Sunday, May 31, 2009

ನಿಮ್ಮ ಭವಿಷ್ಯ ಹೇಳತೇನ್ರೀ!

ನಿನ್ನೆಯ ಕನ್ನಡಪ್ರಭ ಸಾಪ್ತಾಹಿಕ ಓದುತ್ತಿದ್ದಂತೆ ಸುರೇಶ್ ವೆಂ. ಕುಲಕರ್ಣಿ ಎಂಬುವವರು ಬರೆದ ಬೇಂದ್ರೆ ಬದುಕಿನ ಪುಟ್ಟ ಘಟನೆಯೊಂದು ಕಣ್ಣಿಗೆ ಬಿತ್ತು. ಬೇಂದ್ರೆ ಅಜ್ಜ ಅಂದ್ರೆ ನಂಗೆ ತುಂಬಾ ಇಷ್ಟ. ಬದುಕಿನ ಜೊತೆ ನೇರ ಮಾತಿಗಿಳಿಯುವ ಅವರ ಕವನಗಳು ನಂಗಿಷ್ಟ. ಬೇಂದ್ರೆ ಕುರಿತಾಗಿ ಬರೆಯುವ ಸುನಾಥ್ ಅಂಕಲ್ ಬ್ಲಾಗ್ ಸಲ್ಲಾಪ, ಗೋದಾವರಿ ಮೇಡಂ ಎಲ್ಲಾರ ಬರಹಗಳನ್ನು ಓದುತ್ತಿರುವೆ. ಇದೀಗ ಕನ್ನಡಪ್ರಭದಲ್ಲಿ ಬಂದಿರುವ ಸುರೇಶ್ ವೆಂ. ಕುಲಕರ್ಣಿ ಅವರ ಬರಹಗಳನ್ನು ತೆಗೆದು ಯಥಾವತ್ತಾಗಿ ಹಾಕೊಂಡಿರುವೆ..ಇದು ಕೃತಿಚೌರ್ಯ ಅಲ್ಲ, ಬೇಂದ್ರೆ ಕುರಿತಾದ ಇಂಥ ಘಟನೆಗಳನ್ನು ಸಂಗ್ರಹಿಸುವತ್ತ ನನ್ನ ಪುಟ್ಟ ಹೆಜ್ಜೆಯಷ್ಟೇ.

"ಬೆಳಗಿನ ಏಳು ಗಂಟೆಯಾಗಿತ್ತು. ಬೇಂದ್ರೆಯವರು ಮನೆಮುಂದಿನ ಗೇಟಿನ ಹತ್ತಿರ ಬಿಳಿಧೋತರ, ಕರೇಕೋಟು ಮ್ಯಾಲೆ ಕುಲಾಯಿಟೋಪಿ ಹಾಕಿಕೊಂಡು, ಕೋಟಿನ ಕಿಸೆಯಲ್ಲಿ ಕೈ ಇಟಕೊಂಡು, ಆ ಕಡೆ-ಈ ಕಡೆ ಶತಪಥ ಹಾಕುತ್ತಾ ಇದ್ದರು. ಅವರನ್ನು ನೋಡಿ, ಒಬ್ಬ ವ್ಯಕ್ತಿ 'ಅಜ್ಜಾರ ಒಳಗೆ ಬರಬಹುದಾ?' ಅಂತ ಕೇಳಿದ.
ಬೇಂದ್ರೆ: ಯಾಕ, ನಿನ್ನ ಹೆಸರೇನು? ಯಾವೂರು?
ಭವಿಷ್ಯಗಾರ: ನಾನು ಊರೂರು ತಿರತೇನ್ರೀ. ನಿಮ್ಮ ಭವಿಷ್ಯ ಹೇಳತೇನ್ರಿ?
ಬೇಂದ್ರೆ: ಭವಿಷ್ಯವನ್ನು ಯಾವ ಆಧಾರದ ಮೇಲೆ ಹೇಳತೀ?
ಭವಿಷ್ಯಗಾರ: ನಿಮ್ಮ ಮುಖಾ ನೋಡಿ, ಕೈನೋಡಿ, ಹಸ್ತಾಕ್ಷರ ನೋಡಿ ಭವಿಷ್ಯವನ್ನು ಹೇಳತೇನ್ರಿ. ನಿಮ್ಮ ನಕ್ಷತ್ರ ಹೇಳಿದರ ಅದರ ಮ್ಯಾಲಿಂದನೂ ನಿಮ್ಮ ಭವಿಷ್ಯವನ್ನ ಹೇಳತೇನ್ರೀ.
ಬೇಂದ್ರೆ: ನಕ್ಷತ್ರದ ಬಗ್ಗೆ ನಿನಗೆ ಛಲೋ ತಿಳೀತದೇನು?
ಭವಿಷ್ಯಗಾರ: ತಿಳಿತದ್ರೀ

