Sunday, December 18, 2011
ಹೆಣ್ಣು- ರಾಜಿ
ಎದುರುಮನೆಯ ಅಮ್ಮನ ವಯಸ್ಸಿನ ಹೆಂಗಸು ನಿತ್ಯ ಸಂಜೆ ಜಗಲಿಕಟ್ಟೆಯಲ್ಲಿ ಹಾಜರಾಗುವಳು. ಸುಖ-ದುಃಖವೆಂದು ಮಾತಿಗಿಳಿಯುವಳು. ಅಪ್ಪ ಹೋದ ದಿನ ಅಮ್ಮನಿಗೆ ಸಮಾಧಾನದ ಮಾತುಗಳ ಹೇಳಿದವಳು.
ಆದರೆ, ಅಪ್ಪ ಹೋದ ಮರುದಿನ ಬಾಡಿಹೋದ ಮುಖದೊಂದಿಗೆ ಅಮ್ಮ ಬಾಗಿಲು ತೆರೆದಾಗ ಎದುರುಮನೆಯ ಬಾಗಿಲು ದಡಕ್ಕಂತ ಮುಚ್ಚಿತು. ದರಿದ್ರ, ಗಂಡ ಕಳಕೊಂಡವಳು! ಎಂದು ಆಕೆ ಉಸುರಿದ್ದು ಅಮ್ಮನ ಕಿವಿಗೆ ಬೀಳದಿರಲಿಲ್ಲ, ಅಮ್ಮನ ಕಣ್ಭಲ್ಲಿ ಕಣ್ಣೀರು ಬತ್ತಿಹೋಗಿತ್ತು. ಮುಚ್ಚಿದ ಮನೆಬಾಗಿಲು ಕಂಡು ನಿಟ್ಟುಸಿರು ಬಿಟ್ಟು ಅಮ್ಮ ಮೌನವಾದಳು.
***********
ಅಂದು ಅಪ್ಪನ ವೈಕುಂಠ ಸಮಾರಾಧನೆ ದಿನ. ಮುತ್ಯೈದೆಯರಿಂದ ಅರಿಶಿನ ಕುಂಕುಮ ಕೊಡಲು ಆದೇಶಿಸಿದರು. ಬೆಳ್ಲಿ ತಟ್ಟೆ ಎತ್ತಿಕೊಂಡು ನಾನು ಸರತಿ ಸಾಲಿನಲ್ಲಿ ಕುಳಿತು ಅರಿಶಿನ, ಕುಂಕುಮ ಹಂಚಿದೆ. ಮುತ್ಯೈದೆಯರ ಸರತಿ ಸಾಲಿನಲ್ಲಿ ಕುಳಿತ ಅಮ್ಮ ಸುಮ್ಮನಾದಳು. ಅಪ್ಪನಿರುವಾಗ ಅರಿಶಿನ ಕುಂಕುಮ ಎಂದರೆ ಮುಂದೆ ಬಂದು ಮುತ್ಯೈದೆ ಭಾಗ್ಯ ನೀಡು ದೇವಾ ಎಂದು ತಾಳಿಗೆ ಅರಿಶಿನ ಹಚ್ಚುತ್ತಿದ್ದ ಅಮ್ಮನಿಗೆ ಅರಿಶಿನ ಪಡೆಯುವ ಕನಿಷ್ಠ ಭಾಗ್ಯ ಇಲ್ಲದ ಈ "ಕಟ್ಟುಪಾಡು'ಗಳ ಬಗ್ಗೆ ಉತ್ತರವಿಲ್ಲದೆ ನಾನೂ ರಾಜಿಯಾಗಿದ್ದೆ!
Wednesday, December 7, 2011
ಅಗಲಿದ ಅಪ್ಪನೆಂಬ ಅಕ್ಕರೆಗೆ...

ನೀನು ಸುಮ್ಮನೆ ಮಲಗಿದ್ದೆ, ಮೌನವಾಗಿ. ಆ ಗಾಜಿನ ಪೆಟ್ಟಿಗೆಯೊಳಗೆ ಮಲಗಿದ್ದ ನಿನ್ನ ನೋಡುವಾಗ ನಿನ್ನ ಬಿಳಿಮೀಸೆಯಡಿಗಿನ ಮುಗ್ಧ ನಗು ನೆನಪಾಗುತ್ತಿತ್ತು. ಮತ್ತೆ ಮಾತಿಗೆ ತುಟಿಬಿಚ್ಚುವಂತೆ ಭಾಸವಾಗುತ್ತಿತ್ತು. ಪುಟ್ಟಾ ಎಂದು ಕೂಗುತ್ತಿಯೇನೋ, ಕಣ್ಣುಗಳಲ್ಲೇ ನಗುತ್ತಿಯೇನೋ ಅಂದುಕೊಂಡೆ.
