Sunday, April 5, 2009

ಸಂಗೀತ ಅಮ್ಮನಂತೆ..?!

ಸಂಗೀತ ಅಮ್ಮನಂತೆ..
ಕೈ ಕೊಟ್ಟು ಹೋದ ಗೆಳೆಯ-ಗೆಳತಿಯ ನೆನಪು ಕಾಡಿದಾಗ, ಆಫೀಸ್ ನಲ್ಲಿ ಬಾಸ್ ಕಿರಿಕಿರಿ ಮಾಡಿದಾಗ, ಸ್ಕೂಲ್ ನಲ್ಲಿ ಟೀಚರ್ ಬೈದಾಗ, ನಿಮ್ಮ ಆತ್ಮೀಯ ಸ್ನೇಹಿತರು ಮಾತು ಬಿಟ್ಟಾಗ, ಅಮ್ಮನತ್ತ ಹುಸಿಮುನಿಸು ತೋರಿ ಕೋಪದಿಂದ ಫೋನ್ ಕುಕ್ಕಿ ಮತ್ತೆ ಮನಸ್ಸು ಭಾರವಾದಗ, ಜೊತೆಗಿದ್ದ ಆಪ್ತರು ಜೀವನಪರ್ಯಂತ ದೂರವಾಗೋ ಸನ್ನಿವೇಶ ಎದುರಾದರೆ, ಜೀವನದ ಜಂಜಾಟಗಳಿಂದ ಬದುಕು ಭಾರವೆನಿಸಿದಾಗ, ಸಂಬಂಧಗಳ ಕೊಂಡಿ ಕಳಚಿ ಹೃದಯ ಚಿರ್ರೆಂದು ನೋವಿಂದ ಚೀರಿದಾಗ, ಯಾರಲ್ಲೂ ಹೇಳಿಕೊಳ್ಳಲಾಗದ ಅವ್ಯಕ್ತ ದುಃಖಭಾವ ನಿಮ್ಮ ನಿರಂತರ ಕಾಡಿದಾಗ....ನನಗೆ ಸಂಗೀತ ಅಮ್ಮನಂತೆ ಅನಿಸುತ್ತೆ..ಒಂದಲ್ಲ..ಎರಡಲ್ಲ..ಎಷ್ಟೋ ಬಾರಿ ನನಗೆ ಹೀಗನಿಸಿದ್ದುಂಟು. ಅಮ್ಮನಪ್ಪುಗೆಯ ಹಿತ, ಖುಷಿ, ನೆಮ್ಮದಿ ನೀಡಿದುಂಟು.

ಹೌದು..ಮತ್ತೆ ಹೇಳ್ತೀನಿ ಸಂಗೀತ ಅಮ್ಮನಂತೆ. ಪ್ರೀತಿಯ ಮಡಿಲಾಗುತ್ತೆ. ಮಮತೆಯ ಸಂತೈಸುವ ಒಡಲಾಗುತ್ತೆ. ಅಕ್ಕರೆಯಿಂದ ಲಾಲಿ ಹಾಡುತ್ತೆ. ನಿದ್ದೆ ಬಾರದ ಕಣ್ಣುಗಳಿಗೆ ಜೋಜೋ ಹಾಡಿ ತಟ್ಟಿ ನಿದ್ದೆ ಬರಿಸುತ್ತೆ. ಹಸಿವಿನಿಂದ ಅಳೋ ಮಗುವಂತ ಮನಸ್ಸಿಗೆ ಹಾಲುಣಿಸುತ್ತೆ. ಪ್ರೀತಿಯ ಬಂಧನದಲ್ಲಿ ಬಿಗಿದಪ್ಪು ನಮ್ಮ ಹೃದಯ ಹಗುರಾಗಿಸುತ್ತೆ. ಸಾಹಿತ್ಯ, ಭಾಷೆ, ಲಯ, ಮಾಧುರ್ಯ ಎಲ್ಲವನ್ನೂ ಮೀರಿದ ಅವ್ಯಕ್ತವಾದ ಖುಷಿಯ ಗಳಿಗೆಯೊಂದನ್ನು ಸುಮಧುರ ಹಾಡೊಂದು ನಮಗೆ ನೀಡುತ್ತೆ.

