುವವರ ಪರಿಚಯ ಅದಕ್ಕಿಲ್ಲ. ಗೋಳಾಡುವವರು ಅವರ ಪಾಡಿಗೆ ಗೋಳಾಡುತ್ತಿದ್ದರು. ಆ ಇಳಿವಯಸ್ಸಿನಲ್ಲಿ ಲೋಕದ ಪರಿವೆಗೆ ‘ಶವ’ವಾಗಿದ್ದ ಆಕೆ,
ಬದುಕಿನ ‘ಪ್ರತಿಬಿಂಬ’ದಂತೆ ಕಾಣುತ್ತಿದ್ದಳು. ಒಂದು ಕಾಲದಲ್ಲಿ ಚಿಗರೆಯಂತೆ ಓಡಾಡಿದ್ದ ಆ ಜೀವ, ಅಂದು ಕೃಶವಾಗಿತ್ತು. ವಯಸ್ಸು ಸೌಂದರ್ಯವನ್ನು ಉಳಿಸಿಕೊಳ್ಳಲಿಲ್ಲ. ಕಣ್ಣುಗಳೂ ಮಸುಕಾಗಿದ್ದವು.

ಸಾವಿನಂಚಿನಲ್ಲಿರುವ ಆ ಮುಖಗಳೂ ಅವಳೆದುರು ನಿಂತು ಅತ್ತವು. ಅವರ ಕಂಗಳಲ್ಲೂ ನಾಳಿನ
ಬದುಕಿನ ಭಯವಿತ್ತು! ಇನ್ನೊಬ್ಬರ ‘ಸಾವ’ನ್ನು ನೋಡುತ್ತಲೇ ನಾಳೆ ಎದುರಾಗುವ ನಮ್ಮ ‘ಸಾವಿನ’ ಕುರಿತು ಚಿಂತಿಸುವುದು ಅದೆಷ್ಟು ಕ್ರೂರ? ಇಷ್ಟೆಲ್ಲಾ ಆದರೂ ದೂರದಲ್ಲಿ ನಿಂತು ನಗುತ್ತಿದ್ದ ಮಗುವಿಗೆ ಅದಾವುದರ ಪರಿವೇ ಇರಲಿಲ್ಲ.

ಆ ಮಗು ಮನೆಯೆದುರು ತೂಗು ಹಾಕಿದ್ದ ತೂಗುದೀಪ ಬೇಕೆಂದು ಹಠ ಹಿಡಿಯುತ್ತಿತ್ತು. ತಣ್ಣನೆ ಮಲಗಿದ್ದ ‘ಅನಾಥ ಜೀವ’ವನ್ನು ನೋಡಿ ನಗುತ್ತಿತ್ತು. ಅಮ್ಮನೊಂದಿಗೆ ಹಾಲು ಕುಡಿಬೇಕೆಂದು ರಚ್ಚೆ ಹಿಡಿಯುತ್ತಿತ್ತು. ತನ್ನ ಲೋಕದಲ್ಲೇ ಹಲವು ವಿಸ್ಮಯಗಳಿಗೆ ಮುನ್ನುಡಿಯಾಗುತ್ತಿತ್ತು.
ಬದುಕಿನ ದಾರಿಯಲ್ಲಿ ನಾಳೆ
ಬರುವ ‘ಸಾವಿನ’ ಸುಳಿವು ಅದಕ್ಕಿರಲಿಲ್ಲ. ಆ ಮುಗ್ಧ ನಗೆಗೆ ಸಾವಿನ ಮನೆಯಲ್ಲೂ ಪುಟ್ಟದೊಂದು ಭರವಸೆ ಮೂಡಿಸುವ ಪ್ರಯತ್ನ.
ಬದುಕು ಅಂದ್ರೆ ಇದೇನಾ?...ಮನವೆಂಬ ಶರಧಿಯಲ್ಲಿ ನೂರಾರು ಪ್ರಶ್ನೆಗಳ ಅಲೆ ಅಲೆಗಳು!
(ಪ್ರಕಟ: http://hosadigantha.in/epaper.php?date=08-12-2010&name=08-12-2010-15

Sunday, August 8, 2010

ಇದು ಅಮ್ಮನಾಗುವ ಖುಷಿ.



ನಾನು ಅಮ್ಮನಾಗುತ್ತಿದ್ದೇನೆ ಕಣೇ, ಎಷ್ಟು ಖುಷಿಯಾಗುತ್ತಿದೆ ಗೊತ್ತಾ? ಎಂದು ಆಕೆ ಕಂಗಳಲ್ಲಿ ಖುಷಿಯ ನೀರು ತುಂಬಿಕೊಂಡು ಹೇಳುತ್ತಿದ್ದರೆ ನಾನು ಒಂದು ಕ್ಷಣ ಗೊಂದಲಕ್ಕೀಡಾಗಿದ್ದೆ. ಒಂದು ವರ್ಷದ ಹಿಂದೆ ಆಕೆಯ ಮದುವೆಯಾಗಿತ್ತು. ಮದುವೆಗೆ ವೊದಲು ನಿತ್ಯ ನನ್ನ ಒಡನಾಡಿಯಾಗಿದ್ದ ನನ್ನ ಗೆಳತಿ, ಆವಾಗಲೆಲ್ಲಾ ಮದುವೆ, ಮಕ್ಕಳು, ಸಂಸಾರ ಎಂದರೆ ಅಯ್ಯೋ ಅದ್ರ ಸಹವಾಸವೇ ಬೇಡಪ್ಪಾ ಅನ್ನುತ್ತಿದ್ದಳು. ಆದರೆ, ಮದುವೆಯ ವೊದಲಿನ ಗೆಳತಿಗೂ, ಈಗಿನ ಗೆಳತಿಗೂ ಅಜಗಜಾಂತರ ವ್ಯತ್ಯಾಸ.

‘ನನ್ನ ಹೊಟ್ಟೆಯಲ್ಲಿ ನನ್ನದೇ ಮಗು’ ಎಂದಾಗ ಎಷ್ಟು ಖುಷಿಯಾಗುತ್ತೆ? ಪುಟ್ಟ ಪುಟ್ಟ ಕೈಗಳು, ಕಾಲುಗಳು, ಹಾಲುಗಲ್ಲ, ಕಂದನ ಅಳು, ಸುಮ್ಮ ಸುಮ್ಮನೆ ನಗುವುದು...ಎಲ್ಲವನ್ನು ನೆನೆಸಿಕೊಂಡು ಹೆಮ್ಮೆಪಡುತ್ತಿದ್ದೀನಿ ಕಣೇ. ನನ್ನ ಹೊಟ್ಟೆಯಲ್ಲಿ ಮಗು ಕೈ-ಕಾಲು ಅಲ್ಲಾಡಿಸಿದಂತೆ ಅನಿಸಿದಾಗ ನನಗಂತೂ ದಿನಾ ಕಂಗಳು ತುಂಬಿಕೊಳ್ಳುತ್ತೆ. ಆ ಪಾಪುನ ಬೇಗ ನೋಡ್ಬೇಕು, ಅದನ್ನು ಮುದ್ದು ಮಾಡುತ್ತಾ ಅದಕ್ಕೆ ಹಾಲುಣಿಸಬೇಕು, ತುತ್ತು ಬಾಯಿಗಿಡಬೇಕು ಅನಿಸುತ್ತೆ....” ಹೀಗೆ ಅವಳು ಹೇಳುತ್ತಲೇ ಇದ್ದಳು.

ಅವಳಿಗಿನ್ನೂ ನಾಲ್ಕು ತುಂಬಿ ಐದರ ಹೊಸ್ತಿಲು...
ಮನದೊಳಗೆ ಅಚ್ಚರಿ. ಒಂದು ಕ್ಷಣ ನೆನಪಾಯಿತು, ಯಾರೋ ಹೇಳಿದ ಮಾತು; ತಾಯ್ತನದ ಸುಖ ಅನುಭವಿಸಿದವರಿಗೇ ಗೊತ್ತು .

ಹೌದು, ನನ್ನನ್ನು ಒಂಬತ್ತು ತಿಂಗಳು ಹೊಟ್ಟೆಯೊಳಗೆ ಹೊತ್ತ ಅಮ್ಮನೂ ಹೀಗೆ ಖುಷಿಪಟ್ಟಿರಬೇಕು ಅಲ್ವಾ? ಅಮ್ಮ ಹೇಳುತ್ತಿದ್ದಳು: “ನೀನು ಹುಟ್ಟಿದ್ದು ನಮ್ಮೂರ ಹೊಳೆ
ಬದಿಯ ದಾರಿ ಮಧ್ಯೆಯಲ್ಲಿ. ನೀನು ಹುಟ್ಟುವಾಗ ಏನೂ ಕಷ್ಟವಿರಲಿಲ್ಲ” ಅಂತ.
ನನ್ನ ಕೇಕೆ, ನಗು, ಅಳು, ಕಿರುಚಾಟ, ರಚ್ಚೆ ಹಿಡಿಯುವಿಕೆ...ಎಲ್ಲವನ್ನೂ ಅಮ್ಮ ಪ್ರೀತಿಸಿದ್ದಾಳೆ. ಅತ್ತಾಗ ಹೊಡೆಯದೆ ಹಾಗೇ ಮುದ್ದು ಮಾಡಿ ಲಾಲಿ ಹಾಡಿದ್ದಾಳೆ.

