Wednesday, April 29, 2009

ನಿನ್ನ ಪ್ರೇಮದ ಪರಿಯ ನಾನರಿಯೆ...

ಒಲವಿನ ಗೆಳತೀ,
"ನಿದ್ದೆ ಬಾರದ ಕಣ್ಣ ಮೇಲೆ ಕೈಯ ಮುಗಿವೆ, ಚುಂಬಿಸು ಒಮ್ಮೆ..." ಎಂಬ ಹಾಡನ್ನು ನಿನ್ನೆ ನೀ ಫೊನಿನಲ್ಲಿ ಉಲಿದಾಗ ಯಾಕೋ ನಾನೊಮ್ಮೆ ಮೌನಿಯಾದೆ. ನನ್ನ ಮೌನದ ಹಿಂದಿರುವ ಅನಂತ ಚುಂಬನವನ್ನು ನೀ ಕಾಣಲೇ ಇಲ್ಲ ಗೆಳತೀ, ಅಣು ಅಣುವಿನಲ್ಲಿ ದೇವರನ್ನ ಕಂಡ ನನಗೆ, ನನ್ನ ಹೃದಯದಲಿ ಮಾತ್ರ ನೀ ಯಾಕೆ ಆವರಿಸಿರುವೆಯೆಂದು ಇನ್ನೂ ತಿಳಿದಿಲ್ಲ. ಧಮನಿಗಳು ನಿನ್ನ ತಪೋವನದ ಸುತ್ತ ಹರಿಯುವ ಜೀವ ನದಿಗಳಂತೆ ಅನಿಸುತ್ತಿವೆ. ನೆನಪಾದಾಗಲೆಲ್ಲಾ ಹುಣ್ಣಿಮೆಯೆಂದೆನುವ ನೀ, ನನ್ನಂತರಂಗದಲಿರುವ ಅಮವಾಸ್ಯೆಯ ಕತ್ತಲೆಯ ಆಳವನ್ನರಿಯದೆಯೆ ಪ್ರೀತಿಸಿರುವೆ. ಚಂದಿರ ಸೂಸುವ ತಂಪನ್ನು ಮಾತ್ರ ಅನುಭವಿಸಿರುವ ನೀನು, ಮಂಜಿನಾವೃತವಾದ ನನ್ನಂತರಂಗದ ಚಳಿಯನ್ನು ಸಹಿಸುವೆಯಾ? ಹೇಳು ಗೆಳತೀ, ನನ್ನ ಮೌನವನ್ನೇ ನಿನ್ನೆದೆಯ ಸ್ವಾತಿ ಮುತ್ತಾಗಿಸಲು ಹೊರಟಿರುವ ನಿನಗೆ, ನನ್ನ ನಿಶೆ ತುಂಬಿದ ಜೀವನದ ಪರಿಚಯವಿದೆಯೇ?

ನಿನ್ನ ಹೃದಯದ ಏಳಗಲದಲ್ಲಿ ತಲೆಯಿಟ್ಟು ಮಲಗುವ ಅದೃಷ್ಟವಿಲ್ಲದವನು ನಾನು ಗೆಳತೀ. ದಾರಿಯಲಿ ಬಿದ್ದಾಗ ಎದ್ದು ನಿಲಿಸುವ ನಿನ್ನ ಪ್ರೀತಿಯ ಮುಂದೆ ನಾ ಕೈಕಟ್ಟಿ ನಿಂತಿರುವೆ, ನನಗೆ ಮಾತುಗಳಿಲ್ಲ, ಮೌನವಷ್ಟೇ ಗೊತ್ತು. ನೀ ಕೊಟ್ಟ ಅಮ್ಮನ ವಾತ್ಸಲ್ಯ, ಅಕ್ಕನ ಮಮತೆ, ಒಲವಿನ ಗೆಳತಿಯಾಗಿ ಅಕ್ಕರೆಯ ಜೀವನ ಪ್ರೀತಿಗೆ ನಾ ಋಣಿ ಎಂದಷ್ಟೇ ಹೇಳಬಲ್ಲೆ. ನನಗೆ ತಿರುಗಿ ಕೊಡಲು ನನ್ನ ಕೈಯಲ್ಲಿ ಬಂಗಾರದ ಮೂಗುತಿ ಇಲ್ಲ, ಮಲ್ಲಿಗೆಯ ಹಾಸಿಗೆಯಿಲ್ಲ, ಮೊಸರನ್ನದ ಕನಸೂ ಇಲ್ಲ. ನಿನ್ನ ಕನಸ ನನಸಾಗಿಸುವ ಕಸುಬೂ ಇಲ್ಲ. ಸಾಧ್ಯವಿಲ್ಲದ ಕನಸುಗಳ ಕಟ್ಟಿ ಒಂಟಿಯಾಗುವ ನಿನ್ನ, ಹತ್ತಿರದಿಂದ ಸಂತೈಸುವ ಅವಕಾಶವಿದ್ದರೂ, ಮತ್ತೆಲ್ಲಿ ನನ್ನ ಎದೆಗೊರಗಿ ಮತ್ತೊಂದು ಕನಸ ಕಾಣುವೆಯಾ ಎಂಬ ಭಯ ನನ್ನೊಳಗೆ ಆವರಿಸಿಬಿಟ್ಟಿದೆ. ನಿನ್ನ ಬಿಟ್ಟು ಬೇರೆ ಯಾರೇ ನನಗೆ ಬದುಕಿನಾಸರೆ ಆದರೂ ಒಂಟಿಯೆಂದು ನಾನರಿವೆ. ಒಂಟಿ ಜೀವನ ನನ್ನ ವಿಧಿ ಬರಹ ಅಂದುಕೊಳ್ಳುವೆ ಗೆಳತೀ. ಹೃದಯ ತುಂಬಾ ಆವರಿಸಿರುವ ನಿನ್ನ ಬಿಟ್ಟು ಒಂಟಿತನವನ್ನೂ ಪ್ರೀತಿಸಲು ನಾನೊಲ್ಲೆ ಗೆಳತೀ. 'ನನ್ನ ದುಃಖಕ್ಕೆ ಹೆಗಲಾಗೆಂದು' ನಾ ಹೇಳಲಿಲ್ಲ ನಿಜ. ಆದರೆ, ನಿನ್ನ ನೋಡಿದ ಮೇಲೆ, ನಿನ್ನ ಜೀವನ ಪ್ರೀತಿಯ ಕಂಡ ಮೇಲೆ ನಾ ಕಣ್ಣೀರಾಗಲಿಲ್ಲ. ಕತ್ತಲನ್ನು ಮೆಟ್ಟಿ ನಿಂತು ಬೆಳಕನ್ನು ಕಾಣುವ ಪಾಠ ಹೇಳಿದವಳು ನೀನು. ನೀನೂ ನನ್ನ ಪಾಲಿಗೊಂದು ಬೆಳಕಿನ ಗುರು ಅಲ್ವಾ?

ನನ್ನ ಸುತ್ತಮುತ್ತಲಿನ ಜನ ದೇಶ ಭಾಷೆ ಕಲಿಯುವುದು ಭರವಸೆಯ ಹೊಂಗಿರಣವಲ್ಲ, ಹೌದು ಗೆಳತೀ, ನನ್ನ ನಗುವಿಗೆ, ಪ್ರೀತಿಗೆ ಸಂಸ್ಕೃತಿಯ ಕಟ್ಟಲೆಗಳಿರಲಿಲ್ಲ, ಹೌದು. ನಗರ ಚೆನ್ನಾಗಿದೆಯೆಂದು, ಹಳ್ಳಿಯ ಜನರೆಲ್ಲ ನಗರದಲ್ಲಿ ನೆಲೆಸಲಾಗುತ್ತದೆಯಾ? ಹಳ್ಳಿಯಲೇ ಅಲ್ಲವಾ ನೀವು ತಿನ್ನುವ ಭತ್ತ ಗೋಧಿ ಬೆಳೆಸುವುದು? ಅವರೆಲ್ಲಾ ಅಲ್ಲಿದ್ದರೇ ಚಂದವಲ್ಲವಾ? ಅಮ್ಮ, ಸಮಾಜ ಕಲಿಸಿದ 'ಸಂಸ್ಕೃತಿ'ಯನ್ನು ಹ್ಯಾಗೆ ಮೀರಲಿ ಹೇಳು? ಇಲ್ಲೇ ಹುಟ್ಟಿ, ಇಲ್ಲೇ ಬೆಳೆದ ನನಗೆ ಮಬ್ಬು ಬದುಕು ಚಂದವೇ ಗೆಳತಿ. ಇಲ್ಲೂ ಜೀವನ ಪ್ರೀತಿ ಇದೆ ಗೆಳತೀ. ಹುಣ್ಣಿಮೆಯ ಬೆಳದಿಂಗಳು, ಚಂದಿರನ ತಂಪನ್ನು ಅನುಭವಿಸಿರುವ ನಿನ್ನಲ್ಲಿ ಇದೊಂದು ಸತ್ಯವನ್ನು ಬಿಚ್ಚಿಟ್ಟಿರುವೆ.
ನಾ "ತೆರೆದಿದೆ ಮನೆ ಓ ಬಾ ಗೆಳತಿ..." ಎಂದು ಕರೆದೆಯೆನ್ನುವುದು ಸರಿ. ಕತ್ತಲನ್ನೇ ಹೊದ್ದು ಮಲಗಿರುವ ನನ್ನಲ್ಲಿ ನಿನಗೆ ಅದೇನು ಆಕರ್ಷಣೆ? ದೂರದಲ್ಲಿರುವ ಬೆಟ್ಟ ಸುಂದರವೆನ್ನುವ ನಾಣ್ಣುಡಿಯನ್ನು ಮರೆತು ನಿನ್ನ ನೋಡಿ ಮುಗುಳ್ನಕ್ಕೆ, ನಿನ್ನ ಜೀವನಪ್ರೀತಿಯನ್ನು ನೋಡಿ ಮೈಮರೆತೆ. ನೀನು ನಗುವ ಪರಿಯನ್ನು ಕಂಡು ಕನಸ ಕಂಡೆ, ಎಚ್ಚ್ರವಾದಾಗ ನೀ ತುಂಬ ಹತ್ತಿರವಿದ್ದರೂ ನನ್ನೊಳಗಿನ ಕತ್ತಲಿನ ಅರಿವಾಗಿ ಧಡ್! ಅಂತ ಕದ ಮುಚ್ಚಿದೆ. ಕಾಲ ಕಲಿಸುವ ಬದುಕಿಗೆ ನಾ ಯಾಕೆ ಬಂದಿಯಾಗುವೆನು ಎಂದು ಹೇಗೆ ತಿಳಿಯಪಡಿಸಲಿ ನಿನಗೆ? ನೀ ಮದುವೆಯಾಗಿ ಎರಡು ಮಕ್ಕಳ ಹೆತ್ತ ಮೇಲೆ ನೀ ಇದನ್ನೇ ನಿನ್ನ ಇನಿಯನ ಕೇಳು ಗೆಳತೀ.
ಜೋಗ್ ಜಲಪಾತವೇ ನಾಚುವಂತೆ ನಿನ್ನ ಚುಂಬಿಸುವ ನನ್ನ ಕನಸನ್ನು ಹೇಳಿದರೆ, ನೀ ಎಲ್ಲಿ ಹುಸಿಮುನಿಸು ತೋರಿಸುವೆಯೆಂದು ಹೇಳಿಲ್ಲ ನಿನಗೆ. ನಿನ್ನ ಹುಸಿಮುನಿಸೂ ನನ್ನ ಮನಸನ್ನು ಅಲ್ಲೋಲಕಲ್ಲೋಲ ಮಾಡುವಾಗ, ನನ್ನ ದು:ಖವನ್ನು ಹೇಳಿ, ಎಲ್ಲಿ ನಾ ನಿನ್ನ ಮನಸನ್ನು ಬೇಸರಿಸುವಂತೆ ಮಾಡುವೆನೋ ಎನ್ನುವ ದುಗುಡ ನನ್ನದು. ನನ್ನ ದು:ಖಗಳ ಬದುಕನ್ನು ನೀ ಅಪ್ಪಿಕ್ಕೋಳ್ಳುವೆಯೆಂದು ಹೇಳಿದಾಗ, ನನಗೆ ಇಷ್ಟೊಂದು ಪ್ರೀತಿಯ ಧಾರೆಯನ್ನೀಯುವಾಗ, ನಿನ್ನ ಕಾಲುಗಳ ಮುಟ್ಟಿ ನಮಸ್ಕರಿಸಿ ಧನ್ಯನಾಗುವ ಹಂಬಲವಾಗುತ್ತಿದೆ...ಏನೆನ್ನಲೀ ಗೆಳತೀ,
ಮೊಂಬತ್ತಿಯಲ್ಲೇ ಜೀವನ ಪ್ರೀತಿ ಪಡೆಯುವ ನಿನ್ನ ಮಲ್ಲಿಗೆ ಮನಸ್ಸಿನ ಸಣ್ಣ ಬಜೆಟ್ ಕನಸುಗಳಿಗೆ ನಾ ಅನಂತ ಋಣಿ.
ಬೇಸರಿಸದಿರು ಗೆಳತೀ...ನಿನ್ನ ಗುಲಾಬಿ ಹೃದಯದ ಕದ ತೆರೆದು ಒಮ್ಮೆ ಇಣುಕಿ ನೋಡು. ನಾ ನಲ್ಲೇ ನೆಲೆಸಿರುವೆ.
ಮತ್ತದೇ ಹಾಡಿನ ಗುನುಗು,
ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸ್ಸು
ಹುಣ್ಣಿಮೆಯ ರಾತ್ರಿಯಲಿ
ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
ನಿನ್ನೋಳಿದೆ ನನ್ನ ಮನಸ್ಸು
ಇತಿ,
ನಿನ್ನವನು

Sunday, April 26, 2009

ಕನಸು ಕಲ್ಲಾಗುವ ಮೊದಲು...!!

ಗೆಳೆಯಾ,
ನಿನ್ನ ನೆನಪಾದಾಗ ಅಮಾವಾಸ್ಯೆಯೂ ಹುಣ್ಣಿಮೆಯಂತೆ. ನೀ ನನ್ನೊಳಗೆ ಮಾತಿಗಿಳಿದಾಗ ಸುಡುವ ನೇಸರನೂ ತಂಪು ಸೂಸುವ ಚಂದಿರನಂತೆ. ನಿನ್ನ ಮೌನದ ದನಿ ಎದೆ ತಟ್ಟಿದಾಗ ಭಾವಗಳೂ ಜೀವ ಪಡೆಯುತ್ತವೆ. ಯಾಕೋ ನೀನಿಟ್ಟ ಪ್ರೀತಿಯ ಕಚಗುಳಿ ಮತ್ತೆ ಮತ್ತೆ ಹೃದಯದಲ್ಲಿ ಮಾರ್ದನಿಸುತ್ತದೆ ಗೆಳೆಯಾ. ಅನನ್ಯವಾದ ಬದುಕನ್ನು, ಅಮ್ಮನೆಂಬ ಶ್ರೇಷ್ಠ ಸತ್ಯವನ್ನು ಪ್ರೀತಿತಿಸಲು ಮಾತ್ರ ಅರಿತಿದ್ದ ನಾನು ನಿನ್ನನ್ನೂ ಪ್ರೀತಿಸಲು ಕಲಿತೆ. ನಿನ್ನಲ್ಲೂ ಜೀವನಪ್ರೀತೀನ ಕಂಡೆ. ನಿನ್ನಲ್ಲೂ ಬದುಕಿನ ಪ್ರತಿಬಿಂಬ ಕಂಡೆ. ನಾನಂದುಕೊಂಡಿರಲಿಲ್ಲ ಗೆಳಯಾ...ನೀ ಮೌನದಲ್ಲೇ ಪ್ರೀತಿಯಾಗಿ ನನ್ನೆದೆಯಲ್ಲಿ ಸ್ವಾತಿ ಮುತ್ತಾಗುವೆಂದು!

