Monday, June 29, 2009

ಅದ್ಯಾಕೋ ಅಕ್ಷರಗಳು ಖಾಲಿ ಪುಟದಲಿ ಮೂಡಲಿಲ್ಲ..!

ನಾನ್ಯಾಕೆ ಬರೆಯುತ್ತೇನೆ? ಅದೇ ನನ್ನ ಖುಷಿಗೆ, ನನ್ನ ಬರಹದ ತುಡಿತವನ್ನು ಇಲ್ಲಿ ಹಂಚಿಕೊಳ್ಳೋದಕ್ಕೆ. ನನ್ನೊಳಗಿನ ಪುಟ್ಟ ಪುಟ್ಟ ಖುಷಿಯ ಕ್ಷಣಗಳನ್ನು ನಿಮ್ಮ ಜೊತೆ ಹಂಚಿಕೊಳ್ಳೋದಕ್ಕೆ. ಮನದ ಮೂಲೆಯಲ್ಲಿದ್ದ ದುಗುಡ-ದುಮ್ಮಾನಗಳನ್ನು ನಿಮ್ಮ ಜೊತೆ ಹಂಚಿಕೊಂಡು ಮನಸ್ಸು ತಿಳಿಯಾಗಿಸೋದಕ್ಕೆ. ನನ್ನೊಳಗಿನ ಕನಸುಗಳನ್ನು ನಿಮ್ಮ ಜೊತೆ ಹಂಚಿ, ವಿಶ್ ಪಡೆಯೋದಕ್ಕೆ. ಹೌದು. ಹೇಳಲಾಗದ ಮಾತು, ಬಚ್ಚಿಡಲಾಗದ ಭಾವನೆಗಳನ್ನು ಇಲ್ಲಿ ಬಿಚ್ಚಿಡೋದಕ್ಕೆ. ಜಗತ್ತಿನ ಸತ್ಯ-ಮಿಥ್ಯಗಳನ್ನು ಕಂಡು ಕಂಗಳು ನೀರಾದಾಗ ಮನಸ್ಸು ಶುಭ್ರಗೊಳಿಸೋದಕ್ಕೆ ನಾ ಬರೆಯುತ್ತೇನೆ. ಜೀವನ ಪ್ರೀತಿಯಲ್ಲಿ ಮಿಂದು ಮನಸ್ಸು ಖುಷಿಗೊಂಡಾಗ 'ಬದುಕೆಷ್ಟು ಸುಂದರ' ಅಂತ ಖುಷಿಯಿಂದ ಬರೆದುಬಿಡ್ತೀನಿ. ಅದೇ ಇರೋ ಜೀವನದಲ್ಲಿ ಪುಟ್ಟ ಕಷ್ಟಗಳನ್ನೇ ಸಹಿಸಿಕೊಳ್ಳಲಾಗದೆ ಹೃದಯ ಭಾರವಾದಾಗ ಮತ್ತದೇ ಬೇಸರ..ಅದೇ ಹಾಡು..ಅನ್ನೋಕೂ ಈ ಅಕ್ಷರಲೋಕವೇ ಸಾಥ್ ನೀಡೋದು.

