Thursday, December 20, 2012

ಪ್ರಳಯ, ನಾನು ಮತ್ತು ಅಮ್ಮ



ಇವತ್ತು ಎಂದಿನಂತೆ ಬೆಳಗು. ಕಿಟಕಿಯಾಚೆ ಇದ್ದ ಪಾರಿಜಾತ ಗಿಡದ ಮೇಲೆ ಸೂರ್ಯನ ಕಿರಣಗಳು ನಳನಳಿಸುತ್ತಿತ್ತು. ಅಮ್ಮ ಎದ್ದು ಬಾಗಿಲು ತೊಳೆದು ರಂಗೋಲಿ ಇಟ್ಟಿದ್ದಳು. ಹಾಲಿನ ಹುಡುಗ, ಪೇಪರ್ ಹುಡುಗ ಆರೂವರೆಗೇ ಬಾಗಿಲು ತಟ್ಟಿದ್ದರು. ಎದುರುಮನೆ ಪುಟಾಣಿ ಶಾಲೆಗೆ ಹೋಗೊಲ್ಲ ಎಂದು ರಚ್ಚೆ ಹಿಡಿಯುತ್ತಿದ್ದ. ಅವನಿಗೆ ಇವತ್ತು ಪ್ರಳಯ ಆಗುತ್ತೆ ಎನ್ನುವ ಭಯ. ವಾಕಿಂಗ್ ಹೋಗುತ್ತಿದ್ದ ಎಂಬತ್ತು ಮೀರಿದ ಅಜ್ಜ-ಅಜ್ಜಿಯರ ಮುಖದಲ್ಲಿ ಮಂದಹಾಸ. ಟೀವಿಯಲ್ಲಿ "ಪ್ರಳಯ ಠುಸ್' ಎಂಬ ಸುದ್ದಿ ದೊಡ್ಡದಾಗಿ ಕಾಣುತ್ತಿತ್ತು. ನೆನಪಿನ ಪೆಟ್ಟಿಗೆಯಲ್ಲಿ 14 ವರ್ಷಗಳ ಹಿಂದಿನ ಘಟನೆ ನಗು ತರಿಸುತ್ತಿತ್ತು.

ನಾನಾಗ ಎಂಟನೇ ತರಗತಿಯಲ್ಲಿ ಓದುತ್ತಿದ್ದೆ.  ಆಗ ತರಂಗ ವಾರ ಪತ್ರಿಕೆ  'ಪ್ರಳಯ'ದ ಬಗ್ಗೆ ಮುಖಪುಟ ಸುದ್ದಿ ಮಾಡಿದ್ದು ನೆನಪು. ಶಾಲೆಯ ಹತ್ತಿರವಿದ್ದ ಸೂರಪ್ಪನ ಅಂಗಡಿಯಿಂದ ಆ ತರಂಗ  ಖರೀದಿಸಿದ್ದೆ. ಅಕ್ಷರದರಿವು ಇಲ್ಲದ ಅಮ್ಮ ಏನಿರುತ್ತೆ ಪತ್ರಿಕೆಯಲ್ಲಿ ಎಂದು ಕೇಳಿದ್ದಳು. ಪ್ರಳಯ ಆಗುತ್ತೆ ಅಂತೆ...ಅದರ ಬಗ್ಗೆ ಇರುತ್ತೆ ಎಂದಿದ್ದೆ. ಅದನ್ನು ತೆಗೆದುಕೊಂಡಿದ್ದೆ ತಡ ಸರಿಯಾಗಿ ಪಾಠಗಳನ್ನೂ ಕೇಳದೆ ಪಾಠದ ಮಧ್ಯೆ ತರಂಗ ತಿರುವಿ ಹಾಕಿದ್ದೆ. ಹಿಂದಿ ಪಾಠ ಮಾಡುತ್ತಿದ್ದ ಕೊರಗಪ್ಪ ಮೇಷ್ಟ್ರು ಚೋಕ್ ಪೀಸ್ ತಕ್ಕೊಂಡು ನಿಂತಲ್ಲಿಂದಲೇ ನನ್ನ ತಲೆಗೆ ಚೋಕ್ ಪೀಸ್ ಬಿಸಾಡಿ ಕಿವಿಹಿಂಡಿದ್ದರು!. ಆ ದಿನ ಯಾರೂ ಸರಿಯಾಗಿ ಪಾಠ ಕೇಳಲಿಲ್ಲ. ಬರೀ ಪತ್ರಿಕೆ ಓದಿ ಪ್ರಳಯದ ಬಗ್ಗೆ ಮಾತಾಡುವುದು ಅಷ್ಟೇ ಕೆಲಸ. ಇನ್ನೂ ನೆನಪಿದೆ ಆ ಪತ್ರಿಕೆ ಮುಖಪುಟದಲ್ಲಿ ಗೋಳಾಕಾರದ ಭೂಮಿ ಯಾವುದೇ ಗ್ರಹಕ್ಕೆ ಬಡಿದಂತೆ ಅಚ್ಚರಿ, ಭಯವನ್ನು ಸೃಷ್ಟಿಸದ ಪೋಟೋ ಇತ್ತು. ಅದನ್ನು ನೋಡಿ ನೋಡಿ ನಾನು ಬೆವೆತಿದ್ದೆ.

ಮೂತ್ರ ಮಾಡಲೂ ಭಯವಾಗಿತ್ತು!
ಪ್ರಳಯ ಆಗುವ ದಿನ ನಾನು ಶಾಲೆಗೆ ಹೋಗುವುದಿಲ್ಲ ಎಂದು ನಿರ್ಧರಿಸಿದ್ದೆ. ಆ ದಿನ ಪೂರ್ತಿ ಅಮ್ಮನ ಬಳಿಯೇ ಇರಬೇಕು. ಅಮ್ಮನ ಬಿಟ್ಟು ಆ ಕಡೆ-ಈಕಡೆ ಹೋದಾಗ ಪ್ರಳಯ ಆಗಿಬಿಟ್ಟರೆ ನಾವೆಲ್ಲೋ..ಅಮ್ಮ ಎಲ್ಲೋ ಹೋಗಿಬಿಡ್ತಾಳೆ. ಅಂದು ಅಮ್ಮನ ಬಳಿ ಭರ್ಜರಿ ಅಡುಗೆ ಮಾಡಿಸಿಕೊಂಡು ತಿನ್ನಬೇಕು...ಹೀಗೆ ವಿವಿಧ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೆ. ಪತ್ರಿಕೆಯಲ್ಲಿ ಬಂದಿದ್ದ ಸುದ್ದಿಗಳನ್ನೆಲ್ಲಾ ಅಮ್ಮನಿಗೆ ಯಥಾವತ್ತಾಗಿ ಓದಿ ಹೇಳಿದ್ದೆ. ಆಕಾಶವಾಣಿ ಸುದ್ದಿಯಲ್ಲೂ ಪ್ರಳಯದ ಸುದ್ದಿಗಳು ಬರುತ್ತಿದ್ದವು. ನಮ್ಮ ವಿಜ್ಞಾನ ಮೇಷ್ಟ್ರು ಡಿಸೋಜಾ ಪ್ರಳಯ ಸುಳ್ಳು ಸುದ್ದಿ ಎಂದು ಹೇಳಿದ್ದು ಬಿಟ್ಟರೆ ಇನ್ನಾರು ಧೈರ್ಯ ಹೇಳಲೇ ಇಲ್ಲ.
ಅಂತೂ ಪ್ರಳಯದ ದಿನ ಬಂದೇ ಬಿಟ್ಟಿತ್ತು. ಅಮ್ಮ ರಾತ್ರಿ ಕೋಳಿ ರೊಟ್ಟಿ ಅಡುಗೆ ಮಾಡಿದ್ದಳು. ಭರ್ಜರಿಯಾಗಿ ತಿಂದು ನಾನು-ತಮ್ಮ ಮತ್ತೊಮ್ಮೆ ಪ್ರಳಯದ ಹೇಗಾಗಬಹುದೆಂದು ಊಹಿಸಿಕೊಂಡೆವು. ಪ್ರಳಯ ಆದಾಗ ನೀರೆಲ್ಲ ತುಂಬಿಕೊಂಡು ನಮ್ಮ ಮನೆ ನೀರ ಮೇಲೆ ತೇಲುತ್ತಿರಬಹುದು. ಆಗ ನಾವು ಅಮ್ಮನ ಗಟ್ಟಿಯಾಗಿ ಬಿಗಿಯಾಗಿ ಹಿಡಿದುಕೊಂಡಿರಬೇಕು. ಸಾಯುವಾಗ ಅಮ್ಮನ ಜೊತೆಯೇ ಸಾಯಬೇಕು ಎಂದು ಪರಸ್ಪರ ನಿರ್ಧರಿಸಿಕೊಂಡೆವು. ಅಮ್ಮ ಮಧ್ಯೆ ಮಲಗಿದ್ದಳು. ನಾನು ಮತ್ತು ತಮ್ಮ ಆ ಕಡೆ-ಈ ಕಡೆ ಅವಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಮಲಗಿದ್ದೆವು. ಅಮ್ಮ ಅವಿದ್ಯಾವಂತೆಯಾದರೂ ನಮ್ಮಿಬ್ಬರ ಭಯಕ್ಕೆ ನಗುತ್ತಿದ್ದಳು. ಅದೆಲ್ಲಾ ಸುಳ್ಳು ಎಂದು ಹೇಳುತ್ತಿದ್ದಳು. ಮಲಗಿರುವಾಗಲೇ ಪ್ರಳಯ ಆದ್ರೆ ಗೊತ್ತಾಗೋದಿಲ್ಲ ಅಂತ ನಮ್ಮಿಬ್ಬರ ಲೆಕ್ಜಾಚಾರ. ಆದ್ರೆ, ಮಧ್ಯರಾತ್ರಿ ತನಕ ನಿದ್ದೆನೇ ಬರಲಿಲ್ಲ. ರಾತ್ರಿ ನಮಗೆ ಮೂತ್ರ ಬಂದರೂ ಅಮ್ಮನ ಬಿಟ್ಟು ಎದ್ದು ಹೋಗಲು ಭಯವಾಗಿತ್ತು!.

ಅಂತೂ ಪ್ರಳಯ ಆಗಲೇ ಇಲ್ಲ. ಬೆಳಗಿನ ಐದರ ಹೊತ್ತಿಗೆ ಕೋಳಿ ಕೂಗಿತು. ಎಂದಿನಂತೆ ಸೂರ್ಯ ಬೆಳಗಿನೊಂದಿಗೆ ಸ್ವಾಗತಿಸಿದ್ದ.  ನಾವಿಬ್ಬರೂ ಎದ್ದಾಗ ಅಮ್ಮ ರೊಟ್ಟಿ ತಟ್ಟುತ್ತಿದ್ದಳು.

Tuesday, October 16, 2012

ಅಜ್ಜಿ ಮತ್ತು ಟಿಕೆಟ್


ನನ್ನ ಕಾಲದಲ್ಲಿ ಮಾರ್ಕೆಟ್ಟಿಗೆ ನಡೆದುಕೊಂಡು ಹೋಗ್ತಿದ್ದೆ ಕಣವ್ವಾ..ಎಂದು ಎಪ್ಪತ್ತರ ಅಜ್ಜಿ ನಕ್ಕು ನನ್ನ ಹತ್ತಿರ ಬಂದು ಕುಳಿತುಕೊಂಡಳು. ವೀಳ್ಯದೆಲೆ ತಿಂದು ಬಾಯಿ ಕೆಂಪಾಗಿತ್ತು. ಮೂಗಿನಲ್ಲಿ ಹಳೇ ಕಾಲದ ದೊಡ್ಡ ನತ್ತು ಮಿನುಗುತ್ತಿತ್ತು. ಸೊಂಟದಲ್ಲಿ ಕಾಸಿನ ಚೀಲ. ನೋಡಕ್ಕೂ ಲಕ್ಷಣವಾಗಿದ್ದ ಅಜ್ಜಿಯ ಮಾತಿಗೆ ಹ್ಲೂಂಗುಡದೆ ವಿಧಿಯಿಲ್ಲ.

ನಮ್ಮನೆ ಸಮೀಪ ಬಸ್ ಹತ್ತಿದರೆ ಮಾರುಕಟ್ಟೆಗೆ ಸುಮಾರು 10 ಕಿ.ಮೀ. ದೂರ. ಅಜ್ಹಿ ಮಾತು ಮುಂದುವರೆಸಿದಾಗ ಕಿವಿಯಲ್ಲಿದ್ದ ಇಯರ್ ಫೋನ್ ತೆಗೆದು ಬ್ಯಾಗ್ ಗೆ ತುಂಬಿಸಿಕೊಂಡೆ. 'ನಾನು ನಿನ್ ತರ ಇದ್ದಾಗ ಮಾರ್ಕೆಟ್ಟಿಗೆ ನಾಲ್ಕಾಣೆ ಟಿಕೆಟ್ ಕಣವ್ವಾ. ನಾಲ್ಕಾಣೆ ಸಂಪಾದಿಸಕೂ ಕಷ್ಟದ ಕಾಲ ಅದು. ಬಸ್ ಗೆ ಕೊಡೋ ನಾಲ್ಕಣೆಯಲ್ಲಿ ಬುಟ್ಟಿ ತುಂಬಾ ಹೂವ ಬರುತ್ತಿತ್ತು ತಾಯಿ. ಈಗ ಒಂದು ಮೊಳಕ್ಕೆ 20 ಕೊಡ್ಬೇಕು. ಆಗ ನೋಡು, ನಾಲ್ಕಾಣೆಗೆ ಐದು ಕೆ.ಜಿ. ಹೂವ ಸಿಗೋದು. ಏನ್ ಕಾಲ ಬಂತವ್ವಾ?' ಎಂದು ಕಿಟಕಿ ಪಕ್ಕ ಕುಳಿತ ನನ್ನ ಸರಿಸಿ, ವೀಳ್ಯದೆಲೆಯನ್ನು ಕ್ಯಾಕರಿಸಿ ಹೊರಗೆ ಉಗಿದಳು.

ಏನೂ ಅಂದ್ಕೋಬೇಡ ಕಣವ್ವಾ, ಬಾಯಲ್ಲಿ ಇಟ್ಟುಕೊಂಡು ನನಗೆ ಅಭ್ಯಾಸ ಇಲ್ಲ ಅಂದಳು. ಪರ್ವಾಗಿಲ್ಲಮ್ಮಾ ಅಂದೆ. ನಂಗೆ ಮಾರ್ಕೆಟ್ಟಿಗೆ 10 ರೂ. ಇತ್ತು. ಈಗ 12 ಆಗಿದೆ. ಏನ್ ರೇಟೋ? ಟಿಕೆಟ್, ತರ್ಕಾರಿ, ಪೆಟ್ರೋಲ್, ಗ್ಯಾಸ್ ಎಲ್ಲನೂ ಜಾಸ್ತಿ ಮಾಡವ್ರೆ. ದಿನಾ ಬಂದ್. ನಮ್ಮೊಂಥರಿಗೆ ಕಷ್ಟ. ಮೊನ್ನೆಬಂದ್ ಆಯಿತಲ್ಲಾ...ಹೂವ ತರಕೆ ಮಾರ್ಕೆಟ್ಟಿಗೆ ಬರ್ಬೇಕಿತ್ತು.  ಎರಡು ದಿನ ವ್ಯಾಪಾರ ಇಲ್ಲ. ಒಂದು ದಿನ ವ್ಯಾಪಾರ ಇಲ್ಲಾಂದ್ರೆ ಒಂದು ದಿನದ ಊಟ ಇಲ್ಲಮ್ಮಾ..ಎಂದು ಮತ್ತೊಮ್ಮೆ ನನ್ನ ಪಕ್ಕ ಸರಿಸಿ ಉಗಿದಳು. ಕಳೆದ ಸಲ ನಮ್ಮ ಮನೆಪಕ್ಕದ ಸಾಹುಕಾರಪ್ಪ ಎಲೆಕ್ಷನ್ ದಿನ ನಮ್ಮನೆಗೆ ಕಾರು ತಕೋ ಬಂದು ಹತ್ತಿಸಿಕೊಂಡಿದ್ದ. ಇಂಥ ಚಿಹ್ನೆಗೆ ಓಟು ಹಾಕ್ಬೇಕು ಅಂದಿದ್ದ. ಒಂದು ಸಾವಿರ ರೂಪಾಯಿನೂ ಕೊಟ್ಟಿದ್ದ. ನಾನು ಹಂಗೇ ಮಾಡಿದ್ದೆ ಕಣವ್ವಾ. ಅವನದೇ ಸರ್ಕಾರ ಬಂತು. ಆದ್ರೆ, ಈ ಬಾರಿಯಂತೂ ನಾನು ಓಟು ಹಾಕಕೇ ಹೋಗಲ್ಲ. ಈ ಪರಿ ರೇಟು ಮಾಡಿದ್ರೆ ಏಕಮ್ಮಾ ಓಟು ಹಾಕೋದು?...ಎನ್ನುತ್ತಿದ್ದ ಅಜ್ಜಿ ಕೈಚೀಲದಲ್ಲಿದ್ದ ಪುಡಿ ಚಿಲ್ಲರೆಯನ್ನು ತೆಗೆದು ನನ್ನ ಅಂಗೈಯಲ್ಲಿಟ್ಟು ಎಣಿಸಿಕೊಡು ಎಂದಳು.

ಅಂದಹಾಗೆ, ನಿನ್ ಊರು ಯಾವುದು? ಎಲ್ಲೋಗ್ಬೇಕು ಎಂದು ಪರಿಚಯನೂ ಮಾಡಿಕೊಂಡ ಅಜ್ಜಿ. ನನ್ನ ಮುಖವನ್ನೊಮ್ಮೆ ದಿಟ್ಟಿಸಿ ನೋಡಿದಳು. ಲಕ್ಷಣವಾಗಿದ್ದೀಯಾ, ಆದರೆ, ಒಂದು ಕೈಗೆ ಯಾಕೆ ಬಳೆ ಹಾಕಿಲ್ಲ ಎಂದು ಕೇಳಬೇಕೆ? ಹೆಣ್ಣು ಮಕ್ಕಳು ಹೂವ ಮುಡ್ಕೊಂಡು, ಕೈಗೆ ಬಳೆ ತೊಟ್ಟು ಲಕ್ಷಣವಾಗಿರಬೇಕು ಕಣಮ್ಮಾ. ಮುತ್ತೈದೆಯರಿಗೆ ಕೈಲೀ ಬಳೆ ಇರ್ಬೇಕು ಎಂದು ಉಪದೇಶ ಮಾಡಿದಳು. ನಿತ್ಯ ಬಳೆ ತೊಡುತ್ತಿದ್ದ ನಾನು ಅಂದು ಅರ್ಜೇಂಟಾಗಿ ಬಸ್ ಹತ್ತಿದ್ದೆ!. ಅಜ್ಜಿಯ ಮಾತಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಬಸ್ ಕೆ.ಆರ್. ಸರ್ಕಲ್ ಸಿಗ್ನಲ್ ನಲ್ಲಿ ನಿಂತಿತ್ತು. ಅಜ್ಜಿ ಇನ್ನೂ ಜಾಸ್ತಿ ಮಾತಾಡುತ್ತೆ ಎಂದೇಳಿ, ಮತ್ತೆ ಕಿವಿಗೆ ಇಯರ್ ಫೋನ್ ಇಟ್ಟೆ. ನನ್ ಕೈಯಲ್ಲಿದ್ದ ಐಪಾಡ್ ನೋಡಿ, "ಇದೇನು ಮಗಾ? ಮೊಬೈಲಾ?' ಅಂತ ಕೇಳಬೇಕೆ. ಅದನ್ನು ವಿವರಿಸಿ ಸುಮ್ಮನಾಗಿಬಿಟ್ಟೆ.


ಇನ್ನೇನೋ ಒಂದು ಸ್ಟಾಪ್, ಮಾರ್ಕೆಟ್ ಬಂದುಬಿಡುತ್ತೆ ಅನ್ನುವಾಗ ಅಜ್ಜಿ ಮತ್ತೆ ಮಾತಿಗೆ ಶುರುಮಾಡಿತ್ತು. ನೋಡವ್ವಾ, ನಂಗೆ ನಿನ್ ವಯಸ್ಸಿನ ಮೊಮ್ಮಕ್ಕಳು ಇದ್ದಾರೆ. ತುಂಬಾ ಮಾತಾಡಿಬಿಟ್ಟೆ. ಬೇಜಾರು ಮಾಡಬೇಡ ತಾಯಿ. ಒಳ್ಳೆದಾಗ್ಲಿ...ಅಂದುಬಿಟ್ಟಳು. ಕೂದಲು ಪೂರ್ತಿ ಬೆಳ್ಳಿಯಾಗಿದ್ದ ಅಜ್ಜಿ, ಜ್ಞಾನಕ್ಕೆ ಮನಸ್ಸಲ್ಲೇ ಸಲಾಂ ಅಂದೆ.

Thursday, October 11, 2012

ನನ್ನ ರೈಲು ಪ್ರಯಾಣ...


ರೈಲನ್ನು ದೂರ ನಿಂತು ನೋಡಿದವಳಿಗೆ ಅಂದು ರೈಲಿನ ಒಳಗಡೆ ಹೋಗಿ ನೋಡುವ ತವಕ. ಕಿಟಕಿ ಬಳಿ ಕುಳಿತರೆ ಏನೆಲ್ಲಾ ನೋಡಬಹುದು, ನನಗೂ ದಾರಿಹೋಕರೆಲ್ಲಾ ಕೈ ಬೀಸಬಹುದು, ಹೊಲ ಗದ್ದೆಗಳನ್ನು, ಹಸಿರು ಹಾಸನ್ನು, ಮುಗಿಲ ಚಿತ್ತಾರವನ್ನು ನೋಡುತ್ತಾ ಹೋಗಬಹುದೆನ್ನುವ ಖುಷಿ. 