ಆದರೆ ನೀ ನಗಲಿಲ್ಲ, ನಾನು ಅತ್ತೆ, ಗೋಳಾಡಿದೆ. ಮನಸ್ಸು, ಹೃದಯ ಕಣ್ಣೀರಾದರೂ ನೀನು ಬರಲೇ ಇಲ್ಲ. ನಿನ್ನ ಅಪ್ಪಾ ಎಂದು ಕೂಗುವ ಹಕ್ಕನ್ನೂ ನಾ ಕಳೆದುಕೊಂಡೆ. ಅಪ್ಪನಿಲ್ಲದ ಜಾಗದಲ್ಲಿ ನೀನು ಅಪ್ಪನಾಗಿ ಬಂದಾಗ ನಾನು ಮಾಮ ಎಂದು ಮಮಕಾರ ತೋರಲಿಲ್ಲ, ಅಪ್ಪಾ ಎಂದೆ. ನೀನು ಸೊಸೆ ಎನ್ನಲಿಲ್ಲ, ಮಗಳೇ ಎಂದು ಎದೆಗಪ್ಪಿಕೊಂಡೆ.
ಆ ಸಂಜೆ ಹೊತ್ತು ನೀನು ಇದ್ದಕಿದ್ದಂತೆ ಉಸಿರಾಡುವುದನ್ನು, ಮಾತನಾಡುವುದನ್ನು, ನಗುವುದನ್ನು, ನಿನ್ನ ಪಾಡಿಗೆ ಗೊಣಗುವುದನ್ನು, ಅಮ್ಮನ ಜೊತೆ ಸುಖಾಸುಮ್ಮನೆ ಜಗಳವಾಡುವುದನ್ನು ನಿಲ್ಲಿಸಿದಾಗ ದೇವರ ಮೇಲೆ ಕೆಟ್ಟ ಸಿಟ್ಟು ಬಂತು! ನಿನ್ನ ಮರಳಿ ಕೊಡು ಎಂದು ಕಣ್ಣೀರಿಟ್ಟರೂ ದೇವರು ಕಿಂಚಿತ್ತೂ ದಯೆ ತೋರಲೇ ಇಲ್ಲ.
ರಾತ್ರಿಯಿಡೀ ಮನೆಯೆದುರು ಬೆಂಕಿ ಹಾಕಿ ಕುಳಿತೆ. ಮನೆಯೊಳಗೆ ಗಾಜಿನ ಪೆಟ್ಟಿಗೆಯಲ್ಲಿ ಮಂಜುಗಡೆಯ ತಂಪಿಗೆ ನೀನೂ ಮಂಜಾಗುತ್ತಿದ್ದೆ. ಕಿಸಾಗೋತಮಿ ಕಥೆ ನೆನಪಾಯಿತು. ಸಾವಿಲ್ಲದ ಮನೆಯ ಸಾಸಿವೆ ಗೌತಮಿಗೆ ಕೊನೆಗೂ ಸಿಗಲೇ ಇಲ್ಲ.
ಆದರೂ ಇಷ್ಟು ಬೇಗ ನನ್ನ, ನಿನ್ನ ಅಗಲುವಿಕೆ ನ್ಯಾಯವಲ್ಲ ಎನ್ನೋದು ನನ್ನ ತಕರಾರು. 25 ವಸಂತಗಳನ್ನು ದಾಟಿದ ನಂತರ ನೀನು ಸಿಕ್ಕಿದೆ, ಬಾಯಿ ತುಂಬಾ ಅಪ್ಪಾ ಎಂದು ನಿನ್ನ ಕರೆದೆ. ನಿನ್ನ ಹೆಗಲ ಮೇಲೆ ಕೈಯಿಟ್ಟಾಗ ಸಲಿಗೆ ಎಂದು ಬೈಯಲಿಲ್ಲ. ಎಪ್ಪತ್ತೈದು ದಾಟಿದ ನೀನು ಪದೇ ಪದೇ ನನ್ನ ಕೂಗಿದಾಗ ನಾನು ರೇಗಾಡಿದರೂ ಮಗಳೆಂದು ಸಹಿಸಿಕೊಂಡೆ.
