Monday, July 27, 2009

...ಕಣವಿಯವರ ಒಂದಿಷ್ಟು ಸಾಲುಗಳು...

ಎಲ್ಲೋ ಓದಿದ ಚೆನ್ನವೀರ ಕಣವಿ ಅವರ ಕವನದ ಸಾಲುಗಳು ನನಗೆ ಇಷ್ಟವಾಗಿ ನನ್ನ ಪುಟ್ಟ ಡೈರಿಯಲ್ಲಿ ಬರೆದಿಟ್ಟಿದ್ದೆ. ನೀವೂ ಓದಿಕೊಳ್ಳಿ.

"ಬರೆದ ಕವಿತೆಯ ಭಾರ ಬರೆಯದ ಕವಿತೆಗಳಿಗಿಂತ ಹೆಚ್ಚಲ್ಲ"

"ಪ್ರಕೃತಿ ತನ್ನೆದೆಯ ಮಧುವಾಟಿಕೆಯ ತೆರೆದಿರಲು
ಅದನು ಹೀರದೆಯೆ ಸಾಗಬಹುದೇ?
ಯಾರಿಗೀ ಸುಂದರತೆ ಯಾರಿಗೀ ಪರವಶತೆ?
ಯಾರ ಸುಖಕೀ ಸೃಷ್ಟಿ ನಿನಗಲ್ಲದೇ?"


"ಮಾಯೆಯಿಕ್ಕುವ ಕರದ ತಾಲಲಯಕ್ಕೆ
ದೇಶಕಾಲಗಳು ನರ್ತಿಸುತ ಸಾಗಿವೆ"

"ಬಾಲ್ಯದಿಂದಲೂ ಮುಗಿಲ ಕಂಡು
ಮೈಮರೆತ ದಿನಗಳೆನಿತು!
ಅವುಗಳಾಟದಲ್ಲಿ ಮೈಯಮಾಟದಲ್ಲಿ
ಜೀವ ತುಂಬಿಬಂತು"


"ಮುಗಿಲ ಬೆಳಕಿನ ಬೀಜ ಮರವಾಗಿ ನೆಲವ ತಬ್ಬಿತ್ತು"

"ಏನಾದರೂ ಆಗಲಿ, ಹಾಡು ನಿಲ್ಲಿಸಬೇಡ
ದೀಪ ಪಟ್ಟನೆ ಆರಿ ಹೋಗಬಹುದು
ನನ್ನೆದೆಯ ಕತ್ತಲೆಯ ಕಣ್ಣುಕಪ್ಪಡಿ ಮತ್ತೆ
ಮೂಲೆ-ಮೂಲೆಗೆ ಹೋಗಿ ಹಾಯಬಹುದು"


"ಬಾಳಪುಟದಲ್ಲಿ ಬಾಲ್ಯವೆಂಬುವುದೊಂದು
ಅಳಿಸಲಾರದ ಮಧುರ ಭಾವಗೀತ"

"ಬದುಕು ಸೋಲಾದರೂ ಕಾಡು ಪಾಲದರೂ
ಹಾಡು ಬಿಟ್ಟುಳಿದವನ ಪಾಡು ಬೇಡ
ನೀನೆನ್ನ ದೈವತವು ಹಾಡೆನ್ನ ಜೀವಿತವು
ಮತ್ತೆ ಮತ್ತುಳಿದವರ ಮಾತು ಬೇಡ"


"ಮೆಲ್ಲದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ
ಹೆಣ್ಣ ಕಣ್ಣಂಚಿನಲ್ಲಿ ತುಳುಕುವಂತೆ"

"ಹೊಗೆ ನಟ್ಟು ಹೋಗಿರುವ ಮನದ ಮನೆಗೋಡೆಗಳು
ಸುಣ್ಣ-ಬಣ್ಣವನೆಂದು ಕಾಣಬಹುದು?
ಇಲ್ಲಣವು ಜೋತಿರುವ ಜೇಡಬಲೆ ನೇತಿರುವ
ಬೆಳಕಿಂಡಿಯಲ್ಲಿ ಬೆಳಕದೆಂತುಬಹುದು?"


"ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ"

ಜೀವನಪ್ರೀತಿಗೆ ಪರಿಧಿಯ ಹಂಗೇಕೆ?

ಜೀವನ ಪ್ರೀತಿಯ ಅನುಭೂತಿ ...!

