Monday, July 27, 2009

...ಕಣವಿಯವರ ಒಂದಿಷ್ಟು ಸಾಲುಗಳು...

ಎಲ್ಲೋ ಓದಿದ ಚೆನ್ನವೀರ ಕಣವಿ ಅವರ ಕವನದ ಸಾಲುಗಳು ನನಗೆ ಇಷ್ಟವಾಗಿ ನನ್ನ ಪುಟ್ಟ ಡೈರಿಯಲ್ಲಿ ಬರೆದಿಟ್ಟಿದ್ದೆ. ನೀವೂ ಓದಿಕೊಳ್ಳಿ.

"ಬರೆದ ಕವಿತೆಯ ಭಾರ ಬರೆಯದ ಕವಿತೆಗಳಿಗಿಂತ ಹೆಚ್ಚಲ್ಲ"

"ಪ್ರಕೃತಿ ತನ್ನೆದೆಯ ಮಧುವಾಟಿಕೆಯ ತೆರೆದಿರಲು
ಅದನು ಹೀರದೆಯೆ ಸಾಗಬಹುದೇ?
ಯಾರಿಗೀ ಸುಂದರತೆ ಯಾರಿಗೀ ಪರವಶತೆ?
ಯಾರ ಸುಖಕೀ ಸೃಷ್ಟಿ ನಿನಗಲ್ಲದೇ?"


"ಮಾಯೆಯಿಕ್ಕುವ ಕರದ ತಾಲಲಯಕ್ಕೆ
ದೇಶಕಾಲಗಳು ನರ್ತಿಸುತ ಸಾಗಿವೆ"

"ಬಾಲ್ಯದಿಂದಲೂ ಮುಗಿಲ ಕಂಡು
ಮೈಮರೆತ ದಿನಗಳೆನಿತು!
ಅವುಗಳಾಟದಲ್ಲಿ ಮೈಯಮಾಟದಲ್ಲಿ
ಜೀವ ತುಂಬಿಬಂತು"


"ಮುಗಿಲ ಬೆಳಕಿನ ಬೀಜ ಮರವಾಗಿ ನೆಲವ ತಬ್ಬಿತ್ತು"

"ಏನಾದರೂ ಆಗಲಿ, ಹಾಡು ನಿಲ್ಲಿಸಬೇಡ
ದೀಪ ಪಟ್ಟನೆ ಆರಿ ಹೋಗಬಹುದು
ನನ್ನೆದೆಯ ಕತ್ತಲೆಯ ಕಣ್ಣುಕಪ್ಪಡಿ ಮತ್ತೆ
ಮೂಲೆ-ಮೂಲೆಗೆ ಹೋಗಿ ಹಾಯಬಹುದು"


"ಬಾಳಪುಟದಲ್ಲಿ ಬಾಲ್ಯವೆಂಬುವುದೊಂದು
ಅಳಿಸಲಾರದ ಮಧುರ ಭಾವಗೀತ"

"ಬದುಕು ಸೋಲಾದರೂ ಕಾಡು ಪಾಲದರೂ
ಹಾಡು ಬಿಟ್ಟುಳಿದವನ ಪಾಡು ಬೇಡ
ನೀನೆನ್ನ ದೈವತವು ಹಾಡೆನ್ನ ಜೀವಿತವು
ಮತ್ತೆ ಮತ್ತುಳಿದವರ ಮಾತು ಬೇಡ"


"ಮೆಲ್ಲದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ
ಹೆಣ್ಣ ಕಣ್ಣಂಚಿನಲ್ಲಿ ತುಳುಕುವಂತೆ"

"ಹೊಗೆ ನಟ್ಟು ಹೋಗಿರುವ ಮನದ ಮನೆಗೋಡೆಗಳು
ಸುಣ್ಣ-ಬಣ್ಣವನೆಂದು ಕಾಣಬಹುದು?
ಇಲ್ಲಣವು ಜೋತಿರುವ ಜೇಡಬಲೆ ನೇತಿರುವ
ಬೆಳಕಿಂಡಿಯಲ್ಲಿ ಬೆಳಕದೆಂತುಬಹುದು?"


"ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ"

ಜೀವನಪ್ರೀತಿಗೆ ಪರಿಧಿಯ ಹಂಗೇಕೆ?