ನಂಗೆ ಹಾಡು ಬರೆಯಕೆ ಬರಲ್ಲ. ಲಯ, ತಾಳ ಇದಾವುದೂ ತಿಳಿದಿಲ್ಲ. ಆದರೆ ಒಂದು ಸುಂದರ ಕವಿತೆಯನ್ನು ಮನಸ್ಸು ಸಂತೋಷದಿಂದ ಅನುಭವಿಸುತ್ತೆ. ಸುಮಧುರ ಇಂಪು ಗೀತೆಯ ಅನನ್ಯ ಅನುಭೂತಿಗೆ ಹೃದಯ ಮನಸ್ಸು ಕಿವಿಯಾಗುತ್ತೆ. ಒಂದಷ್ಟು ಹೊತ್ತು..ಒಂದಷ್ಟು ಕ್ಷಣ ನಾನಲ್ಲಿ ನನಗೆ ಗೊತ್ತಿಲ್ಲದೆಯೇ ಕಳೆದುಹೋಗುತ್ತೇನೆ. ಕುವೆಂಪು, ಬೇಂದ್ರ ಅಜ್ಜ, ಕೆ ಎಸ್ ಎನ್, ಅಡಿಗರ ಪ್ರೀತಿ, ಜೀವನದ ಕುರಿತಾದ ಸುಂದರ ಕವಿತೆಗಳು ನಮ್ಮ ಬದುಕಿನಲ್ಲೂ ಮಾತಿಗಿಳಿದಂತೆ ಭಾಸವಾಗುತ್ತದೆ. ಮನಸ್ಸು ಮಲ್ಲ್ಲಿಯಾಗುತ್ತದೆ. ಹೃದಯ ಆರ್ದೃ ಗೊಳ್ಳುತ್ತೆ. ಬದುಕೆಲ್ಲಾ ನಾದಮಯ ಅನಿಸಿಬಿಡುತ್ತೆ.

ಸುನಾಮಿಯಂತೆ ಥಟ್ಟನೆ ಬಂದಪ್ಪಳಿಸುವ ಅಮ್ಮನ ನೆನಪು, ಅಮ್ಮನ ಲಾಲಿ ನೆನಪು, ಎದೆಯಾಳದಲ್ಲಿ ಗುಬ್ಬಚ್ಚಿಯಂತೆ ಅವಿತಿದ್ದ ನೆನಪು, ಅಮ್ಮನೂರಿನ ಹಸಿರೆಲೆಗಳ ಹಳ್ಳಿ ನೆನಪು, ಮತ್ತೆ ಮತ್ತೆ ಮನದಲ್ಲಿ ಮೆರವಣಿಗೆ ಮಾಡುವ ಸುಂದರ ಕುಮಾರಧಾರ ನೇತ್ರಾವತಿ ನೆನಪು, ಅಣ್ಣ-ತಮ್ಮನ ನೆನಪು, ಬದುಕುಳಿಯದ ಅಜ್ಜ-ಅಜ್ಜಿಯ ನೆನಪು, ಬಿಟ್ಟು ಹೋದ ಅಪ್ಪನ ನೆನಪು, ನಮ್ಮ ಪುಟ್ಟ ಕರು ಅಪ್ಪಿಯ ನೆನಪು, ಕಳೆದುಹೋದ ಗೆಳತಿಯ ನೆನಪು...ಕಾಡಿದಾಗ ನಾ ಸುಮಧುರ ಹಾಡುಗಳಿಗೆ ಕಿವಿಯಾಗುತ್ತೇನೆ.

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೇ
ಮಲಗು ಚೆಲ್ವಿನ ತೆರೆಯೆ ಮಲಗು ಒಲ್ಮೆಯ ಸಿರಿಯೆ
ಮಲಗು ತೊಟ್ಟಿಲ ಸಿರಿಯೆ ದೇವರಂತೆ
ಮಲಗು ಮುದ್ದಿನ ಗಿಣಿಯೆ ಮಲಗು ಮುತ್ತಿನ ಮಣಿಯೆ
ಮಲಗು ಚಂದಿರನೂರ ಕೂಗುವೆಯಂತೆ ....