ಯಾಕೋ ಇದ್ದಕಿದ್ದಂತೆ ಮತ್ತೆ ಮತ್ತೆ ಕಾಡೋ ನನ್ನೋಳಗಿನ ಇಬ್ಬನಿ ಹನಿಯಿದು. ತುಂಬಾ ಸಲ ಜೀವನ ಪ್ರೀತಿಯ ಅನುಭೂತಿಯೇ? ಅನ್ನೋ ಅನುಮಾನದ ಪ್ರಶ್ನೆ ನನ್ನೊಳಗೆ ಕಾಡಿದ್ದರೂ, ಹೌದು, ಈ ಬದುಕು ಪ್ರೀತಿಯ ಅನುಭೂತಿ ಅನ್ನುತ್ತಿದ್ದೆ ನನ್ನ ಆತ್ಮಸಾಕ್ಷಿ. ಒಂದು ಕ್ಷಣ ಕಣ್ಣಂಚು ಒದ್ದೆಯಾದರೂ, ನೋವು-ನಲಿವಿನ ಗೆರೆಗಳು ಕಣ್ಣಂಚಿನಲ್ಲಿ ಸರಿದು ಹೋದರೂ 'ಜೀವನವೇ ಪ್ರೀತಿಯ ಅನುಭೂತಿ' ಎಂದನಿಸುತ್ತೆ. ಹೌದು, ಈ ಜಗತ್ತು, ಈ ಜನ್ರು, ಈ ಪ್ರಕೃತಿ, ಈ ಪ್ರಾಣಿ ಪ್ರಪಂಚ, ಈ ಸರ್ವ ಜೀವಸಂಕುಲವನ್ನು ಕಲಿಯೋಕೆ, ತಿಳಿಯೋಕೆ ಅದೆಷ್ಟೋ ವರುಷಗಳು ಸರಿದಿವೆ. ಅಮ್ಮನ ಎದೆಹಾಲಿನ ಹಠ ಬಿಟ್ಟು ಅದೆಷ್ಟು ವರುಷ ಸರಿದಿದೆ ಅಲ್ವಾ?

ಅಲ್ಲಿಂದ ಇಲ್ಲಿತನಕ ಜೀವನವನ್ನು ಪ್ರೀತಿಸುತ್ತಾ, ನನ್ನಂತೆ ಇತರರು ಅನ್ನುತ್ತಾ, ಆತ್ಮಸಾಕ್ಷಿಯ ಮಾತಿಗೆ ತಲೆದೂಗುತ್ತಾ ಬಂದಿರೋವರಿಗೆ ಜೀವನದಲ್ಲಿ ಪ್ರೀತಿಯ ಅನುಭೂತಿ ಪಡೆಯೋದೇ ಒಂದು ಅದೃಷ್ಟ ಅನ್ನಬೇಕು. ಮೊನ್ನೆ ಮೊನ್ನೆ ನನ್ನ ಪ್ರೀತಿಯ ಗೆಳೆಯ ಚೆಂದದ ಸಾಲೊಂದು ಬರೆದುಕೊಡು ಎಂದಾಗ ನಂಗೆ ಥಟ್ಟನೆ ಹೊಳೆದ ವಾಕ್ಯ: ಜೀವನ ಪ್ರೀತಿಯ ಅನುಭೂತಿ!

ನಿಮಗೂ ಹಾಗೇ ಅನಿಸಲ್ವಾ ಹೇಳಿ? ಮನುಷ್ಯನಿಗೆ ಏಳೇಳು ಜನ್ಮವಿರುತ್ತೆ ಅಂಥ ನಮ್ಮಜ್ಜಿ ಹೇಳಿದ ನೆನಪು. ಹೌದು, ಅದಕ್ಕೆ ಮಾನವ ಜನ್ಮ ದೊಡ್ಡದು, ಅದನ್ನು ಹಾಳು ಮಾಡಿ ಕೊಳ್ಲದಿರಿ ಹುಚ್ಚಪ್ಪಗಳಿರಾ! ಎಂದು ಹಾಡಿದ್ದಿರಬೇಕು ದಾಸರು. ಹುಲ್ಲು, ಪೊದೆ, ಪ್ರಾಣಿಗಳಾಗಿ ಹುಟ್ಟುವ ಬದಲು ಮನುಷ್ಯನಾಗಿ ಹುಟ್ಟೋದೇ ಲೇಸು ಅಂತಾರೆ ಹಿರಿಯರು.