ಸಂಜೆ ನಾಲ್ಕರ ಹೊತ್ತಿಗೆ ಗಂಟೆ ಢಣ ಢಣ ಎನ್ನುವುದೇ ತಡ, ಗೇಟು ದಾಟಿ ಒಂದು ಫರ್ಲಾಂಗು ಓಡಿ ಆಗುತ್ತಿತ್ತು. ಏಕೆಂದರೆ, ನಾಲ್ಕೂವರೆ ಸರಿಯಾಗಿ ರೈಲು ಬರುತ್ತಿತ್ತು!. ಅದು ಕೂ ಎನ್ನುತ್ತಾ ಚುಕುಬುಕು ಸದ್ದು ಮಾಡುತ್ತಾ ದಟ್ಟ ಹೊಗೆ ಸೂಸುತ್ತಾ ಬರುವುದನ್ನು ನೋಡುವುದೇ ಚೆಂದ. ಅದು ಉಗಿಬಂಡಿ. ಇನ್ನು ರೈಲು ಬಂದಾಗ  ಕಿಟಕಿಯಿಂದ ಇಣುಕುತ್ತಿದ್ದವರಿಗೆ ಟಾಟಾ ಮಾಡುವುದೇ ಖುಷಿ. ರೈಲು ನೋಡುವ ಸಂಭ್ರಮ ಹೈಸ್ಕೂಲ್ ಮುಗಿಯೋ ತನಕ ಇತ್ತು. ಕಾಲೇಜಿಗೆ ಬಂದ ಮೇಲೆ ರೈಲು ನೋಡಲಾಗಲೇ ಇಲ್ಲ.

ಬಳಿಕ ರೈಲು ಪ್ರಯಾಣ ಮಾಡುವ ಅವಕಾಶ ಸಿಕ್ಕಿದ್ದು ಮದ್ವೆಯ ಬಳಿಕ. ನಮ್ಮನೆಯವರು ಹನಿಮೂನ್ ಗೆಂದು ಕೇರಳಕ್ಕೆ ರೈಲು ಬುಕ್ ಮಾಡಿದ್ದರು. ಅಲ್ಲಿಯವರೆಗೆ ರೈಲಲ್ಲಿ ಪ್ರಯಾಣಿಸದ ನಾನು ಹುಟ್ಟಿದ 27 ವರ್ಷಗಳ ಬಳಿಕ ರೈಲು ಹತ್ತಿದ್ದೆ. ಅದೂ ಮೆಜೆಸ್ಟಿಕ್ ನಲ್ಲಿ. ರೈಲನ್ನು ದೂರ ನಿಂತು ನೋಡಿದವಳಿಗೆ ಅಂದು ರೈಲಿನ ಒಳಗಡೆ ಹೋಗಿ ನೋಡುವ ತವಕ. ಕಿಟಕಿ ಬಳಿ ಕುಳಿತರೆ ಏನೆಲ್ಲಾ ನೋಡಬಹುದು, ನನಗೂ ದಾರಿಹೋಕರೆಲ್ಲಾ ಕೈ ಬೀಸಬಹುದು, ಹೊಲ ಗದ್ದೆಗಳನ್ನು, ಹಸಿರು ಹಾಸನ್ನು, ಮುಗಿಲ ಚಿತ್ತಾರವನ್ನು ನೋಡುತ್ತಾ ಹೋಗಬಹುದು. ಎಲ್ಲವನ್ನೂ ನೆನೆಸಿಕೊಂಡು ಮನಸ್ಸು ಖುಷಿಪಡುತ್ತಿತ್ತು. ಮದ್ವೆಯಾಗಿ ಹನಿಮೂನ್ ಗೆ ಹೋಗ್ತೀವಿ ಅನ್ನೋ ಖುಷಿಗಿಂತಲೂ ರೈಲಿನೊಳಗೆ ಏನೇನು ಅಚ್ಚರಿ, ಅದ್ಭುತಗಳಿವೆ ಎಂಬ ಬಗ್ಗೆ ನಾನು ಹೆಚ್ಚು ಕುತೂಹಲಗೊಂಡಿದ್ದೆ.

ರೈಲು ಹತ್ತಿಯಾಯಿತು. ಕಿಟಕಿ ಬದಿಯ ಸೀಟು ಗಿಟ್ಟಿಸಿಕೊಂಡಾಯ್ತು. ಆದರೆ, ಸ್ಲಿಪರ್ ಕೋಚ್ ಆಗಿದ್ದರಿಂದ ನಮ್ಮನೆಯವರು ನೀನು ಕೆಳಗಡೆ ಮಲಗು, ನಾನು ಮೇಲೆ ಮಲಕ್ಕೊಳ್ತಿನಿ ಅಂದ್ರು. ನನಗೆ ಭಯ ಶುರು. ನಿದ್ದೆ ಮಾಡಿದಾಗ ಯಾರಾದ್ರೂ ಕಳ್ಳರು ಬಂದ್ರೆ ಏನು ಗತಿ? ಕಣ್ಣುಗಳು ಕೊಳಗಳಾದವು. ಎಷ್ಟು ಸಮಾಧಾನ ಹೇಳಿದ್ರೂ ಕೇಳದೆ, ಅವರನ್ನು ಪಕ್ಕ ಕೂರಿಸಿಕೊಂಡು ಅಂಟಿಕೊಂಡು ಕುಳಿತುಬಿಟ್ಟಿದ್ದೆ. ಬಾತ್ ರೂಂಗೆ ಹೋಗಕೂ ಭಯ. ಹೇಗೋ ಬೆಳಗಾಯ್ತು. ಕೆಲವರು ರೈಲಿನ ಬಾಗಿಲಲ್ಲಿ ನಿಂತು ಎಲ್ಲವನ್ನೂ ನೋಡುತ್ತಾ, ಕೈ ಬೀಸುತ್ತಾ ಸಾಗುವಾಗ ಬಿದ್ದುಬಿಟ್ಟರೆ? ಎಂದು ನಾನೇ ಆತಂಕಗೊಳ್ಳುತ್ತಿದ್ದೆ. ಬೆಳಿಗ್ಗೆ 10ರ ಹೊತ್ತಿಗೆ ಕೊಚ್ಚಿನ್ನಲ್ಲಿ ಇಳಿದಾಗ ಮನಸ್ಸು ನಿರಾಳವಾಯಿತು.

                                                             ********
ಇನ್ನೊಂದು ಮೈಸೂರಿಗೆ ರೈಲಿನಲ್ಲಿ ಪ್ರಯಾಣ. ಅಂದು ಸಿಕ್ಕಿದ್ದು ಸಾಮಾನ್ಯ ಬೋಗಿ. ರೈಲು ಸಹವಾಸಬೇ ಬೇಡ ಅನಿಸಿದ್ದು ಆವಾಗ. ಎದುರುಗಡೆ ಏಳೆಂಟು ಹೆಂಗಸರು, ಪಕ್ಕದಲ್ಲಿ ಕಚ್ಚೆ ಹಾಕಿದ ರೈತರು. ಪದೇ ಪದೇ ವೀಳ್ಯದೆಲೆ ಜಗಿದು ಕಿಟಕಿ ಬದಿಯಲ್ಲಿ ಕುಳಿತು ಮೌನವಾಗಿದ್ದ ನನ್ನ ಸ್ವಲ್ಪ ಪಕ್ಕ ಸರೀಮ್ಮಾ ಎಂದೇಳಿ ಕ್ಯಾಕರಿಸಿ ಉಗಿಯೋರು. ಎದುರುಗಡೆ ಕುಳಿತ ಹೆಂಗಸರ ಬಾಯಲ್ಲಂತೂ ಊರ ಸುದ್ದಿ, ಸೀರಿಯಲ್ ಗಳು ಎಲ್ಲವೂ ತೂರಿ ಬಂದವು. ಮೈಸೂರು ತಲುಪುವವರೆಗಿನ ಆ ಮೂರು ಗಂಟೆಗಳು ನನಗೆ ಅತ್ಯಂತ ಕಷ್ಟದ ಸಮಯವಾಗಿತ್ತು.
                                                               *********
ಇನ್ನೊಂದು ಮೈಸೂರಿನಿಂದ ವಾಪಸ್ ಬರುವ ಪ್ರಸಂಗ.  ಜನರಲ್ ಬೋಗಿ ಕಿರಿಕಿರಿ ಬೇಡೆಂದು ಮೊದಲೇ ಟಿಕೆಟ್ ಕಾಯ್ದಿರಿಸಲಾಗಿತ್ತು. ಕಾರ್ಯಕ್ರಮಗಳೆಲ್ಲಾ ಮುಗಿಸಿ ಸೂರ್ಯ ಮುಳುಗುವ ಹೊತ್ತಿಗೆ ರೈಲು ಪ್ರಯಾಣಕ್ಕೆ ಸಿದ್ಧಳಾಗಿದ್ದೆ. ರೈಲು ತಡವಾಗಿ ಬಂದಿದ್ದರಿಂದ ನೂಕುನುಗ್ಗಲು. ಎಲ್ಲರೂ ಎಲ್ಲರನ್ನೂ ದೂಡಿ, ಒದ್ದು ಸಾಗುವವರೇ. ನಮ್ಮನೆಯವರು ನನ್ನ ಕೈಹಿಡಿದುಕೊಂಡು ನನ್ನನ್ನೂ ಎಳೆದುಕೊಂಡು ರೈಲು ಹತ್ತಲು ಅಣಿಯಾದರು. ಆದರೆ, ಜನಸಂದಣಿಯಲ್ಲಿ ನನ್ನ ಕೈ ತಪ್ಪಿ ನಾನು ಕೆಳಗಡೆಯೇ ಬಾಕಿಯಾದೆ. ಮತ್ತೆ ನಮ್ಮವ್ರು ನನ್ನ ಹುಡುಕಿಕೊಂಡು ವಾಪಸ್ ಬಂದಾಗ ಅಳುತ್ತಾ ಕೆಳಗಡೆಯೇ ನಿಂತಿದ್ದೆ. ಅಷ್ಟೊತ್ತಿಗೆ ರೈಲು ಚಲಿಸಲು ಆರಂಭಿಸಿತ್ತು!

                                                                 *********
ಈಗ ನಮ್ಮೂರಿಗೂ ರೈಲು ಬರುತ್ತಿದೆ. ಆದರೆ, ಸೀಟು ಸಿಗೋದೇ ಕಷ್ಟ. ಶಿರಾಡಿಘಾಟ್ ನಲ್ಲಿ ಬಸ್ ಗಳಲ್ಲಿ ಓಲಾಡಿಕೊಂಡು ಹೋಗುವ ನನಗೆ ಶಿರಾಡಿಘಾಟ್ ನ ಹಸಿರು ತಪ್ಪಲಲ್ಲಿ ಹಗಲಿನಲ್ಲಿ ರೈಲಿನಲ್ಲಿ ಪ್ರಯಾಣಿಸಬೇಕೆನ್ನುವ ಆಸೆಯಿದೆ.

Thursday, October 4, 2012

ಅಮ್ಮನಿಗೆ ವಯಸ್ಸಾಗುತ್ತಿದೆ...




ಕಣ್ಣುಗಳು ಆಳಕ್ಕೆ ಇಳಿದಿದ್ದವು. ಕೆನ್ನೆಗಳೂ ಕಾಣಲಿಲ್ಲ, ಕೆನ್ನೆ ಮೇಲಿದ್ದ ಗುಳಿಯೂ ಮಾಯವಾಗಿತ್ತು. ವೀಳ್ಯದೆಲೆ ತಿಂದು ಬಾಯಿ ಕೆಂಬಣ್ಣಕ್ಕೆ ತಿರುಗಿತ್ತು. ಹಲ್ಲುಗಳೂ ಇರಲಿಲ್ಲ. ಬೊಕ್ಕು ಬಾಯಿ ಅಗಲಿಸಿ ನಕ್ಕಾಗ ಮಗುವಿನಂತೆ ಕಂಡಳು. ಮಕ್ಕಳು ಬಿಟ್ಟರೆ ಇನ್ಯಾವ ನೆನಪುಗಳೂ ಅವಳಿಗಿಲ್ಲ. ಒಂದೊಂದು ಸಲ ಮಗುವಿನಂತೆ ರಚ್ಚೆ ಹಿಡಿಯುತ್ತಾಳೆ, ಇನ್ನೊಂದು ಸಲ ಗಂಭೀರವಾಗಿ ಜಗಲಿ ಮೇಲೆ ಕುಳಿತು ತನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾಳೆ.

ಊರಿನ ಸೋಮನ ಅಮ್ಮಂಗೆ ವಿಧವಾ ವೇತನ, ಆಶ್ರಯ ಯೋಜನೆ ಜಾರಿಯಾಗಬೇಕಾದರೆ ಗ್ರಾಮ ಪಂಚಾಯ್ತಿಯಿಂದ ಹಿಡಿದು ತಾಲೂಕು ಕಚೇರಿ, ತಹಶೀಲ್ದಾರ್ ಅಂತ ಸುತ್ತಾಡಿದ್ದು ಅವಳೇ. ಊರಿನ ಹೆಂಗಳೆಯರ ಮಧ್ಯದಲ್ಲಿ ನಾಯಕಿಯಾಗಿ ಮೆರೆದವಳು ಅವಳೇ. ಅವರ ಸಮಸ್ಯೆ, ದೂರು-ದುಮ್ಮಾನಗಳನ್ನು ತಂದು ಹರವಿದರೆ ಅದಕ್ಕೆ ಪರಿಹಾರ ಸೂಚಿಸುವವಳು ಅವಳೇ. ಐದು ಎಕರೆ ಜಮೀನಿನಲ್ಲಿ ತೆಂಗು-ಕಂಗು, ಬಾಳೆಗಳನ್ನು ನೆಟ್ಟು ನಿತ್ಯ ಅವುಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದಳು. ಮುಂಜಾವು ಹೊತ್ತಿಗೇ ಎದ್ದು ದನಕರುಗಳನ್ನು ತೊಳೆದು, ಹಾಲು ಕರೆದು, ಗಂಜಿ ಕುಡಿದು ತೋಟಕ್ಕೆ ಹೋದರೆ ಸೂರ್ಯ ಮೇಲೇರುವ ಹೊತ್ತಿಗೆ ವಾಪಸ್ ಬರುತ್ತಿದ್ದಳು. ಅನ್ನ-ಹಸಿವು, ನೀರಡಿಕೆಗಳ ಗುಂಗಿಲ್ಲದೆ ತನ್ನ ಕೆಲಸದಲ್ಲೇ ದೇವರನ್ನು ಕಂಡವಳು ಅವಳು. ಕೂಲಿ-ನಾಲಿಗೆ ಹೋಗುವುದು ಅವಮಾನವೆಂದು ಬಗೆದು ತನ್ನ ತೋಟವನ್ನೇ ನಂದನವನ ಆಗಿಸಿ, ಬಟ್ಟಲು ಅನ್ನ ಸಂಪಾದಿಸಿದವಳು.

ಗಂಡ ಬಿಟ್ಟು ಇನ್ನೊಬ್ಬಳ ತೆಕ್ಕೆ ಸೇರಿದಾಗ ಅತ್ತು-ಕರೆದು ರಂಪ ಮಾಡಿ ಹೋದದ್ದು ಹೋಯಿತು, ಮಕ್ಕಳ ನಗುವಿನಲ್ಲೇ ನನ್ನ ಸುಖವಿದೆ ಎಂದುಕೊಂಡವಳು. ಮಗ ಹೊಸ ಕೊಡೆ, ಹೊಸ ಬಟ್ಟೆ ಬೇಕೆಂದಾಗ ಕಿವಿಯೋಲೆ ಅಡವಿಟ್ಟು ಬಣ್ಣದ ಕೊಡೆ ತಂದವಳು. ಪ್ರತಿಷ್ಠಿತ ಕಾಲೇಜಿನಲ್ಲಿ ಮಕ್ಕಳಿಗೆ ಸೀಟು ಸಿಗಬೇಕೆಂದು ತಿಂಗಳುಗಟ್ಟಲೆ ಬಿರುಬಿಸಿಲಿಗೂ ನಡೆದರೂ ದಣಿವಾಗದವಳು. ಅಕ್ಷರಗಳ ಅರಿವಿಲ್ಲದೆಯೇ ಕಾನೂನು, ಲೋಕಜ್ಞಾನ ಪಡೆದವಳು.

ಅಮ್ಮಾ..ಎಂದಾಗ "ಮಗಳೇ' ಎನ್ನುವ ಪುಟ್ಟ ನಗು ಮುಖದಲ್ಲಿ. ನಮಗೆ ಎಲ್ಲವನ್ನೂ ಅರ್ಥಮಾಡಿಸಿದ ಅವಳಿಗೆ ಇಂದು ಏನೂ ಅರ್ಥವಾಗುವುದಿಲ್ಲ. ನೆನಪುಗಳು ಮಾಸಿಹೋಗುತ್ತಿವೆ. ಉಂಡಿದ್ದು, ನಕ್ಕಿದ್ದು, ಮಾತಾಡಿದ್ದು ಎಲ್ಲವೂ ಅರೆಕ್ಷಣದ ನೆನಪುಗಳು. ವಯಸ್ಸನ್ನು ಹಿಡಿದು ನಿಲ್ಲಿಸೋಣ ಅಂದ್ರೆ ಅದೂ ಕೈಲಾಗುತ್ತಿಲ್ಲ. ಅಮ್ಮ ವಯಸ್ಸಿನೊಂದಿಗೆ ನಡೆಯುತ್ತಿದ್ದಾಳೆ.

Saturday, August 25, 2012

ಅಮ್ಮನ ತಿಜೋರಿ


ಅಮ್ಮ ಮೊದಲ ಬಾರಿ ಆ ಪೆಟ್ಟಿಗೆ ತೆರೆದಿದ್ದು ನೆನಪಿದೆ. ಅಂದು ಅಮ್ಮ ನಸುಕೆಂಪು ಬಣ್ಣದ ನೈಲಾನ್ ಸೀರೆ ಉಟ್ಟಿದ್ದಳು. ಅದು ಬೇಸಿಗೆಕಾಲವಾಗಿತ್ತು. ಏಣಿ ಹತ್ತಿ ಅಟ್ಟದಿಂದ ಆ ಪೆಟ್ಟಿಗೆಯನ್ನು ತಂದು ಮನೆಯ ಜಗಲಿಯಲ್ಲಿ ಇಟ್ಟಳು. ಪೆಟ್ಟಿಗೆ ಮೇಲೆ ತುಂಬಿದ ಮಸಿ, ಧೂಳನ್ನು ಬಟ್ಟೆಯಿಂದ ಒರೆಸಿ, ಸೆರಗಿನಲ್ಲಿದ್ದ ಬೀಗದ ಕೀಯಿಂದ ಪೆಟ್ಟಿಗೆ ತೆರೆದಳು. ನಾನು ಕಾಲು ಮಡಿಚಿ ಅದನ್ನೇ ಎವೆಯಿಕ್ಕದೆ ನೋಡುತ್ತಿದ್ದೆ. ತೆರೆಯುವ ಮೊದಲೇ ಯಾವುದಕ್ಕೂ ಕೈ ಹಾಕಬೇಡ ಎಂದು ಆದೇಶ ಹೊರಡಿಸಿದ್ದಿರಿಂದ ನಾನು ಕೈ-ಕಾಲು ಬಿಗಿಹಿಡಿದು ಸುಮ್ಮನೆ ಕೂರಬೇಕಾಗಿತ್ತು.

ಅಮ್ಮನ ಬಳಿ  ಇದ್ದಿದ್ದು ಕಬ್ಬಿಣದ ಪೆಟ್ಟಿದೆ.  ಅದಕ್ಕೆಕೆಂಪು ಮತ್ತು ಹಸಿರು ಬಣ್ಣ ಬಳಿಯಲಾಗಿತ್ತು. ಅದರ ಬೀಗದ ಚಿನ್ನದ ಬಣ್ಣ. ದೊಡ್ಡ ಬೀಗ ಅದು. ಅದರ ಕೀ ಯಾವಾಗಲೂ ಅಮ್ಮನ ಸೆರಗಿನ ಗಂಟಿನಲ್ಲಿರುತ್ತಿತ್ತು. ಎಲ್ಲೇ ಹೋದರೂ ಅಮ್ಮ ಅದನ್ನು ಜೊತೆಗೆ ಕೊಂಡೊಯ್ಯುವಳು. ಅಂಗಡಿಗೆ, ಪಕ್ಕದ್ಮನೆಗೆ, ಸಂತೆಗೆ ಹೋದಾಗಲೆಲ್ಲಾ ಸೆರಗಿನಲ್ಲಿದ್ದ ಆ ಕೀಯನ್ನು ಪದೇ ಪದೇ ಮುಟ್ಟಿ ನೋಡುತ್ತಿದ್ದಳು. ಅದ್ಯಾಕೆ ಸೆರಗಿನಲ್ಲಿ ಇಟ್ಟುಕೊಳ್ತೀಯಾ ಎಂದು ಕೇಳಿದರೆ, ಬಿದ್ದುಹೋದರೆ ನನ್ನ ಜೀವನನೇ ಮುಗಿದಂತೆ. ಅದಕ್ಕೆ ಯಾವಾಗಲೂ ಜೊತೆಗೆ ಇಟ್ಟುಕೊಳ್ಳುತ್ತೇನೆ ಎನ್ನುವ ಸಮಜಾಯಿಷಿ ಆಕೆಯದು.

