Wednesday, December 7, 2011

ಅಗಲಿದ ಅಪ್ಪನೆಂಬ ಅಕ್ಕರೆಗೆ...


ನೀನು ಸುಮ್ಮನೆ ಮಲಗಿದ್ದೆ, ಮೌನವಾಗಿ. ಆ ಗಾಜಿನ ಪೆಟ್ಟಿಗೆಯೊಳಗೆ ಮಲಗಿದ್ದ ನಿನ್ನ ನೋಡುವಾಗ ನಿನ್ನ ಬಿಳಿಮೀಸೆಯಡಿಗಿನ ಮುಗ್ಧ ನಗು ನೆನಪಾಗುತ್ತಿತ್ತು. ಮತ್ತೆ ಮಾತಿಗೆ ತುಟಿಬಿಚ್ಚುವಂತೆ ಭಾಸವಾಗುತ್ತಿತ್ತು. ಪುಟ್ಟಾ ಎಂದು ಕೂಗುತ್ತಿಯೇನೋ, ಕಣ್ಣುಗಳಲ್ಲೇ ನಗುತ್ತಿಯೇನೋ ಅಂದುಕೊಂಡೆ.
ಆದರೆ ನೀ ನಗಲಿಲ್ಲ, ನಾನು ಅತ್ತೆ, ಗೋಳಾಡಿದೆ. ಮನಸ್ಸು, ಹೃದಯ ಕಣ್ಣೀರಾದರೂ ನೀನು ಬರಲೇ ಇಲ್ಲ. ನಿನ್ನ ಅಪ್ಪಾ ಎಂದು ಕೂಗುವ ಹಕ್ಕನ್ನೂ ನಾ ಕಳೆದುಕೊಂಡೆ. ಅಪ್ಪನಿಲ್ಲದ ಜಾಗದಲ್ಲಿ ನೀನು ಅಪ್ಪನಾಗಿ ಬಂದಾಗ ನಾನು ಮಾಮ ಎಂದು ಮಮಕಾರ ತೋರಲಿಲ್ಲ, ಅಪ್ಪಾ ಎಂದೆ. ನೀನು ಸೊಸೆ ಎನ್ನಲಿಲ್ಲ, ಮಗಳೇ ಎಂದು ಎದೆಗಪ್ಪಿಕೊಂಡೆ.
ಆ ಸಂಜೆ ಹೊತ್ತು ನೀನು ಇದ್ದಕಿದ್ದಂತೆ ಉಸಿರಾಡುವುದನ್ನು, ಮಾತನಾಡುವುದನ್ನು, ನಗುವುದನ್ನು, ನಿನ್ನ ಪಾಡಿಗೆ ಗೊಣಗುವುದನ್ನು, ಅಮ್ಮನ ಜೊತೆ ಸುಖಾಸುಮ್ಮನೆ ಜಗಳವಾಡುವುದನ್ನು ನಿಲ್ಲಿಸಿದಾಗ ದೇವರ ಮೇಲೆ ಕೆಟ್ಟ ಸಿಟ್ಟು ಬಂತು! ನಿನ್ನ ಮರಳಿ ಕೊಡು ಎಂದು ಕಣ್ಣೀರಿಟ್ಟರೂ ದೇವರು ಕಿಂಚಿತ್ತೂ ದಯೆ ತೋರಲೇ ಇಲ್ಲ.

ರಾತ್ರಿಯಿಡೀ ಮನೆಯೆದುರು ಬೆಂಕಿ ಹಾಕಿ ಕುಳಿತೆ. ಮನೆಯೊಳಗೆ ಗಾಜಿನ ಪೆಟ್ಟಿಗೆಯಲ್ಲಿ ಮಂಜುಗಡೆಯ ತಂಪಿಗೆ ನೀನೂ ಮಂಜಾಗುತ್ತಿದ್ದೆ. ಕಿಸಾಗೋತಮಿ ಕಥೆ ನೆನಪಾಯಿತು. ಸಾವಿಲ್ಲದ ಮನೆಯ ಸಾಸಿವೆ ಗೌತಮಿಗೆ ಕೊನೆಗೂ ಸಿಗಲೇ ಇಲ್ಲ.
ಆದರೂ ಇಷ್ಟು ಬೇಗ ನನ್ನ, ನಿನ್ನ ಅಗಲುವಿಕೆ ನ್ಯಾಯವಲ್ಲ ಎನ್ನೋದು ನನ್ನ ತಕರಾರು. 25 ವಸಂತಗಳನ್ನು ದಾಟಿದ ನಂತರ ನೀನು ಸಿಕ್ಕಿದೆ, ಬಾಯಿ ತುಂಬಾ ಅಪ್ಪಾ ಎಂದು ನಿನ್ನ ಕರೆದೆ. ನಿನ್ನ ಹೆಗಲ ಮೇಲೆ ಕೈಯಿಟ್ಟಾಗ ಸಲಿಗೆ ಎಂದು ಬೈಯಲಿಲ್ಲ. ಎಪ್ಪತ್ತೈದು ದಾಟಿದ ನೀನು ಪದೇ ಪದೇ ನನ್ನ ಕೂಗಿದಾಗ ನಾನು ರೇಗಾಡಿದರೂ ಮಗಳೆಂದು ಸಹಿಸಿಕೊಂಡೆ.
ನೀನು ಕಣ್ಣಲ್ಲಿ ಕಣ್ಣಿಟ್ಟು ಸಾಕಿದೆ, ಕಿವಿಗೆ ಓಲೆ, ಜುಮುಕಿ ತಂದೆ, ಕೈಗಳಿಗೆ ಮಿನುಗು ಬಳೆಗಳನ್ನು ತಂದೆ, ಮುಡಿಗೆ ಮಲ್ಲಿಗೆ ಮೊಳ ತಂದೆ, ಕಣ್ಣಿಗೆ ಕಾಡಿಗೆ ತಂದೆ, ಕಾಲಿಗೆ ಸದ್ದುಗೈಯುವ ಗೆಜ್ಜೆ ತಂದೆ, ಮನೆ ತುಂಬಾ ಗೆಜ್ಜೆಯ ಸಪ್ಪಳ ಮಾಡಿದೆ. ಆದರೆ, ಒಂದೇ ಒಂದು ನಿನ್ನಾಸೆ ಈಡೇರಲಿಲ್ಲ, ನನಗೆ ಮೊಗ್ಗಿನ ಜಡೆ ಇಳಿಸಿ ನೋಡಬೇಕೆಂಬ ನಿನ್ನಾಸೆ ಈಡೇರಲೇ ಇಲ್ಲ. ದೇವರ ಅನ್ಯಾಯವಿದು!