Tuesday, May 19, 2009

ನಾನೂ ಆಡುತ್ತಾ ನಲಿವಾಗೋ ಮಗುವಾಗಿರಬೇಕಿತ್ತು...!!!

ಹೌದು! ನಾನೂ ಮಗುವಾಗಿರಬೇಕಿತ್ತು..ಆಟಿಕೆ, ಗೊಂಬೆಗಳ ಜೊತೆ ಆಡೋ, ಮುಗ್ಧತೆ, ಪ್ರಾಮಾಣಿಕತೆಯ ಪ್ರತೀಕ ಪುಟ್ಟ ಮಗುವಾಗಬೇಕಿತ್ತು!!
ಹೌದು..ನಿನ್ನೆ ಬೆಂಗಳೂರಿನಲ್ಲಿ ಸುರಿದ ಮಳೆಯ ಭೋರ್ಗರೆತವನ್ನು ಕಿಟಕಿ ಸಂದಿಯಲ್ಲಿ ಇಣುಕಿ ನೋಡುತ್ತಲೇ ಯಾಕೋ ಮತ್ತೆ ಮತ್ತೆ ಹೀಗೇ ಅಂದುಕೊಳ್ಳುತ್ತಿದ್ದೆ..ನಾನೂ ಮಗುವಾಗಿರುತ್ತಿದ್ದರೆ..?!

ಬೆನ್ನು ತುಂಬಾ ಭಾರದ ಬ್ಯಾಗ್ ಎತ್ತಿಕೊಂಡು, ಕೈಯಲ್ಲಿ ಟಿಫನ್ ಬಾಕ್ಸ್ ಹಿಡಿದುಕೊಂಡು ದಾರಿಯುದ್ದಕ್ಕೂ ನಲಿದಾಡುತ್ತಾ ಖುಷಿ ಖುಷಿಯಿಂದ ಶಾಲೆಗೋಗುವ ಪುಟ್ಟ ಮಕ್ಕಳನ್ನು ಕಂಡಾಗ ನಾನೂ ಮಗುವಾಗಿರಬೇಕಿತ್ತು ಅನಿಸುತ್ತೆ. ಬೆಳಿಗ್ಗೆ ಆಫೀಸಿಗೆ ಹೊರಟು ಬಸ್ ಸ್ಟಾಂಡಿನಲ್ಲಿ ನಿಂತಾಗ ಅಮ್ಮ-ಅಪ್ಪ ಜೊತೆಗೆ ಬಂದು ಶಾಲೆ ಬಳಿ ಇಳಿಯುವ , ಸಂಜೆಯಾಗುತ್ತಿದ್ದಂತೆ ಹಕ್ಕಿಗಳಂತೆ ಕಲರವಗುಟ್ಟುವ ಮುದ್ದು ಕಂದಮ್ಮಗಳನ್ನು ಕಂಡಾಗ ನಾನೂ ನಲಿವ ಮಗುವಾಗಬೇಕಿತ್ತು ಅನಿಸಿಬಿಡುತ್ತೆ.

ಎದುರುಮನೆಯ ಅಜ್ಜಿಯ ಮೊಮ್ಮಗಳು ನಾಲ್ಕು ವರ್ಷದ ಅಶ್ವಿನಿ ರಾತ್ರಿ ಹತ್ತು ಗಂಟೆಗೆ ಆಂಟಿ ಊಟ ಆಯಿತಾ? ಎಂದು ಮಾತಿಗಿಳಿಯುವಾಗ ಸುತ್ತಲಿನ ಮನೆಯವರೆಲ್ಲವರೂ ಅವಳ ಮುದ್ದು ಮುಖ ಕಂಡು ಪುಳಕಿತಗೊಂಡಾಗ ನಂಗೂ ಅನಿಸುತ್ತೆ: ನಾನೂ ಅಶ್ವಿನಿ ಥರದ ಮುದ್ದಾದ ಪುಟಾಣಿಯಾಗಿರುತ್ತಿದ್ದರೆ ಅಂತ! ಆಫೀಸ್ ನಿಂದ ಹೊರಡುವಾಗ ದಾರಿ ಮಧ್ಯೆ ಸಿಗೋ ಜಾರು ಬಂಡಿಯಲ್ಲಿ ಮಕ್ಕಳು ಆಡೋದನ್ನು ಕಂಡಾಗ, ಶಿವಾಜಿನಗರದ ಕಮರ್ಶಿಯಲ್ ರಸ್ತೆಯಲ್ಲಿ ನಡೆದಾಗ ಸಿಗುವ ಮಕ್ಕಳ ಬಣ್ಣ-ಬಣ್ಣದ ಡ್ರೆಸ್ ಗಳನ್ನು ಕಂಡಾಗ..ಛೇ! ನಾನೂ ಮಗುವಾಗಿರುತ್ತಿದ್ದರೆ ಇಷ್ಟು ಸುಂದರವಾದ ಬಟ್ಟೆ ಹಾಕಿ ನಾನೂ ಮೆರೆಯುತ್ತಿದ್ದೆ ಎಂದನಿಸುತ್ತೆ. ಬೊಕ್ಕುಬಾಯಿ ಅಗಲಿಸಿ ಕಥೆ ಹೇಳುವ ಎಂಬತ್ತರ ಮುತ್ತಜ್ಜಿ ಎದುರು ಕುಳಿತು ಕಣ್ಣು-ಕಿವಿ ಅರಳಿಸಿ ಕಥೆ ಕೇಳುವ ನಮ್ಮೂರ ಸೀತಕ್ಕನ ಅವಳಿ ಮಕ್ಕಳನ್ನು ಕಂಡಾಗ, ನಾನೂ ಅಮ್ಮನ ಮಡಿಲಲ್ಲಿ ಕುಳಿತು ಕಿಟ್ಟು-ಕಿಟ್ಟಿ ಕಥೆ ಕೇಳುತ್ತಲೇ ನಿದ್ದೆಯ ಮಂಪರಿಗೆ ಜಾರೋ ಕಂದಮ್ಮನಾಗಿರಬೇಕಿತ್ತು ಅನಿಸುತ್ತೆ. ಅಪ್ಪ-ಅಮ್ಮ ಜಗಳವಾಡುತ್ತಿದ್ರೂ ಅದಾವುದನ್ನೂ ಕಿವಿಗೆ ಹಾಕಿಕೊಳ್ಳದೆ ತನ್ನ ಪಾಡಿಗೆ ತಾನು ಖುಷಿಯಾಗುವ ಮುಗ್ಧ ಮಗುವನ್ನು ಕಂಡಾಗ ಛೇ! ನಾನೂ ಮಗುವಾಗಿರುತ್ತಿದ್ರೆ ಜಗತ್ತು ಕತ್ತಲಾದ್ರೂ ನಾ ಬೆಳಕಾಗುತ್ತಿದ್ದೆ ಎಂದನಿಸುತ್ತೆ.