ತೆರೆದಾಗ ಮೊದಲು ತೋರಿಸಿದ್ದು ಅಮ್ಮನ ಮದುವೆ ಸೀರೆ. ಅವಳ ಮದುವೆಗೆ ಎರಡೇ ಸೀರೆ ತೆಗೆದಿದ್ದಂತೆ. ಅಮ್ಮ ಮದ್ವೆಗೆ ಖರ್ಚಾಗಿದ್ದು ಕೇವಲ 103 ರೂಪಾಯಿ. ಮದ್ವೆಗೆ ಏನೇನು ಖರ್ಚು ಮಾಡಿದ್ದೆ ಎಂದು ಅದನ್ನು ಲೆಕ್ಕ ಬರೆಸಿಟ್ಟಿದ್ದಳು. ಅವಳ ಮದ್ವೆಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನೂ ಹಸಿರು ಬಣ್ಣದ ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿಸಿಟ್ಟಿದ್ದಳು. ಮತ್ತೊಂದು ಬಿಳಿ ಬಣ್ಣದ ಕವರ್ ತೆಗೆದಳು. ಅದರಲ್ಲಿ ಏನೇನೋ ದಾಖಲೆಗಳು, ರಸೀದಿಗಳು ತುಂಬಿದ್ದವು. ನೋಡು ಓದು. ಎಂದು ಕೊಟ್ಟಳು. "ತೆರಿಗೆ'' ಎಂದು ಬರೆದಿತ್ತು. ಅದನ್ನು ಹಾಗೇ ಓದಿ ಹೇಳಿದಾಗ, ಅಮ್ಮ ಅದು ಮನೆ ತೆರಿಗೆ ಕಟ್ಟಿದ ರಸೀದಿ,  ಮನೆಗೆ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು..ಎಂದು ಅದರ ವಿವರಗಳನ್ನು ನೀಡಿದಳು. ಮತ್ತೆ ಇನ್ನೊಂದು ಕೆಂಪು ಬಣ್ಣದ ಕವರ್ ತೆಗೆದಳು; ಅದರಲ್ಲಿ ಜಮೀನಿಗೆ ಸಂಬಂಧಿಸಿದ ದಾಖಲೆಗಳು ಇದ್ದವು...ಹೀಗೆ ಪ್ರತಿ ಕವರ್ ಕೂಡ ಬೇರೆ ಬೇರೆ ಬಣ್ಣ ಹೊಂದಿರುತ್ತಿತ್ತು, ಅಮ್ಮ ಕವರಿನ ಬಣ್ಣದ ಮೇಲೆಯೇ ಅದೇನೆಂದು ಗುರುತು ಇಟ್ಟುಕೊಂಡಿದ್ದಳು. ಜೊತೆಗೆ, ಆ ಕವರ್ ಗಳನ್ನು ಅಷ್ಟೇ ಶಿಸ್ತಿನಿಂದ ಇಟ್ಟುಕೊಳ್ಳುತ್ತಿದ್ದಳು. ಅಮ್ಮನ ಬಳಿ ಅವಳ ಮದ್ವೆಯ ಫೋಟೋ ಇರಲಿಲ್ಲ, ಆದರೆ, ಅಮ್ಮನ ಅಪ್ಪ ಎಂದರೆ ಅಜ್ಜನ ವಿಭಿನ್ನ ಭಂಗಿಯ ಚೆಂದದ ಫೋಟೋಗಳಿದ್ದವು. ಅವುಗಳು ಹಾಳಾಗದಂತೆ ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿಸಿಟ್ಟಿದ್ದಳು.

ಅಜ್ಜನ ಮೇಲೆ ಅಮ್ಮಂಗೆ ಅಪಾರ ಪ್ರೀತಿ. "ನಾನು ನನ್ನಪ್ಪನ ತರ' ಎನ್ನುವಳು. ಪದೇ ಪದೇ ಅಜ್ಜನ ಫೋಟೋ ನೋಡಿ ಖುಷಿಪಡುವಳು. ಜೊತೆಗೆ, ಅಜ್ಜನ ಜೊತೆ ಬೇಟೆಗೆ ಹೋಗಿದ್ದು, ಕಳ್ಳು ತೆಗೆಯಲು ಹೋಗಿದ್ದು, ಗದ್ದೆಗೆ ಉಳಲು ಹೋಗಿದ್ದು, ಅಜ್ಜ ಹೊಡೆದಿದ್ದು, ಹೆಗಲ ಮೇಲೆ ಕೂರಿಸಿಕೊಂಡು ಹೋಗಿದ್ದು, ಕಳ್ಳಭಟ್ಟಿ ಮಾಡಿ ಅಜ್ಜ ಪೊಲೀಸರಿಗೆ ಸಿಕ್ಕಿಬಿದ್ದಾಗ...ಅಮ್ಮನೇ ಬಿಡಿಸಿಕೊಂಡು ಬಂದಿದ್ದು...ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದಳು. ಅಜ್ಜನ ಬಗ್ಗೆ ಹೇಳುವಾಗಲೆಲ್ಲಾ ಅಮ್ಮನ ಕಣ್ಣುಗಳಲ್ಲಿ ಹೆಮ್ಮೆಯ ಭಾವ ಒಡಮೂಡುತ್ತಿತ್ತು. ಅಮ್ಮನ ಕಬ್ಬಿಣದ ಪೆಟ್ಟಿಗೆ ಈಗಲೂ ಇದೆ. ಐವತ್ತೈದು ದಾಟಿದ ಅಮ್ಮ ಈಗಲೂ ಪೆಟ್ಟಿಗೆಯನ್ನು ಜೋಪಾನವಾಗಿಟ್ಟಿದ್ದಾಳೆ.




Sunday, July 29, 2012

ನಮ್ಮನೆಗೆ ಟಿವಿ ಬಂತು!



ನಮ್ಮನೆಗೆ ಟಿವಿ ಬಂತು ಎಂದು ಹೇಳೋದು ಎಂಥ ವಿಚಿತ್ರ ಸುದ್ದಿ ಎಂದು ಅನಿಸುತ್ತೆ ಅಲ್ವೇ? ಈಗ ಯಾರ ಮನೆಯಲ್ಲಿ ಟಿವಿ, ಕಂಪ್ಯೂಟರ್ ಇಲ್ಲ ಅಂತ ಕೇಳ್ತೀವಿ. ಆದರೆ, ಪುತ್ತೂರಿನ ಪುಟ್ಟದೊಂದು ಹಳ್ಳಿ ಕಳೆಂಜೋಡಿ ಎಂಬಲ್ಲಿಗೆ ಮೊನ್ನೆ ಮೊನ್ನೆ ಕರೆಂಟು ಬಂತು. ಅಲ್ಲಿ ಇದ್ದಿದ್ದು 12 ಮನೆಗಳು ಮಾತ್ರ. ಪುಟ್ಟ ದ್ಬೀಪ ತರ ಇತ್ತು. ಸುತ್ತಮುತ್ತ ದಟ್ಟ ಕಾಡು., ಕರೆಂಟು ಕಂಬ ಹಾಕೋದೇ ಕಷ್ಟ ಅನ್ತಾ ಇದ್ರು. ಆದರೆ. ತಿಂಗಳ ಹಿಂದೆ ನಮ್ಮ ಹಳ್ಳಿಗೆ ಕರೆಂಟು ಬಂದಿದೆ. ಸರ್ಕಾರಿ ಯೋಜನೆಯಡಿಯಲ್ಲಿ ಮನೆಗಳಲ್ಲಿ ಎರಡು ಮೂರು ವಿದ್ಯುತ್ ದೀಪ ಬೆಳಗುತ್ತಿದೆ. ಚಿಮಿಣಿ ದೀಪ ನೋಡಿದ ಇಲ್ಲಿನ ಹೆಂಗಸರಿಗೆಲ್ಲಾ ಫುಲ್ ಖುಷಿ. ದಟ್ಟಕಾಡಿನ ನಡುವೆ ಪುಟ್ಟ ಪುಟ್ಟ ತೋಟಗಳ ನಡುವೆ ಇದ್ದ ಮನೆಗಳಲ್ಲಿ ಮೂರ್ನಾಲ್ಕು ಚಿಮಿಣಿ ದೀಪಗಳು. ಬೀಡಿ ಸುರುಟುವ ಹೆಂಗಸರೆಲ್ಲಾ ಈ ಚಿಮಿಣಿಗಳನ್ನೇ ಅವಲಂಬಿಸಿದ್ದರು. ಎಷ್ಟೊ ಬಾರಿ ನಿದ್ದೆಗಣ್ಣಿನಲ್ಲಿ ಬೀಡಿ ಸುರುಟುತ್ತಿರುವಾಗ ಆ ದೀಪ ಹಾಗೇ ಬಿದ್ದು, ಬೀಡಿಗಳೆಲ್ಲಾ ಸೀಮೆಎಣ್ಣೆ ವಾಸನೆ ಬಂದು ಆ ಬೀಡಿಗಳೇ ವ್ಯರ್ಥ ಆಗುತ್ತಿದ್ದವು. ಈಗ ಹೆಂಗಳೆಯರೆಲ್ಲಾ ವಿದ್ಯುತ್ ದೀಪ ದಡಿಯಲ್ಲಿ ಬೀಡಿ ಸುರುಟುತ್ತಿದ್ದಾರೆ.

ನನ್ನ ತಮ್ಮಾಇಂದು ಬೆಳ್ಳಂಬೆಳಿಗ್ಗೆ ಫೋನು ಮಾಡಿದ್ದ. ಹಲೋ ಅನ್ನೋಕೆ ಮೊದಲೇ ಅಕ್ಕಾ ಟಿವಿ ಬಂತು ಅಂದ. ಕೇಬಲ್ ಹಾಕಿಸಿದ್ಯಾ? ಅಂತ ಕೇಳಿದೆ. ಎಲ್ಲಾ ಹಾಕಿಸಿದ್ದೀನಿ ಅಂದ. ಮೊದಲು ನನಗೆ ಮಾತೇ ಹೊರಡಲಿಲ್ಲ. ನನ್ನ ತಮ್ಮ ಮತ್ತು ನಾನು ಒಂದ್ಸಲ ಪಕ್ಕದೂರ ಗೌಡ್ರ ಮನೆಗೆ ಟಿವಿ ಬಂದಾಗ ಅದನ್ನು ನೋಡಲು ಅಲ್ಲಿಗೆ ಹೋಗಿದ್ದು ನೆನಪಾಯಿತು ನಮ್ಮ ಹಳ್ಳಿ ದಾಟಿ ಗೌಡ್ರ ಮನೆಗೆ ಹೋಗಬೇಕಿತ್ತು. ಆಗ ನನ್ನ ವಯಸ್ಸಿನ್ನೂ ಹತ್ತು ದಾಟಿರಲಿಲ್ಲ. ಊರಿನವರೆಲ್ಲಾ ಟಿವಿ ನೋಡಲು ಬರುತ್ತಿದ್ದರು. ಮಕ್ಕಳಂತೂ ಗೌಡ್ರ ಮನೆಯ ವರಾಂಡದಲ್ಲಿ ಎದುರು ಸಾಲಿನಲ್ಲಿ ಚಾಪೆ ಹಾಸಿ ಕೂರುತ್ತಿದ್ದರು.ನನ್ ತಮ್ಮ ಫೋನ್ ಮಾಡಿದಾಗ ಎಲ್ಲವೂ ಒಮ್ಮೆಲೇ ನೆನಪಾಯಿತು.

ಟಿವಿ ಬಂದ ಖುಷಿಯನ್ನು ಅಮ್ಮಂಗೆ ಕೇಳೋಣ ಅನಿಸ್ತು. ಅಮ್ಮಾ, ಫುಲ್  ಖುಷೀನಾ ಅಂಥ ಕೇಳಿದೆ. ಅದಕ್ಕೆ ಅಮ್ಮಾ, ಏನು ಸೌಂಡು ಮಗಾ, ನನಗೆ ತಲೆ ಧಿಮ್ ಅನ್ಯಾ ಇದೆ. ನಿನ್ನೆಯಿಂದ ಮನೆಯಲ್ಲಿ ಜಾತ್ರೆ. ಏನೇನೋ ಹಾಕ್ತಾನೆ...ನೋಡ್ತಾರೆ. ನನಗಿನ್ನೂ ಅಭ್ಯಾಸವಾಗಬೇಕು ಅಂದ್ರು. ಮೊದಲೇ ಬಿಪಿ ಪೇಶೆಂಟು ಆಗಿರುವ ಅಮ್ಮಂಗೆ ಮೊದಲೇ ಗಜಿಬಿಜಿ, ಸದ್ದು&ಗದ್ದಲ ಆಗೋಲ್ಲ. ಸರಿ ಹೋಗುತ್ತೆ ಬಿಡಮ್ಮಾ ಅಂದೆ. ನಮ್ಮನೆಗೆ ಟಿವಿ ಬಂತು ಅಂಥ (ನಮ್ ಜನರೇಷನ್) ಕೇಳುವ ಸುದ್ದಿ ನಿಮಗೆ ಏನನಿಸಿತ್ತು?

Tuesday, May 29, 2012

ಪ್ರಜಾವಾಣಿಯಲ್ಲಿ "ಧರಿತ್ರಿಯ ಚಿತ್ರಗಳು "



ಧರಿತ್ರಿ! ಇದು ಬ್ಲಾಗ್ ಹೆಸರು. ಇಲ್ಲಿನ ಬರಹಗಳಿಗೆ ಬಂದಿರುವ ಕಮೆಂಟುಗಳನ್ನು ಆಧರಿಸಿ ಹೇಳುವುದಾದರೆ ಬ್ಲಾಗಿತಿಯ ಹೆಸರು ಚಿತ್ರಾ. ತಮ್ಮ ಬಗ್ಗೆ ಹೆಚ್ಚೇನೂ ಹೇಳಿಕೊಳ್ಳದ ಚಿತ್ರಾ- `ನನ್ನೂರು ಕರಾವಳಿ ತೀರ. ಅಮ್ಮ, ಬದುಕು, ಪ್ರೀತಿ ಅಂದ್ರೆ ಅಕ್ಕರೆ` ಎಂದು ಸಕ್ಕರೆಯಂತೆ ಮಾತನಾಡಿ ಸುಮ್ಮನಾಗುತ್ತಾರೆ. 


ಕರಾವಳಿ ತೀರದ ಈ ಹೆಣ್ಣುಮಗಳು ಈಗ ಬೆಂಗಳೂರು ನಿವಾಸಿ ಎನ್ನಲಿಕ್ಕೆ ಅವರ ಬರಹಗಳೇ ಸಾಕ್ಷಿಯಾಗಿವೆ. ಮಲ್ಲೇಶ್ವರದಲ್ಲಿ ಕೊಂಡ ಅವರ ಕೊಡೆಗೀಗ ಮೂರನೇ ಮಳೆಗಾಲವಂತೆ. ಬೆಂಗಳೂರಿನಲ್ಲಿ ಬಿಸಿಲನ್ನೇ ಹೆಚ್ಚು ನೋಡಿರುವ ಅವರ ಕೊಡೆ, ಈಚೆಗೆ ಮಂಗಳೂರಿಗೆ ಹೋಗಿದ್ದಾಗ ಭರ್ಜರಿ ಮಳೆಯಲ್ಲಿ ಒದ್ದೆಯಾಯಿತಂತೆ. 


ಬೆಂಗಳೂರಿನ ಕೊಡೆ ಮಾತ್ರವಲ್ಲ, ಬಾಲ್ಯದ ದಿನಗಳ ಬಗೆಬಗೆ ಕೊಡೆಗಳ ಬಗ್ಗೆಯೂ ಅವರ ನೆನಪಿನ ಲಹರಿ ಹರಿದಿದೆ. ಯಜಮಾನರ ರೇನ್‌ಕೋಟ್ ಬಗ್ಗೆಯೂ ಚಿತ್ರಾ ಆಪ್ತವಾಗಿ ಬರೆದಿದ್ದಾರೆ. ಆಪ್ತತೆ ಯಾಕೆಂದರೆ, ಅದು ಅಪ್ಪ ಕೊಡಿಸಿದ ರೇನ್‌ಕೋಟು!


`ಬೆಳಗು ಇಬ್ಬನಿಯ ನಗು ಚೆಂದ`, `ಜೀವನ ಪ್ರೀತಿಯ ಅನುಭೂತಿ` ಎನ್ನುವುದು `ಧರಿತ್ರಿ` (http://dharithrick.blogspot.in) ಶೀರ್ಷಿಕೆಯ ಅಡಿಬರಹಗಳು. ಇಬ್ಬನಿಯ ನಗು ಮತ್ತು ಜೀವನ ಪ್ರೀತಿ ಎರಡರ ಆರ್ದ್ರತೆಯೂ ಅವರ ಬರಹಗಳಲ್ಲಿದೆ. ಊರಿನ ನೆನಪುಗಳು, ಅಲ್ಲಿನ ಜನ-ಜೀವನ, ಬೆಂಗಳೂರಿನಲ್ಲಿ ಕಂಡ ಚಿತ್ರಗಳು- ಹೀಗೆ ಚಿತ್ರಾ ಕಾಣಿಸುವ `ಭಾವಚಿತ್ರ`ಗಳು ಸಾಕಷ್ಟು. ಅವರ ಬರಹಕ್ಕೆ ಕಥನ ಗುಣವೂ ಇದೆ.


ಮಗಳ ಮಡಿಲು ತುಂಬಲೆಂದು ದೇವರುಗಳ ಪ್ರಾರ್ಥಿಸುತ್ತಿದ್ದ ಅಪ್ಪನನ್ನು ನೆನಪಿಸಿಕೊಳ್ಳುವ ಈ ಹೆಣ್ಣುಮಗಳು ಬರೆಯುತ್ತಾರೆ: “ಮೊನ್ನೆ ನಮ್ಮ ಮದುವೆಗೆ ಎರಡು ವರ್ಷ. ಕಳೆದ ವರ್ಷ ದೇವರ ಮನೆಯಲ್ಲಿ ಅಪ್ಪ-ಅಮ್ಮ ಇಬ್ಬರೂ ನಿಂತು ಅಕ್ಷತೆ ಹಾಕಿ ಹರಸಿದ್ದರು. ಈ ಬಾರಿ ಅಮ್ಮ ಒಬ್ಬಳೇ ಇದ್ದಳು! ವರಾಂಡದಲ್ಲಿದ್ದ ಅಪ್ಪನ ಫೋಟೋಗೆ ಮಲ್ಲಿಗೆ ಹಾರ ಹಾಕಿ ನಮಸ್ಕರಿಸಿದೆ. ನನ್ನ ಕಣ್ಣುಗಳು ಒದ್ದೆಯಾದವು. ಅಪ್ಪ ತುಟಿ ಬಿಚ್ಚಲಿಲ್ಲ, ಮೊಮ್ಮಗು ಎಲ್ಲಿ ಎಂದು ಕೇಳಲಿಲ್ಲ. ಕಪ್ಪಗಿನ ದಪ್ಪ ಕನ್ನಡಕದೊಳಗಿನಿಂದ ನನ್ನ ನೋಡಿದ. ಅಪ್ಪ ಕೋಪಿಸಿಕೊಂಡಿರಬೇಕೆಂದು ನಾನೂ ಮಾತಿಲ್ಲದೆ ಸುಮ್ಮನಾದೆ”. ವೇದನೆ ಹಾಗೂ ಪ್ರಾರ್ಥನೆ ಎರಡನ್ನೂ ಕಥೆಯ ಚೌಕಟ್ಟಿನೊಳಗೆ ಒಳಗೊಂಡ ಈ ಬರಹ ಓದುಗರ ಕಣ್ಣನ್ನೂ ಒದ್ದೆಯಾಗಿಸುತ್ತದೆ.


`ಭೂತಾಯಿಗೆ ಕಾಗೆ ಮುಟ್ಟುವುದು!`- `ಧರಿತ್ರಿ` ಕಣಜದಲ್ಲಿನ ಮತ್ತೊಂದು ಸೊಗಸಾದ ಬರಹ. ಚಿತ್ರಾ ಬರೆಯುತ್ತಾರೆ-
ಇವತ್ತು ಭೂತಾಯಿಗೆ ಕಾಗೆ ಮುಟ್ಟಿದೆ. ನೀವು ಜಾಸ್ತಿ ಜಗ್ಳ ಆಡಬಾರದು. ಜಗ್ಳ ಆಡಿದ್ರೆ ಭೂಮಿತಾಯಿ ಬೇಜಾರುಪಟ್ಕೊಳ್ತಾಳೆ... ಅಮ್ಮ ಬೆಳ್ಳಂಬೆಳಿಗ್ಗೆ ರೊಟ್ಟಿ ತಟ್ಟುತ್ತಾ ಹೇಳುತ್ತಿದ್ದಳು. ಒಲೆ ಮೇಲೆ ಕಲ್ಲಿನ ಕಾವಲಿಯಲ್ಲಿ ರೊಟ್ಟಿ ಬೇಯುತ್ತಿತ್ತು. ಮೊದಲ ರೊಟ್ಟಿ ನನಗೇ ಸಲ್ಲಬೇಕೆನ್ನುವುದು ತಮ್ಮನ ವಾದ. ಇದೇ ಸಿಟ್ಟಲ್ಲಿ ಒಲೆಯೊಳಗಿದ್ದ ಕಟ್ಟಿಗೆಯನ್ನು ಹಿಂದೆ-ಮುಂದೆ ಜಾರಿಸುತ್ತಿದ್ದ. ನನಗೆ ಕೊಡೆಂದು ಅಮ್ಮನ ಸೆರಗು ನಾನು ಹಿಡಿದುಕೊಂಡಿದ್ದೆ. 


ಅಮ್ಮನ ಮಾತು ಒಗಟು. ಅರೆ! ಕಾಗೆ ಮುಟ್ಟುವುದಕ್ಕೂ, ನಾವು ಜಗ್ಳ ಆಡೋದಕ್ಕೂ ಏನು ಸಂಬಂಧ? ಅಮ್ಮನ ಕೇಳಿಯೇ ಬಿಟ್ಟೆ.
`ನೋಡು ಪಕ್ಕದ್ಮನೆ ಲಲಿತಕ್ಕ ಕಾಗೆ ಮುಟ್ಟಿದೆ ಅಂತ ತಿಂಗ್ಳಲ್ಲಿ ಮೂರು ದಿನ ಹೊರಗಡೆ ಕೂರ‌್ತಾಳೆ. ಆಗ ಅವಳಿಗೆ ಅವ್ಳ ಅಮ್ಮ ಏನೂ ಕೆಲ್ಸ ಕೊಡಲ್ಲ. ಮನೆ ಹಿಂದಿನ ಕೋಣೆಯಲ್ಲಿ ಲಲಿತಕ್ಕ ಸುಮ್ಮನೆ ಮಲಗಿರ‌್ತಾಳೆ. ಹಂಗೆ, ಭೂಮಿತಾಯಿಗೂ ಕಾಗೆ ಮುಟ್ಟಿದೆ. ಅವಳಿಗೆ ನೋವು ಕೊಡಬಾರದು, ಸಿಟ್ಟು ಮಾಡಿ ಜಗಳ ಮಾಡಿಕೊಂಡ್ರೆ ಅವಳಿಗೆ ಬೇಜಾರಾಗುತ್ತೆ. ನೀವು ಸುಮ್ಮನಿರಬೇಕು` ಎಂದು ಹೇಳುತ್ತಿದ್ದಳು.


