Wednesday, October 27, 2010

‘ಹಸಿರು’ ಕನಸುಗಳು

ಅಂದು ಶ್ರಾವಣ ಮಾಸದ ವೊದಲ ಮಂಗಳವಾರ.
ನನ್ನ ಪುಟ್ಟ ಜಡೆಯಲ್ಲಿ ಮಲ್ಲಿಗೆ ಮಾತಿಗಿಳಿದಿತ್ತು. ಕಿವಿಯಲ್ಲಿ ಕೆಂಪು ಹರಳಿನ ಓಲೆ ತೂಗುಯ್ಯಾಲೆಯಾಡುತ್ತಿತ್ತು. ಕೈಯಲ್ಲಿ ಬಣ್ಣದ ಹೊಸಬಳೆಗಳು ಮಿರಮಿರನೆ ಮಿನುಗುತ್ತಿದ್ದವು. ಕೈಯಲ್ಲಿ ಮದರಂಗಿಯ ಚಿತ್ತಾರ. ನಿತ್ಯ ಹಣೆಯಲ್ಲಿರುತ್ತಿದ್ದ ಸಣ್ಣ ಬಿಂದಿಯನ್ನು ತೆಗೆದು ಅತ್ತೆ ದೊಡ್ಡ ಬಿಂದಿಯನ್ನಿಟ್ಟಿದ್ದರು. ಆ ಬಿಂದಿ ಕೆಳಗಡೆ ಕುಂಕುಮ ನಳನಳಿಸುತ್ತಿತ್ತು. ಕೆನ್ನೆ ಅರಿಶಿನವಾಗಿತ್ತು. ಕೈ ಬೆರಳುಗಳಲ್ಲಿ ಪುಟ್ಟದಾದ ಚಿನ್ನದುಂಗುರ. ಆ ನರುಗೆಂಪು ರೇಷ್ಮೆ ಸೀರೆಯ ಜರಿಯಂಚು ಎದೆಮೇಲೆ ಹೊಳೆಯುತ್ತಿತ್ತು. ಕತ್ತಿನಲ್ಲಿ ‘ಮುತ್ಯೆದೆ’ಯ ರಂಗು...

ನನ್ನನ್ನು ನಾನೇ ನೋಡಿಕೊಳ್ಳುವ ತವಕ. ಕನ್ನಡಿ ಎದುರು ನಿಂತು ನಿಮಿಷಗಟ್ಟಲೆ ಕಳೆದಿದ್ದೆ, ನನ್ನೊಳಗೇ ಸಂಭ್ರಮಿಸಿದ್ದೆ. ತುಟಿಯಂಚಿನಲ್ಲಿ ಖುಷಿಯ ಮುಗುಳುನಗೆ. ‘ಇನ್ನೇನೂ ಕೆಲ ನಿಮಿಷ, ಪುರೋಹಿತರು ಬರುತ್ತಾರೆ. ಬಾಮ್ಮಾ...ಗೌರಿಯನ್ನು ಸಿಂಗರಿಸು’ ಅತ್ತೆಯಮ್ಮನ ಕರೆ ಕೇಳಿದಾಗ, ಜಿಂಕೆಯಂತೆ ಓಡಿ ದೇವರಮನೆಯಲ್ಲಿದ್ದೆ. ಆಗಿನ್ನೂ ಮುಂಜಾವಿನ ಐದೂವರೆ ಗಂಟೆ. ಸೂರ್ಯ ನಿಧಾನವಾಗಿ ಎದ್ದೇಳುತ್ತಿದ್ದ. ‘ಪತಿ ದೇವರು’ ಇನ್ನೂ ಹಾಸಿಗೆ ಬಿಟ್ಟಿರಲಿಲ್ಲ.

ಆ ಪುಟ್ಟ ಜಾಗದಲ್ಲಿ ಚೆಂದದ ರಂಗೋಲಿ ಹಾಕಿದ್ದೆ. ಅದರ ಮೇಲೆ ಮಣೆಯನ್ನಿಟ್ಟು ಗೌರಿ, ಗಣೇಶ ಮತ್ತು ಕಲಶವನ್ನಿಟ್ಟೆ. ಮಲ್ಲಿಗೆ, ಸೇವಂತಿಗೆ ಮತ್ತು ಬಿಡಿಹೂವುಗಳಿಂದ ಗೌರಿ ಸಿಂಗಾರಗೊಂಡಳು.
‘ನೀನೇ ಗೌರಿಯಂತೆ ಕಾಣ್ತಿಯಮ್ಮಾ’ ಮಾವನ ಉವಾಚಕ್ಕೆ ಕೆನ್ನೆಯಲ್ಲಿ ಕಾಮನಬಿಲ್ಲು ಮೂಡಿತ್ತು. ಮನದಲ್ಲಿ ಸಣ್ಣನೆಯ ಭಯ. ‘ಪುರೋಹಿತರು ಹೇಳಿದಂತೆ ಮಾಡು. ವೊದಲ ವರ್ಷ. ಭಕ್ತಿಯಿಟ್ಟು ಪೂಜೆ ಮಾಡು’ ಎಂದಾಗ ಎದೆಯೊಳಗೆ ಢವಢವ. ಪುರೋಹಿತರು ಬಂದೇ ಬಿಟ್ಟರು. ಒಂದೂವರೆ ಗಂಟೆಗಳ ಕಾಲ ಮಂಗಳಗೌರಿ ಪೂಜೆ ಮಾಡಿದ್ದಾಯಿತು. ತಂಬಿಟ್ಟು ದೀಪಗಳನ್ನು ಹಚ್ಚಿಕೊಂಡು ‘ಮಂಗಳ ಗೌರಿ’ ಕಥೆ ಕೇಳಿದ್ದಾಯಿತು.

ಅದು ಮದುವೆಯಾದ ವೊದಲ ವರ್ಷ. ಮಂಗಳಗೌರಿ ವ್ರತ ಮಾಡಿದರೆ ಗಂಡನಿಗೆ ಶ್ರೇಯಸ್ಸು, ಹಿರಿಯರು ಹಾಕಿಕೊಟ್ಟ ಭದ್ರ ಹೆಜ್ಜೆ. ಒಂದಾನೊಂದು ಕಾಲದಲ್ಲಿ ಜಯಪಾಲ ಅನ್ನೋ ರಾಜನಿಗೆ ಭವಾನಿ ದೇವಿಯ ಅನುಗ್ರಹದಿಂದ ‘ಸುಶೀಲೆ’ ಎನ್ನುವ ಮಗಳು ಜನಿಸುತ್ತಾಳಂತೆ. ಅವಳಿಗೂ ಮದುವೆಯಾಗುತ್ತದೆ, ಆದರೆ ಗಂಡ ಅಲ್ಪಾಯುಷಿ. ಸುಶೀಲೆಯು ಗಂಡನ ದೀರ್ಘಾಯುಷ್ಯಕ್ಕಾಗಿ ಮಂಗಳಗೌರಿ ವ್ರತ ಮಾಡಿದ್ದಳಂತೆ...ಅದೂ ಐದು ವರ್ಷಗಳ ಪ್ರತಿ ಶ್ರಾವಣಮಾಸದ, ಪ್ರತಿ ಮಂಗಳವಾರ! ಅವಳದು ಸುಖಸಂಸಾರವಾಯಿತಂತೆ...