ಬೇಂದ್ರೆ: ಈಗ 'ವೇಗಾ' ಅಂದರ 'ಅಭಿಜಿತ್ ನಕ್ಷತ್ರ' ಎಲ್ಲೆ ಬರತದ?

ಭವಿಷ್ಯಗಾರ: (ವಿಚಾರಿಸಿ) ಗೊತ್ತಿಲ್ಲರಿ..
ಬೇಂದ್ರೆ: ಇರಲಿ, ಈಗ ನನಗೆ ಭವಿಷ್ಯ ಕೇಳೋದೇನಿಲ್ಲ. ನಿನ್ನ ವೇಳ್ಯಾ ತೊಗೊಂಡದ್ದಕ್ಕ 'ಫೀ' ಏನು?
ಭವಿಷ್ಯಗಾರ: ನಾನು ಭವಿಷ್ಯವನ್ನು ಹೇಳದs 'ಫೀ' ತೊಗೋಳ್ಳೋದಿಲ್ಲ. ಭವಿಷ್ಯವನ್ನು ಕೇಳಿರಿ ತೊಗೋತೀನಿ.
ಬೇಂದ್ರೆ: ನನ್ನ ಭವಿಷ್ಯವನ್ನು ಕೇಳೋದಿಲ್ಲ, ನಡೀಯಿನ್ನ.
ಭವಿಷ್ಯಗಾರ: ಊರಲ್ಲಿ ಹೋಗಲಿಕ್ಕೆ ಸಿಟಿಬಸ್ಸು ಎಲ್ಲಿ ನಿಲ್ಲತಾವು?
ಬೇಂದ್ರೆಯವರು ತಮ್ಮ ಮನೆಯ ಗೇಟಿನವರೆಗೆ ಹೋಗಿ, ಬಸ್ಸು ಎಲ್ಲಿ ನಿಲ್ಲತಾವು
ಅನ್ನೋದನ್ನು ಸ್ವತಃ ತಾವೇ ಹೋಗಿ ತೋರಿಸಿದರು. ಭವಿಷ್ಯವನ್ನು ಹೇಳುವವನು ನಾಲ್ಕು ಹೆಜ್ಜೆ ಮುಂದ ಹೋಗಿದ್ದ, ಅಷ್ಟರಾಗ ಬೇಂದ್ರೆಯವರು ಅವನನ್ನು ಕರೆದು, 'ನೀ ಖರೇನ ಭವಿಷ್ಯ ಹೇಳತೀ?
ಭವಿಷ್ಯಗಾರ: ಯಾಕ್ರೀ? ಕೇಳ್ಯಾರ ನೋಡ್ರೀ, ಹಿಂದಿನದು, ಮುಂದಾಗೋದು ಎಲ್ಲಾನೂ ಹೇಳತೀನಿ.
ಬೇಂದ್ರೆ: ಇಲ್ಲಾ, ಬೆಳಿಗ್ಗೆ ಎದ್ದ ಕೂಡಲೇ, ಯಾರ ಮನಿಗೆ ಹೋದ್ರ, ಭವಿಷ್ಯ ಕೇಳತಾರ? ಯಾರು ಕೇಳೊದಿಲ್ಲ? ಅನ್ನೋದು ನಿನಗs ತಿಳೀದs ನೀನು ಬೇರೆಯವರಿಗೆ ಹ್ಯಾಂಗ ಭವಿಷ್ಯವನ್ನು ಹೇಳತೀ?
ಭವಿಷ್ಯಗಾರ ಮರುಮಾತನಾಡದೆ ಬಸ್ ಸ್ಟಾಫಿಗೆ ಬಂದ.
ಚಿತ್ರಕೃಪೆ: ಅಂತರ್ಜಾಲ