`ಹಾಗಾದ್ರೆ ಲಲಿತಕ್ಕನ ತರ ಭೂತಾಯಿಗೂ ತಿಂಗಳಿಗೊಮ್ಮೆ ಕಾಗೆ ಮುಟ್ಟುತ್ತಾ?` ತಮ್ಮನ ಮಾತು ಅಮ್ಮನನ್ನು ಪೇಚಿಗೆ ಸಿಲುಕಿಸಿತ್ತು. `ಮನುಷ್ಯರು ತಿಂಗಳಿಗೊಮ್ಮೆ, ಭೂತಾಯಿ ವರ್ಷಕ್ಕೊಮ್ಮೆ` ಎಂದಷ್ಟೇ ಹೇಳಿ, ನಮ್ಮಿಬ್ಬರಿಗೆ ಬೈದು ಸುಮ್ಮನಾಗಿಸುತ್ತಿದ್ದಳು. ಅಮ್ಮನ ಮಾತು ನಂಬಿದ ನಾವಿಬ್ಬರೂ ಜಗಳವಾಡದೆ ಸುಮ್ಮನಿರುತ್ತಿದ್ದೆವು. 
ವರ್ಷದಲ್ಲಿ ಒಂದು ಸಲ ಭೂತಾಯಿಗೆ ಕಾಗೆ ಮುಟ್ಟುತ್ತಿತ್ತು. ಅಮ್ಮ ತುಳಸಿ ಗಿಡದ ಪಕ್ಕದಲ್ಲಿ ಮಸಿಯಿಂದ ಚೌಕ ತರ ಮಾಡಿ, ಅಲ್ಲಿ ಸೀಗೆಕಾಯಿ, ಮಸಿ ತುಂಡು ಇಡುತ್ತಿದ್ದಳು. ನಾಲ್ಕನೇ ದಿನಕ್ಕೆ ಅದೇ ಜಾಗದಲ್ಲಿ ಸೆಗಣಿ ಸಾರಿ, ಬಾಳೆಲೆ ಹಾಕುತ್ತಿದ್ದಳು. ಬಳಿಕ ಅದರ ಮೇಲೆ ಎಣ್ಣೆ, ಅರಿಶಿನ, ಕುಂಕುಮ, ಬಳೆ, ಹೂವುಗಳನ್ನು ಇಟ್ಟು ಭೂಮಿಗೆ ಎಣ್ಣೆ ಬಿಡುತ್ತಿದ್ದಳು. `ಭೂಮಿತಾಯಿ ಸ್ನಾನ ಮಾಡಿಕೊಂಡು ಬಂದಿರ‌್ತಾಳೆ` ಎನ್ನುವ ಅಮ್ಮ, ಒಂದು ಎಲೆಯಲ್ಲಿ ರೊಟ್ಟಿ, ಸಾರು ಹಾಕಿಡುತ್ತಿದ್ದಳು. 
ಭೂತಾಯಿ ತಿಂದ ಮೇಲೆ ನಾವು ಅಂಗಳದಲ್ಲೇ ಕುಳಿತು ತಿನ್ನುತ್ತಿದ್ದೆವು. ತುಳುವಿನಲ್ಲಿ ಪುಯಿಂತೆಲ್ (ಮಕರ ಮಾಸ) ತಿಂಗಳಿನ ಕೊನೆಯ, ಅಂದ್ರೆ 27, 28, 29ನೇ ದಿನ ಕೆಡ್ಡಸ ಎಂದು ಆಚರಿಸುತ್ತಾರೆ. ಆ ಮೂರು ದಿನವೂ ಭೂಮಿತಾಯಿಗೆ ನೋವಾಗುವ ಯಾವುದೇ ಕೆಲಸಗಳನ್ನು ಅಮ್ಮ ಮಾಡುತ್ತಿರಲಿಲ್ಲ, ತೋಟದ ಕೆಲಸಗಳಿಗೆ ರಜೆ, ಹೊಲ ಗದ್ದೆಗಳಲ್ಲೂ ಹಾರೆ-ಗುದ್ದಲಿಗಳ ಸದ್ದಿಲ್ಲ. ಸಾಮಾನ್ಯವಾಗಿ ಜನವರಿ-ಫೆಬ್ರುವರಿ ತಿಂಗಳಲ್ಲಿ ಈ ಹಬ್ಬ ಬರುತ್ತದೆ. ಇಂದು ಅಮ್ಮನೂ ಕೆಡ್ಡಸ ಮರೆತುಬಿಡ್ತಾರೆ”.


ಇದು ಚಿತ್ರವತ್ತಾದ ಬರಹ ಅಲ್ಲವೇ?


"ಪ್ರಜಾವಾಣಿಗೆ ಥ್ಯಾಂಕ್ಸ್ "


http://prajavani.net/include/story.php?news=8495&section=56&menuid=13

Monday, April 30, 2012

ನನ್ನ ಕೊಡೆಗೆ ಮೂರನೇ ಮಳೆಗಾಲ

ನನ್ನ ಕೊಡೆಗೆ ಮೂರನೇ ಮಳೆಗಾಲ. ಬೆಂಗಳೂರಿನ ಬಿಸಿಲಿಗೆ ಬಾಡಿ ಬಸಳೆಯಂತೆ ಬಾಗುವ ಕೊಡೆ ಮಂಗಳೂರ ಮಳೆಗೆ ಖುಷಿ-ಖುಷಿಯಿಂದ ಕೆಂದಾವರೆಯಾಗಿದೆ. ಮೆರೂನ್ ಬಣ್ಣದ ಕೊಡೆ ನನ್ನದು. ೨೦೦೯ರ ಫೆಬ್ರುವರಿ ಕೊನೆಯ ವಾರ ಮಲ್ಲೇಶ್ವರಂನ ೮ನೇ ಕ್ರಾಸ್‌ನಲ್ಲಿ ಚೌಕಾಸಿ ಮಾಡಿ ತೆಕೊಂಡಿದ್ದೆ. ಮುನ್ನೂರು ಹೇಳಿದವ ಕೊನೆಗೆ ನೂರರ ಎರಡು, ಐವತ್ತರ ಒಂದು ನೋಟು ಕೊಟ್ಟಾಗ ಸುಮ್ಮನಾಗಿದ್ದ. ವಿಶೇಷ ಅಂದ್ರೆ ಅದು ನನ್ನ ಮದ್ವೆಗೆ ತೆಕೊಂಡ ಕೊಡೆ. ಎರಡು ಮಳೆಗಾಲದಲ್ಲಿ ಈ ಕೊಡೆ ನನಗೆ ಆಸರೆ ನೀಡಿದೆ.
ಮೊನ್ನೆ ಮೊನ್ನೆ ಏಪ್ರಿಲ್ ೨೬. ಮಂಗಳೂರಿಗೆ ಹೋಗಿದ್ದೆ. ಬೆಳ್ಳಂಬೆಳಿಗ್ಗೆಯೇ ಮಳೆಶುರುವಾಗಿತ್ತು. ಕದ್ರಿ ದೇವಾಲಯದ ಹತ್ತಿರದ ಸಣ್ಣ ಬೆಟ್ಟ ಹತ್ತುವಾಗಲೇ ಜೋರು ಮಳೆ ಬರಬೇಕೇ? ನನ್ನ ಮೆರೂನ್ ಕೊಡೆ ಬ್ಯಾಗಿನಿಂದ ಹೊರತೆಗೆದೆ.  ಬೆಂಗಳೂರಿನಲ್ಲಿ ಮಳೆಗಾಲಕ್ಕಿಂತ ಬರೀ ಬಿಸಿಲನ್ನೇ ನೋಡಿದ ನನ್ನ ಕೊಡೆ ಖುಷಿಯಿಂದ ಬಿಡಿಸಿಕೊಂಡಿತ್ತು. ಧಾರಾಕಾರ ಮಳೆ. ನಾನು-ನನ್ನವರು ಇಬ್ಬರಿಗೂ ಕೊಡೆಯ ಆಸರೆ. ಹೊಟೇಲ್ ರೂಮ್‌ನಲ್ಲಿ ಫ್ಯಾನ್ ಗಾಳಿಗೆ ಒಣಗಿಸಿ ಮತ್ತೆ ಮಡಚಿಟ್ಟಿದೆ. ಬೆಂಗಳೂರಿನಲ್ಲಿ ಎರಡು ಮೂರು ದಿನಗಳಿಂದ ಬರೀ ಮೋಡ. ಪುಟ್ಟ ಬ್ಯಾಗ್‌ನೊಳಗೆ ಬೆಚ್ಚಗೆ ಮಲಗಿರುವ ನನ್ನ ಕೊಡೆಗೆ ಮತ್ತೆ ಮತ್ತೆ ಜೋರುಮಳೆಗೆ ಮೈಯೊಡ್ಡುವ ತವಕ

*****


ನಮ್ಮವ್ರ ರೈನ್ ಕೋಟ್!
ಅಪ್ಪ ತಂದು ಕೊಟ್ಟ ರೈನ್‌ಕೋಟ್‌ಗೆ ಇದು ಎರಡನೇ ಮಳೆಗಾಲ. ಆಗೋಮ್ಮೆ-ಈಗೊಮ್ಮೆ ಬೀಳುವ ಬೆಂಗಳೂರ ಮಳೆಗೆ ಈ ಕೋಟ್ ಇನ್ನೂ ಪೂರ್ತಿ ಒದ್ದೆಯಾಗಿಲ್ಲ. ಈ ವರ್ಷವಾದರೂ ಮಳೆಯಲ್ಲಿ ನೆನೆಯುವ ಅದೃಷ್ಟ ರೈನ್‌ಕೋಟ್‌ಗೆ ಸಿಗಬಹುದೇನೋ ಎನ್ನುತ್ತಾರೆ ನಮ್ಮೆಜಮಾಜನ್ರು. ಬೆಳ್ಳಂಬೆಳಿಗ್ಗೆ ಆಕಾಶ ತುಂಬಾ ಕಪ್ಪುಮೋಡ ಮುಸುಕಿದ್ದನ್ನು ನೋಡಿ ಕೂಡಿಟ್ಟ ರೈನ್‌ಕೋಟ್ ಅನ್ನು ಕೊಟ್ಟು ಕಳಿಸಿದ್ದೀನಿ. ಆದರೆ, ದಿನ ಮೂರಾದರೂ ರೈನ್‌ಕೋಟ್ ಒದ್ದೆಯಾಗಿಲ್ಲ.

**-*-*-*-*-*-*-*-*-*

ಉದ್ದ ಕಾಲಿನ ದೊಡ್ಡ ಕೊಡೆ
ಸ್ಕೂಲ್‌ಗೆ ಹೋಗುತ್ತಿದ್ದಾಗ ಕೊಡೆಗೆ ಮನೆಯಲ್ಲಿ ಕುರುಕ್ಷೇತ್ರವೇ ನಡೆಯುತ್ತಿತ್ತು. ನನ್ನ ಬಣ್ಣದ ಕೊಡೆ ಬೇಕೆಂದು ತಮ್ಮನ ಹಠ. ಬಣ್ಣದ ಕೊಡೆ ಹುಡುಗಿಯರಿಗೆ ಮಾತ್ರ ಎಂಬ ನನ್ನ ತಿಳುವಳಿಕೆಯ ವಾದ.ಕೊನೆಗೆ ತಮ್ಮನದೇ ಕೈ ಮೇಲು. ನಾನು ಅವನ ಉದ್ದ ಕಾಲಿನ ದೊಡ್ಡ ಕೊಡೆ ಹಿಡಿದು ಹೊರಟರೆ, ತಮ್ಮ ಬಣ್ಣದ ಕೊಡೆ ಹಿಡಿದು ನಗುತ್ತಿದ್ದ.  ಬಸ್‌ನಲ್ಲಿ ಹೋಗುವಾಗ ದೊಡ್ಡ ಕೊಡೆ ನೋಡಿ ಕಂಡಕ್ಟರ್ ಕಿರಿ. ಊರುಗೋಲು ತರ ಹಿಡಿದುಕೊಂಡು ರಶ್‌ನಲ್ಲಿ ಬಸ್ ಹತ್ತಿದರೆ ಸಿಕ್ಕ ಸಿಕ್ಕವರಿಗೆಲ್ಲ ಕೊಡೆ ತಾಗುತ್ತಿತ್ತು. ಎಲ್ಲರದೂ ಬೈಗುಳವೇ. ಅದಕ್ಕೆ ಒಂದು ದಿನ ದೊಡ್ಡ ಕೊಡೆಯ ಕಡ್ಡಿ ಮುರಿದು ಅಮ್ಮಂಗೆ ಸುಳ್ಳು ಹೇಳಿದ್ದೆ. ಕೊಡೆಯ ಕಡ್ಡಿ ಮುರಿದಿದೆ. ನನಗೆ ಸ್ವಿಚ್ ಕೊಡೆ ಬೇಕೆಂದು! ಸ್ವಿಚ್ ಕೊಡೆ ಅಂದ್ರೆ ಮಾಮೂಲಿ ಸ್ವಿಚ್ ಒತ್ತಿದರೆ
ಬಿಡಿಸಿಕೊಳ್ಳುವ ಕೊಡೆ. ಅಮ್ಮ ಅದನ್ನೂ ತಂದುಕೊಟ್ಟಿದ್ದಳು. ಇನ್ನೊಂದ್ಸಲ ಅಮ್ಮ ತಾವರೆ ಕೊಡೆ ತಂದಿದ್ದಳು.ತಾವರೆ ಕೊಡೆಯ ಕಡ್ಡಿಗಳು ತಾವರೆ ಆಕಾರಗಳವು. ಮಳೆಗಾಲದಲ್ಲಿ ಮೂರು ಮೈಲಿ ನಡೆದು, ಹೊಲ -ಗದ್ದೆ ದಾಟಿದ್ದು, ತುಂಬಿದ ಹೊಳೆಯಲ್ಲಿ ಭಯಪಡುತ್ತಲೇ ದಡ ಸೇರಿದ್ದು., ಭಾರೀ ಗಾಳಿಗೆ ಕೊಡೆ ಕೈಕೊಟ್ಟಾಗ ಗೆಳೆಯ-ಗೆಳತಿಯರ ಜೊತೆ ಒಂದೇ ಕೊಡೆಯೊಳಗೆ ಹೆಜ್ಜೆ ಹಾಕಿದ್ದು...ಅಬ್ಬಾ! ಮಳೆಗಾಲದ ಕೊಡೆ ನೆನಪು ಅದ್ಭುತ.

Tuesday, April 24, 2012

ಭೂತಾಯಿಗೆ ಕಾಗೆ ಮುಟ್ಟುವುದು!

ಇವತ್ತು ಭೂತಾಯಿಗೆ ಕಾಗೆ ಮುಟ್ಟಿದೆ. ನೀವು ಜಾಸ್ತಿ ಜಗ್ಳ ಆಡಬಾರದು. ಜಗ್ಳ ಆಡಿದ್ರೆ ಭೂಮಿತಾಯಿ ಬೇಜಾರುಪಡ್ಕೊಳ್ತಾಳೆ...ಅಮ್ಮ ಬೆಳ್ಳಂಬೆಳಿಗ್ಗೆ ರೊಟ್ಟಿ ತಟ್ಟುತ್ತಾ ಹೇಳುತ್ತಿದ್ದಳು. ಒಲೆ ಮೇಲೆ ಕಲ್ಲಿನ ಕಾವಲಿಯಲ್ಲಿ ರೊಟ್ಟಿ ಬೇಯಿತ್ತಿತ್ತು. ಮೊದಲ ರೊಟ್ಟಿ ನನಗೇ ಸಲ್ಲಬೇಕೆನ್ನುವುದು ತಮ್ಮನ ವಾದ. ಇದೇ ಸಿಟ್ಟಲ್ಲಿ ಒಲೆಯೊಳಗಿದ್ದ ಕಟ್ಟಿಗೆಯನ್ನು ಹಿಂದೆ-ಮುಂದೆ ಜಾರಿಸುತ್ತಿದ್ದ. ನನಗೆ ಕೊಡೆಂದು ಅಮ್ಮನ ಸೆರಗು ನಾನು ಹಿಡಿದುಕೊಂಡಿದ್ದೆ.

ಅಮ್ಮನ ಮಾತು ಒಗಟು. ಅರೆ! ಕಾಗೆ ಮುಟ್ಟುವುದಕ್ಕೂ, ನಾವು ಜಗ್ಳ ಆಡೋದಕ್ಕೂ ಏನು ಸಂಬಂಧ? ಅಮ್ಮನ ಕೇಳಿಯೇ ಬಿಟ್ಬಿ.

ನೋಡು ಪಕ್ಕದ್ಮನೆ ಲಲಿತಕ್ಕ ಕಾಗೆ ಮುಟ್ಟಿದೆ ಅಂತ ತಿಂಗ್ಳಲ್ಲಿ ಮೂರು ದಿನ ಹೊರಗಡೆ ಕೂರ‍್ತಾಳೆ. ಆಗ ಅವಳಿಗೆ ಅವ್ಳ ಅಮ್ಮ ಏನೂ ಕೆಲ್ಸ ಕೊಡಲ್ಲ. ಮನೆ ಹಿಂದಿನ ಕೋಣೆಯಲ್ಲಿ ಲಲಿತಕ್ಕ ಸುಮ್ಮನೆ ಮಲಗಿರ‍್ತಾಳೆ. ಹಂಗೆ, ಭೂಮಿತಾಯಿಗೂ ಕಾಗೆ ಮುಟ್ಟಿದೆ. ಅವಳಿಗೆ ನೋವು ಕೊಡಬಾರದು, ಸಿಟ್ಟು ಮಾಡಿ ಜಗಳ ಮಾಡಿಕೊಂಡ್ರೆ ಅವಳಿಗೆ ಬೇಜಾರಾಗುತ್ತೆ. ನೀವು ಸುಮ್ಮನಿರಬೇಕು ಎಂದು ಹೇಳುತ್ತಿದ್ದಳು.

‘ಹಾಗಾದ್ರೆ ಲಲಿತಕ್ಕನ ತರ ಭೂತಾಯಿಗೂ ತಿಂಗಳಿಗೊಮ್ಮೆ ಕಾಗೆ ಮುಟ್ಟುತ್ತಾ?’ ತಮ್ಮನ ಮಾತು ಅಮ್ಮನನ್ನು ಪೇಚಿಗೆ ಸಿಲುಕಿಸಿತ್ತು. ‘ಮನುಷ್ಯರು ತಿಂಗಳಿಗೊಮ್ಮೆ, ಭೂತಾಯಿ ವರ್ಷಕ್ಕೊಮ್ಮೆ’ ಎಂದು ಅಷ್ಟೇ ಹೇಳಿ, ನಮ್ಮಿಬ್ಬರಿಗೆ ಬೈದು ಸುಮ್ಮನಾಗಿಸುತ್ತಿದ್ದಳು. ಅಮ್ಮನ ಮಾತು ನಂಬಿದ ನಾವಿಬ್ಬರೂ ಜಗಳವಾಡದೆ ಸುಮ್ಮನಿರುತ್ತಿದ್ದೇವು.


ವರ್ಷದಲ್ಲಿ ಒಂದು ಸಲ ಭೂತಾಯಿಗೆ ಕಾಗೆ ಮುಟ್ಟುತ್ತಿತ್ತು. ಅಮ್ಮ ತುಳಸಿ ಗಿಡದ ಪಕ್ಕದಲ್ಲಿ ಮಸಿಯಿಂದ ಚೌಕ ತರ ಮಾಡಿ, ಅಲ್ಲಿ ಸೀಗೆಕಾಯಿ, ಮಸಿ ತುಂಡು ಇಡುತ್ತಿದ್ದಳು. ನಾಲ್ಕನೇ ದಿನಕ್ಕೆ ಅದೇ ಜಾಗದಲ್ಲಿ ಸೆಗಣಿ ಸಾರಿ, ಬಾಳೆಲೆ ಹಾಕುತ್ತಿದ್ದಳು. ಬಳಿಕ ಅದರ ಮೇಲೆ ಎಣ್ಣೆ, ಅರಿಶಿನ, ಕುಂಕುಮ, ಬಳೆ, ಹೂವುಗಳನ್ನು ಇಟ್ಟು ಭೂಮಿಗೆ ಎಣ್ಣೆ ಬಿಡುತ್ತಿದ್ದಳು. ‘ಭೂಮಿತಾಯಿಯನ್ನು ಸ್ನಾನ ಮಾಡಿಕೊಂಡು ಬಂದಿರ‍್ತಾಳೆ’ ಎನ್ನುವ ಅಮ್ಮ, ಒಂದು ಎಲೆಯಲ್ಲಿ ರೊಟ್ಟಿ, ಸಾರು ಹಾಕಿಡುತ್ತಿದ್ದಳು. ಭೂತಾಯಿ ತಿಂದ ಮೇಲೆ ನಾವು ಅಂಗಳದಲ್ಲೇ ಕುಳಿತು ತಿನ್ನುತ್ತಿದ್ದೆವು.

ತುಳುವಿನಲ್ಲಿ ಪುಯಿಂತೆಲ್(ಮಕರ ಮಾಸ) ತಿಂಗಳಿನ ಕೊನೆಯ ಅಂದ್ರೆ ೨೭, ೨೮, ೨೯ನೇ ದಿನ ಕೆಡ್ಡಸ ಎಂದು ಆಚರಿಸುತ್ತಾರೆ. ಭೂಮಿ ಹೊರಗಾಗಿದ್ದಾಳೆ ಎಂದು ಹೇಳುತ್ತಿದ್ದರು. ಆ ಮೂರು ದಿನವೂ ಭೂಮಿತಾಯಿಗೆ ನೋವಾಗುವ ಯಾವುದೇ ಕೆಲಸಗಳನ್ನು ಅಮ್ಮ ಮಾಡುತ್ತಿರಲಿಲ್ಲ, ತೋಟದ ಕೆಲಸಗಳಿಗೆ ರಜೆ, ಹೊಲ ಗದ್ದೆಗಳಲ್ಲೂ ಹಾರೆ-ಗುದ್ದಲಿಗಳ ಸದ್ದಿಲ್ಲ. ಸಾಮಾನ್ಯವಾಗಿ ಜನವರಿ-ಫೆಬ್ರುವರಿ ತಿಂಗಳಲ್ಲಿ ಈ ಹಬ್ಬ ಬರುತ್ತದೆ. ಇಂದು ಅಮ್ಮನೂ ಕೆಡ್ಡಸ ಮರೆತುಬಿಡ್ತಾರೆ!