ಹೀಗೆಂದು ಪುರೋಹಿತರು ಹೇಳಿಕೊಟ್ಟ ದೀರ್ಘಕಥೆಯನ್ನು ಗಿಳಿಯಂತೆ ಹೇಳಿದಾಗ ಮನಸ್ಸಿನಲ್ಲಿ ಅದೇನೋ ಅವ್ಯಕ್ತವಾದ ಖುಷಿ, ಸಂತೃಪ್ತಿಯ ಬೆಳಕು. ಹೆಣ್ಣಾಗಿದ್ದಕ್ಕೆ ಹೆಮ್ಮೆ. ಪೂಜೆ ಮುಗಿಯಿತು. ಶ್ರಾವಣ ಮಾಸದ ಆ ವೊದಲ ಮಂಗಳವಾರ ಹೊಸ ಬದುಕಿಗೊಂದು ಮುನ್ನುಡಿಯಾದಂತೆ ಭಾಸವಾಯಿತು. ‘ಪತಿ ದೇವರಿಗೆ’ ಪ್ರೀತಿಯಿಂದ ನಮಸ್ಕರಿಸಿದಾಗ ಆತನ ಕಣ್ಣುಗಳಲ್ಲಿ ‘ಹಸಿರು ಕನಸು’ಗಳು ಕಂಗೊಳಿಸುತ್ತಿದ್ದವು!.


Published: http://hosadigantha.in/epaper.php?date=10-28-2010&name=10-28-2010-13

Sunday, October 3, 2010

ನಿನ್ನ ಅಪ್ಪಾ ಅನ್ತೀನಿ...


ಅಂದಿನವರೆಗೆ ಅಪ್ಪಾ ಎಂಬ ಎರಡಕ್ಷರವನ್ನೇ ದ್ವೇಷಿಸುತ್ತಿದ್ದೆ. ಅಪ್ಪನ ಕುರಿತು ಬರೆಯಬೇಕಾದಾಗ, ಅಪ್ಪನ ಕುರಿತು ಹೇಳಬೇಕಾದಾಗ ಅಲ್ಲಿ ಭಾವಗಳಿಗೆ ಜೀವವೇ ಇರಲಿಲ್ಲ. ಏಕೆಂದರೆ ಅಪ್ಪನಾಗಬೇಕಾದವನು ಅಪ್ಪನ ಜವಾಬ್ದಾರಿ ನಿಭಾಯಿಸಲೇ ಇಲ್ಲ. ಮಗಳ ಕನಸುಗಳಿಗೆ, ಅವಳ ಸುಂದರ ಭಾವಗಳಿಗೆ ಜೀವ ನೀಡಲೇ ಇಲ್ಲ. ಅಂದು ಅಮ್ಮನ ಮಡಿಲಿಗೆ ಬಿದ್ದಾಗ ಆತ ಇನ್ಯಾರೋ ಕುತ್ತಿಗೆಗೆ ಮತ್ತೆ "ತಾಳಿ'ಯಾಗಿದ್ದ!

ಇಂದು ನಿನ್ನನ್ನೇ ಅಪ್ಪ ಎಂದು ಕರೆಯುತ್ತಿದ್ದೇನೆ. ಈವರೆಗೆ ನನ್ನ ಬಾಯಿಂದ ಹೊರಬೀಳದ ಅಪ್ಪಾ ಎಂಬ ಎರಡಕ್ಷರದ ಸುಂದರ ಸಂಬಂಧಕ್ಕೆ ಜೀವ-ಭಾವ ಕೊಟ್ಟಿದ್ದು ನೀನೇ. ನೀನು ಪುಟ್ಟೀ ಅಂತ ಕರೆದಾಗಲೆಲ್ಲಾ ಆ ನಿನ್ನ ಸುಂದರ ಕರೆಗೆ ಕರಗಿ ಖುಷಿಯಿಂದ ಕಂಗಳು ಒದ್ದೆಯಾಗುತ್ತಿದೆ, ದೇವ್ರ ಮೇಲೆ ಸಿಟ್ಟುಗೊಳ್ಳುತ್ತಿದ್ದೆ. ನಿನ್ನಂಥ ಒಳ್ಳೆ ಅಪ್ಪನ ಏಕೆ ಇಷ್ಟು ತಡವಾಗಿ ಕೊಟ್ಟೆ ಅಂತ!
ಹೆಣ್ಣೊಬ್ಬಳಿಗೆ ಅಮ್ಮನ ಆಸರೆ ಹೇಗೋ ಹಾಗೆಯೇ ಅಪ್ಪನಾಸರೆಯೂ ಬೇಕಲ್ವಾ? ನನ್ನ ಕ್ಲಾಸಿನ ಹುಡುಗಿಯರೆಲ್ಲ ಅಪ್ಪಾ..ಅಪ್ಪಾ..ಅಂಥ ಕರೆಯುವಾಗ, ತಮ್ಮ ಅಪ್ಪನ ಕುರಿತು ಹಿಗ್ಗಿನಿಂದ ಹೇಳುತ್ತಿರುವಾಗಲೆಲ್ಲಾ ನನ್ನಪ್ಪನಿಗೆ ಹಿಡಿಶಾಪ ಹಾಕುತ್ತಿದ್ದೆ. ನನಗೂ ಅಪ್ಪಾ ಬೇಕಿತ್ತು, ನನ್ನನ್ನು ಹೆಗಲ ಮೇಲೆ ಹೊತ್ತು ಪೇಟೆ ಸುತ್ತಿಸುವ ಅಪ್ಪಾ ಬೇಕಿತ್ತು ಎಂದನಿಸುತ್ತಿತ್ತು, ಏನು ಮಾಡುವುದು ಹೇಳು...ನನ್ನಪ್ಪ ಆವಾಗಲೇ ನನ್ನೆದುರಿನಿಂದ ಮರೆಯಾಗಿದ್ದ. ಅಪ್ಪನೆನಿಸಿಕೊಳ್ಳುವ ಕನಿಷ್ಠ ಅರ್ಹತೆಯನ್ನೂ ಕಳೆದುಕೊಂಡಿದ್ದ.

ಅದಕ್ಕೇ ನೋಡು ಅಪ್ಪಾ...ಈವಾಗ ನಾನು ನಿನ್ನ ಅಪ್ಪಾ ಅನ್ತೀನಿ. ಪುಟ್ಟ ಮಗು ಕೋಪಿಸಿಕೊಂಡಂತೆ ನಿನ್ನ ಜೊತೆ ಕೋಪಿಸಿಕೊಳ್ತೀನಿ. ಅದು ಕೊಡಿಸು, ಇದು ಕೊಡಿಸು ಅಂಥ ಹಠ ಹಿಡಿತೀನಿ. ನೋಡಿದವರಿಗೆ ನೀನು ನನ್ನ ಅಪ್ಪನೋ ಅಥವಾ ಮಾವನೋ ಅನ್ನೋ ಕನ್‌ಫ್ಯೂಸ್ ಹುಟ್ಟುಹಾಕ್ತೀನಿ. ನಿನ್ನ ನೋಡಿದ್ರೆ ಮಾವ ಅನ್ನೋ ಭಯ ಮೂಡಲ್ಲಪ್ಪ, ಅಪ್ಪ ಅನ್ನೋ ಪ್ರೀತಿ ಹುಟ್ಟುತ್ತೆ, ಮಮತೆ ಉಕ್ಕುತ್ತೆ, ಅಪ್ಪಾ ಸಿಕ್ಕಿದ್ದಾನೆ ಅನ್ನೋ ಗೌರವ, ಹೆಮ್ಮೆ ಮೂಡುತ್ತೆ. ಅದಕ್ಕೆ ನೋಡು ವೊನ್ನೆ ನಮ್ಮ ಡ್ರೈವರ್ ಮಾಮ, ನಾನು ನಿನ್ ಮಗಳೋ ಅಥವಾ ಸೊಸೆನೋ ಅಂಥ ಪ್ರಶ್ನೆ ಮಾಡಿದ್ರು. ನೀನು ತಂದುಕೊಡುವ ಚಾಕಲೇಟು, ಸೀರೆಗಳು, ಚೂಡಿದಾರ್ ಬಟ್ಟೆಗಳು, ಪ್ರತಿ ಶುಕ್ರವಾರ ತಂದುಕೊಡುವ ಎರಡು ವೊಳ ಮಲ್ಲಿಗೆ, ನನಗೆ ಸಣ್ಣ-ಪುಟ್ಟ ಜ್ವರ
ಬಂದ್ರೂ ನೀನು ಮಾಡಿಕೊಡುವ ಬಿಸಿ ಬಿಸಿ ಕಾಫಿ, ಆ ಹಳ್ಳಿ ಮದ್ದು ಯಾವ ಮಾವ ಮಾಡಿಕೊಡುತ್ತಾನೆ ಹೇಳು? ಅದಕ್ಕೆ ಮಾವನಂದ್ರೆ ನನಗೆ ಅಪ್ಪ.