ತುಂಬಾ ದಿನಗಳಾಯ್ತು...ಏನೂ ಬರೆಯಕ್ಕಾಗ್ತಿಲ್ಲ. ..ಬರೆಯಲಿಲ್ಲ. ಒಂದಷ್ಟು ಕೆಲಸ ಹೆಗಲ ಮೇಲೆ ಬಿದ್ದಾಗ, ಒಂದಷ್ಟು ಹೊತ್ತು ವ್ಯರ್ಥ ಮಾತುಗಳಲ್ಲಿ ಕಳೆದುಹೋದಾಗ, ಮನೆಯ ಚಿಂತೆ ಕಾಡತೊಡಗಿದಾಗ..ಏನೋ ಒಂಥರಾ ಮನಸ್ಸು ಗೊಂದಲಗಳಲ್ಲಿ ಸಿಕ್ಕಾಗ ಬರೆಯಲು ಕುಳೀತರೂ ಬರೆಯಲಕ್ಕಾಗುತ್ತಿಲ್ಲ. ನನ್ನೊಳಗಿನ ಮಾತುಗಳಿಗೆ ಈ ಬ್ಲಾಗ್ ವೇದಿಕೆ ಅಂದ್ರೂ ಆಗ್ತಿಲ್ಲ. ತುಂಬಾ ನನ್ನನ್ನು ನಾನೇ ಬೈದುಕೊಂಡಿದ್ದೆ. ಹೀಯಾಳಿಸಿಕೊಂಡಿದ್ದೆ. ಖಾಲಿ ಪುಟಗಳನ್ನು ರಾಶಿ ಹಾಕೊಂಡು ಏಕಾಂಗಿಯಾಗಿ ಪೆನ್ನು ಹಿಡಿದು ಕುಳಿತರೂ ಕೈಗಳಲ್ಲಿ ಅಕ್ಷರಗಳು ಮೂಡುತ್ತಿಲ್ಲ, ಭಾವನೆಗಳು ಮಾತಾಡುತ್ತವೆ. ಕಣ್ಣುಗಳು ಮಾತಾಡುತ್ತವೆ, ಮೌನಗಳೂ ಮಾತಾಡುತ್ತವೆ. ಕಿವಿ ಇಂಪಾದ ಹಾಡುಗಳತ್ತ ತುಡಿಯುತ್ತದೆ. ಹೃದಯ ಜೀವನಪ್ರೀತಿಯ ಹುಡುಕಾಟದಲ್ಲಿ ಕಳೆಯುತ್ತೆ. ಮನಸ್ಸು ಮಣ್ಣುಗೂಡಿದ ಪ್ರೀತಿಯನ್ನು ನೆನೆಯುತ್ತೆ. ಆದರೆ ಅಕ್ಷರಗಳು ಖಾಲಿ ಪುಟದ ಮೇಲೆ ಬೀಳುತ್ತಿಲ್ಲ. ಕೈಯಲ್ಲಿರುವ ಪೆನ್ನು ಖಾಲಿ ಪುಟದ ಮೇಲೆ ಬಿಂದುವನ್ನಷ್ಟೇ ಇಟ್ಟು ಸುಮ್ಮನಿದ್ದೆ.

ಏನೇನೋ ಯೋಚನೆಗಳು..ಅಮೂರ್ತ ಕಲ್ಪನೆಗಳು. ಸತ್ಯ, ಪ್ರಾಮಾಣಿಕತೆ, ನಿಷ್ಕಲ್ಮಶ ಪ್ರೀತಿ ಯಾಕೋ ಢಾಳಾಗಿ ಕಾಣುತ್ತವೆ. ಪ್ರಾಮಾಣಿಕವಾಗಿ ಕೆಲ್ಸ ಮಾಡಿದ್ರೂ ಬಾಸ್ ಕೈಯಲ್ಲಿ ಬೈಸಿಕೊಳ್ತೀವಿ. ಬದುಕಿನಲ್ಲಿ ಮಾನವೀಯ ಬಾಂಧವ್ಯ, ಜೀವನಪ್ರೀತಿಯ ಕುರಿತು ಮಾತನಾಡೋರು ವೇದಿಕೆ ಮೇಲೆಯಷ್ಟೇ ಗೊಣಗುತ್ತಾರೆ. ಜೀವನ ಅಂದ್ರೆ ನಮ್ಮೂರ ಆಟದ ಮೈದಾನ ಅನ್ನೋರು ಕೆಲವರು, ಇನ್ನು ಕೆಲವರು ಜೀವನನಾ ಸೀರಿಯಸ್ ಆಗಿ ತಕೋಪಾ ಅಂತ ಬೋಧನೆ ಮಾಡ್ತಾರೆ. ಆದರೆ ಬೋಧನೆ ಮಾಡಿದವರಾರು ನಿಜವಾದ ಜೀವನಾನ ಕಂಡೋರಿಲ್ಲ, ಜೀವನದಲ್ಲಿ ಉದ್ದಾರವೂ ಆಗಿಲ್ಲ! ಇರಲಿ ಏನೇನೋ ಯೋಚನೆಗಳು..