ಗೆಳತಿ ಅಮ್ಮನಾಗುವ ಸುದ್ದಿ ಕೇಳುತ್ತಲೇ ಯೋಚನಾಲಹರಿಗಳು ಎತ್ತೆತ್ತಲೋ ಹೊರಟವು.
ಅಬ್ಬಾ!
ಬದುಕೇ ವಿಚಿತ್ರಪ್ಪಾ...ಅಮ್ಮನಾದಾಗ ಹೆಣ್ಣೊಬ್ಬಳು ಇಷ್ಟೊಂದು ಖುಷಿ ಪಡುವುದು ಕೂಡ ಸೃಷ್ಟಿಕರ್ತನ ಲೀಲೆಯೇ? ಅದ್ಯಾಕೆ ಹೆಣ್ಣೇ ಅಷ್ಟೊಂದು ಖುಷಿಪಡುತ್ತಾಳೆ? ಆ ಮಗುವಿಗೆ ಜನ್ಮ ನೀಡಿದ ಅಪ್ಪನ ಮುಖದಲ್ಲಿ ‘ಅಮ್ಮನ ಮುಖದ ಸಂತೋಷ’ ಕಾಣಲು ಸಾಧ್ಯವೇ?
ಅಮ್ಮನೆಂದರೆ ಹಾಗೇ...ಎಲ್ಲಾ ಅಮ್ಮನೂ ಹಾಗೇ...ತನ್ನದೇ ಮಗುವಿನ ಹುಟ್ಟಿನಲ್ಲಿ ಆಕೆ ಮರುಹುಟ್ಟು ಪಡೆಯುತ್ತಾಳೆ...ಹೊಸ ಜಗತ್ತಿಗೆ ತೆರೆದುಕೊಳ್ಳುತ್ತಾಳೆ.
ಇದು ಅಮ್ಮನಾಗುವ ಖುಷಿ...

Thursday, July 29, 2010

ಅಮ್ಮನಾಗುವ ಅತ್ತೆ...


ಅಂದು ಅತ್ತೆ ‘ನೀನು ಮನೆಗೆ ಭಾಗ್ಯಲಕ್ಷ್ಮಿ ಕಣಮ್ಮಾ, ಬಲಗಾಲಿಟ್ಟು ಒಳಗೆ ಬಾ’ ಎಂದು ಕರೆದು ಮನೆ ತುಂಬಿಸಿಕೊಂಡಾಗ ನಿಜಕ್ಕೂ ಹೌದಾ? ನನ್ನ ಅತ್ತೆ ನನ್ನ ಚೆನ್ನಾಗಿ ನೋಡ್ಕೋತಾರಾ? ಅತ್ತೆ-ಸೊಸೆ ಎಂದರೆ ಹಾವು-ಮುಂಗುಸಿಯಂತೆ ಎಂದು ಯಾರ್‍ಯಾರೋ ಹೇಳಿದ ಮಾತು ನೆನೆಪಾಗುತ್ತಿತ್ತು. ನನ್ನ ಒಳಮನಸ್ಸು ‘ನೀನೀಗ ಸೊಸೆ’ ಎಂದು ಸಾರಿ ಸಾರಿ ಹೇಳುತ್ತಿತ್ತು. ಬದುಕಿನ ಒಂದು ಘಟ್ಟದಿಂದ ಮತ್ತೊಂದು ಘಟ್ಟಕ್ಕೆ ಕಾಲಿಟ್ಟಾಗ ಆತಂಕ, ಖುಷಿ ಎಲ್ಲವೂ ಧುತ್ತೆಂದು ಮನದೊಳಗೆ ಮನೆಮಾಡಿತ್ತು.

ಹೌದು, ಮದುವೆಯಾಗಿ ಆಗಿನ್ನೂ ಒಂದು ವಾರ ಪೂರ್ತಿಯಾಗಿರಲಿಲ್ಲ. ಅತ್ತೆ ಮನೆಯಿನ್ನೂ ಹೊಸತು. ಇನ್ನೂ ಗಂಡನ ಮುಖ ಬಿಟ್ಟರೆ ಬೇರೆನೂ ಪರಿಚಯವಿಲ್ಲ. ಅಡುಗೆ ಮನೆಯಲ್ಲಿ ‘ಅತ್ತೆಯೇ ವಿಜ್ಞಾನಿ’. ಆ ವಿಜ್ಞಾನವನ್ನು ನಾನಿನ್ನೂ ಕರಗತಮಾಡಿಕೊಳ್ಳಬೇಕು. ಪುಟ್ಟ ಮಗುವಿನಂತೆ ಎಲ್ಲವನ್ನೂ ಗಂಡನೇ ಹೇಳಬೇಕು. ಅಂದು ನಾಳೆ ಶುಕ್ರವಾರ ಕಣಮ್ಮಾ, ಲಕ್ಷ್ಮಿ ಪೂಜೆ ಮಾಡಬೇಕು. ಬೇಗ ಎದ್ದುಬಿಡು ಎಂದು ರಾತ್ರಿಯೇ ಅತ್ತೆ ನೆನಪಿಸಿದಾಗ, ‘ನೆನೆಸಿಕೊಂಡಲ್ಲಿ ದೇವರಿದ್ದಾನೆ’ ಎಂದು ನಂಬಿಕೊಂಡಿದ್ದ ನನಗೆ ಅವರ ಎಚ್ಚರಿಕೆಯನ್ನೂ ಮೀರಲಾಗಲಿಲ್ಲ. ‘ಏಳ್ತೀನಮ್ಮ’ ಎಂದು ನಗುಮುಖದಿಂದಲೇ ಒಪ್ಪಿಕೊಂಡಾಗ ಖುಷಿಯಿಂದ ಅತ್ತೆ ‘ಜಾಣೆ’ ಎಂದು ಬೆನ್ನುತಟ್ಟಿದ್ದರು.

ಮರುದಿನ ಬೆಳಿಗ್ಗೆ ಬೇಗನೇ ಎದ್ದು ಸ್ನಾನ ಮಾಡಿ, ಸೀರೆಯುಟ್ಟು, ಕೈ ತುಂಬಾ ಬಳೆ, ಮುಡಿತುಂಬಾ ಹೂವು ಮುಡಿದು ಅತ್ತೆ ಹೇಳಿದಂತೆ ಲಕ್ಷ್ಮಿಯನ್ನು ಪೂಜಿಸಿದ್ದೆ. ನನಗೆ ಶ್ಲೋಕಗಳು ಗೊತ್ತಿಲ್ಲದಿದ್ದರೂ ಪಟಪಟನೆ ಶ್ಲೋಕಗಳನ್ನು ಬಾಯಿಪಾಠ ಮಾಡಿಕೊಂಡು ಹೇಳಿಕೊಡುತ್ತಿದ್ದ ಅತ್ತೆಯ ಪ್ರತಿಭೆಗೆ ನಾನೇ ಬೆರಗಾಗಿದ್ದೆ. ಬಹುಶಃ ಎಲ್ಲಾ ಅತ್ತೆಯರು ಹೀಗೇನೋ ಎಂದು ಮನಸ್ಸು ಕೇಳುತ್ತಿತ್ತು. ಹೊಸ ಬದುಕಿನಲ್ಲಿ ಹೊಸತರ ಬೆರಗು ನನ್ನೊಳಗೆ ಮನೆಮಾಡಿತ್ತು. ಆದ್ರೂ ಅತ್ತೆ-ಸೊಸೆಯರನ್ನು ಯಾಕೆ ಪರಸ್ಪರ ಶತ್ರುಗಳಂತೆ ಕಾಣ್ತಾರೆ? ಸಮಾಜವೇ ಹಾಕಿಕೊಟ್ಟ ಚೌಕಟ್ಟು ಇದಲ್ವಾ? ಸುಮ್ಮ ಸುಮ್ಮನೆ ಹೆಣ್ಣಿಗೆ ಹೆಣ್ಣೇ ಮರುಗುವ ‘ಹೆಣ್ಣು ಬದುಕು’ ಇದೆಯಾದರೂ ಪರಸ್ಪರ ಎತ್ತಿಕಟ್ಟುವ ಪರಂಪರೆಯನ್ನು ಸಮಾಜವೇ ಬೆಳೆಸಿದ್ದಲ್ವಾ? ಎಂದನಿಸುತ್ತಿತ್ತು.

ಅಂದು ಯುಗಾದಿ ಹಬ್ಬದಂದು ನನ್ನತ್ತೆ ನನಗೆ ಗುಲಾಬಿ ಬಣ್ಣದ ಹೊಸ ಚೂಡಿದಾರ್ ತಂದಾಗ ನಾನೆಷ್ಟು ಖುಷಿಪಟ್ಟಿದ್ದೆ? ಹೊಸ ಚೂಡಿಧಾರ್ ಧರಿಸಿ ಅತ್ತೆ ಕಾಲಿಗೆ ನಮಸ್ಕರಿಸಿ ಅಫಿಸಿಗೆ ಹೊರಟಾಗ ನನ್ನ ಹಣೆಗೆ ಕುಂಕುಮವಿಟ್ಟು ತಬ್ಬಿ ಮುತ್ತಿಟ್ಟ ಅತ್ತೆಯನ್ನು ಕಂಡಾಗ, ಅಮ್ಮ-ಅತ್ತೆನ ಅದೇಕೆ ಸಮಾಜ ಅಷ್ಟೊಂದು ಅಂತರದಲ್ಲಿ ಕಾಣುತ್ತೆ ಎಂದನಿಸಿತ್ತು. ಹೌದು, ಅತ್ತೆನೂ ಅಮ್ಮ ಆಗ್ತಾಳೆ, ಏಕಂದ್ರೆ ಅವಳು ಅಮ್ಮನಾಗಿದ್ದವಳು!

(ಹೊಸದಿಗಂತದಲ್ಲಿ ನಾನು ಬರೆಯುವ ಭಾವಬಿಂದು ಅಂಕಣದಲ್ಲಿ ಪ್ರಕಟ:
http://hosadigantha.in/epaper.php?date=07-29-2010&name=07-29-2010-15)

Friday, July 2, 2010

ಕಲೆ ವಿಲಾಸಕ್ಕಲ್ಲ, ವಿಕಾಸಕ್ಕಾಗಿ...