ಜೀವನ ಅಂದ್ರೆ ಹೀಗೇ ಅಪ್ಪಾ...ಎಲ್ಲೋ ಮಿಸ್ ಆಗಿದ್ದು ಮತ್ತೆಲ್ಲೋ ಸಿಗುತ್ತೆ. ಸಣ್ಣವಳಿರುವಾಗ ನನ್ನಪ್ಪನ ಮಿಸ್ ಮಾಡ್ಕೊಂಡೆ. ಆವಾಗ ಅತ್ತು ಕರೆದರೂ ಆ ದೇವ್ರು ಅಪ್ಪನ ಕೊಡಲೇ ಇಲ್ಲ. ಈಗ ನೀನು ಸಿಕ್ಕಿದ್ದಿ, ಸಾಕು...ಎನಗೆ. ಇನ್ನೇನು ಬೇಕು ನೆಮ್ಮದಿಯ ಸಂಸಾರಕ್ಕೆ, ಭರವಸೆಯ ನಾಳೆಗಳಿಗೆ?

ಪ್ರಕಟ: http://hosadigantha.in/epaper.php?date=08-26-2010&name=08-26-2010-15

Monday, August 23, 2010

ಅಮ್ಮನಾದ ಅಣ್ಣನಿಗೆ...

ಅಂದು ನೀನು ಅತ್ತಿದ್ದೆ, ನನ್ನ ದೊಡ್ಡ ಬ್ಯಾಗನ್ನು ಎತ್ತಿ ಆ ಕೆಂಪು ಬಣ್ಣದ ಕಾರಿಗೆ ಹಾಕುವಾಗ ನೀನು ಮುಸಿ ಮುಸಿ ಅಳುತ್ತಿದ್ದುದನ್ನು ಕಂಡು ಒಂದು ಕ್ಷಣ ಅಚ್ಚರಿ. ಪ್ರತಿದಿನ ನೀನು ಅಳುಮುಂಜಿ ಎಂದು ರೇಗಿಸುತ್ತಾ, ನಿನ್ನಿಂದ ಬೈಗುಳ ತಿನ್ನುತ್ತಾ ಇದ್ದವಳಿಗೆ ಅಂದು ನೀನು ಅಳೋದು ನಿಜಕ್ಕೂ ವಿಸ್ಮಯ ಅನಿಸಿಬಿಡ್ತು. ಪ್ರೀತಿ ಅಂದ್ರೆ ಅದೇ ತಾನೇ? ನಿನ್ನ ಬಗ್ಗೆ ಯೋಚಿಸಿದಾಗಲೆಲ್ಲಾ ನನಗನಿಸುವುದು ಬಹುಶಃ ನನ್ನ ನೀನು ಪ್ರೀತಿ ಮಾಡಿದಷ್ಟೂ ಬೇರ್‍ಯಾವ ಅಣ್ಣಂದಿರೂ ಪ್ರೀತಿ ಮಾಡೊಲ್ಲ ಅಂತ! ಇದು ನನ್ನ ಹೆಮ್ಮೆ. ನಿನ್ನ ಮೇಲಿನ ಅತೀವ ಪ್ರೀತಿ, ವಿಶ್ವಾಸ.

ನಿನ್ನನ್ನು ಅಣ್ಣಾ ಅಂತ ಕೂಗೋದೇ ಒಂದು ಸಂಭ್ರಮ ಕಣೋ. ಅಂದು ನಾನು ಮದುವೆಯಾಗುತ್ತಿದ್ದೇನೆ ಅಂದಾಗ ಎಲ್ಲರಿಗಿಂತ ಖುಷಿ ಪಟ್ಟವನು ನೀನೇ ಅನಿಸುತ್ತೆ. ಹೋದಲೆಲ್ಲಾ ಸಿಕ್ಕ ಸಿಕ್ಕ ‘ಕಲ್ಲುದೇವರು’ಗಳ ಎದುರು ಮೂಕವಾಗಿ ನಿಂತು ನನ್ನ ತಂಗಿಗೆ ಮದುವೆಯಾಗಲಿ ಎಂದು ಬೇಡಿಕೊಳ್ಳುತ್ತಿದೆಯಲ್ಲಾ ಬಹುಶಃ ಅದರ ಫಲವೇ ಇರಬೇಕು ಅಂದುಕೊಂಡು ಮತ್ತೆ ಅದೇ ದೇಗುಲಗಳ ಮುಂದೆ ನಿಂತು ಹಣ್ಣು ಕಾಯಿ ಮಾಡಿಸಿದವನು ನೀನೇ! ನನ್ನಣ್ಣ ಎಂದು ನಿನ್ನ ನೂರು ಬಾರಿ ಕೂಗಿದರೂ ಯಾವತ್ತೂ ನೀನು ನನ್ನ ಎತ್ತಿ ಆಡಿಸಲಿಲ್ಲ, ಮುದ್ದು ಮಾಡಲಿಲ್ಲ, ಹೆಗಲ ಮೇಲೆ ಕುಳ್ಳಿರಿಸಿ ಪೇಟೆ ಸುತ್ತಾಡಿಸಿಲ್ಲ. ಆದರೂ ನಿನ್ನೊಳಗೇ ನನಗಾಗಿ ಕಾದಿಟ್ಟಿರುವ ಆ ಅನನ್ಯ ಪ್ರೀತೀನಾ ಕ್ಷಣ ಕ್ಷಣವೂ ಧಾರೆ ಎರೆಯುತ್ತಾ ಬಂದೆ.