ಹ್ಲಾಂ..! ಒಂದನೇ ಕ್ಲಾಸಿನಲ್ಲಿ ಎರಡನೆ ಬೆಂಚಿನಲ್ಲಿ ಕುಳಿತಿದ್ದ ಪ್ರತಿಭಾ ನನ್ನ ಕಡ್ಡಿ ಕದ್ದಾಗ ದಿನವಿಡೀ ಅತ್ತು ಕಣ್ಣು ಕೆಂಪಗಾಗಿಸಿದ ನಾನು ಮರುದಿನ ಬಂದು ಪ್ರೀತಿಯಿಂದ ಮಾತಿಗಿಳಿದಿದ್ದೆ. ನಾಲ್ಕನೇ ಕ್ಲಾಸಿನಲ್ಲಿರುವಾಗ ನನ್ನ ಜಡೆ ಹಿಡಿದೆಳೆದು ಶಿವರಾಮ ಮೇಷ್ಟ್ರ ಬಳಿ ಬೆತ್ತದ ರುಚಿ ಕಂಡ ತೀರ್ಥರಾಮನ ಬಳಿ ನಮ್ಮೂರ ಜಾತ್ರೇಲಿ ಐಸ್ ಕ್ಯಾಂಡಿ ಗಿಟ್ಟಿಸಿಕೊಳ್ಳೋದು ಮಾತ್ರ ನಾನು ಮರೀಲೇ ಇಲ್ಲ!

ಮೊನ್ನೆ ಮೊನ್ನೆ ಸಿಕ್ಕ ಗೆಳೆಯನ ಜೊತೆ ದಿನವಿಡೀ ಜಗಳವಾಡೀ ಸಿಟ್ಟಿನಿಂದ ಗುರ್ ಎನ್ನುತ್ತಾ ಸಿಡಿಲಂತೆ ಆರ್ಭಟಿಸುತ್ತಾ ಕೊನೆಗೆ ಅದು ತಣ್ಣಗಾಗೋದು ಆತ ರಾತ್ರಿ ಮಲಗೋಕೆ ಮುಂಚೆ ಫೋನ್ ಮಾಡಿ, Just Kidding Da..ಎಂದಾಗಲೇ. ಆವರೆಗೆ ಇಡೀ ದಿನವನ್ನು ಜಗಳದಲ್ಲೇ ಕಳೆದು ನೆಮ್ಮದಿಯೆಲ್ಲಾ ಮಣ್ಣುಪಾಲಾಗಿರುತ್ತೆ. ಇತ್ತೀಚೆಗೆ ಸುಂದರ ಗೆಳತಿಯೊಬ್ಬಳು ಪರಿಚಯವಾದಗ, ಆಕೆಯನ್ನು ಪಡೆದಿದ್ದೇ ಧನ್ಯೆ ಎನ್ನುವ ಶ್ರೇಷ್ಠತೆಯ ಭಾವ ನನ್ನನ್ನು ಆವರಿಸಿಕೊಳ್ಳುವಾಗಲೇ ಆಕೆ ನನ್ನ ಬಿಟ್ಟು ದೂರ ಹೋಗಿದ್ದು ಮನಸ್ಸಿಗೆ ತೀರ ನೋವಾಗಿತ್ತು. ಸಂಸಾರ, ಬದುಕು, ಜಂಜಾಟ ಎಂದು ಪರದಾಡುವ ಅದೆಷ್ಟೋ ಮಂದಿಯನ್ನು ಕಂಡಾಗ ನಾನೂ ಮಗುವಾಗಿರುತ್ತಿದ್ರೆ ಛೇ! ಈ ತಲೆಬಿಸಿನೇ ಇರ್ತಾ ಇರಲಿಲ್ಲ ಎಂದನಿಸುತ್ತೆ.