ಕಳೆದ ಬದುಕಿನ ಹಾದಿಯಲ್ಲಿ ನಂಬಿಕೆಯ ಪುಷ್ಪ ಹರಿಸಿ ನನ್ನೊಡನೆ ಹೆಜ್ಜೆಯಾಗಿದ್ದವನು ನೀನು. ಮನದೊಳಗೆ ಅವಿತಿದ್ದ ಶೋಕವನ್ನೇ ಶ್ಲೋಕವನ್ನಾಗಿಸಿ, ಅಳಲಿನ ಅಲೆಗಳನ್ನೇ ಸವಿಹಾಡಾಗಿಸಿದ ಗೆಳೆಯನೇ, ನಿನ್ನ ಖುಷಿಗೆ ನಾ ಬೆಳಕಾಗಬೇಕಾದರೆ ನಿನ್ನ ದುಃಖದ ಕತ್ತಲಲ್ಲೂ ನಾ ಕರಗಿ ಕಣ್ಣೀರಾಗಬೇಕು. 'ನಿನಗೆ ಬೆಳಕಷ್ಟೇ ನೀಡುತ್ತೇನೆ ಗೆಳತೀ..' ಎನ್ನುತ್ತಾ ದುಃಖವನ್ನೇಲ್ಲಾ ಬದುಕ ಮೇಲೆ ಹೊದ್ದು ಮಲಗುತ್ತೇನೆ ಎನ್ನುವ ಘನ ವ್ಯಕ್ತಿತ್ವ ನಿನ್ನದಾದರೂ ನಿನ್ನ ತುಂಬಾ ಪ್ರೀತಿಸುವ ಗೆಳತಿಯಾಗಿ, ಅಕ್ಕರೆಯ ಸಹೋದರಿಯಾಗಿ, ನೋವು-ನಲಿವಿಗೆ ಅಮ್ಮನಾಗಿ ಮಮತೆಯ ಮಡಿಲಾಗುವ ಅವಕಾಶ ಕೊಡ್ತೀಯಾ ಹೇಳು..?! ಬೆಳದಿಂಗಳ ಮಳೆಗೆ ಮಾತ್ರವಲ್ಲ ಬೆಂಕಿಮಳೆಯ ಕಾಳರಾತ್ರಿಯಲ್ಲೂ ನಿನ್ನ ಜೊತೆ ನಾ ಹೆಜ್ಜೆಯಾಗಬೇಕು. ಕಂಗಳಿಂದ ಜಾರೋ ಹನಿಬಿಂದು ಪಾದತಳಕ್ಕೆ ಬಿದ್ದು ಮಣ್ಣಾಗುವ ಮೊದಲು ಒಂದೇ ಒಂದು ಸಲ ಹೇಳಿಬಿಡು ಗೆಳಯಾ, "ಗೆಳತೀ ನನ್ನ ದುಃಖಕ್ಕೂ ಹೆಗಲಾಗಲೆಂದು..!"

ಹೃದಯ ತುಂಬಾ ದುಗುಡ-ಕಾರ್ಮೋಡವನ್ನು ಹೊತ್ತು 'ಮರೆತುಬಿಡು' ಎನ್ನುವಷ್ಟು ಸುಲಭವಲ್ಲ ಪ್ರೀತಿ-ಭಾವದ ಬಂಧನ. ನಿನ್ನ ಹುಣ್ಣಿಮೆ ನಗುವಿಗೆ, ಪ್ರೀತಿಯ ಕಚಗುಳಿಗೆ ಸಂಸ್ಕೃತಿ-ಕಟ್ಟಳೆಗಳ ಹಂಗಿರಲಿಲ್ಲ. ಸುತ್ತಮುತ್ತಲ ಜನ ದೇಶ ಭಾಷೆ ಕಲಿಯಬಹುದು..ಎನ್ನುವುದು ಭರವಸೆಯ ಹೊಂಗಿರಣವಲ್ಲ ಗೆಳೆಯಾ. 'ತೆರೆದಿದೆ ಮನೆ ಓ ಬಾ ಗೆಳತೀ..' ಎಂದು ಕೈಬೀಸಿ ಕರೆದು ಧಡ್ ! ಎಂದು ಮನದ ಕದ ಮುಚ್ಚದಿರು. ಅಂತರಂಗದ ಬಾಗಿಲು ತೆರೆದುಬಿಡು...ಪ್ರೀತಿಯ ಗಾಳಿ ಒಳಕ್ಕೆ ಹರಿದುಬಿಡಲಿ. ಬಣ್ಣ ತುಂಬಿಬಿಡು..ನೆನಪುಗಳಿಗೆ, ಪ್ರತಿ ರಾತ್ರಿಯ ಕನಸುಗಳಿಗೆ..ಜೀವನ ರಂಗೋಲಿಗೆ! ತಡವೇಕೆ..ಕಾಲ ಕಲಿಸುವ ಬದುಕಿಗೆ ನೀನ್ಯಾಕೆ ಬಂಧಿಯಾಗುತ್ತೀಯಾ ಹೇಳು? ಮನತುಂಬಿ ನಕ್ಕು ಬಿಡು..ಚಂದಿರನೂ ನಸು ನಾಚುವಂತೆ, ಅರಳುವ ಜಾಜಿಯೂ ಹುಸಿಮುನಿಸು ತೋರುವಂತೆ! ಅನನ್ಯ ಬದುಕಿನಲ್ಲಿ ಸ್ವಚ್ಚಂದ ಹಕ್ಕಿಯಾಗಿ ಆಕಾಶಕ್ಕೆ ಹಾರೋ ಆಡಂಬರತೆ ಬೇಡ..ನಮ್ಮದೇ ಬಿದಿರ ಹುಲ್ಲಿನ ಗುಡಿಸಲಿನಲ್ಲಿ ಪ್ರೀತಿಯ ಗೂಡು ಕಟ್ಟಿ ಕಲರವಗುಟ್ಟೋಣ. ಮೊಂಬತ್ತಿಯಡಿಯಲ್ಲೇ ಜೀವನಪ್ರೀತಿಯ ಅನುಭೂತಿ ಪಡೆಯೋಣ. ನಿನ್ನ ಬದುಕಿನಾಗಸದಲ್ಲಿ ಪುಟ್ಟ ನಕ್ಷತ್ರವಾಗೋ ಅವಕಾಶ ಕೊಡ್ತೀಯಾ ಹೇಳು ಗೆಳೆಯಾ....ಕನಸು ಕಲ್ಲಾಗುವ ಮೊದಲು..!!ಇಂತೀ,
ನಿನ್ನವಳೇ

Saturday, April 25, 2009

ಕೆಂಡಸಂಪಿಗೆಗೆ ಪ್ರೀತಿಯ ಥ್ಯಾಂಕ್ಸ್ಉಉಉ...

ನನ್ನ ಪ್ರೀತಿಯ ಬ್ಲಾಗ್ ಧರಿತ್ರಿ ಹುಟ್ಟಿದ್ದು ಕಳೆದ ಮಾರ್ಚ್ ನಲ್ಲಿ. ಕೆಂಡಸಂಪಿಗೆಯ ದಿನದ ಬ್ಲಾಗ್ ನಲ್ಲಿ ಧರಿತ್ರಿ ಇಂದು ಹೂನಗೆ ಚೆಲ್ಲುಬಿಟ್ಟಿದ್ದಾಳೆ. ಪ್ರೀತಿಯಿಂದ ಬೆನ್ನುತಟ್ಟಿದ್ದಕ್ಕೆ ಕೆಂಡಸಂಪಿಗೆಗೆ ಕೃತಜ್ಷತೆಗಳು.
ಧರಿತ್ರಿಯ ಹುಟ್ಟುಹಬ್ಬದ ಸಂಭ್ರಮ
ಪ್ರೀತಿಯ ತಮ್ಮನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ಧರಿತ್ರಿ. ಒಡಹುಟ್ಟಿದ ತಮ್ಮನಲ್ಲದಿದ್ದರೂ, ಒಡನಾಡಿ ಒಡಹುಟ್ಟಿದವನಾದ, ತಮ್ಮೂರು ಉಜಿರೆಯ ಕಾರಿಡಾರ್ ನಿಂದ ಈಗಿರುವ ಬೆಂಗಳೂರಿನ ಮನೆಯಲ್ಲೂ ತಮ್ಮೊಟ್ಟಿಗೆ ಕಲರವಗುಟ್ಟುವ ತಮ್ಮನ ಒಡನಾಟವನ್ನ ಧರಿತ್ರಿ ನೆನೆಯುತ್ತಿದ್ದಾರೆ. ಹೀಗಿರುವ ಪ್ರೀತಿಯ ತಮ್ಮನ ಹುಟ್ಟುಹಬ್ಬಕ್ಕೊಂದು ಕವಿತೆ ಇಟ್ಟು ಶುಭ ಕೋರುತ್ತಿದ್ದಾರೆ.

"ಧರಿತ್ರಿ ನನ್ನ ಅದಮ್ಯ ಕನಸು. ಸದಾ ಏನಾದ್ರೂ ಬರೀಬೇಕು ಅನ್ನೋದು ನನ್ ಮನಸ್ಸಿನ ತುಡಿತ. ಬರವಣಿಗೆ ಅನ್ನೋದು ನಿಂತ ನೀರಾಗಬಾರದು..ಅದಕ್ಕೆ ಈ ಧರಿತ್ರಿ ಆಸರೆಯಾಗುತ್ತಾಳೆ ಅನ್ನೋ ನಂಬಿಕೆ." ಅನ್ನೋದು ಅವರ ಆಶಯ.

ಭಾವದಲೆಗಳ ಮೇಲೇರಿ ಸವಾರಿ ಮಾಡುತ್ತಿರುವಂತೆ ಬರೆವ ಧರಿತ್ರಿ ಬರಹಗಳು ಓದಲು ಬೆಚ್ಚನೆಯ ಅನುಭವ ಕೊಡುತ್ತವೆ. ಹುಟ್ಟಿದೂರು ಬಿಟ್ಟುಬಂದ ತಳಮಳ, ಒಂಟಿತನದ ಸಂಕಟ, ಈ ನಡುವೆ ತುಂತುರು ಮಳೆಯಲ್ಲಿ ನೆನಪುಗಳ ಮೆರವಣಿಗೆ....ಎಲ್ಲವೂ ಓದಲು ಖುಷಿ ಕೊಡುತ್ತವೆ.
(http://www.kendasampige.com/article.php?id=1774)

Tuesday, April 21, 2009

ನೋವು-ನಲಿವುಗಳ ಜೊತೆ ನಲಿದಾಡಿಬಿಡು ನನ್ನ ಪುಟ್ಟ ತಮ್ಮಾ...

ನನ್ನನ್ನು ತುಂಬಾ ಪ್ರೀತಿಸುವ ಮುದ್ದಿನ ತಮ್ಮ ಸಂದೇಶನ ಹುಟ್ಟುಹಬ್ಬ ನಾಳೆ. ಅವನಿಗಿನ್ನು 23 ವರುಷ. ಹಾಗಾಗಿ ಭಾಳ ಖುಷಿ. ಉಜಿರೆಯ ಕಾರಿಡಾರ್ ನಿಂದ ಹಿಡಿದು ಬೆಂಗಲೂರಿನ ಪುಟ್ಟ ಮನೆಯೊಳಗೂ ನನ್ನ ಮಡಿಲಲ್ಲಿ ಕಲರವಗುಟ್ಟುವವ ನನ್ನ ತಮ್ಮ. ಅವನು ಒಡಹುಟ್ಟಿದ ತಮ್ಮನಲ್ಲ, ಆದರೆ ಒಡನಾಡಿ ಒಡಹುಟ್ಟಿದವನಾದ. ನಾನು ದ್ವಿತೀಯ ಬಿಎ ಇರುವಾಗ ಅವನು ಮೊದಲ ಬಿಎ. ದೂರದ ಚಿಕ್ಕಮಗಳೂರ ಕಾಫಿ ತೋಟದಿಂದ ಉಜಿರೆಗೆ ಕಲಿಯಲು ಬಂದ ನನ್ನ ಚಿಕ್ಕಮ್ಮನ ಮಗ. ಕ್ಲಾಸಿಲ್ಲದ ಫ್ರೀ ಫಿರೇಡಿನಲ್ಲಿ ನಿತ್ಯ ನನ್ನ ಕ್ಲಾಸಿನಲ್ಲಿ ಕುಳಿತು ನನ್ನ ಜೊತೆ ಹರಟುತ್ತಾ, ದಿನಚರಿಗಳನ್ನು ಒಪ್ಪಿಸುತ್ತಾ, ತಮಾಷೆ ಮಾಡುತ್ತಾ, ಜಡೆ ಎಳೆಯುತ್ತಾ, ಕಿವಿ ಹಿಂಡುತ್ತಾ ಕೊನೆಗೆ ನನ್ನಿಂದ ಬೈಸಿಕೊಂಡು ಹಾಸ್ಟೇಲ್ ಮೂಲೆಯಲ್ಲಿ ಕುಳಿತು ಒಬ್ಬಂಟಿಯಾಗಿ ಬಿಕ್ಕಿ ಬಿಕ್ಕಿ ಅತ್ತವ ನನ್ನ ಪ್ರೀತಿಯ ತಮ್ಮ, ಕಾಲೇಜಿನಲ್ಲಿ ಗಮಕ ತರಗತಿಗೆ ಹೋಗುವಾಗ ಮೇಷ್ಟ್ರು ಹೇಳಿದ್ದು ಅರ್ಥವಾಗದಿದ್ದಾಗ ನನ್ನ ದನಿಗೆ ಸಾಥ್ ನೀಡಿದ್ದು ನನ್ನ ತಮ್ಮ. ಪ್ರತಿ ಹಬ್ಬ ಬಂದಾಗಲೂ ನನಗೆ ಹೋಳಿಗೆ, ಮನೆಯಲ್ಲಿ ಮಾಡಿದ್ದ ತಿಂಡಿಗಳನ್ನು ನಮ್ಮ ಹಾಸ್ಟೇಲಿಗೆ ತಂದುಕೊಡುತ್ತಿದ್ದ. ಕಾಲೇಜು ಬಿಟ್ಟ ತಕ್ಷಣ ನನ್ನ ಹಾಸ್ಟೇಲ್ ತನಕ ಬಿಟ್ಟು ಆಮೇಲೆ ಅವನ ಹಾಸ್ಟೇಲಿಗೆ ಹೋಗುತ್ತಿದ್ದ. ರಜಾ ದಿನದಲ್ಲಿ ಹೊರನಾಡು, ಕಲಶ, ಶೃಂಗೇರಿ, ಚಿಕ್ಕಮಗಳೂರು ಸುತ್ತಿಸಿ, ಅಕ್ಕನಿಗೆ ಚಿಕ್ಕಮಗಳೂರಿನ ಕಾಫಿ ತೋಟಗಳನ್ನು ನೋಡಿ ಖುಷಿಪಡಿಸಿದ್ದ.