ಅಂದು ನನ್ನ ನೀನು ಅತ್ತೆ ಮನೆಗೆ ಕಳುಹಿಸಿಕೊಡುವಾಗ ನನ್ನ ತಬ್ಬಿಕೊಂಡು ಅದೆಷ್ಟು ಅತ್ತುಬಿಟ್ಟಿಯಲ್ಲಾ. ಅಲ್ಲಿಯವರೆಗೆ ನಿನ್ನ ಕಣ್ಣಿಂದ ಒಂದು ಹನಿ ಬಿಂದು ಜಾರಿದ್ದನ್ನೂ ನಾ ನೋಡಿರಲಿಲ್ಲ. ಇಂದಿಗೂ ಆ ಮುಖ ಕಣ್ಣೆದುರು ತೇಲಿಬಂದರೆ ನಾನೂ ಕಣ್ಣೀರಾಗುತ್ತೇನೆ. ಸಮಾಜ, ಬದುಕಿನ ಪ್ರಶ್ನೆ ಬಂದಾಗ ಅಲ್ಲೆಲ್ಲಾ ನಿನ್ನ ಕಾಳಜಿಯ ಚೌಕಟ್ಟು ಹಾಕಿದ್ದೆ. ನನ್ನೊಳಗಿರುವ ಪ್ರತಿಭೆಗಳನ್ನು ಹೆಕ್ಕಿ ತೆಗೆದು ನನ್ನೆದುರಿಟ್ಟೆ. ಒಡಹುಟ್ಟಿಲ್ಲಾಂದ್ರೂ ಒಡನಾಡಿಯಾಗಿದ್ದೆ. ಬಹುಶಃ ನನ್ನ ಬಾಯಿಂದ ಅಣ್ಣಾ...ಎಂಬ ಶಬ್ಧ ಬಂದರೆ ಅದು ನಿನ್ನ ಕಿವಿಗೇ ಬೀಳುತ್ತೆ, ಏಕೆಂದರೆ ನೀನೋರ್ವನೇ ಆ ಅಣ್ಣ! ಅಮ್ಮನ ನೆನಪಾದಗೆಲ್ಲಾ ನೀನೇ ಅಮ್ಮ ಅಂದಿದ್ದೀನಿ, ಮೌನವಾಗಿ ನಿನ್ನೆದುರು ಮೂಕಳಂತೆ ಅತ್ತಿದ್ದೀನಿ. ಎಲ್ಲವನ್ನೂ ನಿನ್ನೆದುರು ಹರವಿ ಮನಸ್ಸು ಹಗುರವಾಗಿಸಿಕೊಂಡಿದ್ದೀನಿ. ಎಲ್ಲೋ ಕಳೆದುಹೋದ ಕನಸು, ಪ್ರೀತಿ, ದೂರದಲ್ಲೆಲ್ಲೋ ಬಿಟ್ಟು ಬಂದ ಅಮ್ಮ, ಆ ನನ್ನ ಪುಟ್ಟ ಮನೆ...ಹೀಗೆ ಎಲ್ಲಾ ಕಡೆ ‘ಮಿಸ್’ ಆದದ್ದನ್ನೆಲ್ಲಾ ಒಮ್ಮೆಲೇ ನನ್ನೆದುರು ತಂದಿಟ್ಟವನು ನೀನೇ.
೨೪ ರಕ್ಷಾ ಬಂಧನ. ಅದಕ್ಕೆ ನಿನಗೆ ಶುಭಾಶಯ ಹೇಳೋಣ ಅಂಥ ಪತ್ರ ಬರೆದಿದ್ದೀನಿ. ಬೊಗಸೆ ತುಂಬಾ ಪ್ರೀತೀನ ನಿನಗಾಗಿ ಇಟ್ಟಿದ್ದೀನಿ. ಪತ್ರನ ಜೋಪಾನವಾಗಿ ನಿನ್ನ ಬೀರುವಿನಲ್ಲಿ ಭದ್ರವಾಗಿಟ್ಟುಕೋ. ಶುಭಾಶಯಗಳು...
ಮತ್ತದೇ ನಿನ್ನ ಮಡಿಲಾಸೆ...
ಇಂತೀ
ನಿನ್ನ ತಂಗಿ

(ಪ್ರಕಟ: http://hosadigantha.in/epaper.php?date=08-19-2010&name=08-19-2010-15)

Wednesday, August 18, 2010

ಸಾವಿನ ಮನೆಯ ‘ನಗು’


ನಮ್ಮನ್ನು ಹೊತ್ತ ವಾಹನ ಮುಂದೆ ಸಾಗುತ್ತಿದ್ದರೆ, ಹಿಂದಿನಿಂದ ವೇಗವಾಗಿ
ಬರುವ ವಾಹನಗಳಿಗೆ ನಮ್ಮನ್ನು ಹಿಂದಿಕ್ಕಿ ಹೋಗುವ ತವಕ. ಪ್ರತಿಯೊಬ್ಬರಿಗೂ ತಮ್ಮ ಗುರಿಯನ್ನು ಮುಟ್ಟುವ ಹಂಬಲ. ಅದಕ್ಕಾಗೇ ಪೈಪೋಟಿ. ಮನಸ್ಸು ಹಿಂದಕ್ಕೆ ಹೊರಳಿತ್ತು.

ಅಂದು ಆ ಜೀವ ತನ್ನ ಪಾಡಿಗೆ ತಾನು ಮಲಗಿತ್ತು, ನಿಶ್ಯಬ್ದವಾಗಿ! ಈ ಲೋಕದ ಪರಿವೇ ಅದಕ್ಕಿಲ್ಲ. ಅದರೆದುರು ನಿಂತು ಅಳುವವರ ಪರಿಚಯ ಅದಕ್ಕಿಲ್ಲ. ಗೋಳಾಡುವವರು ಅವರ ಪಾಡಿಗೆ ಗೋಳಾಡುತ್ತಿದ್ದರು. ಆ ಇಳಿವಯಸ್ಸಿನಲ್ಲಿ ಲೋಕದ ಪರಿವೆಗೆ ‘ಶವ’ವಾಗಿದ್ದ ಆಕೆ,
ಬದುಕಿನ ‘ಪ್ರತಿಬಿಂಬ’ದಂತೆ ಕಾಣುತ್ತಿದ್ದಳು. ಒಂದು ಕಾಲದಲ್ಲಿ ಚಿಗರೆಯಂತೆ ಓಡಾಡಿದ್ದ ಆ ಜೀವ, ಅಂದು ಕೃಶವಾಗಿತ್ತು. ವಯಸ್ಸು ಸೌಂದರ್ಯವನ್ನು ಉಳಿಸಿಕೊಳ್ಳಲಿಲ್ಲ. ಕಣ್ಣುಗಳೂ ಮಸುಕಾಗಿದ್ದವು.

ಸಾವಿನಂಚಿನಲ್ಲಿರುವ ಆ ಮುಖಗಳೂ ಅವಳೆದುರು ನಿಂತು ಅತ್ತವು. ಅವರ ಕಂಗಳಲ್ಲೂ ನಾಳಿನ
ಬದುಕಿನ ಭಯವಿತ್ತು! ಇನ್ನೊಬ್ಬರ ‘ಸಾವ’ನ್ನು ನೋಡುತ್ತಲೇ ನಾಳೆ ಎದುರಾಗುವ ನಮ್ಮ ‘ಸಾವಿನ’ ಕುರಿತು ಚಿಂತಿಸುವುದು ಅದೆಷ್ಟು ಕ್ರೂರ? ಇಷ್ಟೆಲ್ಲಾ ಆದರೂ ದೂರದಲ್ಲಿ ನಿಂತು ನಗುತ್ತಿದ್ದ ಮಗುವಿಗೆ ಅದಾವುದರ ಪರಿವೇ ಇರಲಿಲ್ಲ.

