Saturday, June 13, 2009

ಆಕೆಯೂ ನಗುತ್ತಾಳೆ..ದುಃಖಗಳನ್ನು ಎದೆಯೊಳಗಿಟ್ಟು!

ಅವಳು ನೆನಪಾಗುತ್ತಾಳೆ...!

ತುಂಬಾ ಸುಂದರ ಹುಡುಗಿ..ಥೇಟ್ ಕನಸುಳ್ಳ ಹುಡುಗಿ..ಭರವಸೆಯ ಹುಡುಗಿ. ಕತ್ತಿನಲ್ಲೊಂದು ತಾಳಿ..ಬದುಕಿಗೆ ಬೇಲಿ. ಅವಳ ನಗುವಿನಲ್ಲಿ ಕಾಣೋದು ಬರೀ ಬೆಳಕು..ನೋವಿನ ಕಣ್ಣೀರಿಲ್ಲ. ನಿತ್ಯ ನಗುತ್ತಾ ಬಾಳೋಳು..ಹುಣ್ಣಿಮೆಯ ತಂಪು ಬೆಳದಿಂಗಳಂತೆ! ಹೌದು..ಆಕೆಗೆ ನನಗಿಂತ ಮೂರು-ನಾಲ್ಕು ವರ್ಷ ಹೆಚ್ಚಾಗಿರಬಹುದು. ನಿತ್ಯ ಅವಳನ್ನು ನೋಡ್ತೀನಿ..ನಗುತ್ತಾಳೆ..ಪ್ರೀತಿಯ ಮಾತಾಡುತ್ತಾಳೆ. ಹೌದು, ಒಂದು ಖುಷಿಯ ಮಾತು ಸಾವಿರಾರು ದುಃಖಗಳಿಗೆ ಪರಿಹಾರ ನೀಡುತ್ತೆ..ಹಸಿದ ಹೊಟ್ಟೆಗೆ ಅನ್ನ ನೀಡುತ್ತೆ, ಬಾಯಾರಿದವನಿಗೆ ಒಂದು ಲೋಟ ನೀರು ನೀಡಿದಂತೆ ..ಅನ್ನೋದ್ರಲ್ಲಿ ನಂಬಿಕೆಯಿಟ್ಟ ನನ್ನಂಥವರಿಗೆ ಪ್ರೀತಿಯಿಂದ ಮಾತನಾಡಿಸುವವರನ್ನು ಕಂಡರೆ ಅಕ್ಕರೆ. ಆಕೆಯಲ್ಲೂ ನನಗೆ ಅಕ್ಕರೆ..ಪ್ರೀತಿ! ಎದುರುಗಡೆ ಸಿಕ್ಕಾಗ ಪುಟ್ಟದೊಂದು ನಗು..ಖುಷಿಯ ಹಿತ-ಮಿತ ಮಾತು. ಕುತ್ತಿಗೆಯಲ್ಲಿ ಜೋತುಬಿದ್ದಿದ್ದ ತಾಳಿ ಮಾತ್ರ ನನ್ನೊಳಗೆ ನೂರಾರು ಪ್ರಶ್ನೆಗಳಿಗೆ ಉತ್ತರ ಹೇಳದೆ ಮೌನವಾಗಿತ್ತು. ಹೌದು, ಹೆಣ್ಣಿನ ಬದುಕಿನಲ್ಲಿ ಸಪ್ತಪದಿ..ಅದಕ್ಕಿರುವಷ್ಟು ಮಹತ್ವ ಬಹುಶಃ ಬೇರೇನಕ್ಕೂ ಇರಲಿಕ್ಕಿಲ್ಲ ಅನಿಸುತ್ತೆ..'ತಾಳಿ' ಹೆಣ್ಣಿನ ಬದುಕೂ ಹೌದು!

ಅವಳು...ನನ್ನೊಳಗಿನ ಪ್ರಶ್ನೆಗೆ ಆಕೆ ಉತ್ತರ ಹೇಳಲಿಲ್ಲ..ನಾನು ಕೇಳಲಿಲ್ಲ...ಕೇಳೋದೂ ಸರಿ ಅನಿಸಲಿಲ್ಲ! ಅವಳು ಆ ಪುಟ್ಟ ಮನೆಯಲ್ಲಿ ಒಬ್ಬಳೇ..ಎಲ್ಲಾ ರಾತ್ರಿಗಳೂ ಅವಳಿಗೆ ಕನವರಿಕೆ ಮಾತ್ರ. ಬರೇ ಕನಸುಗಳು ಮಾತ್ರ. ಅಲ್ಲೇ ಇರುವ ಆಂಟಿ ಒಬ್ಬರು ಮೊನ್ನೆ ನಮ್ಮನೆಗೆ ಬಂದಾಗ ಅವಳ ಕಥೆಯನ್ನೇ ಬಿಚ್ಚಿಟ್ಟರು. ನನಗರಿವಿಲ್ಲದೆ ನಾನು ಕಣ್ಣೀರಾಗಿದ್ದೆ. ಇಂದಿಗೂ ನಗುವಿನ ಹಿಂದಿನ ಕಥೆಯನ್ನು ನೆನೆಸಿಕೊಳ್ಳುತ್ತಾ ನನ್ನ ಹೆಣ್ಣು ಹೃದಯನೂ ರೋಧಿಸುತ್ತೆ,. ಬದುಕು ಎಷ್ಟು ಕ್ರೂರ ಅನಿಸಿಬಿಡುತ್ತೆ.