ಜೀವನ ಪ್ರೀತಿಯ ಅನುಭೂತಿ ...!

ಯಾಕೋ ಇದ್ದಕಿದ್ದಂತೆ ಮತ್ತೆ ಮತ್ತೆ ಕಾಡೋ ನನ್ನೋಳಗಿನ ಇಬ್ಬನಿ ಹನಿಯಿದು. ತುಂಬಾ ಸಲ ಜೀವನ ಪ್ರೀತಿಯ ಅನುಭೂತಿಯೇ? ಅನ್ನೋ ಅನುಮಾನದ ಪ್ರಶ್ನೆ ನನ್ನೊಳಗೆ ಕಾಡಿದ್ದರೂ, ಹೌದು, ಈ ಬದುಕು ಪ್ರೀತಿಯ ಅನುಭೂತಿ ಅನ್ನುತ್ತಿದ್ದೆ ನನ್ನ ಆತ್ಮಸಾಕ್ಷಿ. ಒಂದು ಕ್ಷಣ ಕಣ್ಣಂಚು ಒದ್ದೆಯಾದರೂ, ನೋವು-ನಲಿವಿನ ಗೆರೆಗಳು ಕಣ್ಣಂಚಿನಲ್ಲಿ ಸರಿದು ಹೋದರೂ 'ಜೀವನವೇ ಪ್ರೀತಿಯ ಅನುಭೂತಿ' ಎಂದನಿಸುತ್ತೆ. ಹೌದು, ಈ ಜಗತ್ತು, ಈ ಜನ್ರು, ಈ ಪ್ರಕೃತಿ, ಈ ಪ್ರಾಣಿ ಪ್ರಪಂಚ, ಈ ಸರ್ವ ಜೀವಸಂಕುಲವನ್ನು ಕಲಿಯೋಕೆ, ತಿಳಿಯೋಕೆ ಅದೆಷ್ಟೋ ವರುಷಗಳು ಸರಿದಿವೆ. ಅಮ್ಮನ ಎದೆಹಾಲಿನ ಹಠ ಬಿಟ್ಟು ಅದೆಷ್ಟು ವರುಷ ಸರಿದಿದೆ ಅಲ್ವಾ?

ಅಲ್ಲಿಂದ ಇಲ್ಲಿತನಕ ಜೀವನವನ್ನು ಪ್ರೀತಿಸುತ್ತಾ, ನನ್ನಂತೆ ಇತರರು ಅನ್ನುತ್ತಾ, ಆತ್ಮಸಾಕ್ಷಿಯ ಮಾತಿಗೆ ತಲೆದೂಗುತ್ತಾ ಬಂದಿರೋವರಿಗೆ ಜೀವನದಲ್ಲಿ ಪ್ರೀತಿಯ ಅನುಭೂತಿ ಪಡೆಯೋದೇ ಒಂದು ಅದೃಷ್ಟ ಅನ್ನಬೇಕು. ಮೊನ್ನೆ ಮೊನ್ನೆ ನನ್ನ ಪ್ರೀತಿಯ ಗೆಳೆಯ ಚೆಂದದ ಸಾಲೊಂದು ಬರೆದುಕೊಡು ಎಂದಾಗ ನಂಗೆ ಥಟ್ಟನೆ ಹೊಳೆದ ವಾಕ್ಯ: ಜೀವನ ಪ್ರೀತಿಯ ಅನುಭೂತಿ!

ನಿಮಗೂ ಹಾಗೇ ಅನಿಸಲ್ವಾ ಹೇಳಿ? ಮನುಷ್ಯನಿಗೆ ಏಳೇಳು ಜನ್ಮವಿರುತ್ತೆ ಅಂಥ ನಮ್ಮಜ್ಜಿ ಹೇಳಿದ ನೆನಪು. ಹೌದು, ಅದಕ್ಕೆ ಮಾನವ ಜನ್ಮ ದೊಡ್ಡದು, ಅದನ್ನು ಹಾಳು ಮಾಡಿ ಕೊಳ್ಲದಿರಿ ಹುಚ್ಚಪ್ಪಗಳಿರಾ! ಎಂದು ಹಾಡಿದ್ದಿರಬೇಕು ದಾಸರು. ಹುಲ್ಲು, ಪೊದೆ, ಪ್ರಾಣಿಗಳಾಗಿ ಹುಟ್ಟುವ ಬದಲು ಮನುಷ್ಯನಾಗಿ ಹುಟ್ಟೋದೇ ಲೇಸು ಅಂತಾರೆ ಹಿರಿಯರು.