ಆ ಮಗು ಮನೆಯೆದುರು ತೂಗು ಹಾಕಿದ್ದ ತೂಗುದೀಪ ಬೇಕೆಂದು ಹಠ ಹಿಡಿಯುತ್ತಿತ್ತು. ತಣ್ಣನೆ ಮಲಗಿದ್ದ ‘ಅನಾಥ ಜೀವ’ವನ್ನು ನೋಡಿ ನಗುತ್ತಿತ್ತು. ಅಮ್ಮನೊಂದಿಗೆ ಹಾಲು ಕುಡಿಬೇಕೆಂದು ರಚ್ಚೆ ಹಿಡಿಯುತ್ತಿತ್ತು. ತನ್ನ ಲೋಕದಲ್ಲೇ ಹಲವು ವಿಸ್ಮಯಗಳಿಗೆ ಮುನ್ನುಡಿಯಾಗುತ್ತಿತ್ತು.
ಬದುಕಿನ ದಾರಿಯಲ್ಲಿ ನಾಳೆ
ಬರುವ ‘ಸಾವಿನ’ ಸುಳಿವು ಅದಕ್ಕಿರಲಿಲ್ಲ. ಆ ಮುಗ್ಧ ನಗೆಗೆ ಸಾವಿನ ಮನೆಯಲ್ಲೂ ಪುಟ್ಟದೊಂದು ಭರವಸೆ ಮೂಡಿಸುವ ಪ್ರಯತ್ನ.
ಬದುಕು ಅಂದ್ರೆ ಇದೇನಾ?...ಮನವೆಂಬ ಶರಧಿಯಲ್ಲಿ ನೂರಾರು ಪ್ರಶ್ನೆಗಳ ಅಲೆ ಅಲೆಗಳು!
(ಪ್ರಕಟ: http://hosadigantha.in/epaper.php?date=08-12-2010&name=08-12-2010-15

Sunday, August 8, 2010

ಇದು ಅಮ್ಮನಾಗುವ ಖುಷಿ.



ನಾನು ಅಮ್ಮನಾಗುತ್ತಿದ್ದೇನೆ ಕಣೇ, ಎಷ್ಟು ಖುಷಿಯಾಗುತ್ತಿದೆ ಗೊತ್ತಾ? ಎಂದು ಆಕೆ ಕಂಗಳಲ್ಲಿ ಖುಷಿಯ ನೀರು ತುಂಬಿಕೊಂಡು ಹೇಳುತ್ತಿದ್ದರೆ ನಾನು ಒಂದು ಕ್ಷಣ ಗೊಂದಲಕ್ಕೀಡಾಗಿದ್ದೆ. ಒಂದು ವರ್ಷದ ಹಿಂದೆ ಆಕೆಯ ಮದುವೆಯಾಗಿತ್ತು. ಮದುವೆಗೆ ವೊದಲು ನಿತ್ಯ ನನ್ನ ಒಡನಾಡಿಯಾಗಿದ್ದ ನನ್ನ ಗೆಳತಿ, ಆವಾಗಲೆಲ್ಲಾ ಮದುವೆ, ಮಕ್ಕಳು, ಸಂಸಾರ ಎಂದರೆ ಅಯ್ಯೋ ಅದ್ರ ಸಹವಾಸವೇ ಬೇಡಪ್ಪಾ ಅನ್ನುತ್ತಿದ್ದಳು. ಆದರೆ, ಮದುವೆಯ ವೊದಲಿನ ಗೆಳತಿಗೂ, ಈಗಿನ ಗೆಳತಿಗೂ ಅಜಗಜಾಂತರ ವ್ಯತ್ಯಾಸ.

‘ನನ್ನ ಹೊಟ್ಟೆಯಲ್ಲಿ ನನ್ನದೇ ಮಗು’ ಎಂದಾಗ ಎಷ್ಟು ಖುಷಿಯಾಗುತ್ತೆ? ಪುಟ್ಟ ಪುಟ್ಟ ಕೈಗಳು, ಕಾಲುಗಳು, ಹಾಲುಗಲ್ಲ, ಕಂದನ ಅಳು, ಸುಮ್ಮ ಸುಮ್ಮನೆ ನಗುವುದು...ಎಲ್ಲವನ್ನು ನೆನೆಸಿಕೊಂಡು ಹೆಮ್ಮೆಪಡುತ್ತಿದ್ದೀನಿ ಕಣೇ. ನನ್ನ ಹೊಟ್ಟೆಯಲ್ಲಿ ಮಗು ಕೈ-ಕಾಲು ಅಲ್ಲಾಡಿಸಿದಂತೆ ಅನಿಸಿದಾಗ ನನಗಂತೂ ದಿನಾ ಕಂಗಳು ತುಂಬಿಕೊಳ್ಳುತ್ತೆ. ಆ ಪಾಪುನ ಬೇಗ ನೋಡ್ಬೇಕು, ಅದನ್ನು ಮುದ್ದು ಮಾಡುತ್ತಾ ಅದಕ್ಕೆ ಹಾಲುಣಿಸಬೇಕು, ತುತ್ತು ಬಾಯಿಗಿಡಬೇಕು ಅನಿಸುತ್ತೆ....” ಹೀಗೆ ಅವಳು ಹೇಳುತ್ತಲೇ ಇದ್ದಳು.

ಅವಳಿಗಿನ್ನೂ ನಾಲ್ಕು ತುಂಬಿ ಐದರ ಹೊಸ್ತಿಲು...
ಮನದೊಳಗೆ ಅಚ್ಚರಿ. ಒಂದು ಕ್ಷಣ ನೆನಪಾಯಿತು, ಯಾರೋ ಹೇಳಿದ ಮಾತು; ತಾಯ್ತನದ ಸುಖ ಅನುಭವಿಸಿದವರಿಗೇ ಗೊತ್ತು .

ಹೌದು, ನನ್ನನ್ನು ಒಂಬತ್ತು ತಿಂಗಳು ಹೊಟ್ಟೆಯೊಳಗೆ ಹೊತ್ತ ಅಮ್ಮನೂ ಹೀಗೆ ಖುಷಿಪಟ್ಟಿರಬೇಕು ಅಲ್ವಾ? ಅಮ್ಮ ಹೇಳುತ್ತಿದ್ದಳು: “ನೀನು ಹುಟ್ಟಿದ್ದು ನಮ್ಮೂರ ಹೊಳೆ
ಬದಿಯ ದಾರಿ ಮಧ್ಯೆಯಲ್ಲಿ. ನೀನು ಹುಟ್ಟುವಾಗ ಏನೂ ಕಷ್ಟವಿರಲಿಲ್ಲ” ಅಂತ.
ನನ್ನ ಕೇಕೆ, ನಗು, ಅಳು, ಕಿರುಚಾಟ, ರಚ್ಚೆ ಹಿಡಿಯುವಿಕೆ...ಎಲ್ಲವನ್ನೂ ಅಮ್ಮ ಪ್ರೀತಿಸಿದ್ದಾಳೆ. ಅತ್ತಾಗ ಹೊಡೆಯದೆ ಹಾಗೇ ಮುದ್ದು ಮಾಡಿ ಲಾಲಿ ಹಾಡಿದ್ದಾಳೆ.