ಬೆಳ್ಳಂಬೆಳಿಗ್ಗೆ ಬಾಸ್ ಜೊತೆ ಕಿರಿಕಿರಿ ಮಾಡೋದು, ಮನೆಯಲ್ಲಿ ತಿಂಗಳ ಕೊನೆಯಲ್ಲಿ ಕಾಡೋ ವಿಪರೀತ ಚಿಂತೆಗಳು, ಭವಿಷ್ಯದ ಕುರಿತಾಗಿ ತಲೆತಿನ್ನೋ ಅರೆಬರೆ ಯೋಚನೆಗಳು, ಪದೇ ಪದೇ ಮನೆಯಲ್ಲಿ ನನ್ನ ಮದುವೆ ಬಗ್ಗೆ ತಲೆ ಕೊರೆಯುವ ಅಮ್ಮನನ್ನು ಕಂಡಾಗ ನಾನೂ ಮಗುವಾಗಿರುತ್ತಿದ್ರೆ ಈ ತಾಪತ್ರಯಗಳೆಲ್ಲಾ ಇರುತ್ತಿರಲಿಲ್ಲ ಎಂದನಿಸುತ್ತೆ. ಕಳೆದುಕೊಂಡ ಗೆಳೆಯ/ ಗೆಳತಿ, ಕಡಿದುಹೋದ ಸಂಬಂಧಗಳು, ಬೆಸದ ಭಾವಬಂಧ, ಆಸೆ-ಹಂಬಲಗಳ ಗೋಜು, ನಿರಾಶೆಯ ಕರಿಮೋಡ...ಬಹುಶಃ ಮಗುವಾಗಿರುತ್ತಿದ್ರೆ ಇದಾವುದೂ ನನ್ನ ಬಾಧಿಸುತ್ತಿರಲಿಲ್ಲ ಎಂದನಿಸುತ್ತೆ. ಬಾಲ್ಯದಲ್ಲಿ ಗೊಂಬೆಗಳ ಜೊತೆ ಆಟ ಆಡುವಾಗ ಅದೆಷ್ಟೋ ಗೊಂಬೆಗಳನ್ನು ನನ್ನ ಕೈಯಾರೆ ಹಾಳುಮಾಡಿದ್ದೆ..ತುಂಡು ತುಂಡು ಮಾಡಿ ಮನೆಯದುರು ಹರಿಯೋ ಹೊಳೆಗೆ ಬಿಸಾಕಿದ್ದೆ. ಅದಾವುದೂ ನನಗೆ ದುಃಖವಾಗಿ ಕಾಡಲಿಲ್ಲ..ಆದರೆ ಈ ಗೆಳೆತನ, ಬದುಕಿನ ಸಂಬಂಧಗಳು ನಮ್ಮಿಂದ ದೂರವಾದ್ರೆ ಅದೆಷ್ಟು ಮನಸ್ಸನ್ನು ಕಾಡುತ್ತೆ ಅಲ್ವಾ?

ಏನೋಪ್ಪಾ..ಯಾರಾದ್ರೂ ಇಂಥ ತಲೆಹರಟೆ ಯೋಚನೆ ಮಾಡ್ತಾರಾ? ಅಂತ ನನ್ನ ಬೈಕೋಬೇಡಿ. ಇಷ್ಟಕ್ಕೂ ಈ ಬರಹ ಬರೆಯೋಕೆ ಕಾರಣವಾಗಿದ್ದು ಮಡಿಕೇರಿಯಿಂದ ಗೆಳೆತಿಯೊಬ್ಬಳು ನಿನ್ನೆ ರಾತ್ರಿ ಕಳಿಸಿದ ಪುಟ್ಟ ಸಂದೇಶ: "Broken Toys and Lost pencils" Better than "Broken Hearts and Lost Friends"!!!

ಚಿತ್ರ ಕೃಪೆ : www.flickr.com

23 comments:

PARAANJAPE K.N. said...

ಚೆನ್ನಾಗಿದೆ,ಬರಹ cute ಆಗಿದೆ. ನೀನು ಮಗುವಾಗಿಯೇ ಅಮ್ಮನ ಮಡಿಲಲ್ಲಿ ಆಡುತ್ತ, ನಿದ್ದೆಗೆ ಜಾರುತ್ತಾ ಇರಬೇಕಿತ್ತು ಅ೦ದುಕೊಳ್ಳುತ್ತೀಯಾ, ಅದು ಈ ಪ್ರಾಯದಲ್ಲಿ ಸಹಜ. ಆದರೆ ನಿನಗೂ ಮದುವೆಯಾಗಿ ಒಂದು ಮಗುವಾದಾಗ, ನೀನು ಆ ಮಗು ಬೇಗದೊಡ್ದದಾಗಲಪ್ಪ ಅ೦ತ ಬಯಸ್ತೀಯಾ, ಈ ವೈರುಧ್ಯಗಳೇ ಜೀವನದ ಜೀವಾಳ.

paapu paapa said...

nice.

ವಿ.ರಾ.ಹೆ. said...

ನಾನೂ ಕೂಡ!

shivu.k said...

ಧರಿತ್ರಿ,

ಇಡೀ ಲೇಖನದಲ್ಲಿ ನಾನು ಆಗಿದ್ದರೇ ಅಂತಲೇ ಅಂತ್ಯಗೊಳಿಸಿದ್ದೀಯಾ...ಬರಹದ ವಿಚಾರದಲ್ಲಿ ಅದೇ ಸುಂದರ ವಾಕ್ಯಗಳು..