29 comments:

ಮನಸು said...

ತುಂಬಾ ಚೆನ್ನಾಗಿದೆ ಇದನ್ನ ನಾನು ನೆನ್ನೆ ಕನ್ನಡ ಪ್ರಭಾನಲ್ಲಿ ಓದಿ ಖುಷಿ ಪಟ್ಟಿದ್ದೆ ನೀವು ಅದನ್ನು ನಿಮ್ಮ ಬ್ಲಾಗ್ ನಲ್ಲಿ ಹಾಕಿದ್ದು ಬಹಳ ಸಂತೋಷವಾಯಿತು.... ಬೇಂದ್ರೆಯವರ ಮಾತು ಎಷ್ಟು ನಿಜ ಅಲ್ಲವೆ..?
ಧನ್ಯವಾದಗಳು

Anonymous said...

ನೀವು ಅಷ್ಟು ಸ್ಪಷ್ಟವಾಗಿ ಹೇಳಿದರೂ ಕೃತಿಚೌರ್ಯ ಅಂದುಕೊಳ್ತಾರಾ?
ಬೇಂದ್ರೆಯವರ ಕುರಿತು ಎನ್ಕೆಯವರು ಬರೆದ ಪುಸ್ತಕವನ್ನು ಓದಿ..

Ittigecement said...

ಧರಿತ್ರಿ...

ನಾನು ಕನ್ನಡ ಪ್ರಭ ಓದಿಲ್ಲವಾಗಿತ್ತು...

ಬೇಂದ್ರೆಯವರ ನುಡಿ ಬಹಳ ಇಷ್ಟವಾಯಿತು...

ನಮ್ಮ ನಾಡಿನ ಹಿರಿಯರ ನಡೆ ನುಡಿಗಳು
ಆದರ್ಶವಾಗಿದ್ದವು...

ಈಗ ಕೆಲವರು ಮಾತ್ರ ಸಿಗಬಹುದು...

shivu.k said...

ಧರಿತ್ರಿ,

ನಾನು ಇದನ್ನು ನಿನ್ನೆ ರಾತ್ರಿ ಓದಿದ್ದೆ. ಆಗಲೇ ನೀನು ಬ್ಲಾಗಿಗೆ ಪೋಣಿಸಿದ್ದೀಯಾ...ಇಂಥವು ಎಷ್ಟು ಸಲ ಓದಿದರೂ ಖುಷಿ ಆಗುತ್ತವೆ...ಅಲ್ವಾ...

ಹೀಗೆ ಹಳೇ ತಲೆಮಾರಿನವರ ಮಾತುಗಳನ್ನೂ ನಾನು ಯಾವಾಗಲು ಕೇಳಲು ಸಿದ್ಧ...

ಧನ್ಯವಾದಗಳು.

ಬಾಲು said...

nanu ninne kannada prabha odilla... nivu baredaddu kushi aithu.
amele ninne Vijaya karnataka dalli Masti bagge bandide, praja vaani li P lankesh bagge ondu chikka lekhana ide.

Dharithri olle try :)

ಸಾಗರದಾಚೆಯ ಇಂಚರ said...