ಹಾಡು ಕೇಳಿದರೆ ಸಾಕು ಅಮ್ಮ ಬಂದು ತೊಡೆ ಮೇಲೆ ಮಲಗಿಸಿ ತಟ್ಟಿ ಲಾಲಿ ಹಾಡಿದಂತಾಗುತ್ತೆ. ನನ್ನ ಕೋಣೆಯ ಕಿಟಕಿ ಸಂದಿನಿಂದ ಕಾಣುವ ಚಂದಿರಿನ ಮುಖ ನೋಡುತ್ತಲೇ ನಾ ಅರಿವಿಲ್ಲದೆ ನಿದ್ದೆ ಬಾರದ ಕಣ್ಣುಗಳು ನಿದ್ದೆಯ ಮಂಪರಿಗೆ ಜಾರುತ್ತವೆ.
ಏನೂ ಬೇಡ..ಮನಸ್ಸು ಸರಿ ಇಲ್ಲ..ನಂಗೇನೂ ಮಾಡಕ್ಕಾಗಲ್ಲ ಎಂದು ಮನಸ್ಸು ರಾಗ ಎಳೆಯುವಾಗಲೇ ಕನ್ನಡದ ಒಳ್ಳೆಯ ಕವಿತೆಗಳ ಇಂಪನ್ನು ಅನುಭವಿಸಿ. ನಿಮ್ಮ ಮನಸ್ಸಿಗೆ ಖುಷಿಯಾಗದಿದ್ದರೆ ಮತ್ತೆ ಹೇಳಿ!

ಕೊನೆಗೆ,
ನಿಮ್ಮ ಖುಷಿಗೆ ಗೋಪಾಲಕೃಷ್ಣ ಅಡಿಗರ 'ಮಹಾಪೂರ' ಕವನದ ಸಾಲುಗಳು...
ಅಮೃತವಾಹಿನಿಯೊಂದು ಹರಿಯುತಿದೆ ಮಾನವನ
ಎದೆಯಿಂದಲೆದೆಗೆ ಸತತ.........
ಇಂದೆಲ್ಲ ನಾಳೆ ಹೊಸ ಭಾನು ಬಗೆ ತೆರೆದೀತು...
ಕರಗೀತು ಮುಗಿಲ ಬಳಗಾ....
ಇಂದೆಲ್ಲ ನಾಳೆ ಹೊಸ ಭಾನು ಬಗೆ ತೆರೆದೀತು...
ಕರಗೀತು ಮುಗಿಲ ಬಳಗಾ....
ಬಂದೀತು ಸೊಗೆಯ ಮಳೆ..
ತುಂಬೀತು ಎದೆಯ ಹೊಳೆ...
ಬಂದೀತು ಸೊಗೆಯ ಮಳೆ..
ತುಂಬೀತು ಎದೆಯ ಹೊಳೆ...
ತೊಳೆದೀತು ಒಳಗು ಹೊರಗಾ...


ಹೌದು..ಸಂಗೀತ ಅಮ್ಮನಂತೆ...?!!

20 comments:

Rajesh Manjunath - ರಾಜೇಶ್ ಮಂಜುನಾಥ್ said...

ಧರಿತ್ರಿ,
ಖಂಡಿತವಾಗಿ ಸಂಗೀತ ನನ್ನ ಪಾಲಿಗಂತು ಅಮ್ಮ, ಹಿರಿಯಮ್ಮ ಎಲ್ಲ, ಮನಸ್ಸಿಗೆ ಸಂತೋಷವಾದಾಗ ಮತ್ತು ಇನ್ನಿಲ್ಲವೆಂಬಂತೆ ಬೇಸರವಾದಾಗ ಸಂಗೀತ ಕೊಡುವ ನೆಮ್ಮದಿ ಹೇಳ ತೀರದು. ನೀವು ಬರೆದಿರುವ ಎರಡು ಹಾಡಿನ ಸಾಲುಗಳು ನನ್ನ ಅಚ್ಚುಮೆಚ್ಚಿನ ಹಾಡುಗಳು, ದಿನ ಗಟ್ಟಲೆ ಕೇಳಿ ಆನಂದಿಸಿದ ಹಾಡುಗಳು. ನೈಜ ಭಾವನೆಯ ಅಭಿವ್ಯಕ್ತಿಯ ಬರಹಕ್ಕೆ ಅಭಿನಂದನೆಗಳು.

