Thursday, March 21, 2013

ಕದ್ದು ಕೇಳಿದ ದೆವ್ವದ ಕತೆಗಳು


ನಾನು ಮಗುವಾಗಿದ್ದಾಗ ನಮ್ಮದು ಅವಿಭಕ್ತ ಕುಟುಂಬ. ಒಂದೇ ಮನೆಯಲ್ಲಿ ಹತ್ತು-ಹದಿನೈದು ಮಂದಿ. ರಾತ್ರಿ ಹೊತ್ತು ದೊಡ್ಡೋರೆಲ್ಲ ಜೊತೆಗೆ ಕುಳಿತು ಊಟ ಮಾಡೋರು. ಮಕ್ಕಳಿಗೆಲ್ಲಾ ಬೇಗ ಊಟ ಹಾಕಿ ಮಲಗಿಸಿಬಿಡೋರು. ಊಟಕ್ಕೆ ಕುಳಿತಾಗ ಮತ್ತು ಊಟದ ಬಳಿಕ ಒಂದಷ್ಟು ಹೊತ್ತು "ಮಕ್ಕಳಿಗೆ ತಿಳಿಯಬಾರದ ವಿಷಯಗಳನ್ನು'' ದೊಡ್ಡೋರೆಲ್ಲ ಮಾತಾಡೋರು. ಆ ಲಿಸ್ಟ್ ನಲ್ಲಿ ದೆವ್ವದ ಕತೆಯೂ ಇತ್ತು. ಮಕ್ಕಳೆಲ್ಲಾ ಮಲಗಿದ ಮೇಲೆ ಅಜ್ಜಿ ಎಲ್ಲರಿಗೂ ಬಡಿಸಿ ದೆವ್ವದ ಕತೆ ಶುರುಮಾಡೋಳು. ನಾವೆಲ್ಲ ಮುಸುಕು ಹೊದ್ದು ಮಲಗುತ್ತಿದ್ದೇವು. ಆದರೆ, ನನಗೆ ನಿದ್ದೆಯೇ ಬರುತ್ತಿರಲಿಲ್ಲ. ಹೊದಿಕೆಯೊಳಗೆ ಕಣ್ಣುಬಿಟ್ಟುಕೊಂಡು ಹಾಗೇ ದೆವ್ವದ ಕತೆಗಳನ್ನು ಕೇಳುತ್ತಿದ್ದೆ. ಆದರೆ, ಹೆಚ್ಚಿನ ಸಮಯದಲ್ಲಿ ಈ ದೆವ್ವದ ಕತೆಗಳು ನನ್ನ ನಿದ್ದೆಯನ್ನು ಕಸಿದುಕೊಂಡಿದ್ದಂತೂ ನಿಜ. ಇದರಲ್ಲಿ ಆಯ್ದ ಮೂರು ಕತೆಗಳು ಇಲ್ಲಿವೆ.

********
ನಮ್ಮಜ್ಜ ತಾಳೆಮರದಿಂದ ಶೇಂದಿ ತೆಗೆಯುತ್ತಿದ್ದ. ಮುಂಜಾನೆಯಿಂದ ಸಂಜೆ ಐದರ ತನಕ ಅಜ್ಜನಿಗೆ ಈ ಕೆಲ್ಸ. ಪ್ರತಿದಿನ ರಜೆ ಹಾಕದೆ ನಿಯತ್ತಾಗಿ ದುಡಿಯೋನು. ಸಂಜೆ ಹೊತ್ತು. ಐದು ಗಂಟೆಗೆ ಸೊಂಟಕ್ಕೆ ಕತ್ತಿ ಕಟ್ಟಿಕೊಂಡು ಅಜ್ಜ ಹೊರಟಿದ್ದ. ಅಜ್ಜಿನೂ ಜೊತೆಗೆ ಹೊರಟಿದ್ಳಂತೆ. ಇನ್ನೇನೋ ಸೂರ್ಯ ಮುಳುಗುವ ಸಮಯ. ಕತ್ತಲಾಗುತ್ತಿತ್ತು...ಅಜ್ಜಿಯನ್ನ ತಾಳೆಮರದ ಕೆಳಗೆ ನಿಲ್ಸಿ ಅಜ್ಜ ಶೇಂದಿ ತೆಗೆಯೋಕೆ ಹತ್ತಿದ್ದ. ಅಜ್ಜಿ ಅಲ್ಲೇ ಪಕ್ಕದಲ್ಲಿದ್ದ ಗೇರು ಮರದ ಕೆಳಗಡೆ ಕುಳಿತಿದ್ದಳಂತೆ. ಎದುರುಗಡೆ ಅಸ್ಪಷ್ಟ ಆಕೃತಿ ಬಂದು ಮಾತಾಡಿಸಿದಂತೆ ಕೇಳಿಸಿತಂತೆ. ಜೊತೆಗೆ, ಜೋರಾಗಿ ಚಪ್ಪಾಳೆ ತಟ್ಟಿತ್ತಿತ್ತು. ಅಜ್ಜಿಗೆ ಗಾಬರಿಯಾಗಿ ಅಜ್ಜನ ಜೋರಾಗಿ ಕೂಗಿದ್ಳಂತೆ. ಅಜ್ಜ ಮರದ ತುದಿಯಿಂದಲೇ ಹೇಳಿದ್ರಂತೆ, " ನಿನಗೆ ಶೇಂದಿ ಕೊಡ್ತೀನಿ. ಸುಮ್ಮನಿದ್ದುಬಿಡು'' ಎಂದು. ಚಪ್ಪಾಳೆ ಸದ್ದು ನಿಂತಿತು. ಅಜ್ಜ ಕೆಳಗಿಳಿದು ಒಂದು ತೆಂಗಿನ ಚಿಪ್ಪಿನಲ್ಲಿ ಶೇಂದಿ ಇಟ್ಟುಬಿಟ್ಟು ಅಜ್ಜಿನ ಕರೆದುಕೊಂಡು ವಾಪಾಸ್ ಆದ್ತಂತೆ.

********
ಅಜ್ಜ ಒಂದು ದಿನ ನಮ್ಮನೆಗೆ ಬರುತ್ತಿದ್ದ. ಅಜ್ಜನಿಗೆ ಹಗಲು ಹೊತ್ತು ಶೇಂದಿ ತೆಗೆಯೋ ಕೆಲ್ಸ. ರಾತ್ರಿ ಹೊತ್ತು ನಮ್ಮನೆಯ ದನ-ಆಡುಗಳನ್ನು ನೋಡಿಕೊಳ್ಳಲು ನಮ್ಮನೆಗೆ ಬರೋನು. ನಮ್ಮಮ್ಮ 11 ಆಡುಗಳು ಮತ್ತು 3 ದನಗಳನ್ನು ಸಾಕಿದ್ದಳು. ಬೆಳಿಗೆದ್ದು ಅವುಗಳ ಕೆಲ್ಸ ಜಾಸ್ತಿ ಇರೋದ್ರಿಂದ ಅಜ್ಜ ರಾತ್ರಿ ನಮ್ಮನೆಗೆ ಬಂದುಬಿಡೋನು. ಒಂದು ದಿನ ಅಜ್ಜ ಬರುವಾಗ ತುಂಬಾ ರಾತ್ರಿಯಾಗಿತ್ತು.  ಸಂಜೆ ಹೊತ್ತಿನ ಹುಳಿ ಶೇಂದೀನ ಹೊಟ್ಟೆಗೇರಿಸಿಕೊಂಡು ಸ್ವಲ್ಪ ಟೈಟಾಗೇ ಅಜ್ಜ ರಾತ್ರಿ ಹೊತ್ತು ನಮ್ಮನೆಗೆ ಹೊರಟಿದ್ದ. ದಟ್ಟಕಾಡಿನ ನಡುವೆ ಕಾಲುದಾರಿ. ಬರೀ ಪಾದಗಳನ್ನು ಊರಲಷ್ಟೇ ಜಾಗ. ಸುತ್ತಮುತ್ತ ದೊಡ್ಡ ದೊಡ್ಡ ಮರಗಳು, ಎತ್ತರಕ್ಕೆ ಬೆಳೆದ ಹುಲ್ಲು-ಪೊದೆಗಳು. ಅಜ್ಜ ಬರುತ್ತಿದ್ಧಂತೆ ನಡುದಾರಿಯಲ್ಲಿ ಬೆಳ್ಳಿ ಕೂದಲ, ಬಿಳಿದಾದ ಗಡ್ಡವುಳ್ಳ, ಉದ್ದದ ಮನುಷ್ಯ ಒಬ್ರು ಸಿಕ್ಕಿದ್ರಂತೆ. ಬಿಳಿ ಅಂಗಿಯನ್ನು ಧರಿಸಿದ ಆತ ಅಜ್ಜನ ಜೊತೆ ಎಲ್ಲಿಗೆ ಹೋಗುತ್ತಿದ್ದೀರಿ ಎಂದೆಲ್ಲಾ ವಿಚಾರಿಸಿದಾಗ ಅಜ್ಜ ಕಾಡೊಳಗಿನ ದಾರಿಯಲ್ಲಿ ಒಬ್ಬನೇ ಹೋಗುತ್ತಿದ್ದೇನೆ...ಜೊತೆ ಸಿಕ್ಕಂತಾಯಿತು ಎಂದುಕೊಂಡರಂತೆ. ಅರ್ಧದಾರಿ ತನಕ ಬಂದ ಬಿಳಿ ಅಂಗಿಯ ಮನುಷ್ಯ ಹಿಂದೆ ತಿರುಗಿ ನೋಡಿದರೆ ಇರಲಿಲ್ಲವಂತೆ!.