ಹೌದು! ಅವಳಿಗೆ ಮದುವೆಯಾಗಿದೆ..ಒಂದು ವರುಷದ ಹಿಂದೆ! ಅದಕ್ಕೆ ಕುತ್ತಿಗೆಯಲ್ಲಿ ತಾಳಿ ಇದೆ.! ತುಂಬಾ ಬಡಕುಟುಂಬದ ಹೆಣ್ಣುಮಗಳು. ಒಪ್ಪೊತ್ತಿನ ಅನ್ನಕ್ಕೂ ಅವಳ ಮನೆಯಲ್ಲಿ ಕಷ್ಟ. ಅದಕ್ಕೆ ಆಕೆಯನ್ನು ಅರುವತ್ತು ವರುಷ ದಾಟಿದ ಒಬ್ಬನಿಗೆ ಮದುವೆ ಮಾಡಿ ಕೊಟ್ಟಿದ್ದಾರೆ. ಅವನಿಗೆ ಈಗಾಗಲೇ ಮದುವೆಯಾಗಿ. ಮೂರು ಹೆಣ್ಣುಮಕ್ಕಳಿದ್ದಾರೆ. ಅವರಿಗೆ ಮದುವೆಯಾಗಿ..ಅವನಿಗೆ ಮೊಮ್ಮಕ್ಕಳೂ ಇದ್ದಾರೆ! ಅವನಿಗೆ ಗಂಡು ಮಕ್ಕಳಿಲ್ಲ..ಕೈತುಂಬಾ ಹಣವಿದೆ. ಗಂಡು ಮಕ್ಕಳಿಲ್ಲ ಅನ್ನೋ ಕಾರಣಕ್ಕೆ ಇವಳನ್ನು ಮದುವೆಯಾಗಿದ್ದಾನೆ...ಅದೂ ಮೊದಲನೆಯ ಹೆಂಡತಿ, ಮಕ್ಕಳಿಗೆ ಗೊತ್ತಿಲ್ಲದಂತೆ! ಬೇರೆ ಮನೆ ಮಾಡಿ ಕೊಟ್ಟಿದ್ದಾನೆ..ವಾರದಲ್ಲಿ ಒಂದೆರಡು ಸಲ ಬೈಕ್ ಓಡಿಸಿಕೊಂಡು ಬರುತ್ತಾನೆ..ಅವನ ಬೈಕಿನ ಸದ್ದಿಗೆ ಆಕೆ ಖುಷಿಯಿಂದ ಓಡಿ ಬಂದು ಬಾಗಿಲು ತೆಗೆಯುತ್ತಾಳೆ. ಸಂಜೆ ವಾಪಾಸ್ ಅವನ ಮನೆಗೆ ಹೋಗುತ್ತಾನೆ..ಅವನ ಗಾಡಿ ಹೋಗುವಾಗ ಮತ್ತೆ ಹಿಂದಿನಿಂದ ಗೇಟ್ ಬಳಿ ಬಂದು ನೋಡುತ್ತಾಳೇ ಆ ಹೆಣ್ಣಮಗಳು..ಆತ ಬಂದಾಗ ಕಂಡ ಖುಷಿ, ಆತ ಮರಳಿದಾಗ ಅವಳ ಮುಖದ ಮೇಲೆ ಇರಲ್ಲ!

ಆ ಪುಟ್ಟ ಮನೆಯೊಳಗೇ ತನ್ನೆಲ್ಲಾ ಕನಸು ಕಟ್ಟೋಳು ಆಕೆ. ಹಗಲು-ರಾತ್ರಿಗಳು ಅವಳಿಗೆ ಅದೇ ಮನೆಯೊಳಗೆ. ಭರವಸೆಯ ನಾಳೆಗೂ ಅಲ್ಲೇ ಪುಟ್ಟ ಮನೆಯೊಳಗೆ...ಅದೇ ಆಕೆಯ ಬದುಕು! ನೋಡೋ ಕಣ್ಣುಗಳೆದುರು ನಗುತ್ತಾಳೆ..ದುಃಖವನ್ನೇ ಎದೆಯೊಳಗೆ ಮಡುಗಿಟ್ಟು! ಹೌದು..ಆಕೆಯ ಆತ್ಮವಿಶ್ವಾಸ ಮೆಚ್ಚಬೇಕು..ಹೆಣ್ಣಿಗೆ ತಾಳಿ..ಎಷ್ಟು ಮುಖ್ಯ ಅನಿಸಿಬಿಡುತ್ತೆ ಅವಳನ್ನು ಕಂಡಾಗ. ಆ 'ತಾಳಿ'ಗಾಗಿ ಆಕೆಯದು ಈ 'ಬದುಕು'! ಆದರೆ ಸುತ್ತಲ ಜನ ..ನನಗೆ ಕಥೆ ಹೇಳಿರುವ ಆ ಆಂಟಿಯ ಕಣ್ಣಲ್ಲಿ ಆಕೆಯ ಮೇಲೆ 'ಅನುಮಾನದ ಹುತ್ತ'! .ಆದರೆ 'ಗಂಡ' ಮಾತ್ರ ಸಾಕ್ಷಾತ್ ಶ್ರೀರಾಮ..! ಥೂ! ಅನಿಸಿತ್ತು.