ಆತ ಕಲೆಗಾರ.
ತನ್ನ ಪುಟ್ಟ ಸ್ಟುಡಿಯೋದಲ್ಲಿ ಕುಳಿತ ಆತನಿಗೆ ಆತನದೇ ಲೋಕ. ಆ ಬಣ್ಣದ ಪೆನ್ನುಗಳು, ಒಂದಷ್ಟು
ಬ್ರಶ್‌ಗಳು, ಹಾಳೆಗಳು, ತಂತಿಗಳು, ಮರಳಿನ ಹುಡಿ...ಈ ಎಲ್ಲವುಗಳ ನಡುವೆ ಕುಳಿತ ಆತ ಕಲೆಗಾರ. ಮಾತೆತ್ತಿದ್ದರೆ 'ಕಲೆ ವಿಲಾಸಕ್ಕಲ್ಲ, ವಿಕಾಸಕ್ಕಾಗಿ' ಟಾಲ್‌ಸ್ಟಾಯ್ ಹೇಳಿರುವ ಮುತ್ತಿನ ಮಾತುಗಳು ಅವರ ಬಾಯಿಂದ ಉದುರುತ್ತವೆ. ಜೊತೆಗೆ 'ಕಲೆ ಹೃದಯದ ಭಾಷೆ. ಅದಿರುವುದು ಮನುಷ್ಯನನ್ನು ಶುದ್ಧಮಾಡುವುದಕ್ಕಾಗಿ. ತಮ್ಮ ಅನುಭವ, ಭಾವಗಳನ್ನು ಚಿತ್ರದ ಮೂಲಕ ವ್ಯಕ್ತಿಪಡಿಸಬೇಕು. ಆಗ ಅಲ್ಲಿ ತಮ್ಮತನ ಅಭಿವ್ಯಕ್ತಿಗೊಳ್ಳುತ್ತೆ'' ಎಂದು ಕಲೆಗೆ ತಮ್ಮದೇ ವ್ಯಾಖ್ಯಾನ ನೀಡುತ್ತಾರೆ.

ಇವರೇ ರಾಘವೇಂದ್ರ ಹೆಗಡೆ.
ಹುಟ್ಟಿದ್ದು ಶಿರಸಿಯ ಕೃಷಿ ಕುಟುಂಬವೊಂದರಲ್ಲಿ. ಗಜಾನನ ಹೆಗಡೆ ಮತ್ತು ಯಮುನಾ ಹೆಗಡೆ ಇವರ ಅಪ್ಪ-ಅಮ್ಮ. ಬಾಲ್ಯದಲ್ಲಿ ಕಲೆ ಏನೆಂದು ಗೊತ್ತಿಲ್ಲದಿದ್ದರೂ ಸುಂದರವಾದ ಚಿತ್ರಗಳನ್ನು ಕಂಡಾಗ ಕುತೂಹಲಗೊಂಡಿದ್ದು, ಸಂಭ್ರಮದಿಂದ ಕೇಕೆ ಹಾಕಿದ್ದು ನಿಜ. ಅಂಥ ಹುಡುಗನ ಚಿತ್ರ ನೋಡಿ ರಾಷ್ಟ್ರಪತಿಯಾಗಿದ್ದ ಅಬ್ಧುಲ್ ಕಲಾಂ ಅವರೇ ಖುಷಿಪಟ್ಟಿದ್ದರು. ಅಷ್ಟೇ ಅಲ್ಲ, ಇವರು ಬಿಡಿಸಿದ ಚಿತ್ರವನ್ನು ತಾನೇ ಸ್ವತಃ ಕೊಂಡೊಯ್ದು ರಾಷ್ಟ್ರಪತಿ ಭವನದಲ್ಲಿರುವ ಮ್ಯೂಸಿಯಂನಲ್ಲಿ ಇಟ್ಟಿದ್ದಾರೆ. ಹಲವಾರು ಪ್ರಸಿದ್ಧ ಕಲಾವಿದರ ಚಿತ್ರ ಸಂಗ್ರಹದ ಜೊತೆಗೆ ಕನ್ನಡದ ಯುವಕನೊಬ್ಬನ ಚಿತ್ರ ಇಂದು ರಾಷ್ಟ್ರಪತಿ ಭವನದಲ್ಲಿದೆ ಕನ್ನಡಿಗರಿಗೂ ಹೆಮ್ಮೆ,

ಕಲ್ಲು, ಮರ, ಮಣ್ಣು, ಲೋಹ ಎಲ್ಲವೂ ಇವರ ಕೈಯಲ್ಲಿ ಕಲಾಕೃತಿಗಳಾಗುತ್ತವೆ. ಸೊಳ್ಳೆ ಪರದೆಯಂಥ ಸಣ್ಣ ತಂತಿಗಳನ್ನು ಬಳಸಿ, ಅವುಗಳಿಂದ ವೈವಿಧ್ಯಮಯ ಕಲಾಕೃತಿಗಳನ್ನು ಬಿಡಿಸುವ ಇವರ ಕಲಾಪ್ರತಿಭೆ ಅದ್ಭುತ. ರಷ್ಯಾ ಮತ್ತು ಇಂಗ್ಲೆಂಡ್‌ನ ಇಬ್ಬರು ಕಲಾವಿದರನ್ನು ಹೊರತುಪಡಿಸಿದರೆ ನಮ್ಮ ದೇಶದ ಕಲಾಪ್ರತಿಭೆ ಎಂದರೆ ಅದು ರಾಘವೇಂದ್ರ ಹೆಗಡೆಯವರೊಬ್ಬರೇ. ಹಾಗೇ ಮರಳ ಮೇಲೆ ಕಲಾಕೃತಿ ಬಿಡಿಸುವ ಕಲೆ ಇನ್ನೂ ಚೆನ್ನ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅಂಥ ಅಪರೂಪದ ಕಾರ್ಯಕ್ರಮ ಆಯೋಜಿಸಿದ್ದರು. ಹಾಡುಗಾರರು ಹಾಡುತ್ತಾ ಇದ್ದರೆ, ಇತ್ತ ಗಾಜಿನ ಮೇಲೆ ಹರಡಿರುವ ಮರಳ ಮೇಲೆ ತನ್ನ ಬೆರಳುಗಳಿಂದಲೇ ಹಾಡಿಗೆ ಜೀವ ತುಂಬುತ್ತಿದ್ದರು. ಈ ಕಲೆ ಇಂಗ್ಲೆಂಡ್‌ನಲ್ಲಿ ಹೊರತುಪಡಿಸಿದರೆ ಬೇರೆಲ್ಲೂ ಇಲ್ಲ. ಇದೀಗ ಇಂಥ ಅದ್ಭುತ ಕಲೆಯನ್ನು ದೇಶಕ್ಕೆ ಪರಿಚಯಿಸಿದ ಕೀರ್ತಿ ರಾಘವೇಂದ್ರ ಅವರಿಗೆ ಸಲ್ಲುತ್ತದೆ.




"ನಮ್ಮ ಕಲೆಗಳು ಯಾವುದೋ ಮಾಲ್‌ಗಳಿಗೆ, ಪ್ರದರ್ಶನಗಳಿಗೆ, ಶೋಕೇಸ್‌ಗೆ ಸೀಮಿತವಾಗಬಾರದು. ಜನರ ಮುಂದೆ ಕಲೆ ಹೋಗಬೇಕು. ಆಗ ಜನ ನಮ್ಮನ್ನು ಗುರುತಿಸುತ್ತಾರೆ. ನನ್ನ ಭಾವಾಭಿವ್ಯಕ್ತಿ ಜನಸಾಮಾನ್ಯನ ಮುಂದೆ ಹೋಗಬೇಕೆನ್ನುವುದೇ ನನ್ನಾಸೆ’ ಎನ್ನುವ ರಾಘವೇಂದ್ರ ಅವರು ಕೇವಲ ಚಿತ್ರಕಲಾವಿದರು ಮಾತ್ರವಲ್ಲ, ಅವರ ಕ್ಷೇತ್ರಗಳು ಇನ್ನೂ ವಿಶಾಲ. ಮಂದ್ರಾ, ಗಂಗಾವತರಣ, ಇಡಿಪಸ್, ಮುದ್ರಾ ರಾಕ್ಷಸ ಮುಂತಾದ ನಾಟಕಗಳಿಗೆ ಕಲಾನಿರ್ದೇಶಕನಾಗಿ ಹಾಗೂ ಮೈಸೂರು ಮಲ್ಲಿಗೆ ಸೇರಿದಂತೆ ಹಲವಾರು ನಾಟಕಗಳಲ್ಲಿ ಅಭಿನಯಿಸಿರುವ ರಾಘವೇಂದ್ರ ಅವರು, ಬೆಂಗಳೂರಿನ ಹಲವಾರು ಕಾಲೇಜುಗಳಲ್ಲಿ ಕಲೆಯ ಕುರಿತಾದ ಬೋಧನೆಗೆ 'ಅತಿಥಿ ಉಪನ್ಯಾಸಕನಾಗಿ'ಯೂ ಕಾರ್ಯನಿರ್ವಹಿಸುತ್ತಿದ್ದಾರೆ.


ಇವರ ಯಾವುದೇ ಕಲಾಕೃತಿಗಳನ್ನು ನೋಡಿದರೂ ಅಲ್ಲಿ "ದೇಸಿತನ'' ಎದ್ದು ಕಾಣುತ್ತದೆ. ಭಾರತೀಯತೆ, ನಮ್ಮ ಸಂಸ್ಕಾರ, ಸಂಸ್ಕೃತಿ...ಇಂಥ ವಿಚಾರಗಳ ಕುರಿತಾಗೇ ಮಾತಿಗಿಳಿಯುವ ರಾಘವೇಂದ್ರ, ಒಂದು ಕ್ಷಣ ಕಲಾವಿದನಾಗಿಯೂ, ಮಗದೊಂದು ಕ್ಷಣ ಚಿಂತನಕಾರನಾಗಿಯೂ ಅಚ್ಚರಿಗೊಳಿಸುತ್ತಾರೆ. ಓರ್ವ ಎಂಜಿನಿಯರ್ ಅಥವಾ ವೈದ್ಯನಾದರೆ ಅವರು ಸಂತೋಷಗೊಳಿಸದೆಯೇ ದುಡ್ಡು ಮಾಡಬಹುದು, ಆದರೆ ತಾನೂ ಸಂತೋಷಗೊಳ್ಳುತ್ತಾ, ಇತರರನ್ನೂ ಸಂತೋಷಗೊಳಿಸುವುದು ಕಲೆ ಮಾತ್ರ ಎನ್ನುವ ರಾಘವೇಂದ್ರ ಅವರು ಜನಸಾಮಾನ್ಯರೂ ಸಂಭ್ರಮಿಸುವ ಉತ್ತಮ ಕಲಾವಿದರಾಗಲಿ ಎಂದು ಹಾರೈಸೋಣ.
****
ಒಂದೆಡೆ ಹಾಡುಗಾರರು ಹಾಡುತ್ತಿದ್ದರೆ, ಇತ್ತ ಕಲಾವಿದರೊಬ್ಬರು ಹಾಡಿನ ಭಾವವನ್ನು ಮರಳಿನ ಮೇಲೆ ಚಿತ್ರಗಳಲ್ಲೇ ನಿರೂಪಿಸುತ್ತಾರೆ. ಈ ಕಲೆ ರಾಘವೇಂದ್ರ ಅವರಿಗೆ ಕರಗತ. ಈ ಮೂಲಕ ದೇಶದಲ್ಲೇ ಮೊದಲ ಬಾರಿಗೆ "ಮರಳ ಕಲೆ" ಯನ್ನು ರಾಘವೇಂದ್ರ ಪರಿಚಯಿಸಿದ್ದಾರೆ(ಬೇರೆಲ್ಲೂ ಕೇಳಿಲ್ಲ) ಇವರ ಅದ್ಭುತ ಕಲಾ ಪ್ರತಿಭೆಯನ್ನು ಕಂಡು ಅಂದು ರಾಷ್ಟ್ರಪತಿಯಾಗಿದ್ದ ಅಬ್ಧುಲ್ ಕಲಾಂ ಅವರೇ ಬೆನ್ನು ತಟ್ಟಿದ್ದಾರೆ. ಇವರು ಬಿಡಿಸಿದ ಚಿತ್ರ ಇಂದು ರಾಷ್ಟ್ರಪತಿ ಭವನದ ಮ್ಯೂಸಿಯಂನಲ್ಲಿದೆ.