ನಾನು ಡಿಗ್ರಿ ಮುಗಿಸಿ ಕಾಲೇಜಿಂದ ಹೊರನಡೆದಾಗ ಅಕ್ಕಾ ನಾ ನಿನ್ ಜೊತೆಗೇ ಬರ್ತೀನಿ ಎಂದು ಅಮ್ಮನೆದುರು ಮಗು ಗೋಗರದಂತೆ ಬಿಕ್ಕಿ ಬಿಕ್ಕಿ ಅತ್ತಿದ್ದ. "ನನಗಿಂತ ಹೆಚ್ಚಾಗಿ ನಿನ್ನ ಪ್ರೀತಿಸೋರು ಸಿಕ್ಕಾಗಲೂ ನನ್ನ ಮರೆಯಲ್ಲ ತಾನೇ?" ಎಂದು ಆಟೋಗ್ರಾಫ್ ತುಂಬಾ ಗೀಚಿಟ್ಟು ನನ್ನ ಕಣ್ಣುಗಳೂ ಒದ್ದೆಯಾಗುವಂತೆ ಮಾಡಿದ್ದ. ಕಾರಿಂಜ ದೇವಸ್ಥಾನ ಬೆಟ್ಟದ ತುತ್ತತುದಿಗೆ ಹೋಗಿ ನನ್ನ ಜೊತೆ ಫೋಟೋ ತೆಗೆಸಿಕೊಂಡು ನಿಂಗೆ ಬಾವ ಹುಡುಕುತ್ತೀನಿ ಅಂತ ತಮಾಷೆ ಮಾಡುತ್ತಿದ್ದ. ಸಿಕ್ಕವರಿಗೆಲ್ಲಾ ಫೋಟೋ ತೋರಿಸಿ ಇದು ನನ್ನಕ್ಕ ಅಂತ ಹೆಮ್ಮೆಪಡುತ್ತಿದ್ದ. ಅಂತೂ ನಾನು ಬೆಂಗಳೂರಿಗೆ ಬಂದಾಗಲೂ ನಿತ್ಯ ಮೊಬೈಲ್, ಮೆಸೇಜ್ ಗಳೊಂದಿಗೆ ನನ್ನೊಂದಿಗೆ ಕಲರವಗುಟ್ಟುತ್ತಿದ್ದ. ಡಿಗ್ರಿ ಮುದಿದ್ದೇ ತಡ..ಮನೆಯಲ್ಲಿ ಯಾರೂ ಹೇಳಿದ್ರೂ ಅಕ್ಕನ ಜೊತೆಗೇ ಇರ್ತೀನಿ ಅಂತ ಹಠ ಹಿಡಿದು ಬೆಂಗಳೂರಿಗೆ ಬಂದುಬಿಟ್ಟ. ನನ್ನ ಪುಟ್ಟ ಮನೆಯಲ್ಲಿ ನನ್ನ ಮಡಿಲೇ ಸೇರಿಬಿಟ್ಟ.

ನನ್ನ ಕೆಟ್ಟ ಕೋಪ, ಅಸಹನೆ, ಸಿಡುಕು ಎಲ್ಲಾವನ್ನೂ ಸಹಿಸಿಕೊಂಡು ನನ್ನ ಜೊತೆ ಹೆಜ್ಜೆಹಾಕೋನು ನನ್ನ ತಮ್ಮ. ರಾತ್ರಿ 10 ಗಂಟೆಗೆ ಮನೆ ಸೇರಿದರೂ. "ಮೇಡಮ್ಮೋರೇ ಎದ್ದೇಳ್ತೀರಾ. ಮಿ. ಸಂದೇಶ್ ಬಂದಿದ್ದಾರೆ" ಅಂತೇಳಿ ನನ್ನ ಕೋಣೆಯ ಕಿಟಕಿ ಬಡಿದು ಎಬ್ಬಿಸಿ, ಸ್ವಲ್ಪ ಊಟ ಮಾಡಕ್ಕ..ಅನ್ನುತ್ತಾ ಮತ್ತೊಮ್ಮೆ ಊಟ ಮಾಡಿಸೋನು ನನ್ನ ಮುದ್ದು ತಮ್ಮ. ಬೆಳಿಗ್ಗೆ ಆರು ಗಂಟೆಗೆ ಎದ್ದು ನಾನು ಪಾತ್ರೆಗಳ ಜೊತೆ ಸದ್ದು ಮಾಡುವಾಗ, ದಡಕ್ಕನೆ ಎದ್ದು ನನ್ನ ಜೊತೆ ತರಕಾರಿ ಹಚ್ಚೋಕೆ ಸಾಥ್ ನೀಡೋನು, ನಾನು ಟೀ ಕುಡಿದು ಸ್ಬಾನಕ್ಕೆ ಹೋದಾಗ ಮನೆ ಗುಡಿಸಿ-ಒರೆಸಿ, ಪೂಜೆಗೆ ರೆಡಿ ಮಾಡೋನು ನನ್ನ ತಮ್ಮ. ನಾನು ಬೇಜಾರದಲ್ಲಿದ್ದಾಗ ಕೆದಕಿ ಕೆದಕಿ ಕೇಳಿ ತಲೆಯೆಲ್ಲಾ ತಿಂದು ಸ್ವಲ್ಪ ಬೈಸಿಕೊಂಡು ಆಮೇಲೆ ನನ್ನ ಮನಸ್ಸನ್ನು ತಣ್ಣಗಾಗಿಸೋನು ನನ್ನ ತಮ್ಮ. ನಾ ಬೈದ್ರೆ ಸುಮ್ಮನಾಗಿ, ನನ್ನ ಸಿಟ್ಟೆಲ್ಲಾ ಕರಗಿದ ಮೇಲೆ ನೀನು ಹಾಗೆಲ್ಲಾ ಹೇಳಬಾರದಿತ್ತು ಎಂದು ನನ್ನ ತಪ್ಪನ್ನು ನನಗೇ ಮನದಟ್ಟು ಮಾಡೋನು. ತಿಂಗಳ ಕೊನೆಯಲ್ಲಿ ಬೇಗನೇ ಸಂಬಳ ಕೈಗೆ ಸಿಗದಾಗ...ನನ್ನ ತಲೆಬಿಸಿ ನೋಡಿ..ಅಕ್ಕಾ ಸ್ವಲ್ಪ ದಿನಸಿ ತಕೋಳೋಣ..ಸಂಬಳ ಆದ ಮೇಲೆ ಎಲ್ಲಾ ತಕೋಳೋಣಂತೆ ಎಂದೇಳಿ ತಲೆಬಿಸಿ ಕಡಿಮೆಯಾಗಿಸೋನು ನನ್ನ ತಮ್ಮ. ನಾನು ಹೊಸ ಡ್ರೆಸ್ಸು ತಕೋಳುವಾಗ ಕಲರ್ ಸೆಲೆಕ್ಟ್ ಮಾಡಿ, ಅದನ್ನು ಹಿಂಗೇ ಹೊಲಿಸು, ಅದಕ್ಕೆ ಇಂಥ ಕಿವಿಯೋಲೆ, ಬಳೆ ಹಾಕೆಂದು ದುಂಬಾಲು ಬೀಳೋನು, ಅವನಿಗೆ ವಾರದ ರಜಾದಿನದಂದು ಬೇಗನೆ ಅಡುಗೆ ಎಲ್ಲಾ ರೆಡಿಮಾಡಿ, ನಾನು ಸಂಜೆ ಆಫೀಸ್ ನಿಂದ ಹೊರಟಾಗ ವಾಕಿಂಗ್ ಗೆ ರೆಡಿಯಾಗೋನು, ಮಲ್ಲಿಗೆ ಮತ್ತು ಗುಲಾಬಿ ಹೂವು ತಂದು ನನ್ನ ತಲೆಗೆ ಮುಡಿಸಿ ನನ್ನ ನೋಡಿ ಖುಷಿಪಡೋನು, ನೀನು ಮದುವೆಯಾಗುವ ತನಕ ನಿನ್ನ ಜೊತೆ ಇದ್ದುಬಿಡ್ತೀನಿ...ಆಮೇಲೆ ನಿಮ್ಮನೆ ಪಕ್ಕನೇ ನಂಗೊಂದು ರೂಮ್ ಮಾಡಿ ಕೊಡಕ್ಕಾ ಎಂದು ನಿತ್ಯ ತಮಾಷೆ ಮಾಡೋ ನನ್ನ ಪುಟ್ಟ ತಮ್ಮನನ್ನು ಕಂಡಾಗ ನನ್ನೆಲ್ಲಾ ನೋವುಗಳು ಕರಗಿ, ಮನಸ್ಸು ಖುಷಿಯ ಕಡಲಲ್ಲಿ ತೇಲಿಬಿಡುತ್ತೆ. ನನ್ ಪುಟ್ಟ ಮನೆಯಲ್ಲಿ ಖುಷಿಯ ಸಾಗರವನ್ನೇ ತಂದಿಡುವ ನನ್ನ ತಮ್ಮನ ಸಹನೆ ಕಂಡಾಗ, ಛೇ! ಆ ತಾಳ್ಮೆಯನ್ನು ದೇವರು ನನಗೇಕೆ ಕೊಟ್ಟಿಲ್ಲ ಅನಿಸುತ್ತೆ. ನೋವು-ನಲಿವಿಗೆ ಪ್ರೀತಿಯ ಅಮ್ಮನಾಗಿ, ತಿದ್ದಿ-ತೀಡುವ ಅಕ್ಕರೆಯ ಗೆಳೆಯನಾಗಿ, ಬುದ್ಧಿ ಹೇಳುವ ಅಕ್ಕ-ಅಣ್ಣನಾಗಿರುವ ನನ್ನ ತಮ್ಮನಂದ್ರೆ ಅಮ್ಮನಷ್ಟೇ ನಂಗೆ ಪ್ರೀತಿ.
ಪುಟ್ಟಾ....
ನಿನ್ನೊಳಗೆ ತೂರಿಬರುವ
ಬೆಳಕಿನ ಕಿರಣಗಳನ್ನು ಹಿಡಿದಿಡು....
ಬದುಕಿನ ಎದೆಯಿಂದ ಎದೆಗೆ
ಪ್ರೀತಿಯ ಗಾಳಿ ಸೋಕಿಬಿಡು..
ಎಲ್ಲರ ನೋವು-ನಲಿವುಗಳ ಜೊತೆಯಾಗಿ ನಲಿದುಬಿಡು..ನನ್ನ ತಮ್ಮನಾಗಿ!
ಸವಿಮನದ ಹೊಲದಲ್ಲಿ
ಪ್ರೀತಿ ಪ್ರೇಮ ಸ್ನೇಹಗಳು
ಬೆಳೆದು ನಿಲ್ಲಲಿ, ಸುಗ್ಗಿ ಅರಳಲಿ
ನಿನ್ನ ಬಾಳು ಸದಾ ಹಸಿರಾಗಿರಲಿ..

ಪುಟ್ಟಾ...ನಿನಗಿದೋ ಹುಟ್ಟುಹಬ್ಬದ ಶುಭಾಶಯಗಳು.

Friday, April 17, 2009

ತುಂತುರು ಮಳೆಯಲ್ಲಿ ನೆನಪುಗಳ ಮೆರವಣಿಗೆ...

ತುಂತುರು ಮಳೆ! ಬೆಂಗಳೂರಿನ ನನ್ನ ಪುಟ್ಟ ಮನೆಯಂಗಳಕ್ಕೆ ವರುಣನ ಸ್ಪರ್ಶ. ನಾ ಹೊಸ ಮನೆಗೆ ಬಂದ ಮೇಲೆ ಇದೇ ಮೊದಲ ಬಾರಿಗೆ ಮಹಡಿ ಮನೆಯಲ್ಲಿ ಕುಳಿತು ತುಂತುರು ಮಳೆಯ ಹರ್ಷವನ್ನು ಸವಿದಿದ್ದೆ. ಅದೇನೋ ಖುಷಿ, ನಿತ್ಯ ಸೆಕೆಯಿಂದ ಮೈಯೆಲ್ಲಾ ಬೇಯುತ್ತಿದ್ದ ನನಗೆ ನಿನ್ನೆ ತಂಪು ಗಾಳಿಯ ಪುಳಕ. ಬೇಗನೆ ಅಡುಗೆ ಮಾಡಿ, ಸ್ನಾನ, ದೇವರಿಗೆ ದೀಪ ಹಚ್ಚಿ..ನನ್ನ ಪುಟ್ಟ ರೂಮಿನ ಕಿಟಕಿ ಬಳಿ ಕುಳಿತರೆ..ನಕ್ಷತ್ರಗಳೇ ಕಾಣದ ಕಪ್ಪನೆಯ ಆಗಸದಿಂದ ತುಂತುರು ಹನಿಗಳು ಜಿಟಿಯುತ್ತಿದ್ದವು. ಎದುರು ಮನೆಯ ಮಕ್ಕಳು ಟೆರೇಸ್ ಮೇಲೆ ಆಡಲು ಹೋಗುತ್ತಿದ್ದಂತೆ ಅವರಮ್ಮ ದೊಡ್ಡ ಸ್ವರದಿಂದ ಪುಟ್ಟ ಕಂದಮ್ಮಗಳಿಗೆ ಗದರುತ್ತಿದ್ದಳು. ಒಂದು ಕ್ಷಣ ಮಹಡಿ ಮೇಲಿಂದ ಕೆಳಗೆ ರಸ್ತೆಗಿಳಿದು..ಮಳೆಯಲ್ಲಿ ತೊಯ್ದು ಬಿಡೋಣ ಅನಿಸಿದ್ರೂ ಮನಸ್ಸೇಕೋ ಬೇಡ ಅಂದಿತ್ತು. ಬಾಗಿಲಲ್ಲಿ ನಿಂತು ಮಳೆಗೆ ಕೈ ಚಾಚಿ ಅಂಗೈಯಲ್ಲಿ ಆ ತುಂತುರು ಹನಿಗಳನ್ನು ಅಂಗೈಯಲ್ಲಿ ಹಿಡಿಯಹೊರಟರೆ. ಥತ್...! ಕೈಯಿಂದ ಜಾರಿಹೋಗಬೇಕೇ ಹನಿಗಳು...?!