ಹುಟ್ಟಿದ ಮೇಲೆ, ಹುಟ್ಟಿ ಬೆಳೆದ ಮೇಲೆ ಇದೆಲ್ಲಾ ನೆನೆಪಾಗುತ್ತೆ ಕಣ್ರೀ. ಹೌದು, ನಾನೂ ಹುಟ್ಟಿದ್ದೇನೆ..ಮನುಷ್ಯಳಾಗಿ! ಒಂದಿಷ್ಟು ಭಾವನೆಗಳು, ಒಂದಿಷ್ಟು ಪ್ರಿತಿ, ಒಳ್ಳೆಯದೆನಿಸುವ ಜೀವನ, ಹೃದಯದಲ್ಲಿ ಒಂದಿಷ್ಟು ಕನಸು, ಅಮ್ಮನ ಮಮತೆ, ವಾತ್ಸಲ್ಯ, ಎಲ್ಲನೂ ದೇವ್ರು ಕೊಟ್ಟಿದ್ದಾನೆ. ಹಸಿವ ಹೊಟ್ಟೆಗೆ, ಉಡೋ ಬಟ್ಟೆಗೆ, ಬಸ್ಸಿಗೆ ಓಡಾಡೋಕೆ, ಅಮ್ಮನ ಕನಸಿಗೆ ಜೀವ ತುಂಬೋಕೆ: ಕೈಗೊಂದು ಪುಟ್ಟ ಕೆಲಸ! ಆಸರೆಗೆ ಪುಟ್ಟದೊಂದು 'ಮನೆ', ಅದೇ ನನ್ನ ಪಾಲಿನ 'ಅರಮನೆ'. ಅಕ್ಷರಗಳಿಗೆ ಜೀವ ತುಂಬೋಕೆ ಒಂದಿಷ್ಟು ಸುಂದರ ಭಾವನೆಗಳು, ನನ್ನಂತೆ ಪರರೂ ಎನ್ನೋ ಪುಟ್ಟದಾದ ಮನಸ್ಸು, ಇತತರ ನೋವು-ನಲಿವಿಗೆ ಸ್ಪಂದಿಸುವ ಹೃದಯ..ಸಾಕಲ್ವೇ? ಬದುಕನ್ನು ಪ್ರೀತಿಸೋಕೆ!

ನಿನ್ನೆ ಸುನಂದಾ ಬೆಳಗಾಂವಕರ ಅವರ, 'ಕೊಡುವುದೇನು, ಕೊಂಬುದೇನು?' ಪುಸ್ತಕ ಓದುತ್ತಿದ್ದೆ. ಅವರೊಂದು ಕಡೆ ಹೇಳುತ್ತಾರೆ, "'ದೇವರು ಈ ಜೀವನವನ್ನು ಪ್ರೀತಿಸುವುದಕ್ಕೆಂದೇ ಕೊಟ್ಟಿದ್ದಾನೆ, ದ್ವೇಷಿಸುವುದಕ್ಕಲ್ಲ. ಪ್ರೀತಿ, ದ್ವೇಷ ಬೆಳಕು ನೆಳಲಿನ ಆಟ. ದ್ವೇಷಿಸುತ್ತಾ ಬದುಕುವುದು ಒಂದು ಶಾಪ. ಪ್ರೀತಿಸುತ್ತಾ ಬದುಕುವುದು ಒಂದು ವರ"!

ಬಹುಶಃ ಈ ಪುಟ್ಟ ಲೇಖನಕ್ಕೆ ಸ್ಫೂರ್ತಿ ಕೂಡ ಇದೇ ಸತ್ವಯುತವಾದ ಶಬ್ಧಗಳಿರಬಹುದು. ಜೀವನಪ್ರೀತಿಗೆ ಪರಿಧಿ ಬೇಡ, ಅದು ಶರಧಿಯಂತೆ ಪ್ರವಹಿಸಲಿ. ಪ್ರೀತಿಗೆ ಹಂಗು ಬೇಡ..ನಮ್ಮ ಬದುಕನ್ನೇ ಪ್ರೀತಿಸಿ ಬಿಡೋಣ. ಅಲ್ಲಿ ಅನನ್ಯತೆಯಿದೆ, ಪ್ರಾಮಾಣಿಕತೆ ಇದೆ, ನಿಷ್ಕಲ್ಲಶ ಭಾವನೆಯಿದೆ. ಮತ್ತೇನು ಬೇಕು? ಒಂಬತ್ತು ತಿಂಗಳು ಹೊತ್ತು, ಹೆತ್ತು, ಸಲಹಿ, 'ನಾವೀಗ ದೊಡ್ಡವರಾಗಿದ್ದೇವೆ' ಅನ್ನೋದನ್ನು ಹೇಳಿಕೊಳ್ಳುವಂತೆ ಮಾಡಿರುವ 'ಅಮ್ಮನೆಂಬ ದೇವರು' ನೀಡಿದ ಈ ಅಮೂಲ್ಯ ಬದುಕಿಗೆ?