ನೀನು ಕಣ್ಣಲ್ಲಿ ಕಣ್ಣಿಟ್ಟು ಸಾಕಿದೆ, ಕಿವಿಗೆ ಓಲೆ, ಜುಮುಕಿ ತಂದೆ, ಕೈಗಳಿಗೆ ಮಿನುಗು ಬಳೆಗಳನ್ನು ತಂದೆ, ಮುಡಿಗೆ ಮಲ್ಲಿಗೆ ಮೊಳ ತಂದೆ, ಕಣ್ಣಿಗೆ ಕಾಡಿಗೆ ತಂದೆ, ಕಾಲಿಗೆ ಸದ್ದುಗೈಯುವ ಗೆಜ್ಜೆ ತಂದೆ, ಮನೆ ತುಂಬಾ ಗೆಜ್ಜೆಯ ಸಪ್ಪಳ ಮಾಡಿದೆ. ಆದರೆ, ಒಂದೇ ಒಂದು ನಿನ್ನಾಸೆ ಈಡೇರಲಿಲ್ಲ, ನನಗೆ ಮೊಗ್ಗಿನ ಜಡೆ ಇಳಿಸಿ ನೋಡಬೇಕೆಂಬ ನಿನ್ನಾಸೆ ಈಡೇರಲೇ ಇಲ್ಲ. ದೇವರ ಅನ್ಯಾಯವಿದು!
Friday, July 15, 2011
ಅಮ್ಮ ತಂದ ಲಾಟರಿ
Saturday, December 25, 2010
ಅರ್ಥವಾಗದವಳು!

೬೦ ವರ್ಷದ ಹಿಂದೆ ನಿನ್ನ ಸ್ಕೂಲಿಗೆ ಕಳುಹಿಸಿದ್ದೆ. ಸೂರ್ಯ ಮುಳುಗುವ ಹೊತ್ತು ಅದೇ ಕಬ್ಬಿಣದ ಗೇಟಿನಲ್ಲಿ ನಿಂತು ಸ್ಕೂಲಿನಿಂದ ಬರುವ ನಿನಗಾಗಿ ಕಾಯುತ್ತಿದ್ದೆ. ನಿನ್ನ ‘ಅಮ್ಮಾ’ ಕರೆಗಾಗಿ. ಆ ಸಂಜೆ ಹೊತ್ತಿನಲ್ಲಿ ಉಪ್ಪಿಟ್ಟು ಮಾಡಿ ನಿನಗಾಗಿ ಕಾಯುವುದೇ ನನಗೆ ಹೆಮ್ಮೆ. ಇದು ಒಡಲಾಳದ ದನಿ. ಎಲ್ಲವೂ ನನ್ನದೆಯ ನೆನಪು.
ಕಾಲ ನಿಲ್ಲುವುದಿಲ್ಲ. ಬದುಕು ಚಲಿಸುತ್ತದೆ. ಮನುಷ್ಯ ಇದಕ್ಕೆ ಹೊರತಲ್ಲ. ಎಷ್ಟೋ ಬಾರಿ ಇದನ್ನೆಲ್ಲಾ ನಿನ್ನ ಬಳಿ ಕುಳಿತು, ನಿನ್ನ ಕಣ್ಣುಗಳನ್ನು ನೋಡುತ್ತಲೇ ಹೇಳಬೇಕನಿಸುತ್ತೆ. ಆದರೆ, ನಿನ್ನ ದಿನನಿತ್ಯದ ಜಂಜಾಟದ ನಡುವೆ ಅಮ್ಮನ ಮಾತು ಕೇಳಲು ಅದೆಲ್ಲಿ ಸಮಯವಿರುತ್ತೆ? ಎಂದು ಎಲ್ಲವನ್ನೂ ಮೌನದೊಳಗೆ ಹೂತುಬಿಡ್ತೀನಿ.