ಧರಿತ್ರಿಯವರೇ,
ತುಂಬಾ ಇಷ್ಟವಾಯಿತು, ಹೀಗೆ ಸಂಗ್ರಹಿಸುತ್ತಿರಿ, ನಮಗೆ ಓದಿಸುತ್ತಿರಿ

Umesh Balikai said...

ಅಯ್ಯೋ ಈ ಭವಿಷ್ಯ ಹೇಳೋರಿಗೆ ತಮ್ಮ ಭವಿಷ್ಯಾನೆ ಗೊತ್ತಿರಲ್ಲ ಇನ್ನು ಬೇರೆಯವರ ಭವಿಷ್ಯ ಹೆಂಗ್ ಹೇಳ್ತಾರ್ರೀ.. ಬೇಂದ್ರೆ ಅಜ್ಜ ಭವಿಷ್ಯ ಹೇಳೋನಿಗೆ ಸರಿಯಾದ ಪ್ರಶ್ನೆ ಕೇಳ್ಯಾರ..

ಬೇಂದ್ರೆ ಅಜ್ಜನ ನೆನಪು ಕೆದಕಿದ್ದಕ್ಕೆ ಥ್ಯಾಂಕ್ಸ್ ರೀ

Guruprasad said...

ಧರಿತ್ರಿ
ತುಂಬ ಚೆನ್ನಾಗಿ ಇದೆ... ನಾನು ಓದಿರಲಿಲ್ಲ,,,,ಬೇಂದ್ರೆ ಯವರ ಮಾತು ಎಷ್ಟು ಅರ್ಥ ಪೂರ್ಣ ವಾಗಿ ಇದೆ
ಗುರು

ಶಿವಪ್ರಕಾಶ್ said...

ಎಷ್ಟು ಸತ್ಯ ಅಲ್ವಾ ?.
ಇನ್ಮೇಲೆ ನನಗೂ ಯಾರಾದ್ರೂ ಭವಿಷ್ಯ ಹೇಳ್ತೀನಿ ಅಂದ್ರೆ ಇದೆ ವಾಕ್ಯವನ್ನು ಹೇಳ್ತೀನಿ...

ಜಲನಯನ said...

ಧರಿತ್ರಿ, ನನ್ನ ಅಭಿಪ್ರಾಯ ದರಾಬೇಂದ್ರೆ ಯವರ ಸೂಚ್ಯ ಮಾತುಗಳು ಭವಿಷ್ಯ ಹೇಳುವ ಶಾಸ್ತ್ರದ ಬಗ್ಗೆ ಅಲ್ಲ...ಮೊದಲು ನಿನ್ನ ಕಾಯಕ ನೀನು ಮಾಡು..ನಿನ್ನ ಭವಿಷ್ಯ ನೀನೇ ಸ್ವಯಂ ರೂಪಿಸಲು ಪ್ರಯತ್ನಿಸು ನಂತರ ಶಾಸ್ತ್ರ..ನಂಬಿಕೆ..ಧರ್ಮ ಇತ್ಯಾದಿ ಎನ್ನುವುದು. ಇನ್ನೊಂದು ಮಾತು ಯಾವುದೇ ಶಾಸ್ತ್ರ ಪೂರ್ಣ ಸ್ವತಂತ್ರ ಅಲ್ಲ ಎನ್ನುವುದು, ಇವು ಒಂದಕ್ಕೊಂದು ಪೂರಕ..ಮೊಟ್ಟೆ ಮೊದಲೋ ತಾಯಿ ಮೊದಲೋ..ತರ್ಕಶಾಸ್ತ್ರ..ಅದಕ್ಕೆ ಪೂರಕ ಪ್ರಾಣಿಶಾಸ್ತ್ರ..ಆದ್ರೆ ಮೊಟ್ಟೆಯ ಅಂಶಗಳನ್ನು ಮೂಲೀಕರಿಸಿದರೆ..ರಾಸಾಯನ..ಅಲ್ಲಿ atoms, molecules ಗಳ ಪರಸ್ಪರ ಜಗ್ಗಾಟಕ್ಕೆ..ಉತ್ತರ ಭೌತಶಾಸ್ತ್ರ..ಆದರೆ...ಯಾವ ಮೂಲವಸ್ತು ಯಾವ ಮೂಲ ವಸ್ತುವಿಗೆ ಎಲ್ಲಿ ಮತ್ತು ಎಷ್ಟು ತೀವ್ರವಾಗಿ ಅಂಟಿಕೊಂಡಿದೆ ಇದಕ್ಕೆಲ್ಲ ಉತ್ತರ ಗಣಿತಶಾಸ್ತ್ರ ನೀಡಬಲ್ಲುದು..ಹೀಗೆ...ನಿಲ್ಲದ ಬಂಧ ಶಾಸ್ತ್ರಗಳ ಮಧ್ಯದ್ದು... ಬೇಂದ್ರೆಯವರ ಮಾತು ಸೂಚ್ಯವದರೂ ನಮ್ಮನ್ನು ಎಲ್ಲಿಂದ ಎಲ್ಲಿಗೆ ಎಳೆದೊಯ್ಯುತ್ತೆ ಅಲ್ಲವೇ..?
ಒಳ್ಳೆಯ post..