ಗೆಳತಿ ಅಮ್ಮನಾಗುವ ಸುದ್ದಿ ಕೇಳುತ್ತಲೇ ಯೋಚನಾಲಹರಿಗಳು ಎತ್ತೆತ್ತಲೋ ಹೊರಟವು.
ಅಬ್ಬಾ!
ಬದುಕೇ ವಿಚಿತ್ರಪ್ಪಾ...ಅಮ್ಮನಾದಾಗ ಹೆಣ್ಣೊಬ್ಬಳು ಇಷ್ಟೊಂದು ಖುಷಿ ಪಡುವುದು ಕೂಡ ಸೃಷ್ಟಿಕರ್ತನ ಲೀಲೆಯೇ? ಅದ್ಯಾಕೆ ಹೆಣ್ಣೇ ಅಷ್ಟೊಂದು ಖುಷಿಪಡುತ್ತಾಳೆ? ಆ ಮಗುವಿಗೆ ಜನ್ಮ ನೀಡಿದ ಅಪ್ಪನ ಮುಖದಲ್ಲಿ ‘ಅಮ್ಮನ ಮುಖದ ಸಂತೋಷ’ ಕಾಣಲು ಸಾಧ್ಯವೇ?
ಅಮ್ಮನೆಂದರೆ ಹಾಗೇ...ಎಲ್ಲಾ ಅಮ್ಮನೂ ಹಾಗೇ...ತನ್ನದೇ ಮಗುವಿನ ಹುಟ್ಟಿನಲ್ಲಿ ಆಕೆ ಮರುಹುಟ್ಟು ಪಡೆಯುತ್ತಾಳೆ...ಹೊಸ ಜಗತ್ತಿಗೆ ತೆರೆದುಕೊಳ್ಳುತ್ತಾಳೆ.
ಇದು ಅಮ್ಮನಾಗುವ ಖುಷಿ...

Thursday, July 29, 2010

ಅಮ್ಮನಾಗುವ ಅತ್ತೆ...


ಅಂದು ಅತ್ತೆ ‘ನೀನು ಮನೆಗೆ ಭಾಗ್ಯಲಕ್ಷ್ಮಿ ಕಣಮ್ಮಾ, ಬಲಗಾಲಿಟ್ಟು ಒಳಗೆ ಬಾ’ ಎಂದು ಕರೆದು ಮನೆ ತುಂಬಿಸಿಕೊಂಡಾಗ ನಿಜಕ್ಕೂ ಹೌದಾ? ನನ್ನ ಅತ್ತೆ ನನ್ನ ಚೆನ್ನಾಗಿ ನೋಡ್ಕೋತಾರಾ? ಅತ್ತೆ-ಸೊಸೆ ಎಂದರೆ ಹಾವು-ಮುಂಗುಸಿಯಂತೆ ಎಂದು ಯಾರ್‍ಯಾರೋ ಹೇಳಿದ ಮಾತು ನೆನೆಪಾಗುತ್ತಿತ್ತು. ನನ್ನ ಒಳಮನಸ್ಸು ‘ನೀನೀಗ ಸೊಸೆ’ ಎಂದು ಸಾರಿ ಸಾರಿ ಹೇಳುತ್ತಿತ್ತು. ಬದುಕಿನ ಒಂದು ಘಟ್ಟದಿಂದ ಮತ್ತೊಂದು ಘಟ್ಟಕ್ಕೆ ಕಾಲಿಟ್ಟಾಗ ಆತಂಕ, ಖುಷಿ ಎಲ್ಲವೂ ಧುತ್ತೆಂದು ಮನದೊಳಗೆ ಮನೆಮಾಡಿತ್ತು.

ಹೌದು, ಮದುವೆಯಾಗಿ ಆಗಿನ್ನೂ ಒಂದು ವಾರ ಪೂರ್ತಿಯಾಗಿರಲಿಲ್ಲ. ಅತ್ತೆ ಮನೆಯಿನ್ನೂ ಹೊಸತು. ಇನ್ನೂ ಗಂಡನ ಮುಖ ಬಿಟ್ಟರೆ ಬೇರೆನೂ ಪರಿಚಯವಿಲ್ಲ. ಅಡುಗೆ ಮನೆಯಲ್ಲಿ ‘ಅತ್ತೆಯೇ ವಿಜ್ಞಾನಿ’. ಆ ವಿಜ್ಞಾನವನ್ನು ನಾನಿನ್ನೂ ಕರಗತಮಾಡಿಕೊಳ್ಳಬೇಕು. ಪುಟ್ಟ ಮಗುವಿನಂತೆ ಎಲ್ಲವನ್ನೂ ಗಂಡನೇ ಹೇಳಬೇಕು. ಅಂದು ನಾಳೆ ಶುಕ್ರವಾರ ಕಣಮ್ಮಾ, ಲಕ್ಷ್ಮಿ ಪೂಜೆ ಮಾಡಬೇಕು. ಬೇಗ ಎದ್ದುಬಿಡು ಎಂದು ರಾತ್ರಿಯೇ ಅತ್ತೆ ನೆನಪಿಸಿದಾಗ, ‘ನೆನೆಸಿಕೊಂಡಲ್ಲಿ ದೇವರಿದ್ದಾನೆ’ ಎಂದು ನಂಬಿಕೊಂಡಿದ್ದ ನನಗೆ ಅವರ ಎಚ್ಚರಿಕೆಯನ್ನೂ ಮೀರಲಾಗಲಿಲ್ಲ. ‘ಏಳ್ತೀನಮ್ಮ’ ಎಂದು ನಗುಮುಖದಿಂದಲೇ ಒಪ್ಪಿಕೊಂಡಾಗ ಖುಷಿಯಿಂದ ಅತ್ತೆ ‘ಜಾಣೆ’ ಎಂದು ಬೆನ್ನುತಟ್ಟಿದ್ದರು.

ಮರುದಿನ ಬೆಳಿಗ್ಗೆ ಬೇಗನೇ ಎದ್ದು ಸ್ನಾನ ಮಾಡಿ, ಸೀರೆಯುಟ್ಟು, ಕೈ ತುಂಬಾ ಬಳೆ, ಮುಡಿತುಂಬಾ ಹೂವು ಮುಡಿದು ಅತ್ತೆ ಹೇಳಿದಂತೆ ಲಕ್ಷ್ಮಿಯನ್ನು ಪೂಜಿಸಿದ್ದೆ. ನನಗೆ ಶ್ಲೋಕಗಳು ಗೊತ್ತಿಲ್ಲದಿದ್ದರೂ ಪಟಪಟನೆ ಶ್ಲೋಕಗಳನ್ನು ಬಾಯಿಪಾಠ ಮಾಡಿಕೊಂಡು ಹೇಳಿಕೊಡುತ್ತಿದ್ದ ಅತ್ತೆಯ ಪ್ರತಿಭೆಗೆ ನಾನೇ ಬೆರಗಾಗಿದ್ದೆ. ಬಹುಶಃ ಎಲ್ಲಾ ಅತ್ತೆಯರು ಹೀಗೇನೋ ಎಂದು ಮನಸ್ಸು ಕೇಳುತ್ತಿತ್ತು. ಹೊಸ ಬದುಕಿನಲ್ಲಿ ಹೊಸತರ ಬೆರಗು ನನ್ನೊಳಗೆ ಮನೆಮಾಡಿತ್ತು. ಆದ್ರೂ ಅತ್ತೆ-ಸೊಸೆಯರನ್ನು ಯಾಕೆ ಪರಸ್ಪರ ಶತ್ರುಗಳಂತೆ ಕಾಣ್ತಾರೆ? ಸಮಾಜವೇ ಹಾಕಿಕೊಟ್ಟ ಚೌಕಟ್ಟು ಇದಲ್ವಾ? ಸುಮ್ಮ ಸುಮ್ಮನೆ ಹೆಣ್ಣಿಗೆ ಹೆಣ್ಣೇ ಮರುಗುವ ‘ಹೆಣ್ಣು ಬದುಕು’ ಇದೆಯಾದರೂ ಪರಸ್ಪರ ಎತ್ತಿಕಟ್ಟುವ ಪರಂಪರೆಯನ್ನು ಸಮಾಜವೇ ಬೆಳೆಸಿದ್ದಲ್ವಾ? ಎಂದನಿಸುತ್ತಿತ್ತು.