********
ನಮ್ಮನೆ ಊರುವುದು ಪುತ್ತೂರಿನ ಪುಟ್ಟ ಹಳ್ಳಿ. ರಸ್ತೆ ಇಲ್ಲದೆ ದಟ್ಟ ಕಾಡುಗಳ ನಡುವೆ ನಿಂತ ಆ ಹಳ್ಳಿಗೆ ಕರೆಂಟು ಬಂದಿದ್ದು ಏಳೆಂಟು ತಿಂಗಳ ಹಿಂದೆ. ರಾತ್ರಿ ಹೊತ್ತು ಹೊರಗಡೆ ಬರಲೂ ಭಯ. ಅಂಥಾದ್ರಲ್ಲಿ ದಿನಾ ಏಳು ಗಂಟೆಯ ಹೊತ್ತಿಗೆ ಒಂದು ಹಕ್ಕಿ ಕೂಗಲು ಶುರುಮಾಡುತ್ತೆ. 9.30 ತನಕ ಅದು ಕೂಗುತ್ತಲೇ ಇರುತ್ತೆ. ನಮ್ಮಜ್ಜಿ ಮತ್ತು ಅಜ್ಜನ ಲೆಕ್ಕದಲ್ಲಿ ಅದು ಯಾರದೋ ಪ್ರೇತ.  ನಾನಾಗ ಇನ್ನೂ ಸ್ಕೂಲ್ ಹತ್ತದ ಮಗು. ನಮ್ಮಜ್ಜನ ಬಳಿ ಗನ್ ಇತ್ತು. ಸಮಯ ಸಿಕ್ಕಾಗೆಲ್ಲಾ ಅಜ್ಜ ಗನ್ ಬೆನ್ನಿಗೇರಿಸಿಕೊಂಡು ಹೋಗುತ್ತಿದ್ದ. ಈ ಹಕ್ಕಿ ಕೂಗಾಟಕ್ಕೆ ಅಜ್ಜಿ ದಿನಾ ರಗಳೆ ತೆಗೆಯೋಳು. ಒಂದು ದಿನ ಅಜ್ಜ ಗನ್ ಬೆನ್ನಿಗೇರಿಸಿಕೊಂಡು ಹಕ್ಕಿನ ಶಿಕಾರಿ ಮಾಡಲು ಹೊರಟೇ ಬಿಟ್ಟ. ಅಜ್ಜ ಐದಾರು ಸಲ ಹೊಡೆದರೂ ಹಕ್ಕಿ ಸಿಗಲೇ ಇಲ್ಲ. ಅದು ಕೂಗ್ತಾನೆ ಇತ್ತು. "ಕೈಗೆ ಸಿಗದ ದೆವ್ವ'' ಎಂದುಕೊಂಡು ನಮ್ಮಜ್ಜ ಸುಮ್ಮನಾಗಿದ್ದ.

Sunday, March 3, 2013

ನೀಳಜಡೆಗೆ ಎರಡುಮೊಳ ಮಲ್ಲಿಗೆ


ಸಾಕು ಕಣೇ...ದೃಷ್ಟಿ ತಾಗುತ್ತೆ. ನಾಳೆ ಮುಡ್ಕೊಂಡು ಹೋಗುವಿಯಂತೆ ಅಮ್ಮ ಹೇಳಿದಾಗ ನನ್ನ ಗುಂಡು ಗುಂಡು ದಪ್ಪಾಗಿದ್ದ ಮುಖ ಇನ್ನಷ್ಟು ದಪ್ಪಗಾಗಿ ಟೊಮೆಟೋ ಬಣ್ಣಕ್ಕೆ ತಿರುಗುತ್ತಿತ್ತು. ಹೂವ ಅಂದ್ರೆ ಪ್ರಾಣ, ಹೂವ ಅಂದ್ರೆ ಖುಷಿ, ಹೂವ ಅಂದ್ರೆ ಚೆಂದ. ಹೂವ ಅಂದ್ರೆ ಸುವಾಸನೆ. ಹೂವ ಅಂದ್ರೆ ಪ್ರೀತಿ, ಹೂವ ಅಂದ್ರೆ ಹುಡುಗಿ, ಹೂವ ಅಂದ್ರೆ ಹಬ್ಬ....ಹೀಗೆ ಹೂವ ಅಂದ್ರೆ ನನ್ನ ದೃಷ್ಟೀಲಿ ಎಲ್ಲವೂ. ಸೊಂಟದಿಂದ ಕೆಳಗೆ ಬರೋ ಜಡೆಗೆ ಮುಡಿದರೆ ಅವತ್ತು ಮನಸ್ಸಿನೊಳಗೆ ಒಂದು ರೀತಿಯ ಖುಷಿ. ಅಮ್ಮ ಮೊಳಮಲ್ಲಿಗೆ ಸಾಕು ಕಣೇ...ಜಾಸ್ತಿ ಇಟ್ರೆ ಬೇರೆ ಹುಡುಗೀರಿಗೆ ಆಸೆಯಾಗಲ್ವೇನೋ? ಏನಾದ್ರೂ ಫಂಕ್ಷನ್ ಇದ್ರೆ ಮುಡ್ಕೊಂಡು ಹೋಗು ಅಂದ್ರೆ ಹುಸಿಮುನಿಸಿನಿಂದ ಕಣ್ಣು ಕೆಂಪಾಗುತ್ತಿತ್ತು. ಅದಕ್ಕೆ ಅಮ್ಮ ಅಷ್ಟೂದ್ದ ನೀಳ ಜಡೆಗೆ ಮಲ್ಲಿಗೆ ಮುಡಿಸಿ, ಮುಡಿಯ ಬುಡದಲ್ಲಿ ಕೆಂಪು ಗುಲಾಬಿ ಸಿಕ್ಕಿಸುವಳು. ನಮ್ಮೂರ ಮಂಗಳೂರ ಮಲ್ಲಿಗೆ ಸ್ವಲ್ಪ ಮುಡಿದರೆ ಸಾಕು ಮೈಲುಗಟ್ಟಲೆ ದೂರದವರೆಗೆ ಘಮ ಎನ್ನುತ್ತಿತ್ತು.

ಸೋಮವಾರ ಪುತ್ತೂರ ಸಂತೆ. ಪ್ರತಿ ಸಂತೆಗೆ ಅಮ್ಮ ಹಾಜರು. ವಾರದ ತರಕಾರಿ ಸಾಮಾನುಗಳೆಲ್ಲಾ ಒಮ್ಮೆಲೇ ತರೋಳು. ಜೊತೆಗೆ ಮಲ್ಲಿಗೆ.ಮಂಗಳವಾರ ಮಲ್ಲಿಗೆ ಮುಡಿಯೋ ಖುಷಿ. ಕ್ಲಾಸಿನಲ್ಲಿ ಅದೆಷ್ಟೋ ಹುಡುಗೀರು ನನ್ನ ಜಡೆ, ಮಲ್ಲಿಗೆ ನೋಡಿ ಆಸೆಪಡೋರೇ ಏನೋ. ನನ್ನೊಳಗೆ ಮಲ್ಲಿಗೆ ಮುಡಿದ ಖುಷಿ. ಕ್ಲಾಸಿನಲ್ಲಿ ಬೆಂಚಿಯಲ್ಲಿ ಕುಳಿತರೆ ಒಂದೆ ಒರಗುತ್ತಿರಲಿಲ್ಲ. ಎಲ್ಲಾದ್ರೂ ಮಲ್ಲಿಗೆ ಹಾಳಾದ್ರೆ!!. ಇಡೀ ದಿನ ಬೆನ್ನು ನೆಟ್ಟಗಾಗಿಸಿಕೊಂಡು ಕುಳಿತು ಸಂಜೆ ಹೊತ್ತಿಗೆ ನೋವು.

ಆಗ ಏಳನೇ ತರಗತಿಯಲ್ಲಿದ್ದೆ. ಶೇಷಪ್ಪ ಮೇಷ್ಟ್ರು ನಮಗೆ ಹೆಡ್ ಮೇಷ್ಟ್ರು. ಜಡೆಗಿಂತ ಉದ್ದ ಮಲ್ಲಿಗೆ ಮುಡಿದ ನನಗೆ ಕೇಳಿದ್ದರು."ಮಲ್ಲಿಗೆ ಅಂದ್ರೆ ಇಷ್ಟನಾ? ನಿಂಗೆ ಮಲ್ಲಿಗೆ ಅಂಥ ಹೆಸರಿಡೋಣ' ಅಂತ. ಕೆನ್ನೆ ಕೆಂಪಗಾಗಿಸಿಕೊಂಡು ಬಗ್ಗಿ ಕುಳಿತಿದ್ದೆ. ಹುಡುಗರೆಲ್ಲಾ "ಮಲ್ಲಿಗೆ..'' ಎಂದಿದ್ದು ಕೇಳಿಸಿತ್ತು.