Tuesday, April 17, 2012

ಆ ಕೆಂಪು ದೀಪದ ಸಿಗ್ನಲ್‌ನಲ್ಲಿ

ಅಲ್ಲಿ ಕೆಂಪು ಲೈಟ್ ಬಿತ್ತು. ಡ್ರೈವರ್ ಬ್ರೇಕ್ ಹಾಕಿದ. ಬಸ್ ನಿಂತಿತು. ಬಸ್‌ನಲ್ಲಿದ್ದವರೆಲ್ಲಾ ಉಸ್ಸಾಪ್ಪಾ ಎಂದು ನಿಟ್ಟುಸಿರು ಬಿಟ್ಟರು. ಡ್ರೈವರ್ ಮುಖ ಗಂಟಿಕ್ಕಿತು. ಬಸ್‌ನೊಳಗೆ ಉಸಿರುಗಟ್ಟಿಸುವ ವಾತಾವರಣ. ಸೀಟಿನಲ್ಲಿ ಕುಳಿತವರು, ಸೀಟಿಲ್ಲದೆ ನಿಂತವರು ಎಲ್ಲರ ಮುಖದಲ್ಲಿ ದಣಿವಿನ ದನಿ.

ಹೊರಗಿನ ಗಾಳಿ ಬೇಕನಿಸಿತು. ಕೊಂಚ ಮುಖ ಹೊರಹಾಕಿದೆ. ಪಕ್ಕದಲ್ಲಿದ್ದ ಕಾಂಪೌಂಡಿನಲ್ಲಿ ಮೈಸೂರ್ ಪ್ಯಾಲೇಸ್ ಚಿತ್ರ. ಸುಂದರವಾಗಿ ಬಿಡಿಸಿದ ಕಲಾವಿದನಿಗೊಂದು ಮನಸ್ಸಲ್ಲೇ ಶಹಭಾಷ್ ಹೇಳಿದೆ. ನೋಡು ನೋಡುತ್ತಿದ್ದಂತೆ ನಲವತ್ತು ದಾಟಿದ ಗಂಡಸೊಬ್ಬ ಬಂದು ಅದೇ ಕಾಂಪೌಂಡ್ ಮೇಲೆ ಉಚ್ಚೆ ಹೊಯ್ದ! ಇದೇ ಕಲೆಗೆ ಬಿಬಿಎಂಪಿ ಕೋಟಿ-ಕೋಟಿ ಖರ್ಚು ಮಾಡಿದೆ. ವ್ಯವಸ್ಥೆಯ ಕಾಳಜಿಯ ಹೊರುವವರಾರು? ಪ್ರಶ್ನೆಗಿನ್ನೂಉತ್ತರ ಸಿಕ್ಕಿಲ್ಲ.

ಯೋಚನೆಗಳು ತಲೆಕೊರೆಯುತ್ತಿರುವಾಗಲೇ ಮುಖದೆದುರೇ ಟಪ್! ಚಪ್ಪಾಳೆ ಬಿತ್ತು. ಕಂಡಕ್ಟರ್ ಕೊಟ್ಟ ಎರಡು ರೂಪಾಯಿ ಪಾವಳಿಯನ್ನು ಮಂಗಳಮುಖಿಯ ಕೈಗೆ ಹಾಕಿ ನಿಟ್ಟುಸಿರು ಬಿಟ್ಟೆ. ಅಲ್ಲೇ ಇದ್ದ ಹೆಲ್ಮೆಟ್ ಹಾಕಿದ ಚೆಂದದ ಹುಡುಗನ ಬೆನ್ನಿಗೊಂದು ಗುದ್ದಿ ಕೈಯೊಡ್ಡಿದಳು. ಪುಡಿಗಾಸು ಹಾಕಿದ. ಕೆನ್ನೆಗೊಂದು ಮುತ್ತಿಟ್ಟು ಮುಂದೆ ಸಾಗಿದಳು.
ದಪ್ಪ ಕನ್ನಡ ಇಟ್ಟಿದ್ದ ನುಡವಯಸ್ಕನೊಬ್ಬ ಚಿಲ್ರೆಗಾಗಿ ಎಸಿ ಕಾರಿನ ಬಾಗಿಲು ತಟ್ಟಿದರೆ, ಆತ ಬಾಗಿಲೇ ತೆಗೆಯದೆ ನಕ್ಕು ಸುಮ್ಮನಾದ. ಪಕ್ಕದಲ್ಲೇ ನಿಂತಿದ್ದ ಬೈಕ್‌ನಲ್ಲಿ ಕುಳಿತ ಯುವಕನೊಬ್ಬ ತನ್ನ ಹಿಂದೆ ಕುಳಿತ ಯುವತಿಯ ಕೈ ಅದುಮಿದ. ಅವಳು ನಾಚಿ ನಗೆಮಲ್ಲಿಗೆ ಚೆಲ್ಲಿದಳು. ಮುಂದೆ ನೋಡಿದೆ, ಬಿರುಬಿಸಿಲಿನಲ್ಲಿ ಟ್ರಾಫಿಕ್ ಪೊಲೀಸ್ ಸೋತುಹೋಗಿದ್ದ.
ಕಣ್ಣ ರೆಪ್ಪೆ ಮೇಲಿಂದ ದಣಿವಿನ ಬೆವರು ಇಳಿಯುತ್ತಿತ್ತು!

ಮತ್ತೆ ಹಸಿರು ಲೈಟ್. ಬಸ್ ಮುಂದೆ ಸಾಗಿತು. ಬಸ್‌ನಲ್ಲಿ ಸೀಟಿಲ್ಲದೆ ನಿಂತವರು, ಕಚೇರಿಗೆ ಹೊರಟ ಏಳು ತುಂಬಿದ ಯುವತಿ, ಆಫೀಸ್‌ಗೆ ಲೇಟಾಯ್ತು ಬಾಸ್ ಕೈಯಲ್ಲಿ ಬೈಸಿಕೊಳ್ಳಬೇಕೆಂದು ಕುಳಿತಲ್ಲೇ ಚಡಪಡಿಸುವ ಕೆಲವರು, ಮೊದಲ ಕ್ಲಾಸ್ ಮಿಸ್ ಆಯ್ತು, ಮ್ಯಾಥ್ಸ್ ಮೇಷ್ಟ್ರ ಬೈಗುಳಕ್ಕೆ ರೆಡಿಯಾಗೋಣ ಎಂದು ಪೋಲಿ ಜೋಕು ಬಿಡುವ ಕಾಲೇಜು ಹುಡುಗ್ರು..ಎಲ್ಲರಿಗೂ ಬದುಕಿನ ಅನಿವಾರ್ಯತೆ!

ಮತ್ತದೇ, ಕೆಂಪು ಲೈಟ್. ಡ್ರೈವರ್ ಗಂಟಿಕ್ಕಿದ ಮುಖದೊಂದಿಗೆ ಬಸ್ ನಿಲ್ಲಿಸಿದ. ಕಂಡಕ್ಟರ್ ಬೆಂಗ್ಳೂರಿಗೆ ಹಿಡಿಶಾಪ ಹಾಕ್ದ. ಪಕ್ಕದಲ್ಲಿ ನಿಂತಿದ್ದ ಬಸ್‌ನಿಂದ ಅಜ್ಜಿಯೊಬ್ಬಳು ಕತ್ತು ಉದ್ದ ಮಾಡಿ ಉಫ್ ಎಂದು ವೀಳ್ಯದೆಲೆ ಜಗಿದು ಉಗಿದಳು. ಬೈಕ್‌ನಲ್ಲಿದ್ದ ಹೆಲ್ಮೆಟ್‌ಧಾರಿ ಹುಡುಗ ತಲೆ ಮೇಲೆ ಬಿತ್ತು. ತೆಳುಮೀಸೆಯ ಆ ಹುಡುಗ ಅಜ್ಜಿಗೆ ಹಿಡಿಶಾಪ ಹಾಕಿ ತಾನೇ ಸೋತ! ಅಷ್ಟೊತ್ತಿಗೆ ಲೇಡಿಸ್ ಸೀಟಿನಲ್ಲಿ ಕುಳಿತು ದರ್ಬಾರ್ ತೋರಿಸಿದ್ದ ಪುರುಷನಿಗೊಬ್ಬನಿಗೆ ಮಂಗಳಾರತಿ ಆಗುತ್ತಿತು. ೧೪ ಸಿಗ್ನಲ್‌ಗಳನ್ನು ದಾಟಿ ಆಫೀಸ್‌ಗೆ ತಲುಪುವಷ್ಟರಲ್ಲಿ ಬದುಕಿನ ವಿವಿಧ ಮುಖಗಳಿಗೆ ನಾನು ಸಾಕ್ಷಿಯಾಗಿದ್ದೆ.

Saturday, March 31, 2012

ದಿ ಗ್ರೇಟ್ ಡಿಕ್ಟೇಟರ್ ಸ್ಪೀಚ್ ...

೧೯೪೦ರಲ್ಲಿ ಬಂದ ಚಾರ್ಲಿ ಚಾಪ್ಲಿನ್ ಅಭಿನಯದ ದಿ ಗ್ರೇಟ್ ಡಿಕ್ಟೇಟರ್ ಚಿತ್ರದಲ್ಲಿ, ಜೇವಿಶ್ ಬಾರ್ಬರ್ ಆಗಿ ನಟಿಸಿದ ಚಾಪ್ಲೀನ್ ಸ್ಪೀಚ್ ತುಣುಕು. ಎಪ್ಪತ್ತು ವರ್ಷಗಳ ಹಿಂದೆ ಆ ಸಿನಿಮಾದಲ್ಲಿ ಬಂದ ಮಾತುಗಳು ಇಂದಿಗೂ ಪ್ರಸ್ತುತ ಅನಿಸುತ್ತವೆ. ಈ ಚಾರ್ಲಿ ಬಾಯಲ್ಲಿ ಈ ಸ್ಪೀಚ್ ಕೇಳಿ ಖುಷಿಗೊಂಡು ಅನುವಾದಿಸಿದೆ.

ನಾನು ಚಕ್ರವರ್ತಿಯಾಗೋಕೆ ಬಯಸುತ್ತಿಲ್ಲ. ಅದು ನನ್ನ ಬ್ಯುಸಿನೆಸ್ ಅಲ್ಲ. ನಾನು ಯಾರನ್ನೂ ಆಳಬೇಕಾಗಿಲ್ಲ, ಯಾರ ರಾಜ್ಯವನ್ನೂ ಆಕ್ರಮಿಸಿಕೊಳ್ಳಬೇಕಾಗಿಲ್ಲ. ಸಾಧ್ಯವಾದರೆ, ಎಲ್ಲರಿಗೂ ಸಹಾಯಮಾಡಬೇಕೆಂದಿದ್ದೀನಿ. ಜ್ಯೂಯಿಷರು, ಕರಿಯರು, ಬಿಳಿಯರು...ಹೀಗೆ ಜಗತ್ತಿನಲಿರುವ ಎಲ್ಲರಿಗೂ ನಾನು ಸಹಾಯ ಮಾಡ್ಬೇಕು.

ಮನುಷ್ಯ ಇರೋದೇ ಹಾಗೇ, ಪರಸ್ಪರ ಸಂತೋಷದಿಂದ ಕೂಡಿ ಬದುಕಬೇಕು, ಆದರೆ, ಯಾರೋಬ್ಬರೂ ಇನ್ನೊಬ್ಬರ ದುಃಖದಲ್ಲಿ ಬದುಕಬಾರದು. ಇನ್ನೊಬ್ಬರನ್ನು ತಿರಸ್ಕರಿಸಿ ಅಥವಾ ದ್ವೇಷಿಸಿ ಬದುಕುವ ಹಕ್ಕು ಯಾರಿಗೂ ಇಲ್ಲ. ಈ ಜಗತ್ತಿನಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಈ ಫಲವತ್ತಾದ ಸುಂದರ ಭೂಮಿ ಎಲ್ಲರಿಗೂ ಜಾಗ ಕೊಟ್ಟಿದೆ.

ಬದುಕಿನ ದಾರಿ ಸ್ವಚ್ಛಂದ ಹಾಗೂ ಸುಂದರ. ಆದರೆ, ಆ ಚೆಂದದ ದಾರಿಯನ್ನು ಕಳೆದುಕೊಂಡುಬಿಟ್ಟಿದ್ದೀವಿ. ಮನುಷ್ಯನ ಆತ್ಮದಲ್ಲಿ ದುರಾಸೆಯ ವಿಷ ತುಂಬಿದೆ. ಪರಸ್ಪರ ದ್ವೇಷದ ಬ್ಯಾರಿಕೇಡ್ ನಿರ್ಮಾಣವಾಗಿದೆ. ಪರಿಣಾಮವಾಗಿ ದುಃಖ ಹಾಗೂ ನೆತ್ತರನೆಲದಲ್ಲಿ ಬದುಕು ಬಸವಳಿದಿದೆ.

ನಾವು ವೇಗವನ್ನು ಕಲಿತಿದ್ದೇವೆ, ಆದರೆ, ನಮ್ಮ ಹೃದಯದ ಬಾಗಿಲು ಮುಚ್ಚಿಕೊಂಡಿದೆ. ಯಂತ್ರಗಳು ಬೇಕಾದನ್ನು ಕೊಡುತ್ತವೆ. ಇನ್ನು ಬೇಕು ಬೇಕು ಎನ್ನುವ ಆಸೆಯನ್ನು ಮನುಷ್ಯನಲ್ಲಿ ಹುಟ್ಟಿಹಾಕಿವೆ. ನಮ್ಮ ಜ್ಞಾನ ಸಿನಿಕತನದ ಕಡೆಗೆ ಸಾಗಿದೆ. ನಮ್ಮ ಯೋಚನೆ ದೊಡ್ಡದು, ಆದರೆ ಹೃದಯ ವೈಶಾಲ್ಯತೆ ಕಿರಿದು. ನೆನಪಿಡಿ, ಯಂತ್ರಗಳಿಗಿಂತ ಮಾನವೀಯತೆ ಮುಖ್ಯ,ಚಾಣಾಕ್ಷತೆಗಿಂತ ದಯೆ ಹಾಗೂ ಮೃದುತ್ವ ಮುಖ್ಯ. ಇದರಿಂದ ಹೊರತಾದ ನಮ್ಮ ಸುಂದರ ಬದುಕು
ಹಿಂಸೆಯ ಮಡುವಾಗುತ್ತದೆ.


ನನ್ನ ಹೃದಯದ ಧ್ವನಿ ಈಗ ಮಿಲಿಯನ್‌ಗಟ್ಟಲೆ ಜನರಿಗೆ ಕೇಳಿಸುತ್ತಿರಬಹುದು. ಕುಗ್ಗಿಹೋಗಿರುವ ಮಹಿಳೆಯರು,ಗಂಡಸೆರು, ಮಕ್ಕಳು, ವ್ಯವಸ್ಥೆಯ ಬಲಿಪಶುಗಳು ಎಲ್ಲರೂ ಕಿವಿಯಾಗುತ್ತಿರಬಹುದು. ಅವರು ನನ್ನ ಮಾತುಗಳನ್ನು ಕೇಳುತ್ತಿದ್ದರೆ ಅವರಿಗೆ ನಾನು ಹೇಳೋದಿಷ್ಟೇ: ದುಃಖಕ್ಕೆ ಕುಗ್ಗದಿರಿ, ಅಂತಿಮವಾಗಿ ಸರ್ವಾಧಿಕಾರ ಸಾಯುತ್ತೆ, ಅಧಿಕಾರ ಜನರ ಕೈಗೆ ಬರುತ್ತೆ,
ಎಲ್ಲಿಯವರೆಗೆ ಮನುಷ್ಯ ಸಾಯುತ್ತಾ ಇರುತ್ತಾನೋ ಅಲ್ಲಿಯವರೆಗೆ ಸ್ವಾತಂತ್ರ್ಯಕನಸಾಗಿರುತ್ತದೆ.

ದೇಶಕಾಯುವ ಯೋಧರೇ,
ಕ್ರೂರಿಗಳಿಗೆ ನಿಮ್ಮನ್ನು ಬಲಿ ಕೊಡಬೇಡಿ, ನಿಮ್ಮನ್ನು ಕಡೆಗಣಿಸುವವರು, ನಿಮ್ಮನ್ನು ಜೀತಕ್ಕೆ ಇಟ್ಟುಕೊಂಡಿದ್ದವರು, ನೀವು ಹೀಗೆ ಇರಬೇಕೆಂದು ಜೀವನ ಪರಿಕ್ರಮಗಳನ್ನು ಸೂಚಿಸುವವರು, ನಿಮ್ಮ, ಯೋಚನೆಗಳನ್ನು ಕಸಿದುಕೊಂಡವರು, ನಿಮ್ಮನ್ನು ಜೀವಂತವಾಗಿ ಭಕ್ಷಿಸುವವರು, ನಿಮ್ಮನ್ನು ದನಕರುಗಳಂತೆ ಕಾಣೋರು, ಫಿರಂಗಿ ಒಳಗಿನ ಗುಂಡಿನ ಮೇವಾಗಿ ಬಳಸುವಂಥ ಅಸ್ವಾಭಾವಿಕ, ಯಂತ್ರದಂಥ ಮನಸ್ಸು-ಹೃದಯವುಳ್ಳವರಿಗೆ ನಿಮ್ಮ ಬಲಿಕೊಡಬೇಡಿ. ನೀವು ಯಂತ್ರಗಳಲ್ಲ, ನೀವು ದನಗಳಲ್ಲ, ನೀವು ಮನುಷ್ಯರು. ನಿಮ್ಮ ಹೃದಯದಲ್ಲಿ ಮಾನವೀಯತೆಯನ್ನು ಪ್ರೀತಿಸುವವರು ನೀವು. ಗುಲಾಮತನಕ್ಕಾಗಿ ಹೋರಾಡಬೇಡಿ, ಬದಲಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ.


ಸಂತ ಲೂಕ್‌ನ ಏಳನೇ ಅಧ್ಯಯದಲ್ಲಿ ಹೀಗೆನ್ನುತ್ತಾರೆ: ದೇವರ ಸಾಮ್ರಾಜ್ಯ ಮನುಷ್ಯನ ಹೃದಯದಲ್ಲೇ ಇದೆ. ಕೇವಲ ಒಬ್ಬನ ಅಂತರಂಗದಲ್ಲಿ ಅಲ್ಲ, ಈ ಮನುಕುಲದಲ್ಲಿ. ನಿಮ್ಮಲ್ಲಿ, ಜಗತ್ತಿನ ಮಿಲಿಯನ್ ಗಟ್ಟಲೆ ಜನರ ಹೃದಯದಲ್ಲಿ. ನೀವು ಮನುಷ್ಯರು, ಯಂತ್ರಗಳನ್ನು ಸೃಷ್ಟಿಸುವ ಅಧಿಕಾರ ನಿಮ್ಮಲ್ಲಿದೆ, ಅಂತೆಯೇ ಸಂತೋಷವನ್ನು ಸೃಷ್ಟಿಸುವ ಸಾಮರ್ಥ್ಯವೂ ನಿಮ್ಮಲ್ಲೇ ಇದೆ.

ಜೀವನವನ್ನು ಸುಂದರ ಹಾಗೂ ಸ್ವತಂತ್ರಗೊಳಿಸುವ, ಜೀವನವನ್ನು ಅತ್ಯಾದ್ಭುತ ಸಾಹಸವನ್ನಾಗಿ ಪರಿವರ್ತಿಸುವ ಸಾಮರ್ಥ್ಯವೂ ನಿಮಗೇ ಇದೆ. ಪ್ರಜಾಪ್ರಭುತ್ವ ಹೆಸರಿನಲ್ಲಿ ಈ ಒಂದು ಮಹೋನ್ನತ ಅವಕಾಶವನ್ನು ಬಳಸಿಕೊಳ್ಳಿ. ನಾವೆಲ್ಲ ಒಗ್ಗೂಡೋಣ. ಶಾಂತಿಯುತ ಹಾಗೂ ಪ್ರಾಮಾಣಿಕ ಜಗತ್ತಿಗಾಗಿ ಹೋರಾಡೋಣ. ಆಗ ಮನುಕುಲದ ಅಭ್ಯುದಯಕ್ಕೆ ಕೆಲಸ ಮಾಡಲು ಸಾಧ್ಯವಾಗುತ್ತೆ. ಯುವಕರಿಗೆ ಭವಿಷ್ಯ ಕಟ್ಟುವ, ವೃದ್ಧರಿಗೆ ಭದ್ರತೆ ಇರುವ, ವಿಜ್ಞಾನ ಹಾಗೂ ಪ್ರಗತಿಯ ಮೂಲಕ ಮನುಷ್ಯನಿಗೆ ಸಂತೋಷ ನೀಡುವ ಚೆಂದದ ಜಗತ್ತು ನಿರ್ಮಾಣವಾಗುತ್ತೆ.


Click below link for Great Dictator speech by Chaplin

Tuesday, March 27, 2012

ಹೀಗೊಂದು ಸ್ವಗತ!

ಅಜ್ಜನನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ತಂದಿದ್ದರು. ಪುಟ್ಟ ವಯಸ್ಸಿನ ನಾನು ಸಾವಿಗೆ ಭಯಪಟ್ಟಿದ್ದೆ. ಸಾವಿಗೆ ಅಳಬೇಕು ಅನ್ನೋದು ನನಗೆ ಗೊತ್ತಿತ್ತು. ನನ್ನ ಪ್ರೀತಿಯ ಅಜ್ಜ ಬಿಟ್ಟುಹೋದರೆ ಮತ್ತೆ ಬರೊಲ್ಲ ಅನ್ನೋದು ನನಗೆ ಗೊತ್ತಿತ್ತು. ಆಗಿನ್ನೂ ಕಾರಂತರ ಕಿಸಾಗೋತಮಿಯ ಕಥೆ ಓದದ ಮನಸ್ಸು ನನ್ನದು.