ನಿಂಗೊತ್ತು ಅಮ್ಮನಿಗೆ ೮೦ ದಾಟಿದೆ. ಕೂದಲು ಬೆಳ್ಳಿಯಾಗಿದೆ. ಹಲ್ಲುಗಳು ಕಾಣಿಸುತ್ತಿಲ್ಲ. ಮುಖದಲ್ಲಿದ್ದ ನಗುನೂ ಮಾಸುತ್ತಿದೆ. ಕಣ್ಣುಗಳು ಗುಳಿಬಿದ್ದಿವೆ. ಬೆನ್ನು ಬಾಗಿದೆ. ಹಗಲಿಡೀ ತೋಟದೊಳಗೆ ಬದುಕು ಕಂಡಿದ್ದ ಅಮ್ಮ ಇಂದು ಊರುಗೋಲು ಹಿಡಿದು ನಡೆಯುತ್ತಿದ್ದಾಳೆ. ನಿನಗೆ ಹಿಡಿ ಅನ್ನ ಉಣಿಸಿದ ಆ ಬೆರಳುಗಳು ಇಂದು ನಡುಗುತ್ತಿವೆ. ನೀನು ನಿತ್ಯ ಮಾಡಿಸುವ ಆ ಜಳಕಕ್ಕೂ ನನ್ನ ಮೈ ಒಗ್ಗುತ್ತಿಲ್ಲ. ಪ್ರೀತಿಯಿಂದ ನೀಡಿದ ಹಿಡಿತುತ್ತು ನನಗೆ ರುಚಿಸುತ್ತಿಲ್ಲ.ಅರ್ಥವಿಲ್ಲದ ಕನಸುಗಳಿಗೂ ಜೀವವಿಲ್ಲ. ಪ್ರೀತಿಯ ಸವಿ ಅನುಭವಿಸುವ ಹೊತ್ತುನೂ ಕಳೆದುಹೋಗಿದೆ. ನಿನಗನಿಸಬಹುದು ಅಮ್ಮ ಅರ್ಥವಾಗದವಳು!, ಆದರೆ ಇದು ಅರ್ಥವಾಗದ ವಯಸ್ಸು. ಕಾಲ ಹಕ್ಕಿಯಂತೆ ಹಾರುತಿದೆ. ಈಗ ನನಗೆ ಕೊನೆಯ ಹೊತ್ತು.
೪೦ ವರ್ಷದ ಹಿಂದೆ ನೋಡಿದ ಕಸ್ತೂರಿ ನಿವಾಸದ ಹಾಡು ನೆನಪಾಗುತ್ತದೆ.
ಮೈಯನ್ನೇ ಹಿಂಡಿ ನೊಂದರೂ
ಕಬ್ಬು ಸಿಹಿಯ ಕೊಡುವುದು
ತೇಯುತಲಿದ್ದರೂ ಗಂಧದ ಪರಿಮಳ
ತುಂಬಿ ಬರುವುದು ತಾನೇ
ಉರಿದರೂ ದೀಪವು ಮನೆಗೆ
ಬೆಳಕು ತರುವುದು....
ಪ್ರಕಟ: http://www.hosadigantha.in/epaper.php?date=12-08-2010&name=12-08-2010-13
Friday, December 3, 2010
ಬೆಳ್ಳಿ ಕಾಲುಂಗುರ

ಸುತ್ತಲೂ ವಾದ್ಯ, ಜಾಗಟೆಗಳ ಸದ್ದು. ನೆರೆದವರ ಮನಸ್ಸು ಸಂಭ್ರಮದ ಕಡಲು. ನಮಗರ್ಥವಾಗದ ಪುರೋಹಿತರ ಸಾಲು ಸಾಲು ಶ್ಲೋಕಗಳು. ಆಗ ತಾನೇ ನೀನು ನನ್ನ ಕೊರಳಿಗೆ 'ತಾಳಿ'ಯಾಗಿದ್ದೆ. ನನ್ನ ಮುಖದಲ್ಲಿ ಮುತ್ತೈದೆಯ ರಂಗು. ನಿನ್ನ ಮುಖದಲ್ಲಿ ಮಲ್ಲಿಗೆ ನಗು, ನಾಳಿನ ‘ರವಸೆಗಳು, ಹಸಿರಸಿರು ಕನಸುಗಳು. ಅಂದು ನೀನು ನನ್ನ ಕಾಲು ಮುಟ್ಟಿದಾಗ ಒಂದು ಕ್ಷಣ ಅಚ್ಚರಿ, ಭಯ, ನಾಚಿಕೆ. ಕೆನ್ನೆಯಲ್ಲಿ ಏಳು ಬಣ್ಣದ ರಂಗೋಲಿ. ನನ್ನ ಪುಟ್ಟ ಬಿಳಿಪಾದ, ಅದರ ತುದಿಯಲ್ಲಿರುವ ಆ ಸಣ್ಣ ಬೆರಳುಗಳು ನಿನ್ನ ಸ್ಪರ್ಶಕ್ಕೆ ಕಂಪಿಸತೊಡಗಿದವು. ಆದರೂ, ನನ್ನ ಮನಸ್ಸಿನಲ್ಲಿ ಖುಷಿಯ ಮೃದಂಗ.