Rajesh Manjunath - ರಾಜೇಶ್ ಮಂಜುನಾಥ್ said...

ಧರಿತ್ರಿ,
ಇಲ್ಲಿ ಪ್ರಕಟಿಸಿ ಒಳ್ಳೇದೇ ಮಾಡಿದ್ರಿ, ನಾನು ಓದಿರಲಿಲ್ಲ. ಓದಿ ಖುಷಿಯಾಯ್ತು. ಬೇಂದ್ರೆ ಅಜ್ಜ ವಾಕ್ಚತುರ ಎಂಬುದರಲ್ಲಿ ಎರಡು ಮಾತಿಲ್ಲ ಅನ್ನೋದಕ್ಕೆ ಇದಕ್ಕಿಂತ ಒಳ್ಳೆಯ ನಿದರ್ಶನ ಬೇಕಿಲ್ಲ ಅಲ್ವ.

umesh desai said...

ಪ್ರಸ್ತುತ ಕುಲಕರ್ಣಿಅವರು ಬೇಂದ್ರೆ ಬಗ್ಗೆ ಬಹಳ ಚೆನ್ನಾಗಿ ಮಾತನಾಡತಾರ ಒಂದು ವರ್ಷದ ಹಿಂದ ಎಚ್ ಎನ್ ಕಲಾಕ್ಷೇತ್ರದಾಗ
ಒಂದು ಕಾರ್ಯಕ್ರಮ ಇತ್ತು. ಒಂದು ಪ್ರಸಂಗ ಹೇಳಿದ್ರು ಯಾವುದೋ ಸಮಾರಂಭ ಬೇಂದ್ರೆ ಅವರೂ ಇದ್ರು ಭಾಷಣ ಮಾಡಾವ
ಒಬ್ಬವ ಆವೇಷದಾಗ ’ಬೇಂದ್ರೆ ರವೀಂದ್ರರಿಗಿಂತಾನೂ ಮ್ಯಾಲ್’ ಅಂತ ಹೇಳಿದ್ರಂತ ಅದಕ್ಕ ಬೇಂದ್ರೆ ಉತ್ತರ "ಅದೆಂಗ ನಾ
ಇನ್ನೂ ಇಲ್ಲೇ ಇದ್ದೇನಿ ಅವರು ಆಗ್ಲೇ ಮ್ಯಾಲ್ ಹೋಗ್ಯಾರ"....!
ರವೀಂದ್ರರ ಬಗ್ಗೆ ಬೇಂದ್ರೆ ಬರೆದ ಕವಿತಾ "ದುಡಿ ದುಡಿದು ಸತ್ತಾಗ......"ಕೇಳೀರೇನು...