ಮತ್ತೆ ನಾನು ಇಲ್ಲಿ ಹೇಳುವುದನ್ನು ಸಲಹೆ ಅಭಿಪ್ರಾಯ ಏನಂದುಕೊಂಡರೂ ಪರ್ವಾಗಿಲ್ಲ... ಎಲ್ಲಾ ಕಡೆ ಮಗುವಾಗಿದ್ದರೇ ಅಂದುಕೊಳ್ಳುವುದಕ್ಕಿಂತ ಆಗಿಬಿಡುವುದು ತುಂಬಾ ಸುಲಭವಿತ್ತು. ಆಗ ಅದರ ಅನುಭವ..ಆನಂದವೇ ಬೇರೆಯಾಗಿರುತ್ತಿತ್ತು....ಯಾವುದೂ ಆಸಾಧ್ಯವಲ್ಲ ಅಲ್ಲವೇ...ಎಲ್ಲಾ ಆಗದಿದ್ದರೂ...
ಆಶ್ವಿನಿ ಜೊತೆ, ಅವಳಿ ಮಕ್ಕಳ ಜೊತೆ, ನೀನು ಕತೆ ಕೇಳಿದ್ರೆ ಇಲ್ಲಿ ನಿನ್ನ ಲೇಖನ ಬೇರೆಯದೇ ಆಗಿರುತ್ತಿತ್ತು. ಅಂತ ನನ್ನ ಅನಿಸಿಕೆ...
ಮುಂದಿನ ಬಾರಿ ಮಗುವಾಗಿ ಅನುಭವಿಸಿದ ಲೇಖನವನ್ನು ನಿರೀಕ್ಷಿಸುತ್ತೇನೆ...ಧನ್ಯವಾದಗಳು.

ಜಲನಯನ said...

ಧರಿತ್ರೀ,
"Broken Toys and Lost pencils" Better than "Broken Hearts and Lost Friends"!!!
ಇದನ್ನ ಈ ಪುಟ್ಟಿ (ಪುಟ್ಟ...ಗೊತ್ತಿಲ್ಲ) ೭-೯ ವರ್ಷದವರಾದರೆ ಹೇಳಿ ಬಚಾವಾಗಿ ನೋಡೋಣ.
ನನ್ನ ಮಗಳಿಗೆ ಅವಳ ಚಿಕ್ಕಪ್ಪ ಒಂದು ಟಾಯ್ ಟ್ರೈನ್ ತಂದ್ಕೊಟ್ಟಿದ್ದ ಅದನ್ನ ನನ್ನ ತಮ್ಮನ ಮಗ (ಇವಳಿಗಿಂತ ಒಂದು ವರ್ಷ ದೊಡ್ಡವ) ಆಟ ಆಡ್ತಾ ಮುರ್ದ್ ಬಿಟ್ಟ..
ನೋಡ್ಬೇಕಿತ್ತು ಇವಳ ಕಿರುಚಾಟ ರಂಪಾಟ..ಮತ್ತೆ ಹೋಗಿ ಅದೇ ತರದ್ದು ಟಾಯ್ ಟ್ರೈನ್ ತಂದ್ಕೊಟ್ಟಾಗಲೇ ಅವಳ ಮುಖ ಅರಳಿದ್ದು..ಒಬ್ಬಳೇ ಮಗಳು ಅಳೋದನ್ನ ಅವಳಮ್ಮ ನೋಡಾಕಾಗ್ದೆ..ಮೆತ್ತಗೆ ನವಿರಾಗಿ ಅತ್ತಿದ್ದಳೂ ಸಹ...
ಈ ಗ ಹೇಳಿ...
ಹೌದು ಪ್ರಬುದ್ಧರಿಗೆ ನಿಮ್ಮ ಮಾತು...sorry..ನಿಮ್ಮ ಗೆಳತಿಯ ಮಾತು..ಸರಿಹೊಂದಬಹುದೇನೋ...
ಈಗ ನೋಡೀ ನಿಮ್ಮ ಲೇಖನದಲ್ಲೇ ಹೇಳಿದ್ದೀರಾ..ನಿಮಗೆ ಆ ವಯಸ್ಸಿಗೆ ಮತ್ತೆ ಮರಳಬೇಕು ಅಂತ...ಹಾಗಾದ್ರೆ ಒಂದು ಪಕ್ಷ...Broken Toys and Lost pencils ಅನ್ನೋದನ್ನ ಒಪ್ಕೋತೀರಾ..??
ನಿಮ್ಮ ದೈನಂದಿನ ವಿಷಯಗಳ ..ಭಾವ ಮಂಥನ ಚನ್ನಾಗಿರುತ್ತೆ ಓದೋಕ್ಕೆ...
Hats Off....sorry...TOYS...UP

sunaath said...

ನಿಮ್ಮ ಲೇಖನ ಓದಿದ ಬಳಿಕ ನನಗೂ ಸಹ್ ಮಗುವಾಗುವ ಆಸೆ ಆಗುತ್ತಿದೆ.

Ittigecement said...

ಧರಿತ್ರಿ...

ನನಗೂ ಸಹ ಮಗುವಾಗಿರಬೇಕೆಂಬ ಆಸೆ...

ಬಹಳ ಸುಂದರವಾಗಿ ಬರೆದಿದ್ದೀರಿ...
ಅಭಿನಂದನೆಗಳು...