ಇಲ್ಲೂ ಓದಬಹುದು: http://hosadigantha.in/epaper.php?date=07-03-2010&name=07-03-2010-15

Thursday, June 24, 2010

ಉಸಿರ ಜಾಡು ಹಿಡಿದು...

ನಿನ್ನೆದೆಯ ಉಸಿರ ಜಾಡಿನಲ್ಲಿ ಹಾಗೇ ಬೆಚ್ಚಗೆ ಕನಸುಗಳನ್ನು ಹರಡಿ ಬಿಡುವಾಸೆ. ಧುತ್ತೆಂದು ಎಲ್ಲಿಂದಲೋ ಬಂದು ಎರಗುವ ಆ ಕೆಂಪು ಕಣ್ಣಿನ ಸಿಟ್ಟು, ಸ್ವಾತಿಮುತ್ತಿನಂತೆ ತಂಪೆರಗುವ ಪ್ರೀತಿಯ ಅನನ್ಯ ಅನುಭೂತಿ, ಮೌನವಾಗಿ ಶೂನ್ಯದತ್ತ ಕಂಗಳು ನೆಟ್ಟರೆ ಎದೆಬಡಿವ ವಿಷಾದ, ಎಲ್ಲೋ ದೂರದಿ ತೇಲಿಬರುವ ಅಲೆಗಳನ್ನು ಕಂಡಾಗಿನ ನೋವು-ನಲಿವಿನ ಬಿಂಬ...ಬದುಕಿನ ವೈರುಧ್ಯಗಳ ತಾಕಲಾಟ...ಎಲ್ಲವನ್ನೂ ನಿನ್ನೆದೆಯ ಉಸಿರ ಜಾಡಿನಲ್ಲಿ ಹರಡಿಬಿಡುವಾಸೆ. ಆ ನಿನ್ನ ನಿಡುದಾದ ಉಸಿರಿನ ತಂಗಾಳಿಯಲ್ಲಿ ನಿನ್ನಂತರ್ಯದ ಬೆಳಕಬಿಂಬ ಕಾಣುವಾಸೆ.

ಮನುಷ್ಯ ಹೀಗೇನೆ ಅಲ್ವಾ? ಭಾವನೆಗಳ ತಾಕಲಾಟದಲ್ಲಿ ತಾನೂ ಗೆದ್ದು ಸೋಲುವವ, ಸೋತು ಗೆಲ್ಲುವವ! ನಾನೂ ವೈರುಧ್ಯಗಳಿಗೆ ಹೊರತಾಗಿಲ್ಲ ಬಿಡು. ನಿನ್ನೆದೆಯ ಕಣ್ಣ ತೆರೆದು ಒಂದು ಕ್ಷಣ ನಿಟ್ಟುಸಿರು ಬಿಟ್ಟುಬಿಡು. ಆ ಉಸಿರ ಜಾಡಿನಲ್ಲಿ ಕಂಗಳ ಹನಿಬಿಂದುವನ್ನು ಹಾಗೇ ಹರಿಯಬಿಡುವೆ...ನೀನು ಇಷ್ಟಪಡುವುದಾದರೆ! ನಿನ್ನೆದೆಯ ಹೊರತು ಅದಕ್ಕೆಲ್ಲಿದೆ ಜಾಗ? ಯಾರೋ ಉಸುರುವ ಮಧುರ ಧ್ವನಿಯ ಅದ್ಯಾವ ಹಾಡುಗಳೂ ನನ್ನ ಕಿವಿಗೆ ಇಂಪನಿಸುತ್ತಿಲ್ಲ, ನೀನು ಉಸುರುವ ಅದ್ಯಾವ ಮಾತುಗಳೂ ಸವಿಯೆನಿಸುತ್ತಿಲ್ಲ, ನಿನ್ನ್ಯಾವ ಕಣ್ಣ ನಗುವೂ ನನ್ನ ಮೂಗುತಿಯಡಿಯಲ್ಲಿ ನಗೆಮಿಂಚು ಮೂಡಿಸಿಲ್ಲ...ನಿನ್ನದೆಯ ನಿಡುದಾದ ಉಸಿರ ಬಿಟ್ಟು!

ಮೌನವಾಗಿ ನೆಲವ ತಬ್ಬುವ ವೊದಲು ಭಾವಕೊಡು ಈ ಬಿಂಬಗಳಿಗೆ, ಜೀವ ಕೊಡು ವೈರುಧ್ಯಗಳಿಗೂ! ಈ ವಿಷಾದ, ನೋವು, ಮೌನ, ಏಕಾಂತ, ಒಂಟಿತನ, ಅಸಹನೆ, ಸಿಟ್ಟು, ಬದುಕಿನ ವಿಮರ್ಶೆ... ಎಲ್ಲವುಗಳಿಂದಲೂ ಕಳಚಿಬಿಡುವೆ...ಒಂದು ಪುಟ್ಟ ನಿಟ್ಟುಸಿರಿನೊಂದಿಗೆ! ಇನ್ನು ನಿನ್ನ ಅಂತರ್ಯದ ನಿರ್ಧಾರಕ್ಕೆ ಬಿಟ್ಟಿದ್ದು.
****
ಪ್ರಕಟ: http://hosadigantha.in/epaper.php?date=06-24-2010&name=06-24-2010-14

Saturday, June 12, 2010

ಅಳೋದು ವೀಕ್‌ನೆಸ್ ಅಲ್ಲ




ಅಳೋದು ನಿನ್ನ ವೀಕ್‌ನೆಸ್!
ಎಂದು ಬೈಯಬಹುದು, ಆದ್ರೆ ಅಳೋದ್ರಲ್ಲೂ ಒಂಥರಾ ಖುಷಿಯಿದೆ. ಅಂದು ಸ್ಕೂಲಿಗೆ ಹೋಗಲ್ಲ ಎಂದು ಅಮ್ಮನ ಸೆರಗು ಹಿಡಿದು ರಚ್ಚೆ ಹಿಡಿದಾಗ ಅಮ್ಮ ಉದ್ದ ಕೋಲಿನಲ್ಲಿ ಹೊಡೆದು ಶಾಲೆಗೆ ಕಳಿಸಿದ್ದು ನೆನಪಾಗುತ್ತೆ. ಕ್ಲಾಸಿನಲ್ಲಿ ನನ್ನ ಊದಿಕೊಂಡ ಮುಖ ನೋಡಿ ಮುಖ ಏಕೆ ಹೀಗಿದೆ ಎಂದಾಗ ಕಣ್ಣಿಗೆ ಕಸ ಬಿದ್ದಿದೆ ಎಂದು ಹಸಿ ಹಸಿ ಸುಳ್ಳು ಹೇಳಿದ್ದೆ. ಟೀಚರ್ ಬಳಿ ಹೇಳದಿದ್ರೂ ಅತ್ತು ಅತ್ತು ಸಮಾಧಾನ ಮಾಡಿಕೊಂಡಿದ್ದೆ. ಅಮ್ಮ ನೀಡಿದ ಬೆತ್ತದ ರುಚಿನೂ ಮರೆತೇ ಹೋಗಿತ್ತು.
ಹೌದು,ಅಳೋದ್ರಲ್ಲಿ ನಗುವಿಗಿಂತಲೂ ಹೆಚ್ಚಿನ ಸುಖ ಇದೆ. ಥೂ! ಅಳ್ತೀಯಾ ಎಂದು ಎಲ್ರೂ ನಮ್ಮ ಮೇಲೆ ರೇಗಬಹುದು. ಆದರೆ, ಅಳು ನನ್ನ ಶಕ್ತಿ, ಅಳು ನನಗೆ ಮತ್ತೆ ನಗುವಾಗುವ ಚೈತನ್ಯ, ಅಳು ನನ್ನೆಲ್ಲಾ ನೋವುಗಳನ್ನು ಮರೆಯೋಕಿರುವ ದಾರಿ. ಅಳು ಯಾವ ಹೆಣ್ಣಿನ ವೀಕ್ ನೆಸ್ ಕೂಡ ಅಲ್ಲ, ಹೆಣ್ಣಲ್ಲದೆ ಗಂಡು ಅಳೋಕ್ಕಾಗುತ್ತಾ? ಅಳು ಹೆಣ್ಣಿನ ಹುಟ್ಟು ಶಕ್ತಿ ಎಂದು ಹೇಳೋದು ನಂಗೆ ಹೆಮ್ಮೆನೇ.