ಬೆಳ್ಳಿ ಕಾಲುಂಗುರ
ಅಮ್ಮ ಹೇಳಿದ್ದ ನೆನಪು: ಗಂಡ ಒಂದೇ ಒಂದು ಸಲ ತನ್ನ ಹೆಂಡತಿಯ ಕಾಲನ್ನು ಮುಟ್ಟುತ್ತಾನಂತೆ, ಅದು ಕಾಲುಂಗುರ ತೊಡಿಸುವಾಗ. ಹೌದು, ನೀನು ಅಂದು ನನ್ನ ಕಾಲು ಮುಟ್ಟಿದ್ದೆ. ಅದೇ ಮೊದಲು. ಅದು ನನ್ನ ಜೀವನದ ಅಮೂಲ್ಯ ಕ್ಷಣವಾಗಿತ್ತು. ಬೆಳ್ಳಿ ಕಾಲುಂಗುರವನ್ನು ನನ್ನ ಆ ಪುಟ್ಟ ಬೆರಳುಗಳಿಗೆ ಹಾಕಿದ್ದೆ. ನನ್ನ ಮನಸ್ಸಲ್ಲಿ ಆ ಕ್ಷಣ ನೀನು ಗೊತ್ತು ಮಾಡಿದ ಪುಟ್ಟ ಬಾಡಿ ಗಾರ್ಡ್ ಅನಿಸಿತ್ತು. ಹೌದು, ನೀನು ಜೊತೆಗಿಲ್ಲದ ಸಮಯದಲ್ಲಿ ಅದು ನನ್ನ ಬಾಡಿ ಗಾರ್ಡ್, ಅದು ನೀನು ನನಗೆ ನೀಡಿದ ಆಣೆಯ ಉಡುಗೊರೆ. ಅದನ್ನು ಕಂಡರೆ ನನಗೆ ಗೌರವ, ನೀನೆಂಬ ಪ್ರೀತಿ. ನೀನು ತೊಡಿಸಿದ್ದೆಂಬ ಅಗಾ‘ ಹೆಮ್ಮೆ. ಆಗಾಗ ಅದನ್ನು ನೋಡಿ ಖುಷಿಪಡುತ್ತೇನೆ. ದಾರಿಗುಂಟ ಸಾಗುವಾಗ ನನ್ನನ್ನೇ ದಿಟ್ಟಿಸಿ ನೋಡುವ ಅದೆಷ್ಟೋ ಕಣ್ಣುಗಳಿಗೆ ನನ್ನ ಕಾಲುಂಗುರವೇ ಉತ್ತರ ಹೇಳುತ್ತದೆ. ಬೆಳ್ಳಿ ಕಾಲುಂಗುರ ಎಂದಾಗ ನೆನಪಾಗುವುದು ಅದೇ ಹಾಡು
ಬಾಳ ಕಡಲಲಿ ಪ್ರೇಮ ನದಿಗಳ ಸಂಧಿ
ಸಮಯದಲಿ ಮಿಂಚುವ ಮಿನುಗುವ ಸಾಕ್ಷಿ ಈ ಕಾಲುಂಗುರ
ನಾದಗಡಲಲಿ ವೇದ ಘೋಷದ ಸಪ್ತಪದಿಗಳಲಿ
ಬದುಕಿನ ಬಂಡಿಗೆ ಸಾರಥಿ ಕಾಲುಂಗುರ
ಶುಕವ ತರುವ ಸತಿ ಸುಖವ ಕೊಡುವ
ಮನ ಮನೆಯ ನೆಲದಲಿ ಗುನುಗುವ ಒಡವೆಯೋ....
Thursday, November 18, 2010
ನೀನು ಕವಿ, ನಾನು ಕವಿತೆ!

ಅದು ನನ್ನ ಮನೆ. ಹುಲ್ಲಿನ ಮಾಡಿನಿಂದ ಮಾಡಿದ ಪುಟ್ಟ ಮನೆ. ಮಣ್ಣಿನ ಗೋಡೆಯ ಚೆಂದದ ಮನೆ. ಅಂಗಳದಲ್ಲಿ ಹೂ ಗಿಡಗಳ ಚಿತ್ತಾರವಿರುವ ಚೆಂದದ ಅರಮನೆ. ನಾನಲ್ಲೇ ಕನಸು ಕಂಡಿದ್ದು. ಅದು ನಿನ್ನ ಕನಸು. ಎಲ್ಲೋ ಓದಿದ ಕವನಗಳು, ಎಲ್ಲೋ Uಚಿದ ಬರಹಗಳು...ಎಲ್ಲವೂ ನನ್ನೊಳಗೊಂದು ಹೊಸ ಭಾವಗಳಿಗೆ ಹುಟ್ಟು.