ಯಾಕೋ ಮೊನ್ನೆಯಿಂದ ಆ ನಗುವಿನ ಹಿಂದಿನ ಕತೆ..ಮನಸ್ಸನ್ನು ತೀರಾ ರೋಧಿಸುವಂತೆ ಮಾಡಿಬಿಡ್ತು. ಹೀಗಾಗಬಾರದಿತ್ತು..ಆದರೆ ಆಕೆಗೂ ಅನಿವಾರ್ಯು..ನಗಬೇಕು..ಬಾಳಬೇಕು!

29 comments:

ಬಾಲು said...

ಹೂನ್, ನಾನು ನೋಡಿದ್ದೀನಿ ಅ ತರದ ಸಂಸಾರ!!!
ಬಡತನದ ಹುಡುಗಿ ಸರಿ ಒಪ್ಪೋಣ, ಅಪ್ಪ ಅಮ್ಮನಿಗೂ ಮಗಳನ್ನು ಮದುವೆ ಮಾಡಿ ಬಿಟ್ಟರೆ ಸಾಕು ಅನ್ನೋ ಮನೋಭಾವ, ಎಲ್ಲ ಸರಿ. ಆದರೆ ಅ ಹುಡುಗಿ ಬದುಕಿನಲ್ಲಿ ಗುರಿ, ಆತ್ಮ ವಿಶ್ವಾಸದ ಕೊರತೆ ಇತ್ತ? ಸ್ವಲ್ಪ ಓದು ಬರಹ ಕಲಿತಿದ್ದಲ್ಲಿ ಸ್ವಂತ ಕಾಲ ಮೇಲೆ ನಿಲ್ಲ್ಲ ಬಹುದಿತ್ತಲ್ಲ? ಇದು ಬರಿ ಪ್ರಶ್ನೆ ಅಷ್ಟೇ. ಒಂದು ಹುಂಬ ಪ್ರಶ್ನೆ ಅಂತಾನು ಅನ್ನಿಸಬಹುದು, ಆದರೆ ಬೇರೆ ಬಡ ಹುಡುಗಿಯರಿಗೆ ಪಾಠ ಆಗಬೇಕು.

ಇನ್ನು ಪುರುಷ ಪ್ರಧಾನ ಸಮಾಜ ಅಲ್ವ, ಅವನಿಗೆ ನೇರ ನೇರ ಎದುರು ನೀನು ಶೀಲ ವಂತ ನಲ್ಲ ಅಂತ ಹೇಳೋಲ್ಲ, ಬಟ್ ಎಲ್ಲರಿಗು ಸತ್ಯ ಗೊತ್ತಿರುತ್ತೆ ಅಲ್ವ?

ಪಾಪ ಆ ಹುಡುಗಿ, ಕಾನೂನಿನ ಪ್ರಕಾರ ನು ಅವಳಿಗೆ ಮದುವೆ ಯಾ ಮಾನ್ಯತೆ ಸಿಗೋಲ್ಲ, ಗಂಡ ಇಗಲೇ ಮುದುಕ, ಮುಂದಿನ ಜೀವನ ಹೇಗಂತೆ?

ಧರಿತ್ರಿ said...

ಬಾಲು ಸರ್..ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ. ಹೌದು, ಮನೆಯವರಿಗೆ ಮದುವೆ ಮಾಡಿ ಬಿಟ್ಟರೆ ಸಾಕು ಅನ್ನೋ ಮನೋಭಾವ..ಇದು ಅವಳೊಬ್ಬಳ ಕಥೆಯಲ್ಲ! ಸಮಾಜದಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಹುಡುಗಿ ಬದುಕಿನಲ್ಲಿ ಆತ್ಮವಿಶ್ವಾಸ, ಗುರಿಯ ಕೊರತೆ ಇತ್ತೆ?...ಹೌದು, ಖಂಡಿತ ಇದ್ದಿರಬಹುದು..ಅಥವಾ ಅವಳು ಬೆಳೆದು ಬಂದ ಬದುಕಿನಲ್ಲಿ ಈ ಕೊರತೆ ಕಾಡುವಂತೆ ಮಾಡಿರಬಹುದು. ಸ್ವಂತ ಕಾಲ ಮೇಲೆ ನಿಲ್ಲಕ್ಜೆ ಇಂದಿನ ಕಾಲದಲ್ಲಿ ಧೈರ್ಯ ಮಾತ್ರ ಸಾಲದು ಸರ್..ಪೂರಕ ವಾತಾವರಣವೂ ಅಗತ್ಯ ಎಂದನಿಸುತ್ತೆ ಅಲ್ವಾ?
ಇಲ್ಲಿ ಅವಳ, ಅವಳ ಮನೆ ಮತ್ತು ಗಂಡನ ತಪ್ಪು ಖಂಡಿತವಾಗಿಯೂ ಇದೆ..ಆದರೆ, ನನಗನಿಸೋದು 'ಆ ತಾಳಿ'ಗಾಗಿ ಅವಳು ಎಂಥ ಬದುಕಿಗೆ ತನ್ನನ್ನು ಒಡ್ಡಿಕೊಳ್ಳಬೇಕಾಯಿತು ಅಂತ?! ಸಮಾಜದಲ್ಲಿ ಇಂಥ ಸಂಸಾರ ಸಾಕಷ್ಟಿವೆ..ಆದರೂ, ನನಗ್ಯಾಕೋ ಅವಳ 'ಬದುಕು' ಅನಾವರಣಗೊಂಡ ತುಂಬಾ ನೋವಾಯಿತು. ಬರ್ತಾ ಇರಿ ಸರ್.
-ಧರಿತ್ರಿ