ಹುಟ್ಟಿದ ಮೇಲೆ, ಹುಟ್ಟಿ ಬೆಳೆದ ಮೇಲೆ ಇದೆಲ್ಲಾ ನೆನೆಪಾಗುತ್ತೆ ಕಣ್ರೀ. ಹೌದು, ನಾನೂ ಹುಟ್ಟಿದ್ದೇನೆ..ಮನುಷ್ಯಳಾಗಿ! ಒಂದಿಷ್ಟು ಭಾವನೆಗಳು, ಒಂದಿಷ್ಟು ಪ್ರಿತಿ, ಒಳ್ಳೆಯದೆನಿಸುವ ಜೀವನ, ಹೃದಯದಲ್ಲಿ ಒಂದಿಷ್ಟು ಕನಸು, ಅಮ್ಮನ ಮಮತೆ, ವಾತ್ಸಲ್ಯ, ಎಲ್ಲನೂ ದೇವ್ರು ಕೊಟ್ಟಿದ್ದಾನೆ. ಹಸಿವ ಹೊಟ್ಟೆಗೆ, ಉಡೋ ಬಟ್ಟೆಗೆ, ಬಸ್ಸಿಗೆ ಓಡಾಡೋಕೆ, ಅಮ್ಮನ ಕನಸಿಗೆ ಜೀವ ತುಂಬೋಕೆ: ಕೈಗೊಂದು ಪುಟ್ಟ ಕೆಲಸ! ಆಸರೆಗೆ ಪುಟ್ಟದೊಂದು 'ಮನೆ', ಅದೇ ನನ್ನ ಪಾಲಿನ 'ಅರಮನೆ'. ಅಕ್ಷರಗಳಿಗೆ ಜೀವ ತುಂಬೋಕೆ ಒಂದಿಷ್ಟು ಸುಂದರ ಭಾವನೆಗಳು, ನನ್ನಂತೆ ಪರರೂ ಎನ್ನೋ ಪುಟ್ಟದಾದ ಮನಸ್ಸು, ಇತತರ ನೋವು-ನಲಿವಿಗೆ ಸ್ಪಂದಿಸುವ ಹೃದಯ..ಸಾಕಲ್ವೇ? ಬದುಕನ್ನು ಪ್ರೀತಿಸೋಕೆ!

ನಿನ್ನೆ ಸುನಂದಾ ಬೆಳಗಾಂವಕರ ಅವರ, 'ಕೊಡುವುದೇನು, ಕೊಂಬುದೇನು?' ಪುಸ್ತಕ ಓದುತ್ತಿದ್ದೆ. ಅವರೊಂದು ಕಡೆ ಹೇಳುತ್ತಾರೆ, "'ದೇವರು ಈ ಜೀವನವನ್ನು ಪ್ರೀತಿಸುವುದಕ್ಕೆಂದೇ ಕೊಟ್ಟಿದ್ದಾನೆ, ದ್ವೇಷಿಸುವುದಕ್ಕಲ್ಲ. ಪ್ರೀತಿ, ದ್ವೇಷ ಬೆಳಕು ನೆಳಲಿನ ಆಟ. ದ್ವೇಷಿಸುತ್ತಾ ಬದುಕುವುದು ಒಂದು ಶಾಪ. ಪ್ರೀತಿಸುತ್ತಾ ಬದುಕುವುದು ಒಂದು ವರ"!