Ittigecement said...

ಧರಿತ್ರಿ...

ಸಂಗೀತ ನನಗೆ ಗೆಳೆಯನಂತೆ....

ರಕ್ತ ಸಂಬಂಧಗಳಿಗೆ ಮೀರಿದ ಬಾಂಧವ್ಯ...
ಖುಷಿಯಿರಲಿ.., ದುಃಖವಿರಲಿ.., ದುಗುಡದುಮ್ಮಾನವಿರಲಿ....

ಸಂಗೀತ ಗೆಳೆಯನಂತೆ...ಆಪ್ತವಾಗುತ್ತದೆ...

ಅಲ್ಲವೇ...?

ಚಂದವಾದ ಲೇಖನ...
ಬಹಳ ಇಷ್ಟವಾಯಿತು...

ಅಭಿನಂದನೆಗಳು...

PARAANJAPE K.N. said...

ಧರಿತ್ರಿ,
ಚೆನ್ನಾಗಿದೆ. ಸ೦ಗೀತ ಅಮ್ಮನ೦ತೆ ತಟ್ಟಿ ಸಂತೈಸುವ, ಸುಷುಪ್ತಿಗೊಯ್ಯುವ, ನೋವನ್ನು ಮರೆಸುವ ಶಕ್ತಿಯುಳ್ಳದ್ದು ನಿಜ. ದೇಹದ ಭಾವಕೊಶಗಳೊಳಗೆ ಅದಮ್ಯ ಚೈತನ್ಯವನ್ನು ತು೦ಬಿ ಮನಸನ್ನು ಉಲ್ಲಸಿತಗೊಳಿಸಲು ಸ೦ಗೀತ ಪೂರಕ. ಸ೦ಗೀತವನ್ನು ಸವಿಯುವ ಮನಸಿಲ್ಲದವನೇ ನಿಜವಾದ ಅರಸಿಕ. ನಿಮ್ಮ ಆಪ್ತವೆನಿಸುವ ಬರಹದ ಸಾಲುಗಳಿಗೆ ನರಸಿ೦ಹಸ್ವಾಮಿ ಯವರ, ಅಡಿಗರ ಕವನದ ಸಾಲುಗಳು ವಿಶೇಷ ಸಾಥ್ ನೀಡಿವೆ. ಇಷ್ಟವಾಯಿತು.

Umesh Balikai said...

ಧರಿತ್ರಿ,

ಸಂಗೀತ ಅಮ್ಮ, ಗೆಳೆಯ, ಪ್ರಿಯತಮ / ಮೆ ಮುಂತಾದ ಎಲ್ಲ ಲೌಕಿಕ ಸಂಬಂಧಗಳ ಪರಿಧಿಯನ್ನು ಮೀರಿದ್ದು. ಸಂಗೀತಕ್ಕೆ ತಲೆದೂಗದ ಜೀವವುಂಟೆ ಈ ಜಗದಲ್ಲಿ. ನಮ್ಮ ಎಲ್ಲ ಭಾವನೆಗಳ ತಾಕಲಾಟಕ್ಕೆ ಸಾಥ್ ಕೊಡುವುದು ಸಂಗೀತ ಮಾತ್ರ. ನಾವು ಯಾವುದೇ ಮೂಡಿನಲ್ಲಿರಲಿ ಅದಕ್ಕೊಪ್ಪುವ ಸಂಗೀತ ಇದ್ದೇ ಇದೆ. ಹಳೆಯ ನೆನಪುಗಳ ಆಳಕ್ಕೆ ಕಳೆದು ಹೋದಾಗ ಸಂಗಾತಿಯಾಗಿ ಸಂಗೀತ ಮಾತ್ರ ಜೊತೆಯಾಗಬಲ್ಲದು.

ಸುಂದರ ಬರಹಕ್ಕೆ ಅಭಿನಂದನೆಗಳು

-ಉಮೀ

ಕನಸು said...