ಮಗುವಿನ ಮುಗ್ಧತೆ..
ನಮ್ಮಲ್ಲೂ ಉಳಿಸಿಕೊಂಡರೆ...
ನಾವೂ ಮಕ್ಕಳೇ....

Anonymous said...

ಬಾರ್ ಬಾರ್ ಆತೀ ಹಾಯ್ ಮುಝಕೋ ಮಧುರ ಯಾದ ಬಚ್ ಪನ್ ತೇರೀ, ಅನ್ನೋ ಹಾಡು ಆಗ ಬಾಯಿ ಪಾಠ ಮಾಡಿದ್ದರೂ ಅದರ ನಿಜ ಅರ್ಥ ಈಗಲೇ ಅಲ್ಲವಾ ತಿಳಿಯುವುದು.
ಬರಹ ಚೆನ್ನಾಗಿದೆ. ಮತ್ತೆ ಅದೇ ಕಾಲಕ್ಕೆ ಕರೆದುಕೊಂಡು ಹೋದಿರಿ.

Unknown said...

nevu maguvaagiddare naavellru saha maguvaagirabekittu allave, hagadare "aagiddare " tegedu bidi aagiddene anta tilidukolli ok. sorry da,.,

ಮನಸು said...

ellarigu ade aaseyallavE.. maguvagiddare yavude tension irollavendu ha haha..

chennagide baraha!!!!

ಬಾಲು said...

ಚೆನ್ನಾಗಿದೆ .....
ಆದರೆ ಆಟದ ಸಾಮಾನು ಮುರಿದರೆ ಮಕ್ಕಳನ್ನು ಸಮಾಧಾನ ಮಾಡೋದು ಸುಲಭಾನ? ನನ್ನ ಕಡ್ಡಿ ಯಾರೋ ಕದ್ದಿದ್ದು ನಂಗೆ ಅವಾಗ ಭೂತಾಕಾರದ ಸಮಸ್ಯೆ ಆಗಿತ್ತು.
ಇಗಲೂ ವ್ಯಕ್ತಿಗಳು ದೂರವಾದಾಗ ಬೇಸರ, ಒಂದು ಮಿಸ್ಸಿಂಗ್ ... ಇದಕಿಂತ ಅದು ಬೆಟರ್ ಅಂತ ಹೇಳೋದು ಕಷ್ಟ ಅನ್ಸುತ್ತೆ.
ಬಟ್ ಅ ಬಾಲ್ಯ ಅಂತು ಮತ್ತೆ ಸಿಗೋಲ್ಲ...

ಪರಾಂಜಪೆ ಅವರು ಹೇಳಿದ್ದು ಸರಿ ಇದೆ.
ಕಳೆದು ಹೋದದನ್ನು ವರ್ತಮಾನ ದಲ್ಲಿ ಹುಡುಕುತ್ತ, ಭವಿಷ್ಯದಲ್ಲಿ ಮಾಯಾಮೃಗ ದ ಕನಸು ಕಾಣೋದು ಜೀವನ ಅನ್ಸುತ್ತೆ.

ಲೇಖನ ತುಂಬ ಚಂದ ಇದೆ.

ಸಾಗರದಾಚೆಯ ಇಂಚರ said...

ಧರಿತ್ರಿ,
ಮಗುವಾದಾಗ ದೊಡ್ದವರಾಗಬೇಕೆಂಬ ಆಸೆ, ದೊಡ್ಡವರಾದಾಗ ಬಾಲ್ಯದ ಆಸೆ, ಚಪಲ ಚನ್ನಿಗರಾದ ಮಾನವಗೆ ಇದ್ದ ಸ್ಥಿತಿಯನ್ನು ಅನುಭವಿಸುವ ಆಸೆ ಮಾತ್ರ ಇಲ್ಲ ಎನಿಸುತ್ತದೆ. ಯಾವುದು ಅಸಾದ್ಯವೋ ಅದನ್ನೇ ಮನಸು ಚಿಂತಿಸುತ್ತದೆ, ಅದರಲ್ಲೇ ಸುಖ ಕಾಣಲು ಬಯಸುತ್ತದೆ ಅಲ್ಲವೇ?
ಮನಸು ಮಗುವಿನಂತೆ ಮುಗ್ಧ ವಾಗಿರಬೇಕು ಹೊರತು ನಾವೇ ಮಗುವಾಗಬೇಕು ಎಂಬುದು ಎಷ್ಟು ಸೂಕ್ತ? ಜೀವನ ಮುನ್ನದೆಯುತ್ತಿರಬೇಕು, ಹಿಂದೆ ಅಲ್ಲ ಅಲ್ಲವೇ? ಉತ್ತಮ ಬರಹ ಎಂದಿನಂತೆ. ಬಾಲ್ಯದ ನೆನಪುಗಳು ಎಂದಿಗೂ ಮಧುರವೇ...

ಶಿವಪ್ರಕಾಶ್ said...

ನಾನು ಕೂಡ ಮಗುವಾಗುವ ಆಸೆ ಕಣ್ರೀ.. :)

ಮಲ್ಲಿಕಾರ್ಜುನ.ಡಿ.ಜಿ. said...