ನೆನಪಾದುವು ಜಿ.ಎಸ್.ಎಸ್. ಅವರ ಕವನದ ಸಾಲುಗಳು.......
ನಾನು ಬರೆಯುತ್ತೇನೆ...
ನನ್ನ ಸಂವೇದನೆಗಳನ್ನು,
ಕ್ರಿಯೆ-ಪ್ರತಿಕ್ರಿಯೆಗಳನ್ನು,
ದಾಖಲು ಮಾಡುವುದಕ್ಕೆ..!
ನಿಂತ ನೀರಾಗದೆ ಮುಂದಕ್ಕೆ
ಹರಿಯುವುದಕ್ಕೆ...
ನನ್ನನ್ನು ನಾನು ಕಂಡುಕೊಳ್ಳುವುದಕ್ಕೆ...
ನಾನು ಬರೆಯುತ್ತೇನೆ
ಋಷಿಯ ನೋವಿಗೆ...
ರೊಚ್ಚಿಗೆ ಮತ್ತು ಹುಚ್ಚಿಗೆ..
ಅಥವಾ ನಂದಿಸಲಾರದ ಕಿಚ್ಚಿಗೆ...!


ಹೌದು..ಮತ್ತೆ ನಾನು ಬರೆಯುತ್ತೇನೆ..ನನ್ನೊಳಗನ್ನು ತೆರೆದಿಡುತ್ತೇನೆ..ಮುಂದಿನ ಬರಹ ಸದ್ಯದಲ್ಲಿಯೇ ನಿಮ್ಮೆದುರು ಕಾಣಲಿದೆ. ಬರ್ತಾ ಇರಿ..ಬೆನ್ನುತಟ್ಟುತ್ತಿರಿ..

Saturday, June 13, 2009

ಆಕೆಯೂ ನಗುತ್ತಾಳೆ..ದುಃಖಗಳನ್ನು ಎದೆಯೊಳಗಿಟ್ಟು!

ಅವಳು ನೆನಪಾಗುತ್ತಾಳೆ...!

ತುಂಬಾ ಸುಂದರ ಹುಡುಗಿ..ಥೇಟ್ ಕನಸುಳ್ಳ ಹುಡುಗಿ..ಭರವಸೆಯ ಹುಡುಗಿ. ಕತ್ತಿನಲ್ಲೊಂದು ತಾಳಿ..ಬದುಕಿಗೆ ಬೇಲಿ. ಅವಳ ನಗುವಿನಲ್ಲಿ ಕಾಣೋದು ಬರೀ ಬೆಳಕು..ನೋವಿನ ಕಣ್ಣೀರಿಲ್ಲ. ನಿತ್ಯ ನಗುತ್ತಾ ಬಾಳೋಳು..ಹುಣ್ಣಿಮೆಯ ತಂಪು ಬೆಳದಿಂಗಳಂತೆ! ಹೌದು..ಆಕೆಗೆ ನನಗಿಂತ ಮೂರು-ನಾಲ್ಕು ವರ್ಷ ಹೆಚ್ಚಾಗಿರಬಹುದು. ನಿತ್ಯ ಅವಳನ್ನು ನೋಡ್ತೀನಿ..ನಗುತ್ತಾಳೆ..ಪ್ರೀತಿಯ ಮಾತಾಡುತ್ತಾಳೆ. ಹೌದು, ಒಂದು ಖುಷಿಯ ಮಾತು ಸಾವಿರಾರು ದುಃಖಗಳಿಗೆ ಪರಿಹಾರ ನೀಡುತ್ತೆ..ಹಸಿದ ಹೊಟ್ಟೆಗೆ ಅನ್ನ ನೀಡುತ್ತೆ, ಬಾಯಾರಿದವನಿಗೆ ಒಂದು ಲೋಟ ನೀರು ನೀಡಿದಂತೆ ..ಅನ್ನೋದ್ರಲ್ಲಿ ನಂಬಿಕೆಯಿಟ್ಟ ನನ್ನಂಥವರಿಗೆ ಪ್ರೀತಿಯಿಂದ ಮಾತನಾಡಿಸುವವರನ್ನು ಕಂಡರೆ ಅಕ್ಕರೆ. ಆಕೆಯಲ್ಲೂ ನನಗೆ ಅಕ್ಕರೆ..ಪ್ರೀತಿ! ಎದುರುಗಡೆ ಸಿಕ್ಕಾಗ ಪುಟ್ಟದೊಂದು ನಗು..ಖುಷಿಯ ಹಿತ-ಮಿತ ಮಾತು. ಕುತ್ತಿಗೆಯಲ್ಲಿ ಜೋತುಬಿದ್ದಿದ್ದ ತಾಳಿ ಮಾತ್ರ ನನ್ನೊಳಗೆ ನೂರಾರು ಪ್ರಶ್ನೆಗಳಿಗೆ ಉತ್ತರ ಹೇಳದೆ ಮೌನವಾಗಿತ್ತು. ಹೌದು, ಹೆಣ್ಣಿನ ಬದುಕಿನಲ್ಲಿ ಸಪ್ತಪದಿ..ಅದಕ್ಕಿರುವಷ್ಟು ಮಹತ್ವ ಬಹುಶಃ ಬೇರೇನಕ್ಕೂ ಇರಲಿಕ್ಕಿಲ್ಲ ಅನಿಸುತ್ತೆ..'ತಾಳಿ' ಹೆಣ್ಣಿನ ಬದುಕೂ ಹೌದು!

