Wednesday, August 18, 2010

ಸಾವಿನ ಮನೆಯ ‘ನಗು’


ನಮ್ಮನ್ನು ಹೊತ್ತ ವಾಹನ ಮುಂದೆ ಸಾಗುತ್ತಿದ್ದರೆ, ಹಿಂದಿನಿಂದ ವೇಗವಾಗಿ
ಬರುವ ವಾಹನಗಳಿಗೆ ನಮ್ಮನ್ನು ಹಿಂದಿಕ್ಕಿ ಹೋಗುವ ತವಕ. ಪ್ರತಿಯೊಬ್ಬರಿಗೂ ತಮ್ಮ ಗುರಿಯನ್ನು ಮುಟ್ಟುವ ಹಂಬಲ. ಅದಕ್ಕಾಗೇ ಪೈಪೋಟಿ. ಮನಸ್ಸು ಹಿಂದಕ್ಕೆ ಹೊರಳಿತ್ತು.

ಅಂದು ಆ ಜೀವ ತನ್ನ ಪಾಡಿಗೆ ತಾನು ಮಲಗಿತ್ತು, ನಿಶ್ಯಬ್ದವಾಗಿ! ಈ ಲೋಕದ ಪರಿವೇ ಅದಕ್ಕಿಲ್ಲ. ಅದರೆದುರು ನಿಂತು ಅಳುವವರ ಪರಿಚಯ ಅದಕ್ಕಿಲ್ಲ. ಗೋಳಾಡುವವರು ಅವರ ಪಾಡಿಗೆ ಗೋಳಾಡುತ್ತಿದ್ದರು. ಆ ಇಳಿವಯಸ್ಸಿನಲ್ಲಿ ಲೋಕದ ಪರಿವೆಗೆ ‘ಶವ’ವಾಗಿದ್ದ ಆಕೆ,
ಬದುಕಿನ ‘ಪ್ರತಿಬಿಂಬ’ದಂತೆ ಕಾಣುತ್ತಿದ್ದಳು. ಒಂದು ಕಾಲದಲ್ಲಿ ಚಿಗರೆಯಂತೆ ಓಡಾಡಿದ್ದ ಆ ಜೀವ, ಅಂದು ಕೃಶವಾಗಿತ್ತು. ವಯಸ್ಸು ಸೌಂದರ್ಯವನ್ನು ಉಳಿಸಿಕೊಳ್ಳಲಿಲ್ಲ. ಕಣ್ಣುಗಳೂ ಮಸುಕಾಗಿದ್ದವು.

ಸಾವಿನಂಚಿನಲ್ಲಿರುವ ಆ ಮುಖಗಳೂ ಅವಳೆದುರು ನಿಂತು ಅತ್ತವು. ಅವರ ಕಂಗಳಲ್ಲೂ ನಾಳಿನ
ಬದುಕಿನ ಭಯವಿತ್ತು! ಇನ್ನೊಬ್ಬರ ‘ಸಾವ’ನ್ನು ನೋಡುತ್ತಲೇ ನಾಳೆ ಎದುರಾಗುವ ನಮ್ಮ ‘ಸಾವಿನ’ ಕುರಿತು ಚಿಂತಿಸುವುದು ಅದೆಷ್ಟು ಕ್ರೂರ? ಇಷ್ಟೆಲ್ಲಾ ಆದರೂ ದೂರದಲ್ಲಿ ನಿಂತು ನಗುತ್ತಿದ್ದ ಮಗುವಿಗೆ ಅದಾವುದರ ಪರಿವೇ ಇರಲಿಲ್ಲ.