ಹಾಯ್
ಧರಿತ್ರಿ
``ಅಮ್ಮನಂತೆ ತುಂಭಾ ಪ್ರೀತಿಸದಿದ್ದರೂ ಸ್ವಲ್ಪೆ ಸ್ವಲ್ಪು ಪ್ರೀತಿಸುವ ಗೇಳತಿಯಂತೆ ನಿಮ್ಮ ಬರಹ ಮುದ್ದು ಮುದ್ದಾಗಿದೆ`` ನಿಮ್ಮ ಬರಹಗಳಲ್ಲಿ ಅಕ್ಕನಿಗೂ ಸ್ವಲ್ಪು ಜಾಗ ಮಾಡಿಕೊಡಿ ಪ್ಲೀಜ್ ಮಾಡಿಕೊಡುತ್ತಿರಲ್ಲಾ...?

ಶರಶ್ಚಂದ್ರ ಕಲ್ಮನೆ said...
This comment has been removed by a blog administrator.
ಸಾಗರದಾಚೆಯ ಇಂಚರ said...

ಹಾಯ್
ಧರಿತ್ರಿ
ಸಂಗೀತ ಕ್ಕೆ ಮರುಳಾಗದವರು ಯಾರು, ಅದೊಂದು ದಿವ್ಯ ಸಾಗರ, ಮಗೆದಷ್ಟೂ ನೀರು, ಅಗೆದಷ್ಟೂ ಹೊಸ ಚಿಂತನೆಗಳ ಲಹರಿ, ತುಂಬಾ ಇಷ್ಟವಾಯಿತು

sunaath said...

ಧರಿತ್ರಿ,
ಸಂಗೀತದ ಸವಿಯನ್ನು, ಸ್ವರೂಪವನ್ನು ಸೊಗಸಾಗಿ ತೆರೆದಿಟ್ಟಿದ್ದೀರಿ. ಅಭಿನಂದನೆಗಳು.

shivu.k said...

ಧರಿತ್ರಿ,

ನಿನ್ನ ಮಾತು ನಿಜ ಸಂಗೀತ ಅಮ್ಮನಂತೆ..ನನಗಂತೂ ಕಂಪ್ಯೂಟರ್ ಮುಂದೆ ಕೂತರಂತೂ ಒಂದಲ್ಲ ಒಂದು ಹಾಡು ಬೇಕೇ ಬೇಕು....ನನಗೂ ಭಾವಗೀತೆಗಳೆಂದರೆ ತುಂಬಾ ಇಷ್ಟ...ನೀನು ಇಲ್ಲಿ ಸೂಚಿಸಿರುವ ಮಗುವಿನ ಭಾವಗೀತೆಯಂತೂ ನನಗೆ ತುಂಬಾ ಇಷ್ಟಾ...
"ಅಮೃತವಾಹಿನಿಯೊಂದು ಹರಿಯುತಿದೆ ಮಾನವನ" ಇದಂತೂ ಸಿ. ಆಶ್ವತ್ ರವರ ಧ್ವನಿಯಲ್ಲಿ ಕೇಳಿದಾಗ ಮೈಮರೆಯುತ್ತೇನೆ....

ಸಂಗೀತ ಬಗ್ಗೆ ಮತ್ತು ಅದರಿಂದಾಗುವ ಭಾವನೆಗಳ ಬಗ್ಗೆ ಹೊಸದಾಗಿ ಸೊಗಸಾಗಿ ಬರಿದಿದ್ದೀಯಾ....ಇಷ್ಟವಾಗುತ್ತದೆ....ನನಗೂ ಹಳೆಯ ಭಾವಗೀತೆಗಳ ಮೆಲುಕುಹಾಕಿಸಿದ್ದೀಯಾ...ಧನ್ಯವಾದಗಳು...

ಶರಶ್ಚಂದ್ರ ಕಲ್ಮನೆ said...