ಧರಿತ್ರಿಯವರೆ,
ತುಂಬಾ ಚೆನ್ನಾಗಿದೆ.ನಿಮ್ಮದೂ ಮಗುವಿನಂಥ ಮನಸ್ಸು ಅದಕ್ಕೇ ಇಂತಹ ಲೇಖನ ಮೂಡಿದೆ. ಮುಗ್ಧವಾಗಿದೆ. ಆಪ್ತವಾಗಿದೆ. ನಮ್ಮ ಬಾಲ್ಯ ನೆನೆಯುವಂತೆ ಮಾಡಿದೆ.ಹಾಗೂ ನಮ್ಮನ್ನೂ ಮಗುವನ್ನಾಗಿಸಿದೆ.

ಧರಿತ್ರಿ said...

@ಪರಾಂಜಪೆಯಣ್ಣ...
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ವೈರುಧ್ಯಗಳಿಲ್ಲದ ಬದುಕಿಲ್ಲ..ನೀವಂದಿದ್ದು ನಿಜ. ಆದರೆ ಎಲ್ಲೋ ಒಂದೆಡೆ ಪ್ರತಿಯೊಬ್ಬರಿಗೂ ಹೀಗನಿಸೋದು ಸಹಜ ಅಲ್ವೇ? 'ಪ್ರತಿಯೊಬ್ಬನೂ ಎದೆಯಾಳದಲ್ಲಿ ಯಯಾತಿಯೇ ಆಗಿರುತ್ತಾನೆ" ಎಂದ ಹಾಗೆ. ಮತ್ತೆ ಬನ್ನಿ.

@ವಿಕಾಸ್, ಪ್ರೀತಿ..ಪುರುಸೋತ್ತು ಮಾಡಿಕೊಂಡು ಓದಿದ್ದಕ್ಕೆ ಧನ್ಯವಾದಗಳು.

@ಶಿವಣ್ಣ..ಪ್ರತಿಕ್ರಿಯೆಗೆ ಧನ್ಯವಾದಗಳು. ಹೌದು..ನೀವಂದಿರೋದು ನಿಜವೇ. ಆಗಬೇಕಿತ್ತು ಅಂದುಕೊಳ್ಳೊದಕ್ಕಿಂತ ಆಗಿಬಿಡೋದು ಒಳ್ಳೆಯದು...ಮುಂದಿನ ಸಲ ಖಂಡಿತವಾಗಿಯೂ ನಾನು ಮಗುವಾಗಿಬಿಟ್ಟೆ ಅನ್ನೋ ಲೇಖನ ಇದ ಧರಿತ್ರಿಯಲ್ಲಿ ನಿಮ್ಮೆಲ್ಲರನ್ನು ಸ್ವಾಗತಿಸಲಿದೆ.

@ಜಲನಯನ ಸರ್...ಆಟಿಕೆ ವಸ್ತುಗಳು ಕಳೆದುಕೊಂಡಾಗ ಮಕ್ಕಳ ಕಿರುಚಾಟ, ಅರಚಾಟ ಎಲ್ಲಾ ಇದ್ದದ್ದೆ. ಆದ್ರೆ ಈಗ ನಾವು ದೊಡ್ಡವರಾದಾಗ ಯಾವುದೋ ಒಬ್ಬ ಒಳ್ಲೆ ಗೆಳತಿಯನ್ನು ಕಳಕೊಂಡ ನೋವು ಚಿಕ್ಕಂದಿನಲ್ಲಿ ನಾವು ಆಟಿಕೆಗಳನ್ನು ಕಳಕೊಂಡ ನೋವುಗಿಂತ ನೂರು ಪಾಲು ಹೆಚ್ಚು ಕಾಡುತ್ತೆ ಅನ್ನೋದು ನಿಜ. ಮತ್ತೆ ಬನ್ನಿ..ನಿಮಗಿದೋ ಸ್ವಾಗತ.

@ಸುನಾಥ್ ಸರ್..ಪ್ರೀತಿಯ ಪ್ರೋತ್ಸಾಹಕ್ಕೆ ಧನ್ಯವಾದಗಳು.

@ಪ್ರಕಾಶ್ ಹೆಗ್ಡೆ..ಹೌದು...ಈಗಿರೋದು ಅದೇ ದಾರಿ: ಮಗುವಿನ ಮುಗ್ಧತೆಯನ್ನು ನಾವು ಉಳಿಸಿಕೊಳ್ಳೋದು.

@ಜ್ಯೋತಿ ...ಪ್ರತಿಕ್ರಿಯೆಗೆ ಧನ್ಯವಾದಗಳು ಬರ್ತಾ ಇರಿ.

@ಇಸ್ಮಾಯಿಲ್..ಅವರೇ ಧರಿತ್ರಿಗೆ ಸ್ವಾಗತ. ನೀವಂದಂತೆ ಆಗಲಿ..ಹಾಗೇ ಅಂದುಕೋತೀನಿ. ಬರ್ತಾ ಇರಿ..ಈ ನನ್ನ ಧರಿತ್ರಿಗೆ...

@ಮನಸ್ಸು ಅಕ್ಕಾ...ಹೌದು..ಅದಕ್ಕೆ ಮಗುವಾಗಬೇಕಿತ್ತೆನ್ನುವ ಪುಟ್ಟ ಕನವರಿಕೆ ನನ್ನದು.