ಏಳನೇ ತರಗತಿಯ ವಿದಾಯಕೂಟ. ಎಲ್ಲರಿಗೂ ಫೋಟೋ ತೆಗೆಸುವ ಖುಷಿ. ಅಂದು ಅಮ್ಮ ನನಗೆ ಎರಡು ಜಡೆ ಹಾಕಿದ್ದಳು. ಹಸಿರು ಚೂಡಿದಾರ. ಎರಡು ಜಡೆ, ಅದು ಎದೆಯಿಂದ ಕೆಳ ಬರುತ್ತಿತ್ತು. ಆ ಎರಡೂ ಜಡೆಗೆ ಎರಡೆರಡು ಮೊಳಮಲ್ಲಿಗೆ. ಮಲ್ಲಿಗೆ ಮೊಳ ಜಾರದಂತೆ ಐದಾರು ಕ್ಲಿಪ್ಗಗಳನ್ನು ಹಾಕಿದ್ದಳು. ಸಂಜೆ ಹೊತ್ತಿನಲ್ಲಿ ನಡೆದ ಫೋಟೋ ತೆಗೆಯುವ ಕಾರ್ಯಕ್ರಮದಲ್ಲಿ ನನ್ನೆರಡು ಜಡೆಗಳಿಗೇ ಕ್ಯಾಮರಾ ಕಣ್ಣು!. ಎರಡು ಜಡೆಗಳನ್ನು ಎದುರುಗಡೆ ಹಾಕಿಕೊಂಡು ಅದೆಷ್ಟು ಸಲ ಕ್ಲಿಕ್ ಕ್ಲಿಕ್. ಹೈಸ್ಕೂಲ್ ಮುಗಿಯುವ ಹೊತ್ತಿಗೆ ಪುತ್ತೂರು ಮಲ್ಲಿಗೆ ಮಾರುಕಟ್ಟೆಗೆ ಅಮ್ಮ ಚಿರಪರಿಚಿತಳಾಗಿದ್ದಳು. ಪ್ರತಿ ಸೋಮವಾರ ಅಮ್ಮ ಅಲ್ಲಿ ಹೋದ ತಕ್ಷಣ 'ಮಗಳಿಗೆ ಮಲ್ಲಿಗೆ ಬೇಕೇ?' ಎಂದು ಕೇಳಿ ಹಸಿಬಾಳೆಯಲ್ಲಿ ಮಲ್ಲಿಗೆ ಸುತ್ತಿ ಕೊಡೋರು.

ಡಿಗ್ರಿ ಮುಗ್ಸಿ ಬೆಂಗಳೂರಿಗೆ ಬಂದಾಯಿತು. ಇಲ್ಲಿ ಮಂಗಳೂರು ಮಲ್ಲಿಗೆಯ ಘಮ ಇಲ್ಲ. ನನ್ನ ಜಡೆಯೂ ಕಿರಿದಾಗಿದೆ. ಮೋಟುದ್ದ ಜಡೆಗೆ ಶುಕ್ರವಾರದಂದು ಅತ್ತೆಮ್ಮ ಪೂಜೆ ಮಾಡಿ ಪ್ರಸಾದವೆಂದು ಬೆರಳಷ್ಟು ಉದ್ದದ ಮಲ್ಲಿಗೆ ಮಾಲೆ ಕೊಡುತ್ತಾಳೆ. ಪುಟ್ಟ ಪುಟ್ಟ ಕೂದಲುಗಳನ್ನು ಬಿಗಿಹಿಡಿದು ಕ್ಲಿಪ್ ಹಾಕಿ, ಅರ್ಧ ಗಂಟೆ ತಲೆಯಲ್ಲಿ ಮಲ್ಲಿಗೆಯ ಘಮ. ಆಫೀಸ್ ಗೆ ಹೊರಟಾಗ ಅದನ್ನು ಕಿತ್ತು ಹಾಸಿಗೆ ಮೇಲೆ ಹಾಕಿಬಿಟ್ಟು ಹೊರಡ್ತೀನಿ. ಸಂಜೆ ಮನೆ ಸೇರುವ ಹೊತ್ತಿಗೆ ಅದು ಬಾಡಿಹೋಗಿ ನರಳುತ್ತಿರುತ್ತೆ.

ಮಲ್ಲಿಗೆಯ ಮೇಲೆ ಇನ್ನೂ ಪ್ರೀತಿ ಇದೆ. ಮನೆಮುಂದೆ ಮಲ್ಲಿಗೆ ಗಿಡ ಹಸುರಾಗಿದೆ. ಬೆಳಗೆದ್ದು ನೀರುಣಿಸ್ತೀನಿ. ಆಗಾಗ ಹಸಿರೆಲೆಗಳ ನಡುವೆ ಮೊಸರು ಚೆಲ್ಲಿದಂತೆ ಗುಂಡುಮಲ್ಲಿಗೆ ಅರಳುತ್ತೆ. ಮನಸಿನಲ್ಲಿ ಸಣ್ಣದೊಂದು ಖುಷಿ, ಜಡೆಯಿಲ್ಲದಿದ್ದರೂ, ಮನೆಯಂಗಳದಲ್ಲಿ ಮಲ್ಲಿಗೆಯ ಘಮ ಅರಳಿದೆಯೆಂದು.

Thursday, February 21, 2013

ಮಂಗಳವಾರ ಮುಟ್ಟಾದವಳು

ಸಂಜೆ ಐದರ ಹೊತ್ತು. ತೋಟದಲ್ಲಿದ್ದ ಕರುವನ್ನು ಓಡಿಸಿಕೊಂಡು ಹಟ್ಟಿಯತ್ತ ಸಾಗಿದ್ದೆ. ಹಿಂದಿನಿಂದ ಬಂದು ನನ್ನ ನೋಡಿದ ಅಮ್ಮಾ "ಅಂಗಳದಲ್ಲೇ ನಿಂತುಕೋ ಮಗಳೇ...'' ಎಂದಾಗ ನನಗೆ ಅಚ್ಚರಿ. ನನ್ನ ನೋಟದಲ್ಲಿ ಪ್ರಶ್ನೆಯಿತ್ತು. ಅಮ್ಮ ನನ್ನ ಕಣ್ಣುಗಳ ಪ್ರಶ್ನೆಗೆ ಉತ್ತರಿಸಲಿಲ್ಲ. ಅಮ್ಮನ ಬಟ್ಟಲು ಕಣ್ಣುಗಳಲ್ಲಿ ಅದೇನೋ ಹೊಸ ಖುಷಿ, ಹೊಸ ಭಾವಗಳ ಪುಳಕ. ಸೀತಮ್ಮ, ಸರೋಜಿನಿ, ಕಮಲ, ಕೆಂಚಮ್ಮ...ಎಲ್ಲರೂ ಬಂದರು. ಎದುರುಮನೆಯಲ್ಲಿದ್ದ ಅಜ್ಜಿ, "ಏನ್ ಮರೀ ದೊಡ್ಡವಳಾಗಿದ್ದೀಯಾ?' ಎನ್ನುತ್ತಾ ಬಾಯೊಳಗಿದ್ದ ವೀಳ್ಯದೆಲೆಯನ್ನು ಅಂಗಳದ ಮೂಲೆಯಲ್ಲಿದ್ದ ಅಡಿಕೆ ಮರದ ಗಿಡದಡಿ ಉಗುಳಿದಳು. ಎಲ್ಲೋ ಆಟವಾಡುತ್ತಿದ್ದ ತಮ್ಮ ತಕ್ಷಣ ಬಂದು "ಅಕ್ಕಾ ಬಾ ಒಳಗಡೆ, ಏಕೆ ನಿಂತಿದ್ದೀಯಾ?' ಎಂದು ನನ್ನ ಕೈ ಹಿಡಿದು ಎಳೆಯತೊಡಗಿದ. ಅವನನ್ನು ಎತ್ತಿಕೊಂಡು ಹೋದ ಅಜ್ಜಿ ಸ್ನಾನ ಮಾಡಿಸಿಕೊಂಡು ಬಂದರು. ಹಸೆ ಮಧ್ಯದಲ್ಲಿ ನನ್ನ ಕುಳ್ಳಿರಿಸಿ, ನಾಲ್ಕು ಕಡೆಯಿಂದ ನಾಲ್ಕು ಮಂದಿ ಹೆಂಗಸರು ತಲೆಗೆ ನೀರೆರೆದರು.


ಅಕ್ಕಂಗೂ ಹೀಗೆ ಮಾಡಿದ್ದನ್ನು ನಾನು ನೋಡಿದ್ದೆ. ತೋಟದ ಮನೆಯಲ್ಲಿ ಅಡಗಿ ಕುಳಿತಿದ್ದ ಅಕ್ಕನ ಕರೆದುಕೊಂಡು ಬಂದ ಅಮ್ಮ ಅವಳನ್ನೂ ಹೀಗೆ ಅಂಗಳದಲ್ಲಿ ನಿಲ್ಲಿಸಿದ್ದಳು. ಊರ ಹೆಂಗಸರೆಲ್ಲಾ ಬಂದು ನೀರೆರೆದಿದ್ದರು. ಏಳು ದಿನ ಅಕ್ಕ ಒಬ್ಬಲೇ ಹೊರಗಿನ ಮನೆಯಲ್ಲಿ ಮಲಗುತ್ತಿದ್ದಳು. ಅಕ್ಕನ ಏಕೆ ಮನೆಯ ಹೊರಗಡೆ ಬರಲು ಬಿಡುವುದಿಲ್ಲ ಎಂದಾಗ ಅಮ್ಮ ಹೇಳಿದ್ದಳು, "ಅಕ್ಕನಿಗೆ ಕಾಗೆ ಮುಟ್ಟಿದೆ'''. ಊರೆಲ್ಲಾ ಕರೆದು ಅಮ್ಮ ಸಿಹಿಯೂಟ ಹಾಕಿಸಿದ್ದಳು. ನಾನು ದೊಡ್ಡವಳಾಗುವ ಹೊತ್ತಿಗೆ ಅಕ್ಕ ಮದುವೆಯಾಗಿ ಮಕ್ಕಳೂ ಇದ್ದವು.