ಅಂದು ಯುಗಾದಿ ಹಬ್ಬದಂದು ನನ್ನತ್ತೆ ನನಗೆ ಗುಲಾಬಿ ಬಣ್ಣದ ಹೊಸ ಚೂಡಿದಾರ್ ತಂದಾಗ ನಾನೆಷ್ಟು ಖುಷಿಪಟ್ಟಿದ್ದೆ? ಹೊಸ ಚೂಡಿಧಾರ್ ಧರಿಸಿ ಅತ್ತೆ ಕಾಲಿಗೆ ನಮಸ್ಕರಿಸಿ ಅಫಿಸಿಗೆ ಹೊರಟಾಗ ನನ್ನ ಹಣೆಗೆ ಕುಂಕುಮವಿಟ್ಟು ತಬ್ಬಿ ಮುತ್ತಿಟ್ಟ ಅತ್ತೆಯನ್ನು ಕಂಡಾಗ, ಅಮ್ಮ-ಅತ್ತೆನ ಅದೇಕೆ ಸಮಾಜ ಅಷ್ಟೊಂದು ಅಂತರದಲ್ಲಿ ಕಾಣುತ್ತೆ ಎಂದನಿಸಿತ್ತು. ಹೌದು, ಅತ್ತೆನೂ ಅಮ್ಮ ಆಗ್ತಾಳೆ, ಏಕಂದ್ರೆ ಅವಳು ಅಮ್ಮನಾಗಿದ್ದವಳು!

(ಹೊಸದಿಗಂತದಲ್ಲಿ ನಾನು ಬರೆಯುವ ಭಾವಬಿಂದು ಅಂಕಣದಲ್ಲಿ ಪ್ರಕಟ:
http://hosadigantha.in/epaper.php?date=07-29-2010&name=07-29-2010-15)

Friday, July 2, 2010

ಕಲೆ ವಿಲಾಸಕ್ಕಲ್ಲ, ವಿಕಾಸಕ್ಕಾಗಿ...

ಆತ ಕಲೆಗಾರ.
ತನ್ನ ಪುಟ್ಟ ಸ್ಟುಡಿಯೋದಲ್ಲಿ ಕುಳಿತ ಆತನಿಗೆ ಆತನದೇ ಲೋಕ. ಆ ಬಣ್ಣದ ಪೆನ್ನುಗಳು, ಒಂದಷ್ಟು
ಬ್ರಶ್‌ಗಳು, ಹಾಳೆಗಳು, ತಂತಿಗಳು, ಮರಳಿನ ಹುಡಿ...ಈ ಎಲ್ಲವುಗಳ ನಡುವೆ ಕುಳಿತ ಆತ ಕಲೆಗಾರ. ಮಾತೆತ್ತಿದ್ದರೆ 'ಕಲೆ ವಿಲಾಸಕ್ಕಲ್ಲ, ವಿಕಾಸಕ್ಕಾಗಿ' ಟಾಲ್‌ಸ್ಟಾಯ್ ಹೇಳಿರುವ ಮುತ್ತಿನ ಮಾತುಗಳು ಅವರ ಬಾಯಿಂದ ಉದುರುತ್ತವೆ. ಜೊತೆಗೆ 'ಕಲೆ ಹೃದಯದ ಭಾಷೆ. ಅದಿರುವುದು ಮನುಷ್ಯನನ್ನು ಶುದ್ಧಮಾಡುವುದಕ್ಕಾಗಿ. ತಮ್ಮ ಅನುಭವ, ಭಾವಗಳನ್ನು ಚಿತ್ರದ ಮೂಲಕ ವ್ಯಕ್ತಿಪಡಿಸಬೇಕು. ಆಗ ಅಲ್ಲಿ ತಮ್ಮತನ ಅಭಿವ್ಯಕ್ತಿಗೊಳ್ಳುತ್ತೆ'' ಎಂದು ಕಲೆಗೆ ತಮ್ಮದೇ ವ್ಯಾಖ್ಯಾನ ನೀಡುತ್ತಾರೆ.

ಇವರೇ ರಾಘವೇಂದ್ರ ಹೆಗಡೆ.
ಹುಟ್ಟಿದ್ದು ಶಿರಸಿಯ ಕೃಷಿ ಕುಟುಂಬವೊಂದರಲ್ಲಿ. ಗಜಾನನ ಹೆಗಡೆ ಮತ್ತು ಯಮುನಾ ಹೆಗಡೆ ಇವರ ಅಪ್ಪ-ಅಮ್ಮ. ಬಾಲ್ಯದಲ್ಲಿ ಕಲೆ ಏನೆಂದು ಗೊತ್ತಿಲ್ಲದಿದ್ದರೂ ಸುಂದರವಾದ ಚಿತ್ರಗಳನ್ನು ಕಂಡಾಗ ಕುತೂಹಲಗೊಂಡಿದ್ದು, ಸಂಭ್ರಮದಿಂದ ಕೇಕೆ ಹಾಕಿದ್ದು ನಿಜ. ಅಂಥ ಹುಡುಗನ ಚಿತ್ರ ನೋಡಿ ರಾಷ್ಟ್ರಪತಿಯಾಗಿದ್ದ ಅಬ್ಧುಲ್ ಕಲಾಂ ಅವರೇ ಖುಷಿಪಟ್ಟಿದ್ದರು. ಅಷ್ಟೇ ಅಲ್ಲ, ಇವರು ಬಿಡಿಸಿದ ಚಿತ್ರವನ್ನು ತಾನೇ ಸ್ವತಃ ಕೊಂಡೊಯ್ದು ರಾಷ್ಟ್ರಪತಿ ಭವನದಲ್ಲಿರುವ ಮ್ಯೂಸಿಯಂನಲ್ಲಿ ಇಟ್ಟಿದ್ದಾರೆ. ಹಲವಾರು ಪ್ರಸಿದ್ಧ ಕಲಾವಿದರ ಚಿತ್ರ ಸಂಗ್ರಹದ ಜೊತೆಗೆ ಕನ್ನಡದ ಯುವಕನೊಬ್ಬನ ಚಿತ್ರ ಇಂದು ರಾಷ್ಟ್ರಪತಿ ಭವನದಲ್ಲಿದೆ ಕನ್ನಡಿಗರಿಗೂ ಹೆಮ್ಮೆ,