ಬಹುಶಃ ಈ ಪುಟ್ಟ ಲೇಖನಕ್ಕೆ ಸ್ಫೂರ್ತಿ ಕೂಡ ಇದೇ ಸತ್ವಯುತವಾದ ಶಬ್ಧಗಳಿರಬಹುದು. ಜೀವನಪ್ರೀತಿಗೆ ಪರಿಧಿ ಬೇಡ, ಅದು ಶರಧಿಯಂತೆ ಪ್ರವಹಿಸಲಿ. ಪ್ರೀತಿಗೆ ಹಂಗು ಬೇಡ..ನಮ್ಮ ಬದುಕನ್ನೇ ಪ್ರೀತಿಸಿ ಬಿಡೋಣ. ಅಲ್ಲಿ ಅನನ್ಯತೆಯಿದೆ, ಪ್ರಾಮಾಣಿಕತೆ ಇದೆ, ನಿಷ್ಕಲ್ಲಶ ಭಾವನೆಯಿದೆ. ಮತ್ತೇನು ಬೇಕು? ಒಂಬತ್ತು ತಿಂಗಳು ಹೊತ್ತು, ಹೆತ್ತು, ಸಲಹಿ, 'ನಾವೀಗ ದೊಡ್ಡವರಾಗಿದ್ದೇವೆ' ಅನ್ನೋದನ್ನು ಹೇಳಿಕೊಳ್ಳುವಂತೆ ಮಾಡಿರುವ 'ಅಮ್ಮನೆಂಬ ದೇವರು' ನೀಡಿದ ಈ ಅಮೂಲ್ಯ ಬದುಕಿಗೆ?

Wednesday, July 15, 2009

ನನ್ನೊಳಗಿನ ಇಬ್ಬನಿ ಹನಿಗಳು...

ಜೀವನ ಪ್ರೀತಿಯ ಅನುಭೂತಿ!

ಒಂದೇ ಒಂದು ಕ್ಷಣಕ್ಕೆ ನೀನು ಕವಿತೆಯಾಗು, ಮಳೆ ಬರ್ತಾ ಇದೆ!

ಬದುಕಿನಲ್ಲಿ ಇಟ್ಟಿದ್ದು ಎರಡನೇ ಹೆಜ್ಜೆ, ಅದರಲ್ಲಿ ಒಂದು ನೀನು!

ಮನಸ್ಸು ಒಣಗಿತ್ತು, ಥಟ್ಟನೆ ನೆನಪುಗಳು ಮುತ್ತಿದವು!

ನಗುಮಳೆಯಲ್ಲಿ ತೊಯ್ದುಬಿಡ್ತೀನಿ, ಕವನ ಬರೇತೀಯಾ ಹೇಳು!

ಒಡೆಯದಿರು ಕನ್ನಡೀನಾ..ಮತ್ತೆ ಒಂದಾಗಿಸೋಕೆ ಆಗೋಲ್ಲ.

ನಾನ್ಯಾಕೆ ನಗಬೇಕು..ನಿನ್ನ ನಗುವೇ ನನ್ನೊಳಗಿರುವಾಗ!

ಅಂದು ತುಂಬಾ ಅತ್ತಿದ್ದೆ. ನೀನು ಅಮ್ಮನಾಗಬೇಕಂದಿತ್ತು ಮನಸ್ಸು!

ನಿನ್ನ ನಗು ಮತ್ತು ಕಣ್ಣುಗಳನ್ನು ಪ್ರೀತಿಸ್ತೀನಿ. ಖುಷಿಯಲ್ಲಿದ್ದಾಗ ಬೆಳಕು ಕೊಡು.

ಯಾಕೋ ಕಾಡುತ್ತಿವೆ ಬಚ್ಚಿಟ್ಟುಕೊಂಡ ನೆನಪುಗಳು, ಆದರೆ ಅವುಗಳಿಗೆ ಜೀವವಿರಲಿಲ್ಲ!

ಕನಸು ಕಲ್ಲಾಗುವ ಮೊದಲು, ಹುಣ್ಣಿಮೆ ಬೆಳದಿಂಗಳು ಸೂಸಿಬಿಡು, ನಾನೂ ನಗುತ್ತೇನೆ..ನಿನ್ನಂತೆ!

ಬೆಳದಿಂಗಳಲ್ಲಿ ಕಲ್ಲು ಬೆಂಚಿನ ಮೇಲೆ ಕುಳಿತ ಎನಗೆ ಅಮ್ಮ ನೀಡಿದ ತುತ್ತು ನೆನಪಾಯಿತು, ಅಲ್ಲಿ ನಗುತ್ತಿದ್ದೆ!

Thursday, July 9, 2009

ನಾವ್ಯಾಕೆ 'ಮಗು'ವಿನ 'ನಗು'ವಾಗೊಲ್ಲ...?