ಅವಳು...ನನ್ನೊಳಗಿನ ಪ್ರಶ್ನೆಗೆ ಆಕೆ ಉತ್ತರ ಹೇಳಲಿಲ್ಲ..ನಾನು ಕೇಳಲಿಲ್ಲ...ಕೇಳೋದೂ ಸರಿ ಅನಿಸಲಿಲ್ಲ! ಅವಳು ಆ ಪುಟ್ಟ ಮನೆಯಲ್ಲಿ ಒಬ್ಬಳೇ..ಎಲ್ಲಾ ರಾತ್ರಿಗಳೂ ಅವಳಿಗೆ ಕನವರಿಕೆ ಮಾತ್ರ. ಬರೇ ಕನಸುಗಳು ಮಾತ್ರ. ಅಲ್ಲೇ ಇರುವ ಆಂಟಿ ಒಬ್ಬರು ಮೊನ್ನೆ ನಮ್ಮನೆಗೆ ಬಂದಾಗ ಅವಳ ಕಥೆಯನ್ನೇ ಬಿಚ್ಚಿಟ್ಟರು. ನನಗರಿವಿಲ್ಲದೆ ನಾನು ಕಣ್ಣೀರಾಗಿದ್ದೆ. ಇಂದಿಗೂ ನಗುವಿನ ಹಿಂದಿನ ಕಥೆಯನ್ನು ನೆನೆಸಿಕೊಳ್ಳುತ್ತಾ ನನ್ನ ಹೆಣ್ಣು ಹೃದಯನೂ ರೋಧಿಸುತ್ತೆ,. ಬದುಕು ಎಷ್ಟು ಕ್ರೂರ ಅನಿಸಿಬಿಡುತ್ತೆ.