ನಾನು ಅಮ್ಮನ ಮನೆಯಿಂದ ಗಂಡನ ಮನೆಗೆ ಬರುವಾಗ ಅತ್ತಿದ್ದೆ. ಅದು ಅಮ್ಮನ ಜೊತೆಗೆ, ಮನೆ ಜೊತೆಗೆ ಆಕೆ ಕಟ್ಟಿಕೊಂಡ ಅನನ್ಯ ಬಾಂಧವ್ಯ. ಗಂಡನೆದುರು ಗಳಗಳನೆ ಅಳಬಹುದು, ಅದು ಹೆಣ್ಣಿನ ವೀಕ್‌ನೆಸ್ ಅಲ್ಲ, ಗಂಡನ ಮೇಲಿನ ಪ್ರೀತಿ. ಮಕ್ಕಳು ತಪ್ಪು ಮಾಡಿದಾಗ ಕಣ್ಣೀರು ಒರೆಸುತ್ತಾ ಬುದ್ಧಿ ಹೇಳೋ ಅಮ್ಮ, ತನ್ನ ಗಂಡ ತಪ್ಪು ಮಾಡಿದಾಗಲೂ ಅಳುತ್ತಲೇ ಅವನೆದೆಯಲ್ಲಿ ಆಸರೆ ಪಡೆಯೋ ಪತ್ನಿ, ಅದು ಅವಳ ವೀಕ್ ನೆಸ್ ಅಲ್ಲ. ತನ್ನವರಲ್ಲದವರ ಎದುರು ಹೆಣ್ಣೊಬ್ಬಳು ಎಂದೂ ಅಳಲಾರಳು. ಅಳೋದ್ರ ಹಿಂದೆ ನೋವು, ಕಾಳಜಿ, ಪ್ರೀತಿ, ವಿಶ್ವಾಸ ಎಲ್ಲನೂ ಇರುತ್ತೆ.

ಕಳೆದುಕೊಂಡ ಅಜ್ಜ-ಅಜ್ಜಿಯ ನೆನಪು ಅಳು ತರಿಸಿಲ್ವಾ? ಎಲ್ಲೋ ಮರೆಯಾದ ಗೆಳತಿ ಅಥವಾ ಗೆಳೆಯನ ನೆನಪು ಕಾಡಿದಾಗ ಕಂಗಳು ಹನಿಗೂಡೋಲ್ವಾ? ತವರು ಮನೆಯ ನೆನಪಾದಾಗ ಗಂಡನ ಮಡಿಲಲ್ಲಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿಲ್ವಾ? ಈ ಅಳು ಕೂಡ ಬರೋದು ಎದುರಿಗೆ ನಮ್ಮ ಅಳುವನ್ನೂ ಸ್ವೀಕರಿಸುವವರು ಇದ್ದಾರೆ ಎಂದಾಗ ಮಾತ್ರ. ಕಣ್ಣಿರಿನ ಬೆಲೆ ತಿಳಿಯೋರು ನಮ್ಮೆದುರು ಇದ್ದಾಗ ಮಾತ್ರ. ಅದು ವೀಕ್ ನೆಸ್ ಅಲ್ಲ. ಪ್ರೀತಿ, ಸ್ನೇಹ, ಅನನ್ಯ ಬಾಂಧವ್ಯದ ಬೆಸುಗೆಯೊಂದಿದ್ದಲ್ಲಿ ಅಳು ಬರುತ್ತೆ. ಅದು ಯಾವ ಹೆಣ್ಣಿನ ವೀಕ್‌ನೆಸ್ ಅಲ್ಲ, ಅಳು ತನ್ನೊಳಗೆ ಪರಿಹಾರ ಕಂಡುಕೊಳ್ಳುವ ಪರಿ ಅಷ್ಟೇ.
ಪ್ರಕಟ: (http://hosadigantha.in/epaper.php?date=06-03-2010&name=06-03-2010-21)

Wednesday, May 19, 2010

ಭರವಸೆ ಬದುಕಿನ ಪ್ರೀತಿ

ಬೆಳಗೆದ್ದು ಸ್ನಾನ ಮಾಡುವ ಸೋಪು ಮೈಯನ್ನು ಬೆಳ್ಳಗಾಗಿಸುತ್ತೆ ಎನ್ನುವುದು ಒಂದು ಸಣ್ಣ ಭರವಸೆ , ನಿಜ ಗೊತ್ತು; ಎಷ್ಟೇ ತಿಕ್ಕಿದರೂ ಮೈಗೆ ಅಂಟಿ ಬಂತ ಬಣ್ಣ ಪೇರ್ಮನೆಂಟ್ ! ಹಲ್ಲುಜ್ಜುವ ಪೇಸ್ಟ್ ಖಂಡಿತಾ ಹಲ್ಲನ್ನು ಬೆಳ್ಳಗಾಗಿಸುವುದಿಲ್ಲ ಎಂಬುದು ಸತ್ಯ, ಆದರೂ ಸ್ವಲ್ಪ ಬೆಳ್ಳಗೆ ಕಾಣುತ್ತಿದೆ ಅನ್ನುವುದು ನಮ್ಮ ಸಣ್ಣ ನಂಬಿಕೆ !! ಬದುಕಿನ ಭರವಸೆ ಬೆಳ್ಳಂಬೆಳಿಗ್ಗೆ ಅಲ್ಲಿಂದಲೇ ಶುರುವಾಗೋದು ,

ಇಂದು ಗಂಡ ಮನೆಗೆ ಕುಡಿದು ಬರಲಾರ ಎಂಬ ಹೆಂಡತಿಯ ಭರವಸೆ , ಇನ್ನು ಸ್ವಲ್ಪೇ-ಸ್ವಲ್ಪ ದಿನ ನನಗೂ ಮದುವೆ ಆಗೇ ಆಗುತ್ತೆ, ನಾಳೆ ನನ್ನನ್ನು ನೋಡ ಬರುವ ಹುಡುಗ ನನ್ನನ್ನು ಒಪ್ಪೇ-ಒಪ್ಪುತ್ತಾನೆ ಎಂಬ ಭರವಸೆ ಹೊತ್ತ 30 ದಾಟಿದ ಯುವತಿ, ಎಂದಾದರೂ ಒಂದು ದಿನ ಆಕೆ ನನ್ನನ್ನು ಇಷ್ಟ ಪಟ್ಟಾಳು ಎಂಬ ಹುಡುಗನ ಸಣ್ಣ ಆಶಾ ಕಿರಣ. ಭರವಸೆಯ ಭಾವಗಳೇ ಹಾಗೆ ನಾವು ಬಿಟ್ಟರು ಅದು ನಮ್ಮನ್ನು ಬಿಡಲಾರವು. "ಭರವಸೆ ಬದುಕಿನ ಪ್ರೀತಿ".. ಬಹುಷಃ ನಾವು ಹುಟ್ಟುವ ಮೊದಲೇ ಬದುಕಿನ ಭರವಸೆಗಳು ನಮಗಾಗಿ ಹುಟ್ಟಿರುತ್ತವೆಯೇನೂ. ಅಡಿಗರು ಅದಕ್ಕೆ ಹೇಳಿರಬೇಕು " ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು ಕರಗೀತು ಮುಗಿಲ ಬಳಗಾ...''

ಹಿಂದಿ ಗೀತಕಾರ ಶೈಲೇಂದ್ರ ಒಂದು ಕಡೆ ಹೀಗೆ ಬರೆಯುತ್ತಾರೆ: " ತು ಜ್ಹಿಂದಾ ಹೈ, ತೋ ಜ್ಹಿಂದಗಿ ಕಿ ಜೀತ್ ಪೆ ಯಕೀನ್ ಕರ್, ಅಗರ್ ಕಹಿ ಹೈ ಸ್ವರ್ಗ್ ತೋ ಉತರ್ ಲಾ ಜಮೀನ್ ಪರ್, ಯೆ ಗಮ್ ಕೆ ಔರ್ ಚಾರ್ ದಿನ್ ಸಿತಮ್ ಕೆ ಔರ್ ಚಾರ್ ದಿನ್ , ಯೆ ದಿನ್ ಭಿ ಜಾಯೆಂಗೆ ಗುಜ್ಹರ್, ಗುಜ್ಹರ್ ಗಯೇ ಹಜ್ಹಾರ್ ದಿನ್"

ನಿಜ ಸಾವಿರಾರು ದಿನಗಳು ಈಗಾಗಲೇ ಕಳೆದು ಹೋಗಿದೆ, ಈಗಿರುವ ಅಳಲು, ಖೇದ, ವೈರ ನಾಚಿಕೆ, ದೋಷ, ಕುಂದು ಕಳೆಯಲೇಬೇಕು. ಯೆ ದಿನ್ ಭಿ ಜಾಯೆಂಗೆ ಗುಜ್ಹರ್. ಈ ಭರವಸೆಯೇ ಹೀಗೆ. ರೆಕ್ಕೆ ಬಿಚ್ಚಿ ಹೃದಯದ ಟೊಂಗೆಯಲ್ಲಿ ಕೂತು ಯಾವ ಪದಗಳಿಲ್ಲದೆ ತನ್ನದೇ ಶೃತಿಯಲ್ಲಿ ನಿರಂತರ ಹಾಡುತ್ತಿರುತ್ತದೆ. ಪರಧಿಯುಳ್ಳ ನಿರಾಸೆಗಳನ್ನು ಬದುಕು ಸ್ವೀಕರಿಸಲೇ ಬೇಕಾಗುತ್ತದೆ , ಆದರೆ ಅನಂತ ಭರವಸೆ, ನಂಬಿಕೆ ಬದುಕಿನ safety vault.