ಚಂದಿನ | Chandrashekar said...

ಬಡವರ ಅಸಹಾಯಕತೆ ಹಾಗು ಹಸಿವು ಅವರ ಆಶಯಗಳಿಗೆ ಮತ್ತು ಕನಸುಗಳಿಗೆ ಕೊಡಲಿಪೆಟ್ಟು ಕೊಡುವ ಸಾಧ್ಯತೆಗೆ ಇದೊಂದು ಸ್ಪಷ್ಟ ನಿದರ್ಶನ.

ನಲ್ಮೆಯ
ಚಂದಿನ

ಬಿಸಿಲ ಹನಿ said...

ಧರಿತ್ರಿ,
ಬಡತನ ಕನಸುಗಳನ್ನು ಕೊಂದು ಹಾಕುತ್ತದೆ. ಆದರೆ ಅದನ್ನು ಮೆಟ್ಟಿ ನಿಂತು ಕನಸುಗಳಿಗೆ ಬಣ್ನ ತುಂಬುತ್ತಲೇ ಮೇಲೆ ಬರುವ ಪ್ರಯತ್ನ ಮಾಡಬೇಕಾಗುತ್ತದೆ.ನಿಮ್ಮ ಕಥಾನಾಯಕಿಗೆ ಬಹಳಷ್ಟು ಕಡೆಯಿಂದ ಹೊಡೆತ ಬಿದ್ದಿರಬೇಕು. ಹೀಗಾಗಿ ಮುದಕನನ್ನೇ ಮದುವೆಯಾಗಿ ಮುದಗೊಂಡಿದ್ದಾಳೆ. ಆದರೆ ಬದುಕು ಮದುವೆಯಲ್ಲಿ ಮಾತ್ರ ಮುಕ್ತಾಯವಾಗುವದಿಲ್ಲ ಅಲ್ಲವೆ?

ಮಲ್ಲಿಕಾರ್ಜುನ.ಡಿ.ಜಿ. said...

ಮದುವೆ ಆಗದಿದ್ದರೇನಂತೆ? ಮದುವೆ ಆದರೇನೆ ಸದ್ಗತಿಯಾ? ಮದುವೆ ಎನ್ನುವ ಹೆಸರಿನಲ್ಲಿ ಅಯೂಗ್ಯರನ್ನು ಕಟ್ಟಿಕೊಂಡು ಅವನನ್ನೂ ಪೋಷಿಸುವುದಕ್ಕಿಂತ ಆಗದಿರುವುದೇ ಉತ್ತಮ ಅನ್ಸುತ್ತೆ.

shivu.k said...

ಧರಿತ್ರಿ,

ಬದುಕಿನ ಅನಿವಾರ್ಯತೆ ಯಾವ ಹಂತಕ್ಕೆ ಇಳಿಸುತ್ತೆ ಅನ್ನುವುದಕ್ಕೆ ನಿನ್ನ ಲೇಖನವೇ ಸಾಕ್ಷಿ.

ಆಕೆಯ ನೋವು ನಲಿವುಗಳ ಆಳಕ್ಕಿಳಿಯಲು ಪ್ರಯತ್ನಿಸಿದ್ದೀಯಾ...ನೇರ ಮತ್ತು ವಾಸ್ತವತೆಗೆ ಹಿಡಿದ ಕನ್ನಡಿ ನಿನ್ನ ಲೇಖನ.

Prabhuraj Moogi said...