ನನ್ನ ಸ್ನಾನ ಮಾಡಿಸಿ ಅಮ್ಮ ಮನೆಯ ಪಕ್ಕದಲ್ಲಿರುವ ಹೊರಗಿನ ಮನೆಗೆ ಕರೆದುಕೊಂಡು ಹೋದಳು. ಚಾಪೆಯೊಂದನ್ನು ಹಾಸಿ ಕುಳಿತುಕೋ ಎಂದಾಗ ಎದೆ ಢವಢವ ಎನ್ನುತ್ತಿತ್ತು. ಏಳು ದಿನಗಳ ಕಾಲ ಇಲ್ಲಿ ಹೇಗೆ ಮಲಗಲಿ ಎನ್ನುವ ಚಿಂತೆ ನನ್ನದು. ಎಲ್ಲಾ ಹೆಣ್ಣು ಮಕ್ಕಳಿಗೆ ಆಗುವ ರೀತಿಯಲ್ಲೇ ನಿನಗೂ ಆಗಿದೆ ಅಮ್ಮ ಎಂದಾಗ ಒಳಾರ್ಥಗಳು ತಿಳಿದವು.

"ಇವತ್ತು ಮಂಗಳವಾರ, ಅಮಾವಾಸ್ಯೆ'' ಅಜ್ಜಿ ಬಂದು ಹೇಳಿದಾಗ ಅಮ್ಮನ ಮುಖದಲ್ಲಿ ಭಯ, ಆತಂಕ. ಖುಷಿಯಲ್ಲಿ ಪುಳಕಗೊಂಡಿದ್ದ ಅಮ್ಮನ ಕಣ್ಣುಗಳು ದೊಡ್ಡದಾದುವು. ಹನಿನೀರು ಅಲ್ಲಿ ಜಿನುಗಿತು. ಸೆರಗಿನಿಂದ ಕಣ್ಣೊರೆಸಿಕೊಂಡಳು. ಅಜ್ಜಿ ಅಮ್ಮನ ನನ್ನ ಹತ್ತಿರದಿಂದ ದೂರ ಕರೆದುಕೊಂಡು ಹೋಗಿ ಕಿವಿಯಲ್ಲಿ ಪಿಸುಗುಟ್ಟಿದಳು. "ಇಂದು ಮಂಗಳವಾರ, ಅಮಾವಾಸ್ಯೆ. ಅಮಾವಾಸ್ಯೆ ದಿನ ಮುಟ್ಟಾದವರಿಗೆ ಮಕ್ಕಳಾಗುವುದಿಲ್ಲವಂತೆ. ನಮ್ಮಕುಟುಂಬದಲ್ಲಿ ಯಾರೂ ಮಂಗಳವಾರ ಮುಟ್ಟಾಗಿಲ್ಲ ನೋಡು. ಈ ಹೆಣ್ಣುಮಗುವಿಗೆ ಅದೇನು ಬಂತೋ. ಊರೆಲ್ಲಾ ಕರೆದು ಸಿಹಿಯೂಟ ಹಾಕೋದು ಬೇಡ. ಎಲ್ರಿಗೂ ಇವಳು ಮಂಗಳವಾರ ಮುಟ್ಟಾಗಿದ್ದಾಳೆ ಅಂತ ಗೊತ್ತಾಗುತ್ತೆ' ಅಂದಾಗ ಅಮ್ಮ ಜೋರಾಗಿ ಬಿಕ್ಕಿದಳು. ಅಜ್ಜಿಯ ಮೌಢ್ಯಕ್ಕೆ ಎದುರಾಡುವ ಧೈರ್ಯ ನನಗಿನ್ನೂ ಇರಲಿಲ್ಲ.

ಎರಡನೆಯ ದಿನ. ಹಿತ್ತಾಳೆಯ ತಟ್ಟೆಯಲ್ಲಿ ಮೆಂತ್ಯದನ್ನ ಮಾಡಿಕೊಂಡು ಬಂದ ಅಮ್ಮನ ಮುಖದಲ್ಲಿ ಖುಷಿ ಇರಲಿಲ್ಲ. ಬಾಚಿ ಅಪ್ಪಿಕೊಂಡು ಮುತ್ತುಕೊಟ್ಟು ಹೋದಳು. ಎದುರುಮನೆ ಶಾಂತಲಮ್ಮ ವಟವಟ ಅನ್ನುತ್ತಲೇ ಮನೆಯೊಳಗೆ ಕಾಲಿಟ್ಟಳು. "ಹೋಗಿ ಹೋಗಿ ನಿನ್ನ ಮಗಳು ಅಮಾವಾಸ್ಯೆ ದಿನ ಮುಟ್ಟಾಗಿದ್ದಲ್ಲಲ್ಲಾ? ಛೇ.ಛೇ. ಹೀಗಾಗಬಾರದಿತ್ತು. ನಿಂಗೆ ಮಕ್ಕಳನ್ನು ನೋಡುವ ಭಾಗ್ಯವೇ ಇಲ್ಲವೇನೋ'' ಅಂದುಬಿಡಬೇಕೇ?. "ದೇವರಿಟ್ಟಂಗೆ ಶಾಂತಲಾ'' ಎಂದು ಅಮ್ಮ ಸುಮ್ಮನಾಗಿದ್ದಳು. ಏಳು ದಿನಗಳು ಕಳೆದವು. ಅಮ್ಮ ಹೊಸ ಬಟ್ಟೆ ತಂದು ' ಮಗೂ, ಯಾವತ್ತಾದ್ರೂ ಸ್ಕೂಲ್ ಗೆ ಹೋಗುವಾಗ ಹಾಕ್ಕೊಂಡು ಹೋಗು' ಎಂದಿದ್ದಳು.

                                           *****
ಐದು ವರ್ಷಗಳ ಹಿಂದೆ ಮದುವೆಯಾಯಿತು. ಊರಿಗೆ ಹೋದಾಗಲೆಲ್ಲಾ ಅಮ್ಮ ಕೇಳುತ್ತಿದ್ದಳು "ಮುಟ್ಟು ಇನ್ನೂ ನಿಂತಿಲ್ವೇ?". ಎರಡು ವರ್ಷದ ಹಿಂದೆ ಅಮ್ಮನಿಗೆ ಹೇಳಿದ್ದೆ; "ಮುಟ್ಟು ನಿಂತಿದೆ'' ಎಂದು. ಈಗ ಮೊಮ್ಮಗಳ ಆರೈಕೆಯಲ್ಲಿ ಅರವತ್ತೈದರ ಅಮ್ಮನಿಗೆ ಇಪ್ಪತ್ತರ ಹುಮ್ಮಸ್ಸು. ಸಿಕ್ಕ ಸಿಕ್ಕವರಲ್ಲಿ ಬಟ್ಟಲು ಕಣ್ಣುಗಳ ತುಂಬಾ ನಗುತ್ತಾ ಅಮ್ಮ ಹೇಳುತ್ತಿದ್ದಾಳೆ: ಮಂಗಳವಾರ ಮುಟ್ಟಾದ ನನ್ನ ಮಗಳ ಮಡಿಲಿಗೆ ಲಕ್ಷ್ಮಿ ಬಂದಿದ್ದಾಳೆಂದು.!

Wednesday, January 9, 2013

ಅಪ್ಪ ಹೋಗಿ ವರುಷ




ಬೆಳ್ಳಂಬೆಳಿಗ್ಗೆ ಐದೂವರೆ. ಅಮ್ಮ ಎಬ್ಬಿಸಿದ್ದಳು. ಇವತ್ತು ನಮಗೆ ಹಬ್ಬ ಕಣಮ್ಮ ಸಿಹಿ ಮಾಡಬೇಕು. ಮನೆ ಮುಂದೆ ತೊಳೆದು ರಂಗೋಲಿ ಹಾಕಬೇಕು. ಅಮ್ಮನ ಮಾತುಗಳು ಕಿವಿಗೆ ಬೀಳುತ್ತಿದ್ದಳು. ಚಳಿಯಲ್ಲಿ ಬೆಚ್ಚಗೆ ಮುದುಡಿ ಮಲಗಿದ್ದ ನನಗೆ ಏಳಲೂ ಮನಸ್ಸಾಗುತ್ತಿರಲಿಲ್ಲ. ಆದರೆ, ಏಳಲೇಬೇಕಿತ್ತು!. ಅಮ್ಮ ಬೆಳಕು ಮೂಡುವ ಮೊದಲೇ ನಾಲ್ಕಕ್ಕೆ ಅಲಾರಂ ಇಟ್ಟು ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಉಟ್ಟು ದೇವರ ಕೋಣೆಯಲ್ಲಿ ಸದ್ದು ಮಾಡುತ್ತಿದ್ದಳು. ಮೊಬೈಲ್‌ನಲ್ಲಿ ವಿಷ್ಣು ಸಹಸ್ರನಾಮ ಬರುತ್ತಿತ್ತು. ಅಮ್ಮನ ದೇವರ ಭಕ್ತಿಗೆ ನನ್ನೆಜಮಾನ್ರು ಎದ್ದು ವಟವಟ ಅಂದು ಕಣ್ಣು ದೊಡ್ಡದು ಮಾಡಿದ್ರು!