ಹೌದು! ಅವಳಿಗೆ ಮದುವೆಯಾಗಿದೆ..ಒಂದು ವರುಷದ ಹಿಂದೆ! ಅದಕ್ಕೆ ಕುತ್ತಿಗೆಯಲ್ಲಿ ತಾಳಿ ಇದೆ.! ತುಂಬಾ ಬಡಕುಟುಂಬದ ಹೆಣ್ಣುಮಗಳು. ಒಪ್ಪೊತ್ತಿನ ಅನ್ನಕ್ಕೂ ಅವಳ ಮನೆಯಲ್ಲಿ ಕಷ್ಟ. ಅದಕ್ಕೆ ಆಕೆಯನ್ನು ಅರುವತ್ತು ವರುಷ ದಾಟಿದ ಒಬ್ಬನಿಗೆ ಮದುವೆ ಮಾಡಿ ಕೊಟ್ಟಿದ್ದಾರೆ. ಅವನಿಗೆ ಈಗಾಗಲೇ ಮದುವೆಯಾಗಿ. ಮೂರು ಹೆಣ್ಣುಮಕ್ಕಳಿದ್ದಾರೆ. ಅವರಿಗೆ ಮದುವೆಯಾಗಿ..ಅವನಿಗೆ ಮೊಮ್ಮಕ್ಕಳೂ ಇದ್ದಾರೆ! ಅವನಿಗೆ ಗಂಡು ಮಕ್ಕಳಿಲ್ಲ..ಕೈತುಂಬಾ ಹಣವಿದೆ. ಗಂಡು ಮಕ್ಕಳಿಲ್ಲ ಅನ್ನೋ ಕಾರಣಕ್ಕೆ ಇವಳನ್ನು ಮದುವೆಯಾಗಿದ್ದಾನೆ...ಅದೂ ಮೊದಲನೆಯ ಹೆಂಡತಿ, ಮಕ್ಕಳಿಗೆ ಗೊತ್ತಿಲ್ಲದಂತೆ! ಬೇರೆ ಮನೆ ಮಾಡಿ ಕೊಟ್ಟಿದ್ದಾನೆ..ವಾರದಲ್ಲಿ ಒಂದೆರಡು ಸಲ ಬೈಕ್ ಓಡಿಸಿಕೊಂಡು ಬರುತ್ತಾನೆ..ಅವನ ಬೈಕಿನ ಸದ್ದಿಗೆ ಆಕೆ ಖುಷಿಯಿಂದ ಓಡಿ ಬಂದು ಬಾಗಿಲು ತೆಗೆಯುತ್ತಾಳೆ. ಸಂಜೆ ವಾಪಾಸ್ ಅವನ ಮನೆಗೆ ಹೋಗುತ್ತಾನೆ..ಅವನ ಗಾಡಿ ಹೋಗುವಾಗ ಮತ್ತೆ ಹಿಂದಿನಿಂದ ಗೇಟ್ ಬಳಿ ಬಂದು ನೋಡುತ್ತಾಳೇ ಆ ಹೆಣ್ಣಮಗಳು..ಆತ ಬಂದಾಗ ಕಂಡ ಖುಷಿ, ಆತ ಮರಳಿದಾಗ ಅವಳ ಮುಖದ ಮೇಲೆ ಇರಲ್ಲ!

ಆ ಪುಟ್ಟ ಮನೆಯೊಳಗೇ ತನ್ನೆಲ್ಲಾ ಕನಸು ಕಟ್ಟೋಳು ಆಕೆ. ಹಗಲು-ರಾತ್ರಿಗಳು ಅವಳಿಗೆ ಅದೇ ಮನೆಯೊಳಗೆ. ಭರವಸೆಯ ನಾಳೆಗೂ ಅಲ್ಲೇ ಪುಟ್ಟ ಮನೆಯೊಳಗೆ...ಅದೇ ಆಕೆಯ ಬದುಕು! ನೋಡೋ ಕಣ್ಣುಗಳೆದುರು ನಗುತ್ತಾಳೆ..ದುಃಖವನ್ನೇ ಎದೆಯೊಳಗೆ ಮಡುಗಿಟ್ಟು! ಹೌದು..ಆಕೆಯ ಆತ್ಮವಿಶ್ವಾಸ ಮೆಚ್ಚಬೇಕು..ಹೆಣ್ಣಿಗೆ ತಾಳಿ..ಎಷ್ಟು ಮುಖ್ಯ ಅನಿಸಿಬಿಡುತ್ತೆ ಅವಳನ್ನು ಕಂಡಾಗ. ಆ 'ತಾಳಿ'ಗಾಗಿ ಆಕೆಯದು ಈ 'ಬದುಕು'! ಆದರೆ ಸುತ್ತಲ ಜನ ..ನನಗೆ ಕಥೆ ಹೇಳಿರುವ ಆ ಆಂಟಿಯ ಕಣ್ಣಲ್ಲಿ ಆಕೆಯ ಮೇಲೆ 'ಅನುಮಾನದ ಹುತ್ತ'! .ಆದರೆ 'ಗಂಡ' ಮಾತ್ರ ಸಾಕ್ಷಾತ್ ಶ್ರೀರಾಮ..! ಥೂ! ಅನಿಸಿತ್ತು.