ತಾಳಿ ತಾಳಿ ಅಂತ ತಾಳಿದ್ದಕ್ಕೆ ಹೀಗೆಲ್ಲಾ ಆಗುತ್ತಿರುವುದು, ಹೆಣ್ಣು ಕ್ಷಮಯಾ ಧರಿತ್ರಿ ಅಂತ ಅದರ ಲಾಭ ಗಿಟ್ಟಿಸುವ ಮನಸ್ಸುಗಳ ಸಮಾಜ ಇದು. ಬಡತನ ಏನೆಲ್ಲ ಮಾಡಿಸಲ್ಲ, ಕೂಸು ಮಾರಿಕೊಂಡವರು ಎಷ್ಟು ಜನ ಲೆಕ್ಕಕ್ಕಿಲ್ಲ. ಕಲಿತವರು ವರದಕ್ಷಿಣೆ ಕೇಳ್ತಾರೆ, ಕಲೀದಿದ್ರೂ ತಾತ ಮುತ್ತಾತ ಕೂಡಿಟ್ಟ ಆಸ್ತಿ ಇರುವ ತಾತಂದಿರು ಕನ್ಯೆ ಕೇಳುತ್ತಾರೆ.ಛೇ ಹೀಗೆ ನಾ ಬರೆದ್ರೆ ಒಂದು ಬ್ಲಾಗ ಪೋಸ್ಟ ಆಗುತ್ತೆ ಇಲ್ಲೇ, ಜನ ಬದಲಾಗಲ್ಲ, ಬಹಳ ಬೇಜಾರತ್ತೇ ಇಂಥದ್ದೆಲ್ಲ ಕೇಳಿದಾಗ.

umesh desai said...

ಧರಿತ್ರಿ ಆ ಹೆಣ್ಣುಮಗಳ ಬಗ್ಗೆ ಮರುಕ ಆಗುತ್ತದೆ ಹಾಗೆಯೇ ನಮ್ಮ ದೇಶದಲ್ಲಿ ನೀವು ಕಾಣಿಸಿದ ಹೆಂಗಸಿನ ಹಾಗೆ ಅನೇಕರಿದ್ದಾರೆ
ಮುಖ್ಯವಾಗಿ ನಮ್ಮ ಹಿರಿಯರು ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು ಮದುವೆ ಇದೇ ಪರಮಗುರಿ ಯಾಗಬಾರದು...

PARAANJAPE K.N. said...

ಹೇಳಿಕೇಳಿ ಇದು ಪುರುಷಪ್ರಧಾನ ಸಮಾಜ. ಕೆಲವು ಅಸಹಾಯಕ, ಅಮಾಯಕರನ್ನು ಹಣವ೦ತರು ತಮ್ಮ ತೆವಲುಗಳಿಗಾಗಿ ಹೀಗೆ ಬಳಸಿಕೊಳುತ್ತಾರೆ. ಇ೦ತಹ ಸ೦ಬ೦ಧಗಳು ಅನೇಕ ಸ೦ದರ್ಭಗಳಲ್ಲಿ ಕೊನೆ ತನಕ ಬಾಳುವುದಿಲ್ಲ. ರಸಹಿರಿದ ನ೦ತರ ಉಳಿಯುವ ಗೊರಟನ್ನು ಎಸೆಯುವ೦ತೆ, ನಡುನಿರಿನಲ್ಲಿ ಕೈಬಿಡುವ ಮ೦ದಿ ಬಹಳ ಇದ್ದಾರೆ, ಆಸೆ, ಪ್ರಲೋಭನೆ ಗಳಿಗೆ ಒಳಗಾದವರು ಕೊನೆಗೆ ಜೀವನದ ಕಟುಸತ್ಯ ಅರಿಯುವ ವೇಳೆ ಗೆ ಅಸಹಾಯಕ ಹ೦ತ ತಲುಪಿರುತ್ತಾರೆ. ಇದು ನಮ್ಮ ನಡುವೆ ನಿತ್ಯ ನಡೆಯುತ್ತಿರುವ ವಿದ್ಯಮಾನ. ಬಹಳ ಹೃದ್ಗತ ಶೈಲಿಯಲ್ಲಿ ಬರೆದಿದ್ದೀಯ,

ಸುಧೇಶ್ ಶೆಟ್ಟಿ said...

ಎಷ್ಟು ಕ್ರೂರ....!

ಆಕೆಯ ಆತ್ಮವಿಶ್ವಾಸ ಎ೦ದು ಕುಗ್ಗದಿರಲಿ ಎ೦ದು ಹಾರೈಸುತ್ತೇನೆ....

ಶಿವಪ್ರಕಾಶ್ said...

ಮನಸಿಗೆ ತುಂಬಾ ನೋವಾಗುತ್ತೆ ರೀ.

Vigneshwar said...

ಏನು ಅನ್ನೋದು :(

ಸಾಗರದಾಚೆಯ ಇಂಚರ said...