Vigneshwar said...

:) chennagidhe
nanu karawali theeradawanu
wholesale aagi blog chennagidhe ,keep it up...

ಬಿಸಿಲ ಹನಿ said...

ಧರಿತ್ರಿ,
ಬೇಂದ್ರೆಯವರು ಬರಿ ಶಬ್ದ ಗಾರುಡಿಗರಾಗಿರಲಿಲ್ಲ, ಮಾತಿನ ಮೋಡಿಗಾರರೂ ಆಗಿದ್ದರು.ಅವರ ಮಾತಿನಲ್ಲಿ ಯಾವಾಗಲೂ ಒಂದು ಪಂಚ್ ಇದ್ದೇ ಇರುತ್ತಿತ್ತು. ಅವರ ವಿವಿಧ ಮಾತಿನ ಪ್ರಸಂಗಗಲ ಸಂಗ್ರಹ ನನ್ನ ಹತ್ರನು ಇದೆ.

ಸುಧೇಶ್ ಶೆಟ್ಟಿ said...

ಧರಿತ್ರಿ ಅವರ್ರೆ... ಬೇ೦ದ್ರೆ ಅವರ ಧಾರವಾಡ ಕನ್ನಡದ ಸೊಬಗು ಇಷ್ಟ ಆಯಿತು...

ನಾನು ಕನ್ನಡ ಪ್ರಭ ಓದುವುದಿಲ್ಲ.. ಈ ಲೇಖನ ಹಾಕಿದ್ದಕ್ಕೆ ಥ್ಯಾ೦ಕ್ಸ್...

Ranjana Shreedhar said...

ಧರಿತ್ರಿ ಅವರೇ ನನಗೆ ಕನ್ನಡಪ್ರಭ ಓದಲಾಗಿರಲಿಲ್ಲ. ನಿಮ್ಮ ಬ್ಲಾಗ್ ನಲ್ಲಿ ಹಾಕಿದ್ದು ನೋಡಿ ತುಂಬಾ ಖುಷಿ ಆಯಿತು.

ಧನ್ಯವಾದಗಳು...

PARAANJAPE K.N. said...

ಧರಿತ್ರಿ,
ನಾನು ಕೂಡ ಕನ್ನಡಪ್ರಭ ನಿಯಮಿತವಾಗಿ ಓದುವುದಿಲ್ಲ, ಹಾಗಾಗಿ ಈ ಬರಹ ನನಗೆ ಓದಲಾಗಿರಲಿಲ್ಲ. ಒಳ್ಳೆಯ ಪ್ರಯತ್ನ, ಇ೦ತಹ ಅಣಿಮುತ್ತುಗಳನ್ನು ನಿನ್ನ ಬ್ಲಾಗಲ್ಲಿ ಪೋಣಿಸಿ ಓದಲು ಕೊಟ್ಟರೆ ಚೆನ್ನಿರುತ್ತದೆ. ಬೇ೦ದ್ರೆಯವರು ಪ್ರತ್ಯುತ್ಪನ್ನಮತಿ, ಥಟ್ಟ೦ತ ಉತ್ತರ ಕೊಟ್ಟು ಎದುರಿಗಿದ್ದವನು ಅಪ್ರತಿಭನಾಗುವ೦ತೆ ಮಾಡುವ ಕಲೆ ಅವರಲ್ಲಿತ್ತು. ಚೆನ್ನಾಗಿದೆ. ತನ್ನ ಭವಿಷ್ಯದ ಬಗ್ಗೆಯೇ ಏನನ್ನು ಅರಿಯದವರು ಉಳಿದವರ ಭವಿಷ್ಯ ಹೇಳಲು ಎಷ್ಟರ ಮಟ್ಟಿಗೆ ಶಕ್ತರು ಅಲ್ಲವೇ. ? ಚೆನ್ನಾಗಿದೆ.

PaLa said...