ಹೊಟ್ಟೆಪಾಡಿಗೆ ಕಾಳುಮೆಣಸು ಕೊಯ್ಯಲು ಹೋದ ಅಜ್ಜ, ಮರದ ತುದಿಯಿಂದ ಕೆಳಬಿದ್ದು ಪ್ರಾಣ ಕಳೆದುಕೊಂಡಿದ್ದ. ಅಜ್ಜನ ಉಳಿಸಕೆ ಒಂದು ವಾರ ಆಸ್ಪತ್ರೆಯಲ್ಲಿ ಹೋರಾಡಿದರೂ ಅಜ್ಜನ ಸಾವು ತಡೆಯಲಾಗಲಿಲ್ಲ. ಆದರೆ, ಆ ಒಂದು ವಾರ ಮನೆ ದುಃಖದ ಕಡಲಾಗಿತ್ತು. ಅಜ್ಜಿ, ಅಮ್ಮ, ದೊಡ್ಡಮ್ಮ,ಚಿಕ್ಕಮ್ಮ ಅಳು ಮುಗಿಲುಮುಟ್ಟಿತು. ಅಜ್ಜನ ತಿಥಿ ಮುಗಿದು ತಿಂಗಳು ಕಳೆದರೂ ಮನೆಯಲ್ಲಿ
ಅಳು ನಿಲ್ಲಲಿಲ್ಲ. ನಾನೂ ಅತ್ತಿದ್ದೆ....ಯಾರೂ ತಡೆಯಲಾಗದ ಅಳುವನ್ನು!

ನಾನು ಡಿಗ್ರಿ ಓದುವಾಗ ಮೇಷ್ಟ್ರು ಹೇಳಿದ್ರು: ನಿಜವಾದ ದುಃಖ ನೋಡಬೇಕಾದ್ರೆ ಸಾವಿನ ಮನೆಗೆ ಹೋಗಬೇಕು ಎಂದು! ಆಗ
ನನ್ನಜ್ಜ ಸುಟ್ಟು ಬೂದಿಯಾದ ದಿನ ನೆನಪಾಗಿತ್ತು. ಇಡೀ ಬಂಧುಬಳಗ ಅತ್ತು ಅತ್ತು ಬಸವಳಿದ ದಿನ ನೆನಪಾಗಿತ್ತು.

ಆರು ತಿಂಗಳ ಹಿಂದೆ ಮಾವ ಗತಿಸಿದರು. ಮಡಿಲಲ್ಲಿ ಮಗಳಂತೆ ಪ್ರೀತಿಯ ಉಯ್ಯಾಲೆಯಲ್ಲಿ ತೂಗಿದ ಮಾವ. ನಾನು ಕಚೇರಿಯಲ್ಲಿದ್ದೆ. ಮನೆಯಿಂದ ನಮ್ಮವ್ರ ಫೋನ್, ಅಪ್ಪ ಹೋಗಿಬಿಟ್ರು! ಅರ್ಜಂಟ್ ಮೀಟಿಂಗ್‌ನಲ್ಲಿದ್ದೆ. ಒಂದು ಕ್ಷಣ ಕಣ್ಣು ರೆಪ್ಪೆ ತಟಸ್ಥವಾಯಿತು. ಮಾತಿಗೂ ದನಿ ಬರಲಿಲ್ಲ. ಮೀಟಿಂಗ್ ಮುಗ್ಸಿ ಐದೇ ನಿಮಿಷದಲ್ಲಿ ಮನೆಯಲ್ಲಿದ್ದೆ. ಅತ್ತೆ, ನಮ್ಮೆಜಮಾನ್ರು ಮೌನವಾಗಿದ್ದರು. ನನ್ನ ಕಣ್ಣಂಚಿನಲ್ಲಿ ಪುಟ್ಟ ಹನಿಬಿಂದು ಕೆಳಗೆ ಬಿತ್ತು. ದೊಡ್ಡ ಪೆಟ್ಟಿಗೆಯಲ್ಲಿ ತುಂಬಿಸಿ ಮಾಮನ ಬೆಳಗಿನ ತನಕ ಹಾಗೇ ಇಡಲಾಯಿತು. ಸಂಬಂಧಿಕರೆಲ್ಲರೂ ಬಂದರು. ಯಾರೂ ಗೋಳೋ ಅಳಲಿಲ್ಲ.


ಮೊನ್ನೆ ಇನ್ನೊಂದು ಸಾವಿನ ಮನೆಗೆ ಹೋದೆ. ಅಲ್ಲಿ ಅಳೋರೇ ಕಾಣಲಿಲ್ಲ. ಮಗನನ್ನು ಕಳೆದುಕೊಂಡ ಅಮ್ಮ, ಮಗನ ದೇಹದ ಬಳಿ ನಿಂತು ಮೌನವಾಗಿದ್ದರು. ಪತ್ನಿಯ ದುಃಖದ ಕಣ್ಣೀರು ಬತ್ತಿಹೋಗಿತ್ತು. ಅಪ್ಪನ ಕಳೆದುಕೊಂಡ ಏಕೈಕ ಮಗಳೂ ವಿದೇಶದಿಂದ ಬರಲೊಲ್ಲೆ ಎಂದಳು. ನನಗನಿಸಿದ್ದು ಇಷ್ಟೇ: ಸಾವಿನ ಮನೆಯಲ್ಲಿ ಕಣ್ಣೀರೇ ಕಾಣಿಸಲಿಲ್ಲ, ಬಹುಶಃ ಕಿಸಾಗೋತಮಿಯ ಕಥೆ ಎಲ್ಲರಿಗೂ ಅರ್ಥವಾಗಿರಬೇಕೆಂದು! ಹಾಗಂತ, ಸಾವಿನ ಮನೆಯಲ್ಲಿ ಕಣ್ಣೀರು ಇಲ್ಲವೆಂದಲ್ಲ. ಹುಟ್ಟು, ಸಾವು,ನೋವು ಎಲ್ಲದಕ್ಕೂ ಸ್ಪಂದಿಸುವ ಮಾನವನ ಮನಸ್ಸಿನಲ್ಲಿ ಎಲ್ಲೋ ಒಂದು ಕಡೆ ಸಣ್ಣ ಬದಲಾವಣೆ. ಸಾವನ್ನೂ ಸವಾಲಾಗಿ ಸ್ವೀಕರಿಸುವ ಮನದ ಗಟ್ಟಿತನವೇ? ಸಾವು ಸಾಮಾನ್ಯವೇ? ಯಾವ ಪ್ರಶ್ನೆಗಳು ಮೂಡಿದರೂ ಅಲ್ಲಿ ನಮ್ಮ-ನಮ್ಮ ಮನಸ್ಸೇ ಉತ್ತರ. ಮನಸ್ಸು ಮೌನವಾಗಿದ್ದಾಗ ಹೀಗೊಂದು ಸ್ವಗತ!


Saturday, March 17, 2012

ಶೆಟ್ಟರ ಅರಮನೆ ಬದುಕು

ನಮ್ಮನೆ ವರಾಂಡದಲ್ಲಿ ಕುಳಿತರೆ ಶೆಟ್ಟರ ದೊಡ್ಡ ಬಂಗ್ಲೆ ಕಾಣಿಸುವುದು. ಭಾನುವಾರದ ಸುಂದರ ಸಂಜೆ. ಗಾಳಿ ಮೌನವಾಗಿತ್ತು. ಸಂಜೆಯ ತಂಪಿನಲ್ಲಿ ನೆನಪುಗಳು ಬಿಚ್ಚಿದವು. ಶೆಟ್ಟರ ಮನೆಯಲ್ಲಿ ಮೊಮ್ಮಕ್ಕಳ ಕಲರವ. ಶೆಟ್ಟರಿಗೆ ಒಟ್ಟು ೧೨ ಮಂದಿ ಮೊಮ್ಮಕ್ಕಳು. ಅವರ ನಾಲ್ಕು ಜನ ಗಂಡು ಮಕ್ಕಳು, ನಾಲ್ವರಿಗೂ ಮದುವೆಯಾಗಿದೆ. ಹಾಗಾಗಿ,ಮೊಮ್ಮಕ್ಕಳ ಸಂಖ್ಯೆಒಂದು ಡಜನ್.

ಶೆಟ್ಟರ ಹೆಂಡ್ತಿ ಇರುವಾಗ ಮನೆಯಲ್ಲಿ ನಿತ್ಯವೂ ಸುಗ್ಗಿ. ನಾಲ್ವರು ಸೊಸೆಯರಿಗೆ ಕೆಲ್ಸವನ್ನು ಹಂಚುತ್ತಿದ್ದುದ್ದೇ ಶೆಟ್ಟರ ಹೆಂಡ್ತಿ. ಬೆಳಿಗ್ಗೆ ಎದ್ದಾಗ ನಿತ್ಯ ದಿನಚರಿಯ ವೇಳಾಪಟ್ಟಿ ಸೊಸೆಯಂದಿರ ಮುಂದೆ. ಮನೆಯ ದೊಡ್ಡ ವರಾಂಡದಲ್ಲಿ ಅತ್ತೆ ಕುಳಿತರೆ, ನಾಲ್ಕು ಕಡೆಗೂ ಕಣ್ಣು ನಡೆಯುತ್ತಿತ್ತು. ಬೆಳಗ್ಗೆ ತಿಂಡಿ ರೆಡಿ ಮಾಡುವುದರಿಂದ ಹಿಡಿದು ರಾತ್ರಿ ತನಕ ಎಲ್ಲವೂ ಅಚ್ಚುಕಟ್ಟಾಗಿ ನಡೆಯಬೇಕು.

ಮನೆಯಲ್ಲಿ ನಾಲ್ಕು ದೊಡ್ಡ ನಾಯಿಗಳಿವೆ. ಎಲ್ಲವೂ ಬೆಳಿಗ್ಗೆ-ಸಂಜೆ ವಾಕ್ ಮಾಡ್ತವೆ. ಇದರ ಉಸ್ತುವಾರಿಯೂ ಸೊಸೆಯಂದಿರದ್ದೆ. ಬೆಳಿಗ್ಗೆದ್ದರೆ ಮೊದಲ ಕೆಲ್ಸ ನಾಯಿಗಳನ್ನು ವಾಕ್ ಮಾಡಿಸುವುದು. ಅತ್ತೆಯ ಮಾತು ಮೀರಿ ಯಾವುದೇ ಕೆಲಸಗಳಿಲ್ಲ. ಅವರ ಗಂಡಂದಿರೂ ಅಷ್ಟೇ, ಅಪ್ಪ-ಅಮ್ಮನ ಮಾತು ಮೀರಲ್ಲ. ಪೇಟೆಗೆ ಹೋಗಬೇಕಾದರೂ ಅಮ್ಮನ ಬಳಿ ಹೇಳಿ ಹೊರಡೋರು.

ಹಬ್ಬ ಬಂದ್ರೆ ಶೆಟ್ಟರ ಮನೆ ಸಂಭ್ರಮದ ಮೇಲೆಯೇ ಎಲ್ಲರಿಗೂ ಕಣ್ಣು. ಏನು ಖುಷಿ ಶೆಟ್ರ ಮನೆಯಲ್ಲಿ ಅನ್ನೋರು ಸುತ್ತಲ ಜನ. ರಸ್ತೆ ಕಾಮಗಾರಿಗೆ ಬಂದವ್ರ ಮಕ್ಕಳಿಗೆಲ್ಲಾ ಶೆಟ್ರು ಕರೆದು ಊಟ ಹಾಕೋರು. ಮಗ-ಸೊಸೆಯಂದಿರಿಗೆ ಒಡವೆ, ವಸ್ತ್ರಗಳನ್ನು ನೀಡಿ ಖುಷಿಪಡೋರು. ಜೀವನ ಪ್ರೀತಿನ ಹಂಚೋರು. ಅರಮನೆಯಂಥ ಮನೆಯಲ್ಲಿ ಜನಸಂಖ್ಯೆ ೨೦ ದಾಟಿದವರೂ ಜೋರು ದನಿಗಳು ಸದ್ದು ಮಾಡುತ್ತಿರಲಿಲ್ಲ. ಮಕ್ಕಳ, ಸೊಸೆಯಂದಿರ, ಮೊಮ್ಮಕ್ಕಳ ಖುಷಿ ಜಾತ್ರೆ ನಡುವೆಯೇ ಶೆಟ್ಟರ ಹೆಂಡ್ತಿ ಬದುಕು ಬಿಟ್ಟು ದೂರಹೋಗಿದ್ದಾರೆ. ಶೆಟ್ಟರು ಒಂಟಿಯಾಗಿದ್ದಾರೆ. ಅವರ ಕಣ್ಣುಗಳಲ್ಲಿ ಮೊದಲಿನ ಉತ್ಸಾಹ ಮರೆಯಾಗಿದೆ.

ಶೆಟ್ಟರ ಹೆಂಡ್ತಿ ತೀರಿ ತಿಂಗಳು ಮೂರು ಸರಿದಿದೆ. ಶೆಟ್ಟರ ಮನೆಯ ಮಾತುಗಳು ಒಂದು ಕಿ.ಮೀ. ದೂರ ದವರೆಗೆ ಕೇಳುತ್ತಿವೆ. ಅಡುಗೆ ಮನೆಯಲ್ಲಿ ಪಾತ್ರೆಗಳ ಸದ್ದು ಜೋರಾಗಿದೆ. ಒಂಬತ್ತು ಗಂಟೆಗೆ ಎದ್ದು ಸೊಸೆಯಂದಿರು ಹಲ್ಲಿಗೆ ಬ್ರೆಶ್ ಹಿಡಿಯುತ್ತಾರೆ. ಕೈಗೊಂದು ಕಾಲಿಗೊಂದು ಆಳುಗಳು ಬಂದು ಬೆಳ್ಳಂಬೆಳಿಗ್ಗೆ ಕಾಲಿಂಗ್ ಬೆಲ್ ಒತ್ತುತ್ತಾರೆ. ಸಂಜೆಯ ತಂಪಿಗೆ ಮುಖವೊಡ್ಡಿ ಕುಳಿತಾಗ ನೆನಪಾಗಿದ್ದು ಶೆಟ್ಟರ ಅರಮನೆಯ ಭೂತಕಾಲದ ಬದುಕು.

Tuesday, March 13, 2012

ಕಲ್ಲುದೇವರುಗಳ ಎದುರು ಮೊಮ್ಮಗು ಬೇಡಿದ ಅಪ್ಪ

ಅಂದು ಅಪ್ಪ ತುಂಬಾ ಕಾಡಿದ. ಒಂದೂವರೆ ವರ್ಷದಲ್ಲಿ ನನ್ನಲ್ಲಿ ಪ್ರೀತಿಯ ಸೌಧವನ್ನೇ ಕಟ್ಟಿದ ಅಪ್ಪ. ಕಳೆದ ವರ್ಷ ಇದೇ ದಿನ ಅಪ್ಪನ ಕಾಲು ಮುಟ್ಟಿ ನಮಸ್ಕರಿಸಿದ್ದೆ. ಅಪ್ಪ ಹರಸಿದ್ದ: ಮಗಳೇ, ಬರುವ ವರ್ಷ ಮೊಮ್ಮಗು ಬರಲೆಂದು. ಬಂದು ಬಿಡುತ್ತೆ ಅಪ್ಪ...ಕಾಯ್ತಾ ಇರು ಎಂದು ಸುಳ್ಳು ಹೇಳಿದ್ದೆ. ನನ್ನ ಸುಳ್ಳುಗಳನ್ನೂ ಸತ್ಯವೆಂದು ನಂಬಿದ್ದ ಮುಗ್ಧ ಅಪ್ಪ.


ಒಂದ್ಸಲ ತಿರುಪತಿಗೆ ಹೋಗಿದ್ವಿ. ಸರತಿ ಸಾಲಿನಲ್ಲೇ ನಿಂತರೆ ಗಡಗಡ ನಡುಗುತ್ತಿದ್ದ ಅಪ್ಪನಿಗೆ ಎದುರುಬಾಗಿಲಲ್ಲೇ ದೇವರ ದರ್ಶನಕ್ಕೆ ಅನುಮತಿ ಸಿಕ್ತು. ದೇವರೆದುರು ಕೈ ಮುಗಿದು ನಿಂತ ಅಪ್ಪನ ಕಣ್ಣಲ್ಲಿ ಕಣ್ಣೀರು ಜಿನುಗುತ್ತಿತ್ತು. ಎಪ್ಪತ್ತೈದು ದಾಟಿದ ಅಪ್ಪನಿಗೆ ಸಾವಿನ ಖಚಿತತೆ ಗೊತ್ತಿತ್ತೇ? ಅನುಮಾನಿಸಿತು ಮನ. ಲಡ್ಡು ತೆಗೆದುಕೊಂಡು ಹೊರಬಂದ ಅಪ್ಪನ
ಬಳಿ ಕೇಳಿದೆ?: ಏನ್ ಬೇಡ್ಕೊಂಡೆ ದೇವ್ರರಲ್ಲಿ? ಏನು ಕೊಟ್ಟ ದೇವರು? ಎಂದು. ಅಪ್ಪ ನಗುತ್ತಲೇ ಹೇಳಿದ: ಮಗಳ ಮಡಿಲ ತುಂಬಲಿ ಎಂದು ಕೇಳಿದೆ. ದೇವ್ರು ಲಡ್ಡುಕೊಟ್ಟಿದ್ದಾನೆ. ಅದನ್ನು ಭಕ್ತಿಯಿಂದ ಸೇವಿಸು ಎಂದ. ಹೌದೇನು ಅಪ್ಪ? ತುಂಬುತ್ತೆ ಬಿಡಪ್ಪಾ, ಪದೇ ಪದೇ ಮೊಮ್ಮಗು ಪುರಾಣ ಆಡಿದ್ರೆ ಮಾತೇ ಆಡಲ್ಲ ಎಂದು ಗದರಿ ಸುಮ್ಮನಾದೆ. ಅಪ್ಪನ ಮುಖದಲ್ಲಿ ತುಸು ಬೇಜಾರು.

ಅದೊಂದು ಗುರುವಾರ. ಅಪ್ಪ ಸಾಯಿಬಾಬಾ ಮಂದಿರಕ್ಕೆ ಹೋಗಿಬಂದಿದ್ದ. ಸಾಯಿ ಮಂದಿರದಿಂದ ದೊಡ್ಡ ಡಬ್ಬದಲ್ಲಿ ಪ್ರಸಾದ ತಂದಿದ್ದ. ಏನಪ್ಪಾ ದೊಡ್ಡ ಡಬ್ಬದಲ್ಲಿ ಪ್ರಸಾದ ತಂದೆ? ದೇವರಿಗೇನಾದ್ರೂ ಇನ್ಲುಪುವೆನ್ಸ್ ಮಾಡಿಬಿಟ್ಟೆಯಾ? ಎಂದೆ. ಅದಕ್ಕವನು, ಸುಮ್ಮೆ ತಿನ್ನು, ಹೇಳಿದ್ರೆ ನೀನು ಕೋಪಿಸಿಕೊಳ್ತಿ. ಸುಮ್ಮೆ ಭಕ್ತಿಯಿಂದ ತಿನ್ನು ಅಂದ. ಗಬಗಬನೆ ತಿಂದೆ. ಅಪ್ಪನ ಮುಖದಲ್ಲಿ ಸಂತೃಪ್ತಿಯ ನಗು.


ಕತ್ತಲು-ಬೆಳಕು ಕಣ್ಣೆದುರೇ ಸರಿದುಹೋಯಿತು. ಬದುಕು ಬಂಡಿಯಲ್ಲಿ ಅಪ್ಪ ಮೊಮ್ಮಗುವಿನ ನಿರೀಕ್ಷೆಯಲ್ಲಿದ್ದ. ಪ್ರತಿ ಶುಕ್ರವಾರ ಲಕ್ಷ್ಮಿಗೆ ಪೂಜೆ ಮಾಡುವಾಗಲೂ, ತುಳಸಿ ಗಿಡಕ್ಕೆ ನೀರು ಹಾಕುವಾಗಲೂ ಅಪ್ಪನಿಗೆ ಮೊಮ್ಮಗುವಿನ ಕನವರಿಕೆ. ಕೈ-ಕಾಲುಗಳಲ್ಲಿ ಬಲವಿಲ್ಲದಿದ್ದರೂ, ಸಿಕ್ಕ-ಸಿಕ್ಕ ಕಲ್ಲು ದೇವರುಗಳೆದುರು ನಿಂತು ಅಪ್ಪ ಮೊಮ್ಮಗು ಬೇಡಿದ್ದ. ಅವನಿಗೇನು ಗೊತ್ತು? ದೇವರು ಮಗು ಕೊಡಲ್ಲವೆಂದು?

ಮೊನ್ನೆ ಮೊನ್ನೆ ನಮ್ಮ ಮದುವೆಗೆ ಎರಡು ವರ್ಷ. ಕಳೆದ ವರ್ಷ ದೇವರ ಮನೆಯಲ್ಲಿ ಅಪ್ಪ-ಅಮ್ಮ ಇಬ್ಬರೂ ನಿಂತು ಅಕ್ಷತೆ ಹಾಕಿ ಹರಸಿದ್ದರು. ಈ ಬಾರಿ ಅಮ್ಮ ಒಬ್ಬಳೇ ಇದ್ದಳು!. ವರಾಂಡದಲ್ಲಿದ್ದ ಅಪ್ಪನ ಫೋಟೋಗೋ ಮಲ್ಲಿಗೆ ಹಾರ ಹಾಕಿ ನಮಸ್ಕರಿಸಿದೆ. ನನ್ನ ಕಣ್ಣುಗಳು ಒದ್ದೆಯಾದವು. ಅಪ್ಪ ತುಟಿಬಿಚ್ಚಲಿಲ್ಲ, ಮೊಮ್ಮಗು ಎಲ್ಲಿ ಎಂದು ಕೇಳಲಿಲ್ಲ. ಕಪ್ಪಗಿನ ದಪ್ಪ ಕನ್ನಡದೊಳಗಿನಿಂದ ನನ್ನ ನೋಡಿದ. ಅಪ್ಪ ಕೋಪಿಸಿಕೊಂಡಿರಬೇಕೆಂದು ನಾನೂ ಮಾತಿಲ್ಲದೆ ಸುಮ್ಮನಾದೆ.