@ಬಾಲು ಸರ್..ಪ್ರತಿಕ್ರಿಯೆಗೆ ಧನ್ಯವಾದಗಳು. ವೈರುಧ್ಯಗಳ ಬದುಕು..ಅವುಗಳ ನಡುವೆ ನನ್ನದೊಂದು ಕನವರಿಕೆ..ಮತ್ತೆ ಮಗುವಾಗೋದು ಅಸಾಧ್ಯ..ಆದರೆ ಸುಮ್ಮಸುಮ್ಜನೆ ತಲೆಹರಟೆ ಯೋಚನೆಗಳಷ್ಟೇ..ಪ್ರಕಾಶ್ ಸರ್ ಹೇಳಿದಂತೆ ಮಗುವಿನ ಮುಗ್ಧತೆಯನ್ನು ಉಳಿಸಿಕೊಳ್ಳೋಣ ಅಷ್ಟೇ ಉಳಿದಿರೋದು ಅಲ್ವಾ? ಬರ್ತಾ ಇರಿ.

@ಗುರುಮೂರ್ತಿ ಸರ್..ನೀವು ಹೇಳೋದು 100% ನಿಜ. ನಿಮ್ಮ ಪ್ರತಿಕ್ರಿಯೆಗೆ ಬಾಲು ಸರ್ ಗೆ ಹೇಳಿದ್ದೇ ನನ್ನ ುತ್ತರ ಬರ್ತಾ ಇರಿ.

@ಶಿವಪ್ರಕಾಶ್...ಹೌದೌದು..ಏನು ಮಾಡೋದು ನಾವೆಲ್ಲ ಬೆಳೆದುಬಿಟ್ಟಿದ್ದಿವಲ್ಲಾ.

@ಮಲ್ಲಿಯಣ್ಣ..ತುಂಬಾ ದಿನಗಳ ನಂತರ ನಿಮ್ಮನ್ನು ಮತ್ತೆ ನೋಡಿದ್ದೀನಿ ಅನಿಸುತ್ತೆ. ಮುನ್ನಾರ್ ನಿಂದ ನೀವು ಬರುವಾಗ ಇಲ್ಲಿ ಮುಂಗಾರು ಬಂದುಬಿಟ್ಟಿದೆ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಬರ್ತಾ ಇರಿ.

-ನಿಮ್ಮ ಪ್ರೀತಿಯ,
ಧರಿತ್ರಿ

ಧರಿತ್ರಿ said...

ಪ್ರಿಯ ಧರಿತ್ರಿ

ಹಾಗನ್ನಿಸುತ್ತೆ ನಿಜ್ಜ.ಆದರೆ ನಿಮಗೆ ನೆನಪಿರಲಿ. ನಮಗೆ ಸಿಕ್ಕ ಬಾಲ್ಯ ಇಂದಿನ
ಮಕ್ಕಳಿಗೆ ಸಿಗುತ್ತಿಲ್ಲ. ಒಂದು ಕಿತ್ತೋಗಿರೋ ಟೈರ್ ದೂಕಿಕೊಂಡು ಊರೆಲ್ಲ ಸುತ್ತು

ಹೊಡೀತಿದ್ದದ್ದು, ಮರಕೋತಿ ಆಡಿದ್ದು, ಸೀಬೆಕಾಯಿ ಕದ್ದು ಬೈಸಿಕೊಂಡದ್ದು, ಕಾರೆ ಹಣ್ಣು

ಅವಸಿಟ್ಟು ಅದನ್ನ ಎರಡು ದಿನ ಬಿಟ್ಟು ನೋಡಿದಾಗ ಇನ್ನಾರೋ ಕದ್ದು ತಿಂದಿದ್ದು, ಮಳೆ
ಬಿದ್ದು ಪುಟ್ಟ ಝರಿ ಮೂಡಿದಾಗ ಹಳೇ ಕಾಗದ ಹರಿದು ದೋಣಿ ಮಾಡಿ ಬಿಟ್ಟಿದ್ದು,
ಕುಂಟಬಿಲ್ಲೆ ಆಡುವಾಗ ಬಿದ್ದು ಮಂಡಿ ತರಚಿಕೊಂಡಿದ್ದು, ಅಪ್ಪನ ಕಣ್ ತಪ್ಪಿಸಿ
ಬೇಲಿಯಲ್ಲಿರುವ ಗೋಸುಂಬೆ ಬೇಟೆಗೆ ಅಂತ ಹಿಂಡು ಹಿಂಡೇ ಹೊರಟಿದ್ದು. ಒಂದಾ ಎರಡಾ. ಈಗಿನ
ಮಕ್ಕಳಿಗೆ ಅಂತ ಪುಳಕಗಳೇ ಇಲ್ಲ. ಬದುಕು ಕಾಂಕ್ರೀಟ್ ಕಾಡಿನ ನಡುವೆಯೇ ಮುರುಟಿ
ಹೋಗುತ್ತಿದೆ. ಬರೀ ಮಾರ್ಕ್ಸ್ ಹುಳುಗಳು. ಟೀವಿ,ಕಂಪ್ಯೂಟರಿನ ಮುಂದೆ ಕೂತು ಗೇಮ್ಗೆ
ಕಣ್ಣು ಕೀಲಿಸಿದರೆ ಆದೇ ಅವುಗಳ ಪ್ರಪಂಚ.
ಮತ್ತೆ ಬಾಲ್ಯಕ್ಕೆ ಕರಕೊಂಡು ಹೋದ್ರಿ.
ಥ್ಯಾಂಕ್ಸ್.
ರವಿ ಅಜ್ಜೀಪುರ

ಬಿಸಿಲ ಹನಿ said...