ಧರಿತ್ರಿ ಅವ್ರೆ,

ಸಂಗೀತ ಸಂಬಂಧಗಳನ್ನೂ ಮೀರಿದ್ದು ಎಂದು ನನ್ನ ಭಾವನೆ... ನನಗೆ ಪ್ರತಿಯೊಂದು ಹಾಡಿನ ಜೊತೆಗೂ ಒಂದೊಂದು ನೆನಪಿನ ಪುಟಗಳು ಜೋಡಣೆ ಆಗಿವೆ... ನೆನಪು ಸಂತೋಷದ್ದಿರಲಿ, ದುಖದ್ದಿರಲಿ ಆದರೆ ಹಾಡಿನೊಂದಿಗೆ ಅವು ತೆರೆದುಕೊಳ್ಳುತ್ತವೆ.. ಆಪ್ತವಾಗಿದೆ ನಿಮ್ಮ ಲೇಖನ... ಹಾಗೆ "ಅಮೃತವಾಹಿನಿಯೊಂದು ಹರಿಯುತಿದೆ ಮಾನವನ
ಎದೆಯಿಂದಲೆದೆಗೆ ಸತತ........." ಇದು ನನ್ನ ಮೆಚ್ಚಿನ ಸಾಲುಗಳಲ್ಲಿ ಒಂದು, ಇದನ್ನು ಬರೆದ ಕವಿ ಯಾರೆಂದು ಗೊತ್ತಿರಲಿಲ್ಲ, ಧನ್ಯವಾದಗಳು ಮಾಹಿತಿಗೆ

ಅಂತರ್ವಾಣಿ said...

ಸಂಗೀತ ಅಂದರೆ ನನಗೆ ಪ್ರಾಣ. :)

ಧರಿತ್ರಿ said...

ರಾಜೇಶ್ ನಮಸ್ತೆ...
ನಿತ್ಯ ಸುಂದರ ಹಾಡುಗಳ ಜೊತೆ ಆನಂದ ಸವಿಯಿರಿ. ಅದಕ್ಕೆ ಹಿರಿಯರು ಅನ್ನೋದು ಸಂಗೀತ ಆತ್ಮದ ಭಾಷೆ ಎಂದು ಅಲ್ಲವೇ?

ಪ್ರಕಾಶ್ ಸರ್..ನಮಸ್ಕಾರ. ಅಮ್ಮನಂತೆ ಲಾಲಿ ಹಾಡುವ ಗೆಳೆಯನಂತೆ ಸಂತೈಸುವ ಸಂಗೀತವನ್ನು ನಿತ್ಯ ಅನುಭವಿಸಿ ಖುಷಿಪಡೋಣ.


ಪರಾಂಜಪೆಯಣ್ಣ ಪ್ರೀತಿಯಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ, ಸಂಗೀತದಂತೆ ನನ್ನ ಬರಹವನ್ನು ಮನಪೂರ್ವಕವಾಗಿ ಅನುಭವಿಸಿದ್ದಕ್ಕೆ ನನ್ನದೋ ಪ್ರೀತಿಯ ಸಲಾಂ

ಉಮೇಶ್ ..ಹೌದು, ನಮ್ಮ ಎಲ್ಲ ಭಾವನೆಗಳ ತಾಕಲಾಟಕ್ಕೆ ಸಾಥ್ ಕೊಡುವುದು ಸಂಗೀತ ಮಾತ್ರ. "ಮಬ್ಬು ಕವಿದರೇನು ನಿನ್ನ ಹಬ್ಬಿದಿರುಳ ದಾರಿಗೆ. ನಡೆಮುಂದಕ್ಕೆ ಧೈರ್ಯದಿಂದ ಅರುಣೋದಯ ತೀರಕ್ಕೆ..."ಇಂಥ ಗೀತೆಗಳು ನಮಗೆಂಥ ಚೈತನ್ಯ ನೀಡುತ್ತವೆಯಲ್ಲಾ..

ನಿಮ್ಮೆಲ್ಲರ ಪ್ರೀತಿಗೆ ನಾ ಋಣಿ. ಮತ್ತೆ ಬರುವಿರಲ್ಲಾ...
-ಧರಿತ್ರಿ

ಧರಿತ್ರಿ said...