ಯಾಕೋ ಮೊನ್ನೆಯಿಂದ ಆ ನಗುವಿನ ಹಿಂದಿನ ಕತೆ..ಮನಸ್ಸನ್ನು ತೀರಾ ರೋಧಿಸುವಂತೆ ಮಾಡಿಬಿಡ್ತು. ಹೀಗಾಗಬಾರದಿತ್ತು..ಆದರೆ ಆಕೆಗೂ ಅನಿವಾರ್ಯು..ನಗಬೇಕು..ಬಾಳಬೇಕು!

Thursday, June 4, 2009

ಈ ಪ್ರೀತಿ ಬದುಕಿನ ಶ್ರೇಷ್ಠ ಘಟ್ಟದಲ್ಲಿ ನಿಂತು ಗೌರವಿಸುತ್ತೆ..

ಗೆಳತಿ ಶ್ರೀ ಮೊನ್ನೆ "ನಮ್ಮ ಪೀಲು ಹೋಯ್ತು... ನಮ್ಮನ್ನೆಲ್ಲ ಬಿಟ್ಟು" ಕಂಗಳು ಒದ್ದೆಯಾಗಿಸಿ, ನನ್ನ ಮನಸ್ಸನ್ನೂ ಒದ್ದೆಯಾಗಿಸಿದ್ದಳು. ಹೌದು, ಅವಳ ಪ್ರೀತಿಯ ನಾಯಿ ಪೀಲು ಧಾರವಾಡದ ಅವಳ ಮನೆಯಲ್ಲಿ ಎಲ್ಲರನ್ನು ಬಿಟ್ಟುಹೋಗಿತ್ತಂತೆ. 'ಪೀಲುಗೆ ಇಂಜೆಕ್ಞನ್ ಕೊಟ್ಟಾಗ ಅಪ್ಪಾಜಿಗೆ ಕಣ್ಣಲ್ಲಿ ನೀರು ಬಂತಂತೆ,,ಅದಕ್ಕೆ ಡಾಕ್ಟರ್ ಅವರನ್ನು ಹೊರಗಡೆ ಕಳಿಸಿದ್ರಂತೆ. ಆಮೇಲೆ ವಾಚ್ ಮನ್ ಪೀಲುನ ಮಣ್ಣು ಮಾಡಿದ್ರಂತೆ. ಅದಕ್ಕೆ ಹೊಟ್ಟೆಯಲ್ಲಿ ಟ್ಯೂಮರ್ ಆಗಿತ್ತು ಕಣೇ. ಅಪ್ಪಾಜಿ ಪೀಲುನ ಮಗುವಿನಂತೆ ನೋಡಿಕೊಂಡಿದ್ರು' ಅಂತ ಹೇಳುತ್ತಿದ್ದಳು ಶ್ರೀ.

ಬಹುಶಃ ಮನುಷ್ಯ-ಮನುಷ್ಯ ಸಂಬಂಧಗಳಿಗಿಂತಲೂ ಕೆಲವೊಮ್ಮೆ ಪ್ರಾಣಿ-ಮನುಷ್ಯರ ಸಂಬಂಧ ಗಾಢವಾಗಿರುತ್ತೆ, ನಿಷ್ಕಲ್ಮಶ, ಪ್ರಾಮಾಣಿಕವಾಗಿರುತ್ತೆ. ನಮ್ಮನೆಯ ಕರು, ನಮ್ಮನೆಯ ಪ್ರೀತಿಯ ಬೆಕ್ಕು, ನಾಯಿಮರೀನ ನಾವು ನಮ್ಮನೆ ಮಕ್ಕಳ ಥರ ನೋಡಿಕೊಳ್ಳ್ತೀವಿ. ಅವುಗಳೂ ಅಷ್ಟೇ..ನಮ್ಮ ಮೇಲೆ ಅವು ತೋರಿಸುವ ನಿಷ್ಕಲ್ಮಶ ಪ್ರೀತಿನ ಕಂಡಾಗ ನಮ್ಮ ಮನೆ-ಮನಸ್ಸು ತುಂಬಿಬಿಡುತ್ತೆ. ಒಂದು ಕ್ಷಣ ಅವುಗಳು ನಮ್ಮೆದುರು ಇಲ್ಲಾದಾಗ ಅವುಗಳಿಗಾಗಿ ನಮ್ಮ ಕಣ್ಣುಗಳು ಹುಡುಕಾಡುತ್ತವೆ. ಅದರಲ್ಲೂ ನಾಯಿಯನ್ನು ಅತ್ಯಂತ ಕೃತಜ್ಞ ಪ್ರಾಣಿ ಅಂತಾರೆ. ಎಷ್ಟೋ ವರುಷಗಳ ಹಿಂದೆ ನಾವು ಒಂದು ನಾಯಿಗೆ ರೊಟ್ಟಿ ತುಂಡನ್ನು ಹಾಕಿದ್ರೆ ಅದು ಜೀವನವೀಡೀ ನಮ್ಮ ನೋಡಿದಾಗ ಬಾಲ ಅಲ್ಲಾಡಿಸಿ, ಕಿವಿ ನಿಮಿರಿಸಿ ಪ್ರೀತಿ ವ್ಯಕ್ತಪಡಿಸುತ್ತೆ.