ಹೌದು, ಆ ಮಗು ನನ್ನ ನೋಡಿ ಮುಗುಳುನಗು ಸೂಸಿಬಿಡ್ತು. ಏನೋ ಯೋಚನೆಯಲ್ಲಿ ಮುಳುಗಿದ್ದ ನಾನೂ ನಕ್ಕುಬಿಟ್ಟೆ...ನನಗರಿವಿಲ್ಲದೆಯೇ! ನಿಮಗೂ ಹಾಗೇ ಆಗಬಹುದು. ಹೌದು..ಅದಕ್ಕೆ ಕಾರಣ ಆ ಪುಟ್ಟ ಮಗುವಿನ ನಗು! ಹೌದು..ಮಕ್ಕಳು ನಕ್ಕರೆ ಹಾಗೇ ಸಕ್ಕರೆಯಂತೆ!. ನಾವು ನಮ್ಮನ್ನೇ ಮರೆತುಬಿಡುವಷ್ಟು ಚೆನ್ನಾಗಿ ನಗುತ್ತವೆ. ಎಷ್ಟೋ ಬಾರಿ ನನ್ನ ಮನಸ್ಸು ಆ ಮಗುವಿನಂತೆ ನಾನೂ ನಗಲು ಸಾಧ್ಯವಾಗುತ್ತಿದ್ದರೆ ಎಂದನಿಸುತ್ತೆ. ನಮ್ಮನೆ ಪಕ್ಕದ ಮಗು ಯಾಮಿನಿ ನಿತ್ಯ ಬಂದು ನಾನು ಸಿಟ್ಟಲ್ಲಿ ಗೊಣಗುಟ್ಟುತ್ತಿದ್ದರೂ ಆಂಟಿ ಆಫಿಸ್ ನಿಂದ ಯಾವಾಗ ಬಂದ್ರೀ? ಅಂತ ಕೇಳಿದಾಗ ಸಿಟ್ಟೆಲ್ಲ ಜರ್ರನೆ ಇಳಿದುಹೋಗುತ್ತೆ. ಮೊದಲ ಮಹಡಿಯಲ್ಲಿರುವ ಶ್ರೇಯಸ್ಸು ನನ್ನ ಚಪ್ಪಲ ಸದ್ದಿಗೆ ಬಾಗಿಲ ಬಳಿ ಬಂದು ಸಂದಿಯಲ್ಲಿ ನಿಂತು ಮುಗ್ಧವಾಗಿ ನಕ್ಕಾಗ ಮನತುಂಬಿ ಬಿಡುತ್ತೆ. ಬೆಳಿಗ್ಗೆಯಿಂದ ಸಂಜೆ ತನಕ ಆಫೀಸ್ ನಲ್ಲಿ ದುಡಿದು ದಣಿದರೂ ಆ ದಣಿವನ್ನೆಲ್ಲಾ ಆ ನಗು ನುಂಗಿಬಿಡುತ್ತೆ. ನಾನು ಈ ಹಿಂದೆ 'ನಾನೂ ಮಗುವಾಗಿರಬೇಕಿತ್ತು' ಎಂಬ ಬರಹ ಬರೆದಾಗ 'ಮಕ್ಕಳ ಜೊತೆ ನೀನು ಮಗುವಾಗಿಬಿಡು' ಅಂತ ಸಲಹೆ ನೀಡಿದವರು ಅದೆಷ್ಟೋ ಮಂದಿ. ಹೌದು, ನಂಗೂ ಹಾಗೇ ಅನಿಸುತ್ತೆ..ಪುಟ್ಟ ಮಕ್ಕಳ ಜೊತೆ ನಾವೂ ಮಕ್ಕಳಾಗಿಬಿಡೋದು ಎಷ್ಟು ಖುಷಿ ಕೊಡುತ್ತೆ ಅಂತ.