ಬದುಕು ಏನಾದರೂ ಬಲುದೂರ ಹೋದರೂ
ಬರಲಾರದಿಂಥ ಬೇರೊಂದು ನೆನಪು
ಏನೆಲ್ಲಾ ಮರೆತರೂ ಯಾರೊಡನೆ ಬೆರೆತರೂ
ಮರುಕಳಿಸುತಿಹುದು ನೂರೊಂದು ನೆನಪು...
ಇಳೆಯಂಗಳದಲ್ಲಿ ಮಳೆರಾಯ ಕಲರವಗುಟ್ಟುತ್ತಿದ್ದರೆ, ನನ್ನೊಳಗಿನ ಭಾವಗಳು ಸರಿದು ಹೋದ ಬದುಕಿನ ಮಗ್ಗುಲಗಳನ್ನು ನೆನಪಿಸಿದವು. ಮಳೆ-ಮನ ಖುಷಿಯಲ್ಲಿ ನೆನಪುಗಳ ಮೆರವಣಿಗೆ, ಸಾಲು ಸಾಲು ನೆನಪುಗಳು..ಎದೆಯಲ್ಲಿ ಅಪ್ಪಿ ಬಚ್ಚಿಟ್ಟುಕೊಳ್ಳಲಾದಷ್ಟು! ಒಂದೆಡೆ ಕರೆಂಟ್ ಕಣ್ಣಾಮುಚ್ಚಾಲೆ..ಯಡಿಯೂರಪ್ಪ ಸರ್ಕಾರಕ್ಕೆ ಶಾಪ ಹಾಕುತ್ತಲೇ ಮೊಬೈಲ್ ಲೈಟ್ ಆನ್ ಮಾಡಿ ಹಾಗೇ ಖಾಲಿ ಹಾಳೆ ಮೇಲೆ ಗೀಚುತ್ತಿದ್ದೆ! ಅದೇ ನೆನಪುಗಳು...
ನಮ್ಮ ಹಳೆಮನೆ ಎದುರುಗಡೆ ಇದ್ದ ವಿಶಾಲವಾದ ಹಲಸಿನ ಮರ..ಅದರ ತುಂಬಾ ಹಲಸಿನಕಾಯಿಗಳ ಗೊಂಚಲು, ಊರಿನವರೆಲ್ಲಾ ಆ ಹಲಸಿನ ಹಣ್ಣುಗಳನ್ನು ಕೊಯ್ದು ತಂತಮ್ಮ ಮನೆಗೆ ಕೊಂಡೋಗುತ್ತಿದ್ದುದು, ನೆರೆಮನೆಯ ಗೋಪಾಲ ನಮ್ಮ ಕೆರೆಗೆ ಗಾಳ ಹಾಕಲು ಬರುತ್ತಿದ್ದು, ನಿತ್ಯ ನಮ್ಮನೆಗೆ ಬಂದು ಮದ್ದು ಅರೆದು ಕೊಡುತ್ತಿದ್ದ ಸೀತಮ್ಮಜ್ಜಿ, ಶೇಂದಿ ಇಳಿಸುತ್ತಿದ್ದ ನಮ್ಮಜ್ಜ ನಮಗೂ ಒಂದು ಚಮಚ ಶೇಂದಿ ಕುಡಿಸಿ ನಮ್ಮ ತಲೆಗೂ ಅಮಲಿನ ರುಚಿ ಹತ್ತಿಸಿದ್ದು, ಪಕ್ಕದ್ಮನೆ ಸೋಮುನ ಸೈಕಲ್ ಟಯರನ್ನೇ ಕದ್ದಿರುವ, ನನಗೆ ತಂದ ಡ್ರೆಸ್ ಗಳೇ ಬೇಕೆಂದು ರಚ್ಚೆ ಹಿಡಿಯುತ್ತಿದ್ದ ನನ್ನ ತಮ್ಮ, ಚಿಕ್ಕದಿರುವಾಗ ನಾನು ನೆರಳು ನೋಡಿದ್ರೆ ವಿಪರೀತ ಹೆದರಿಕೊಳ್ಳುತ್ತಿದ್ದುದು, ಸಂಸ್ಕೃತಿ-ಸದಾಚಾರಗಳಿಗೆ ಪ್ರೀತಿಯನ್ನೇ ಬಲಿಯಾಗಿಸಿದ ನಮ್ಮೂರಿನ ರಾಮು, ಮೂಲೆ ಸೇರಿದ ನನ್ನ ಪ್ರೀತಿಯ ರೇಡಿಯೋ.. ಹೀಗೆ ಸಾಲು ಸಾಲು ನೆನಪುಗಳು ಮನದ ಕದ ತಟ್ಟುತ್ತಿದ್ದವು. \ಕಳೆದು ಹೋದ ಗೆಳೆಯ/ಗೆಳತಿಯ ನೆನಪುಗಳು ಮಾತ್ರ ಯಾಕೋ ತುಂತುರು ಮಳೆಹನಿಯಂತೆ ಕಂಗಳಲ್ಲಿ ಜಿಟಿಯುತ್ತಿದ್ದವು..
ನಡುವೆ ನಮ್ಮ ಬಾವ ನೆನಪಾದ್ರು. ಆಗಿನ್ನೂ ನಾ ಸಣ್ಣ ಮಗು..ಅಮ್ಮನಷ್ಟೇ ಗೊತ್ತು. ನಮ್ಮನೆಯಿಂದ ಅತ್ತೆ ಮನೆಗೆ ಹೋಗಬೇಕಾದ್ರೆ ಕುಮಾರಧಾರ ನದಿ ದಾಟಿ ಹೋಗಬೇಕು. ರಸ್ತೆಗಳಿಲ್ಲ, ಬಸ್ಸು-ಜೀಪಿಗಳಿಲ್ಲ. ಬೇಸಿಗೆಯಲ್ಲಿ ಕುಮಾರಧಾರ ಬತ್ತಿಹೋಗುತ್ತೆ..ನದಿಯನ್ನು ಹಾಗೇ ದಾಟಬಹುದು..ಅಲ್ಲಿ ಜುಳು ಜುಳು ಸದ್ದುಗಳಿಲ್ಲ, ನೀರಿನ ಆರ್ಭಟದ ಹರಿವಿಲ್ಲ. ಅತ್ತೆ ಮನೆಗೆ ಹೋಗಬೇಕಾದ್ರೆ ಬಾವ ನನ್ನ ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದು. ಬೇಗ ದೊಡ್ಡವಳಾಗು ನಿನ್ನ ನಾನೇ ಮದುವೆ ಆಗ್ತೀನಿ ಅಂತ ನೆಂಟರೆದುರು ತಮಾಷೆ ಮಾಡುತ್ತಿದ್ದ ಬಾವ ಈಗ ಮೂರು ಮಕ್ಕಳ ತಂದೆಯಾಗಿದ್ದು ನೆನಪಾಗಿ ತುಂತುರು ಮಳೆಯನ್ನು ನೋಡುತ್ತಲೇ ನನ್ನಷ್ಟಕ್ಕೆ ನಕ್ಕುಬಿಟ್ಟಿದ್ದೆ. ಮೂರನೇ ಕ್ಲಾಸಿನಲ್ಲಿರುವಾಗ ನನ್ನ ಕಡ್ಡಿ ಕದ್ದ ಕುಶಲ, ಸುಮ್ ಸುಮ್ಮನೆ ಹೊಡೆಯುತ್ತಿದ್ದ ಬೇಬಿ ಟೀಚರ್, ಹೊಟ್ಟೆ ನೋವೆಂದು ಕ್ಲಾಸಿಗೆ ಚಕ್ಕರ್ ಹಾಕುತ್ತಿದ್ದ ಕುಸುಮಾಧರ, ಸ್ಟಡಿ ಪಿರೇಡಿನಲ್ಲಿ ಮಾತನಾಡಿದ್ದೇನೆಂದು ಹೆಸರು ಬರೆದು ಕೊಟ್ಟು ಹೆಡ್ ಮಾಸ್ತರ ಕೈಯಿಂದ ಪೆಟ್ಟು ತಿನ್ನಿಸಿದ ಕ್ಲಾಸ್ ಲೀಡರ್ ಸುಂದರ, ಊರ ಜಾತ್ರೆಯಿಂದ ಸಕ್ಕರೆ ಮೀಠಾಯಿ ತಂದುಕೊಡುತ್ತಿದ್ದ ಪ್ರಕಾಶ, ಮಂಗಳ ವಾರಪತ್ರಿಕೆ ಮಧ್ಯೆ ಪ್ರೇಮ ಪತ್ರ ಬರೆದು ಕಳಿಸಿದ ತರ್ಲೆ ಗೆಳೆಯ, ಡುಂಡಿರಾಜ್ ಕವನಗಳನ್ನು ಕ್ಲಾಸಿನಲ್ಲಿ ಹೇಳುತ್ತಾ, ತಾನೇ ಬರೆದಿದ್ದು ಎಂದು ಸುಳ್ಳು ಹೇಳುತ್ತಿದ್ದ ಹಾಸನದಿಂದ ಬಂದಿರುವ ಹಿಂದಿ ಮೇಷ್ಟ್ರು, ರಕ್ಷಾಬಂಧನ ದಿನದಂದು 60 ವರ್ಷದ ಗಣಪತಿ ಮೇಷ್ಟ್ರಿಗೆ ರಾಖಿ ಕಟ್ಟಿದ ಕ್ಲಾಸಿನ ಮಹಾ ಜೋಕರ್ ಸದಾನಂದ...ಹೀಗೆ ಮನದಲ್ಲಿ ನೆನಪುಗಳ ಮೆರವಣಿಗೆ. ಕಿಟಕಿಯಾಚೆ ಇಣುಕಿದರೆ ತುಂತುರು ಮಳೆ ಹುಯ್ಯುತ್ತಲೇ ಇತ್ತು...
ಏನೋ ಒಂದು ತೊರೆದ ಹಾಗೇ
ಯಾವುದೋ ಒಂದು ಪಡೆದ ಹಾಗೇ
ಅಮ್ಮನ ಮಡಿಲ ಅಪ್ಪಿದ ಹಾಗೆ
ಕಣ್ಣಂಚಿನಲ್ಲಿ ಕಣ್ಣೀರ ನೆನಪು......

ಫೋಟೋ: ಎನ್.ಕೆ.ಎಸ್.

Thursday, April 16, 2009

ನಿನ್ನ ಬಿಟ್ಟು ನಿಸರ್ಗವನ್ನು ಪ್ರೀತಿಸುತ್ತಿದ್ದರೆ..?!!

ಗೆಳತೀ,
ಜಗತ್ತು ವಿಶಾಲ. ಬದುಕು ವಿಶಾಲ. ನಿನ್ನ ಹೃದಯನೂ ಅಷ್ಟೇ ವಿಶಾಲ ಅಂದುಕೊಂಡ ಮುಗ್ಧ ಮನಸ್ಸು ನನ್ನದು. ನಿನ್ನ ಪ್ರೀತಿಯ ತೀರದಲ್ಲಿ ಲಗೋರಿಯಾಟ ಆಡುತ್ತಿದ್ದಾಗ ಧೊಪ್ಪನೆ ದಡಕ್ಕಪ್ಪಳಿಸುತ್ತಿದ್ದ ಆ ಅಲೆಗಳೇಕೋ ಅಲೆಯೆನಿಸಲಿಲ್ಲ, ಪ್ರೀತಿಯ ಸೆಲೆಯೇನೋ ಅಂದುಕೊಂಡೆ. ನೀ ಗೀಚಿದ ನಾಲ್ಕಕ್ಷರಕ್ಕೆ ಜಗತ್ತನ್ನು ಮರೆಸುವ ಶಕ್ತಿ ಇದೆ, ನಿನ್ನ ಮಡಿಲು ನನ್ನ ಖುಷಿ-ದುಃಖಗಳಿಗೆ ಅಮ್ಮನಾಸರೆ ಆಗುತ್ತೆ ಅಂದುಕೊಂಡಿದ್ದೆ. ಗೆಳತೀ, ನೀ ಹಾಗಾಗಲಿಲ್ಲ ಬಿಡು..!

ನೀನಿತ್ತ ಭಾಷೆಗೆ ಸುಗ್ಗಿಯ ಸಂಭ್ರಮವಿತ್ತು. ನಾಳಿನ ಚಿಂತೆಗಳಿಗೆ ಅವಕಾಶವೇ ಇರಲಿಲ್ಲ ಗೆಳತೀ. ನಿನ್ನ ನಗು ಮತ್ತು ಕಣ್ಣುಗಳನ್ನು ನಾ ತುಂಬಾ ಪ್ರೀತಿಸುವೆ, ಖುಷಿಯಲ್ಲಿದ್ದಾಗ ಬೆಳಕು ನೀಡೆಂದು ಪದೇ ಪದೇ ದುಂಬಾಬು ಬೀಳುತ್ತಿದ್ದ ನಿನಗೆ ನಾ ನೀಡಿದ ಬೆಳಕು ಅದೇಕೆ ಅಮಾವಾಸ್ಯೆಯ ಕತ್ತಲೆಯೆನಿಸಿತು? ಅದೇಕೇ ಹುಣ್ಣಿಮೆಯಾಗಲಿಲ್ಲ? ಅದೇಕೇ ನಾ ನಿನ್ನ ಪಾಲಿಗೆ ಬೆಳದಿಂಗಳ ಚಂದಿರನೆನಿಸಲಿಲ್ಲ?! ಅದೇ ನೀನಿಲ್ಲದ ಬದುಕಿನಲ್ಲಿ ಕಪ್ಪನೆಯ ಆಕಾಶದಲ್ಲಿ ಮಿನುಗುವ ನಕ್ಷತ್ರಗಳನ್ನು ಎಣಿಸುತ್ತಾ ಇದೀಗ ಮತ್ತೆ ಮತ್ತೆ ಪ್ರಶ್ನೆಗಳನ್ನು ನನಗೇ ನಾ ಕೇಳಿಕೊಳ್ಳುತ್ತಿದ್ದೇನೆ. "ಮನುಷ್ಯ ಮನುಷ್ಯನಿಗೆ ಮಾಡುವ ಎಲ್ಲಾ ದ್ರೋಹಗಳೂ ಅತ್ಯಾಚಾರಗಳೇ, ನೀ ನನ್ನ ಬಿಟ್ಟು ಹೋಗಲ್ಲ ತಾನೇ? ಭಾಷೆ ಕೊಡು' ಎಂದು ಬೆಳ್ಳಂಬೆಳಿಗ್ಗೆ ಕಡಲ ತಡಿಯಲ್ಲಿ ಇಬ್ಬನಿ ಬೆಳಗನ್ನು ಸವಿಯುತ್ತಾ ನೀ ಕೇಳಿದ ಪ್ರಶ್ನೆ! ಗೆಳತೀ, ನೀ ಮಾಡಿದ ದ್ರೋಹವನ್ನು ನಾ ಏನೆಂದು ಕರೆಯಲಿ? ಅತ್ಯಾಚಾರವೇ? ದ್ರೋಹವೇ? ನಂಬಿಕೆಗೆ ಪೆಟ್ಟೇ?