Saturday, March 10, 2012

ಯುಗಾದಿಗೆ ಬಂದುಬಿಡು ಮಗಳೇ,

ಇನ್ನೇನೋ ಎರಡು ವಾರ. ಯುಗಾದಿ ಬಂದಿದೆ. ಈ ಬಾರಿ ನನಗೆ ಡಬಲ್ ಖುಷಿ. ಏಕಂದ್ರೆ ಮಗ್ಳು ಮನೆಗೆ ಬರ್ತಾಳೆ. ನೀನು ಬಂದೇ ಬರ್ತಿ ಅನ್ನೋ ಗಟ್ಟಿ ಗ್ಯಾರಂಟಿ. ಕಳೆದ ಸಲ್ಸ ಆಫೀಸ್ ಕೆಲ್ಸದ ನೆಪ ಹೇಳಿ ತಪ್ಪಿಸಿಕೊಂಡಿದ್ದೆ. ಮುಂದಿನ ದೀಪಾವಳಿಗೂ ನೀನು ಬರಲೇ ಇಲ್ಲ. ಈ ಬಾರಿ ನಿನಗೆ ವಿನಾಯ್ತಿ ಇಲ್ಲ. ನೋಡು ಮಗಳೇ, ಈ ಬಾರಿ ನೀನು ಬರಲೇಬೇಕು. ಮನೆಯಲ್ಲಿ ಅಪ್ಪಿ ಕರು ಹಾಕಿದ್ದಾಳೆ.

ಹಾಗಾಗಿ, ಹಾಲು, ಮಜ್ಜಿಗೆ, ಮೊಸರಿಗೆ ಚಿಂತೆಯಿಲ್ಲ. ಕರು ತುಂಬಾ ಮುದ್ದಾಗಿದೆ. ಈಗ ತಿಂಗಳು ತುಂಬಿದೆ. ಅಪ್ಪಿ ದಿನಕ್ಕೆ ಮೂರು ಲೀಟರ್ ಹಾಲು ಕೊಡ್ತಾಳೆ. ಸಂಜೆ ಕರುವಿಗೆ ಹೆಚ್ಚು ಹಾಲು ಬಿಡ್ತೀನಿ. ಕರುವಿಗೆ ಅಮ್ಮಿ ಅಂದ ಹೆಸರಿಟ್ಟಿದ್ದೀನಿ. ಈ ಬಾರಿ ಅಪ್ಪಿ-ಅಮ್ಮಿಯ ಪೂಜೆನ ನಿನ್ನ ಕೈಯಿಂದಲೇ ಮಾಡಿಸ್ತೀನಿ. ಅದನ್ನು ನೋಡಿದಾಗ ನಿನ್ನ ಪ್ರೀತಿಯ ಅಕ್ಕತ್ತಿ ನೆನಪಾಗ್ತಾಳೆ. ಅಕ್ಕತ್ತಿನೂ ಹಾಗೇ ಮುದ್ದಾಗಿದ್ಳು, ನೀನು ಅವಳ ಜೊತೆಗೇ ಮಲಗೋಕೆ ರಚ್ಚೆ ಹಿಡಿಯುತ್ತಿದ್ದೆ.

ಮಗಳೇ, ನೀನು ಬರುವುದೇ ಬೆಟ್ಟದಷ್ಟು ಖುಷಿ ನನಗೆ. ನಾಲ್ಕು ದಿನ ರಜೆ ಹಾಕಿ ಬಂದುಬಿಡು.ಅಳಿಯನನ್ನೂ ಕರ‍್ಕೊಂಡು ಬಾ. ಬೇಸಿಗೆ ಬಂದ್ರೂ, ನಮ್ಮೂರಲ್ಲಿ ಸೆಖೆ ಇಲ್ಲ. ಬಾವಿ ತುಂಬಿಕೊಂಡಿದೆ. ಮನೆಯ ಅಂಗಳದಲ್ಲಿ ಇನ್ನೊಂದಷ್ಟು ಹೂಗಿಡಗಳನ್ನು ತಂದು ಹಾಕಿದ್ದೀನಿ. ಸೇವಂತಿಗೆ, ಗುಲಾಬಿ ಹೂವು ಬಿಟ್ಟಿದೆ. ವಾಪಸ್‌ ಹೋಗುವಾಗ ಮುಡಿತುಂಬಾ ಹೂವ ಮುಡ್ಕೊಂಡು ಹೋಗು. ಸಣ್ಣವಳಿರುವಾಗ ನಿನ್ನ ಉದ್ದದ ಜಡೆಗೆ ಅದೆಷ್ಟು ಹೂವು ಮುಡಿಸಿದ್ನೋ. ಈಗ ನಿನ್ನ ಚೋಟುದ್ದ ಜಡೆ ನೋಡುವಾಗ ಕೆಟ್ಟ ಸಿಟ್ಟು ಬಂದುಬಿಡುತ್ತೆ ನೋಡು. ಇರಲಿ ಬಿಡು, ನಿಮ್ಮ ಪ್ಯಾಟೆ ಸ್ಟೈಲು ನಿಂಗೆ.

ಮನೆ, ಹಟ್ಟಿ ಸ್ವಚ್ಛ ಮಾಡ್ಬೇಕು, ಅಟ್ಟದಲ್ಲಿ ವರ್ಷವಿಡೀ ತುಂಬಿದ ಕಸ...ಎಲ್ಲವನ್ನೂ ಸ್ವಚ್ಛಮಾಡ್ಬೇಕು. ಈಗ್ಲೇ ಕೆಲ್ಸಗಳು ಆರಂಭವಾಗಿದೆ. ಅಂಗಳಕ್ಕೆ ಸಗಣಿ ಸಾರೋಕೆ ಪಕ್ಕದ್ಮನೆಯ ಸೀತಕ್ಕ ಮೂರು ದಿನ ಮೊದಲೇ ಬರುತ್ತಾಳೆ. ನಿನ್ ತಮ್ಮಂಗೆ ಹೊಲ, ತೋಟದ ಕೆಲ್ಸ ವಹಿಸಿಬಿಟ್ಟಿದ್ದೀನಿ. ಅವನಿಗೆ ಒಂಚೂರು ಪುರುಸೋತ್ತು ಇಲ್ಲ. ಈ ಬಾರಿ ವಿಶೇಷ ಅಂದ್ರೆ ಸೊಸೆ ಮನೆಗೆ ಬಂದಿದ್ದಾಳೆ. ನನ್ನ ಕೆಲ್ಸಗಳಿಗೆ ಅವಳ ಸಾಥ್ ಇದ್ದೇ ಇದೆ.

ನಿಂಗೆ ಈಗ್ಲೆ ಎರಡು ರೇಷ್ಮೆ ಸೀರೆ ತಂದಿಟ್ಟಿದ್ದೀನಿ ಕಣೇ. ನೀನು ಬಿಳಿ ಬಣ್ಣಕ್ಕೆ ಒಪ್ಪುವ ಆಕಾಶ ನೀಲಿ ಹಾಗೂ ಹಸಿರು ಬಣ್ಣದ ಸೀರೆಗಳು. ಅದಕ್ಕೆ ಚಿನ್ನದ ಬಣ್ಣದ ಬಾರ್ಡರ್. ಮಿರಮಿರನೆ ಮಿನುಗುವ ಸೆರಗು. ನೀನು ಉಟ್ಟರೆ ಥೇಟ್ ಮದುಮಗಳಂತೆ ಕಾಣ್ತಿ ನೋಡು. ನೀನು ಮನೆಯಲ್ಲೇ ಆ ಸೀರೆ ಉಡ್ಬೇಕೆಂದು ರವಿಕೆ ಕೂಡ ಹೊಲಿಸಿಟ್ಟಿದ್ದೀನಿ. ಇನ್ನೊಂದು ಜೊತೆ ಚಿನ್ನದ ಬಳೆ ಮಾಡಿಟ್ಟಿದ್ದೀನಿ. ಬೇಗನೇ ಬಂದುಬಿಡು ಮಗಳೇ. ಜೊತೆಗೆ ನಿನಗೆ ಏನು ಬೇಕು ಅದೆಲ್ಲಾ ಮಾಡಿಟ್ಟಿದ್ದೀನಿ. ಕಳೆದ ವರ್ಷದ ಜೇನುತುಪ್ಪ, ಹಪ್ಪಳ, ಉಪ್ಪಿನಕಾಯಿ ಇನ್ನೂ ಹಾಗೇ ಇದೆ. ತಕ್ಕೊಂಡು ಹೋಗ್ತೀವಿಯಂತೆ. ಅಂದಹಾಗೆ, ಪತ್ರ ನೋಡಿ ಸಿಡಾಸಿಡಾ ಅನ್ಬೇಡ. ಈ ಬಾರಿ ನೀನು ಬರ‍್ಲೇಬೇಕು. ಮುಗಿಸ್ತೀನಿ, ಪತ್ರ ಬರಿ.


(ಫೋಟೋ: ಗೂಗಲ್‌ನಲ್ಲಿ ಹುಡುಕಿದಾಗ ಸಿಕ್ಕಿದ್ದು!!)

Thursday, March 8, 2012

ನೀನೆಷ್ಟು ಧೈರ್ಯವಂತೆ ಕಣಮ್ಮಾ?


ಅಮ್ಮ ಇವತ್ತು ನಿಂಗೆ ಪತ್ರ ಬರೀಲೇಬೇಕು. ಇಂದು ಮಹಿಳಾ ದಿನ. ಬೆಳಿಗೆದ್ದು ಟಿವಿ. ಪತ್ರಿಕೆಗಳನ್ನು ನೋಡಿದೆ. ಸಾಧಕಿ ಮಹಿಳೆಯರ ಗುಣಗಾನ. ಶೋಷಣೆಗಳ ಕಣ್ಣೀರು. ಆದರೆ, ನನಗೆ ನೆನಪಾಗಿದ್ದು ಇವೆಲ್ಲವುಗಳನ್ನು ಮೀರಿ ಬದುಕಿದ ನೀನು. ನನ್ನಮ್ಮ ಎಷ್ಟು ಒಳ್ಳೆಯವಳು, ನನ್ನಮ್ಮ ಎಷ್ಟು ಬುದ್ಧಿವಂತೆ, ಅಕ್ಷರಗಳ ಪರಿಚಯವಿಲ್ಲದಿದ್ದರೂ ಅದೆಷ್ಟು ಜ್ಞಾನವಂತೆ ನನ್ನಮ್ಮ ಅನಿಸ್ತು. ನಿನ್ನ ಬಗ್ಗೆ ಹೆಮ್ಮೆಯಿಂದ ಬೀಗಿದೆ. ಈಗ ನನಗೆ ನೀನಿಲ್ಲದ ಹೊತ್ತು. ಗಂಡನ ಜೊತೆಗೆ ಬದುಕು ಕಟ್ಟಿದ್ದೀನಿ. ಇದು ಪ್ರತಿ ಹೆಣ್ಣು ಮಗಳ ಜೀವನದ ಅನಿವಾರ್ಯತೆ.

ನನಗಿನ್ನೂ ನೆನಪಿದೆ ಅಮ್ಮ. ನನ್ನ ಕಲಿಕೆಗೆ ನೀನೆಷ್ಟು ಕಷ್ಟಪಟ್ಟೆ ಅಂತ. ಅಪ್ಪ ನಮ್ಮ ಬಿಟ್ಟುಹೋದ, ಅಜ್ಜ ಮನೆಯಿಂದಲೇ ಹೊರಹಾಕಿದ. ಒಪ್ಪೊತ್ತಿನ ಅನ್ನಕ್ಕೂ ಪರದಾಡುವ ಸಂದರ್ಭ. ಬರೀ ಬೀಡಿ ಸುರುಟಿ ನನ್ನ ಓದಿಸಿದೆ, ಡಿಗ್ರಿ ಕೊಡಿಸಿದೆ, ಕ್ಲಾಸಿನಲ್ಲಿ ಫಸ್ಟ್ ಬರುವಂತೆ ಮಾಡಿದೆ. ನಾನು ಸ್ಕೂಲಿಗೆ ಹೋಗುತ್ತಿದ್ದಾಗ ಪಕ್ಕದ್ಮನೆಯ ಗೌಡ್ರ ಮನೆಯ ಮಕ್ಕಳ ಬುತ್ತಿಯಲ್ಲಿದ್ದ ರೊಟ್ಟಿ ನನಗೂ ಬೇಕೆಂದು ರಚ್ಚೆ ಹಿಡಿದಾಗ ರೊಟ್ಟಿ ಮಾಡಿಕೊಟ್ಟೆ. ಗೌಡ್ರ ಮಗಳ ಹಕ್ಕಿಗಳ ಚಿತ್ರವಿರುವ ಬಣ್ಣದ ಬ್ಯಾಗ್ ಕೇಳಿದಾಗ ಅದನ್ನೂ ತಂದಿತ್ತೆ. ಮನೆಯಲ್ಲಿ ಓದಲು ಟೇಬಲ್, ಕುರ್ಚಿ ಬೇಕೆಂದಾಗ ಅದನ್ನೂ ಮಾಡಿಸಿಕೊಟ್ಟೆ. ರಜೆ ಕಳೆದು ಸ್ಕೂಲಿಗೆ ಕಳುಹಿಸುವಾಗ ಹೊಸ ಬಟ್ಟೆಗಳನ್ನು ತೊಡಿಸಿ ಶಾಲೆಗೆ ಕಳುಹಿಸಿದೆ. ವಾರದ ಕೊನೆಯಲ್ಲಿ ಐಸ್‌ಕ್ಯಾಂಡಿಗೆ ದುಡ್ಡು ಬೇಕೆಂದಾಗ ನಾಲ್ಕಾಣೆ ಕೊಡಲು ನೀನು ಮರೆಯಲಿಲ್ಲ.

ಪರೀಕ್ಷೆ ಮಾರ್ಕ್ಸ್ ಕಾರ್ಡಿಗೆ ಸೈನ್ ಹಾಕೋಕೆ ಹೇಳಿದಾಗ ಶಾಲೆಗೇ ಬಂದು ಹೆಬ್ಬೆಟ್ಟು ಒತ್ತಿದೆ. ಅರ್ಥವಾಗದನ್ನು ಮೇಷ್ಟ್ರ ಬಳಿ ಕೇಳಿ ತಿಳ್ಕೊಂಡೆ. ಸ್ಕೂಲ್ ಡೇ ದಿನ ನನ್ನ ಜೊತೆಗೆ ಬಂದು ವೇದಿಕೆ ಮುಂದೆ ಕುಳಿತೆ. ವೇದಿಕೆಯಲ್ಲಿ ಮಿಂಚುತ್ತಿದ್ದ ನನ್ನ ನೋಡಿ ಹೆಮ್ಮೆಪಟ್ಟೆ. ಬಹುಮಾನಗಳು ಸಿಕ್ಕಾಗ ಎದ್ದು ನಿಂತು ಚಪ್ಪಾಳೆ ತಟ್ಟಿದೆ. ಇನ್ನೂ ಒಂದು ತಮಾಷೆ ಎಂದರೆ, ಆರಂಭದಲ್ಲಿ ಸ್ಕೂಲ್‌ಗೆ ಹೋಗಲು ಭಯಪಡುತ್ತಿದ್ದ ನನ್ನ ಜೊತೆ ನೀನು ಸ್ಕೂಲ್‌ಗೆ ಬಂದು ಕೂರುತ್ತಿದ್ದಿ ಅಲ್ವಾ? ಎಂಥ ಒಳ್ಳೆಯ ಅಮ್ಮ ನೀನು?

ನನಗಿನ್ನೂ ನೆನಪಿದೆ ಅಮ್ಮ. ನಿನಗೆ ಓದು ಬರದಿದ್ದರೂ, ಚಿತ್ರಗಳನ್ನು ನೋಡಿಯೇ ಪಾಠ ಹೇಳುತ್ತಿದ್ದೆ. ಕಥೆ ಹೇಳುತ್ತಿದ್ದೆ.. ಅದ್ಹೆಂಗೇ ಮಗ್ಗಿ ಹೇಳುತ್ತಿದ್ದೆ ನನಗೇ ಅಚ್ಚರಿ. ನನ್ನಮ್ಮ ಅಕ್ಷರ ಗೊತ್ತಿಲ್ಲದ ವಿದ್ಯಾವಂತೆ ಅಂತ ಹೆಮ್ಮೆಪಡುತ್ತಿದ್ದೇನೆ. ಹೋದಲೆಲ್ಲಾ ಹೆಬ್ಬೆಟ್ಟು ಒತ್ತುತ್ತಿದ್ದ ನಿನಗೆ ಸಹಿ ಮಾಡೋಕೆ ನಾನು ಕಲಿಸಿದ್ದೆ. ಒಂದೇ ದಿನದಲ್ಲಿ ಸಹಿ ಹಾಕಲು ಕಲಿತ ನಿನ್ನ ಬುದ್ದಿಮತ್ತೆಗೆ ಸಲಾಂ ಅಮ್ಮ. ಕಾನೂನು ಕಟ್ಟಳೆ, ಜಮೀನು ವ್ಯವಹಾರ, ತೋಟದ ಕೆಲ್ಸ ಎಲ್ಲವನ್ನೂ ನೀಟಾಗಿ ಮಾಡೋ ನಿನ್ನ ಜ್ಞಾನ ಯಾರಿಗೇನು ಕಡಿಮೆ?

ನನ್ನಪ್ಪ ನಮ್ಮ ಬಿಟ್ಟುಹೋದಾಗ ನನಗಿನ್ನೂ ಎರಡು ವರ್ಷ. ದಟ್ಟಕಾಡಿನ ಮಧ್ಯೆ ಮುಳಿಹುಲ್ಲಿನ ಮನೆಯಿತ್ತು. ಸುತ್ತಮುತ್ತ ಮನೆಗಳಿಲ್ಲ. ಮನೆಗೆ ಬಿದಿರ ಬಾಗಿಲು. ಮಳೆಗಾಲದಲ್ಲಿ ಹಾವುಗಳ ಕಾಟ. ರಾತ್ರಿಯಿಡೀ ಚಿಮಿಣಿ ದೀಪ ಹಚ್ಚಿಕೊಂಡು ಬೆಳಕಿನೆದುರು ಮೌನವಾಗಿ ನನ್ನ ಎದೆಗವಚಿಕೊಂಡು ಕೂರುತ್ತಿದ್ದೆ . ಆಗ ಅಜ್ಜ-ಅಜ್ಜಿ ನೆರವಾಗಲಿಲ್ಲ. ಸಂಬಂಧಿಕರ ಕರೆ ಇರಲಿಲ್ಲ. ಸಮಾಧಾನ ಹೇಳಬೇಕಾದ ನನ್ನ ಕಣ್ಣುಗಳಷ್ಟೇ ಮಾತನಾಡುತ್ತಿದ್ದವು. ಜಗತ್ತಿನ ಅರಿವೂ ನನಗಿರಲಿಲ್ಲ. ಆ ಪುಟ್ಟ ಗುಡಿಸಲಿನಲ್ಲೇ ಎಂಥ ಅದ್ಭುತವಾದ ಬದುಕು ಕಟ್ಟಿದೆ ನೀನು?

ಕಷ್ಟಗಳು ಬಂದಾಗ ಇನ್ನೊಬ್ಬರ ಮನೆಯೆದುರು ಹೋಗಿ ಗೋಳೋ ಎಂದು ಅಳಲಿಲ್ಲ ನೀನು. ಕೆಲಸ ಕೊಡಿ ಎಂದು ಬೇಡಲಿಲ್ಲ ನೀನು. ಅಸಹಾಯಕಳಾಗಿ ಕೈ ಕಟ್ಟಿ ಕುಳಿತಿಲ್ಲ ನೀನು. ಬದುಕು ನೀಡದ ಅಪ್ಪ-ಅಮ್ಮನಿಗೆ, ಗಂಡನಿಗೂ ಬೈಯಲಿಲ್ಲ ನೀನು. ಬದಲಾಗಿ ಬೀಡಿ ಸುರುಟಿದೆ, ಹಸುಗಳನ್ನು ಸಾಕಿದೆ, ಆಡುಗಳನ್ನು ಸಾಕಿದೆ, ಎಮ್ಮೆಗಳನ್ನು ಸಾಕಿ ಹಾಲು ಕರೆದು ಕೈ ತುಂಬಾ ನೋಟು ಎಣಿಸಿದೆ. ತೆಂಗಿನಗಿಡ, ಅಡಿಕೆ ಗಿಡ, ಬಾಳೆ ಗಿಡ, ಕರಿಮೆಣಸು ಬೆಳೆದೆ. ಜೋಳ ಬಿತ್ತಿದೆ. ನಿನ್ನ ಕೈತೋಟದಲ್ಲೇ ಕೃಷಿಯ ಅರಮನೆ ಕಟ್ಟಿ ನನ್ನ ಬೆಳೆಸಿದೆ. ಪುಟ್ಟದಾದ ಮನೆ ಕಟ್ಟಿ ಸೂರು ಮಾಡಿಕೊಂಡೆ. ಎಂಥ ಧೈರ್ಯವಂತೆ ಅಮ್ಮ ನೀನು? ಪ್ರತಿ ಸಲ ನಿನ್ನ ಬಗ್ಗೆ ಬರೀತೀನಿ, ಹೇಳ್ಕೋತೀನಿ. ನೀನು ಬರೆದು ಮುಗಿಯದ ಕಾವ್ಯ, ನಿರಂತರವಾಗಿ ಹರಿಯೋ ತೊರೆ. ಇವತ್ತಿಗೆ ಇಷ್ಟು ಸಾಕು. ಪತ್ರ ಓದಿ ಒಂದೇ ಒಂದ್ಸಲ ಬಾಯಿ ಅಗಲಿಸಿ ಜೋರಾಗಿ ನಕ್ಕುಬಿಡು ಕೇಳಿಸಿಕೊಳ್ತಿನಿ

(ಫೋಟೋ: ಗೂಗಲ್‌ನಲ್ಲಿ ಹುಡುಕಿದಾಗ ಸಿಕ್ಕಿದ್ದು!!)