ಓನರ್ ಆಂಟಿಯ ಮಗು ಮನೀಷ್ ಬಂದು ತೊಡೆ ಮೇಲೆ ಕುಳಿತು ಬ್ಯಾಗೆಲ್ಲಾ ಡೈರಿ ಮಿಲ್ಕ್ ಕೊಡು ಎಂದು ಪೀಡಿಸಿದಾಗ ಅದೇ ಒಂಥರಾ ಖುಷಿ. ಬ್ಯಾಟ್ ಹಿಡಿಯಲು ಬಾರದ ಮಕ್ಕಳ ಜೊತೆ ನಾವೂ ಬ್ಯಾಟ್ ಹಿಡಿದು ಆಡೋದು ಅದೂ ಒಂಥರಾ ಖುಷಿ. ಕಾಲು ಜಾರಿ ದೊಪ್ಪನೆ ನೆಲದ ಮೇಲೆ ಬಿದ್ದ ಮಗುವನ್ನು ಸಂತೈಸಿದಾಗ ಆ ಮಗು ನೋವನ್ನೆಲ್ಲಾ ಮರೆತು ನಗುತ್ತೆ ಅಲ್ವಾ? ಅದೂ ಒಂದು ನೆಮ್ಮದಿಯ ಖುಷಿ. ಮಕ್ಕಳು ನಕ್ರೆ ಖುಷಿ, ಅತ್ರೂನೂ ಖುಷಿ, ಹೇಗಿದ್ರುನೂ ಮಕ್ಕಳು ಚೆಂದವೇ, ಅದಕ್ಕೆ ಮಕ್ಕಳನ್ನು ದೇವರಿಗೆ ಹೋಲಿಸುತ್ತಾರೆ. ಇನ್ನು ಕೆಲ ಮಕ್ಕಳು ತೊಟ್ಟಿಲಲ್ಲಿ ಮಲಗಿ ನಿದ್ದೆ ಮಾಡುತ್ತಿರುವಾಗಲೇ ನಗುತ್ತವೆ..ನನ್ನ ತಮ್ಮ ಹಾಗೇ ನಗುವಾಗ ಅಮ್ಮ ಹೇಳುತ್ತಿದ್ದ ನೆನಪು: ಮಗು ಅಂದ್ರೆ ದೇವರು ಪುಟ್ಟಾ, ಅದಕ್ಕೆ ನೋಡು ಇವ ನಗುತ್ತಾನೆ ಅಂತ!

ಹೌದು, ನಾವೂ ಮಕ್ಕಳಾಗಿರುವಾಗ ಹೀಗೆ ತೊಟ್ಟಿಲಲ್ಲಿ ನಕ್ಕಿರಬಹುದು, ಅತ್ತಿರಬಹುದು, ಅಲ್ಲೇ ಉಚ್ಚೆ ಹೊಯ್ದಿರಬಹುದು. ಆವಾಗ ಎಷ್ಟು ಮಂದಿ ನಮ್ಮ ಮುದ್ದಿಸುತ್ತಿದ್ದರು, ಆಟವಾಡಿಸುತ್ತಿದ್ದರು. ನಮ್ಮ ಜೊತೆ ಎಷ್ಟೋ ಮಂದಿ ಮಕ್ಕಳಾಗುತ್ತಿದ್ದರು ಎಂದನಿಸುತ್ತೆ. ಆದರೆ ಯಾಕೋ ಒಂದು ಪುಟ್ಟ ನೋವು ನಿತ್ಯ ನನ್ನೆದೆ ಕಾಡುತ್ತೆ, ಪೀಡಿಸುತ್ತೆ, ನೋಯಿಸುತ್ತೆ.
ಅದೇ ಪುಟ್ಟ ಮಗುವಾಗಿದ್ದಾಗ ಜಗತ್ತಿಗೇ 'ನಗು'ವಾಗಿದ್ದ ಈ ಮನುಷ್ಯ ಅದೇಕೆ ಕಳ್ಳನಾಗುತ್ತಾನೆ, ದರೋಡೆ ಮಾಡುವವನಾಗುತ್ತಾನೆ, ಸಮಾಜಕ್ಕೆ ಕಳಂಕವಾಗುತ್ತಾನೆ, ತಾಯಿ ಸಮಾನಳಾದ ಹೆಣ್ಣನ್ನು ಅತ್ಯಾಚಾರ ಮಾಡಿ ಬೀದಿಗೆಸೆಯುತ್ತಾನೆ, ಮೋಸ, ವಂಚನೆಯ ಕೂಪಕ್ಕೆ ತನ್ನ ಒಡ್ಡಿಕೊಳ್ಳುತ್ತಾನೆ? ಪುಟ್ ಪಾತ್ ನಲ್ಲಿ ನಡೆಯೋ ಬಡಬಗ್ಗರ ಮೇಲೆ ತನ್ನ ವಾಹನ ಸವಾರಿ ಮಾಡಿ 'ಕೊಲೆಗಾರ' ನಾಗುತ್ತಾನೆ? ಏಕೆ ಕನಸುಗಳನ್ನು ಕೊಂದು ಕೊಚ್ಚಿಹಾಕುತ್ತಾನೆ? ತನ್ನ ಗೋರಿಯನ್ನು ತಾನೇ ಯಾಕೆ ಕಟ್ಟಿಕೊಳ್ಳುತ್ತಾನೆ? ಬದುಕಿನ ಇತಿಹಾಸದಲ್ಲಿ 'ನಾಯಕ' ನಾಗುವಅದೇಕೆ 'ಖಳನಾಯಕ' ನಾಗುತ್ತಾನೆ? ಅಯ್ಯೋ ಆ ಪುಟ್ಟ ಮಗು ಅದೇಕೋ ಭಯೋತ್ಪಾದಕನಾದ? ಇಂಥ ಮಿಲಿಯನ್ ಡಾಲರ್ ಪ್ರಶ್ನೆಗಳು ನನ್ನ ನಿತ್ಯ ಕಾಡುತ್ತವೆ.