ನಾನು ಶಾಲೆಗೆ ಹೋಗೋ ಸಮಯದಲ್ಲಿ ನಮ್ಮನೆಯಲ್ಲಿ ಒಂದು ನಾಯಿ ಇತ್ತು. ಸಕತ್ತ್ ಡುಮ್ಮ ನಾಯಿ...ಗುಂಡು-ಗುಂಡಾಗಿ ನೋಡಕ್ಕೂ ತುಂಬಾ ಸುಂದರವಾಗಿತ್ತು. ಅದಕ್ಕೆ ನನ್ನ ತಮ್ಮ 'ದೊಲ್ಲ' ಅಂತ ಹೆಸರಿಟ್ಟಿದ್ದ. ಅದಕ್ಕೂ ಮಲಗೋಕೆ ಚೆಂದದ ದಿಂಬು ಎಲ್ಲಾ ರೆಡಿಮಾಡಿದ್ದ ನನ್ನ ತಮ್ಮ. ರಾತ್ರಿ ತಮ್ಮನಿಗೆ ನಿದ್ದೆ ಬರೋ ತನಕ ಅದು ನಮ್ಮ ಜೊತೆನೇ ನಿದ್ದೆ ಮಾಡುತ್ತಿತ್ತು. ಆಮೇಲೆ ಎದ್ದು ಹೋಗಿ ಜಗಲಿಯಲ್ಲಿ ಮನೆ ಕಾಯುತ್ತಿತ್ತು. ನಾವು ಶಾಲೆಗೆ ಹೋಗುವಾಗ ಅರ್ಧದಾರಿ ತನಕ ನಮ್ಮ ಜೊತೆಗೆ ಬರೋ ದೊಲ್ಲ, ಆಮೇಲೆ ಸಂಜೆಯೂ ನಾವು ಶಾಲೆ ಬಿಡುವ ಹೊತ್ತಿಗೆ ಮನೆ ಗೇಟ್ ಎದುರು ಕುಳಿತು ಕಾಯುತ್ತಿತ್ತು. ನಾವು ಬರೊದೇ ತಡ..ನಮ್ಮ ಜೊತೆ ಅದಕ್ಕೂ ಏನಾದ್ರೂ ತಿನ್ನಬೇಕು..ಇಲ್ಲಾಂದ್ರೆ ನಮ್ಮ ಮೈಮೇಲ್ಲ ಹಾರಿ ಕಚ್ಚೋ ಕೆಲಸ ಮಾಡುತ್ತಿತ್ತು. ನನ್ನ ತಮ್ಮನಿಗಂತೂ ದೊಲ್ಲ ಅಂದ್ರೆ ನಮಗೆಲ್ಲರಿಗಿಂತಲೂ ಹೆಚ್ಚು ಪ್ರೀತಿ.