Wednesday, April 21, 2010

ಭಾವಗೀತ


ಇಂದು ಮಳೆ ಬರುತ್ತಿದೆ. ಈ ಮಳೆನೇ ಹಾಗೇ, ಒಂದೊಂದು ಸಲ ಭಾವಕ್ಕೂ ಭಾಷೆ ಕೊಡೋದು, ಭಾಷೆಗೂ ಮಾತು ಕಲಿಸೋದು. ನೀನಿಲ್ಲದ ಹೊತ್ತಲ್ಲಿ ನಿನಗೆ ಚೆಂದದ ಪತ್ರ ಬರೀಬೇಕು ಅನಿಸಿತ್ತು. ಆದ್ರೂ, ನನ್ನೆಲ್ಲಾ ಭಾವಗಳನ್ನು ಒಟ್ಟಿಗೇ ಹರವಿದ್ರೂ ಯಾಕೋ ಬರೆಯಲಾಗುತ್ತಿಲ್ಲ. ಕಿಟಕಿಯಾಚೆ ನೋಡಿದರೆ ಅಲ್ಲಿ ತುಂತುರು ಹನಿಗಳು ಕಲರವ. ಸಣ್ಣವಳಿರುವಾಗ ಅಮ್ಮನ ಮನೆಯಲ್ಲಿ ಇದೇ ಮೊದಲ ಮಳೆಗೆ ಅಂಗಳಕ್ಕಿಳಿದು ಆಲಿಕಲ್ಲು ಹೆಕ್ಕಿ, ಜಾರಿ ಬಿದ್ದಿದ್ದು ಎಲ್ಲಾ ನೆನೆಪುಗಳು ಧಕ್ಕೆಂದು ಮನದ ಪರದೆಯಲ್ಲಿ ಮೂಡಿಬಿಟ್ಟವು. ಒಂದೆಡೆ ನಿನ್ನ ಆಗಮನದ ನಿರೀಕ್ಷೆ, ಮೊದಲ ಮಳೆಗೆ ಇಳೆ ಪುಳಕಗೊಂಡಂತೆ ನಿನ್ನ ಆಗಮನದ ನಿರೀಕ್ಚೆಯಲ್ಲಿ ಮನ ಸಂಭ್ರಮಿಸುತ್ತಿತ್ತು. ಭಾವಗಳು ಹೀಗೇನಾ? ನೆನಪಿನ ಚಿತ್ರಗಳ ಜೊತೆ-ಜೊತೆಗೆ ಅದೇನೋ ಚಡಪಡಿಕೆ, ಕುತೂಹಲ, ಅವ್ಯಕ್ತವಾದ ಆನಂದ, ಹಂಬಲಗಳ ತಾಕಲಾಟ. ನಿನಗೂ ಹಾಗೇ ಅನಿಸುತ್ತಾ ಹೇಳು?

ನನ್ನೆಲ್ಲಾ ಬದುಕಿನ ಭಾವಗಳನ್ನು ಹೆಕ್ಕಿ ನೋಡಿದಾಗಲೂ ಅಷ್ಟೇ, ಅವುಗಳಿಗೆ ನೀನೇ ಜೀವ, ನೀನೇ ಹುರುಪು-ಉತ್ಸಾಹ. ಅಲ್ಲೆಲ್ಲಾ ನೀನೇ ಕಾಣ್ತಿದ್ದೀಯಾ. ಮಾತು-ಮೌನ ಎಲ್ಲವುಗಳಿಗೆ ಭಾಷೆ ಕೊಟ್ಟೋನು ನೀನೇ ಕಣೋ. ಪ್ರೀತಿಯ ನಾವೆಯಲ್ಲಿ ನನ್ನ ಬದುಕಿನ ಅಸ್ತಿತ್ವವನ್ನು ಕಣ್ಣುರೆಪ್ಪೆಯಲ್ಲಿಟ್ಟುಕೊಂಡು ಸಾಕಿದ್ದೀಯಾ. ನಿನ್ನೆಲ್ಲಾ ಸಿಟ್ಟು, ಕೋಪ-ತಾಪಗಳನ್ನು ನನ್ನೆದುರು ಹೊರಹಾಕಿ, ನನ್ನೆದೆಯಲ್ಲಿ ಉಸಿರಾಗಿಬಿಟ್ಟಿದ್ದಿಯಾ. ನನ್ನೆಲ್ಲಾ ದುಗುಡ-ದುಮ್ಮಾನಗಳನ್ನು, ನಗು-ನಲಿವುಗಳನ್ನು ನಿನ್ನೆದುರು ಹರವಿ ಹೆಕ್ಕಿಕೋ ಎಂದಾಗ ಹಾಗೆ ಎಲ್ಲವನ್ನೂ ಹೆಕ್ಕಿಕೊಂಡಿದ್ದೆ ನೋಡು. ಅದೇ ಕಣೋ ಪ್ರೀತಿ. ಬೀಸೋ ಮಳೆ ಗಾಳಿಯನ್ನೂ ಲೆಕ್ಕಿಸದೆ, ವರ್ಷದ ಆಗಮನಕ್ಕೆ ಕಾಯುವ ಬರಡು ರೈತನಂತೆ ನೀನು ನನಗಾಗಿ ಕಾಯುತ್ತಿದ್ದೆ ನೋಡು, ನಾನೆಷ್ಟು ಹೆಮ್ಮೆ ಪಟ್ಟಿದ್ದೆ ಗೊತ್ತಾ?

ನನ್ನಲ್ಲಿ ಮುನಿಸಿಕೊಂಡು ಆ ಪುಟ್ಟ ಕೆರೆಯ ನಿಶ್ಚಲ ನೀರ ಮೇಲೆ ಕಲ್ಲುಗಳನ್ನು ಹೆಕ್ಕಿ ಬಿಸಾಡಿದಾಗಲೂ ಆ ಕಲ್ಲುಗಳು ಉಲಿದಿದ್ದು ನನ್ನ ಹೆಸರನ್ನೇ. ನೋವು-ನಲಿವು, ಸುತ್ತಲಿನ ಸತ್ಯ-ಮಿಥ್ಯ ಎಲ್ಲವನ್ನೂ ಪ್ರೀತಿಸೋಕೆ ಕಲಿಸಿ, ನನ್ನೊಳಗೊಂದು ಸಂಭ್ರಮದ ಬದುಕು ಕಟ್ಟಿ, ಕುಂಚ ಹಿಡಿದು ನಿಂತ ನನ್ನನ್ನು ನಿನ್ನೆದೆಯಲ್ಲಿ ಸ್ವಾತಿ ಮುತ್ತಾಗಿಸಿದವನು ನೀನೇ ಕಣೋ. ನನ್ನ ಮೌನದ ಪ್ರೀತಿ ಭಾಷೆಗೆ ಮಾತಾಗಿ, ಬದುಕು ಭವಿಷ್ಯದ ಚಿತ್ತಾರ ಬರೆದವನೂ ನೀನೇ. ನಿನ್ನ ಹುಸಿಮುನಿಸು, ನೀ ನಿತ್ಯ ಕುಟ್ಟುವ ಕೀ ಬೋರ್ಡಿನ ಸಂದಿನಲ್ಲಿ, ದಿನಕ್ಕೆ ನಾಲ್ಕು ಬಾರಿ ಸೇದುವ ಎರಡು ಸಿಗರೇಟು, ಅದರಿಂದ ಹೊರಬರುವ ದಟ್ಟ ಹೊಗೆ, ನೀನು ಕುಳಿತಿರುವ ಆ ಸುಂದರ ಕೋಣೆಯ ಕಿಟಕಿ ಮೂಲಕ ಹೊರಬರುವ ತಂಗಾಳಿ, ನಿನ್ನ ಎಲ್ಲಾ ಕಡೆಯೂ ನಾನಿದ್ದೀನಿ. ಆದರೆ, ನಿನ್ನ ಆಫೀಸ್ ನಲ್ಲಿ ನಿನ್ನ ಸೀಟಿನ ಪಕ್ಕ ಕುಳಿತಿರುವ ಆ ಕಪ್ಪು ಸುಂದರಿಯ ಎದೆಬಡಿತದಲ್ಲಿ ಮಾತ್ರ ನಾನಿರಲ್ಲ, ನಿನ್ನಾಣೆಗೂ!

***ಚಿತ್ರಾ ಸಂತೋಷ್
(ಹೊಸದಿಗಂತ ಪತ್ರಿಕೆಯ ನನ್ನ ವಾರದ ಕಾಲಂ 'ಭಾವಬಿಂದು'ನಲ್ಲಿ ಪ್ರಕಟ
http://hosadigantha.in/epaper.php?date=04-22-2010&name=04-22-2010-13

Friday, April 2, 2010

ಭಾವವೇ ನನ್ನದೆಯ ಕದ ಬಡಿಯದಿರು

ತುಂಬಾ ಸಲ ಹಾಗನಿಸಿದೆ, ಥತ್! ಈ ಭಾವಗಳನ್ನು ಹೆಕ್ಕಿ ಬಿಸಾಡಿಬಿಡಬೇಕೆಂದು. ಇದೇನು ಹುಚ್ಚು ಹುಡುಗಿ, ಭಾವಗಳನ್ನು ಹೊರತುಪಡಿಸಿದ ಬದುಕಿದೆಯೇ? ಎಂದು ನೀನು ಕೇಳಬಹುದು. ಹೌದು, ಭಾವಗಳನ್ನು ತುಂಬಾ ಪ್ರೀತಿಸಿದ್ದೆ, ಅವುಗಳನ್ನು ಹಾಗೇ ಬಾಚಿ ತಬ್ಬಿಕೊಂಡು ಮುದ್ದಾಡಿದ್ದೆ. ಒಂದೊಂದು ಸಲ ಪುಟ್ಟ ಮಗು ಥರ ಕಣ್ತುಂಬ ತುಂಬಿಕೊಂಡು ನನ್ನೆಲ್ಲಾ ವಿಷಾದಗಳಿಗೆ ವಿದಾಯ ಹೇಳಿದ್ದೆ. ನನ್ನದೆಯ ಬಡಿತದಲ್ಲೂ ಈ ಭಾವಗಳಿಗೆ ದನಿಯಾಗಿದ್ದೆ. ಇದು ಸುಳ್ಳಲ್ಲ, ನಿನ್ನಾಣೆಗೂ ನಿಜ.

ಆದರೆ, ಯಾಕೋ ಇಂದು ಈ ಭಾವಗಳೇ ಬೇಡ, ಎಲ್ಲೋ ದೂರಕ್ಕೆ ಬಿಸಾಕಿಬಿಡೋಣ ಅನಿಸ್ತಾ ಇದೆ. ನನ್ನೆದೆಯಲ್ಲಿ ನೋವಿನ ಎಳೆಗಳನ್ನು ಬಿಚ್ಚೋ ಬದಲು, ಹಾಗೇ ನನ್ನನ್ನು ಒಂಟಿಯಾಗಿ ಬಿಟ್ಟುಬಿಡು, ನನ್ನ ಪಾಡಿಗೆ ನಾನು ಇದ್ದುಬಿಡ್ತೀನಿ, ನಾನು ಯಾರಿಗೂ ಡಿಸ್ಟರ್ಬ್ ಕೊಡೊಲ್ಲ, ನನ್ನ ಮಾತಿಗೂ ಭಾಷೆಯಿಲ್ಲ, ಮೌನಕ್ಕೆ ಶರಣಾಗಿದ್ದೀನಿ. ನನ್ನದೆಯ ಕದ ಬಡಿಯದಿರು, ಅಲ್ಲಿ ನಾನು ಪ್ರೀತಿಸಿದ ಭಾವಗಳಿಗೆ ಜಾಗ ಕೊಡೊಲ್ಲ ಅಂತ ಸಿಟ್ಟಿನಿಂದ ಹೇಳುತ್ತಿದ್ದೇನೆ.