ಗೆಳತೀ, ನೀ ನನಗೆ ರಾಜಬೀದಿಯಾಗು ಎನ್ನಲಿಲ್ಲ, ನನ್ನ ಪಾಲಿಗೆ ಪುಟ್ ಪಾತ್ ಆಗಿಬಿಡು ಎಂದವ ನಾನು. ನೇಸರನಾಗಿ ಬೆಳಗು ಎಂದಿಲ್ಲ, ಪುಟ್ಟ ನಕ್ಷತ್ರವಾಗಿ ನನ್ನ ಬದುಕಿನಲ್ಲಿ ಬೆಳಗುತ್ತಿರು ಎಂದಿದ್ದೆ. ನಾ ಹೆಣೆದ ಪುಟ್ಟ ಕನಸುಗಳು ಅದೇಕೋ ಬಲಿತು ಹಣ್ಣಾಗುವ ಮೊದಲೇ...?! ಇರುಳ ಕತ್ತಲಿನಲ್ಲಿ ಪುಟ್ಟ ಹಣತೆ ಹಚ್ಚಿಟ್ಟು..ಆತ್ಮದೊಂದಿಗೆ ಮಾತನಾಡಲಷ್ಟೇ ನಾ ಕಲಿತಿದ್ದೆ ಗೆಳತೀ, ದೇಹದೊಂದಿಗಲ್ಲ! ಮನದ ಕನ್ನಡಿಯಲ್ಲಿ ಮುರಿದ ಮನಸ್ಸಿನ ಜಾತ್ರೆಯಲ್ಲಿ ಭಾವವಿಹೀನ ಬಿಂಬಗಳನ್ನು ಕಾಣುತ್ತ ಕುಳಿತ ನನಗೆ ನೀನಿತ್ತ ಭಾಷೆ ಮತ್ತೆ ಮತ್ತೆ ನೆನಪಾಗುತ್ತಿದ್ದೆ. ನೆನಪಿಡು, ಮನದ ಕದ ನಾ ಬಡಿಯಲಿಲ್ಲ ಗೆಳತೀ...ನೀನೇ ಕೈಯಾರೆ ಬಡಿದಿದ್ದೀಯಾ...ನೋಡು ಈಗ ನಿನ್ನ ಕೈಯಾರೆ ಮುಚ್ಚಿಬಿಡುತ್ತಿದ್ದೀಯಾ! "ಎಲ್ಲಾ ಸಮಸ್ಯೆಗಳಿಗೂ ನಮ್ಮ ಸೋಲಿಸಲು ದೈರ್ಯವಿರುವುದಿಲ್ಲ" ಎಂದು ನನ್ನ ಬದುಕಿಗೆ ಭರವಸೆ ತುಂಬಿದ ನೀ ಮಬ್ಬಿಗೆ ಬೆಳಕಾಗಿ, ಎಳೆಬಿಸಿಲಿಗೆ ಬಣ್ಣದ ರಂಗೋಲಿಯಾಗಿ ನೀ ಬರುವ ಕನಸು ಕಂಡಿದ್ದೆ. ಯಾಕೋ ಸುಗ್ಗಿಯ ಸಂಭ್ರಮ ಕೊನೆ ತನಕ ಉಳಿಯಲಿಲ್ಲ. ಕನಿಷ್ಠ ಪಕ್ಷ ನಿನ್ಮ ಪ್ರೇಮ ಬಿಡು, ಜೀವನ ಪ್ರೀತಿಯನ್ನೂ ನೀ ಉಳಿಸಿಕೊಂಡಿಲ್ಲವಲ್ಲಾ ಎನ್ನುವ ಕೊರಗು ನನ್ನದು. ಕಣ್ಣಲ್ಲಿ ನೀರು ತುಂಬಿಕೊಂಡು, ಮುಖದಲ್ಲಿ ಕೃತಕ ನಗುವನ್ನು ಹೊರಸೂಸುವ ಸರದಿ ನನ್ನದು. ಥೂ! ಎಂಥ ದುರಂತ...! ಪ್ರೀತಿಗಾಗಿ ಹಪಹಪಿಕೆ ಸರಿಯಲ್ಲ...ಕಣ್ಣೀರ ಬೆಲೆ ಅರ್ಥವಾಗದವರ ಎದುರು ಕಣ್ಣೀರು ಹಾಕೋದು ತರವಲ್ಲ..ಆದರೆ ಎದೆಯಾಳದಿಂದ ಹೊರಹೊಮ್ಮುವ ದುಃಖದ ಬೇಗೆ, ಕಂಗಳಿಂದ ಹನಿ ಹನಿಯಾಗಿ ಸುರಿಯುತ್ತಿದೆ ನೋಡು...! ಗೆಳತೀ..ಒಂದೇ ಒಂದು ಬಾರಿ ನಿನ್ನ ಆತ್ಮದೊಡನೆ ಕೇಳಿಬಿಡು...ನಾನೂ ಮಾತಿಗಿಳಿದಿದ್ದು ನಿನ್ನ ಆತ್ಮದ ಜೊತೆ ಮಾತ್ರ!

ನನ್ನೊಂದಿಗೆ ಮಾತನಾಡುವ, ನನ್ನೊಂದಿಗೆ ಒಡನಾಡುವ, ನನ್ನ ಮೌನ-ಮಾತುಗಳನ್ನು ಹಂಚಿಕೊಳ್ಳುವ, ನನ್ನೆದೆಯಲ್ಲಿ ಪ್ರೀತಿ ಬೆಳಕು ವಿಶ್ವಾಸಗಳನ್ನು ತುಂಬುವ ಗೆಳತಿಯಾಗ್ತೀಯಾ ಅಂದುಕೊಂಡೆ. ಆದರೆ ಹಾಗಾಗಿಲ್ಲ ಬಿಡು, ಯಾಕೋ ನೆನಪಾಗುತ್ತಿದೆ, ಭೈರಪ್ಪ ಅವರ ದೂರಸರಿದರು ಕಾದಂಬರಿಯಲ್ಲಿ ಬರುವ "ಮನುಷ್ಯರನ್ನು ಪ್ರೀತಿಸುವುದಕ್ಕಿಂತ ನಿಸರ್ಗವನ್ನು ಪ್ರೀತಿಸುವುದರಲ್ಲಿ ನಿರಾಶೆಗೆ ಒಳಗಾಗುವ ಭೀತಿ ಕಡಿಮೆ" ಎಂಬ ಮಾತು. ಈವಾಗ ಇದು ನಿಜವೆನಿಸುತ್ತೆ. ಜುಳು ಜುಳು ಎಂದು ಹರಿಯೋ ನದಿ, ದಡಕ್ಕಪ್ಪಳಿಸುವ ಅಲೆ, ಪ್ರಶಾಂತ ಸಾಗರ, ಸಕಲ ಜೀವಕೋಟಿಗಳಿಗೂ ಆಸರೆ ನೀಡಿದ ಭೂಮಿ, ಸುರಿಯುವ ಮಳೆ, ಬೀಸುವ ಗಾಳಿ, ಮೌನವಾಗಿ ಬಿದ್ದಿರುವ ಕಲ್ಲು, ಹಸುರು ಮರಗಿಡಗಳು, ಚಿಲಿಪಿಲಿ ಕಲರವಗುಟ್ಟುವ ಹಕ್ಕಿಗಳು, ನೀಲ ಆಕಾಶ, ಚಲಿಸುವ ಮೋಡಗಳು, ಮನಕ್ಕೆ ಖುಷಿಕೊಡುವ ಹೂವುಗಳು...ಇವುಗಳನ್ನು ನಿನಗಿಂತ ಹೆಚ್ಚು ಪ್ರೀತಿಸ್ತಾ ಇದ್ರೆ ಬಹುಶಃ ನನ್ ಕಣ್ಣಲ್ಲಿ ಹನಿಬಿಂದುವಿಗೂ ಅವಕಾಶ ಇರಲಿಲ್ಲ ಎನಿಸುತ್ತೆ ಗೆಳತೀ!
ಇಂತೀ,
-ಗೆಳೆಯನಾಗಿದ್ದವ!


(ಈ ಪತ್ರ ಬರೆದಿದ್ದು ದಿನಾಂಕ 17.04.2009 ರಂದು. ಅಂದೇ ರಾತ್ರಿ ಲಗೋರಿಯಾಟದ ರಾಜೇಶ್ (http://manadapisumaathu.blogspot.com/) ಇದಕ್ಕೆ ಪ್ರತ್ಯುತ್ತರವಾಗಿ ತುಂಬಾ ಸುಂದರವಾದ ಪ್ರೇಮಪತ್ರ ಬರೆದಿದ್ದಾರೆ. ಅದೂ ಹುಡುಗಿಯಾಗಿ...! ಇದು ನಮ್ಮಿಬ್ಬರ ಬರಹದ ಸಮರ ಅಲ್ಲ...ಅವರಿಗೆ ನಾನು ಹುಡುಗನಾಗಿ ಬರೆದ ಪತ್ರ ಓದಿದ ಮೇಲೆ ಹುಡುಗಿಯಾಗಿ, ಹುಡುಗಿಯ ಮನದ ತುಮುಲಗಳನ್ನು ಕಲ್ಪಿಸಿಕೊಂಡು ಭಾವನೆಗಳನ್ನು ಅಕ್ಷರರೂಪಕ್ಕೆ ಇಳಿಸಿದ್ದಾರೆ. ನೀವೂ ಓದಿ. ರಾಜೇಶ್ ತುಂಬಾ ಚೆನ್ನಾಗಿ ಬರೆದಿದ್ದಕ್ಕೆ ಧನ್ಯವಾದಗಳು)

Saturday, April 11, 2009

ನನಗೂ ಅಕ್ಕಾ ಇರ್ತಾ ಇದ್ರೆ..?!

ಹೌದು, ನಂಗೂ ಅಕ್ಕಾ ಇರಬೇಕಿತ್ತು....ಈ ಆಸೆ ಇಂದಲ್ಲ...ನಾನು ಚಡ್ಡಿ ಹಾಕೊಂಡು ತಿರುಗಾಡುವಾಗಲೇ ಇರ್ತಾ ಇತ್ತು. ಆವಾಗಲ್ಲೇ ಅಮ್ಮನ ಜೊತೆ ಜಗಳ ಆಡ್ತಿದ್ದೆ. ಪಕ್ಕದ್ಮನೆ ಜಗ್ಗಣ್ಣನಿಗೆ ಯಶೋಧಕ್ಕ ಇದ್ದಾಳೆ..ನಂಗ್ಯಾಕೆ ಅಕ್ಕ ಇಲ್ಲ ಅನ್ತಾ ಇದ್ದೆ. ಆ ಪಕ್ಕದ್ಮನೆ ಯಶೋಧಕ್ಕ ಯಾವಾಗಲೂ ನಮ್ಮನೆಗೆ ಆಡಕೆ ಬರೋಳು...ಅವರು ಐದು ಜನ ಮಕ್ಕಳು. ಯಶೋಧಕ್ಕ ಎಲ್ಲರಿಗೂ ದೊಡ್ಡಕ್ಕ. ಹಾಗೇ ನಮಗೂ ದೊಡ್ಡ ಯಶೋಧಕ್ಕ. ಅವಳ ತಮ್ಮ-ತಂಗಿಯರನ್ನೆಲ್ಲಾ ಅವಳೇ ನೋಡಿಕೊಳ್ಳುತ್ತಿದ್ದಳು. ಅವರನ್ನು ಸ್ನಾನ ಮಾಡಿಸುವುದು, ಶಾಲೆಗೆ ಹೊರಡಿಸೋದು, ಅವಳೂ ಗಡಿಬಿಡಿಯಿಂದ ಶಾಲೆಗೆ ಹೊರಡೋದು....ಒಟ್ಟಿನಲ್ಲಿ ಅವಳದು ಮನೆಮಂದಿಯ ಉಸ್ತುವಾರಿ. ಆವಾಗೆಲ್ಲ ನಾನು ಅಮ್ಮಂಗೆ ಹೇಳ್ತಾ ಇದ್ದೆ..ಅಮ್ಮ ನಂಗೂ ಅಕ್ಕ ಇರ್ತಾ ಇದ್ರೆ...ನನ್ನ ಸ್ನಾನ ಮಾಡಿಸುವ, ನನಗೆ ಲಂಗ-ಧಾವಣಿ ತೊಡಿಸುವ ಕೂದಲು ಬಾಚಿ ಜಡೆ ಹೆಣೆದು ಮಲ್ಲಿಗೆ ಮುಡಿಸುವ, ಹಣೆಗೆ ಬೊಟ್ಟು ಇಡುವ, ದೇವರೆದುರು ದೀಪ ಹಚ್ಚಿ ದೇವರಿಗೆ ಅಡ್ಡ ಬೀಳು ಎಂದು ಆದೇಶಿಸುವ, ಜಾತ್ರೆಗೆ ಕರೆದುಕೊಂಡು ಹೋಗಿ ಮೀಠಾಯಿ ಕೊಡಿಸುವ, ಸುಮ್ ಸುಮ್ನೆ ಅತ್ತಾಗ ಮುದ್ದು ಮಾಡುವ, ಪಪ್ಪಿ ಕೊಡಿಸುವ ಅಕ್ಕಾ ನಂಗೂ ಬೇಕಿತ್ತು ಎಂದು.

ನಿಜಕ್ಕೂ ಅಕ್ಕಾ ಇದ್ರೆ...ಅಮ್ಮನ ಅರ್ಧ ಜವಾಬ್ದಾರಿ ಇಳಿದಂತೆ. ಅದ್ರಲ್ಲೂ ಹುಡುಗೀಯರಿಗೆ ಅಕ್ಕಾ ಇರ್ಬೇಕು. ಅಮ್ಮನತ್ರ , ಸ್ನೇಹಿತರತ್ರ ಹೇಳಿಕೊಳ್ಳಲಾಗದ ಎಷ್ಟೋ ಬದುಕು-ಭಾವಗಳಿಗೆ ಅಕ್ಕಾ ಕಿವಿಯಾಗಬಹುದು. ಮನೆಯಲ್ಲಿ ಹೇಳಲಾಗದ ಯಾವುದೇ ವಿಚಾರವನ್ನು ಅಕ್ಕನ ಕಿವಿಗೆ ಹಾಕಿಬಿಟ್ಟು..ಅಕ್ಕನ ಹಿಂದೆ ನಿಂತು ನಾವು ಕಿವಿಯಾಗಬಹುದು. ಅಷ್ಟೇ ಅಲ್ಲ, ಮತ್ತೆ ಅಕ್ಕ ತೊಡುತ್ತಿದ್ದ ರಾಶಿ ರಾಶಿ ಬಟ್ಟೆಗಳು ತಂಗಿಯ ಪಾಲಿಗದು ಲಾಭವೇ. ನಾನು ಸಣ್ಣವಳಿರುವಾಗ ನಮ್ಮ ಕ್ಲಾಸಿನ ಕೆಲವು ಹುಡುಗಿಯರು ದಿನಕ್ಕೊಂದು ಬಟ್ಟೆ ಹಾಕೋರು...ಹೊಸತಾ? ಅಂದ್ರೆ ಅದು ಅಕ್ಕಂದು..ಅಕ್ಕನಿಗೆ ಆ ಡ್ರೆಸ್ ಆಗಲ್ಲ..ಅದಕ್ಕೆ ನಂಗೆ ಕೊಟ್ಟಳು ಅನ್ತಾ ಇದ್ರು. ಅಕ್ಕನ ಒಡವೆಗಳನ್ನೆಲ್ಲಾ ಮೈ ತುಂಬಾ ಹಾಕೊಂಡು ಮಿಂಚೋ ಹುಡುಗಿಯರು ಇನ್ನೊಂದೆಡೆ. ಆವಾಗೆಲ್ಲಾ ಛೇ! ನಂಗೂ ಅಕ್ಕಾ ಇರ್ತಾ ಇದ್ರೆ...ಅಂಥ ತುಂಬಾ ಆಸೆಪಟ್ಟಿದ್ದೆ. ಆಮೇಲೆ ಅಕ್ಕನಿಗೆ ಮದುವೆ ಏನಾದ್ರೂ ಇದ್ರೆ..ಮದುವೆ ಮನೆಯಲ್ಲಿ ಮದುವೆ ಬಂದವರ ಕುತೂಹಲವೆಲ್ಲಾ ತಂಗಿ ಮೇಲೆ. ಅದ್ಯಾಕೋ ಗೊತ್ತಿಲ್ಲ...ನಾನು ಹುಟ್ಟಿದಂದಿನಿಂದ ಒಂದೆರಡು ಮದುವೆಗೆ ಹೋಗಿದ್ದೇನೆ. ಅಕ್ಕನಿಗೆ ಮದುವೆ...ಆದ್ರೆ ಮದುಮಗಳಿಗಿಂತ ತಂಗಿಯನ್ನೇ ಜಾಸ್ತಿ ಸಿಂಗಾರ ಮಾಡಿರ್ತಾರೆ. ಅವಳಿಗೂ ಅಕ್ಕನಂತೆ ಸಿಂಗರಿಸಿ ಸೀರೆ ಉಡಿಸ್ತಾರೆ. ಮತ್ತೆ ಎಲ್ಲಿ ಹೋದ್ರೂ ಹಣ್ಣು ಹಣ್ಣು ಅಜ್ಜ-ಅಜ್ಜಿಯರು ಕೂಡ ಮದುಮಗಳನ್ನು ಕೇಳೋ ಬದಲು ವಧುವಿನ ತಂಗಿ ಎಲ್ಲಿ ಅಂತ ಕೇಳ್ತಾರೆ. ನಂಗಿದು ಅಚ್ಚರಿಯಾಗುತ್ತಿತ್ತು. ಮುಂದಿನ ಟಿಕೆಟ್ ತಂಗಿಗೆ ಅಂತಾನೋ? ಯಾಕೋಪ್ಪಾ? ನನಗೂ ಅಕ್ಕಾ ಇರ್ತಾ ಇದ್ರೆ...ನಾನೂ ಅಕ್ಕನ ಮದುವೆಯಲ್ಲಿ 'ಮದುಮಗಳು' ಆಗುತ್ತಿದೆಯಲ್ಲಾ ..ಅಂತ ಅಂದುಕೊಳ್ಳುತ್ತಿದ್ದೆ.