ಬೆಂದ್ರೆಯವರ ಈ ಘಟನೆಯ ಬಗ್ಗೆ ತಿಳಿದಿರಲಿಲ್ಲ. ಪ್ರಸಂಗ ಸ್ವಾರಸ್ಯಕರವಾಗಿದೆ, ಬರಹದ ಮೂಲದೊಂದಿಗೆ ತಿಳಿಸಿದ್ದಕ್ಕೆ ವಂದನೆಗಳು

Veena DhanuGowda said...

dharitri,

Kannada prabha dali

ಧರಿತ್ರಿ said...

@ಸುಗುಣಕ್ಕ, ರಾಘವೇಂದ್ರ, ಪ್ರಕಾಶ್ ಸರ್, ಶಿವಣ್ಣ, ಬಾಲು, ಗುರುಮೂರ್ತಿ ಸರ್, ಜಲನಯನ ಸರ್, ಗುರು, ರಾಜೇಶ, ಶಿವಪ್ರಕಾಶ್, ಉಮೇಶ್, ವೀಣಾ, ಪರಾಂಜಪೆಯಣ್ಣ, ದೇಸಾಯಿ ಸರ್, ರಂಜನಾ ಮೇಡಂ, ವಿಘ್ಣೇಶ್ವರ, ಉದಯ್ ಸರ್, ಸುಧೇಶ್, ಪಾಲಚಂದ್ರ....
ನನ್ನ ಬ್ಲಾಗಿಗೆ ಬಂದು ಬೆನ್ನುತಟ್ಟಿದ್ದಕ್ಕೆ, ಪ್ರೋತ್ಸಾಹಿಸಿದ್ದಕ್ಕೆ ತುಂಬಾನೇ ಧನ್ಯವಾದಗಳು.....ಬರುತ್ತಾ ಇರಿ,...ನೀವು ಏನೇ ಹೇಳಿದರೂ ಅದು ನನ್ನ ಬರಲಿರುವ ಬರಹಕ್ಕೆ ಮುನ್ನುಡಿ...

ಪ್ರೀತಿಯಿಂದ,
ಧರಿತ್ರಿ

sunaath said...

ಧರಿತ್ರಿ,
ನಾನು ಕನ್ನಡಪ್ರಭಾದ ಓದುಗನಲ್ಲ. ನಿಮ್ಮಿಂದಾಗಿ ಈ ಘಟನೆಯನ್ನು ತಿಳಿದಂತಾಯಿತು. ನಿಮಗೆ ಧನ್ಯವಾದಗಳು.

Godavari said...

ಧರಿತ್ರಿ,

ಈ ಸಂಗ್ರಹಕ್ಕೆ ಧನ್ಯವಾದಗಳು.. ಬೇಂದ್ರೆ ಅವರ ನಿತ್ಯದ ಸಹಜ ಮಾತುಗಳೂ ಕಾವ್ಯವೇ.. ಅಷ್ಟೇ ಸುಮಧುರ ಮತ್ತು ಅರ್ಥಪೂರ್ಣ..

ಬೇಂದ್ರೆಯವರ ಕುರಿತಾದ ಇಂತಹ ಅನೇಕ ಘಟನೆಗಳನ್ನು ನನ್ನ ತಂದೆಯಿಂದ ಕೇಳಿದ್ದೇನೆ.. ಧಾರವಾಡಕ್ಕೆ ಒಮ್ಮೆಯೂ ಹೋಗದಿದ್ದರೂ ನನಗೆ ಸಾಧನ ಕೇರಿ, ಧಾರವಾಡದ ಸಂಜೆ, ಅಲ್ಲಿಯ ಶ್ರಾವಣದ ಮಳೆ, ಬಿಸಿಲು, ಹುಣ್ಕಲ್ ಕೆರೆ ಎಲ್ಲವೂ ಹತ್ತಿರದವು ಎನ್ನಿಸುತ್ತಿತ್ತು.. ನಿಮ್ಮ ಪೋಸ್ಟ್ ಓದಿ ಮತ್ತೆ ಅದೇ ಅನುಭವವಾಯಿತು..