ನಿನ್ನಲ್ಲಿ ಕವನಗಳು ಹುಟ್ಟಬೇಕು, ನೀನು ಕವಿಯಾಗಬೇಕು. ಮುಗಿಲಲ್ಲಿ ನಿತ್ಯ ಕಾಣುವ ಆ ನೀಲಿ ಬಣ್ಣ ನಿನಗೆ ಹೊಸತೆನಿಸಬೇಕು. ನಿತ್ಯದ ಆ ಹಗಲು ನಿನಗೆ ಹೊಸತಾಗಬೇಕು. ಪ್ರತಿದಿನದ ಆ ಮುಂಜಾನೆ ನಿನ್ನಲ್ಲಿ ಹೊಸ ಬೆಡಗನ್ನು ಹುಟ್ಟಿಸಬೇಕು.ಆಕಾಶದಲ್ಲಿ ಮೂಡುವ ಕಾಮನಬಿಲ್ಲು, ಹಕ್ಕಿಗಳ ಕಲರವ, ನದಿನೀರಿನ ಜುಳುಜುಳು ನಾದ, ನಿಶ್ಚಲ ಸರೋವರಗಳು, ಚಲಿಸುವ ಮೋಡಗಳು, ಕಿವಿಗೆ ಇಂಪಾಗುವ ಸಂUತ...ಎಲ್ಲವೂ ನಿನ್ನಲ್ಲಿ ಕವಿತೆಗಳಾಗಬೇಕು.
ನನ್ನೊಳಗಿನಿಂದ ಹುಟ್ಟುವ ಭಾವಗಳು, ಮಾತಿಲ್ಲದ ಮೌನ ನಿನ್ನಲ್ಲಿ ಕವನಗಳಾಗಬೇಕು. ನನ್ನ ಕಿವಿಯಲ್ಲಿ ಮಿನುಗುವ ಮುತ್ತಿನೋಲೆ, ತುಟಿ ಮೇಲೆ ನಗುವ ಆ ಮೂಗುತಿ ಮಿಂಚು, ಕಣ್ಣರೆಪ್ಪೆಯಲ್ಲಿ ಕನವರಿಸುವ ಆ ಕನಸುಗಳು, ಕಾಲಿಗೆ ನೀ ತೊಡಿಸಿದ ಆ ಬೆಳ್ಳಿ ಕಾಲುಂಗುರ, ನಿನ್ನದೆಯನ್ನು ಖುಷಿಗೊಳಿಸುವ ಆ ಕಾಲ್ಗೆಜ್ಜೆ, ಕೈ ಬಳೆ ಸದ್ದು, ನಿನ್ನ ಕನ್ಸ್ ಮಾಡುವ ಮುಂಗುರುಳು, ತುಟಿಯಂಚಿನ ಮಿನುಗು ನಗು...ನಿನ್ನಲ್ಲಿ ಕವನಗಳಾಗಬೇಕು. ಅಷ್ಟೇ ನಾನು ಬಯಸಿದ್ದು. ಅಂದು ಆ ಪುಟ್ಟ ಮನೆಯಲ್ಲಿ ಹುಟ್ಟಿದ ಕನಸು ನಿಜವಾಗಿದೆ. ಅದು ನನ್ನ ಖುಷಿ, ನನ್ನ ಹೆಮ್ಮೆ. ಇಂದು ನಾನು ಕವನ, ನೀನು ಕವಿ, ಇನ್ಯಾರೋ ಕಿವಿ!!
ಬಾ ಗೆಳತಿ..