ನಮ್ಮ ದೊಡ್ಡಮ್ಮನ ಮಗಳು ಒಬ್ಳು ಅಕ್ಕ ಇದ್ಳು. ಆದರೆ ಅವರ ಮನೆ-ನಮ್ಮನೆ ತುಂಬಾ ದೂರ. ಅವಳು ಮದುವೆ ಆಗೋಕೆ ಮೊದಲು ನಮ್ಮನೆಯಲ್ಲಿದ್ದುಕೊಂಡು ನಂಗೆ ಊಟ ಮಾಡಿಸೋದು, ಲಾಲಿ ಹಾಡುತ್ತಿದ್ದಳಂತೆ. ಆದರೆ ಅದೊಂದೂ ನಂಗೆ ನೆನಪಾಗುತ್ತಿಲ್ಲ. ಅವಳ ಮದುವೆ ಆದ ಮೇಲೆ ಅಂತೂ ಆ ಅಕ್ಕನಿಗೆ ಸಂಸಾರ, ಗಂಡ-ಮಕ್ಕಳು. ಮನೆ ಕಡೆ ಬರಲೂ ಪುರುಸೋತ್ತಿಲ್ಲ. ಇರಲಿ ಬಿಡಿ, ಬದುಕಂದ್ರೆ ಹಿಂಗೆ..ನನ್ನ ತುಂಬಾ ಪ್ರೀತಿ ಮಾಡೋ ಅಣ್ಣಂದಿರಿದ್ದಾರೆ, ತಂಗಿ, ತಮ್ಮಂದಿರೂ ಸಿಕ್ಕಿದ್ದಾರೆ. ಒಡಹುಟ್ಟಿದವರಲ್ಲದಿದ್ದರೂ ಒಡನಾಡಿಗಳಾಗಿದ್ದಾರೆ. ಆದರೆ ನನ್ನ ತುಂಬಾ ಪ್ರೀತಿಸುವ, ನಿತ್ಯ ಒಡನಾಡುವ, ನನ್ನ ಭಾವ-ಮಾತುಗಳಿಗೆ ಕಿವಿಯಾಗುವ, ನಿತ್ಯ ನನ್ನದೊಂದಿಗೆ ಹುಸಿಮುನಿಸು, ಪುಟ್ಟದಾಗಿ ಜಗಳ, ಕೋಪ ಆಡುವ, ನನಗೆ ಡ್ರೆಸ್ ಕೊಡಿಸುವ, ಬ್ಯಾಗ್ ಕೊಡಿಸುವ, ಮೆಹಂದಿಯಿಂದ ಅಂಗೈ ಅಲಂಕರಿಸುವ ಅಕ್ಕ ಸಿಕ್ಕೇ ಇಲ್ಲಾಂತ ಮನಸ್ಸು ನೋವಾಗುತ್ತೆ. ನಂಗೂ ಅಕ್ಕಾ ಬೇಕು ಅನಿಸುತ್ತೆ....ಛೇ! ನಾನೇ ಅಕ್ಕ ಆಗಿಬಿಟ್ಟಿದ್ದೀನಿ ಅಲ್ಲಾ...!!




Wednesday, April 8, 2009

ಮೀಸೆ ಜಿರಲೆ ಸಮರದಲ್ಲಿ ನಂದೇ ಮೇಲುಗೈ?!

ಏನು ಬರೆಯಬಹುದು? ವಸ್ತುನೇ ಇಲ್ಲವಲ್ಲ...ಎಂಬ ಚಿಂತೆ ಒಂದು ಬದಿಯಿಂದ ನನ್ನ ತಲೆಯನ್ನು ಕೊರೆಯುತ್ತಿದ್ದರೆ ಥಟ್ಟನೆ ನೆನಪಾಗಿದ್ದು ನನ್ನ ಮನೆಯಲ್ಲಿ ನನಗೂ-ಜಿರಲೆಗೂ ನಡೆದ ಭೀಕರ ಸಮರ. ಕಳೆದ ಅಕ್ಟೋಬರ್ 16ರಂದು ಕೋರಮಂಗಲದ ಸುಂದರ ಮನೆಗೆ ಕಾಲಿಟ್ಟಾಗ ಯಾಕೋ ನನಗೆ ಜಿರಲೆಗಳು ತೀರ ಕಾಟ ಕೊಟ್ಟವು. ಹಲ್ಲಿ, ಜಿರಳೆ,ಇರುವೆ ಗಳಿಲ್ಲದ ಮನೆ ಅದು ಮನೆಯೇ ಅಲ್ಲವ೦ತೆ. ಇವೆಲ್ಲ ನಮ್ಮ ಸಮೀಪ ಸ೦ಬ೦ಧಿಗಳೇನೋ ಅನ್ನುವ೦ತೆ ನಮ್ಮೊದಾನೆ ಸ೦ಘ ಜೀವನ ನಡೆಸುತ್ತ, ನಮ್ಮ ಮನೆಯ ಅ೦ದ, ನೈರ್ಮಲ್ಯವನ್ನು ಹಾಳುಗೆಡವುತ್ತ ನಮ್ಮ ವೈರಿಗಳ೦ತೆ ವರ್ತಿಸ್ತಾವೆ. ಅದ್ಕೇ ಇರ್ಬೇಕು ಕೆಲವರು ಒಲ್ಲದ, ಇಷ್ಟವಿಲ್ಲದ ನೆ೦ಟರನ್ನು "ಹಕ್ಲೆಗಳು"(ತುಳು ಭಾಷೆಯಲ್ಲಿ ಜಿರಲೆಗೆ ಹಕ್ಲೆ ಅಂತಾರೆ) ಅ೦ತ ಜಿರಲೆಗೆ ಹೋಲಿಸಿ ಬೈಯ್ಯುವುದು.


ತಿಂಡಿ ಮಾಡಿಟ್ಟರೆ ಅದರ ಮೇಲೆ ಸವಾರಿ ಮಾಡಿ ಅದನ್ನು ಮತ್ತೆ ತಿನ್ನದಂತೆ ಮಾಡೋದು, ತೊಳೆದಿಟ್ಟ ಪಾತ್ರೆ, ಅಕ್ಕಿ, ತಿಂಡಿ-ತಿನಿಸು ಏನೇ ಮುಚ್ಚಿಡದೆ ಇದ್ದರೆ ಅದರ ಮೇಲೆ ಓಡಾಡಿ ಅದನ್ನು ಮೂಸಿ ನಾವು ಮತ್ತೆ ಅತ್ತ ಹೋಗದಷ್ಟು ಕೆಟ್ಟ ವಾಸನೆ ಬರಿಸುತ್ತಿದ್ದವು. ನನಗಂತೂ ದಿನಾ ಜಿರಲೆ ಓಡಿಸೋದು, ಪಾತ್ರೆ ತೊಳೆಯುವುದು, ಅಂತೂ-ಇಂತೂ ಸ್ವಚ್ಛ ಮಾಡೋದ್ರಲ್ಲೇ ಅರ್ಧ ಸಮಯ ವ್ಯರ್ಥ ಆಗುತ್ತಿತ್ತು. ಎಂಥ ಮಾಡೋದು ಮಾರಾಯ್ರೆ? ಎಲ್ಲಿ ನೋಡಿದ್ರೂ ಜಿರಲೆ ಕಾಟ. ರಾತ್ರಿ ಎದ್ದು ದೀಪ ಹಚ್ಚಿದ್ರೆ ಥರ ಥರ ಓಡಿ ಮೂಲೆ ಮೂಲೆ ಸೇರೋ ಜಿರಲೆಗಳನ್ನು ಕಂಡಾಗ ನಂಗೆ ಸಿಟ್ಟು ಬಂದು ನಿದ್ದೆ ಮಾಡದಿದ್ರೂ ಪರವಾಗಿಲ್ಲ ಒಂದೆರಡು ಕೊಂದು ಮಲಗುತ್ತಿದ್ದೆ. ಅದಕ್ಕೆ ನಮ್ಮ ಓನರ್ ಆಂಟಿ ಒಂದು ಉಪಾಯ ಹೇಳಿದ್ರು...ನೀನು ಜಿರಲೆ ಕಡ್ಡಿ ಹತ್ತಿಸಿಬಿಟ್ಟು..ಒಂದು ಇಡೀ ದಿನಾ ಮನೆ ಬಾಗಿಲು ಹಾಕಿ ನೀ ಹೊರಗಡೆ ಹೋಗಿರು...ಮತ್ತೆ ನೀ ವಾಪಾಸು ಬರುವಾಗ ನಿನ್ನ ರೂಮಲ್ಲಿ ರಾಶಿ ರಾಶಿ ಹೆಣಗಳು ಬಿದ್ದಿರುತ್ತವೆ ಅಂತ. ಒಳ್ಳೆ ಉಪಾಯ ಅನಿಸ್ತು..ಮತ್ತೆ ಶವ ಸಂಸ್ಕಾರ ಎಲ್ಲವನ್ನೂ ನಾನೇ ಮಾಡಬೇಕಲ್ಲಾ...ಅದಕ್ಕೆ ಮನೆಯಿಂದ ಹೊರಗೆ ಹೋಗೋದು ಬೇಡ..ನಾ ಮನೆಯಲ್ಲಿದ್ದುಕೊಂಡೇ ಕಡ್ಡಿ ಹಚ್ಚಿಟ್ಟು. ..ಶವ ಬಿದ್ದ ಹಾಗೇ ಪ್ಲಾಸ್ಟಿಕ್ ಕವರ್ ಗೆ ತುಂಬಿಸಿಬಿಡೋದು ಅಂದುಕೊಂಡು ಹಾಗೇ ಮಾಡಿದೆ. ಹುಡುಗೀಯರು ಮೀಸೆ ಇರೋ ಗಂಡಸರಿಗಿಂತಲೂ ಮೀಸೆ ಇರೋ ಜಿರಳೆಗಳಿಗೆ ಅದಕ್ಕೆ ಹೆದರುತ್ತಾರೆ೦ಬ ನ೦ಬಿಕೆ ಇದೆ. ನಂಗಂತೂ ಯಾರ ಮೀಸೆ ಹೆದರಿಕೆನೂ ಇಲ್ಲ ಬಿಡಿ. ಮೊನ್ನೆ ನಮ್ಮ ಸಾಗರದಾಚೆ ಇರೋ ಅಣ್ಣನೊಬ್ಬ ಹೇಳ್ತಾ ಇದ್ದ, ಆ ಜಿರಲೆಗಳ ಮೀಸೆ ಹಿಡಕೊಂಡು ನನ್ ಹೆಂಡತಿಗೆ ಹೆದರಿಸ್ತಾ ಇದ್ದೆ ಅಂತ.

ಮೊನ್ನೆ ಭಾನುವಾರ. ಬೆಳಿಗ್ಗೆ ಆರು ಗಂಟೆಗೆ ಎದ್ದು ಕಡ್ಡಿ ಹಚ್ಚಿಡುವ ಕೆಲಸ ಮಾಡಿದೆ. ಹಾಸಿಗೆಯಲ್ಲಿದ್ದ ನನ್ನ ತಮ್ಮ ಜಿರಲೆ ಕಡ್ಡಿಯ ಕೆಟ್ಟ ವಾಸನೆಗೆ ಜಿರಲೆ ಥರನೇ ವಿಲವಿಲ ಒದ್ದಾಡತೊಡಗಿದ್ದ. ಒಂದೆಡೆ ಬೈಗುಳಗಳ ಸುರಿಮಳೆ. ನಾನು ಕೈ , ಮೂಗು-ಬಾಯಿಗೆ ಗ್ಲೌಸ್ ಹಾಕೊಂಡು ಕೈಗೆ ಇನ್ನೊಂದು ಪ್ಲಾಸ್ಟಿಕ್ ಕಟ್ಟಿಕೊಂಡು..ಜಿರಲೆ ಕಡ್ಡಿ ವಾಸನೆ ಸಹಿಸಲಾಗದೆ ತಲೆ ತಿರುಗಿ ಜಿರಲೆಗಳು ಪಟಪಟನೆ ನೆಲದ ಮೇಲೆ ಬೀಳುತ್ತಿದ್ದವು. ಮತ್ತೊಂದೆಡೆ ಕೆಟ್ಟ ವಾಸನೆಗೆ ಮೂಲೆಯಿಂದ ಮೂಲೆಗೆ ಓಡಾಡುವ ಜಿರಲೆಗಳು, ಇನ್ನೊಂದೆಡೆ ಸಿಕ್ಕೆಲೆಲ್ಲಾ ತಲೆ ಮೇಲೆ , ಬೆನ್ನ ಮೇಲೆ ಬೀಳೋ ಜಿರಲೆಗಳು, ಜಿರಲೆ ಮರಿಗಳು..ಮನೆಯೆಲ್ಲಾ ಕೆಟ್ಟ ವಾಸನೆ. ಕೆಲವು ಸಾಯುತ್ತಿದ್ದರೆ, ಇನ್ನು ಕೆಲವು ಓಡುವಾಗ ನಾನು ಕೈಯಿಂದ ಹಿಡಿದು ಅದರ ತಲೆಯನ್ನೆಲ್ಲಾ ಜಜ್ಜಿ ಕೊಂದು ಬಿಡುತ್ತಿದ್ದೆ. ಕೊಂದು ಕೊಂದು, ಜಿರಲೆ ಹಿಂದೆ ಓಡಾಡಿ ನನ್ನ ಕೈ- ಕಾಲುಗಳೂ ಸುಸ್ತು ಹೊಡೆದಿದ್ದವು. ಆಶ್ಚರ್ಯವೆಂದರೆ ಅಂದು ಆರು ಗಂಟೆಗೆ ಎದ್ದರೂ ನಾನು ಹಲ್ಲಜ್ಜಿರಲಿಲ್ಲ., ಮುಖ ತೊಳೆದಿರಲಿಲ್ಲ...ತಮ್ಮ ಬೈದುಕೊಳ್ಳುತ್ತಲೇ ಇದ್ದ..ನೀನು ಊರಲ್ಲಿ ಹೊಲದಲ್ಲಿ ಕೆಲಸ ಮಾಡಕೆ ಲಾಯಕ್ಕು ಅನ್ತಾ ಇದ್ದ. ಯಾರು ಏನಂದ್ರೂ ನಂಗಂತೂ ಜಿರಲೆ ಕೊಲ್ಲಲೇ ಬೇಕಿತ್ತು..ಆ ಸಮರದಲ್ಲಿ ನಂಗೆ ಜಯ ಸಿಗಲೇಬೇಕಿತ್ತು.