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. said...

dhanyavaadagalu abhimaaniyagiddakke
nimma baravanige chennagide niramtaravaagirali e prajnaa pravaaha

Unknown said...

ರೀ ಧರಿತ್ರಿ ಬಹಳ ನಗು ಬರ್ತಾ ಇದೆ ಬಹಳ ಚೆನ್ನಾಗಿದೆ ,
ಅವ್ನಿಗ್ ಪಾಪ ಸಿಟಿ ಬಸ್ಸು ಎಲ್ಲಿ ಸಿಕ್ತಿತ ಅಂತಾನು ಗೊತ್ತಿಲ್ಲ ಅವ್ನು ಒಬ್ಬ ಭವಿಷ್ಯಗಾರ ?
ಧನ್ಯವಾದಗಳು .

ಧರಿತ್ರಿ said...

ಗೋದಾವರಿ ಮೇಡಂ, ರಾಘವೇಂದ್ರ ಸರ್, ಇಸ್ಮಾಯಿಲ್ ಸರ್..ಬೆನ್ನುತಟ್ಟಿದ ಎಲ್ಲಾರಿಗೂ ಧನ್ಯವಾದಗಳು.
-ಧರಿತ್ರಿ

ಕ್ಷಣ... ಚಿಂತನೆ... said...

ಮೇಡಂ,

ಬೇಂದ್ರೆಯವರ ಬಗೆಗಿನ ಈ ಒಂದು ಘಟನೆಯನ್ನು ಓದಿ ಖುಷಿಯಾಯಿತು. ಅವರು ಎಷ್ಟೇ ಆದರೂ ವರಕವಿ ಎಂದೇ ಪ್ರಖ್ಯಾತರಲ್ಲವೇ? ಅದಕ್ಕೇ ಆ ಭವಿಷ್ಯ ಹೇಳುವವನಿಗೆ ಹಾಗೆ ಉತ್ತರಿಸಿರುತ್ತಾರೆ. ಲೇಖನ ಬ್ಲಾಗಿಗೆ ಹಾಕಿದ್ದಕ್ಕೆ (ನಾನು ಕನ್ನಡ ಪ್ರಭ ಓದಿರಲಿಲ್ಲ) ಧನ್ಯವಾದಗಳು

ಧರಿತ್ರಿ said...

ಕ್ಷಣ ಚಿಂತನೆ ಸರ್..ಧರಿತ್ರಿಗೆ ಸ್ವಾಗತ. ಪ್ರೋತ್ಸಾಹ ನಿರಂತರವಾಗಿರಲಿ
-ಧರಿತ್ರಿ

ಅಂತರ್ವಾಣಿ said...

ನಾ ಕೂಡ ಇದ್ನ ಓದೀನಿ ಪತ್ರಿಕೆಯಾಗ..

Prabhuraj Moogi said...

ನಮ್ಮ ಅಪ್ಪನೂ ಹೀಗೆ ಅಂತಾರೆ... ಅದ್ರೂ ನನಗೆ ಈ ಭವಿಷ್ಯ ಹೇಳೊರಲ್ಲಿ ಏನೊ ಒಂದು ನಂಬಿಕೆ, ಮೊದಲು ಹಿಂದೆ ಆದದ್ದನ್ನು ಅವರಿಂದ ಕೇಳಿ ಸರಿ ಎನಿಸಿದರೆ ಮುಂದಿನದು ಕೇಳುತ್ತೇನೆ... ಭವಿಷ್ಯದ ಬಗೆಗಿನ ಕುತೂಹಲ ನನಗೆ... ಲೇಖನ ಓದಿರಲಿಲ್ಲ ಇಲ್ಲಿ ಹಾಕಿದ್ದಕ್ಕೆ ಧನ್ಯವಾದಗಳು