ಹೌದು, ಪ್ರತಿ ಮಾನವನೂ ಹುಟ್ಟುವಾಗ ಒಳ್ಳೆಯವನಾಗಿರುತ್ತಾನೆ, ಸುತ್ತಲ ಸಮಾಜ ಅವನನ್ನು ಕೆಟ್ಟವನಾಗಿಸುತ್ತದೆ ಯಾರೋ ತಿಳಿದವರು ಹೇಳಿದ ಮಾತು ನೆನಪಾಗುತ್ತಿದೆ. ಪುಟ್ಟ ಮಗುವಾಗಿದ್ದಾಗ ಸಮಸ್ತವನ್ನೂ , ಸಮಸ್ತರನ್ನೂ ಪ್ರೀತಿಸುವ ನಮ್ಮ ಮನಸ್ಸು ದೊಡ್ಡವರಾದಂತೆ ಪ್ರೀತಿಗೊಂದು ಪರಿಧಿ, ಸ್ನೇಹಕ್ಕೊಂದು ಪರಿಧಿ, ಬದುಕಿನ ಹೆಜ್ಜೆ-ಹೆಜ್ಜೆಯ ಬಾಂಧವ್ಯಗಳನ್ನೂ 'ಪರಿಧಿ'ಯೊಳಗೆ ಹಾಕಿಬಿಡುತ್ತವೆ. ಮಗುವಿನಂತೆ ಪ್ರೀತಿಸುವ, ಮಗುವಿನಂತೆ ನಕ್ಕು ಖುಷಿಕೊಡುವ ಆ ಮುಗ್ಧ, ಪ್ರಾಮಾಣಿಕ ಮನಸ್ಸು ಯವುದೋ 'ಪರಿಧಿ' ಯೊಳಗೆ ಸುತ್ತುತ್ತಿರುತ್ತೆ ಎಂದನಿಸುತ್ತೆ. ಜೀವನದಲ್ಲಿ ಪ್ರೀತಿ, ಸ್ನೇಹ-ಬಾಂಧವ್ಯಗಳ ಅನನ್ಯ ಅನುಭೂತಿಯಿಂದ 'ಬದುಕುವವರು' ವಂಚಿತರಾಗೋದು ಹೀಗೇ ಅಲ್ಲವೇ?

ಹೌದು, ಈ ದೇಶ ಮಗುವಿನ ನಗು ಸೂಸೋದು ಯಾವಾಗ? ಮತ್ತೆ ಮತ್ತೆ ಕೇಳುತ್ತಿದ್ದೆ ನನ್ನ ಅಂತರಾತ್ಮ ಕಂಗಳಲ್ಲಿ ಭರವಸೆಯ ಹುಣ್ಣಿಮೆ ಬೆಳಕು ಸೂಸುತ್ತಾ?!