ಗಂಟೆ ಹನ್ನೊಂದು...ಹೊಟ್ಟೆ ಚುರುಗುಟ್ಟುತ್ತಿತ್ತು. ನನ್ನ ಪ್ರೀತಿಯ ಅಣ್ಣ ನಿರಂಜನಣ್ಣನ ಫೋನ್..
"ನಾ ನಿನ್ನ ಮನೆ ಬಳಿ ಇದ್ದೀನಿ....ಮನೆಯಲ್ಲೇ ಇದ್ದೀಯಾ? ...." ಎಂಥ ಕಿರಿಕಿರಿಯಪ್ಪಾ ಅಂದುಕೊಂಡೆ ಮನಸ್ಸಲ್ಲಿ. ಎಂಥ ಮಾಡೋದು? ನೀವು ಮನೆಗೆ ಬರಬೇಡ ಅನ್ನಕ್ಕೆ ಸರಿಯಾಗಲ್ಲ....ಅದೂ ಮೊದಲ ಬಾರಿಗೆ ಮನೆ ಬಳಿ ಬಂದು ತಂಗಿ ಜೊತೆ ಮಾತನಾಡಬೇಕು ಎಂದು ಖುಷಿಯಿಂದ ಬಂದಿದ್ದಾರೆ. ಯಾರ ಮನಸ್ಸಾದ್ರೂ ಬರೋದು ಬೇಡ ಅನ್ನೋದೇ? ಆಯ್ತು...ಬಾ ಅಣ್ಣ ಅಂದು...ಅಲ್ಲೇ ಪಕ್ಕದಲ್ಲಿನ ಹೊಟೇಲಿನಿಂದ ತಿಂಡಿ ತಂದೆ. ಅಣ್ಣನನ್ನು ಮನೆಯೊಳಗೆ ಕರೆದುಕೊಂಡು ಬರುತ್ತಿದ್ದರೆ...ಕೆ.ಆರ್. ಮಾರ್ಕೆಟ್ ಥರ ಗಜಿಬಿಜಿ ಅನ್ನೋ ಮನೆ ನೋಡಿ ಅಣ್ಣ ಏನಂತಾರೋ ಅನ್ನೋ ಪುಟ್ಟ ಭಯ ಮನಸ್ಸಿನಲ್ಲಿ. ಇರಲಿ ಬಿಡಿ..ಅಣ್ಣ ಏನಾದ್ರೂ ಹೇಳಿದ್ರೆ...ಅವರಿಗೆ ಮಂಗಳಾರತಿ ಮಾಡಿಬಿಡೋದು ಅಂದುಕೊಂಡು ಕರೆದುಕೊಂಡು ಬಂದೆ...,ಜಿರಲೆ ವಾಸನೆ,, ಜಿರಲೆ ಕಡ್ಡಿ ವಾನೆ, ಇನ್ನೊಂದು ಮತ್ತೂ ಪ್ರಾಣ ಭಯದಿಂದ ಓಡಾಡುತ್ತಿದ್ದ ಜಿರಲೆಗಳು! ಬದುಕಿನ ಉಳಿವಿಗಾಗಿ ಹಪಿಹಪಿಸುತ್ತಿದ್ದ ಜಿರಲೆಗಳ ಮಧ್ಯೆ...ನನ್ನಣ್ಣನಿಗೆ ಸೆಟ್ ದೋಸೆ, ಟೀ ನೀಡಿ ಖುಷಿಪಟ್ಟಿದ್ದೆ. ಜೊತೆಗೆ ಅಣ್ಣನಿಂದ ನಾ ಮಾಡಿದ ಟೀಗೂ ಶಹಭಾಷ್ ಗಿರಿ ಸಿಕ್ತು. ಅದು ಮತ್ತೊಂದು ಖುಷಿ. ಯಾವಾಗಲೂ ನಂಗೆ ಅಣ್ಣದಿರಿಂದ ಶಹಭಾಷ್ ಗಿರಿ ಗಿಟ್ಟಿಸಿಕೊಳ್ಳೋದಂದ್ರೆ ಭಾರೀ ಇಷ್ಟ. ಒಂದು ಗಂಟೆ ನನ್ನ ಜೊತೆ ಖುಷಿ ಖುಷಿಯಾಗಿ ಕಳೆದ ಅಣ್ಣ ಮತ್ತೆ ನನ್ನ ಬಿಟ್ಟು ಅವರ ದಾರಿ ಹಿಡಿದರು. ಜಿರಳೆ ಕೊಲ್ಲುವ ಉದ್ದೇಶದಿ೦ದ ಟಿ.ವಿ.ಜಾಹೀರಾತಿನಲ್ಲಿ ತೋರಿಸುವ೦ತೆ ನಾನು ಕೈಗೆ ಗ್ಲೌಸ್ ಹಾಕಂಡು ಸಮರ ಸಿ೦ಹಿಣಿಯ೦ತೆ ಗರ್ಜಿಸುತ್ತ, ಜೀವ ಉಳಿಸಲು ತತ್ತರಿಸುತ್ತಿದ್ದ ಜಿರಲೆಗಳ ಬೆನ್ನಟ್ಟಿ ಹೊಡೆಯುತ್ತಿದ್ದ ದೃಶ್ಯವನ್ನು ಕ೦ಡು ಮೊದಲ ಬಾರಿ ಮನೆಗೆ ಬ೦ದಿದ್ದ ಅಣ್ಣ ಯಾಕೋ ಹೆಚ್ಚು ಮಾತನಾಡಲೇ ಇಲ್ಲ. ನಾನು ಮತ್ತೆ ನನ್ನ ಸಮರ ಮುಂದುವರೆಸಿದ್ದೆ..ಸಮರ ಕಾರ್ಯಾಚರಣೆ ಮುಗಿಸಿ,ಕದನವಿರಾಮ ಘೋಷಿಸಿ, ಮನೆ ಶುಚಿಗೊಳಿಸಿ, ಸ್ನಾನ ಮಾಡಿ ಹೊರಬ೦ದು ಇನ್ನೇನು ಜಿರಳೆ ಗಳ ಸಮಸ್ಯೆ ಬಗೆಹರಿಯಿತು ಎ೦ಬ ಖುಷಿಯಲ್ಲಿ, ಜೊತೆಗೆ ಅಣ್ಣನ ಜೊತೆ ತಿಂಡಿ ತಿಂದ ಖುಷಿಯಲ್ಲಿ ಮನಸ್ಸು ತೂಗು ಉಯ್ಯಾಲೆಯಲ್ಲಿ ನಲಿದಾಡುತ್ತಿದ್ದಾಗ ಸೂರ್ಯ ನೆತ್ತಿಯಿಂದ ಕೆಳಗಿಳಿಯುತ್ತಿದ್ದ. ಒ೦ದು ಪುಸ್ತಕವನ್ನು ಓದಿಗೆ೦ದು ಅಲಮಾರದಿ೦ದ ತೆಗೆಯಹೊರಟಿದ್ದೆ. ಪ್ರತ್ಯಕ್ಷ ವಾಯಿತಲ್ಲ ಇನ್ನೊ೦ದು,ಮತ್ತೊ೦ದು ಜಿರಳೆ. ಇದೊ೦ದು ಮುಗಿಯದ ಸಮಸ್ಯೆ... ನಮ್ಮ ದೇಶವನ್ನು ಕಾಡುತ್ತಿರುವ ಭಯೋತ್ಪಾದಕರಂತೆ, ಸರ್ಕಾರಿ ಕಚೇರಿ, ವಿಧಾನಸೌಧ-ಶಾಸಕರ ಭವನದಲ್ಲಿರುವ 'ಭ್ರಷ್ಟಾಸೂರ'ರಂತೆ!

ಈಗ ಮತ್ತೊಂದು ಸಮರಕ್ಕೆ ಸಿದ್ಧವಾಗುತ್ತಿದ್ದೇನೆ....ಮುಂದಿನ ಸಮರದಲ್ಲಿ ಗ್ಯಾರಂಟಿ ಪೂರ್ತಿ ಗೆಲುವು ನಂದೇ ಎನ್ನೋ ವಿಶ್ವಾಸ ನನ್ನದು.

Sunday, April 5, 2009

ಸಂಗೀತ ಅಮ್ಮನಂತೆ..?!

ಸಂಗೀತ ಅಮ್ಮನಂತೆ..
ಕೈ ಕೊಟ್ಟು ಹೋದ ಗೆಳೆಯ-ಗೆಳತಿಯ ನೆನಪು ಕಾಡಿದಾಗ, ಆಫೀಸ್ ನಲ್ಲಿ ಬಾಸ್ ಕಿರಿಕಿರಿ ಮಾಡಿದಾಗ, ಸ್ಕೂಲ್ ನಲ್ಲಿ ಟೀಚರ್ ಬೈದಾಗ, ನಿಮ್ಮ ಆತ್ಮೀಯ ಸ್ನೇಹಿತರು ಮಾತು ಬಿಟ್ಟಾಗ, ಅಮ್ಮನತ್ತ ಹುಸಿಮುನಿಸು ತೋರಿ ಕೋಪದಿಂದ ಫೋನ್ ಕುಕ್ಕಿ ಮತ್ತೆ ಮನಸ್ಸು ಭಾರವಾದಗ, ಜೊತೆಗಿದ್ದ ಆಪ್ತರು ಜೀವನಪರ್ಯಂತ ದೂರವಾಗೋ ಸನ್ನಿವೇಶ ಎದುರಾದರೆ, ಜೀವನದ ಜಂಜಾಟಗಳಿಂದ ಬದುಕು ಭಾರವೆನಿಸಿದಾಗ, ಸಂಬಂಧಗಳ ಕೊಂಡಿ ಕಳಚಿ ಹೃದಯ ಚಿರ್ರೆಂದು ನೋವಿಂದ ಚೀರಿದಾಗ, ಯಾರಲ್ಲೂ ಹೇಳಿಕೊಳ್ಳಲಾಗದ ಅವ್ಯಕ್ತ ದುಃಖಭಾವ ನಿಮ್ಮ ನಿರಂತರ ಕಾಡಿದಾಗ....ನನಗೆ ಸಂಗೀತ ಅಮ್ಮನಂತೆ ಅನಿಸುತ್ತೆ..ಒಂದಲ್ಲ..ಎರಡಲ್ಲ..ಎಷ್ಟೋ ಬಾರಿ ನನಗೆ ಹೀಗನಿಸಿದ್ದುಂಟು. ಅಮ್ಮನಪ್ಪುಗೆಯ ಹಿತ, ಖುಷಿ, ನೆಮ್ಮದಿ ನೀಡಿದುಂಟು.

ಹೌದು..ಮತ್ತೆ ಹೇಳ್ತೀನಿ ಸಂಗೀತ ಅಮ್ಮನಂತೆ. ಪ್ರೀತಿಯ ಮಡಿಲಾಗುತ್ತೆ. ಮಮತೆಯ ಸಂತೈಸುವ ಒಡಲಾಗುತ್ತೆ. ಅಕ್ಕರೆಯಿಂದ ಲಾಲಿ ಹಾಡುತ್ತೆ. ನಿದ್ದೆ ಬಾರದ ಕಣ್ಣುಗಳಿಗೆ ಜೋಜೋ ಹಾಡಿ ತಟ್ಟಿ ನಿದ್ದೆ ಬರಿಸುತ್ತೆ. ಹಸಿವಿನಿಂದ ಅಳೋ ಮಗುವಂತ ಮನಸ್ಸಿಗೆ ಹಾಲುಣಿಸುತ್ತೆ. ಪ್ರೀತಿಯ ಬಂಧನದಲ್ಲಿ ಬಿಗಿದಪ್ಪು ನಮ್ಮ ಹೃದಯ ಹಗುರಾಗಿಸುತ್ತೆ. ಸಾಹಿತ್ಯ, ಭಾಷೆ, ಲಯ, ಮಾಧುರ್ಯ ಎಲ್ಲವನ್ನೂ ಮೀರಿದ ಅವ್ಯಕ್ತವಾದ ಖುಷಿಯ ಗಳಿಗೆಯೊಂದನ್ನು ಸುಮಧುರ ಹಾಡೊಂದು ನಮಗೆ ನೀಡುತ್ತೆ.

ನಂಗೆ ಹಾಡು ಬರೆಯಕೆ ಬರಲ್ಲ. ಲಯ, ತಾಳ ಇದಾವುದೂ ತಿಳಿದಿಲ್ಲ. ಆದರೆ ಒಂದು ಸುಂದರ ಕವಿತೆಯನ್ನು ಮನಸ್ಸು ಸಂತೋಷದಿಂದ ಅನುಭವಿಸುತ್ತೆ. ಸುಮಧುರ ಇಂಪು ಗೀತೆಯ ಅನನ್ಯ ಅನುಭೂತಿಗೆ ಹೃದಯ ಮನಸ್ಸು ಕಿವಿಯಾಗುತ್ತೆ. ಒಂದಷ್ಟು ಹೊತ್ತು..ಒಂದಷ್ಟು ಕ್ಷಣ ನಾನಲ್ಲಿ ನನಗೆ ಗೊತ್ತಿಲ್ಲದೆಯೇ ಕಳೆದುಹೋಗುತ್ತೇನೆ. ಕುವೆಂಪು, ಬೇಂದ್ರ ಅಜ್ಜ, ಕೆ ಎಸ್ ಎನ್, ಅಡಿಗರ ಪ್ರೀತಿ, ಜೀವನದ ಕುರಿತಾದ ಸುಂದರ ಕವಿತೆಗಳು ನಮ್ಮ ಬದುಕಿನಲ್ಲೂ ಮಾತಿಗಿಳಿದಂತೆ ಭಾಸವಾಗುತ್ತದೆ. ಮನಸ್ಸು ಮಲ್ಲ್ಲಿಯಾಗುತ್ತದೆ. ಹೃದಯ ಆರ್ದೃ ಗೊಳ್ಳುತ್ತೆ. ಬದುಕೆಲ್ಲಾ ನಾದಮಯ ಅನಿಸಿಬಿಡುತ್ತೆ.