ತುಂಬಾ ಸಲ ಮನುಷ್ಯ ಹಾಗೆನೇ ಅಲ್ವಾ? ಒಂಟಿಯಾಗಿ ಇದ್ದುಬಿಡೋಣ ಅನಿಸುತ್ತೆ. ಭಾವಗಳ ಜೊತೆ-ಜೊತೆಗೇ ಜೀವಿಸೋ ಮನುಷ್ಯ ದಡಕ್ಕಂತ ಅಲೆಗಳಂತೆ ಬರುವ, ತಾನೇ ಎತ್ತಿ ಮುದ್ದಾಡಿದ ಆ ಭಾವಗಳಿಂದ ದೂರ ಇದ್ದುಬಿಡ್ತಾನೆ ಅಲ್ವಾ? ಆ ಕ್ಷಣ ಭಾವಗಳೆಂದರೆ ಸತ್ತು ಮಣ್ಣಾಗಿ ಹೋದ ತರಗಲೆಗಳಂತೆ! ಥತ್! ಹೀಗೆ ಆಗಬಾರದು,ಆದರೂ ಏಕಾಂಗಿಯಾಗಿರಬೇಕೆಂಬ ಹಂಬಲ. ಸುತ್ತಲ ಜಗತ್ತನ್ನು ಮರೆತು ತಾನೇ ಮೌನದ ಕನಸು ಕಾಣಬೇಕು, ಬದುಕಿನ ತರಂಗಗಳನ್ನು ಮೀರಿ ತಾನೊಬ್ಬನೇ ಸಂಭ್ರಮಿಸಬೇಕು, ನನ್ನೊಳಗಿನ ಕತ್ತಲು-ಬೆಳಕಿಗೆ ತಾನೊಬ್ಬನೇ ಬೆಳದಿಂಗಳಾಗಬೇಕು, ತನ್ನೆದುರು ಕಾಣುವ ಹಸುರು ಹಾಸಿನ ಮೇಲೆ ಏಕಾಂಗಿಯಾಗಿ ಕವಿತೆಯಾಗಬೇಕು, ಎಲ್ಲೋ ದೂರದ ನೀಲಿ ಸಮುದ್ರ ದಂಡೆಯಲ್ಲಿ ಒಂಟಿಯಾಗಿ ಮರಳಾಟ ಆಡಬೇಕು, ಅಲ್ಲಿ ಆಡೋ ಪುಟ್ಟ ಮಕ್ಕಳ ಜೊತೆ ನಾನೂ ಪುಟ್ಟ ಮಗುವಾಗಿಬಿಡಬೇಕು. ಈ ಭಾವಗಳ ಗೋಜೇ ಬೇಡಪ್ಪಾ ಅನಿಸಿಬಿಡುತ್ತೆ.

ಈ ಎಲ್ಲಾ ಭಾವ ತುಮುಲಗಳನ್ನು ಸ್ವಲ್ಪ ದಿನದ ಮಟ್ಟಿಗಾದರೂ ಗಂಟು ಕಟ್ಟಿ ಅಟ್ಟದ ಮೇಲೆ ಹಾಕುವುದು ಸ್ವಲ್ಪ ಜಾಣತನ ಇರಬಹುದೇನೂ ! "ಇಷ್ಟೊಂದು complex ಆಗ್ ಬೇಡ" ಅನ್ನೋ ನಿನ್ನ ಕಾಳಜಿ ಕೆಲವೊಂದು ಸಲ ಸರಿ ಅನ್ನಿಸಿದ್ರೂ , ಯಾವುದೂ ಒಂದು ಅಜ್ಞಾತಕ್ಕೆ ಹೋಗುವ ಆಸೆ. ನನ್ನ ಎಲ್ಲಾ ಮನದ ವಿಮರ್ಶೆ ಅಂತಿಮವಾಗಿ ನನ್ನ ಭಾವಕ್ಕೆ ಬಿಟ್ಟಿದ್ದು, ಪಕ್ಕಾ monopoly.

Wednesday, March 31, 2010

ಧರಿತ್ರಿ ಒಂದು ವರ್ಷದ ಮಗು!

ಈ ಮಾರ್ಚಗೆ ಧರಿತ್ರಿಗೆ ಒಂದು ವರುಷ. ಈಗ ನನ್ನ ಧರಿತ್ರಿ ಒಂದು ವರುಷದ ಮಗು. ಒಂದು ವರ್ಷದಲ್ಲಿ 38 ಬರಹಗಳನ್ನು ಕಂಡಿದ್ದಾಳೆ. ತುಂಬಾ ಕಡಿಮೆ ಅನಿಸುತ್ತಿದೆ. ಆದರೂ, ಏನೋ ಒಂಥರಾ ಖುಷಿ. ಅಷ್ಟಾದ್ರೂ ಬರೆದಿದ್ದೇನಲ್ಲಾ ಎಂಬ ಹೆಮ್ಮೆ. ಇನ್ನೂ ಧರಿತ್ರಿ ನಿರಂತರ, ನಿತ್ಯ ನಿರಂತರ.
ನಿಮ್ಮ ಪ್ರೋತ್ಸಾಹ, ಪ್ರೀತಿ ಅತ್ಯಗತ್ಯ. ಇರುತ್ತೆ ಅಲ್ವಾ? ನಂಗೊತ್ತು ಎಂದಿನಂತೆ ಈ ಧರಿತ್ರೀನಾ ಬೆನ್ನುತಟ್ಟುತ್ತಿರೆಂಬ ನಂಬಿಕೆ. ಪ್ರೀತಿಯಿರಲಿ. ಅದೇ ಭಾವಗಳೊಂದಿಗೆ ಮತ್ತೆ ನಿಮ್ಮ ಜೊತೆ ಮಾತಿಗಿಳಿಯುವೆ.
ವಂದನೆಗಳು
&ಚಿತ್ರಾ ಸಂತೋಷ್

Thursday, March 25, 2010

ಅಂತರಾಳ ಅಣಕವಾಟ


ಈ ಭಾವವನ್ನು ಎಲ್ಲೂ ಅಡಗಿಸಲು ಸಾದ್ಯವಿಲ್ಲವೇನೂ .. ನನ್ನ ಖುರ್ತಾ ಜೀಬಿನಲ್ಲಿ, ಜೋಡಿಸಿಟ್ಟ ಪುಸ್ತಕಗಳ ನಡುವೆ, ನನ್ನ ಕೀ ಬೋರ್ಡ್ ನ ಸಂದಿಗಳಲ್ಲಿ, ಅಣ್ಣನ ಸಿಗರೇಟು ಪ್ಯಾಕ್ ನಲ್ಲಿ ಕೊನೆಗೆ ಈ ಅಕ್ಷರಗಳ ಧೀರ್ಘ, ಒತ್ತು, ಸುಳಿಗಳ ನಡುವೆ ... ಛೆ !! ಎಷ್ಟೇ ಅಡಗಿಸಿಟ್ಟರು ಮತ್ತೆಲ್ಲೋ ಎದ್ದು ಬಂದು ತಲೆಗೆ ಮೊಟಕುತ್ತಿರುತ್ತವೆ. ಎಲ್ಲೋ ಓದಿದ ನೆನಪು - ಭಾವ , ಅವರವರ ಭಾವಕ್ಕೆ ಬೇಕಿದ್ದರೆ ಮಾತ್ರ. ಹೌದು ಈ ಭಾವ ನನಗೆ ಬೇಕಾಗಿತ್ತೇನೋ .
ಗಣಿತಕ್ಕೂ-ಕಾವ್ಯಕ್ಕೂ, ನನಗೂ-ನಿನಗೂ ಎಲ್ಲಕ್ಕೂ ಸಾಮ್ಯತೆ ತೋರಿ , ನಾನೇ ಪಯಣ ಬೆಳಸದ ನನ್ನ ದಾರಿಯಲ್ಲಿ ನನಗಿಂತಲೂ ಮುಂದೆ ಹೋಗಿ ನಿಂತ ದಾರಿ ಸೂಚಕ, ಈ ತರಹದ ಅತೀ ಭಾವುಕತೆಯನ್ನು ಯಾವುದೂ ಅಗೊಚಾರಕ್ಕೆ ಹರವಿಸಿದ ಹರ ಹರ ಮಹಾದೇವ. ಆ ನಿನ್ನ ಕಚ್ಚಾತನ, ಹುಳಿ, ಒಗರು, ಸ್ವಲ್ಪೇ ಸ್ವಲ್ಪ ತಿಕ್ಕಲುತನ , ಉಡಾಫೆ , ಹುಂಬತನ, ಎಷ್ಟು ಬಗೆದರು ತೀರದ ಪ್ರೀತಿ, ಪುಸ್ತಕಗಳ ನಡುವೆ ಮುಚ್ಚಿಟ್ಟ ನಿನ್ನ ಭಾವ ಚಿತ್ರಗಳು ಎಲ್ಲವೂ ಯಾವುದೂ ಹಳೆ ಮೌನವನ್ನು ನೆನಪಿಸುವ ಮತ್ತೊಂದು ಮೌನ.