ನಿಜ ಧರಿತ್ರಿ,
ಗಂಡು ಮಾಡಿದ್ದೆಲ್ಲವೂ ಸರಿ ಅನ್ನುತ್ತದೆ ಈ ಸಮಾಜ. ಹೆಣ್ಣಿಗೆ ತಾಳಿಯ ಬೇಲಿ ಹಾಕಿ ಆಚರಣೆಯ ಹಗ್ಗಕ್ಕೆ ಕಟ್ಟಿ ಹಾಕಿ, ಮಾನ ಮರ್ಯಾದೆಯೇಮ್ಬ ಗೂಡೊಳಗೆ ಶಾಶ್ವತ ಭಂದಿಯನ್ನಾಗಿ ಮಾದುತ್ತಾರೆ. ಆ ಬೇಲಿಯನ್ನು ಗಂಡೇ ಮುರಿದರೂ ಅನುಮಾನಕ್ಕೆ ಹೆಣ್ಣು ತುತ್ತಾಗುತ್ತಾಳೆ. ಪುರುಷ ಪ್ರಧಾನ ಸಮಾಜದ ಕೆಲವು ವ್ಯವಸ್ಥೆ (ಅಲ್ಲಲ್ಲ ಅವ್ಯವಸ್ಥೆ) ಇನ್ನು ಅರ್ಥವಾಗುತ್ತಿಲ್ಲ. ಮಾನವೀಯ ಸಂಭಂಧಗಳಿಗೆ ಮರುಗುವ ಮನಸ್ಸು ಇನ್ನು ಸತ್ತಿಲ್ಲ ಎನ್ನುವುದಕ್ಕೆ ನಿಮ್ಮ ಲೇಖನ ಸಾಕ್ಷಿ.
ಹೀಗೆ ನಿಮ್ಮ ಸುತ್ತಲಿನ ಕತ್ತಲ ಬೆಳಕನ್ನು ನೋಡುತ್ತಿರಿ. ಆ ಬೆಳಕಿನಲ್ಲಿ ಇನ್ನೆಷ್ಟು ಕತ್ತಲೆಗಳಿವೆಯೋ ಯಾರಿಗೆ ಗೊತ್ತು? ಒಳ್ಳೆಯ ಬರಹ

ಮನಸು said...

manasu bhaaravagutte... intaha kategaLu bahala nedeyuttale irutte papa annisutte nimma lekhana odi

Umesh Balikai said...

ಧರಿತ್ರಿ,

ಆ ಹೆಣ್ಣುಮಗಳಂತವರ ಜೀವನದ ಬಗೆಗಿನ ನಿಮ್ಮ ಕಾಳಜಿ ಶ್ಲಾಘನೀಯ. ಅವಳದೇನೂ ತಪ್ಪಿಲ್ಲದಿದ್ದರೂ ಅನುಮಾನ ಅವಳ ಮೇಲೆಯೇ, ಅವನ ತಪ್ಪು ಬೆಟ್ಟದಷ್ಟಿದ್ದರೂ ಯಾರೂ ಅವನ ಕಡೆ ಬೊಟ್ಟು ಮಾಡುವದಿಲ್ಲ. ಅಂತಹ ಸುಮಾರು ಉದಾಹರಣೆಗಳು ನಮ್ಮ ಸುತ್ತಮುತ್ತ ಕಾಣಸಿಗುತ್ತವೆ. ಬದುಕಿನ ಅಸಹಾಯಕತೆ ನಮ್ಮನ್ನು ಎಲ್ಲ ರೀತಿಯ ಕಷ್ಟ ಎದುರಿಸಲು ಸಜ್ಜು ಮಾಡುತ್ತೆ, ಅಲ್ಲವೇ. ಪಾಪ, ಆ ಹೆಣ್ಣು ಮಗಳ ಮುಂದಿನ ಜೀವನದ ಗತಿಯೇನೋ..

paapu paapa said...

Dear dharithree,



oLLe lEkhana. taaLi annO shabdanE hELutte nODi, taaLi = sahisu endu.

PaLa said...

ತಾಳಿ ಕಟ್ಟೋದಕ್ಕೂ ಕಟ್ಟಿಸಿಕೊಳ್ಳೋದಕ್ಕೂ ಮುಂಚೆ, ಮನೆಯವರು, ಹುಡುಗ ಹುಡುಗಿ ತಾಳಿದರೆ ಎಷ್ಟು ಒಳ್ಳೆಯದಲ್ಲವೇ? ಬಡತನದಿಂದ ಇಂತಹ ಮದುವೆಯಾಗುವ ಪ್ರಸಂಗ ಇತ್ತೀಚಿನ ದಿನಗಳಲ್ಲಿ ಇಲ್ಲವಾಗಿದೆಯೆಂದೇ ಭ್ರಮಿಸಿದ್ದೆ. ನಿಮ್ಮ ಬರಹ ನನ್ನ ಅನಿಸಿಕೆ ಅಲ್ಲವಾಗಿಸಿತು.

SSK said...

ಇಂತಹ ವಿಷಾದಯುಕ್ತ ವಿಷಯ ಅಥವಾ ಕಥೆಗಳ ಬಗ್ಗೆ ಹೇಳಲು ಹೊರಟರೆ, ಕೊನೆ ಮೊದಲೆನ್ನುವುದೇ ಇರುವುದಿಲ್ಲ. ಮರುಕ ಹುಟ್ಟಿಸುವಂತ ಸನ್ನಿವೇಶ. ಒಟ್ಟಾರೆ ಲೇಖನ ಚೆನ್ನಾಗಿ ಮೂಡಿ ಬಂದಿದೆ!

SSK said...