ಕನಸು...ನಮಸ್ಕಾರ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಹಳು. ಖಂಡಿತ ಮುಂದಿನ ಬರಹ 'ನಂಗೂ ಅಕ್ಕಾ ಇರ್ತಾ ಇದ್ರೆ....?' ಅಂಥ ಬರ್ತಾ ಇದೆ. ನಿರೀಕ್ಷೆಯಲ್ಲಿರಲಿ. ಕೊನೆಗೂ ನೀವೂ ಆರೋಪ ಮಾಡಿಬಿಟ್ರಾ? ಇರಲಿ,,ನಿಮ್ಮ ಪ್ರೀತಿಯ ಆರೋಪ, ಟೀಕೆ-ಟಿಪ್ಪಣಿ ಏನೇ ಇದ್ರೂ ಧರಿತ್ರಿ ಸಿಡ ಸಿಡ ಅನ್ನಲ್ಲ ಕಣ್ರೀ.

ಗುರುಮೂರ್ತಿ ಹೆಗಡೆ ಸರ್...ಹೌದು, ಸಂಗೀತ ದಿವ್ಯಸಾಗರ. ಕೇಳಿದಷ್ಟು ಮನಸ್ಸಿಗೆ ಖುಷಿ ಅಲ್ಲವೇ? ಸದಾ ಪ್ರೋತ್ಸಾಹ ಇರಲಿ.

ಸುನಾಥ್ ಸರ್..ಮೆಚ್ಚುಗೆಗೆ ಧನ್ಯವಾದಗಳು. ಮತ್ತೆ ಬರುತ್ತಿರಲ್ಲಾ...ಕಾಯುತ್ತಿರುವೆ.

ಜಯಶಂಕರ್(ಅಂತರ್ವಾಣಿ)..ನಮಸ್ತೆ ಪುರುಸೋತ್ತು ಮಾಡಿಕೊಂಡು ಬರಹ ಓದಿದ್ದಕ್ಕೆ ಧನ್ಯವಾದಗಳು.
-ಧರಿತ್ರಿ

ಧರಿತ್ರಿ said...

ಶಿವಣ್ಣ...

ನಮಸ್ತೆ..ಬದುಕಿನ ಜಂಜಾಠಗಳನ್ನೆಲ್ಲಾ ದೂರ ತಳ್ಳಿ ಮನಸ್ಸಿಗೆ ಖುಷಿ ನೀಡುವ ಶಕ್ತಿ ಇರುವುದು ಕೇವಲ ಸಂಗೀತಕ್ಕೆ ಎಂಬ ನಂಬಿಕೆ ನನ್ನದು. ಕಚೇರಿಯಲ್ಲಿ ಕೆಲಸ ಮಾಡುವಾಗ, ಹೊರಗಡೆ ಬಿಸಿಲ ಧಗೆಯಲ್ಲಿ ಕಾಲೆಳೆಯುತ್ತಾ ಕೆಲಸ ಮಾಡುವಾಗ....ಬದುಕಿನ ಪ್ರತಿ ಕ್ಷಣದಲ್ಲೂ ಒಂದಷ್ಟು ಹೊತ್ತು ಕಿವಿಗೆ ಇಂಪಾದ ಸಂಗೀತ ರಸಸಂಜೆಯನ್ನು ಅನುಭವಿಸ ಬಿಟ್ಟರೆ ಅದಕ್ಕಿಂತ ದೊಡ್ಡ ನೆಮ್ಮದಿ ಬೇರೆಲ್ಲೂ ಸಿಗಲ್ಲ..ಥೇಟ್ ಅಮ್ಮನ ಮಡಿಲಲ್ಲಿ ಹುದುಗಿ ಕನಸ ಕಂಡಂತೆ! ಅಲ್ಲವೇ?

ಶರತ್..ಮೆಚ್ಚುಗೆಗೆ ಧನ್ಯವಾದಗಳು. ನನ್ನ ಈ ಪುಟ್ಟ ಲೇಖನದೊಂದಿಗೆ ಖುಷಿಯಿಂದ, ಆಪ್ತತೆಯಿಂದ ಮನಸ್ಸು ಹಂಚಿಕೊಂಡದ್ದಕ್ಕೆ, ಖುಷಿ ಅನುಭವಿಸಿದ್ದಕ್ಕೆ ಇದೋ ಪ್ರೀತಿಯ ಸಲಾಂ. ಮತ್ತೆ ಬನ್ನಿ.