ಸುನಾಮಿಯಂತೆ ಥಟ್ಟನೆ ಬಂದಪ್ಪಳಿಸುವ ಅಮ್ಮನ ನೆನಪು, ಅಮ್ಮನ ಲಾಲಿ ನೆನಪು, ಎದೆಯಾಳದಲ್ಲಿ ಗುಬ್ಬಚ್ಚಿಯಂತೆ ಅವಿತಿದ್ದ ನೆನಪು, ಅಮ್ಮನೂರಿನ ಹಸಿರೆಲೆಗಳ ಹಳ್ಳಿ ನೆನಪು, ಮತ್ತೆ ಮತ್ತೆ ಮನದಲ್ಲಿ ಮೆರವಣಿಗೆ ಮಾಡುವ ಸುಂದರ ಕುಮಾರಧಾರ ನೇತ್ರಾವತಿ ನೆನಪು, ಅಣ್ಣ-ತಮ್ಮನ ನೆನಪು, ಬದುಕುಳಿಯದ ಅಜ್ಜ-ಅಜ್ಜಿಯ ನೆನಪು, ಬಿಟ್ಟು ಹೋದ ಅಪ್ಪನ ನೆನಪು, ನಮ್ಮ ಪುಟ್ಟ ಕರು ಅಪ್ಪಿಯ ನೆನಪು, ಕಳೆದುಹೋದ ಗೆಳತಿಯ ನೆನಪು...ಕಾಡಿದಾಗ ನಾ ಸುಮಧುರ ಹಾಡುಗಳಿಗೆ ಕಿವಿಯಾಗುತ್ತೇನೆ.

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೇ
ಮಲಗು ಚೆಲ್ವಿನ ತೆರೆಯೆ ಮಲಗು ಒಲ್ಮೆಯ ಸಿರಿಯೆ
ಮಲಗು ತೊಟ್ಟಿಲ ಸಿರಿಯೆ ದೇವರಂತೆ
ಮಲಗು ಮುದ್ದಿನ ಗಿಣಿಯೆ ಮಲಗು ಮುತ್ತಿನ ಮಣಿಯೆ
ಮಲಗು ಚಂದಿರನೂರ ಕೂಗುವೆಯಂತೆ ....

ಹಾಡು ಕೇಳಿದರೆ ಸಾಕು ಅಮ್ಮ ಬಂದು ತೊಡೆ ಮೇಲೆ ಮಲಗಿಸಿ ತಟ್ಟಿ ಲಾಲಿ ಹಾಡಿದಂತಾಗುತ್ತೆ. ನನ್ನ ಕೋಣೆಯ ಕಿಟಕಿ ಸಂದಿನಿಂದ ಕಾಣುವ ಚಂದಿರಿನ ಮುಖ ನೋಡುತ್ತಲೇ ನಾ ಅರಿವಿಲ್ಲದೆ ನಿದ್ದೆ ಬಾರದ ಕಣ್ಣುಗಳು ನಿದ್ದೆಯ ಮಂಪರಿಗೆ ಜಾರುತ್ತವೆ.
ಏನೂ ಬೇಡ..ಮನಸ್ಸು ಸರಿ ಇಲ್ಲ..ನಂಗೇನೂ ಮಾಡಕ್ಕಾಗಲ್ಲ ಎಂದು ಮನಸ್ಸು ರಾಗ ಎಳೆಯುವಾಗಲೇ ಕನ್ನಡದ ಒಳ್ಳೆಯ ಕವಿತೆಗಳ ಇಂಪನ್ನು ಅನುಭವಿಸಿ. ನಿಮ್ಮ ಮನಸ್ಸಿಗೆ ಖುಷಿಯಾಗದಿದ್ದರೆ ಮತ್ತೆ ಹೇಳಿ!

ಕೊನೆಗೆ,
ನಿಮ್ಮ ಖುಷಿಗೆ ಗೋಪಾಲಕೃಷ್ಣ ಅಡಿಗರ 'ಮಹಾಪೂರ' ಕವನದ ಸಾಲುಗಳು...
ಅಮೃತವಾಹಿನಿಯೊಂದು ಹರಿಯುತಿದೆ ಮಾನವನ
ಎದೆಯಿಂದಲೆದೆಗೆ ಸತತ.........
ಇಂದೆಲ್ಲ ನಾಳೆ ಹೊಸ ಭಾನು ಬಗೆ ತೆರೆದೀತು...
ಕರಗೀತು ಮುಗಿಲ ಬಳಗಾ....
ಇಂದೆಲ್ಲ ನಾಳೆ ಹೊಸ ಭಾನು ಬಗೆ ತೆರೆದೀತು...
ಕರಗೀತು ಮುಗಿಲ ಬಳಗಾ....
ಬಂದೀತು ಸೊಗೆಯ ಮಳೆ..
ತುಂಬೀತು ಎದೆಯ ಹೊಳೆ...
ಬಂದೀತು ಸೊಗೆಯ ಮಳೆ..
ತುಂಬೀತು ಎದೆಯ ಹೊಳೆ...
ತೊಳೆದೀತು ಒಳಗು ಹೊರಗಾ...


ಹೌದು..ಸಂಗೀತ ಅಮ್ಮನಂತೆ...?!!

Wednesday, April 1, 2009

ಸುರೇಶ ಬೆಂಗಳೂರು ಸಿಟಿ ನೋಡಿದ್ದು

ಆತನ ಹೆಸರು ಸುರೇಶ. ಕಾಸರಗೋಡಿನ ಪುಟ್ಟದೊಂದು ಹಳ್ಳಿ ಅವನ ಮನೆ. ಹೊಲ-ಗದ್ದೆ ಕೆಲಸಗಳನ್ನೇ ನೋಡಿಕೊಳ್ಳುತ್ತಿದ್ದ ಈತ ಮುಗ್ಧ ಯುವಕ. ಪೋಲಿ-ಪುಂಡಾಟಿಕೆಯಿಲ್ಲ, ಹುಡುಗ್ರ ಜೊತೆ ಸೇರಿ ಓಡಾಟವಿಲ್ಲ. ಅಮ್ಮನ ಮುದ್ದಿನ ಮಗ. ಅವನಾಯಿತು, ಹೊಲಗದ್ದೆಗಳ ಕೆಲಸ, ತೋಟದ ಕೆಲಸ, ದನಕರುಗಳನ್ನು ನೋಡಿಕೊಳ್ಳೊದು, ಬೆಳಿಗೆದ್ದು ಹಾಲು ಕರೆದು ಡೈರಿಗೆ ಮಾರಿ ಬರುವುದು..ಈಗ ಹಳ್ಳಿಯ ಸುಂದರ ಸೊಬಗಿನಲ್ಲಿ ಬೆಳೆದ ಮುಗ್ಧ, ಪ್ರಾಮಾಣಿಕ ಸುರೇಶನಿಗೆ ನಗರ ಅಂದ್ರೆ ಅದೇನೋ ಕುತೂಹಲವಂತೆ. ಒಂದು ಸಲ ಅವನ ಸಂಬಂಧಿಕ ಹುಡುಗನೊಬ್ಬ ಸುರೇಶನನ್ನು ಬೆಂಗಳೂರಿಗೆ ಕರೆದುಕೊಂಡು ಬಂದ.

ವಿಲ್ಸನ್ ಗಾರ್ಡ್ನ್ನಲ್ಲಿ ಸುರೇಶನ ಸಂಬಂಧಿಕನ ರೂಮ್. ಎಲ್ಲಾ ಬ್ಯಾಚುಲರ್ ಹುಡುಗ್ರು. ಸುರೇಶನೂ ಒಂದು ವಾರ ಬೆಂಗಳೂರು ಸುತ್ತಿ ಹೋಗೋಣ ಅಂತ ಬಂದಿದ್ದ. ರೂಮ್ ಹುಡುಗ್ರು ಎಲ್ಲಾ ನಿತ್ಯ ಕೆಲಸಕ್ಕೆ ಹೋಗೋರು. ರಜೆಯಿಲ್ಲ. ಸುರೇಶನ ಬಳಿ, ಬೆಂಗಳೂರು ರೌಂಡ್ ಹಾಕೊಂಡು ಬಾ ಅಂದ್ರತೆ. ಮೆಜೆಸ್ಟಿಕ್ ಗೆ ಹೋದ್ರೆ ಬೆಂಗಲೂರು ಸುತ್ತಾಕೆ ತುಂಬಾ ಸುಲಭ..ಎಲ್ಲಾ ಕಡೆಗೂ ಹೋಗುವ ಬಸ್ಸುಗಳು ಮೆಜೆಸ್ಟಿಕ್ ನಿಂದಲೇ ಹೊರಡುತ್ತವೆ ಅಂದ್ರಂತೆ. ಸರಿ ಎಂದ ಸುರೇಶ ಬೆಂಗಳೂರು ಸಿಟಿ ಸುತ್ತೋಕೆ ರೆಡಿಯಾದ. ಬೆಳಿಗ್ಗೆ 10ರ ಸುಮಾರಿಗೆ ಮೆಜೆಸ್ಟಿಕ್ ಗೆ ಹೊರಟ. ಮೆಜೆಸ್ಟಿಕ್ ನಿಂದ ನಿಂತು ನೋಡಿದರೆ ಎದುರುಗಡೆ ಬೆಂಗಳೂರು ಸಿಟಿ ನೈರುತ್ಯ ರೈಲ್ವೆ ಕಾಣಿಸುತ್ತೆ. ಸುರೇಶ ಬೆಂಗಳೂರು ಸಿಟಿ ಅಂದ್ರೆ ಇದೇ ಅಂದುಕೊಂಡು ಸೀದಾ ರೈಲ್ವೆ ನಿಲ್ದಾಣ ಸುತ್ತಾಕೆ ಹೊರಟ.

ಗಿಜಿಗಿಡುವ ಜನರು, ಲಗೇಜುಗಳು, ಕೂಲಿಗಳು...ಇವನಿಗೆ ನೋಡಿಯೇ ತಲೆ ಗಿರ್ರ ಅನಿಸ್ತಂತೆ. ಒಂದೆಡೆ ಹೊಸ ಜಾಗ, ಅಪರಿಚಿತ ಮುಖ. ಆದರೂ ನೋಡಿಕೊಂಡು ಬಿಡೋಣ ಅಂತ ಪ್ಲಾಟ್ ಫಾರ್ಮ್ ಒಳಗೆ ಹೋಗಿದ್ದಾನೆ. ರೈಲುಗಳನ್ನೆಲ್ಲಾ ನೋಡುತ್ತಿದ್ದಾನೆ. ಕೈಯಲ್ಲಿ ಪ್ಲಾಟ್ ಫಾರ್ಮ ಟಿಕೆಟ್ ಇಲ್ಲ. ಅದು ಮಾಡಿಸಿಕೊಬೇಕು ಅಂತ ಅವನಿಗೆ ಗೊತ್ತೂ ಇಲ್ಲ. ಹಾಗಂತ ಯಾರೂ ಹೇಳೂ ಇಲ್ಲ. ತಪಾಸಣೆಗೆ ಬಂದ ಅಧಿಕಾರಿಗಳು ಬಂಧಿಸಿಬಿಟ್ಟರು. ತಪಾಸಣೆ ಮಾಡಿದ್ರು. ಈತ ಅಳೋದು ಬಿಟ್ರೆ ಬೇರೇನೂ ಮಾಡ್ತಿಲ್ಲ. ಸಂಜೆತನಕ ಅತ್ತು ಅತ್ತು ಹಣ್ಣಾದ ಮೇಲೆ ಇವನ ರೂಮ್ ಮೆಟ್ ಗಳು ಹೋಗಿ ಆಮೇಲೆ ಕರೆದುಕೊಂಡು ಬಂದ್ರು. ಅಂದೇ ನಾ ಊರಿಗೆ ಹೋಗ್ತೀನಿ ಅಂತ ರಚ್ಚೆ ಹಿಡಿದ ಸುರೇಶ ಬಸ್ಸು ಹತ್ತಿ ಹೊರಟೇಬಿಟ್ಟ. ಮತ್ತೆಂದೂ ಬೆಂಗಳೂರಿಗೆ ಮುಖ ಹಾಕಿ ನೋಡೇ ಇಲ್ಲ.
ಇತ್ತೀಚೆಗೆ ನನ್ನ ತಮ್ಮನೊಬ್ಬನನ್ನು ಊರಿಂದ ಇಲ್ಲಿಗೆ ಕರೆಸಿದೆ. ಬಂದಿದ್ದೇ ತಡ ಅಕ್ಕಾ ಊರಿಗೆ ಹೋಗ್ತೀನಿ..ಇಲ್ಲಿ ಬೋರ್ ಆಗುತ್ತೆ ಅಂತ ಜಗಳವಾಡಕೆ ಶುರುಹಚ್ಚಿದ. ಎರಡು ದಿನದಲ್ಲಿ ನಾ ಕಳಿಸಿಕೊಟ್ಟೆ. ಅವನ ಬಸ್ಸು ಹತ್ತಿಸಕೆ ಮೆಜೆಸ್ಟಿಕ್ ತನಕ ನಾನು ನಮ್ಮ ಸಂಬಂಧಿಕರೊಬ್ಬರ ಜೊತೆ ಹೋಗುತ್ತಿದ್ದಂತೆ ಅವರು ನನ್ ತಮ್ಮನಿಗೆ ಸುರೇಶ ಬೆಂಗಳೂರು ಸಿಟಿ ನೋಡಿದ ಕಥೆಯನ್ನು ವಿವರಿಸಿದ್ದರು. ಈವಾಗ ಸುರೇಶ ಮದುವೆಯಾಗಿ ಆರಾಮವಾಗಿ ಊರಲ್ಲಿದ್ದಾನೆ.

ನೋಡ್ರೀ ಈ ಸಲ ಧರಿತ್ರಿ ನಿಮ್ ಕಣ್ಣಲ್ಲಿ ನೀರು ತರಿಸಿಲ್ಲ..ನಗೋ ಥರ ಬರೆಯೋಕೆ ಬರಲ್ಲ..ಆದ್ರೂ ಅತ್ತ ನಗೂನು ಅಲ್ಲ ಇತ್ತ ಅಳೂನು ಅಲ್ಲದ ಘಟನೆಯನ್ನು ಬ್ಲಾಗಿಸಿದ್ದೇನೆ. ಆಗಾಗ ನೆನಪಾಗುವ ಸುರೇಶನ ಅವಸ್ಥೆಗೆ ನಂಗೇ ನಗಬೇಕೋ ಅಳಬೇಕೋ ಗೊತ್ತಾಗ್ತಿಲ್ಲ ಮಾರಾಯ್ರೆ.