Tuesday, March 6, 2012

ನನ್ನವನಿಗೆ ಸುಮ್ನೆ ಒಂದು ಪತ್ರ

ಕಳೆದುಹೋಯಿತು ಎರಡು ವಸಂತ. ಸುಖಾಸುಮ್ಮನೆ ಕುಳಿತು ಹಿಂತಿರುಗಿ ನೋಡಿದಾಗ ಅರೆ! ೨ ವರ್ಷ ಅನ್ನೋ ಅಚ್ಚರಿ. ಅಕ್ಷರಗಳಲ್ಲೇ ಬದುಕಿನ ಅರಮನೆ ಕಟ್ಟಿದ್ದು , ಅಕ್ಷರಗಳನ್ನೇ ಪ್ರೀತಿಯ ಮುತ್ತಾಗಿ ಪೋಣಿಸಿದ್ದು ಎಲ್ಲವೂ ಸಿಹಿಸಿಹಿ ನೆನಪು. ಎರಡು ವರ್ಷಗಳ ಹಿಂದೆ ಸಂಬಂಧಗಳ ನಡುವೆ ಹರಿದಾಡಿದ್ದ ಪತ್ರಗಳನ್ನು ಮತ್ತೆ ಬಿಚ್ಚಿ ನೋಡುವ ಖುಷಿ.

ಆರಂಭದಲ್ಲಿದ್ದ ಸಿಟ್ಟು-ಸಿಡುವಿನ ಕಾವು ಈಗಿಲ್ಲ. ಆಗೊಮ್ಮೆ -ಈಗೊಮ್ಮೆ ಗೆಳೆಯರ ಮಧ್ಯೆ ನೆನಪಾಗುತ್ತಿದ್ದ ಸಿಗರೇಟಿನ ಹೊಗೆಯಿಲ್ಲ. ಈಗಲೂ ನೀನು ಆಗಾಗ ನೊರೆ ಉಕ್ಕಿಸುವ ಬಿಯರ್ ಬಾಟಲಿ ಮೇಲೆ ಕೊಂಚ ಮುನಿಸಿದೆ. ಇರಲಿಬಿಡು!

ಸುಖಾಸುಮ್ಮನೆ ರೇಗುವ ನಿನ್ನ ಮುಖದಲ್ಲಿ ನಗುವಿನ ಕಮಲ ಅರಳಿದೆ. ಮಾತು-ಮಾತಿಗೂ ಮುನಿಯುತ್ತಿದ್ದ ನನ್ನಲ್ಲೂ ನಗು ಅರಳಿದೆ, ಬದುಕು ಸುಖಿಸುತ್ತಿದೆ. ಬದುಕು ತುಂಬಾ ಖುಷಿಯ ಸುಗ್ಗಿ ಹರಿಸಿದ್ದಿ. ನನ್ನದೆಯ ತುಂಬಾ ಹೊಸಹೊಸ ಕನಸುಗಳ ಕಸುವು ಮಾಡಿದ್ದಿ. ಹೆಚ್ಚೇನೂ ಹೇಳಲ್ಲ. ಅಕ್ಕರೆಯ ಅರಮನೆಯಲ್ಲಿ ಕವಿ ಹೇಳಿದಂತೆ ನಾನೊಂದು ಪುಟ್ಟಕೊಳ, ನೀನದರ ಜೀವಜಲ.

Saturday, March 3, 2012

ನನಗೊಬ್ಳು ನಾದಿನಿ ಬಂದ್ಳು


ನನಗೊಬ್ಬನೇ ತಮ್ಮ. ಅಮ್ಮನ ಜೊತೆಗೆ ಕೃಷಿಗೆ ಯಜಮಾನ. ಮೊನ್ನೆ-ಮೊನ್ನೆ ಅವನಿಗೂ ಮದುವೆ ಆಯಿತು. ನನ್ನ ಮದುವೆ ಹಳ್ಳಿ ಸೊಬಗನ್ನೆಲ್ಲಾ ಮೈತುಂಬಿಸಿಕೊಂಡಿರಲಿಲ್ಲ. ಆದರೆ, ತಮ್ಮನಿಗೆ ಚಾನ್ಸ್ ಸಿಕ್ಕಿತು. ಹಸಿರು ವನದ ನಡುವಿರುವ ನಮ್ಮನೆಯಲ್ಲೇ ಮದುವೆ.

ವಾರದ ಮೊದಲೇ ಮನೆಯಂಗಳದಲ್ಲಿ ತೆಂಗಿನ ಮಡಲಿನ ಚಪ್ಪರದ ಶೃಂಗಾರ. ಮಾವಿನ ತಳಿರುಗಳ ತೋರಣ ಚಪ್ಪರಕ್ಕೆ ರಂಗು ತಂದಿತ್ತು. ಅಗಳವಾದ ಅಂಗಳ. ಸುತ್ತಲೂ ಅಮ್ಮ ನೆಟ್ಟ ಹೂವಿನ ಗಿಡಗಳು. ನಮ್ಮನೆಯ ಬಾವಿಯಲ್ಲಿ ನೀರಿಗೆ ಬರವಿಲ್ಲ, ಹಾಗಾಗಿ, ಹೂವಿನ ಗಿಡಗಳೂ ಹಸುರು ಹಸುರಾಗಿವೆ. ಅಂಗಳದಿಂದ ಇಳಿಯುತ್ತಲೇ ತೋಟ, ಸುತ್ತಮುತ್ತ ದೊಡ್ಡ ದೊಡ್ಡ ಮರಗಳು. ಮದುವೆಗೆಂದು ಸಿಂಗಾರಗೊಂಡ ಮನೆಯೇ ಮದುಮಗಳಂತೆ ಕಂಗೋಳಿಸುತ್ತಿತ್ತು.

ಮದುವೆಗೆ ತಮ್ಮನದೇ ಓಡಾಟ. ಅಮ್ಮನಿಗೆ ಆರೋಗ್ಯದ ಚಿಂತೆ. ದೂರದೂರಿನಲ್ಲಿ ಗಂಡನ ಹುಡುಕಿದ ನನಗೆ ಮನೆ ಹತ್ತಿರವಿರಬಾರದಿತ್ತೇ ಅನಿಸುತ್ತಿದೆ ನಿಜ. ತಮ್ಮನ ಮದುವೆಗೆ ನಾನೇ ಓಡಾಟ ಮಾಡಬೇಕನಿಸಿತ್ತು. ಅನಿವಾರ್ಯ ಬದುಕು. ಬೆಂಗಳೂರಲ್ಲಿ ಇನ್ನೊಂದು ಅಮ್ಮ ಸಿಕ್ಕಿದ್ದಾರೆ, ಅದು ಅತ್ತೆಮ್ಮ. ಮೂರು ದಿನಗಳ ಮೊದಲು ತವರು ಸೇರಿದೆ. ತಮ್ಮನಿಗೆ ಗಡಿಬಿಡಿ.
ಮದುವೆ ಗಂಡಿಗೆ ರೆಸ್ಟ್ ಇಲ್ಲ. ಜೊತೆಗೆ ವಾರದ ಮೊದಲೇ ತಯಾರಿ. ಸುತ್ತಮುತ್ತಲಿನ ಗೌಡ್ರ ಹೆಂಡ್ತಿಯರು ಮನೆಯಲ್ಲಿ ಠಿಕಾಣಿ.



ನಮ್ಮ ಅಪ್ಪನ, ಅಜ್ಜಿಯ ಕಡೆಯವರೆಲ್ಲಾ ಮನೆ ತುಂಬಿಕೊಂಡಿದ್ದರು. ಮಾತು, ಹಾಸ್ಯ, ನಗು, ಖುಷಿ-ಖುಷಿಯ ಜಾತ್ರೆ. ನನ್ನ ಅಜ್ಜನ ಕಡೆಯವರು ಆರು ಮಂದಿ ಅತ್ತಿಗೆ ಆಗಬೇಕಾದವ್ರು ಇದ್ದಾರೆ. ಎಲ್ಲರೂ ಎರಡು ದಿನ ಮೊದಲೇ ಮನೆ ಸೇರಿದ್ದರು. ಅವರು ಬಂದ್ರೆ ಸಾಕು ಮನೆಯಲ್ಲಿ ಜನಜಾತ್ರೆ. ಅಡುಗೆ ಮನೆಯಲ್ಲೂ ಅವರದೇ ಕಾರುಬಾರು. ನಮ್ಮನೆಯ ಹಿಂದೆ ಅಡುಗೆಗೆಂದೇ ಚಪ್ಪರದ ಹಾಲ್ ರೆಡಿಯಾಗಿತ್ತು. ಸುತ್ತಮುತ್ತಲಿನ ಮನೆಗಳಿಂದಲೇ ಪಾತ್ರೆಗಳನ್ನು ತಂದದ್ದಾಯಿತು.ಇದಕ್ಕೇನೂ ಬಾಡಿಗೆ ರೊಕ್ಕವಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಕೆಲ್ಸ. ಸಾಗಣಿ ಸಾರಿದ ಅಂಗಳದಲ್ಲೇ ತರಕಾರಿ ಹಚ್ಚುವ ಕೆಲಸ

ಮದುವೆಗೆ ಮೊದಲ ದಿನ ಮದರಂಗಿ ಶಾಸ್ತ್ರ. ರಾತ್ರಿಯಿಡೀ ಪರಸ್ಪರ ಅಂಗೈಯಲ್ಲಿ ಚಿತ್ತಾರ ಬಿಡಿಸುವ ಕೆಲಸ. ಆಗಾಗ, ನಡುರಾತ್ರಿಯಲ್ಲೂ ಪಟಾಕಿಗಳ ಸದ್ದು. ಯಾರಿಗೂ ನಿದ್ದೆಯಿಲ್ಲ. ಹಾಡು-ಆಟಗಳಲ್ಲೇ ಕಳೆದುಹೋಗುವ ಸಮಯ. ಚಂದ್ರ ಮರೆಯಾಗಿ ಸೂರ್ಯ ಕಾಣುವ ತನಕವೂ ಮಾತಿನ ಜಾತ್ರೆ.

ಸೂರ್ಯ ಮೇಲೆರುವ ಹೊತ್ತಿಗೇ ಹೆಣ್ಣಿನ ಕಡೆಯವರ ದಿಬ್ಬಣ. ಲುಂಗಿ-ರುಮಾಲು ಸುತ್ತಿದ ಬಂಟರು. ಮೈ ತುಂಬಾ ಒಡವೆಯಲ್ಲಿ ಸೀರೆಯುಟ್ಟ ಹೆಂಗಳೆಯರ ನಗೆಚೆಲುವು. ತೋಟದಲ್ಲೆಲ್ಲಾ ಓಡಾಡಿ ಖುಷಿಪಡುವ ಪುಟಾಣಿಗಳ ಕಲರವ. ಮದುವೆಯಾಗದ ಗಂಡುಮಕ್ಕಳ ಕಣ್ಣಲ್ಲಿ ಹುಡುಕಾಟ. ನನ್ನ ಯಾರು ನೋಡುತ್ತಾರೋ ನಾಚಿಕೆಯಲ್ಲಿ ಮುದುಡಿದ ಹುಡುಗಿರ ಕಣ್ಣುಗಳು. ಅಕ್ಕನ ಜೊತೆಗೆ ಆಗಾಗ ಕ್ಯಾಮರಾಕ್ಕೆ ಪೋಸು ಕೊಡುವ ಮದುಮಗಳ ತಂಗಿ. ಚಿನ್ನ-ಬಣ್ಣಗಳಿಂದ ದೂರವಿದ್ದ ನನಗೆ ಅಮ್ಮನಿಂದ ಬೈಗುಳ. ಕೈ ತುಂಬಾ ಬಳೆ ಹಾಕು, ಒಡವೆ ಹಾಕೋ, ಮುಡಿಗೆ ಹೂವ ಮುಡಿ, ನೀಟಾಗಿ ಸೀರೆಯುಟ್ಟುಕೋ,..ಹೇಳಿ ಹೇಳಿ ಅಮ್ಮನಿಗೇ ಸುಸ್ತು. ಮಗಳ ಬಗ್ಗೆ ಕೊಂಚ ಕೋಪ. ಅಂತೂ ಮದುವೆ ಮುಗಿಯಿತು. ಮನೆಗೆ ಮಗಳೊಬ್ಬಳು ಬಂದ ಖುಷಿ ಅಮ್ಮನಿಗೆ, ಹೆಂಡ್ತಿ ಬಂದ ಖುಷಿ ತಮ್ಮನಿಗೆ, ಅಮ್ಮನ ಮಾತುಗಳಿಗೆ ಕಿವಿಯಾಗಿ, ಬದುಕಿಗೆ ಸಾಥ್ ನೀಡುವ ಗಟ್ಟಿಗಿತ್ತಿ ನಾದಿನಿ ಬಂದ ಖುಷಿ ನನಗೆ.

Wednesday, February 1, 2012

ನಮ್ಮೂರಿಗೆ ಕರೆಂಟು ಬರುತ್ತಿದೆ....



ನಮ್ಮೂರಿಗೆ ಕರೆಂಟು ಬರುತ್ತಿದೆ. ಕಂಬಗಳನ್ನು ಹಾಕೋಕೆ ಗುಂಡಿ ತೋಡಿದ್ದಾರೆ. ಏಪ್ರಿಲ್ ಒಳಗೆ ಕರೆಂಟು ಬರಬಹುದು ಮಗಾ. ಆಮೇಲೆ ಸೀಮೆಎಣ್ಣೆ ಖರ್ಚಿಲ್ಲ. ನಿಂಗೆ ಊರಿಗೆ ಬಂದ್ರೆ ಬೋರಾಗಕ್ಕಿಲ್ಲ. ಕರಂದ್ಲಾಜೆ ಶೋಭಕ್ಕನೇ ಕರೆಂಟು ಕಳಿಸಿರಬೇಕು....ಹೀಗೆ ಪಕ್ಕದ್ಮನೆ ಅಜ್ಜಿಯ ನಾನ್ ಸ್ಟಾಪ್ ಮಾತುಗಳು ಮುಂದುವರೆಯುತ್ತಲೇ ಇದ್ದವು.
ಬೆಂಗಳೂರಿನಿಂದ 8 ಗಂಟೆಗಳ ಪ್ರಯಾಣ ಮಾಡಿ ನಮ್ಮನೆಗೆ ತಲುಪುವಷ್ಟರಲ್ಲಿ ಉಸ್ಸಪ್ಪಾ ಎಂದು ಜಗಲಿ ಮೇಲೆ ಕುಳಿತು ಒಂದು ಚೊಂಬು ನೀರು ಕುಡಿದು ಸುಧಾರಿಸಿಕೊಳ್ಳುತ್ತಿದ್ದೆ. ಹೀಗಿದ್ದರೂ ನಾನು ಊರಿಗೆ ಹೋದ ಖುಷಿಯಲ್ಲಿ ಅಜ್ಜಿ ಕರೆಂಟು ಪುರಾಣವನ್ನು ಹೇಳುತ್ತಲೇ ಇತ್ತು. ಪುತ್ತೂರು ತಾಲೂಕಿನ ದೋಳ್ಳಾಡಿ ಗ್ರಾಮದಲ್ಲಿ ಕಳೆಂಜೋಡಿ ಎಂಬಲ್ಲಿರುವುದು ನಮ್ಮನೆ. ಸುತ್ತಲೂ ದಟ್ಟ ಕಾಡು, ಹಸಿರು ಹಸಿರು. ವರ್ಷವಿಡೀ ಕೂಲ್ ಕೂಲ್. ನೀರಿಗೆ ಬರವಿಲ್ಲ. ಕೂಲಿ-ನಾಲಿಗೆ ಬರವಿಲ್ಲ. ಊರಮಂದಿಗೆಲ್ಲ ಸಾಹುಕಾರರು. ತೋಟವಿದೆ, ಬೇಕಾದಷ್ಟು ಜಮೀನಿದೆ. ಅಡಿಕೆ, ತೆಂಗಿನ ಗಿಡಗಳು ಬೇಸಿಗೆಯಲ್ಲೂ ಹಸಿರಾಗಿರುತ್ತವೆ. ತೋಟ ತುಂಬಾ ದನಕರುಗಳು ಅಂಬಾ ಅನ್ನುತ್ತವೆ. ಇಲ್ಲಿರುವುದು ಬರೇ ಹತ್ತು ಮನೆ. ದ್ವೀಪದಂತೆ, ಆದರೆ ಸುತ್ತಲೂ ನೀರಿಲ್ಲ, ಬದಲಾಗಿ ಆಕಾಶದೆತ್ತರಕ್ಕೆ ಬೆಳೆದ ಮರಗಳಿವೆ. ಹಾಗಾಗಿ, ಈ ಕರೆಂಟು ಮರಗಳನ್ನು, ಕಾಡನ್ನು ದಾಟಿ ಬರಬೇಕು. ಇಷ್ಟು ವರ್ಷಗಳ ಕಾಲ ನಮ್ಮೂರಿಗೆ ಕರೆಂಟು ಕನಸಾಗಿತ್ತು. ಈಗ ಗುಂಡಿ ತೋಡಿದ್ದಾರೆ


ನಮ್ಮ ಅಮ್ಮ ಸಣ್ಣವರಿರುವಾಗ ಮನೆಮುಂದೆ ಆನೆ, ಹುಲಿ ನೋಡಿದ್ದಾರಂತೆ. ಈಗಲೂ ಕಡವೆ, ಮೊಲ, ಕಾಡುಹಂದಿ, ಕೋತಿಗಳು ಅಂಗಳಕ್ಕೆ ಬಂದು ನಕ್ಕು ಓಡುತ್ತವೆ. ಅಂಥ ಕಾಡುಹಳ್ಳಿಯಿಂದ ಸ್ಕೂಲಿಗೆ ಹೋಗಬೇಕಾದರೆ ಕನಿಷ್ಠ ಏಳು ಕಿ.ಮೀ. ನಡೆಯುತ್ತಿದೆ. ಹೋಗುವಾಗ ಏಳು, ಬರುವಾಗ ಏಳು. ದಿನದಲ್ಲಿ 14 ಕಿ.ಮೀ. ನಡಿಗೆ. ಆಗ ಕಾಲುಗಳು ದಣಿಯುತ್ತಿರಲಿಲ್ಲ. ಸುಸ್ತು ಅನ್ನೋ ಪದವೇ ಗೊತ್ತಿರಲಿಲ್ಲ. ಓಡಾಡಲು ಗಾಡಿ ಬೇಕನಿಸುತ್ತಿರಲಿಲ್ಲ. ಚಿಮಿಣಿ ದೀಪದಡಿ ಓದಿದರೂ ತರಗತಿಯಲ್ಲಿ ಮೊದಲ ಸ್ಥಾನ ಬಿಟ್ಡುಕೊಡುತ್ತಿರಲಿಲ್ಲ. ಪಠ್ಯ-ಪಠ್ಯೇತರ ಎರಡರಲ್ಲೂ ಮೊದಲ ಸ್ಥಾನ ನನ್ನದಾಗಿತ್ತು. ಊರಿಗೆ ಹೋದಾಗ ಎಲ್ಲವೂ ನೆನಪುಗಳು ಕಣ್ಣಂಚಿನಲ್ಲೇ ಸರಿದುಹೋದವು.

ಕರೆಂಟಿಲ್ಲದ ಆ ಊರಿನಲ್ಲಿ, ಅಷ್ಟೊಂದು ದೂರ ನಡೆದು ಓದಿದ್ದೆ. ಅದೇ ದಟ್ಟಕಾಡಿನ ನಡುವಿನ ಮನೆಯಲ್ಲಿ ಅಮ್ಮ ಕಲಿಸಿದ ಬದುಕಿಗೆ ರೆಕ್ಕೆ ಕಟ್ಟಿ ಬೆಂಗಳೂರಿಗೆ ಹಾರಿಬಂದಿದ್ದು. ಈಗ ಊರಿಗೆ ಹೋದರೆ 1 ಕಿ.ಮೀ. ನಡೆಯುವುದೂ ಕಷ್ಟವಾಗುತ್ತಿದೆ. ಬೆಂಗಳೂರಿನಿಂದ ಊರಿಗೆ ಹೋದಾಗ ಅಮ್ಮ ಸಂಜೆ ಚಿಮಿಣಿ ದೀಪ ಹಚ್ಚಿ ಹೇಳುತ್ತಾಳೆ, ಬೆಂಗಳೂರಿನಲ್ಲಿ ಕರೆಂಟು ನೋಡಿ, ಇಲ್ಲಿ ರಾತ್ರಿ ಬೋರ್ ಅನಿಸಬಹುದೆಂದು!

ಒಂದು ಸಲ ಅಮ್ಮ ಹೇಳಿದ್ದಳು: ಮೆಣಸಿನಕಾಯಿ ಗಿಡ ಕೊಡ್ತೀನಿ. ತಕೊಂಡು ಹೋಗಿ ನೆಡು ಎಂದು. ಅಮ್ಮನ ಮಾತು ನನಗೆ ಅಚ್ಚರಿಯಾದರೂ ಅವಳಿಗೆ ಸಹಜ. ನಾನು ಹೇಳಿದೆ: ಬೆಂಗಳೂರಲ್ಲಿ ಮೆಣಸಿನಗಿಡ ಹಾಕೋಕೆ ಜಾಗ ಸಿಗಲ್ಲ ಎಂದು. ಬಳಿಕ ಅಮ್ಮನ ಒಂದು ವಾರದ ಮಟ್ಟಿಗೆ ಬೆಂಗಳೂರಿಗೆ ಕರೆದುಕೊಂಡು ಬಂದೆ. ಒಂದು ವಾರ ನಮ್ಮನೆ ಅವಳಿಗೆ ಬಂಧನ ಅನಿಸಿಬಿಟ್ಟಿತು. ಬರೇ ವಾಹನ, ಕಟ್ಟಡಗಳೇ ಇವೆ. ಅಲ್ಲಿ. ಒಂದೇ ಒಂದು ಹಸಿರು ಗಿಡನೂ ಕಾಣಿಸಲ್ಲ ಅಂದಳು. ಒಂದು ವಾರದ ಬಂಧನದಿಂದ ಕಳಚಿ ವಾಪಸ್ ಊರಿಗೆ ಹೋದವಳು ಊರ ಮಂದಿ ಹೇಳಿದಾಗ, ಅಲ್ಲಿ ಕೃಷಿ, ತೋಟ, ಗದ್ದೆ, ದನಗಳು ಏನೂ ಇಲ್ಲ. ಬರಡು ಭೂಮಿ ಅಂದ್ಳತೆ.