ಮಳೆ ಹನಿಯಲಿ
ಅಚ್ಚ- ಅಡವಿಯಲಿ
ನನ್ನ ಅಚ್ಚರಸಿ
ನಿನಗೆ ನನ್ನುಸಿರನು
ಬೆಚ್ಚಗೆ ಆಚ್ಛಾದಿಸಿ
ಒಲವ-ದೀಪ ಹಚ್ಚಿಟ್ಟು
ಜಗದ ಎಲ್ಲ
ಸಂಚಿಗೆ ಕಿಚ್ಚಿಟ್ಟು
ನನ್ನೀ ಕಂಗಳು
ಮುಚ್ಚುವ ತನಕ
ಕಣ್ರೆಪ್ಪೆಯಲಿ ಬಚ್ಚಿಟ್ಟು
ಸಾಕುವೆ ..ಬಾ ನನ್ನಚ್ಚರಸಿ...
ವೊದಲ ನೋಟಕ್ಕೆ ನೀನು ಬರೆದ ಕವನ ನಿನ್ನಂತೆ ನನ್ನಲ್ಲಿ ಹಸಿರು. ಇಲ್ಲಿ ನೀನು ಸೋತು ಗೆದ್ದೆ, ನಾನು ಗೆದ್ದು ಸೋತೆ!!
ಪ್ರಕಟ: http://hosadigantha.in/epaper.php?date=11-18-2010&name=11-18-2010-13
Wednesday, November 10, 2010
ಆ ಕೆಟ್ಟ ನೋವು.

ಅಂದು ನಾನು ಸುಮ್ಮನೆ ನಾಚಿಕೊಂಡ ದಿನ. ಎಲ್ಲರ ನೋಟಗಳು ನನ್ನತ್ತಲೇ ನೋಡುವಾಗ ಅದೇನೋ ಹೊಸ ಅನುಭವ. ಏನೋ ಒಂದು ಹೊಸತನ್ಮು ಪಡೆದುಕೊಂಡ ಹಾಗೇ. ನನ್ನಕ್ಕನಂತೆ ನಾನು ದೊಡ್ಡವಳಾಗಿದ್ದೇನೆಂದು ಅಂದುಕೊಳ್ಳೋದೇ ಅದೇನೋ ಖುಷಿ, ಅವ್ಯಕ್ತವಾದ ಹೆಮ್ಮೆ. ಯಾರಲ್ಲಾದ್ರೂ ಹೇಳಿಕೊಳ್ಳಬೇಕಂದ್ರೂ ಹೇಳಿಕೊಳ್ಳಲಾಗದ ಪುಟ್ಟ ಸಂತೋಷ. ಸ್ಕೂಲಿಗೆ ಚಕ್ಕರ್ ಏಕೆ ಹಾಕಿದ್ದೆಂದರೆ ಸುಮ್ಮನೆ ಜ್ವರವೆಂದು ಪಕ್ಕಾ ಸುಳ್ಳು ಹೇಳಿ ಮೇಷ್ಟ್ರ ಕೈಯಿಂದ ತಪ್ಪಿಸಿಕೊಂಡು ನಕ್ಕುಬಿಟ್ಟಿದ್ದೆ. ನನ್ನಲ್ಲಿ ನನ್ನನ್ನೇ ಕಾಣುವ ಸಂಭ್ರಮ. ಪುಟ್ಟ ಹಕ್ಕಿ ಮರಿಯೊಂದು ರೆಕ್ಕೆ ಬಲಿತು ಗೂಡಿನಿಂದ ಹೊರಬರುವ ಸಂಭ್ರಮದಂತೆ ನನ್ನೊಳಗೊಂದು ಹಬ್ಬದ ವಾತಾವರಣ. ಹೊಸ ಬಟ್ಟೆ, ಹೊಸ ದಿರಿಸು, ಹೊಸ ಗಳಿಗೆ.
ಅಮ್ಮನ ಮುಖದಲ್ಲಿಯೂ ‘ತಾಯ್ತನ’ದ ಮಿರುಗು.