ಎದ್ದುಬಿಟ್ಟು ಮನೆಯ ಎದುರು ಒಂಚೂರು ಜಾಗಕ್ಕೆ ತೊಳೆದು ಸೆಗಣಿ ಸಾರಿದೆ. ಹುಟ್ಟಿನಿಂದ ಮದುವೆ ಆಗೋ ತನಕ ಸಗಣಿ ಸಾರೋ ಕೆಲಸ ಮಾಡದ ನಾನು, ಒಂಚೂರು ಜಾಗಕ್ಕೆ ಅಂದು ಸಗಣಿ ಸಾರಿದೆ. ಹಳ್ಳಿಯಲ್ಲಿರುವಾಗ ಹಟ್ಟಿಯಿಂದ ತಂದ ಸಗಣಿ ಘಮ ಎನ್ನುತ್ತಿತ್ತು. ಬೆಂಗಳೂರಿನಲ್ಲಿ ಅದೆಲ್ಲಿಂದಲೋ ತಂದಿಟ್ಟ ಸಗಣಿಯ ವಾಸನೆಯೇ ಮೂಗಿಗೆ ಗೊತ್ತಾಗಲಿಲ್ಲ!. ಸೆಗಣಿ ಸಾರಿ, ಮನೆಮುಂದೆ ರಂಗೋಲಿ ಹಾಕಿದೆ. ಚೆಂದಕ್ಕೆ ಚುಕ್ಕೆ ಇಟ್ಟು ರಂಗೋಲಿ ಹಾಕಲು ಬಾರದಿದ್ದರೂ ತಾವರೆ, ಗುಲಾಬಿ...ಹೀಗೆ ಬಗೆಬಗೆಯ ಹೂವುಗಳು, ಎಲೆಗಳನ್ನು ಬಿಡಿಸಿ ಬಣ್ಣಗಳನ್ನು ತುಂಬಿದೆ. ತುಳಸಿ ಗಿಡದ ಸುತ್ತಲೂ ರಂಗೋಲಿ ಹಾಕಿದೆ. ಜೊತೆಗೆ, ಮಾವಿನ ಎಲೆಗಳನ್ನು ತಂದು ಬಾಗಿಲಿಗೆ ತೋರಣ ಕಟ್ಟಿದೆ. ಅಷ್ಟೊತ್ತಿಗಾಗಲೇ ಅಮ್ಮ ದೇವರ ಮೂರ್ತಿಗಳನ್ನೆಲ್ಲ ತೊಳೆದು, ಪೂಜೆ ಶುರುಮಾಡಿದ್ದಳು. ಅಡುಗೆ ಮನೆಯಲ್ಲಿ ಅಗರಬತ್ತಿ, ಗಂಧ ಘಮಘಮ ಎನ್ನುತ್ತಿತ್ತು. ಅಮ್ಮನಿಗೆ ಹೊಟ್ಟೆ ಚುರುಗುಟ್ಟುತ್ತಿದ್ದರೂ ದೇವರ ಭಕ್ತಿಯಲ್ಲಿ ಹಸಿವೇ ಮರೆತುಹೋಗಿತ್ತು. ಎಲ್ಲಾ ಮುಗಿದು ಹೊಟ್ಟೆಗೆ ತಿಂಡಿ ಹೋಗುವಷ್ಟರಲ್ಲಿ ಗಂಟೆ ಹತ್ತು ದಾಟಿತ್ತು.

ಅಪ್ಪ ಹೋಗಿ ವರ್ಷದ ನಂತರ ಮತ್ತೆ ನಮ್ಮನೆಯಲ್ಲಿ ಸಿಹಿಯಡುಗೆ ಆರಂಭವಾಗಿತ್ತು. ಮನೆಮುಂದೆ ರಂಗೋಲಿ ಮೂಡಿತ್ತು. ಅರಶಿನ-ಕುಂಕುಮ-ಹೂವುಗಳ ಚಿತ್ತಾರವಿತ್ತು. ಮುತ್ತೈದೆಯರಿಗೆ ಬಾಗಿನ ಅಮ್ಮನೇ ರೆಡಿಮಾಡಿದ್ದಳು. ಸಿಹಿ ಎಂದು ಕೇಸರಿಬಾತ್, ಪಾಯಸ ಮಾಡಿ ನನಗೂ-ನಮ್ಮಜೆಮಾನ್ರಿಗೆ ಬಡಿಸುವಾಗ ಅಮ್ಮನ ಕಣ್ಣುಗಳು ತುಂಬಿಕೊಂಡಿದ್ದವು. ಸಾವರಿಸಿಕೊಂಡು ಹೇಳಿದಳು; ಅಪ್ಪನಿಗೆ ಕೇಸರಿಬಾತ್ ಭಾಳ ಇಷ್ಟ.

Thursday, December 20, 2012

ಪ್ರಳಯ, ನಾನು ಮತ್ತು ಅಮ್ಮ



ಇವತ್ತು ಎಂದಿನಂತೆ ಬೆಳಗು. ಕಿಟಕಿಯಾಚೆ ಇದ್ದ ಪಾರಿಜಾತ ಗಿಡದ ಮೇಲೆ ಸೂರ್ಯನ ಕಿರಣಗಳು ನಳನಳಿಸುತ್ತಿತ್ತು. ಅಮ್ಮ ಎದ್ದು ಬಾಗಿಲು ತೊಳೆದು ರಂಗೋಲಿ ಇಟ್ಟಿದ್ದಳು. ಹಾಲಿನ ಹುಡುಗ, ಪೇಪರ್ ಹುಡುಗ ಆರೂವರೆಗೇ ಬಾಗಿಲು ತಟ್ಟಿದ್ದರು. ಎದುರುಮನೆ ಪುಟಾಣಿ ಶಾಲೆಗೆ ಹೋಗೊಲ್ಲ ಎಂದು ರಚ್ಚೆ ಹಿಡಿಯುತ್ತಿದ್ದ. ಅವನಿಗೆ ಇವತ್ತು ಪ್ರಳಯ ಆಗುತ್ತೆ ಎನ್ನುವ ಭಯ. ವಾಕಿಂಗ್ ಹೋಗುತ್ತಿದ್ದ ಎಂಬತ್ತು ಮೀರಿದ ಅಜ್ಜ-ಅಜ್ಜಿಯರ ಮುಖದಲ್ಲಿ ಮಂದಹಾಸ. ಟೀವಿಯಲ್ಲಿ "ಪ್ರಳಯ ಠುಸ್' ಎಂಬ ಸುದ್ದಿ ದೊಡ್ಡದಾಗಿ ಕಾಣುತ್ತಿತ್ತು. ನೆನಪಿನ ಪೆಟ್ಟಿಗೆಯಲ್ಲಿ 14 ವರ್ಷಗಳ ಹಿಂದಿನ ಘಟನೆ ನಗು ತರಿಸುತ್ತಿತ್ತು.

ನಾನಾಗ ಎಂಟನೇ ತರಗತಿಯಲ್ಲಿ ಓದುತ್ತಿದ್ದೆ.  ಆಗ ತರಂಗ ವಾರ ಪತ್ರಿಕೆ  'ಪ್ರಳಯ'ದ ಬಗ್ಗೆ ಮುಖಪುಟ ಸುದ್ದಿ ಮಾಡಿದ್ದು ನೆನಪು. ಶಾಲೆಯ ಹತ್ತಿರವಿದ್ದ ಸೂರಪ್ಪನ ಅಂಗಡಿಯಿಂದ ಆ ತರಂಗ  ಖರೀದಿಸಿದ್ದೆ. ಅಕ್ಷರದರಿವು ಇಲ್ಲದ ಅಮ್ಮ ಏನಿರುತ್ತೆ ಪತ್ರಿಕೆಯಲ್ಲಿ ಎಂದು ಕೇಳಿದ್ದಳು. ಪ್ರಳಯ ಆಗುತ್ತೆ ಅಂತೆ...ಅದರ ಬಗ್ಗೆ ಇರುತ್ತೆ ಎಂದಿದ್ದೆ. ಅದನ್ನು ತೆಗೆದುಕೊಂಡಿದ್ದೆ ತಡ ಸರಿಯಾಗಿ ಪಾಠಗಳನ್ನೂ ಕೇಳದೆ ಪಾಠದ ಮಧ್ಯೆ ತರಂಗ ತಿರುವಿ ಹಾಕಿದ್ದೆ. ಹಿಂದಿ ಪಾಠ ಮಾಡುತ್ತಿದ್ದ ಕೊರಗಪ್ಪ ಮೇಷ್ಟ್ರು ಚೋಕ್ ಪೀಸ್ ತಕ್ಕೊಂಡು ನಿಂತಲ್ಲಿಂದಲೇ ನನ್ನ ತಲೆಗೆ ಚೋಕ್ ಪೀಸ್ ಬಿಸಾಡಿ ಕಿವಿಹಿಂಡಿದ್ದರು!. ಆ ದಿನ ಯಾರೂ ಸರಿಯಾಗಿ ಪಾಠ ಕೇಳಲಿಲ್ಲ. ಬರೀ ಪತ್ರಿಕೆ ಓದಿ ಪ್ರಳಯದ ಬಗ್ಗೆ ಮಾತಾಡುವುದು ಅಷ್ಟೇ ಕೆಲಸ. ಇನ್ನೂ ನೆನಪಿದೆ ಆ ಪತ್ರಿಕೆ ಮುಖಪುಟದಲ್ಲಿ ಗೋಳಾಕಾರದ ಭೂಮಿ ಯಾವುದೇ ಗ್ರಹಕ್ಕೆ ಬಡಿದಂತೆ ಅಚ್ಚರಿ, ಭಯವನ್ನು ಸೃಷ್ಟಿಸದ ಪೋಟೋ ಇತ್ತು. ಅದನ್ನು ನೋಡಿ ನೋಡಿ ನಾನು ಬೆವೆತಿದ್ದೆ.