ಆ ಮಗು ಮನೆಯೆದುರು ತೂಗು ಹಾಕಿದ್ದ ತೂಗುದೀಪ ಬೇಕೆಂದು ಹಠ ಹಿಡಿಯುತ್ತಿತ್ತು. ತಣ್ಣನೆ ಮಲಗಿದ್ದ ‘ಅನಾಥ ಜೀವ’ವನ್ನು ನೋಡಿ ನಗುತ್ತಿತ್ತು. ಅಮ್ಮನೊಂದಿಗೆ ಹಾಲು ಕುಡಿಬೇಕೆಂದು ರಚ್ಚೆ ಹಿಡಿಯುತ್ತಿತ್ತು. ತನ್ನ ಲೋಕದಲ್ಲೇ ಹಲವು ವಿಸ್ಮಯಗಳಿಗೆ ಮುನ್ನುಡಿಯಾಗುತ್ತಿತ್ತು.
ಬದುಕಿನ ದಾರಿಯಲ್ಲಿ ನಾಳೆ
ಬರುವ ‘ಸಾವಿನ’ ಸುಳಿವು ಅದಕ್ಕಿರಲಿಲ್ಲ. ಆ ಮುಗ್ಧ ನಗೆಗೆ ಸಾವಿನ ಮನೆಯಲ್ಲೂ ಪುಟ್ಟದೊಂದು ಭರವಸೆ ಮೂಡಿಸುವ ಪ್ರಯತ್ನ.
ಬದುಕು ಅಂದ್ರೆ ಇದೇನಾ?...ಮನವೆಂಬ ಶರಧಿಯಲ್ಲಿ ನೂರಾರು ಪ್ರಶ್ನೆಗಳ ಅಲೆ ಅಲೆಗಳು!
(ಪ್ರಕಟ: http://hosadigantha.in/epaper.php?date=08-12-2010&name=08-12-2010-15

8 comments:

ಸಾಗರದಾಚೆಯ ಇಂಚರ said...

ಧರಿತ್ರಿ

ನಿಮ್ಮ ಶೀರ್ಷಿಕೆಯೇ ಗಮನ ಸೆಳೆಯಿತು

ಅತ್ಯದ್ಭುತ ಲೇಖನ

ಮನಸ್ಸಿಗೆ ನಾಟುವ ಬರಹ

ಸೀತಾರಾಮ. ಕೆ. / SITARAM.K said...

ತುಂಬಾ ಚೆನ್ನಾಗಿ ಸಾವಿನ ಮನೆಯ ನಗುವನ್ನು ಹೇಳಿದ್ದಿರಾ!
ಲೇಖನ ಮನಸಿಗೆ ಆಪ್ತವಾಯಿತು.

Dr.D.T.Krishna Murthy. said...

ಮನ ಕಲಕುವ ಲೇಖನ.ನನ್ನ ಬ್ಲಾಗಿಗೂ ಒಮ್ಮೆ ಭೇಟಿ ಕೊಡಿ.

PARAANJAPE K.N. said...

ತಂಗೀ, ಚೆನ್ನಾಗಿದೆ.

sunaath said...

ತತ್ವಜ್ಞಾನಿಗಳನ್ನು ಸದಾಕಾಲ ಕಾಡುವ ಈ ಪ್ರಶ್ನೆಗೆ ಮಗುವಿನ ನಗುವೇ ಉತ್ತರವಾಗಿರಬಹುದೆ?

Mohan Hegade said...

ಚಿತ್ರಾಜಿ,

ಸಾವಿನ ಮನೆಯಲ್ಲೂ ನಗುವೇ !!!!!!!!!!!!!!! ಆದರು ಏನು ತಿಳಿಯದ ಮಗುವೆಂಬ ದೇವರು ನಗುತ್ತಿರಬಹುದು ಅಲ್ಲವ. ಎಂಥ ಶತ್ರುವು ಸಾವನ್ನು ಕಂಡಾಗ ಅತ್ತಾನು, ಆದರೆ ನಗು ?
ಚಿಕ್ಕ ಚೊಕ್ಕ ಸುಂದರ ಬರಹ.

ದನ್ಯರಿ,

ಮೋಹನ್ ಹೆಗಡೆ



ಮೋಹನ್ ಹೆಗಡೆ

umesh desai said...

ಧರಿತ್ರಿ ಮದ್ವೆಯಾದ ಮೇಲೆ ನಿಮ್ಮ ಲೇಖನದಲ್ಲಿ ಹೊಸ ಹೊಳಪಿದೆ ಅಭಿನಂದನೆಗಳು..

ಸುಧೇಶ್ ಶೆಟ್ಟಿ said...

ತು೦ಬಾ ಚೆನ್ನಾಗಿ ಬರೆದಿದ್ದೀರ :)