ಆದರೆ, ಅವತ್ತೇನೋ ನನಗೆ ಆ ದಿನ ಹೊಸತಾಗಿತ್ತು. ಆದರೆ, ಅಂದಿನಿಂದ ಇಂದಿನವರೆಗೆ ನನ್ನನ್ನು ಹಿಂಡಿ ಹಿಪ್ಪೆಯಾಗಿಸುವ ಆ ನೋವು ಇದೆಯಲ್ಲಾ,..ಅದನ್ನು ನೆನೆಸಿಕೊಂಡಾಗ ಛೇ! ನಾನು ಹೆಣ್ಣಾಗಿ ಹುಟ್ಟಬಾರದಿತ್ತು ಎಂದನಿಸುತ್ತದೆ. ತಿಂಗಳಲ್ಲಿ ಆ ಒಂದು ದಿನವನ್ನು ನಾನು ತುಂಬಾ ದ್ವೇಷಿಸುತ್ತೇನೆ. ಅಂದು ಅನ್ನ. ನೀರು ಏನೂ ಬೇಡ ಎಂದನಿಸುತ್ತೆ. ಹೆಣ್ಣು ಬದುಕು ನೀಡಿದ ಆ ದೇವರನ್ನು ಅದೆಷ್ಟು ಬಾರಿ ಶಪಿಸಿದ್ದೇನೋ. ದೇವರು ಕಣ್ಣು ಬಿಡಲಿಲ್ಲ. ಪ್ರತಿ ತಿಂಗಳು ಆ ಕೆಟ್ಟ ನೋವು ನನ್ನನ್ನು ಹಿಂಡಿ ಹಿಪ್ಪೆಯಾಗಿಸುತ್ತದೆ. ನನ್ನ ಆ ಸುಂದರ ಕಣ್ಣುಗಳು ರಾತ್ರಿಯಿಡೀ ನಿದ್ದೆಯಿಲ್ಲದೆ ಬಳಲುತ್ತವೆ. ನನ್ನ ಆ ಮುಖ ಯಾವ ಉತ್ಸಾಹವೂ ಇಲ್ಲದೆ ಕಳೆಗುಂದುತ್ತದೆ. ಬೇಡ, ಆ ಅಸಹನೀಯ ನೋವನ್ನು ನನ್ನಿಂದ ಸಹಿಸಲಾಗುವುದಿಲ್ಲ. ಆ ಮೂರು ದಿನಗಳಲ್ಲಿ ಕಂಡಕಂಡವರೊಡನೆ ರೇಗಾಡ್ತೀನಿ. ಸಿಟ್ಟಿನಿಂದ ಮುಖ ಊದಿಸಿಕೊಂಡು ಬಿಡ್ತಿನಿ. ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಅತ್ತೆ-ಮಾವ, ಕೈಹಿಡಿದ ಗಂಡ, ಪ್ರೀತಿಯ ನನ್ನ ಮಕ್ಕಳು...ಯಾರನ್ನು ಕಂಡರೂ ನನಗೆ ಸಿಟ್ಟು, ಅಸಹನೆ. ನನ್ನ ಆಪೀಸ್ನ ಆ ಲ್ ಚಯರ್ನಲ್ಲಿ ಕುಳಿತು ಅಲ್ಲೇ ಖಿನ್ನಳಾಗ್ತೀನಿ. ನನ್ನ ಪ್ರೀತಿಸುವವರೂ ದ್ವೇಷಿಸುವವರಂತೆ ಕಾಣುತ್ತಾರೆ. ತುಂಬಾ ಸಲ ಅನಿಸಿದೆ; ನಾನು ಹುಡುಗನಾಗುತ್ತಿದ್ದರೆ, ಅದ್ಯಾವ ತೊಂದರೆಗಳೂ ನನಗಿರಲಿಲ್ಲ ಎಂದು!
ಇಷ್ಟೆಲ್ಲಾ ನೋವನ್ನು ಹೊಟ್ಟೆಯೊಳಗೇ ನುಂಗಿಕೊಂಡು ಕಷಾಯ ಮಾಡಿಕೊಂಡು ಕುಡಿಯುವಾಗ ಐದು ವರ್ಷದ ನನ್ನ ಮಗಳು ಬಂದು ಕೇಳುತ್ತಾಳೆ; ಯಾಕಮ್ಮಾ, ಕಷಾಯ ಕುಡಿತೀ ಎಂದು! ಏನನ್ನೂ ಅರಿಯದ ಆ ಮಗಳು ಹೀಗೆ ಕೇಳಿದಾಗ ನನ್ನ ಪಾಡಿಗೆ ನಾನಿರುತ್ತೇನೆ. ಅದ್ಯಾವ ಉತ್ತರಗಳೂ ಸಿಗದೆ ಆ ಪುಟ್ಟ ಮಗು ಬಿಟ್ಟ ಕಣ್ಣುಗಳಿಂದ ಪಿಳಿ ಪಿಳಿ ಎಂದು ನನ್ನ ನೋಡುತ್ತೆ. ಆ ಕ್ಷಣ ನನ್ನಮ್ಮ ನನಗೆ ನೆನಪಾಗುತ್ತಾಳೆ.
ಪ್ರಕಟ: http://hosadigantha.in/epaper.php?date=11-11-2010&name=11-11-2010-13