ಮೂತ್ರ ಮಾಡಲೂ ಭಯವಾಗಿತ್ತು!
ಪ್ರಳಯ ಆಗುವ ದಿನ ನಾನು ಶಾಲೆಗೆ ಹೋಗುವುದಿಲ್ಲ ಎಂದು ನಿರ್ಧರಿಸಿದ್ದೆ. ಆ ದಿನ ಪೂರ್ತಿ ಅಮ್ಮನ ಬಳಿಯೇ ಇರಬೇಕು. ಅಮ್ಮನ ಬಿಟ್ಟು ಆ ಕಡೆ-ಈಕಡೆ ಹೋದಾಗ ಪ್ರಳಯ ಆಗಿಬಿಟ್ಟರೆ ನಾವೆಲ್ಲೋ..ಅಮ್ಮ ಎಲ್ಲೋ ಹೋಗಿಬಿಡ್ತಾಳೆ. ಅಂದು ಅಮ್ಮನ ಬಳಿ ಭರ್ಜರಿ ಅಡುಗೆ ಮಾಡಿಸಿಕೊಂಡು ತಿನ್ನಬೇಕು...ಹೀಗೆ ವಿವಿಧ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೆ. ಪತ್ರಿಕೆಯಲ್ಲಿ ಬಂದಿದ್ದ ಸುದ್ದಿಗಳನ್ನೆಲ್ಲಾ ಅಮ್ಮನಿಗೆ ಯಥಾವತ್ತಾಗಿ ಓದಿ ಹೇಳಿದ್ದೆ. ಆಕಾಶವಾಣಿ ಸುದ್ದಿಯಲ್ಲೂ ಪ್ರಳಯದ ಸುದ್ದಿಗಳು ಬರುತ್ತಿದ್ದವು. ನಮ್ಮ ವಿಜ್ಞಾನ ಮೇಷ್ಟ್ರು ಡಿಸೋಜಾ ಪ್ರಳಯ ಸುಳ್ಳು ಸುದ್ದಿ ಎಂದು ಹೇಳಿದ್ದು ಬಿಟ್ಟರೆ ಇನ್ನಾರು ಧೈರ್ಯ ಹೇಳಲೇ ಇಲ್ಲ.
ಅಂತೂ ಪ್ರಳಯದ ದಿನ ಬಂದೇ ಬಿಟ್ಟಿತ್ತು. ಅಮ್ಮ ರಾತ್ರಿ ಕೋಳಿ ರೊಟ್ಟಿ ಅಡುಗೆ ಮಾಡಿದ್ದಳು. ಭರ್ಜರಿಯಾಗಿ ತಿಂದು ನಾನು-ತಮ್ಮ ಮತ್ತೊಮ್ಮೆ ಪ್ರಳಯದ ಹೇಗಾಗಬಹುದೆಂದು ಊಹಿಸಿಕೊಂಡೆವು. ಪ್ರಳಯ ಆದಾಗ ನೀರೆಲ್ಲ ತುಂಬಿಕೊಂಡು ನಮ್ಮ ಮನೆ ನೀರ ಮೇಲೆ ತೇಲುತ್ತಿರಬಹುದು. ಆಗ ನಾವು ಅಮ್ಮನ ಗಟ್ಟಿಯಾಗಿ ಬಿಗಿಯಾಗಿ ಹಿಡಿದುಕೊಂಡಿರಬೇಕು. ಸಾಯುವಾಗ ಅಮ್ಮನ ಜೊತೆಯೇ ಸಾಯಬೇಕು ಎಂದು ಪರಸ್ಪರ ನಿರ್ಧರಿಸಿಕೊಂಡೆವು. ಅಮ್ಮ ಮಧ್ಯೆ ಮಲಗಿದ್ದಳು. ನಾನು ಮತ್ತು ತಮ್ಮ ಆ ಕಡೆ-ಈ ಕಡೆ ಅವಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಮಲಗಿದ್ದೆವು. ಅಮ್ಮ ಅವಿದ್ಯಾವಂತೆಯಾದರೂ ನಮ್ಮಿಬ್ಬರ ಭಯಕ್ಕೆ ನಗುತ್ತಿದ್ದಳು. ಅದೆಲ್ಲಾ ಸುಳ್ಳು ಎಂದು ಹೇಳುತ್ತಿದ್ದಳು. ಮಲಗಿರುವಾಗಲೇ ಪ್ರಳಯ ಆದ್ರೆ ಗೊತ್ತಾಗೋದಿಲ್ಲ ಅಂತ ನಮ್ಮಿಬ್ಬರ ಲೆಕ್ಜಾಚಾರ. ಆದ್ರೆ, ಮಧ್ಯರಾತ್ರಿ ತನಕ ನಿದ್ದೆನೇ ಬರಲಿಲ್ಲ. ರಾತ್ರಿ ನಮಗೆ ಮೂತ್ರ ಬಂದರೂ ಅಮ್ಮನ ಬಿಟ್ಟು ಎದ್ದು ಹೋಗಲು ಭಯವಾಗಿತ್ತು!.

ಅಂತೂ ಪ್ರಳಯ ಆಗಲೇ ಇಲ್ಲ. ಬೆಳಗಿನ ಐದರ ಹೊತ್ತಿಗೆ ಕೋಳಿ ಕೂಗಿತು. ಎಂದಿನಂತೆ ಸೂರ್ಯ ಬೆಳಗಿನೊಂದಿಗೆ ಸ್ವಾಗತಿಸಿದ್ದ.  ನಾವಿಬ್ಬರೂ ಎದ್ದಾಗ ಅಮ್ಮ ರೊಟ್ಟಿ ತಟ್ಟುತ್ತಿದ್ದಳು.

Tuesday, October 16, 2012

ಅಜ್ಜಿ ಮತ್ತು ಟಿಕೆಟ್


ನನ್ನ ಕಾಲದಲ್ಲಿ ಮಾರ್ಕೆಟ್ಟಿಗೆ ನಡೆದುಕೊಂಡು ಹೋಗ್ತಿದ್ದೆ ಕಣವ್ವಾ..ಎಂದು ಎಪ್ಪತ್ತರ ಅಜ್ಜಿ ನಕ್ಕು ನನ್ನ ಹತ್ತಿರ ಬಂದು ಕುಳಿತುಕೊಂಡಳು. ವೀಳ್ಯದೆಲೆ ತಿಂದು ಬಾಯಿ ಕೆಂಪಾಗಿತ್ತು. ಮೂಗಿನಲ್ಲಿ ಹಳೇ ಕಾಲದ ದೊಡ್ಡ ನತ್ತು ಮಿನುಗುತ್ತಿತ್ತು. ಸೊಂಟದಲ್ಲಿ ಕಾಸಿನ ಚೀಲ. ನೋಡಕ್ಕೂ ಲಕ್ಷಣವಾಗಿದ್ದ ಅಜ್ಜಿಯ ಮಾತಿಗೆ ಹ್ಲೂಂಗುಡದೆ ವಿಧಿಯಿಲ್ಲ.

ನಮ್ಮನೆ ಸಮೀಪ ಬಸ್ ಹತ್ತಿದರೆ ಮಾರುಕಟ್ಟೆಗೆ ಸುಮಾರು 10 ಕಿ.ಮೀ. ದೂರ. ಅಜ್ಹಿ ಮಾತು ಮುಂದುವರೆಸಿದಾಗ ಕಿವಿಯಲ್ಲಿದ್ದ ಇಯರ್ ಫೋನ್ ತೆಗೆದು ಬ್ಯಾಗ್ ಗೆ ತುಂಬಿಸಿಕೊಂಡೆ. 'ನಾನು ನಿನ್ ತರ ಇದ್ದಾಗ ಮಾರ್ಕೆಟ್ಟಿಗೆ ನಾಲ್ಕಾಣೆ ಟಿಕೆಟ್ ಕಣವ್ವಾ. ನಾಲ್ಕಾಣೆ ಸಂಪಾದಿಸಕೂ ಕಷ್ಟದ ಕಾಲ ಅದು. ಬಸ್ ಗೆ ಕೊಡೋ ನಾಲ್ಕಣೆಯಲ್ಲಿ ಬುಟ್ಟಿ ತುಂಬಾ ಹೂವ ಬರುತ್ತಿತ್ತು ತಾಯಿ. ಈಗ ಒಂದು ಮೊಳಕ್ಕೆ 20 ಕೊಡ್ಬೇಕು. ಆಗ ನೋಡು, ನಾಲ್ಕಾಣೆಗೆ ಐದು ಕೆ.ಜಿ. ಹೂವ ಸಿಗೋದು. ಏನ್ ಕಾಲ ಬಂತವ್ವಾ?' ಎಂದು ಕಿಟಕಿ ಪಕ್ಕ ಕುಳಿತ ನನ್ನ ಸರಿಸಿ, ವೀಳ್ಯದೆಲೆಯನ್ನು ಕ್ಯಾಕರಿಸಿ ಹೊರಗೆ ಉಗಿದಳು.