ಕಲ್ಲು, ಮರ, ಮಣ್ಣು, ಲೋಹ ಎಲ್ಲವೂ ಇವರ ಕೈಯಲ್ಲಿ ಕಲಾಕೃತಿಗಳಾಗುತ್ತವೆ. ಸೊಳ್ಳೆ ಪರದೆಯಂಥ ಸಣ್ಣ ತಂತಿಗಳನ್ನು ಬಳಸಿ, ಅವುಗಳಿಂದ ವೈವಿಧ್ಯಮಯ ಕಲಾಕೃತಿಗಳನ್ನು ಬಿಡಿಸುವ ಇವರ ಕಲಾಪ್ರತಿಭೆ ಅದ್ಭುತ. ರಷ್ಯಾ ಮತ್ತು ಇಂಗ್ಲೆಂಡ್‌ನ ಇಬ್ಬರು ಕಲಾವಿದರನ್ನು ಹೊರತುಪಡಿಸಿದರೆ ನಮ್ಮ ದೇಶದ ಕಲಾಪ್ರತಿಭೆ ಎಂದರೆ ಅದು ರಾಘವೇಂದ್ರ ಹೆಗಡೆಯವರೊಬ್ಬರೇ. ಹಾಗೇ ಮರಳ ಮೇಲೆ ಕಲಾಕೃತಿ ಬಿಡಿಸುವ ಕಲೆ ಇನ್ನೂ ಚೆನ್ನ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅಂಥ ಅಪರೂಪದ ಕಾರ್ಯಕ್ರಮ ಆಯೋಜಿಸಿದ್ದರು. ಹಾಡುಗಾರರು ಹಾಡುತ್ತಾ ಇದ್ದರೆ, ಇತ್ತ ಗಾಜಿನ ಮೇಲೆ ಹರಡಿರುವ ಮರಳ ಮೇಲೆ ತನ್ನ ಬೆರಳುಗಳಿಂದಲೇ ಹಾಡಿಗೆ ಜೀವ ತುಂಬುತ್ತಿದ್ದರು. ಈ ಕಲೆ ಇಂಗ್ಲೆಂಡ್‌ನಲ್ಲಿ ಹೊರತುಪಡಿಸಿದರೆ ಬೇರೆಲ್ಲೂ ಇಲ್ಲ. ಇದೀಗ ಇಂಥ ಅದ್ಭುತ ಕಲೆಯನ್ನು ದೇಶಕ್ಕೆ ಪರಿಚಯಿಸಿದ ಕೀರ್ತಿ ರಾಘವೇಂದ್ರ ಅವರಿಗೆ ಸಲ್ಲುತ್ತದೆ.




"ನಮ್ಮ ಕಲೆಗಳು ಯಾವುದೋ ಮಾಲ್‌ಗಳಿಗೆ, ಪ್ರದರ್ಶನಗಳಿಗೆ, ಶೋಕೇಸ್‌ಗೆ ಸೀಮಿತವಾಗಬಾರದು. ಜನರ ಮುಂದೆ ಕಲೆ ಹೋಗಬೇಕು. ಆಗ ಜನ ನಮ್ಮನ್ನು ಗುರುತಿಸುತ್ತಾರೆ. ನನ್ನ ಭಾವಾಭಿವ್ಯಕ್ತಿ ಜನಸಾಮಾನ್ಯನ ಮುಂದೆ ಹೋಗಬೇಕೆನ್ನುವುದೇ ನನ್ನಾಸೆ’ ಎನ್ನುವ ರಾಘವೇಂದ್ರ ಅವರು ಕೇವಲ ಚಿತ್ರಕಲಾವಿದರು ಮಾತ್ರವಲ್ಲ, ಅವರ ಕ್ಷೇತ್ರಗಳು ಇನ್ನೂ ವಿಶಾಲ. ಮಂದ್ರಾ, ಗಂಗಾವತರಣ, ಇಡಿಪಸ್, ಮುದ್ರಾ ರಾಕ್ಷಸ ಮುಂತಾದ ನಾಟಕಗಳಿಗೆ ಕಲಾನಿರ್ದೇಶಕನಾಗಿ ಹಾಗೂ ಮೈಸೂರು ಮಲ್ಲಿಗೆ ಸೇರಿದಂತೆ ಹಲವಾರು ನಾಟಕಗಳಲ್ಲಿ ಅಭಿನಯಿಸಿರುವ ರಾಘವೇಂದ್ರ ಅವರು, ಬೆಂಗಳೂರಿನ ಹಲವಾರು ಕಾಲೇಜುಗಳಲ್ಲಿ ಕಲೆಯ ಕುರಿತಾದ ಬೋಧನೆಗೆ 'ಅತಿಥಿ ಉಪನ್ಯಾಸಕನಾಗಿ'ಯೂ ಕಾರ್ಯನಿರ್ವಹಿಸುತ್ತಿದ್ದಾರೆ.


ಇವರ ಯಾವುದೇ ಕಲಾಕೃತಿಗಳನ್ನು ನೋಡಿದರೂ ಅಲ್ಲಿ "ದೇಸಿತನ'' ಎದ್ದು ಕಾಣುತ್ತದೆ. ಭಾರತೀಯತೆ, ನಮ್ಮ ಸಂಸ್ಕಾರ, ಸಂಸ್ಕೃತಿ...ಇಂಥ ವಿಚಾರಗಳ ಕುರಿತಾಗೇ ಮಾತಿಗಿಳಿಯುವ ರಾಘವೇಂದ್ರ, ಒಂದು ಕ್ಷಣ ಕಲಾವಿದನಾಗಿಯೂ, ಮಗದೊಂದು ಕ್ಷಣ ಚಿಂತನಕಾರನಾಗಿಯೂ ಅಚ್ಚರಿಗೊಳಿಸುತ್ತಾರೆ. ಓರ್ವ ಎಂಜಿನಿಯರ್ ಅಥವಾ ವೈದ್ಯನಾದರೆ ಅವರು ಸಂತೋಷಗೊಳಿಸದೆಯೇ ದುಡ್ಡು ಮಾಡಬಹುದು, ಆದರೆ ತಾನೂ ಸಂತೋಷಗೊಳ್ಳುತ್ತಾ, ಇತರರನ್ನೂ ಸಂತೋಷಗೊಳಿಸುವುದು ಕಲೆ ಮಾತ್ರ ಎನ್ನುವ ರಾಘವೇಂದ್ರ ಅವರು ಜನಸಾಮಾನ್ಯರೂ ಸಂಭ್ರಮಿಸುವ ಉತ್ತಮ ಕಲಾವಿದರಾಗಲಿ ಎಂದು ಹಾರೈಸೋಣ.
****
ಒಂದೆಡೆ ಹಾಡುಗಾರರು ಹಾಡುತ್ತಿದ್ದರೆ, ಇತ್ತ ಕಲಾವಿದರೊಬ್ಬರು ಹಾಡಿನ ಭಾವವನ್ನು ಮರಳಿನ ಮೇಲೆ ಚಿತ್ರಗಳಲ್ಲೇ ನಿರೂಪಿಸುತ್ತಾರೆ. ಈ ಕಲೆ ರಾಘವೇಂದ್ರ ಅವರಿಗೆ ಕರಗತ. ಈ ಮೂಲಕ ದೇಶದಲ್ಲೇ ಮೊದಲ ಬಾರಿಗೆ "ಮರಳ ಕಲೆ" ಯನ್ನು ರಾಘವೇಂದ್ರ ಪರಿಚಯಿಸಿದ್ದಾರೆ(ಬೇರೆಲ್ಲೂ ಕೇಳಿಲ್ಲ) ಇವರ ಅದ್ಭುತ ಕಲಾ ಪ್ರತಿಭೆಯನ್ನು ಕಂಡು ಅಂದು ರಾಷ್ಟ್ರಪತಿಯಾಗಿದ್ದ ಅಬ್ಧುಲ್ ಕಲಾಂ ಅವರೇ ಬೆನ್ನು ತಟ್ಟಿದ್ದಾರೆ. ಇವರು ಬಿಡಿಸಿದ ಚಿತ್ರ ಇಂದು ರಾಷ್ಟ್ರಪತಿ ಭವನದ ಮ್ಯೂಸಿಯಂನಲ್ಲಿದೆ.

ಇಲ್ಲೂ ಓದಬಹುದು: http://hosadigantha.in/epaper.php?date=07-03-2010&name=07-03-2010-15