ಆದರೆ ಆ ದೊಲ್ಲ ಬದುಕಿದ್ದು ಎರಡನೇ ವರುಷ. ನಮ್ಮನೆಯ ಪಕ್ಕದ್ಮನೆಯ ನಾಯಿ ಅದಕ್ಕೆ ಕಚ್ಚಿ ಹೊಟ್ಟೆಗೆ ಗಾಯವಾಗಿತ್ತು. ಹಾಗಾಗಿ ತುಂಬಾ ದಿನ ಅದು ಮಲಗಿದ್ದಲ್ಲೇ ಇತ್ತು..ತಮ್ಮ ಆರೈಕೆ ಮಾಡ್ತಾ ಇದ್ದ. ಮತ್ತೆ ಎದ್ದು ನಡೆಯಲಾರಂಭಿಸಿದರೂ ತೀರ ಓಡಾಟ ಕಷ್ಟವಾಗುತ್ತಿತ್ತು. ಕೊನೆಗೊಂದು ದಿನ ನಾವು ಶಾಲೆಯಿಂದ ಬರುವಾಗ ದೊಲ್ಲ ಇರಲಿಲ್ಲ..ಎಲ್ಲಿ ಹುಡುಕಿದ್ರೂ ಸಿಕ್ಕಿರಲಿಲ್ಲ. ಒಂದು ದಿನ ಕಳೆದ ಮೇಲೆ ನಮ್ಮ ತೋಟದ ಬದಿಯಲ್ಲಿ ನಮ್ಮ ದೊಲ್ಲ ಚಿಕ್ಕ ಪೊದೆಗೆ ಸಿಕ್ಕಹಾಕೊಂಡು ಹೆಣವಾಗಿದ್ದ. ನನ್ನ ತಮ್ಮ 'ಅಮ್ಮ ನೀನೇ ಕೊಂದಿದ್ದು ನನ್ನ ದೊಲ್ಲನ..ನನ್ನನ್ನೂ ಕೊಂದುಬಿಡು' ಅಂತ ಅಳುತ್ತನೇ ಇದ್ದ. ಎರಡು ದಿವಸ ಊಟ ಮಾಡದೆ ಕುಳಿತಿದ್ದ. ಆದ್ರೂ ಅದನ್ನು ಹೂತ ಜಾಗದಲ್ಲಿ ಮತ್ತೆ ಮತ್ತೆ ಹೋಗಿ ಅಳುತ್ತಿದ್ದ. ವರುಷ ಅದೆಷ್ಟು ಸರಿದರೂ ದೊಲ್ಲನ ನೆನಪು ಬದುಕಾಗೇ ಇದೆ.

ನಿನ್ನೆ ಶ್ರೀ ಪೀಲು ಬಗ್ಗೆ ಹೇಳಿದಾಗ..ದೊಲ್ಲನೂ ನೆನಪಾದ..ಕಣ್ತುಂಬಿ ಬಂತು. ಕೆಲವೊಮ್ಮೆ ಮನುಷ್ಯ-ಮನುಷ್ಯ ನಡುವಿನ ಬಾಂಧವ್ಯ, ಪ್ರೀತಿನ ಕಂಡಾಗ ಮೂಕ ಪ್ರಾಣಿಯ ಪ್ರೀತಿಯೇ ಶ್ರೇಷ್ಠ ಅನಿಸುತ್ತೆ. ಈ ಪ್ರೀತಿ ಕನ್ನಡಿಯಂತೆ ಒಡೆಯಲ್ಲ, ನೋವು ಕೊಡಲ್ಲ, ಮನಸ್ಸು ಚುಚ್ಚೊಲ್ಲ, ಒಮ್ಮೊಮ್ಮೆ ಹೃದಯ ಭಾರವಾಗಿಸಲ್ಲ..ಪರಿಪರಿಯಾಗಿ ನಮ್ಮ ಕಾಡುತ್ತೆ, ಸಿಹಿನೆನಪಾಗುತ್ತೆ, ಬದುಕಿನ ಶ್ರೇಷ್ಠ ಘಟ್ಟದಲ್ಲಿ ನಿಂತು ನಮ್ಮನ್ನು ಗೌರವಿಸುತ್ತೆ ...ಏನಂತೀರಿ?