ಇಂತಹ ವಿಷಾದಯುಕ್ತ ವಿಷಯ ಅಥವಾ ಕಥೆಗಳ ಬಗ್ಗೆ ಹೇಳಲು ಹೊರಟರೆ, ಕೊನೆ ಮೊದಲೆನ್ನುವುದೇ ಇರುವುದಿಲ್ಲ. ಮರುಕ ಹುಟ್ಟಿಸುವಂತ ಸನ್ನಿವೇಶ. ಒಟ್ಟಾರೆ ಲೇಖನ ಚೆನ್ನಾಗಿ ಮೂಡಿ ಬಂದಿದೆ!

Unknown said...

ಛೆ... ೨೧ ನೆ ಶತಮಾನದಲ್ಲೂ ಇಂಥ ವೈಪರೀತ್ಯ... ಓದಿ ಬೇಸರವಾಯಿತು...

Mohan Hegade said...

ನಮಸ್ಕಾರ,
ಒಳ್ಳೆಯ ಬರಹ, ನೈಜತೆಯನ್ನು ತುಂಬಿಕೊಂಡು ಕತೆಯಾಗಿಸಿದ ಲೇಖನ. ಇದನ್ನೇ ವಾಸ್ತವ ಎಂದು ನೋಡಿದರೆ ಅವಳು ಆ ಮುದಕನ್ನು ಮದುವೆಯಾಗುವ ಸ್ಥಿತಿ ಬಂದಿರುವುದಕ್ಕೆ ಅನೇಕ ಕರಣ ಇರಬಹುದು. ಕಿತ್ತು ತಿನ್ನೋ ಬಡತನ, ಇತ್ಯಾದಿ. ಅವಳ ಜಾಗದಲ್ಲಿ ನಿಂತು ಯೋಚಿಸಿದಾಗ ಅವಳು ಮಾಡಿದ್ದೂ ಸರಿ ಎನ್ನಿಸುತ್ತೆ. ಈತನನ್ನು ಬಿಟ್ಟರೆ ಮದುವೆನೇ ಆಗದಿರುವ, ಅದೇ ಕಷ್ಟ ಕೊತಲೆಯಲ್ಲಿ ಜೀವನ ನಡೆಸುವ ಬಾಳ್ವೆ ಆಗುತ್ತಿತ್ತು ಅನ್ನಿಸುವುದಿಲ್ಲವಾ?.
ಬಾವಜೀವಿಯಾಗಿ, ಮಾನವೀಯತೆಯಿಂದ ಆದರ್ಶದ ಮಾತಾಡುವ ಜನ ತುಂಬ ಸಿಗುವರು. ಆದರೆ ಕ್ರತಿಯಲ್ಲಿ ಆಚರಿಸುವಾಗ ಎಲ್ಲ ಹಿಂದೆ ಮುಂದೆ ನೋಡುವ ಸಮಾಜದ ಜನರೇ ಅಲ್ಲವಾ?.
ದನ್ಯರಿ.

jithendra hindumane said...

ಬದುಕು ಎಷ್ಟು ಕ್ರೂರ........

ಜಲನಯನ said...

ನನಗೆ ಅನ್ನಿಸೋದು...!! ಗಂಡಸು ಬಹಳ narrow-sighted ಬಿಡ್ರೀ ಧರಿತ್ರಿ...ತನಗೆ ಅಂತ ಹೆಣ್ಣೊಂದನ್ನ ನೋಡೋಕೆ ಹೊರಟ್ರೆ ..ಬಡಮನೆಗಳತ್ತ ಸ್ವಯಿಚ್ಛಾ ಪ್ರೇರಣೆಯಿಂದ ಹೋಗುವವರು ಎಷ್ಟು ಜನ..???!!! ಇದು ಕನಿಸ್ಟ ೧೦-೧೫ ಶೇ. ಆದ್ರೂ ಸಮಾಜದಲ್ಲಿ ಬಡ ಹೆಣ್ಣುಮಕ್ಕಳಿಗೆ ಸ್ಥಿರ ನೆಲೆ ಅಂತ ಆಗೋದಲ್ದೇ ಅಂತಹ ಬಡ ತಂದೆ-ತಾಯಿಯ ಮನಸ್ಸಿನ ಯಾವುದೋ ಮೂಲೆಯಲ್ಲಿ ಆಶಾವಾದ ಮೂಡುತ್ತೆ...ಹತಾಷೆ ಕಡಿಮೆಯಾಗುತ್ತೆ...ಅಲ್ವೇ???

ರಾಘವೇಂದ್ರ ಕೆಸವಿನಮನೆ. said...

.....:( :(

Ittigecement said...

ಧರಿತ್ರಿ....

ತುಂಬಾ... ತುಂಬಾಅ ಚಂದವಾಗಿ..
ಹ್ರದಯಂಗಮವಾಗಿ ಭಾವಪೂರ್ಣವಾಗಿಬರೆದಿದ್ದೀರಿ...
ಬದುಕಿನ ಅಸಾಹಯಕತೆ ಎಲ್ಲಿಗೆ ತಂದು ನಿಲ್ಲಿಸಿ ಬಿಡುತ್ತೆ ಅಲ್ಲವಾ...
ಬಹಳ ಇಷ್ಟವಾಯಿತು...

Susheel Sandeep said...