ನಾ ಉಪಯೋಗಿಸೂ ಬಾಚಣಿಕೆ, ಪರ್ಸ್ , ಕಪ್ಪು ವಾಚು, ಕುರ್ತಾ ಹೀಗೆ ಇಂತಿಷ್ಟೇ ನನ್ನನ್ನು ಗುರುತಿಸಿಕೊಂಡು ನನ್ನ ಪಾಡಿಗೆ ನಾನಿದ್ದಾಗ, ದಕ್ಕನೆ ನನ್ನ ಎಲ್ಲಾ ಭಾವಗಳಿಗೆ ಪರಿಧಿ ಹಾಕಿದ ದೌಲತ್ತು ನಿನಗೇ ಇರಲಿ. ನನ್ನೆಲ್ಲ ನಗು , ಸಿಟ್ಟು -ಸೆಡವು, ತುಂಟಾಟಿಕೆ ಎಲ್ಲವನ್ನು ಅಕ್ಷರಗಳಲ್ಲಿ ಇಳಿಸುವುದು ಏನೂ ಒಂದು ತರಹ ವಿಚಿತ್ರ ಸಂಕಟ. ಯಾವುದೂ ಒಂದು ಹಳೆಯ ಹತಾಶೆ, ನಿನ್ನ ಕಂಡಾಗ ಯಾವುದೂ ಮಸಲತ್ತು ಮಾಡಿದವರ ಹಾಗೆ ನಗುವಾಗಿ ಗಾಳಿಗೆ ತೂರಿ ಹೋದಂತೆ ಅನುಭವ.


ಮತ್ತೆ ನಿನ್ನೊಂದಿಗೆ ಅದೇ ಹಳೆ ಪ್ರಾಮಾಣಿಕ ಕ್ಷಣಗಳನ್ನು ಮತ್ತೊಮ್ಮೆ ಪುರಸ್ಕರಿಸಿಬಿಡುವಾಸೆ. ಕೊನೆಗೆ ಸಿಕ್ಕಷ್ಟು ಬಾಚಿ-ಬಳಿದು ಮತ್ತಷ್ಟು ಕನಸುಗಳ ಹವಣಿಕೆಯಲ್ಲಿ ಕಾಯುವ ಭಾವ ಸ್ವಲ್ಪ ನಿರಾಳ . ಹವಣಿಸಿದೆಲ್ಲವು ಸಿಕ್ಕೊಡನೆ ಏಕ್ ಧಮ್ ಸೂಪರ್ ಹೈ-ವೇ, ಮತ್ತಷ್ಟು ಉದ್ದದ ಭಾವ. ತಿರುಗಿ ನೋಡಿದಾಗ ಪಯಣ ಇನ್ನು ಶುರುವಾಗಿಲ್ಲವೇನೂ..!! ಯಾವುದೂ ಒಂದು ನಾದಕ್ಕೆ ತಿರುಗಿ ಹೋಗುವ ಹುನ್ನಾರ


Photo: Santhosh Chidambar

Tuesday, March 23, 2010

ಮರಳಿ ಭಾವದೊಡಲಿಗೆ....



ಮದುವೆ ಕರೆಯೋಲೆ ಕೊಟ್ಟಾಯ್ತು. ಮದುವೆನೂ ಆಗೋಯ್ತು. ಕೆಲವರು ಇಲ್ಲೇ ವಿಶ್ ಮಾಡಿದ್ರು. ಕೆಲವರು ಮದುವೆಗೂ ಬಂದರು. ಐತಣಕೂಟಕ್ಕೂ ಬಂದರು. ಅದು ನಮಗೆ ಖುಷಿ. ಎಲ್ಲರಿಗೂ ನಬ್ಬಿಬ್ಬರ ಧನ್ಯವಾದಗಳು. ಹಾಗೇ ಇಟ್ಟಿಗೆ ಸಿಮೆಂಟಿನ ಪ್ರಕಾಶ್ ಹೆಗ್ಡೆ ತಮ್ಮ ಬ್ಲಾಗಿನಲ್ಲಿ "ಬ್ಲಾಗ್ ಲೋಕದ ಪರಿಣಯ' ಎಂದು ಬರೆದಿದ್ದರು. ಥ್ಯಾಂಕ್ಯೂ ಸರ್.


ಮದುವೆ ಗಡಿಬಿಡಿ ಎಲ್ಲಾ ಮುಗಿದುಹೋಯ್ತು. ಎಲ್ಲವೂ ಚೆನ್ನಾಗೇ ನಡೆಯಿತು. ಹಳೆಯ ಬದುಕು ಏನೋ ಹೊಸ ರೂಪ ಪಡೆದಂತೆ. ಮನೆಯವರ ಜವಾಬ್ದಾರಿನೂ ಮುಗಿದುಹೋಯ್ತು. ಈಗ ಮಾಮೂಲಿ ಆಫೀಸ್. ಮತ್ತೆ ಕೆಲಸ, ಅದೇ ಪತ್ರಿಕೆ, ಅದೇ ಆಫೀಸು, ಅದೇ ಜನರು, ಅದೇ ಓಡಾಟ, ಮನಸ್ಸು ಎಲ್ಲದಕ್ಕೂ ಮತ್ತೆ ಹೊಂದಿಕೊಳ್ಳಬೇಕನಿಸುತ್ತೆ. ಆದರೂ ಏನೋ ಖುಷಿಯ ಗುಂಗು. ಮದುವೆಗೆ ಮೊದಲು ದೇವರನ್ನು ನೀನೆಕೆ ಕಲ್ಲಾಗಿಬಿಟ್ಟೆ ಅಂತ ಬೈದಿದ್ದೆ. ತವರು ಬಿಡಬೇಕೆ? ಎಂದು ನೂರಾರು ಪ್ರಶ್ನೆಗಳ ಮಳೆ ಸುರಿದಿದ್ದೆ. ಆದರೆ, ದೇವರೇ ನಿನಗೆ ಬೈದುಬಿಟ್ಟೆ ಅಲ್ವ? ಅಂತ ಸಾರಿ ಅಂತ ಕೇಳ್ತಾ ಇದ್ದೀನಿ.


ಮದುವೆ ಗುಂಗಿನಿಂದ ಆಫೀಸು ಕೆಲಸಗಳನ್ನಷ್ಟೇ ಮಾಡುತ್ತಿದ್ದೆ. ಬ್ಲಾಗ್ ಬರಹಗಳತ್ತ ತಿರುಗಿ ನೋಡಲು ಸಮಯವಿರಲಿಲ್ಲ. ಇನ್ನು ಮತ್ತೆ ಬ್ಲಾಗ್ ಮುಂದುವರಿಸಬೇಕು. ನಾವಿಬ್ಬರೂ ಬ್ಲಾಗ್ ಬರಿಯಬೇಕು. ಇನ್ನು ಚೆನ್ನಾಗಿ ಬರೀಬೇಕು ಅಂತ ನಮ್ಮಾಸೆ. ನನ್ನ ಧರಿತ್ರಿ ಮತ್ತು ಶರಧಿ ಎರಡೂ ಬ್ಲಾಗ್ ಗಳು ನನ್ನ ಆತ್ಮೀಯು ಗೆಳತಿಯರು. ಇನ್ನು ಇವೆರಡನ್ನು ಚೆನ್ನಾಗಿ ಮುಂದುವರಿಸಬೇಕು. ಮತ್ತೆ ನಿಮ್ಮೆದುರಿಗೆ ಅದೇ ಪುಟ್ಟ ಪುಟ್ಟ ಬರಹಗಳೊಂದಿಗೆ ಕಾಣಿಸಿಕೊಳ್ಳುತ್ತೇವೆ. ಭಾವಗಳಿಗೆ ಬರವಿಲ್ಲ, ಅವುಗಳಿಗೇ ಅಕ್ಷರ ರೂಪ ತುಂಬುವಾಸೆ. ಎಲ್ಲೋ ಕಂಡ ಹಕ್ಕಿ, ಮುಗಿಲಲ್ಲಿ ತೇಲಾಡುವ ಮೋಡ, ನೆನಪಾಗುವ ಹುಟ್ಟೂರು, ಪ್ರೀತಿ ನೀಡಿದ ಒಡನಾಡಿಗಳು, ಗಂಡನ ಜೊತೆಗಿನ ಪುಟ್ಟ ಹುಸಿಮುನಿಸು, ಆಫೀಸ್ ನಲ್ಲಿನ ಕಿರಿಕಿರಿ, ಜಗತ್ತಿನಾಚೆಗಿನ ಭಾಷೆಯಿಲ್ಲದ ಭಾವಗಳು...ಎಲ್ಲವೂ ಅಕ್ಷರ ರೂಪ ಪಡೆಯಲಿವೆ. ಓದುತ್ತೀರಲ್ಲಾ...



ಪ್ರೀತಿಯಿಂದ
ಚಿತ್ರಾ ಸಂತೋಷ್

Monday, February 22, 2010

ಮದುವೆಯ ಈ ಬಂಧ...


ತುಂಬಾ ದಿನಗಳಾಯ್ತು ಬ್ಲಾಗ್ ಕಡೆ ಮುಖ ಹಾಕದೆ. ಕೆಲವೊಂದು ಕಾರಣಗಳಿಂದ ನನಗೆ ಬ್ಲಾಗ್ ಬರೆಯಲಾಗಲಿಲ್ಲ. ಇದೀಗ ಮದುವೆ ಕರೆಯೋಲೆಯೊಂದಿಗೆ ಮತ್ತೆ ಮರಳಿ ಬಂದಿದ್ದೇನೆ. ನಮ್ಮ ಮದುವೆಗೆ ನೀವು ಬಂದರೇನೇ ಚೆಂದ. ಖಂಡಿತಾ ಬರಬೇಕು.
ಬದುಕಿನ ಹೊತ್ತಗೆಯಲ್ಲಿ
ಒಲವಿನ ಕುಂಚ ಹಿಡಿದು
ದಾಂಪತ್ಯ ಕಾವ್ಯಕಲೆ ರೂಪಿಸಲು ಹೊರಟಿದ್ದೇವೆ.
ಈ ಶುಭಗಳಿಗೆಗೆ ಹೊಸೆದ ಭಾವ ಕನಸುಗಳಿಗೆ
ನಿಮ್ಮ ಪ್ರೀತಿಯ ಹಾರೈಕೆ ಬೇಕು.

ನಮ್ಮ ಮದುವೆ: ಮಾರ್ಚ್ 07, 2010; ವಸಂತ ಮಹಲ್, ಶ್ರೀ ಕ್ಷೇತ್ರ ಧರ್ಮಸ್ಥಳ

ಆರತಕ್ಷತೆ: ಮಾರ್ಚ್ 10, 2010; ನಂ.125/126, 9ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಆರ್ಎಂವಿ ಬಡಾವಣೆ, ಸದಾಶಿವನಗರ, ಬೆಂಗಳೂರು-80.

ಪ್ರೀತಿಯಿಂದ
ಸಂತೋಷ್-ಚಿತ್ರಾ