-ಧರಿತ್ರಿ

ಮನಸು said...

bahala chendada baraha.......sangeeta ellavannu maresutte haage ammana sangatya kooda

olleya kavanagalannu namagela needideeri
dhanyavadagaLu..

ಧರಿತ್ರಿ said...

ಧರಿತ್ರಿಗೆ ಭೇಟಿ ಕೊಟ್ಟದ್ದಕ್ಕೆ, ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಅಭಿನಂದನೆಗಳು ಮನಸು.
ಮತ್ತೆ ಬನ್ನಿ..ಸ್ವಾಗತ.
-ಧರಿತ್ರಿ

Anonymous said...

ninnella barahagalu ninnashte chanda

PaLa said...

>>ಕೈ ಕೊಟ್ಟು ಹೋದ
ಕೈ ಬಿಟ್ಟು ಹೋದ
ಚೆನ್ನಾಗಿದೆ ಸಂಗೀತದೊಂದಿಗಿನ ನಿಮ್ಮ ನಂಟಿನ ಬರಹ.. ಅಂದ ಹಾಗೆ ಸಂಗೀತ ಅಪ್ಪನ ತರಾನೂ ಇರುತ್ತೆ, ಹೊಡೆದು ಎಬ್ಬಿಸೋ ಹಾಗೆ :)

Guruprasad said...

ಧರಿತ್ರಿ,
ಚೆನ್ನಾಗಿ ವಿವರಿಸಿದ್ದಿರ ಸಂಗೀತದ ಮಜಲನ್ನು. ಹೌದು ಸಂಗೀತ ಎಂಬುದು ಎಲ್ಲವು ಹೌದು ... ಬಾರಿ ಅಮ್ಮ ಮಾತ್ರ ಅಲ್ಲ..
ಬೇಜಾರ್ ಆಗಿದ್ದಾಗ , ಎಂಜಾಯ್ ಮಾಡೋವಾಗ, ಯಾವಾಗ ಬೇಕಾದರು ಕೇಳಿಕೊಂಡು ಆರಾಮವಾಗಿ ಇರಬೋದು...
ತುಂಬ ಬೇಜಾರ್ ಆಗಿದ್ದಾಗ ಅಂತು, ಒಂಟಿಯಾಗಿ, ಯಾವುದಾದರು ಒಳ್ಳೆ ಸೈಲೆಂಟ್ ಆಗಿರೋ ಸಂಗೀತವನ್ನು ಆಲಿಸುತಿದ್ದರೆ ಆಗಿರೋ ಬೇಜಾರು ಕೂಡ ಹೊರಟು ಹೋಗುತ್ತೆ ....

ತುಂಬಾ ಚೆನ್ನಾಗಿ ಬರೆದಿದ್ದೀರ .. ಮುಂದುವರಿಸಿ .....

ಧರಿತ್ರಿ said...

@ಶಮಾಕ್ಕ..ಮೆಚ್ಚುಗೆಗೆ ಧನ್ಯವಾದಗಳು. ಕೇವಲ ಬರಹಗಳನ್ನು ಮಾತ್ರವಲ್ಲ ನನ್ನನ್ನೂ...ಎಷ್ಟು ಖುಷಿಯಾಗುತ್ತೆ ಗೊತ್ತಾ?

@ಪಾಲಚಂದ್ರ ನಮಸ್ತೆ...ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಅಪ್ಪ ಹೊಡೆದು ಎಬ್ಬಿಸೋ ಹಂಗೆ ಸಂಗೀತನಾ? ಅಪ್ಪನೂ ಪ್ರೀತಿಯಿಂದ ಹೊಡೇತಾರೆ ತಾನೇ? ಇರಲಿ..ಸಂಗೀತ ಪ್ರೀತಿಯಿಂದ ಹೊಡೆದು ಎಬ್ಬಿಸೋ, ಗದರಿಸಸೋ ಪಪ್ಪನ ಹಂಗೆ.

@ಗುರು ಸರ್...ನೀವು ಹೇಳಿದ್ದು ನಿಜ. ಮೆಚ್ಚುಗೆಗೆ ಧನ್ಯವಾದಗಳು. ಮತ್ತೆ ಬನ್ನಿ...

-ಪ್ರೀತಿಯಿಂದ,
ಧರಿತ್ರಿ