ಏನೂ ಅಂದ್ಕೋಬೇಡ ಕಣವ್ವಾ, ಬಾಯಲ್ಲಿ ಇಟ್ಟುಕೊಂಡು ನನಗೆ ಅಭ್ಯಾಸ ಇಲ್ಲ ಅಂದಳು. ಪರ್ವಾಗಿಲ್ಲಮ್ಮಾ ಅಂದೆ. ನಂಗೆ ಮಾರ್ಕೆಟ್ಟಿಗೆ 10 ರೂ. ಇತ್ತು. ಈಗ 12 ಆಗಿದೆ. ಏನ್ ರೇಟೋ? ಟಿಕೆಟ್, ತರ್ಕಾರಿ, ಪೆಟ್ರೋಲ್, ಗ್ಯಾಸ್ ಎಲ್ಲನೂ ಜಾಸ್ತಿ ಮಾಡವ್ರೆ. ದಿನಾ ಬಂದ್. ನಮ್ಮೊಂಥರಿಗೆ ಕಷ್ಟ. ಮೊನ್ನೆಬಂದ್ ಆಯಿತಲ್ಲಾ...ಹೂವ ತರಕೆ ಮಾರ್ಕೆಟ್ಟಿಗೆ ಬರ್ಬೇಕಿತ್ತು.  ಎರಡು ದಿನ ವ್ಯಾಪಾರ ಇಲ್ಲ. ಒಂದು ದಿನ ವ್ಯಾಪಾರ ಇಲ್ಲಾಂದ್ರೆ ಒಂದು ದಿನದ ಊಟ ಇಲ್ಲಮ್ಮಾ..ಎಂದು ಮತ್ತೊಮ್ಮೆ ನನ್ನ ಪಕ್ಕ ಸರಿಸಿ ಉಗಿದಳು. ಕಳೆದ ಸಲ ನಮ್ಮ ಮನೆಪಕ್ಕದ ಸಾಹುಕಾರಪ್ಪ ಎಲೆಕ್ಷನ್ ದಿನ ನಮ್ಮನೆಗೆ ಕಾರು ತಕೋ ಬಂದು ಹತ್ತಿಸಿಕೊಂಡಿದ್ದ. ಇಂಥ ಚಿಹ್ನೆಗೆ ಓಟು ಹಾಕ್ಬೇಕು ಅಂದಿದ್ದ. ಒಂದು ಸಾವಿರ ರೂಪಾಯಿನೂ ಕೊಟ್ಟಿದ್ದ. ನಾನು ಹಂಗೇ ಮಾಡಿದ್ದೆ ಕಣವ್ವಾ. ಅವನದೇ ಸರ್ಕಾರ ಬಂತು. ಆದ್ರೆ, ಈ ಬಾರಿಯಂತೂ ನಾನು ಓಟು ಹಾಕಕೇ ಹೋಗಲ್ಲ. ಈ ಪರಿ ರೇಟು ಮಾಡಿದ್ರೆ ಏಕಮ್ಮಾ ಓಟು ಹಾಕೋದು?...ಎನ್ನುತ್ತಿದ್ದ ಅಜ್ಜಿ ಕೈಚೀಲದಲ್ಲಿದ್ದ ಪುಡಿ ಚಿಲ್ಲರೆಯನ್ನು ತೆಗೆದು ನನ್ನ ಅಂಗೈಯಲ್ಲಿಟ್ಟು ಎಣಿಸಿಕೊಡು ಎಂದಳು.

ಅಂದಹಾಗೆ, ನಿನ್ ಊರು ಯಾವುದು? ಎಲ್ಲೋಗ್ಬೇಕು ಎಂದು ಪರಿಚಯನೂ ಮಾಡಿಕೊಂಡ ಅಜ್ಜಿ. ನನ್ನ ಮುಖವನ್ನೊಮ್ಮೆ ದಿಟ್ಟಿಸಿ ನೋಡಿದಳು. ಲಕ್ಷಣವಾಗಿದ್ದೀಯಾ, ಆದರೆ, ಒಂದು ಕೈಗೆ ಯಾಕೆ ಬಳೆ ಹಾಕಿಲ್ಲ ಎಂದು ಕೇಳಬೇಕೆ? ಹೆಣ್ಣು ಮಕ್ಕಳು ಹೂವ ಮುಡ್ಕೊಂಡು, ಕೈಗೆ ಬಳೆ ತೊಟ್ಟು ಲಕ್ಷಣವಾಗಿರಬೇಕು ಕಣಮ್ಮಾ. ಮುತ್ತೈದೆಯರಿಗೆ ಕೈಲೀ ಬಳೆ ಇರ್ಬೇಕು ಎಂದು ಉಪದೇಶ ಮಾಡಿದಳು. ನಿತ್ಯ ಬಳೆ ತೊಡುತ್ತಿದ್ದ ನಾನು ಅಂದು ಅರ್ಜೇಂಟಾಗಿ ಬಸ್ ಹತ್ತಿದ್ದೆ!. ಅಜ್ಜಿಯ ಮಾತಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಬಸ್ ಕೆ.ಆರ್. ಸರ್ಕಲ್ ಸಿಗ್ನಲ್ ನಲ್ಲಿ ನಿಂತಿತ್ತು. ಅಜ್ಜಿ ಇನ್ನೂ ಜಾಸ್ತಿ ಮಾತಾಡುತ್ತೆ ಎಂದೇಳಿ, ಮತ್ತೆ ಕಿವಿಗೆ ಇಯರ್ ಫೋನ್ ಇಟ್ಟೆ. ನನ್ ಕೈಯಲ್ಲಿದ್ದ ಐಪಾಡ್ ನೋಡಿ, "ಇದೇನು ಮಗಾ? ಮೊಬೈಲಾ?' ಅಂತ ಕೇಳಬೇಕೆ. ಅದನ್ನು ವಿವರಿಸಿ ಸುಮ್ಮನಾಗಿಬಿಟ್ಟೆ.


ಇನ್ನೇನೋ ಒಂದು ಸ್ಟಾಪ್, ಮಾರ್ಕೆಟ್ ಬಂದುಬಿಡುತ್ತೆ ಅನ್ನುವಾಗ ಅಜ್ಜಿ ಮತ್ತೆ ಮಾತಿಗೆ ಶುರುಮಾಡಿತ್ತು. ನೋಡವ್ವಾ, ನಂಗೆ ನಿನ್ ವಯಸ್ಸಿನ ಮೊಮ್ಮಕ್ಕಳು ಇದ್ದಾರೆ. ತುಂಬಾ ಮಾತಾಡಿಬಿಟ್ಟೆ. ಬೇಜಾರು ಮಾಡಬೇಡ ತಾಯಿ. ಒಳ್ಳೆದಾಗ್ಲಿ...ಅಂದುಬಿಟ್ಟಳು. ಕೂದಲು ಪೂರ್ತಿ ಬೆಳ್ಳಿಯಾಗಿದ್ದ ಅಜ್ಜಿ, ಜ್ಞಾನಕ್ಕೆ ಮನಸ್ಸಲ್ಲೇ ಸಲಾಂ ಅಂದೆ.

Thursday, October 11, 2012

ನನ್ನ ರೈಲು ಪ್ರಯಾಣ...


ರೈಲನ್ನು ದೂರ ನಿಂತು ನೋಡಿದವಳಿಗೆ ಅಂದು ರೈಲಿನ ಒಳಗಡೆ ಹೋಗಿ ನೋಡುವ ತವಕ. ಕಿಟಕಿ ಬಳಿ ಕುಳಿತರೆ ಏನೆಲ್ಲಾ ನೋಡಬಹುದು, ನನಗೂ ದಾರಿಹೋಕರೆಲ್ಲಾ ಕೈ ಬೀಸಬಹುದು, ಹೊಲ ಗದ್ದೆಗಳನ್ನು, ಹಸಿರು ಹಾಸನ್ನು, ಮುಗಿಲ ಚಿತ್ತಾರವನ್ನು ನೋಡುತ್ತಾ ಹೋಗಬಹುದೆನ್ನುವ ಖುಷಿ. 


ಸಂಜೆ ನಾಲ್ಕರ ಹೊತ್ತಿಗೆ ಗಂಟೆ ಢಣ ಢಣ ಎನ್ನುವುದೇ ತಡ, ಗೇಟು ದಾಟಿ ಒಂದು ಫರ್ಲಾಂಗು ಓಡಿ ಆಗುತ್ತಿತ್ತು. ಏಕೆಂದರೆ, ನಾಲ್ಕೂವರೆ ಸರಿಯಾಗಿ ರೈಲು ಬರುತ್ತಿತ್ತು!. ಅದು ಕೂ ಎನ್ನುತ್ತಾ ಚುಕುಬುಕು ಸದ್ದು ಮಾಡುತ್ತಾ ದಟ್ಟ ಹೊಗೆ ಸೂಸುತ್ತಾ ಬರುವುದನ್ನು ನೋಡುವುದೇ ಚೆಂದ. ಅದು ಉಗಿಬಂಡಿ. ಇನ್ನು ರೈಲು ಬಂದಾಗ  ಕಿಟಕಿಯಿಂದ ಇಣುಕುತ್ತಿದ್ದವರಿಗೆ ಟಾಟಾ ಮಾಡುವುದೇ ಖುಷಿ. ರೈಲು ನೋಡುವ ಸಂಭ್ರಮ ಹೈಸ್ಕೂಲ್ ಮುಗಿಯೋ ತನಕ ಇತ್ತು. ಕಾಲೇಜಿಗೆ ಬಂದ ಮೇಲೆ ರೈಲು ನೋಡಲಾಗಲೇ ಇಲ್ಲ.