ಅದ್ಭುತವಾಗಿ ಬರೀತೀರ ರೀ...ನಿಮ್ಮ ಕತೆಗಳಲ್ಲಿ ಕವನದ ಲಾಲಿತ್ಯವಿರತ್ತೆ.

ಪ್ರಸ್ತುತ ಲೇಖನಕ್ಕೆ ಬರೋದಾದ್ರೆ - ಇದೊಂದು ಪೀಡೆ.
ಆ ಹುಡುಗಿಯ ಪಾಲಿಗೆ ಆದಂಥ ಅನ್ಯಾಯವಷ್ಟೇ.

ಎಚ್. ಆನಂದರಾಮ ಶಾಸ್ತ್ರೀ said...

ಅಮ್ಮಾ ಧರಿತ್ರಿ,
ಭಾವಭರಿತ, ವೈವಿಧ್ಯಮಯ ಬರಹಗಳು ನಿಮ್ಮವು.
ವಿಷಯಗಳು ಧರಿತ್ರಿಯಷ್ಟು ವ್ಯಾಪಕ, ಮನಸ್ಸು ಧರಿತ್ರಿಯಷ್ಟು ವಿಶಾಲ.

Ashok Uchangi said...

Dear Dharitri

tumbaa chennagide nimma baraha.Samaya sikkaaga kanditaa bheti needtene.

maguvagirabekittu
bhavishvya
maounageete

xllent

thanks

ashok uchangi

ಧರಿತ್ರಿ said...

@ಚಂದಿನ ಸರ್..ಧರಿತ್ರಿಗೆ ಸ್ವಾಗತ. ಬರ್ತಾ ಇರಿ..ಬೆನ್ನುತಟ್ಟುತ್ತಿರಿ

@ಉದಯ್ ಸರ್..ಹೆಣ್ಣಿನ ಬದುಕಿಗೆ ತಾಳಿ 'ಬೇಲಿ' ಅಂದ್ರೂ..ಪರಿಪೂರ್ಣವೆನಿಸದ 'ಮದುವೆಯ ಬಂಧ'ವನ್ನು ಅಪ್ಪಿಕೊಳ್ಳೋದ್ರಲ್ಲಿ ಬದುಕೇಕೆ ಸವೆಯಬೇಕು ಎಂದನಿಸುತ್ತದೆ. ಧನ್ಯವಾದಗಳು.

@ಮಲ್ಲಿಯಣ್ಣ..ನೀವಂದಿದ್ದು ನಿಜ.

@ಶಿವಣ್ಣ..ಧನ್ಯವಾದಗಳು.

@ಪ್ರಭುರಾಜ್..ಸಮಾಜದಲ್ಲಿ ಇಂಥವರ ಕಣ್ಣೀರಿಗೆ ಬೆಲೆ ಇರೋಲ್ಲ ಅಂದಾಗ ಬೇಜಾರಾಗುತ್ತಲ್ವಾ? ಧನ್ಯವಾದಗಳು.

@ಉಮೇಶ್ ಸರ್, ಪರಾಂಜಪೆಯಣ್ಣ...ನೀವಂದಿದ್ದು ನಿಜ. ಬದುಕ್ಯಾಕೆ ಹೀಗಾಗುತ್ತೆ? ಅಲ್ವಾ?

@ಸುಧೇಶ್, ವಿಘ್ಣೇಶ್ವರ, ಮನಸ್ಸು,ಜಿತೇಂದ್ರ ಸರ್, ಪ್ರೀತಿ, ರವಿಕಾಂತ್ ಗೋರೆ ಸರ್..ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.

@ಎಸ್ ಎಸ್ ಕೆ, ಮೋಹನ್ ಹೆಗಡೆ, ಉಮೇಶ್, ಗುರುಮೂರ್ತಿ ಸರ್, ಜಲನಯನ, ಪಾಲಚಂದ್ರ, ರಾಘು, ಸುಶೀಲ್ ಸಂದೀಪ್, ಪ್ರಕಾಶ್ ಸರ್, ಅಶೋಕ್ ಸರ್..ಎಲ್ಲರಿಗೂ ಧನ್ಯವಾದಗಳು, ಬದುಕಿನ ಅನಿವಾರ್ಯತೆ, ಕೌಟುಂಬಿಕ ಸಂದಿಗ್ದತೆಯಲ್ಲಿ ನರಳುವ ಬದುಕು ಯಾಕೋ ನಂಗೆ ತೀರಾ ನೋವು ಕೊಡ್ತು. ಧನ್ಯವಾದಗಳು.

@ಶಾಸ್ತ್ರೀ ಸರ್..ಧರಿತ್ರಿಗೆ ಸ್ವಾಗತ. ಪುರುಸೋತ್ತು ಇದ್ದಾಗ ಬರ್ತಾ ಇರಿ..ಸರಿ/ತ[್ಪುಗಳನ್ನು ಹೇಳುತ್ತಿರಿ. ನನ್ನ ಬರಹಕೃಷಿಗೆ ಇದು ಸಹಾಯಕ. ಧನ್ಯವಾದಗಳು.

-ಧರಿತ್ರಿ

@