ಮಗುವಿನ ಮುಗ್ಧತೆ, ಆ ನಗು, ಆ ನಿರಾಳತೆ ನಮಗೆಲ್ಲಿ ಬರಲು ಸಾಧ್ಯ? ಲೇಖನ ತುಂಬಾ ಚನ್ನಾಗಿದೆ.

Guruprasad said...

ಧರಿತ್ರಿ....
once again nice article.....ನಿಮಗೆ ಏನಾದರೂ ಬರೆಯುವುದಕ್ಕೆ ಯಾವ ವಸ್ತುನು ಬೇಡ, ನಿಮ್ಮ ಹಳೆ ನೆನಪುಗಳ....ಬತ್ತಳಿಕೆಯಿಂದ ಎಲ್ಲವನ್ನು ತೆಗೆದು ಬಹಳ ಮುಗ್ದವಾಗಿ,,, ಅಸ್ಟೇ ಸಿಂಪಲ್ ಆಗಿ ಬರೆದು ಬಿಡುತ್ತಿರ....
ತುಂಬ ಮುಗ್ದತೆ ಇದೆ ನಿಮ್ಮ ಇ ಬರಹದಲ್ಲಿ ..... ಮುಂದುವರಿಸಿ......
ಗುರು

jithendra hindumane said...

ರೀ ಧರಿತ್ರಿ, ನೀವೋಬ್ರೆ ಹೋದ್ರೆ ಸಾಕಾ?! ಹೊಟ್ಟೆ ಉರಿಸ ಬೇಡಿ..!!!
ನಾವೂ ಬರ್‍ತೇವೇ... ನಿಮ್ಮ ಜೊತೆ ಬಾಲ್ಯ ಕಾಲಕ್ಕೆ.......!!!!

ಧರಿತ್ರಿ said...

@ಪ್ರೀತಿಯ ಅಜ್ಜಿಪುರ ಸರ್..
ನಿಮ್ಮ ಪ್ರತಿಕ್ರಿಯೆ ಏನೋ ಪ್ರಾಬ್ಲಂ ಆಗಿ ಪಬ್ಲೀಶ್ ಮಾಡಕ್ಕಾಗದೆ..ಕೊನೆಗೆ ನಾನೇ ಕಾಪಿ-ಪೇಸ್ಟ್ ಮಾಡಕೊಂಡು ಹಾಕೊಂಡೆ. ಹೌದು, ನೀವಂದಂತೆ ಈಗಿನ ಮಕ್ಕಳಿಗೆ ನಾವು ಅನುಭವಿಸಿದ ಬಾಲ್ಯ ಸಿಗುತ್ತಿಲ್ಲ. ಎನಿಸಿಕೊಂಡಾಗ ಕಂಗಳು ಒದ್ದೆಯಾಗ್ತಾವೆ ಅಲ್ವಾ? ಮಕ್ಜಳನ್ನು ನಾವು ತುಂಬಾ artificial ಆಗಿ ಬೆಳೆಸ್ತಾ ಇದ್ದೀವಿ ಅನಿಸುತ್ತೆ. ಬರ್ತಾ ಇರಿ.

@ಗುರು...ಗುರು ಏನು ಮಾಡೋದು? ಕ್ರಿಯಾಶೀಲವಾಗಿ ಸೃಷ್ಟಿಸೋಕೆ ನಂಗೆ ಬರ್ತಾ ಇಲ್ಲ..ಾದರೆ ಭಾವನಾತ್ಮಕವಾಗಿ ಹೆಣೆಯೋಕೆ ಗೊತ್ತು. ಹಾಗಾಗಿ ನೆನಪಿನ ಬತ್ತಳಿಕೆಯಿಂದ ಒಂದೊಂದು ತೆಗದು ನಿಮ್ಮ ಮುಂದಿಡೋದು. ಬರ್ತಾ ಇರಿ.

@ಬಿಸಿಲಹನಿ ಸರ್..ನೀವಂದಿದ್ದು ನಿಜ. ಬರ್ತಾ ಇರಿ,..ನನ್ನ ಮನೆಗೆ. ಧನ್ಯವಾದಗಳು,

@ಜಿತೇಂದ್ರ ಸರ್..ಹ್ಲೂಂ ನೀವೂ ಬನ್ನಿ. ಎಲ್ರೂ ಮತ್ತೆ ಬಾಲ್ಯಕ್ಕೆ ಹೋಗಿ ಕಣ್ಣಮುಚ್ಚಾಲೆ, ಕುಂಟುಬಿಲ್ಲೆ, ಜಿಲೇಬಿ ಆಟ, ಕಳ್ಳ-ಪೋಲಿಸ್ ಆಡೋಣ ಅಂತೆ. ತಡವೇಕೆ?
ಧನ್ಯವಾದಗಳು ಸರ್. ಮತ್ತೆ ಬನ್ನಿ.

-ಧರಿತ್ರಿ

Anagha said...

tumaba ishtvaaitu nange nimma baraha ..neev haakiro photo kooda tumba muddaagide.. :) :)

ಸುಧೇಶ್ ಶೆಟ್ಟಿ said...

ನಾನು ಯಾವತ್ತಿದ್ದರೂ ಲೇಟ್ ಲತೀಫ್... ಅದಕ್ಕೆ ಕ್ಷಮೆ ಇರಲಿ....

ನೈಸ್ ಎ೦ದಷ್ಟೇ ಹೇಳಬಲ್ಲೆ....

Cruz said...

Very cute photo...sorry don't know to read the content!