ಬಳಿಕ ರೈಲು ಪ್ರಯಾಣ ಮಾಡುವ ಅವಕಾಶ ಸಿಕ್ಕಿದ್ದು ಮದ್ವೆಯ ಬಳಿಕ. ನಮ್ಮನೆಯವರು ಹನಿಮೂನ್ ಗೆಂದು ಕೇರಳಕ್ಕೆ ರೈಲು ಬುಕ್ ಮಾಡಿದ್ದರು. ಅಲ್ಲಿಯವರೆಗೆ ರೈಲಲ್ಲಿ ಪ್ರಯಾಣಿಸದ ನಾನು ಹುಟ್ಟಿದ 27 ವರ್ಷಗಳ ಬಳಿಕ ರೈಲು ಹತ್ತಿದ್ದೆ. ಅದೂ ಮೆಜೆಸ್ಟಿಕ್ ನಲ್ಲಿ. ರೈಲನ್ನು ದೂರ ನಿಂತು ನೋಡಿದವಳಿಗೆ ಅಂದು ರೈಲಿನ ಒಳಗಡೆ ಹೋಗಿ ನೋಡುವ ತವಕ. ಕಿಟಕಿ ಬಳಿ ಕುಳಿತರೆ ಏನೆಲ್ಲಾ ನೋಡಬಹುದು, ನನಗೂ ದಾರಿಹೋಕರೆಲ್ಲಾ ಕೈ ಬೀಸಬಹುದು, ಹೊಲ ಗದ್ದೆಗಳನ್ನು, ಹಸಿರು ಹಾಸನ್ನು, ಮುಗಿಲ ಚಿತ್ತಾರವನ್ನು ನೋಡುತ್ತಾ ಹೋಗಬಹುದು. ಎಲ್ಲವನ್ನೂ ನೆನೆಸಿಕೊಂಡು ಮನಸ್ಸು ಖುಷಿಪಡುತ್ತಿತ್ತು. ಮದ್ವೆಯಾಗಿ ಹನಿಮೂನ್ ಗೆ ಹೋಗ್ತೀವಿ ಅನ್ನೋ ಖುಷಿಗಿಂತಲೂ ರೈಲಿನೊಳಗೆ ಏನೇನು ಅಚ್ಚರಿ, ಅದ್ಭುತಗಳಿವೆ ಎಂಬ ಬಗ್ಗೆ ನಾನು ಹೆಚ್ಚು ಕುತೂಹಲಗೊಂಡಿದ್ದೆ.

ರೈಲು ಹತ್ತಿಯಾಯಿತು. ಕಿಟಕಿ ಬದಿಯ ಸೀಟು ಗಿಟ್ಟಿಸಿಕೊಂಡಾಯ್ತು. ಆದರೆ, ಸ್ಲಿಪರ್ ಕೋಚ್ ಆಗಿದ್ದರಿಂದ ನಮ್ಮನೆಯವರು ನೀನು ಕೆಳಗಡೆ ಮಲಗು, ನಾನು ಮೇಲೆ ಮಲಕ್ಕೊಳ್ತಿನಿ ಅಂದ್ರು. ನನಗೆ ಭಯ ಶುರು. ನಿದ್ದೆ ಮಾಡಿದಾಗ ಯಾರಾದ್ರೂ ಕಳ್ಳರು ಬಂದ್ರೆ ಏನು ಗತಿ? ಕಣ್ಣುಗಳು ಕೊಳಗಳಾದವು. ಎಷ್ಟು ಸಮಾಧಾನ ಹೇಳಿದ್ರೂ ಕೇಳದೆ, ಅವರನ್ನು ಪಕ್ಕ ಕೂರಿಸಿಕೊಂಡು ಅಂಟಿಕೊಂಡು ಕುಳಿತುಬಿಟ್ಟಿದ್ದೆ. ಬಾತ್ ರೂಂಗೆ ಹೋಗಕೂ ಭಯ. ಹೇಗೋ ಬೆಳಗಾಯ್ತು. ಕೆಲವರು ರೈಲಿನ ಬಾಗಿಲಲ್ಲಿ ನಿಂತು ಎಲ್ಲವನ್ನೂ ನೋಡುತ್ತಾ, ಕೈ ಬೀಸುತ್ತಾ ಸಾಗುವಾಗ ಬಿದ್ದುಬಿಟ್ಟರೆ? ಎಂದು ನಾನೇ ಆತಂಕಗೊಳ್ಳುತ್ತಿದ್ದೆ. ಬೆಳಿಗ್ಗೆ 10ರ ಹೊತ್ತಿಗೆ ಕೊಚ್ಚಿನ್ನಲ್ಲಿ ಇಳಿದಾಗ ಮನಸ್ಸು ನಿರಾಳವಾಯಿತು.

                                                             ********
ಇನ್ನೊಂದು ಮೈಸೂರಿಗೆ ರೈಲಿನಲ್ಲಿ ಪ್ರಯಾಣ. ಅಂದು ಸಿಕ್ಕಿದ್ದು ಸಾಮಾನ್ಯ ಬೋಗಿ. ರೈಲು ಸಹವಾಸಬೇ ಬೇಡ ಅನಿಸಿದ್ದು ಆವಾಗ. ಎದುರುಗಡೆ ಏಳೆಂಟು ಹೆಂಗಸರು, ಪಕ್ಕದಲ್ಲಿ ಕಚ್ಚೆ ಹಾಕಿದ ರೈತರು. ಪದೇ ಪದೇ ವೀಳ್ಯದೆಲೆ ಜಗಿದು ಕಿಟಕಿ ಬದಿಯಲ್ಲಿ ಕುಳಿತು ಮೌನವಾಗಿದ್ದ ನನ್ನ ಸ್ವಲ್ಪ ಪಕ್ಕ ಸರೀಮ್ಮಾ ಎಂದೇಳಿ ಕ್ಯಾಕರಿಸಿ ಉಗಿಯೋರು. ಎದುರುಗಡೆ ಕುಳಿತ ಹೆಂಗಸರ ಬಾಯಲ್ಲಂತೂ ಊರ ಸುದ್ದಿ, ಸೀರಿಯಲ್ ಗಳು ಎಲ್ಲವೂ ತೂರಿ ಬಂದವು. ಮೈಸೂರು ತಲುಪುವವರೆಗಿನ ಆ ಮೂರು ಗಂಟೆಗಳು ನನಗೆ ಅತ್ಯಂತ ಕಷ್ಟದ ಸಮಯವಾಗಿತ್ತು.
                                                               *********
ಇನ್ನೊಂದು ಮೈಸೂರಿನಿಂದ ವಾಪಸ್ ಬರುವ ಪ್ರಸಂಗ.  ಜನರಲ್ ಬೋಗಿ ಕಿರಿಕಿರಿ ಬೇಡೆಂದು ಮೊದಲೇ ಟಿಕೆಟ್ ಕಾಯ್ದಿರಿಸಲಾಗಿತ್ತು. ಕಾರ್ಯಕ್ರಮಗಳೆಲ್ಲಾ ಮುಗಿಸಿ ಸೂರ್ಯ ಮುಳುಗುವ ಹೊತ್ತಿಗೆ ರೈಲು ಪ್ರಯಾಣಕ್ಕೆ ಸಿದ್ಧಳಾಗಿದ್ದೆ. ರೈಲು ತಡವಾಗಿ ಬಂದಿದ್ದರಿಂದ ನೂಕುನುಗ್ಗಲು. ಎಲ್ಲರೂ ಎಲ್ಲರನ್ನೂ ದೂಡಿ, ಒದ್ದು ಸಾಗುವವರೇ. ನಮ್ಮನೆಯವರು ನನ್ನ ಕೈಹಿಡಿದುಕೊಂಡು ನನ್ನನ್ನೂ ಎಳೆದುಕೊಂಡು ರೈಲು ಹತ್ತಲು ಅಣಿಯಾದರು. ಆದರೆ, ಜನಸಂದಣಿಯಲ್ಲಿ ನನ್ನ ಕೈ ತಪ್ಪಿ ನಾನು ಕೆಳಗಡೆಯೇ ಬಾಕಿಯಾದೆ. ಮತ್ತೆ ನಮ್ಮವ್ರು ನನ್ನ ಹುಡುಕಿಕೊಂಡು ವಾಪಸ್ ಬಂದಾಗ ಅಳುತ್ತಾ ಕೆಳಗಡೆಯೇ ನಿಂತಿದ್ದೆ. ಅಷ್ಟೊತ್ತಿಗೆ ರೈಲು ಚಲಿಸಲು ಆರಂಭಿಸಿತ್ತು!

                                                                 *********
ಈಗ ನಮ್ಮೂರಿಗೂ ರೈಲು ಬರುತ್ತಿದೆ. ಆದರೆ, ಸೀಟು ಸಿಗೋದೇ ಕಷ್ಟ. ಶಿರಾಡಿಘಾಟ್ ನಲ್ಲಿ ಬಸ್ ಗಳಲ್ಲಿ ಓಲಾಡಿಕೊಂಡು ಹೋಗುವ ನನಗೆ ಶಿರಾಡಿಘಾಟ್ ನ ಹಸಿರು ತಪ್ಪಲಲ್ಲಿ ಹಗಲಿನಲ್ಲಿ ರೈಲಿನಲ್ಲಿ ಪ್ರಯಾಣಿಸಬೇಕೆನ್ನುವ ಆಸೆಯಿದೆ.